ಮೈಸೂರು: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ಮಾಜಿ ಸಚಿವ ಸಾ.ರಾ ಮಹೇಶ್ ಅವರನ್ನು ಕ್ವಾರಂಟೈನ್ ಮಾಡಲಾಗಿದೆ.
ಹೌದು. ಮೈಸೂರಿನಲ್ಲಿ ತಾಲೂಕುಗಳೀಗೂ ಮಾಹಾಮಾರಿ ವ್ಯಾಪಿಸಿದೆ. ಕೆ.ಆರ್ ನಗರ ತಾಲೂಕಿನ ಮಹಿಳಾ ತಹಶೀಲ್ದಾರ್ಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಸಾ.ರಾ ಮಹೇಶ್ಗೆ ಆತಂಕ ಹೆಚ್ಚಾಗಿದೆ.
ಸಾ.ರಾ ಮಹೇಶ್ ಅವರು ಎರಡು ದಿನಗಳ ಹಿಂದೆ ತಹಶೀಲ್ದಾರ್ ಜೊತೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಸೀಲ್ಡೌನ್ ಪ್ರದೇಶಗಳಿಗೆ ಭೇಟಿ ಭೇಟಿ ನೀಡಿದ್ದರು. ಬ್ರಾಹ್ಮಣರ ಬೀದಿ ಮತ್ತು ಕೋಟೆ ಬೀದಿಗಳಲ್ಲಿನ 150ಕ್ಕೂ ಹೆಚ್ಚು ಕುಟುಂಬದವರಿಗೆ ಅಗತ್ಯ ವಸ್ತುಗಳು ಹಾಗೂ ಪಡಿತರ ದಿನಸಿ ಪದಾರ್ಥ ಔಷಧಿಗಳನ್ನು ವಿತರಿಸಿದ್ದರು. ಇದೀಗ ತಹಶೀಲ್ದಾರ್ಗೆ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಮಾಜಿ ಸಚಿವರನ್ನು ಕ್ವಾರಂಟೈನ್ ಮಾಡಲಾಗಿದೆ.
– ರೈತರಿಗೆ ಹಣ ಕೊಡಲು ಕೈ ಸಾಲ ಸಿಗದೆ ಆಸ್ತಿ ಅಡ ಇಟ್ರು
– ಜನರಿಗೆ ದಿನಸಿ ಕಿಟ್, ತರಕಾರಿ ವಿತರಿಸಲು 5.5 ಕೋಟಿ ಖರ್ಚು
ಮೈಸೂರು: ಮಾಜಿ ಸಚಿವ ಸಾರಾ ಮಹೇಶ್ ಕೊರೊನಾ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರದ ಜನರಿಗೆ ದಿನಸಿ ಕಿಟ್ ವಿತರಿಸಲು ಪೆಟ್ರೋಲ್ ಬಂಕ್ ಹಾಗೂ ಪ್ರೀತಿಯಿಂದ ಕಟ್ಟಿಸಿದ ಮನೆಯನ್ನು ಬ್ಯಾಂಕಿನಲ್ಲಿ ಅಡ ಇಟ್ಟಿದ್ದಾರೆ.
ತಮ್ಮ ಕ್ಷೇತ್ರದ ಜನರಿಗೆ 5.5 ಕೋಟಿ ರೂಪಾಯಿ ವೆಚ್ಚದಲ್ಲಿ ಪಡಿತರ ಕಿಟ್ ಹಾಗೂ ತರಕಾರಿ ವಿತರಿಸಿದ್ದಾರೆ. ರೈತರಿಂದ ಒಂದೂವರೆ ಕೋಟಿ ರೂಪಾಯಿಯಷ್ಟು ತರಕಾರಿ ಖರೀದಿ ಮಾಡಿದ್ದಾರೆ. ರೈತರಿಗೆ ಈ ತಿಂಗಳ 18ರ ಒಳಗೆ ಹಣ ಕೊಡುವ ಮಾತು ಕೊಟ್ಟಿದ್ದಾರೆ. ಆದರೆ ಯಾರಿಂದಲೂ ಈ ವೇಳೆ ಇಷ್ಟು ಪ್ರಮಾಣದ ಹಣ ಕೈ ಸಾಲ ಸಿಗದ ಕಾರಣ ಪೆಟ್ರೋಲ್ ಬಂಕ್ ಹಾಗೂ ಮನೆಯನ್ನು ಕೆ.ಆರ್. ನಗರದ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಅಡ ಇಟ್ಟು ಸಾಲ ಪಡೆದಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಾರಾ ಮಹೇಶ್, ಕೊರೊನಾ ಬಂದಾಗಿನಿಂದ ಜನರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿದೆ ಸುಮಾರು 72 ಸಾವಿರ ಕುಟುಂಬವಿದೆ. ಅದರಲ್ಲಿ ಬಿಪಿಎಲ್ ಕಾರ್ಡ್ ಇಲ್ಲದೆ ಇರುವವರು 10 ಸಾವಿರ ಕುಟುಂಬಗಳಿವೆ. ಆದರೆ ನಾವು ಕಾರ್ಡ್ ಇರಲಿ, ಇಲ್ಲದೆ ಇರಲಿ ಪ್ರತಿ ಕುಟುಂಬದವರಿಗೂ ದಿನಸಿ ಕಿಟ್ ವಿತರಣೆ ಮಾಡಿದ್ದೇವೆ. ಜೊತೆ ಎರಡು ಬಾರಿ ತರಕಾರಿ ಹಂಚಿದ್ದೇವೆ ಎಂದರು.
ಕೊರೊನಾದಿಂದ ತರಕಾರಿ ಬೆಳೆದ ರೈತರು ತುಂಬಾ ಕಷ್ಟ ಎದುರಿಸುತ್ತಿದ್ದಾರೆ. ರೈತರಿಂದ ಸುಮಾರು 15 ಸಾವಿರ ಟನ್ನಷ್ಟು ತರಕಾರಿ ಖರೀದಿಸಿದ್ದೇವೆ. ಅವರಿಗೆ 18 ರಂದು ಹಣ ಕೊಡುತ್ತೇನೆ ಎಂದು ಹೇಳಿದ್ದೆ. ರೈತರಿಂದ ಖರೀದಿಸಿರುವ ಬೆಳೆಗೆ ಸುಮಾರು 1.5ಕೋಟಿ ಹಣ ಕೊಡಬೇಕು. ಈ ಬಗ್ಗೆ ನಮ್ಮ ಸ್ನೇಹಿತರಿಗೆ ಹೇಳಿದೆ ಅವರು ತಕ್ಷಣ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನಿಂದ ಸಾಲ ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.
ಇದುವರೆಗೂ ರೈತರಿಗೂ ಸೇರಿದಂತೆ 5.5 ಕೋಟಿ ಖರ್ಚಾಗಿದೆ. ನಾವು 3.5 ಕೋಟಿ ಆಗುತ್ತೆ ಎಂದು ಅಂದಾಜು ಮಾಡಿದ್ದೆ. ನಾವು ಹುಟ್ಟಿದಾಗಿನಿಂದ ಶ್ರೀಮಂತರಲ್ಲ. ಆದರೆ ನಮ್ಮ ದೇಶಕ್ಕೆ ಕೊರೊನಾ ಅನಿರೀಕ್ಷಿತವಾಗಿ ಬಂದಿದೆ. ಇಲ್ಲಿವರೆಗೂ ನಮಗೆ ಸುಮಾರು 10 ಕೋಟಿ ಸಾಲ ಇದೆ. ಆದರೆ ಈಗ ಅನಿರೀಕ್ಷಿತವಾಗಿ 5.5 ಕೋಟಿ ಸಾಲ ಆಗಿದೆ. ಅದರಲ್ಲಿ ಸ್ವಲ್ಪ ಸ್ನೇಹಿತರು ಕೊಟ್ಟಿದ್ದಾರೆ. ಉಳಿದನ್ನು ಬ್ಯಾಂಕಿನಿಂದ ಸಾಲ ತೆಗೆದುಕೊಂಡಿದ್ದೇನೆ.
ಬೇರೆ ಸಮಯದಲ್ಲಿ ಸಾಲ ಕೇಳಿದ್ದರೆ ಸ್ನೇಹಿತರು ಕೊಡುತ್ತಿದ್ದರು. ಆದರೆ ಕೊರೊನಾ ಸಂದರ್ಭದಲ್ಲಿ ಯಾರು ಕೊಡಲ್ಲ. ಅವರಿಗೆ ಮುಂದೆ ಯಾವ ಪರಿಸ್ಥಿತಿ ಬರುತ್ತದೆ ಎಂದು ಗೊತ್ತಿಲ್ಲ. ಕೊನೆಗೆ ರೈತರಿಗೆ ಕೊಡಬೇಕಾದ 1.5 ಕೋಟಿಯನ್ನು ಸಾಲ ಮಾಡಬೇಕಾಯಿತು. ಬೇರೆ ಯಾವ ಉದ್ದೇಶಕ್ಕೆ ಮಾಡಿದ್ದರೆ ಬೇಸರವಾಗುತ್ತದೆ. ಆದರೆ ನಮಗೆ ವೋಟು ಹಾಕಿ, ಗೆಲ್ಲಿಸಿ ಅಧಿಕಾರಿ ಕೊಟ್ಟು ಜವಾಬ್ದಾರಿ ಕೊಟಿದ್ದಾರೆ. ಅವರ ಊರಿಗೆ ಹೋದಾಗ ಹಾರ ಹಾಕಿ ಪ್ರೀತಿ-ಗೌರವ ಕೊಟ್ಟಿದ್ದಾರೆ. ಅಂತವರ ಋಣ ತೀರಿಸಲು ಒಂದು ಅವಕಾಶ ಸಿಕ್ಕಿದೆ. ಇದು ಅಳಿಲು ಸೇವೆ ಅಷ್ಟೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ ಎಂದು ಸಾರಾ ಮಹೇಶ್ ಹೇಳಿದರು.
ಮೈಸೂರು: ಕೊರೊನಾ ಸೋಂಕಿತರ ಸಂಖ್ಯೆ ಮೈಸೂರು ಜಿಲ್ಲೆಯಲ್ಲಿ 8ಕ್ಕೆ ಏರಿದೆ. ಕೊರೊನಾ 52ನೇ ಸೋಂಕಿತನಿಂದ ಇತರೆ 5 ಮಂದಿಗೆ ಸೊಂಕು ತಗುಲಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ನಂಜನಗೂಡಿನ ಸಂಪರ್ಕವನ್ನು ಕಡಿತ ಮಾಡಲಾಗಿದೆ.
ಐದು ಮಂದಿಯು ನಂಜನಗೂಡು ಪಟ್ಟಣ, ಚಾಮುಂಡಿಪುರಂ, ರಾಮಸ್ವಾಮಿ ಲೇಔಟ್, ಗೋವಿಂದ ರಾಜ ಲೇಔಟ್ ಹಾಗೂ ಯರಗನಹಳ್ಳಿ ನಿವಾಸಿಗಳು. ಎಲ್ಲರು ನಂಜನಗೂಡು ಜ್ಯೂಬಿಲಿಯೇಟ್ ಫ್ಯಾಕ್ಟರಿ ನೌಕರರು. ಮೂರನೇ ಸೋಂಕಿತನಿಂದ ಈ ಐದು ಮಂದಿಗೆ ಸೋಂಕು ಬಂದಿದೆ. ಹೀಗಾಗಿ ಈಗ ನಂಜನಗೂಡು ಪಟ್ಟಣದ ಒಳಗೆ ಹೋಗುವುದಕ್ಕೆ ಮತ್ತು ಅಲ್ಲಿಂದ ಹೊರ ಬರುವವರ ಪ್ರವೇಶ ಕೂಡ ನಿಷೇಧಿಸಲಾಗಿದೆ.
ನಂಜನಗೂಡಿನಲ್ಲಿ ರೆಡ್ ಅಲರ್ಟ್ ಘೋಷಣೆ ಹಿನ್ನೆಲೆಯಲ್ಲಿ ನಂಜನಗೂಡಿಗೆ ಯಾರು ಬರುವಂತಿಲ್ಲ, ಹೋಗುವಂತಿಲ್ಲ. ಆದರೂ ಜಿಲ್ಲಾಡಳಿತದ ಮಾತು ಮೀರಿ ಜನರು ಹೊರಗೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದ ಯುವಕರೇ ಗ್ರಾಮಸ್ಥರಿಗೆ ಅರಿವು ಮೂಡಿಸಲು ಪಣ ತೊಟ್ಟಿದ್ದು, ಯುವಕರು ಗ್ರಾಮದ ನಿವಾಸಿಗಳಿಗೆ ಮಾಸ್ಕ್ ವಿತರಣೆ ಮಾಡಿದ್ದಾರೆ.
ನಂಜನಗೂಡಿನ ಶ್ರೀರಾಂಪುರ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮಾಸ್ಕ್ ವಿತರಿಸಿದ್ದಾರೆ. ಈಗಲಾದರೂ ಎಚ್ಚರಿಕೆಯಿಂದ ಇರಿ ಎಂದು ಮನವಿ ಮಾಡುತ್ತಿದ್ದು, ಮಾಸ್ಕ್ ಕೊಟ್ಟು, ಈಗಲೇ ಧರಿಸಿಯೇ ಮನೆಯಲ್ಲಿರಬೇಕೆಂದು ಸೂಚಿಸಿದರು.
ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 8ಕ್ಕೆ ಏರಿದರೂ ಜನಕ್ಕೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಮೈಸೂರಿನ ಎಂಜಿ ರಸ್ತೆಯಲ್ಲಿನ ತರಕಾರಿ ಸಂತೆಯಲ್ಲಿ ಗಿಜಿಗಿಡುವಷ್ಟು ಜನ ಸೇರಿ ತರಕಾರಿ ಖರೀದಿ ಮಾಡುತ್ತಿದ್ದಾರೆ. ಜನರ ನಡುವೆ ಅಂತರ ಇಲ್ಲ. ಮಾಸ್ಕ್ ಕೂಡ ಹಾಕಿಕೊಂಡಿಲ್ಲ. ಅಲ್ಲಿಗೆ ಜನರಿಗೆ ಕೊರೊನಾ ಭಯವೂ ಇಲ್ಲದಂತಾಗಿದೆ.
ಇನ್ನೂ ಮೈಸೂರಿನಲ್ಲಿ ಇಂದಿನಿಂದ ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಗತ್ಯ ಸೇವೆಗಳ ಅಡಿಯಲ್ಲಿ ಮಾಂಸ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಹಕ್ಕಿ ಜ್ವರದಿಂದ ಮಟನ್ ಮಾರಾಟ ನಿಲ್ಲಿಸಲಾಗಿತ್ತು. ಶಾಪ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ಮಾಂಸ ಖಾಲಿಯಾಗಿದೆ. ಭಾನುವಾರವಾದ ಕಾರಣ ಜನ ಮುಗಿಬಿದ್ದು ಮಾಂಸ ಖರೀದಿ ಮಾಡಿದ್ದಾರೆ. ಕಳೆದ 1 ವಾರದಿಂದ ಮಾಂಸ ಖರೀದಿ ಮಾಡಿರಲಿಲ್ಲ. ಇಂದು ಓಪನ್ ಆಗುತ್ತಿದ್ದಂತೆ 8 ಗಂಟೆ ವೇಳೆಯಲ್ಲೇ ಮಟನ್ ಖಾಲಿಯಾಗಿದೆ.
ಸಾರಾ ಮಹೇಶ್ ಏಕಾಂಗಿ ಸಂಚಾರ:
ಮೈಸೂರು ಜಿಲ್ಲೆ ಕೆ.ಆರ್.ನಗರದಲ್ಲಿ ಶಾಸಕ ಸಾರಾ ಮಹೇಶ್ ಏಕಾಂಗಿ ಸಂಚಾರ ನಡೆಸಿದರು. ಕೆ.ಆರ್.ನಗರ ತಾಲೂಕಿನಲ್ಲಿ ಸ್ವತಃ ಶಾಸಕರು ಕಾರು ಚಲಾಯಿಸಿಕೊಂಡು ವೀಕ್ಷಣೆ ಮಾಡಿದರು. ಕೊರೊನಾ ಬಗ್ಗೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಪರಿಶೀಲಿಸಿದರು.
ಕೆ.ಪಿ. ನಾಗರಾಜ್ ಮೈಸೂರು: ಮನೆಯಲ್ಲಿ ಸಾಕಿದ ಮುದ್ದು ಪ್ರಾಣಿಗಳು ಸತ್ತಾಗ ಮನೆಯವರಿಗೆ ನೋವು ಸಹಜ. ಆದರೆ ಆ ನೋವು ಬದುಕನ್ನು ವೈರಾಗ್ಯಕ್ಕೆ ನೂಕಿದ್ದು ಕಡಿಮೆ. ಆದರಲ್ಲೂ ರಾಜಕಾರಣಿಗಳಿಗೆ ವೈರಾಗ್ಯ ಕಾಡೋದು ಬಹಳ ಕಡಿಮೆ. ಆದರೆ ಈಗ ನಾವು ಈ ಸುದ್ದಿ ಓದಿದರೆ ಈ ವ್ಯಕ್ತಿಯೊಳಗೆ ಇಂಥಹದೊಂದು ಮಗುವಿನಂಥ ಮನಸ್ಸು ಇದೆಯಾ ಎಂದು ಅಚ್ಚರಿ ಪಡುತ್ತೀರಾ.
ಸಾರಾ ಮಹೇಶ್, ಮೈತ್ರಿ ಸರ್ಕಾರ ಇದ್ದಾಗ ಮತ್ತು ಉರುಳಿದ್ದಾಗ ಹೆಚ್ಚು ಚರ್ಚೆಯಲ್ಲಿದ್ದ ಹೆಸರು. ಎಚ್ಡಿ ಕುಮಾರಸ್ವಾಮಿ ಪಾಲಿನ ಕುಚುಕು ಗೆಳೆಯ. ಈ ಗೆಳೆತನ ಇವರ ಪಾಲಿಗೆ ವರವೂ ಆಯಿತು ಮತ್ತು ಈ ಗೆಳೆತನ ಇವರ ಪಾಲಿಗೆ ಹಲವು ಶತ್ರುಗಳ ಸೃಷ್ಟಿ ಮಾಡಿಕೊಟ್ಟಿತ್ತು. ಇಂತಹ ಸಾರಾ ಮಹೇಶ್ಗೆ ಈಗ ಒಂದು ಥರದ ವೈರಾಗ್ಯ ಶುರುವಾಗಿದೆ.
ಇದಕ್ಕೆ ಕಾರಣ ಅವರು ಪ್ರೀತಿಯಿಂದ ಸಾಕಿದ ಮುದ್ದು ಕೋತಿಯ ಸಾವು. ಸಾರಾ ಮಹೇಶ್ ಮೈಸೂರಿನ ದಟ್ಟಗಳ್ಳಿಯ ತೋಟದಲ್ಲಿ ಹೆಣ್ಣು ಕೋತಿ ಸಾಕಿದ್ದರು. ಅದಕ್ಕೆ ಚಿಂಟು ಎಂದು ಹೆಸರಿಟ್ಟಿದ್ದರು. ಈ ಚಿಂಟು ಇತ್ತೀಚೆಗೆ ತೋಟದಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿತ್ತು. ಚಿಂಟು ಸಾವು ಕಂಡು ಸಾರಾ ಮಹೇಶ್ ಹಾಗೂ ಅವರ ಇಡೀ ಕುಟುಂಬ ಕಣ್ಣೀರಿಟ್ಟಿತ್ತು. ಧಾರ್ಮಿಕ ವಿಧಿ ವಿಧಾನದಂತೆ ಚಿಂಟುವಿನ ಅಂತ್ಯಕ್ರಿಯೆ ಅವರ ತೋಟದಲ್ಲಿ ನಡೆದಿದೆ. ಜೊತೆಗ ಚಿಂಟುನಾ ಈ ಸಾವು ಸಾರಾ ಮಹೇಶ್ ಅವರ ಒಳಗೆ ಒಂದು ವೈರಾಗ್ಯವನ್ನೆ ಸೃಷ್ಟಿಸಿದೆ.
ಅವರು ತಾವು ಸದಾ ಹಾಕಿಕೊಳ್ಳುತ್ತಿದ್ದ ಬಂಗಾರದ ಸರ, ಉಂಗುರ ತೆಗೆದಿಟ್ಟಿದ್ದಾರೆ. ವಾಚ್ ಕಟ್ಟುವುದನ್ನು ಬಿಟ್ಟಿದ್ದಾರೆ. ಮನಸ್ಸಿನಲ್ಲೆ ವೈರಾಗ್ಯದ ಗುಡಿ ಕಟ್ಟಿಕೊಂಡು ಕೂತಿದ್ದಾರೆ. ತೋಟದಲ್ಲಿ ಚಿಂಟುವಿನ ಗುಡಿ ಕಟ್ಟುತ್ತಿದ್ದಾರೆ. ಹನುಮಂತ ದೇವರ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ಚಿಂಟುವಿನ ಕಲ್ಲಿನ ಮೂರ್ತಿ ಕೆತ್ತಿಸಿ ಅಲ್ಲಿ ಇಡುತ್ತಿದ್ದಾರೆ. ಮುಂದಿನ ತಿಂಗಳ ಎರಡನೇ ವಾರ ಈ ದೇವಸ್ಥಾನ ಉದ್ಘಾಟನೆಯಾಗಲಿದೆ. ಒಂದರ್ಥದಲ್ಲಿ ಮಗನನ್ನೆ ಕಳೆದುಕೊಂಡಷ್ಟು ದುಃಖದಲ್ಲಿ ಸಾರಾ ಮಹೇಶ್ ಇದ್ದಾರೆ. ಸದಾ ರಾಜಕಾರಣ, ಬ್ಯುಸಿನೆಸ್ ಎಂದು ಮಾತನಾಡುತ್ತಿದ್ದಾ ಸಾರಾ ಮಹೇಶ್ ಈಗ ವೈರಾಗ್ಯದ ಮಾತನಾಡುತ್ತಿದ್ದಾರೆ. ಪ್ರಾಣಿಗಳ ತೋರುವ ನಿಷ್ಕಲ್ಮಶ ಪ್ರೀತಿ ಬಗ್ಗೆ ಮಾತನಾಡುತ್ತಿದ್ದಾರೆ.
ಮಂಜು ಮಾಂಡವ್ಯ, ಕಾಮಿಡಿ ಕಿಂಗ್ ಚಿಕ್ಕಣ್ಣ ಜುಗಲ್ಬಂದಿಯಾಗಿ ನಟಿಸಿರೋ ಶ್ರೀ ಭರತ ಬಾಹುಬಲಿ ಚಿತ್ರ ಜನವರಿ 17ಕ್ಕೆ ರಾಜ್ಯದ್ಯಂತ ತೆರೆ ಕಾಣುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮಾಸ್ಟರ್ ಪೀಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಜನಪ್ರಿಯರಾಗಿದ್ದ ಮಂಜು ಮಾಂಡವ್ಯ ನಟನಾಗಿ ಅಭಿನಯಿಸುತ್ತಿರುವ ಚಿತ್ರವಿದು.
ನಟನೆ ಜೊತೆಗೆ ಚಿತ್ರಕ್ಕೆ ನಿರ್ದೇಶನ ಕೂಡ ಮಂಜು ಮಾಂಡವ್ಯ ಮಾಡಿದ್ದಾರೆ. ಒಂದೊಳ್ಳೆ ಟೀಂ ಕಟ್ಟಿಕೊಂಡು ರೋಮ್ಯಾಂಟಿಕ್ ಕಾಮಿಡಿ ಎಲಿಮೆಂಟ್ ಇರೋ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ ಮಂಜು ಮಾಂಡವ್ಯ. ಚಿತ್ರದಲ್ಲಿ ನಾಯಕಿಯಾಗಿ ಸಾರಾ ಹರೀಶ್ ನಟಿಸಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್, ಟ್ರೈಲರ್ ಕೂಡ ಒಳ್ಳೆಯ ಟಾಕ್ ಕ್ರಿಯೇಟ್ ಮಾಡಿದ್ದು ಸಖತ್ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ. ಮಣಿಕಾಂತ್ ಕದ್ರಿ ಮ್ಯೂಸಿಕ್, ಪರ್ವೇಜ್.ಕೆ ಸಿನಿಮಾಟೋಗ್ರಾಫಿ ಶ್ರೀ ಭರತ ಬಾಹುಬಲಿ ಚಿತ್ರಕ್ಕಿದೆ. ಶ್ರೀನಿವಾಸ್ ಮೂರ್ತಿ, ಪುಷ್ಪಲತಾ, ಕರಿಸುಬ್ಬು, ಶ್ರೇಯಾ ಶೆಟ್ಟಿ, ಅಚ್ಯುತ್ ರಾವ್ ಚಿತ್ರದಲ್ಲಿ ನಟಿಸಿದ್ದಾರೆ. ಜನವರಿ 17ಕ್ಕೆ ಭರತ ಬಾಹುಬಲಿ ಕಥೆ ನೋಡಲು ರೆಡಿಯಾಗಿ.
ಮಾಸ್ಟರ್ ಪೀಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದ ನಿರ್ದೇಶಕ ಈಗ ತಾವೇ ಕ್ಯಾಮೆರಾ ಮುಂದೆ ಬಂದು ಡೈಲಾಗ್ ಹೇಳ್ತಿದ್ದಾರೆ.
ಹೌದು, ನಿರ್ದೇಶಕ ಮಂಜು ಮಾಂಡವ್ಯ ನಿರ್ದೇಶನಕ್ಕೂ ಸೈ, ನಟನೆಗೂ ಸೈ ಎನ್ನುತ್ತಿದ್ದಾರೆ. ಶ್ರೀ ಭರತ ಬಾಹುಬಲಿ ಚಿತ್ರದ ಮೂಲಕ ನಟನಾಗಿಯೂ ಛಾಪು ತೋರಿಸಲು ಸಿದ್ದರಾಗಿದ್ದಾರೆ ಮಂಜು ಮಾಂಡವ್ಯ. ನಟನೆ ಜೊತೆಗೆ ಸ್ವತಃ ತಾವೇ ಚಿತ್ರಕ್ಕೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ.
ಮಂಜು ಮಾಂಡವ್ಯ, ಕಾಮಿಡಿ ಕಿಂಗ್ ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಹಲವು ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ. ಶ್ರೀ ಭರತ ಬಾಹುಬಲಿ ಟೈಟಲ್ಲೇ ವಿಭಿನ್ನವಾಗಿದ್ದು ರೋಮ್ಯಾಂಟಿಕ್ ಕಾಮಿಡಿ ಎಲಿಮೆಂಟ್ ಚಿತ್ರದಲ್ಲಿದೆಯಂತೆ. ಚಿತ್ರದಲ್ಲಿ ನಾಯಕಿಯಾಗಿ ಸಾರಾ ಹರೀಶ್ ನಟಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಗೆಳೆಯನ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಶುಭ ಹಾರೈಸಿದ್ದು, ಟ್ರೈಲರ್ ಮೆಚ್ಚುಗೆ ಪಡೆದುಕೊಂಡಿದೆ. ಮಣಿಕಾಂತ್ ಕದ್ರಿ ಸಂಗೀತವಿರುವ ಚಿತ್ರದ ಹಾಡುಗಳು ಕೂಡ ಸಖತ್ ಸೌಂಡ್ ಮಾಡ್ತಿವೆ. ಜನವರಿ 17ಕ್ಕೆ ಶ್ರೀ ಭರತ ಬಾಹುಬಲಿ ಚಿತ್ರ ತೆರೆಗೆ ಬರಲು ರೆಡಿಯಾಗಿದ್ದು, ಟಿ. ಶ್ರೀನಿವಾಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಮೈಸೂರು: ಜನವರಿ 18ಕ್ಕೆ ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಸಾರಾ ಮಹೇಶ್ ಇಂದು ಮೈಸೂರಿನ ಅತಿಥಿ ಗೃಹದಲ್ಲಿ ಸಭೆ ನಡೆಸಿದರು.
ಜೆಡಿಎಸ್ನಲ್ಲಿ ನಾಲ್ವರು ಮೇಯರ್ ಆಕಾಂಕ್ಷಿಗಳಿದ್ದಾರೆ. ಮೇಯರ್ ಸ್ಥಾನದ ಆಕಾಂಕ್ಷಿಗಳು ಹಾಗೂ ಜೆಡಿಎಸ್ನ ಕಾರ್ಪೋರೇಟರ್ಗಳ ಜೊತೆ ಈ ಸಭೆ ನಡೆಸಿದರು. ಸಭೆಯಲ್ಲಿ ಪ್ರೊ.ರಂಗಪ್ಪ, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ. ಚಲುವೇಗೌಡ, ಮಾಜಿ ಮೇಯರ್ ರವಿಕುಮಾರ್, ಅಜೀಜ್ ಅಬ್ದುಲ್ಲಾ ಸೇರಿ ಹಲವರು ಭಾಗಿಯಾಗಿದ್ದರು.
ಸಭೆಯಲ್ಲಿ 18 ಜನ ಜೆಡಿಎಸ್ನ ಪಾಲಿಕೆ ಸದಸ್ಯರು ಭಾಗಿಯಾಗಿದ್ದು, ಎಲ್ಲಾ ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಮೇಯರ್ ಸ್ಥಾನದ ಆಕಾಂಕ್ಷಿಗಳಾದ ನಮ್ರತಾ ರಮೇಶ್, ನಿರ್ಮಲಾ ಹರೀಶ್, ತಸ್ಲೀಮ್ ಹಾಗೂ ರೇಷ್ಮಾಭಾನು ತಮಗೆ ಯಾಕೆ ಸ್ಥಾನ ನೀಡಬೇಕೆಂದು ಪ್ರತ್ಯೇಕವಾಗಿ ವಿವರಣೆ ನೀಡಿದ್ದಾರೆ.
ಮೈಸೂರು: ಅಬ್ಬರಿಸಿ ಬೊಬ್ಬರಿಸಿದರಷ್ಟೇ ರಾಜಕಾರಣ ಅಲ್ಲ. ನಾನು ಮಾತನಾಡದೆ ಇರುವವರ ಜೊತೆ ರಾಜಕಾರಣ ಮಾಡಿದ್ದೇನೆ. ಹಾಗಾಗಿ ನಾನು ಮಾತನಾಡದೆಯೇ ರಾಜಕಾರಣ ಮಾಡುತ್ತೇನೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.
ಜಿ.ಟಿ. ದೇವೇಗೌಡ ಅವರು ಹುಣಸೂರು ಉಪ ಚುನಾವಣೆಯಲ್ಲಿ ತಟಸ್ಥ ನಿಲುವು ಪ್ರಕಟಿಸಿದ್ದರು. ಈಗ ಮೈಸೂರು ಮಹಾ ನಗರ ಪಾಲಿಕೆ ಮೇಯರ್-ಉಪ ಮೇಯರ್ ಚುನಾವಣೆಯಲ್ಲೂ ತಟಸ್ಥ ನಿಲುವು ಪ್ರಕಟಿಸಿದ್ದಾರೆ. ತಾವು ತಟಸ್ಥ ನಿಲುವು ಪ್ರಕಟಿಸುವುದಕ್ಕೆ ಇಂದು ಮೈಸೂರಿನಲ್ಲಿ ಕಾರಣ ಕೂಡ ತಿಳಿಸಿದರು.
ಮಾಧ್ಯಮದವರ ಜೊತೆ ಮಾತನಾಡಿದ ಜಿಟಿಡಿ, ಅಬ್ಬರಿಸಿ ಬೊಬ್ಬರಿಸಿದರಷ್ಟೇ ರಾಜಕಾರಣ ಅಲ್ಲ. ನಾನು ಮಾತನಾಡದೆ ಇರುವವರ ಜೊತೆ ರಾಜಕಾರಣ ಮಾಡಿದ್ದೇನೆ. ಹಾಗಾಗಿ ನಾನು ಮಾತನಾಡದೆಯೇ ರಾಜಕಾರಣ ಮಾಡುತ್ತೇನೆ ಎಂದು ಹೇಳುವ ಮೂಲಕ ತಮ್ಮ ಮೌನದ ರಹಸ್ಯ ಬಿಚ್ಚಿಟ್ಟರು. ನನ್ನದು ಈಗ ಸೈಲೆಂಟ್ ಪಾಲಿಟಿಕ್ಸ್ ಎಂದು ಹೇಳುವ ಮೂಲಕ ಹುಣಸೂರು ಬೈ ಎಲೆಕ್ಷನ್ ಹಾಗೂ ಮೇಯರ್ ಚುನಾವಣೆ ವಿಚಾರದಲ್ಲಿ ತಟಸ್ಥ ನಿಲುವಿಗೆ ಜಿಟಿಡಿ ಸ್ಪಷ್ಟಿಕರಣ ನೀಡಿದರು.
ಎಲ್ಲವನ್ನು ಸಾರಾ ಮಹೇಶನೇ ನೋಡಿಕೊಳ್ಳುತ್ತಿದ್ದಾನೆ. ಪಕ್ಷದ ಸಭೆ ಕರೆದಾಗಲು ನನ್ನನ್ನು ಆಹ್ವಾನ ಮಾಡಿರಲಿಲ್ಲ. ಕುಮಾರಸ್ವಾಮಿ ಸಾರಾ ಮಹೇಶ್ಗೆ ಎಲ್ಲವನ್ನು ಬಿಟ್ಟುಕೊಟ್ಟಿದ್ದಾರೆ. ಹಿಂದೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ನನ್ನ ಮಾತು ನಡೆಯಲಿಲ್ಲ. ಈಗ ನಡೆಯಲು ಸಾಧ್ಯವೇ ಇಲ್ಲ. ಸಾರಾ ಮಹೇಶ್ ಯಾರು ಹೇಳುತ್ತಾರೋ ಅವರು ಮೇಯರ್ ಆಗುತ್ತಾರೆ. ಅವರು ಯಾರ ಜೊತೆ ಮೈತ್ರಿ ಅನ್ನುತ್ತಾರೋ ಅವರ ಜೊತೆ ಮೈತ್ರಿ ನಡೆಯುತ್ತದೆ. ನನ್ನದೇನಿದ್ದರು, ಜೆಡಿಎಸ್ ಮೇಯರ್ ಅಭ್ಯರ್ಥಿಗೆ ಮತ ಚಲಾಯಿಸುವುದು ಮಾತ್ರ ಎಂದು ಮಾರ್ಮಿಕವಾಗಿ ಹೇಳಿದರು.
ಮೈಸೂರು: ಅನರ್ಹ ಶಾಸಕ ಹೆಚ್.ವಿಶ್ವನಾಥ್ ಬಗ್ಗೆ ಮಾಜಿ ಸಚಿವ ಸಾರಾ ಮಹೇಶ್ ಸಾಫ್ಟ್ ಕಾರ್ನಾರ್ ತೋರಿದ್ದು, ವಿಶ್ವನಾಥ್ ಈಗಲೇ ನೋವಿನಲ್ಲಿದ್ದಾರೆ ಬಿಡಿ ವಿಡಿಯೋ ಬಿಡುಗಡೆ ಮಾಡುವುದು ಬೇಡ ಎಂದು ಸಾಗ ಹಾಕಿದ್ದಾರೆ.
ಮಾಜಿ ಸಚಿವ ಸಾರಾ ಮಹೇಶ್ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ಮೂರು ವಿಚಾರಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಮಾಜಿ ಸಚಿವ ಎಚ್.ವಿಶ್ವನಾಥ್ ಬಗ್ಗೆ ದಾಖಲೆ ಬಿಡುಗಡೆ, ಜೆಡಿಎಸ್ ನ ಕೆಲ ಶಾಸಕರು ಪಕ್ಷ ಬಿಡುವ ವಿಚಾರ ಹಾಗೂ ಕೆ.ಆರ್.ನಗರದಲ್ಲಿ ನಡೆದಿದ್ದ ಗಲಾಟೆ ಸಂಬಂಧದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಆದರೆ ವಿಶ್ವನಾಥ್ ಕುರಿತು ದಾಖಲೆ ಬಿಡುಗಡೆ ಮಾಡುವುದನ್ನು ನಿರಾಕರಿಸಿದ್ದಾರೆ. ಸದ್ಯ ವಿಶ್ವನಾಥ್ ಅವರೇ ನೋವಿನಲ್ಲಿದ್ದಾರೆ. ಈ ಸಂದರ್ಭದಲ್ಲಿ ಅದೆಲ್ಲ ಬೇಡ. ಮುಂದೆ ನೋಡೋಣ ಬಿಡಿ ಎಂದು ಹೇಳಿದರು.
ಸಾಲಿಗ್ರಾಮ ಕೋಮು ಗಲಾಟೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಪ್ರಕರಣ ಸಂಬಂಧ ಇನ್ನೂ ಯಾವುದೇ ಶಾಂತಿ ಸಭೆ ಏರ್ಪಟ್ಟಿಲ್ಲ. ಹೆಸರ ಹಿಂದೆ ಸಾ.ರಾ. ಇದ್ದವರೆಲ್ಲ ನನ್ನ ಸಹೋದರರಾಗಲ್ಲ. ಸಾಲಿಗ್ರಾಮದಲ್ಲಿ ಯಾರ ತಂದೆ ರಾಮೇಗೌಡ ಆಗಿರುತ್ತಾರೋ ಅವರ ಹೆಸರ ಹಿಂದೆ ಸಾ.ರಾ. ಅಂತ ಇರುತ್ತದೆ. ನನ್ನ ಒಬ್ಬ ಸಹೋದರ ಮಾತ್ರ ಪ್ರಕರಣದಲ್ಲಿ ಸಿಲುಕಿದ್ದಾನೆ. ಒಬ್ಬ ಸಹೋದರ ಜಿ.ಪಂ. ಸದಸ್ಯ ಆಗಿದ್ದಾನೆ. ಈಗ ಪ್ರಕರಣದಲ್ಲಿ ಸಿಲುಕಿರುವ ಸಹೋದರ ಯಾರು ಎಂಬುದೇ ಗೊತ್ತಿಲ್ಲ. ಆದರೆ ಈಗ ಎಲ್ಲರಿಗೂ ಆತನ ಬಗ್ಗೆ ಗೊತ್ತಾಗುವಂತೆ ಆಗಿದೆ ಎಂದರು.
ಇಡೀ ಪ್ರಕರಣವನ್ನು ವಿರೋಧ ಪಕ್ಷದ ಕೆಲವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಾನು ಶಾಸಕ ಆಗುವುದಕ್ಕೂ ಮೊದಲಿನಿಂದ ಸಾಲಿಗ್ರಾಮದಲ್ಲಿ ಇಂತಹ ಘಟನೆಗಳು ನಡೆದಿವೆ. ಹಿಂದೆ ಗೋಲಿಬಾರ್ ಸಹ ಆಗಿದೆ. ನನ್ನನ್ನು ಶಾಸಕ ಮಾಡಿದ ಮೇಲೆ ಸ್ವಲ್ಪ ಹತೋಟಿಗೆ ಬಂದಿದೆ. ಎರಡೂ ಕಡೆಯ ಹಲವು ಮಂದಿ ತಲೆ ಮರೆಸಿಕೊಂಡಿದ್ದಾರೆ. ಅವರೆಲ್ಲ ಸಿಕ್ಕ ನಂತರ ಒಂದು ಕಡೆ ಕುಳಿತು ಸಭೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ನ ಮತ್ತಿಬ್ಬರು ಶಾಸಕರು ಪಕ್ಷಾಂತರ ಮಾಡುವ ಕುರಿತು ಪ್ರತಿಕ್ರಿಯಿಸಿದ ಅವರು, ಸದ್ಯ ಜೆಡಿಎಸ್ ಪಕ್ಷವನ್ನು ಯಾರೂ ಬಿಟ್ಟು ಹೋಗುತ್ತಿಲ್ಲ. ಇದು ಸತ್ಯಕ್ಕೆ ದೂರವಾದ ವಿಚಾರ. ಎಲ್ಲರೊಂದಿಗೆ ನಿತ್ಯ ಮಾತನಾಡುತ್ತಲೇ ಇದ್ದೇವೆ. ಹಲವರು ನಿನ್ನೆ ಕೂಡ ಕುಮಾರಸ್ವಾಮಿಯವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ನಮ್ಮ ಪಕ್ಷವನ್ನು ಯಾರೂ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಮನಗರ: ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿನ ದಲಿತರ ಮೇಲೆ ನಡೆದಿರುವ ದೌರ್ಜನ್ಯ ಖಂಡಿಸಿ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ರಾಜೀನಾಮೆ ನೀಡುವಂತೆ ಆಗ್ರಹಿಸಿ ರಾಮನಗರದಲ್ಲಿ ಸಮತಾ ಸೈನಿಕ ದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ರಾಮನಗರದ ಐಜೂರು ವೃತ್ತದಲ್ಲಿ ಬೆಂಗಳೂರು – ಮೈಸೂರು ಹೆದ್ದಾರಿ ತಡೆದು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಶಾಸಕ ಸಾ.ರಾ ಮಹೇಶ್ ಅವರ ಕುಮ್ಮಕ್ಕುನಿಂದಲೇ ದೌರ್ಜನ್ಯ ನಡೆದಿದ್ದು ನೇರ ಹೊಣೆ ಹೊತ್ತು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಶಾಸಕ ಸಾ.ರಾ ಮಹೇಶ್ ಹಾಗೂ ಅವರ ಸಹೋದರ ಸಾ.ರಾ ರವೀಶ್ ಮತ್ತು ಸಹಚರರು ದಲಿತರ ಮೇಲೆ ಗೂಂಡಾಗಿರಿ ನಡೆಸಿ ದೌರ್ಜನ್ಯ ಎಸಗಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ದೌರ್ಜನ್ಯದ ಬಳಿಕ ಶಾಸಕ ಸಾ.ರಾ ಸಹೋದರರು ತಲೆ ಮರೆಸಿಕೊಂಡಿರುವುದು ದಲಿತರಿಗೆ ಮತ್ತಷ್ಟು ಆತಂಕವನ್ನುಂಟು ಮಾಡಿದೆ.
ದಲಿತರ ಮೇಲಿನ ದೌರ್ಜನ್ಯ ನಡೆದ 24 ಗಂಟೆಗಳ ಒಳಗಾಗಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು 2019ರಲ್ಲಿ ಸರ್ವೋಚ್ಚ ನ್ಯಾಯಾಲಯವು ನಿರ್ದೇಶನ ನೀಡಿದೆ. ಆದರೂ ಕೂಡ ಮೈಸೂರು ಪೊಲೀಸ್ ವರಿಷ್ಠ ಅಧಿಕಾರಿ ಕರ್ತವ್ಯ ಲೋಪ ಎಸಗಿದ್ದಾರೆ. ಕೂಡಲೇ ಎಸ್ಪಿಯವರನ್ನು ಅಮಾನತು ಪಡಿಸಬೇಕು ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ದಲಿತರ ಮೇಲಿನ ದೌರ್ಜನ್ಯ ಸಂಬಂಧ ಶಾಸಕ ಎನ್.ಮಹೇಶ್ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಆದರೆ ಸಾ.ರಾ ಮಹೇಶ್ ಮಾತ್ರ ಗ್ರಾಮಕ್ಕೆ ಭೇಟಿ ನೀಡಿ ದಲಿತರ ಸಮಸ್ಯೆ ಆಲಿಸಿಲ್ಲ. ಮತ್ತೆ ಇಂತಹ ಕೃತ್ಯ ನಡೆಸುವ ಹಿನ್ನೆಲೆಯಲ್ಲಿಯೇ ತಲೆ ಮರೆಸಿಕೊಂಡಿದ್ದಾರೆ. ಇದೀಗ ಬಂಧಿಸಿರುವ ಜನರನ್ನು ನೆಪ ಮಾತ್ರಕ್ಕೆ ದಲಿತರನ್ನು ಸಮಾಧಾನ ಮಾಡುವ ದೃಷ್ಟಿಯಿಂದ ಬಂಧಿಸಲಾಗಿದೆ. ಕೂಡಲೇ ಸಾ.ರಾ ಸಹೋದರರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.