Tag: ಸಾಗರ

  • ಸಾಗರ To ತಮಿಳುನಾಡು – 600 ಕಿ.ಮೀ ನಡೆದೇ ಹೊರಟ ಕಾರ್ಮಿಕರು

    ಸಾಗರ To ತಮಿಳುನಾಡು – 600 ಕಿ.ಮೀ ನಡೆದೇ ಹೊರಟ ಕಾರ್ಮಿಕರು

    ಚಿಕ್ಕಮಗಳೂರು: ಕಳೆದ ಆರು ತಿಂಗಳ ಹಿಂದೆ ಕಟ್ಟಡ ನಿರ್ಮಾಣಕ್ಕೆಂದು ತಮಿಳುನಾಡಿನಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿಗೆ ಬಂದಿದ್ದ 5 ಕಾರ್ಮಿಕರು ನಡೆದುಕೊಂಡೇ ತಮಿಳುನಾಡಿನತ್ತ ಹೆಜ್ಜೆ ಹಾಕಿದ್ದಾರೆ.

    ಏಪ್ರಿಲ್ 14ರ ಬಳಿಕವೂ ಕೊರೊನಾ ಲಾಕ್‍ಡೌನ್ ಮುಂದುವರೆದ ಹಿನ್ನೆಲೆ ವಾಹನಗಳು ಸಿಗದ ಕಾರಣ ಐವರು ಕಾರ್ಮಿಕರು ತಮಿಳುನಾಡಿನತ್ತ ನಡೆದುಕೊಂಡೇ ಸಾಗುತ್ತಿದ್ದಾರೆ. ಸಾಗರದಿಂದ ತಮಿಳುನಾಡಿಗೆ ಸರಿಸುಮಾರು 600 ಕಿ.ಮೀ ಅಂತರವಿದೆ. ಇಲ್ಲಿ ಕೆಲಸವಿಲ್ಲ ಎಂದು ಊರು ನೆನಪಾಗಿ ನಡೆದೇ ಊರು ಸೇರಲು ಕಾರ್ಮಿಕರು ಹೊರಟಿದ್ದಾರೆ. ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆದ ಕಾರಣ ಕಳೆದೊಂದು ತಿಂಗಳಿನಿಂದ ಸಾಗರದಲ್ಲಿ ರೂಮಿನಲ್ಲೇ ಈ ಕಾರ್ಮಿಕರು ವಾಸವಿದ್ದರು. ಅವರೇ ಅಡುಗೆ ತಯಾರಿಸಿಕೊಂಡು ಊಟ-ತಿಂಡಿ ಮಾಡಿಕೊಂಡು ಕಾಲ ಕಳೆಯುತ್ತಿದ್ದರು.

    ಏಪ್ರಿಲ್ 14ಕ್ಕೆ ಲಾಕ್‍ಡೌನ್ ಮುಗಿಯುತ್ತೆ ಕೆಲಸ ಆರಂಭವಾಗುತ್ತೆ ಅಥವಾ ಊರಿಗೆ ಹೋಗೋಣವೆಂದು ಭಾವಿಸಿ ಸಾಗರದಲ್ಲೇ ಕಾರ್ಮಿಕರು ಇದ್ದರು. ಆದರೆ ಲಾಕ್‍ಡೌನ್ ಮುಂದುವರೆದ ಕಾರಣ ಮತ್ತೆ ಆತಂಕಕ್ಕೀಡಾಗಿ ತಮಿಳುನಾಡಿನತ್ತ ಕಾರ್ಮಿಕರು ನಡೆದೇ ಹೊರಟಿದ್ದಾರೆ. ಹೀಗೆ ನಡೆದು ಬಂದ ಕಾರ್ಮಿಕರು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಠಾಣಾ ವ್ಯಾಪ್ತಿಯ ಲಕ್ಕವಳ್ಳಿ ಕ್ರಾಸ್ ಬಳಿ ಬರ್ತಿದ್ದಂತೆ ದಣಿವಾರಿಸಿಕೊಳ್ಳಲು ಕೂತಿದ್ದರು. ಲಕ್ಕವಳ್ಳಿ ಕ್ರಾಸ್ ಬಳಿಯ ಚೆಕ್‍ಪೋಸ್ಟ್‍ನಲ್ಲಿದ್ದ ಪೊಲೀಸರು ಇವರನ್ನು ವಿಚಾರಿಸಿದಾಗ ಪೊಲೀಸರ ಬಳಿ ಕಾರ್ಮಿಕರು ತಮ್ಮ ಸ್ಥಿತಿಯ ಬಗ್ಗೆ ವಿವರಿಸಿದ್ದಾರೆ.

    ಕಾರ್ಮಿಕರ ಕಷ್ಟ ಆಲಿಸಿದ ಪೊಲೀಸರು ಅವರಿಗೆ ಅಲ್ಲಿಯೇ ಊಟದ ವ್ಯವಸ್ಥೆ ಮಾಡಿ ಎರಡು ದಿನಕ್ಕೆ ಆಗುವಷ್ಟು ನೀರು, ಬಿಸ್ಕೆಟ್ ಹಾಗೂ ಬ್ರೆಡ್ ಕೊಟ್ಟು ಕಳುಹಿಸಿದ್ದಾರೆ. ನಡೆದುಕೊಂಡು ಹೋಗುತ್ತಿರುವ ಕಾರಣ ತಾವು ತಂದಿದ್ದ ಆಹಾರವನ್ನ ಮುಂದೆ ಹಸಿವಾದಾಗ ತಿನ್ನಲು ಇಟ್ಟುಕೊಂಡು ಪೊಲೀಸರು ಕೊಟ್ಟ ಊಟ ಮಾಡಿ ಮತ್ತೆ ಐವರು ತಮಿಳುನಾಡಿನತ್ತ ಹೆಜ್ಜೆ ಹಾಕಿದ್ದಾರೆ.

  • ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ

    ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ

    ಶಿವಮೊಗ್ಗ: ಸಾಗರದ ತಿಲಕ್ ರಸ್ತೆಯ ಕೇಶವ ಜ್ಯುವೆಲ್ಲರಿ ಅಂಗಡಿಯ ಹಿಂಭಾಗದ ಬಾವಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ.

    ಯುವತಿಯನ್ನು ಸುಚಿತ್ರ ಶೆಟ್ಟಿ (25) ಎಂದು ಗುರುತಿಸಲಾಗಿದ್ದು, ತಾಲೂಕಿನ ಹಂಸಗಾರು ಜಡ್ಡುಗದ್ದೆ ನಿವಾಸಿ ರಘುವೀರ ಶೆಟ್ಟಿ ಅವರ ಪುತ್ರಿ ಎಂದು ತಿಳಿದು ಬಂದಿದೆ. ಸಾಗರದ ಅಣಲೇಕೊಪ್ಪದ ತಮ್ಮ ಸಹೋದರ ಮಾವನ ಮನೆಯಲ್ಲಿ ವಾಸವಾಗಿದ್ದ ಮೃತ ಸುಚಿತ್ರ, ತಿಲಕ್ ರಸ್ತೆಯ ಕೇಶವ ಜ್ಯುವೆಲ್ಲರಿ ಅಂಗಡಿಯಲ್ಲಿ ನಾಲ್ಕೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದಳು.

    ದಿನ ನಿತ್ಯದಂತೆ ನಿನ್ನೆ ಸಹ ಕೆಲಸಕ್ಕೆ ಬಂದಿದ್ದ ಸುಚಿತ್ರ ರಾತ್ರಿ 8:30 ಸುಮಾರಿಗೆ ಮನೆಗೆ ಹೊರಟಿದ್ದಾಳೆ. 10:30 ಆದರೂ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಮಾಲೀಕರಿಗೆ ವಿಚಾರ ತಿಳಿಸಿದ್ದಾರೆ. ನಂತರ ರಾತ್ರಿ ಯುವತಿಗೆ ಹುಡುಕಾಟ ನಡೆಸಿದ್ದಾರೆ. ಆದರೆ ಇಂದು ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಬಾವಿಯಲ್ಲಿ ನೇಣು ಬಿಗಿದುಕೂಂಡ ಸ್ಥಿತಿಯಲ್ಲಿ ಯುವತಿಯ ಶವ ಕಂಡ ಮಾಲೀಕ ಸಾಗರಪೇಟೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಸಾಗರಪೇಟೆ ಪೊಲೀಸ್ ಹಾಗೂ ಸಾಗರ ಡಿವೈಎಸ್ಪಿ ಜೆ.ರಘು ಆಗಮಿಸಿ ಪ್ರಕರಣ ದಾಖಲು ಮಾಡಿಕೊಂಡು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಾಗರ ಉಪವಿಭಾಗಿಯ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಯುವತಿಯ ಸಾವಿನ ಹಿಂದೆ ಅನುಮಾನದ ಹುತ್ತ ಹುಟ್ಟಿಕೊಂಡಿದ್ದು ಪೊಲೀಸರ ತನಿಖೆಯ ನಂತರ ಸಾವಿನ ಸತ್ಯಾಂಶ ಹೊರಬರಬೇಕಾಗಿದೆ.

  • ಹೇ ಸಾಗರವೇ ನಿನಗೆ ನನ್ನ ವಂದನೆ: ಸ್ವರಚಿತ ಕವನ ಹಂಚಿಕೊಂಡ ಮೋದಿ

    ಹೇ ಸಾಗರವೇ ನಿನಗೆ ನನ್ನ ವಂದನೆ: ಸ್ವರಚಿತ ಕವನ ಹಂಚಿಕೊಂಡ ಮೋದಿ

    ನವದೆಹಲಿ: ‘ಹೇ ಸಾಗರವೇ ನಿನಗೆ ನನ್ನ ವಂದನೆ’ ಎಂಬ ಸ್ವರಚಿತ ಕವನನ್ನು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಭಾರತ ಮತ್ತು ಚೀನಾ ನಡುವಿನ ಅನೌಪಚಾರಿಕ ಶೃಂಗಸಭೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ತಮಿಳುನಾಡಿನ ದೇಗುಲ ನಗರಿ ಮಹಾಬಲಿಪುರಂನಲ್ಲಿ ಶುಕ್ರವಾರ ಹಾಗೂ ಶನಿವಾರ ವಾಸ್ತವ್ಯ ಹೂಡಿದ್ದರು. ಮೊದಲ ದಿನ ತಮಿಳುನಾಡಿನ ಸಾಂಪ್ರದಾಯಿಕ ಧಿರಿಸು ಬಿಳಿ ಪಂಚೆ, ಬಿಳಿ ಅಂಗಿ, ಶಲ್ಯ ಧರಿಸಿದ್ದ ಮೋದಿ, ಚೀನಾ ಅಧ್ಯಕ್ಷ ಜಿನ್‍ಪಿಂಗ್ ಅವರಿಗೆ ಆತ್ಮೀಯ ಸ್ವಾಗತ ಕೋರಿದರು. ಆರಾಮವಾಗಿ ಸುತ್ತಾಡುತ್ತಾ ಪಲ್ಲವರ ಕಾಲದ ದೇಗುಲಗಳ ಪರಿಚಯ ಮಾಡಿಕೊಟ್ಟರು. ಮಹಾಭಾರತದ ಅರ್ಜುನ ತಪಸ್ಸು ಮಾಡಿದ್ದ ಸ್ಥಳ, ಒಂದೇ ಕಲ್ಲಿನಲ್ಲಿ ಕೆತ್ತಿದ ಪಂಚರಥ, ಹೀಗೆ ಹಲವು ಸ್ಥಳಗಳ ಮಹಿಮೆಯನ್ನು ವಿವರಿಸಿದ್ದರು.

    ಪ್ರಧಾನಿ ಮೋದಿ ಶನಿವಾರ ಬೆಳಗ್ಗೆ ತಮ್ಮ ವಾಯು ವಿಹಾರದ ಸಮಯದಲ್ಲಿ ಮಾಮಲ್ಲಪುರಂ ಸಮುದ್ರ ತೀರಕ್ಕೆ ತೆರಳಿದ್ದರು. ಈ ವೇಳೆ ಬಂಡೆಯ ಮೇಲೆ ಕುಳಿತು ಸಮುದ್ರ ಅಲೆಗಳ ಆಟ, ಅಲ್ಲಿನ ಸೊಬಗನ್ನು ಸವಿದಿದ್ದರು. ಈ ಸನ್ನಿವೇಶವನ್ನು ಮೋದಿ ಕವನದ ಮೂಲಕ ವಿವರಿಸಿದ್ದಾರೆ.

    ಪ್ರಧಾನಿ ಮೋದಿ ತಮ್ಮ ಮಾತೃ ಭಾಷೆ ಗುಜರಾತಿಯಲ್ಲಿ ಕವನ ಬರೆಯಲು ಇಷ್ಟಪಡುತ್ತಾರೆ. ಜೊತೆಗೆ ಮನದ ಮಾತನ್ನು ಕವನ ರೂಪದಲ್ಲಿ ಹಿಂದಿ ಭಾಷೆಯಲ್ಲಿಯೂ ಬರೆಯುತ್ತಾರೆ. 2018ರಲ್ಲಿ ಅವರು ‘ರಾಮತಾ ರಾಮ್ ಅಕೇಲ್’ ಶೀರ್ಷಿಕೆ ಅಡಿ ಗುಜರಾತಿ ಭಾಷೆಯ ಕವನವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

    ಮಾಮಲ್ಲಪುರಂ ಸಮುದ್ರ ಬಂಡೆಯ ಮೇಲೆ ಕುಳಿತು ಸ್ವಲ್ಪ ಕಾಲ ಪ್ರಧಾನಿ ಕಳೆದ ಮೋದಿ, ಬೀಚ್‍ನಲ್ಲಿ ಹೆಜ್ಜೆ ಹಾಕಿದ್ದರು. ಈ ವೇಳೆ ಅಲ್ಲಿಯೇ ಬಿದ್ದಿದ್ದ ಪ್ಲಾಸ್ಟಿಕ್ ಕಸವನ್ನು ಹೆಕ್ಕುವ ಮೂಲಕ ಸ್ವಚ್ಛತಾ ಕಾರ್ಯವನ್ನು ಮಾಡಿದ್ದರು. ಈ ಕುರಿತ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್, ಸಂಗ್ರಹಿಸಲಾದ ಕಸವನ್ನು ಹೋಟೆಲ್‍ನ ಸಿಬ್ಬಂದಿ ಜಯರಾಜ್ ಅವರಿಗೆ ನೀಡಿದ್ದಾಗಿ ತಿಳಿಸಿದ್ದರು. ಅಷ್ಟೇ ಅಲ್ಲದೇ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ಕಾರ್ಯವನ್ನು ಮಾಡೋಣ, ಸದೃಢ ದೇಹ, ಆರೋಗ್ಯವನ್ನು ಪಡೆಯೋಣ ಎಂದು ಕರೆಕೊಟ್ಟಿದ್ದರು.

    ಆದರೆ ಈ ಕುರಿತು ವ್ಯಂಗ್ಯವಾಡಿದ್ದ ತಮಿಳುನಾಡು ಕಾಂಗ್ರೆಸ್, ಇದೊಂದು ಮೋದಿ ನಾಟಕ. ಭಾರತ ಮತ್ತು ಚೀನಾ ಅನೌಪಚಾರಿಕ ಶೃಂಗಸಭೆ ಉದ್ದೇಶದಿಂದ ಬೀಚ್‍ನಲ್ಲಿ ಬಿದ್ದಿದ್ದ ಕಸ, ಪ್ಲಾಸ್ಟಿಕ್ ಹೆಕ್ಕಿ ಸ್ವಚ್ಛಗೊಳಿಸಲಾಗಿತ್ತು ಎಂದಿತ್ತು. ಆದಾಗ್ಯೂ ಹೆಚ್ಚಿನ ಸಂಖ್ಯೆಯಲ್ಲಿ ನೆಟ್ಟಿಗರು ಪ್ರಧಾನಿ ಮೋದಿ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • KSRTC ಡಿಪೋದ ನೀರಿನ ಗುಂಡಿಯಲ್ಲಿ ಬಿದ್ದ ಐದು ವರ್ಷದ ಬಾಲಕ ಸಾವು

    KSRTC ಡಿಪೋದ ನೀರಿನ ಗುಂಡಿಯಲ್ಲಿ ಬಿದ್ದ ಐದು ವರ್ಷದ ಬಾಲಕ ಸಾವು

    ಶಿವಮೊಗ್ಗ: ಮಳೆ ನೀರು ತುಂಬಿದ್ದ ಗುಂಡಿಯಲ್ಲಿ ಐದು ವರ್ಷದ ಬಾಲಕ ಬಿದ್ದು ಮೃತಪಟ್ಟ ಘಟನೆ ಜಿಲ್ಲೆ ಸಾಗರದಲ್ಲಿ ಕೆಎಸ್‍ಆರ್ ಟಿಸಿ ಡಿಪೋದಲ್ಲಿ ನಡೆದಿದೆ.

    ಶಿವಪ್ಪ ನಾಯಕ ನಗರದಲ್ಲಿರುವ ಗಾರೆ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದ ಮುನೀಂದ್ರ ಎಂಬವರ ಮಗ ಭುವನ್ (5) ಗುಂಡಿಗೆ ಬಿದ್ದು ಮೃತಪಟ್ಟಿದ್ದಾನೆ. ಡಿಪೋ ಕಂಪೌಂಡ್ ಕಟ್ಟಲು ಗುಂಡಿ ತಗೆಯಲಾಗಿತ್ತು. ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಗುಂಡಿ ತುಂಬಿದ್ದು, ಸಮೀಪದಲ್ಲಿಯೇ ಆಟವಾಡುತ್ತಿದ್ದ ಭುವನ್ ಕಾಲು ಜಾರಿ ಗುಂಡಿಗೆ ಬಿದ್ದಿದ್ದಾನೆ.

    ತಕ್ಷಣವೇ ಅಲ್ಲಿದ್ದ ಜನರು ಬಾಲಕನನ್ನು ಮೇಲೆದ್ದಾರೆ. ನೀರು ಕುಡಿದು ಹೊಟ್ಟೆ ಭಾರವಾಗಿದ್ದ ಭುವನ್‍ಗೆ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆ ತಲುಪುತ್ತಿದ್ದಂತೆ ಬಾಲಕ ಮೃತಪಟ್ಟಿದ್ದಾನೆ.

    ಗುಂಡಿ ತೆಗೆದು ಸೂಚನಾ ಫಲಕ ಹಾಕುವಲ್ಲಿ ಕಾಮಗಾರಿ ಗುತ್ತಿಗೆದಾರರು ನಿರ್ಲಕ್ಷ್ಯ ತೋರಿದ್ದಾರೆ. ನನ್ನ ಮಗನ ಸಾವಿಗೆ ಅವರೇ ಕಾರಣ ಎಂದು ಗುತ್ತಿಗೆದಾರರ ವಿರುದ್ಧ ಮೃತ ಬಾಲಕನ ತಂದೆ ಮುನೀಂದ್ರ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಸಾರ್ವಜನಿಕರು ಸಂಚರಿಸುವ ಸ್ಥಳದಲ್ಲಿ ಕಂಪೌಂಡ್ ನಿರ್ಮಾಣಕ್ಕೆ ಅನೇಕ ಗುಂಡಿಗಳನ್ನು ತೆಗೆಯಲಾಗಿದೆ. ಅಲ್ಲದೇ ಯಾವುದೇ ಸೂಚನಾ ಫಲಕಗಳನ್ನು ಹಾಕಿಲ್ಲ. ಹೀಗಾಗಿ ಈ ದುರ್ಘಟನೆ ನಡೆದಿದೆ ಎಂದು ಕೆಎಸ್‍ಆರ್ ಟಿಸಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಗಮನಿಸಿ, ಶಿವಮೊಗ್ಗ ಜಿಲ್ಲೆಯ ಯುವಕನಿಗೆ ನಿಪಾ ಸೋಂಕು ಇಲ್ಲ

    ಗಮನಿಸಿ, ಶಿವಮೊಗ್ಗ ಜಿಲ್ಲೆಯ ಯುವಕನಿಗೆ ನಿಪಾ ಸೋಂಕು ಇಲ್ಲ

    ಶಿವಮೊಗ್ಗ: ಜಿಲ್ಲೆಯ ಸಾಗರದ ತಾಲೂಕಿನ ಯುವಕನ ರಕ್ತದ ಮಾದರಿಯಲ್ಲಿ ನಿಪಾ ವೈರಸ್ ಸೋಂಕು ಪತ್ತೆಯಾಗಿಲ್ಲ ಎಂದು ಡಿಹೆಚ್‍ಒ ಡಾ. ವೆಂಕಟೇಶ್ ಹೇಳಿದ್ದಾರೆ.

    ನಿಪಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪುಣೆಯ ಲ್ಯಾಬ್ ನಿಂದ ರಕ್ತದ ಮಾದರಿಯ ಪರೀಕ್ಷೆಯ ಫಲಿತಾಂಶ ಬಂದಿದ್ದು, ಅದರಲ್ಲಿ ನೆಗೆಟಿವ್ ಬಂದ ಕಾರಣ ಜಿಲ್ಲೆಯಲ್ಲಿ ಯಾರು ಭಯ ಪಡುವ ಅಗತ್ಯವಿಲ್ಲ ಎಂದು ಡಿಹೆಚ್‍ಒ ಡಾ. ವೆಂಕಟೇಶ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.  ಇದನ್ನು ಓದಿ: ಮಲೆನಾಡಿಗೂ ಕಾಲಿಟ್ಟಿತೇ ನಿಪಾ ಸೋಂಕು?

    ಕೇರಳದ ಕಾಸರಗೋಡಿನಲ್ಲಿ ಕೆಲಸ ಮಾಡುತ್ತಿದ್ದ ಶಿರವಂತೆಯ ಮಿಥುನ್ ನಿಪಾ ವೈರಸ್ ಹಾವಳಿ ಜೋರಾಗಿದ್ದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಮರಳಿದ್ದರು. ಈ ವೇಳೆ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಸಾಗರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೇರಳದಲ್ಲಿ ಈ ಸೋಂಕಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಆಗಮಿಸಿದ್ದ ಮಿಥುನ್‍ಗೂ ನಿಫಾ ಸೊಂಕು ತಗುಲಿದೆ ಎನ್ನುವ ಶಂಕೆ ಉಂಟಾಗಿತ್ತು.

  • ಕುಚುಕು ದೋಸ್ತಿಗಳು ಅರಳಿಸಿದ ಕಮಲದ `ಮೊಗ್ಗು’ ಯಾರ ಮುಡಿಗೆ..?

    ಕುಚುಕು ದೋಸ್ತಿಗಳು ಅರಳಿಸಿದ ಕಮಲದ `ಮೊಗ್ಗು’ ಯಾರ ಮುಡಿಗೆ..?

    ಹೈ ವೋಲ್ಟೇಜ್ ಮ್ಯಾಚನ್ನ ಸೀಟ್ ತುದೀಲಿ ಕೂತು ನೋಡಿದ ಹಾಗಿನ ಮಜಾ ಕೊಡುತ್ತೆ ಶಿವಮೊಗ್ಗದ ರಾಜಕಾರಣ. ಇಲ್ಲಿನ ಜನರ ನರ ನಾಡಿಗಳಲ್ಲಿ ರಕ್ತದ ಜೊತೆಗೆ ರಾಜಕೀಯವೂ ಬೆರೆತು ಹೋಗಿದೆ. ಕಡಿದಾಳ್ ಮಂಜಪ್ಪ, ಎಸ್. ಬಂಗಾರಪ್ಪ, ಶಾಂತವೇರಿ ಗೋಪಾಲ ಗೌಡರಂತಹಾ ದಿಗ್ಗಜ ರಾಜಕೀಯ ಪಟುಗಳ ತವರೂರು ಶಿವಮೊಗ್ಗ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಕೆ.ಎಸ್ ಈಶ್ವರಪ್ಪ, ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್ ನವರಂತಹಾ ದಿಗ್ಗಜರ ಊರು. ಕುಮಾರ್ ಬಂಗಾರಪ್ಪ ಮತ್ತು ಮಧು ಬಂಗಾರಪ್ಪನವರ ರಾಜಕೀಯ ದಾಯಾದಿತ್ವವನ್ನ ನೋಡಿರೋ ಊರೇ ಶಿವಮೊಗ್ಗ. ಶಿವಮೊಗ್ಗ ಅನ್ನೋ ಸಾಮ್ರಾಜ್ಯದಲ್ಲಿ ಯಾವ ಪಕ್ಷ ತನ್ನ ಹಿಡಿತ ಸಾಧಿಸುತ್ತೆ ಅನ್ನೋದೇ ಕದನ ಕಣದ ಕುತೂಹಲವನ್ನ ಹೆಚ್ಚಿಸಿದೆ.

    ಶಿವಮೊಗ್ಗೆಯ ಹೆಸರಿನ ಹಿಂದಿದೆ ಸಿಹಿಯಾದ ಕಥೆ..!
    ಶಿವಮೊಗ್ಗ ಹೆಸರಿನ ಹಿಂದೆ ಒಂದು ರೋಚಕ ಇತಿಹಾಸವಿದೆ. ಶಿವಮುಖ ಅನ್ನೋ ಹೆಸರು ಮುಂದೆ ಸಿಹಿ ಮೊಗೆ ಅಂದ್ರೆ ಸಿಹಿಯಾದ ಮೊಗ್ಗಾಗಿ ಅರಳಿದ್ದೇ ಶಿವಮೊಗ್ಗ ಅನ್ನೋ ಸುಂದರ ಊರು. ಮೌರ್ಯ ಸಾಮ್ರಾಜ್ಯದ ಕುರುಹುಗಳೂ, ಚಾಲುಕ್ಯ, ಗಂಗರು, ರಾಷ್ಟ್ರಕೂಟರು, ಹೊಯ್ಸಳರ ಹೆಜ್ಜೆ ಗುರುತುಗಳೂ ಇಲ್ಲಿ ಆಳವಾಗಿ ಬೇರೂರಿವೆ. ಶಿವಮೊಗ್ಗೆಯ ಇತಿಹಾಸವೇ ರೋಚಕ, ರೋಮಾಂಚಕ.

    ಮೊಗೆದಷ್ಟೂ ಮುಗಿಯಲ್ಲ ಶಿವಮೊಗ್ಗೆಯ ಪ್ರವಾಸೀ ತಾಣಗಳು
    ಐದು ನದಿಗಳ ಹರಿವನ್ನು ಹೊಂದಿರುವ ಶಿವಮೊಗ್ಗ ಫಲವತ್ತಾದ ಕೃಷಿ ಭೂಮಿಯನ್ನು ಹೊಂದಿದ್ದು ಕರ್ನಾಟಕ ಆಹಾರದ ತೊಟ್ಟಿಲು ಮತ್ತು ಕರ್ನಾಟಕದ ಅಕ್ಕಿಯ ಕಣಜ ಎಂಬ ಹೆಸರು ಪಡೆದಿದೆ. ಸಹ್ಯಾದ್ರಿ ಬೆಟ್ಟಗಳ ಸಾಲಿನಿಂದಾಗಿ ಶಿವಮೊಗ್ಗೆಯಲ್ಲಿ ಹರಿಯುವ ನದಿಗಳು ವರ್ಷಪೂರ್ತಿ ಮಳೆಯನ್ನು ಕಂಡು ತುಂಬಿ ಹರಿಯುತ್ತವೆ. ಸ್ಥಳೀಯರು ಶಿವಮೊಗ್ಗವನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯುತ್ತಾರೆ. ಇಲ್ಲಿ ದೇವಸ್ಥಾನಗಳು, ಬೆಟ್ಟಗುಡ್ಡಗಳು, ತರಕಾರಿ ಬೆಳೆಯುವ ಸ್ಥಳಗಳು ಮತ್ತು ಭಾರತದಲ್ಲಿಯೇ ಅತಿ ಎತ್ತರದ ಪ್ರಸಿದ್ದ ಜೋಗ ಜಲಪಾತ ಇಲ್ಲಿದೆ.

    ಪ್ರವಾಸಿಗರಿಗೆ ಅಚ್ಚರಿಗಳ ತೊಟ್ಟಿಲು
    ಆಗುಂಬೆಯಾ ಪ್ರೇಮ ಸಂಜೆಯಾ ಅನ್ನೋ ಹಾಡಿಗೆ ಸ್ಪೂರ್ತಿ ನೀಡಿದ ಸೂರ್ಯಾಸ್ತದ ಬೆಡಗಿ ಇಲ್ಲೇ ಇರೋದು. ಶಿವಮೊಗ್ಗದಿಂದ 90 ಕಿಲೋ ಮೀಟರ್ ದೂರದಲ್ಲಿದೆ ಈ ಸುಂದರಾತಿ ಸುಂದರ ತಾಣ. ಗಾಜನೂರಿನ ಬಳಿಯಿರೋ ತುಂಗಾ ಜಲಾಶಯ, ಕುಪ್ಪಳ್ಳಿಯ ಕುವೆಂಪು ಮನೆ, ತಾವರೆಕೊಪ್ಪ ಸಿಂಹಧಾಮ, ಬಳುಕೋ ಶ್ವೇತ ಸುಂದರಿ ಧರೆಗಿಳಿದಂತೆ ಕಾಣೋ ಜೋಗ ಜಲಪಾತ, ಲಿಂಗನಮಕ್ಕಿ ಅಣೆಕಟ್ಟು, ಕೊಡಚಾದ್ರಿ ಬೆಟ್ಟ, ಸಿರಿ ಮನೆ ಜಲಪಾತ ಹೀಗೆ ಪ್ರವಾಸಿಗರ ಮನಸ್ಸಿಗೆ ಮುದ ಕೊಡೋ ಸ್ಥಳಗಳು ಲೆಕ್ಕವಿಲ್ಲದಷ್ಟಿವೆ.

    ಈಸೂರಿನ ಕದನ ಕಲಿಗಳು ಸ್ವಾತಂತ್ರ್ಯದ ಕಹಳೆ ಮೊಳಗಿಸಿದ್ದು ಹೇಗೆ ಗೊತ್ತಾ..?
    ಈಸೂರಿನ ಸ್ವಾತಂತ್ರ್ಯ ಕಲಿಗಳು ಬ್ರಿಟೀಷರ ವಿರುದ್ಧ ತೊಡೆ ತಟ್ಟಿ ಸಮರಾಹ್ವಾನ ಕೊಟ್ಟಿದ್ದೂ ಇದೇ ಮಣ್ಣಿನಲ್ಲಿ. ಏಸೂರು ಕೊಟ್ಟರೂ ಈಸೂರು ಕೊಡೆವು ಅನ್ನೋ ಎಂಬ ಘೋಷಣೆಯೊಂದಿಗೆ ಸಣ್ಣ ಸಣ್ಣ ಹುಡುಗರಿಂದ ಶುರುವಾದ ಈಸೂರು ಸ್ವಾತಂತ್ರ್ಯ ಚಳವಳಿ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಮುದ್ರಿತಗೊಂಡಿವೆ. ಮಾನಪ್ಪ ನಾಯಕರ ನೇತೃತ್ವದಲ್ಲಿ ಇಡೀ ಜಿಲ್ಲೆಗೆ ಜಿಲ್ಲೆಯ ಜನ್ರೇ ರೊಚ್ಚಿಗೆದ್ದಿದ್ರು. ಕರನಿರಾಕರಣೆ, ಉಪ್ಪಿನ ಮೇಲಿನ ತೆರಿಗೆ, ಅರಣ್ಯ ಹೀಗೆ ಅನೇಕ ವಿಷಯಗಳನ್ನಿಟ್ಕೊಂಡು ಬ್ರಿಟೀಷರ ವಿರುದ್ಧ ದೊಡ್ಡ ಮಟ್ಟದ ಜನಾಂದೋಲನವೇ ನಡೆದು ಹೋಯ್ತು. ಜನರನ್ನ ಸಂಘಟಿಸೋಕೆ ಹರಿಕಥೆ, ಕೀರ್ತನೆ ಹಾಗೂ ಹಾಡುಗಳು ನೆರವಾದ್ವು. ಏಸೂರ ಕೊಟ್ಟರೂ ಈಸೂರ ಬಿಡೆವು ಅನ್ನೋ ಗೀತೆ ಇಂದಿಗೂ ಮಾರ್ದನಿಸುತ್ತದೆ.

    ಶಿವಮೊಗ್ಗದ ರಂಗೀನ್ ರಾಜಕಾರಣಕ್ಕೆ ಇದೆ ಭರ್ಜರಿ ಇತಿಹಾಸ..!!

    ಹೋರಾಟ ಹಾಗೂ ರಾಜಕಾರಣವನ್ನ ತನ್ನಲ್ಲಿ ಮೊದಲಿನಿಂದಲೂ ಹೊತ್ತುಕೊಂಡು ಬಂದ ಶಿವಮೊಗ್ಗ ಸ್ಟಾರ್ ಕ್ಷೇತ್ರವೂ ಹೌದು. ಕರ್ನಾಟಕ ಚುನಾವಣೆ ಅಂದ್ರೆ ಜನರ ಕುತೂಹಲ ಮೊದಲು ಹೋಗೋದೇ ಶಿವಮೊಗ್ಗೆಯತ್ತ. ಹಾಗಾದ್ರೆ, ಶಿವಮೊಗ್ಗದ ರಾಜಕೀಯ ಚಿತ್ರಣ ಹೇಗಿದೆ ಅನ್ನೋದನ್ನ ನೋಡೋಣ ಬನ್ನಿ. ಕಾಂಗ್ರೆಸ್ ನ ಏಳು ಸುತ್ತಿನ ಕೋಟೆಯನ್ನ ಅಂದ ಕಾಲದಲ್ಲಿ ಬೇಧಿಸಿದ್ದು ಯಡಿಯೂರಪ್ಪ ಮತ್ತು ಈಶ್ವರಪ್ಪ ಅನ್ನೋ ಜಗರಿ ದೋಸ್ತ್ ಗಳು. ಕಾಂಗ್ರೆಸ್ ತನ್ನ ಸಾಮ್ರಾಜ್ಯ ವಿಸ್ತರಣೆಯ ತವಕದಲ್ಲಿದ್ರೆ, ಬಿಜೆಪಿಗೆ ಮತ್ತೆ ತನ್ನ ಬಲಿಷ್ಠತೆಯನ್ನ ಒರೆಗೆ ಹಚ್ಚೋ ಸಮಯ. ಇದೆಲ್ಲದ್ರ ನಡುವೆ ಜೆಡಿಎಸ್ ಗೂ ಇಲ್ಲಿ ಅಳಿವು ಉಳಿವಿನ ಪ್ರಶ್ನೆ.

    ಯಡಿಯೂರಪ್ಪನವರು ಈ ಬಾರಿಯೂ ಶಿಕಾರಿ ಹೊಡೀತಾರಾ..?
    ಉತ್ತರ ಕರ್ನಾಟಕ ಕ್ಷೇತ್ರದಲ್ಲಿ ಮಾಜಿ ಸಿಎಂ ಹಾಗೂ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಸ್ಪರ್ಧೆ ಮಾಡ್ತಾರೆ ಅನ್ನೋ ಮಾತುಗಳು ಈ ಹಿಂದೆ ಕೇಳಿ ಬರ್ತಿತ್ತು. ಆದ್ರೆ, ಯಡಿಯೂರಪ್ಪನವರು ತಮ್ಮ ಸ್ವ ಕ್ಷೇತ್ರ ಶಿಕಾರಿಪುರದಲ್ಲೇ ಶಿಕಾರಿ ಹೊಡೆಯೋಕೆ ನಿಂತಿದ್ದಾರೆ. 2013ರಲ್ಲಿ ನಡೆದ ಎಲೆಕ್ಷನ್ ನಲ್ಲಿ ಬಿಎಸ್ ಯಡಿಯೂರಪ್ಪನವರು 69, 126 ಮತಗಳನ್ನು ಗಳಿಸಿದ್ರು. ಆ ಟೈಮಲ್ಲಿ ಯಡಿಯೂರಪ್ಪನವರ ವಿರುದ್ಧ ಕಾಂಗ್ರೆಸ್ ನ ಶಾಂತವೀರಪ್ಪ ಸ್ಪರ್ಧಿಸಿದ್ರೆ, ಜೆಡಿಎಸ್ ನಿಂದ ಎಚ್ ಬಳಿಗಾರ್ ಕಣದಲ್ಲಿದ್ರು. ನಂತ್ರ ನಡೆದ ಉಪ ಚುನಾವಣೆಯಲ್ಲಿ ಯಡಿಯೂರಪ್ಪ ಪುತ್ರ ಬಿ ವೈ ರಾಘವೇಂದ್ರರನ್ನ ಜನ ಆರಿಸಿದ್ರು. ಶಿಕಾರಿಪುರ ಕ್ಷೇತ್ರಕ್ಕೆ ಈ ಬಾರಿ ಕಾಂಗ್ರೆಸ್ ಜಿ ಬಿ ಮಾಲತೇಶ್ ರನ್ನ ಕಣಕ್ಕಿಳಿಸಿದೆ. ಮಾಲತೇಶ್ ಯಡಿಯೂರಪ್ಪನವರಿಗೆ ಸೆಡ್ಡು ಹೊಡೆಯೋ ಕ್ಯಾಂಡಿಡೇಟ್ ಅಲ್ಲ ಅನ್ನೋದು ಕಾಂಗ್ರೆಸ್ ವಲಯದವ್ರಲ್ಲೇ ಕೇಳಿ ಬರ್ತಿರೋ ಮಾತು. ಹೀಗಾಗಿ ಶಿಕಾರಿಪುರ ಯಡಿಯೂರಪ್ಪನವರಿಗೆ ಸಲಭದ ತುತ್ತಾಗುತ್ತೆ ಅಂತಾನೂ ಹೇಳಲಾಗ್ತಿದೆ. ಇನ್ನು ಜೆಡಿಎಸ್ ಎಚ್.ಟಿ.ಬಳಿಗಾರ್ ರನ್ನ ಅಖಾಡಕ್ಕಿಳಿಸಿದೆ. ಯಡಿಯೂರಪ್ಪನವರು ಶಿಕಾರಿಪುರ ಕ್ಷೇತ್ರದಲ್ಲಿ ಮಾಡಿರೋ ಅಭಿವೃದ್ಧಿ ಕೆಲಸಗಳೇ ಅವ್ರಿಗೆ ಶ್ರೀರಕ್ಷೆ. ಆದ್ರೆ, ಈ ಹಿಂದೊಮ್ಮೆ ಯಡಿಯೂರಪ್ಪನವರೂ ಈ ಕ್ಷೇತ್ರದಲ್ಲಿ ಸೋತಿದ್ದನ್ನೂ ಮರೆಯುವಂತಿಲ್ಲ.

    ಶಿವಮೊಗ್ಗದಲ್ಲಿ ಅರಳೋರು ಯಾರು..? ಅಳೋರು ಯಾರು..?
    ಶಿವಮೊಗ್ಗದಲ್ಲಿ ಈ ಬಾರಿ ಕೆ.ಎಸ್ ಈಶ್ವರಪ್ಪ ಬಿಜೆಪಿ ಹುರಿಯಾಳು. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಕೆ.ಎಸ್ ಈಶ್ವರಪ್ಪನವರಿಗೆ ಕಳೆದ ಬಾರಿ ಕಾಂಗ್ರೆಸ್ ನ ಕೆ ಬಿ ಪ್ರಸನ್ನ ಕುಮಾರ್ ಸೆಡ್ಡು ಹೊಡೆದು ಗೆಲುವಿನ ನಗೆ ಬೀರಿದ್ರು. ಬಿಜೆಪಿ-ಕೆಜೆಪಿಯ ನಡುವಿನ ರಾಜಕೀಯದಲ್ಲಿ ಪ್ರಸನ್ನ ಕುಮಾರ್ ಗೆದ್ದಿದ್ರು. ಆದ್ರೆ ಆ ತಪ್ಪುಗಳನ್ನ ಈ ಬಾರಿ ಸರಿಪಡಿಸಿಕೊಳ್ಳೋ ತವಕದಲ್ಲಿ ಬಿಜೆಪಿ ಇದೆ.

    ಗ್ರಾಮಾಂತರದಲ್ಲಿ ರಾಜಕೀಯದ್ದೇ ಗಮ್ಮತ್ತು..!
    ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಹಾಲಿ ಶಾಸಕಿ ಜೆಡಿಎಸ್ ನ ಶಾರದಾ ಪೂರ್ಯಾನಾಯ್ಕ ಈ ಬಾರಿಯೂ ರಣಕಣದಲ್ಲಿದ್ದಾರೆ. ಇನ್ನು ಬಿಜೆಪಿಯಿಂದ ಕಳೆದ ಬಾರಿಯ ಅಭ್ಯರ್ಥಿ ಕೆ.ಜಿ ಕುಮಾರಸ್ವಾಮಿಯವ್ರ ಬದಲಾಗಿ ಕೆ.ಬಿ.ಅಶೋಕ ನಾಯ್ಕ್ ರನ್ನ ಬಿಜೆಪಿ ತನ್ನ ಕ್ಯಾಂಡಿಡೇಟ್ ಆಗಿ ಆಯ್ಕೆ ಮಾಡಿದೆ. ಇನ್ನು ಕಾಂಗ್ರೆಸ್ ನಿಂದ ಮಾಜಿ ಶಾಸಕ ಕರಿಯಣ್ಣ ಪುತ್ರ ಡಾ. ಶ್ರೀನಿವಾಸ್ ಕರಿಯಣ್ಣ ಅವ್ರಿಗೆ ಟಿಕೆಟ್ ಘೋಷಣೆಯಾಗಿದೆ. ಹೀಗಾಗಿ ಯಾವ ರೀತಿ ಫೈಟ್ ಇರುತ್ತೆ ಅನ್ನೋ ಕುತೂಹಲ ಇದ್ದೇ ಇದೆ.

    ಹುಟ್ಟುತ್ತಾ ಅಣ್ಣತಮ್ಮಂದಿರು ಈಗ ರಾಜಕೀಯದಲ್ಲೂ ದಾಯಾದಿಗಳು..!
    ಸೊರಬ ಕ್ಷೇತ್ರ ಈ ಬಾರಿ ಅಣ್ಣ ತಮ್ಮಂದಿರ ಕದನಕ್ಕೆ ಸಾಕ್ಷಿಯಾಗ್ತಿದೆ. ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪರ ಮಕ್ಕಳಾದ ಕುಮಾರ್ ಬಂಗಾರಪ್ಪ ಕಮಲದ ಕೈ ಹಿಡಿದು ಕಂಟೆಸ್ಟ್ ಮಾಡ್ತಿದ್ರೆ, ಮಧು ಬಂಗಾರಪ್ಪ ತೆನೆ ಹೊತ್ತೇ ದಿಟ್ಟ ಉತ್ತರ ಕೊಡೋದಕ್ಕೆ ರೆಡಿಯಾಗಿದ್ದಾರೆ. ಹಾಲಿ ಶಾಸಕ ಮಧು ಬಂಗಾರಪ್ಪ 2013ರ ಎಲೆಕ್ಷನ್ ನಲ್ಲಿ 58,541 ಮತಗಳನ್ನು ಪಡೆದು ಗೆಲುವನ್ನ ಸಾಧಿಸಿದ್ರು. ಇನ್ನು ಕುಮಾರ್ ಬಂಗಾರಪ್ಪ ಕೈ ಬಿಟ್ಟು ಕಮಲ ಹಿಡಿದಿರೋದ್ರಿಂದ ಕಾಂಗ್ರೆಸ್ ಅನಿವಾರ್ಯವಾಗಿ ಬಿಜೆಪಿಯನ್ನ ಬಿಟ್ಟು ಬಂದ ರಾಜು ಎಂ ತಲ್ಲೂರ್ ಅವ್ರನ್ನ ಕಣಕ್ಕೆ ಇಳಿಸಿದೆ. ಏನಿದ್ರೂ ಇಲ್ಲಿ ದಾಯಾದಿಗಳ ಕುಟುಂಬ ಕಲಹ ಮನೆ ಬಾಗಿಲು ದಾಟಿ ರಾಜಕೀಯದವರೆಗೆ ತಲುಪಿರೋದೇ ದೊಡ್ಡ ದುರಂತ..!

    ತೀರ್ಥಹಳ್ಳಿಯಲ್ಲಿ ಯಾರ ಮುಕುಟಕ್ಕೆ `ರತ್ನ’?
    ತೀರ್ಥಹಳ್ಳಿ ಕ್ಷೇತ್ರದಲ್ಲಿ ಈ ಬಾರಿಯೂ ಹಾಲಿ ಶಾಸಕ ಹಾಗೂ ಮಾಜಿ ಸಚಿವರೂ ಆಗಿರುವ ಕಿಮ್ಮನೆ ರತ್ನಾಕರ್ ಪ್ರಬಲ ಅಭ್ಯರ್ಥಿ. ಬಿಜೆಪಿಯಲ್ಲಿ ಮಾಜಿ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಮೊದಲೇ ಟಿಕೆಟ್ ಫಿಕ್ಸ್ ಆಗಿತ್ತು. ಇನ್ನು, ಜೆಡಿಎಸ್ ನಿಂದ ಕಾಂಗ್ರೆಸ್ನಿಂದ ಬಂದಂತಹಾ ಆರ್. ಎಂ ಮಂಜುನಾಥ್ ಗೌಡ ಸ್ಪರ್ಧೆಯಲ್ಲಿದ್ದಾರೆ. ಆದ್ರೆ, ಈ ಕ್ಷೇತ್ರದಲ್ಲೇನಿದ್ರೂ ಕಾಂಗ್ರೆಸ್ ಸ್ವಲ್ಪ ಮಟ್ಟಿಗೆ ಮೆಲುಗೈ ಸಾಧಿಸಿದೆ ಅನ್ನೋ ಲೆಕ್ಕಾಚಾರ ಇದೆ.

    ಭದ್ರಾವತಿಯಲ್ಲಿ ಗೆಲ್ಲೋ ಉಕ್ಕಿನ ಮನುಷ್ಯ ಯಾರು..?
    ಉಕ್ಕಿನ ನಗರಿ ಭದ್ರಾವತಿಯಲ್ಲಿ ಜೆಡಿಎಸ್ ದ್ದೇ ಪಾರುಪತ್ಯ. ಹಾಲಿ ಶಾಸಕ ಜೆಡಿಎಸ್ ನ ಎಂಜೆ ಅಪ್ಪಾಜಿ ಯವರೇ ಅಭ್ಯರ್ಥಿ. ಕಳೆದ ಬಾರಿ ಟಿಕೆಟ್ ಕೈ ತಪ್ಪಿದ್ರಿಂದ ಪಕ್ಷ ಬಿಟ್ಟು ಮುನಿಸಿಕೊಂಡಿದ್ದ ಬಿ.ಕೆ ಸಂಗಮೇಶ್ ಗೆ ಈ ಬಾರಿ ಕಾಂಗ್ರೆಸ್ ಜೈ ಅಂದಿದೆ. ಇಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಪರಿಸ್ಥಿತಿ. ಏನಿದ್ರೂ ಅಪ್ಪಾಜಿ ಗೌಡ ಹಾಗೂ ಸಂಗಮೇಶ್ ನಡ್ವೇನೇ ಫೈಟ್ ಆಗೋದು.

    ಸಾಗರದ ಸರದಾರ ಯಾರಾಗ್ತಾರೆ..?
    ಲಿಂಗನಮಕ್ಕಿಯಿಂದ ನಾಡಿಗೆ ಬೆಳಕು ಹರಿಯುತ್ತೆ. ಆದ್ರೆ, ಬಿಜೆಪಿ ಮಟ್ಟಿಗೆ ಇಲ್ಲಿ ಈ ಬಾರಿ ಇದ್ದ ಪವರ್ ಕೂಡಾ ಸ್ವಲ್ಪ ಮಟ್ಟಿಗೆ ಆಫ್ ಆಗಿರೋ ರೀತಿ ಕಾಣಿಸ್ತಿದೆ. ಹಾಲಿ ಶಾಸಕ ಕಾಗೋಡು ತಿಮ್ಮಪ್ಪ ಅವ್ರು ಇಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದಾರೆ. ಆದ್ರೆ, ಈ ಬಾರಿ ಕಾಂಗ್ರೆಸ್ ಹಲವಾರು ಗೊಂದಲಗಳ ನಡುವೆ ಅವ್ರಿಗೇ ಮಣೆ ಹಾಕಿದೆ. ಇನ್ನು, ಹರತಾಳು ಹಾಲಪ್ಪ ಹಾಗೂ ಬೇಳೂರು ಗೋಪಾಲ ಕೃಷ್ಣ ನಡುವೆ ಟಿಕೆಟ್ ಗಾಗಿ ನಡೆದ ಪ್ರಹಸನದ ಬಳಿಕ ಅಂತಿಮವಾಗಿ ಹರತಾಳು ಟಿಕೆಟ್ ಗಿಟ್ಟಿದ್ರು. ಇದ್ರಿಂದ ಸಿಟ್ಟಿಗೆದ್ದ ಬೇಳೂರು ಕಾಂಗ್ರೆಸ್ ಕೈ ಹಿಡಿದು ಜೈ ಅಂದಿದ್ದೂ ಆಯ್ತು. 2013ರ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪ 71, 960 ಮತ ಪಡೆದಿದ್ರು. ಕೆಜೆಪಿಯ ಬಿ.ಆರ್.ಜಯಂತ್ 30,712 , ಜೆಡಿಎಸ್‌ನ ಬೇಳೂರು ಗೋಪಾಲಕೃಷ್ಣ 23,217 ಮತ, ಬಿಜೆಪಿಯ ಶರಾವತಿ ಸಿ.ರಾವ್ 5,355 ಮತಗಳನ್ನು ಪಡೆದಿದ್ರು. ಹೀಗಾಗಿ ಈ ಬಾರಿ ಸಾಗರದ ಜನ ಯಾರಿಗೆ ಜೈ ಅಂತಾರೆ ಅನ್ನೋದೇ ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ.

  • ಸಚಿವ ಕಾಗೋಡು ತಿಮ್ಮಪ್ಪ ಕ್ಷೇತ್ರದ ಮೇಲೆ ಜಯಮಾಲಾ ಕಣ್ಣು?

    ಸಚಿವ ಕಾಗೋಡು ತಿಮ್ಮಪ್ಪ ಕ್ಷೇತ್ರದ ಮೇಲೆ ಜಯಮಾಲಾ ಕಣ್ಣು?

    ಬೆಂಗಳೂರು: ಹಿರಿಯ ಸಚಿವ ಕಾಗೋಡು ತಿಮ್ಮಪ್ಪ ಅವರ ವಿಧಾನಸಭಾ ಕ್ಷೇತ್ರದ ಮೇಲೆ ನಟಿ, ಪರಿಷತ್ ಸದಸ್ಯೆ ಜಯಮಾಲಾ ಕಣ್ಣಿಟ್ಟಿದ್ದಾರೆ ಅಂತಾ ಹೇಳಲಾಗುತ್ತಿದೆ. ಒಂದು ವೇಳೆ ಈ ಬಾರಿ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪ ಸ್ಪರ್ಧಿಸದೇ ಇದ್ದರೆ ಸಾಗರ ಕ್ಷೇತ್ರದ ಟಿಕೆಟ್ ತಮಗೆ ನೀಡಬೇಕೆಂದು ಹೈಕಮಾಂಡ್ ಮುಂದೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಸಚಿವ ಕಾಗೋಡು ತಿಮ್ಮಪ್ಪ ಬದಲಾಗಿ ಅವರ ಪುತ್ರಿಗೆ ಸಾಗರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗುತ್ತಿದೆ ಎಂಬ ವದಂತಿಗಳು ಕಾಂಗ್ರೆಸ್ ಅಂಗಳದಲ್ಲಿ ಹರಿದಾಡುತ್ತಿವೆ. ಈ ವದಂತಿ ನಡುವೆ ಜಯಮಾಲಾ ಸಾಗರ ಅಖಾಡಕ್ಕೆ ಎಂಟ್ರಿ ನೀಡಿದ್ದಾರೆ.

    ಈ ಕಾರಣಕ್ಕೆ ಟಿಕೆಟ್ ಕೊಡಿ: ಸಾಗರದಲ್ಲಿ ಈಡಿಗ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಯಮಾಲಾ ತಾವು ಈಡಿಗ ಸಮುದಾಯದವರಾಗಿದ್ದರಿಂದ ಪ್ರಬಲ ಅಭ್ಯರ್ಥಿಯಾಗುವ ಲಕ್ಷಣಗಳಿವೆ. ಸಾಗರದ ಚುನಾವಣೆಯಲ್ಲಿ ಹವ್ಯಕ ಸಮುದಾಯದ ಜನರ ಮತಗಳು ಕೂಡ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತವೆ. ಜಯಮಾಲಾ ಪತಿ ರಾಮಚಂದ್ರ ಹವ್ಯಕ ಸಮುದಾಯಕ್ಕೆ ಸೇರಿದ ಸಾಗರದ ಮೂಲದವರಾಗಿದ್ದಾರೆ. ಈ ಎಲ್ಲ ಕಾರಣಗಳು ನನ್ನ ಗೆಲುವಿಗೆ ಪೂರಕವಾಗಲಿವೆ ಎಂಬುದನ್ನು ಜಯಮಾಲಾ ಹೈಕಮಾಂಡ್ ಗೆ ತಿಳಿಸಿದ್ದಾರೆ ಅಂತಾ ಹೇಳಲಾಗುತ್ತಿದೆ.

    ಕಾಂಗ್ರೆಸ್ ಮಾತ್ರ ಇದೂವರೆಗೂ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಿಕೊಂಡಿಲ್ಲ. ಎಲ್ಲ ರಾಜಕೀಯ ಮುಖಂಡರು ತಮ್ಮ ಕ್ಷೇತ್ರಗಳ ಟಿಕೆಟ್‍ಗಾಗಿ ಹೈಕಮಾಂಡ್ ಬಾಗಿಲು ತಟ್ಟುತ್ತಿದ್ದಾರೆ.

    ಸಾಗರ ಟಿಕೆಟ್‍ಗಾಗಿ ಬಿಜೆಪಿಯಲ್ಲೂ ಪೈಪೋಟಿ: 2013ರ ವಿಧಾನಸಭಾ ಚುನಾವಣೆಯಲ್ಲಿ ಮಧು ಬಂಗಾರಪ್ಪ, ಬಿಜೆಪಿಯ ಹರತಾಳು ಹಾಲಪ್ಪರನ್ನು ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಸಿ ವಿಜಯಪತಾಕೆಯನ್ನು ಹಾರಿಸಿದ್ದರು. ಆದ್ರೆ ಈ ಬಾರಿ ಹರತಾಳು ಹಾಲಪ್ಪ ಸಾಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಈಗಾಗಲೇ ರಾಜ್ಯ ನಾಯಕರ ಮುಂದೆ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಅಂತ ಹೇಳಲಾಗುತ್ತಿದೆ. ಸಾಗರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿರುವ ಬೇಳೂರು ಗೋಪಾಲಕೃಷ್ಣ ಕೂಡ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‍ನ ಕಾಗೋಡು ತಿಮ್ಮಪ್ಪ ಅವರನ್ನು 2004 ಮತ್ತು 2008ರ ವಿಧಾನಸಭಾ ಚುನಾವಣೆಯಲ್ಲಿ ಬೇಳೂರು ಗೋಪಾಲಕೃಷ್ಣ ಅವರು ಸೋಲಿಸಿ ಶಾಸಕರಾಗಿದ್ದರು. ಹೀಗಾಗಿ ಸಾಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ತಮಗೆ ಸಾಗರ ಕ್ಷೇತ್ರದಿಂದಲೇ ಟಿಕೆಟ್ ಬೇಕೆಂದು ಹಠ ಹಿಡಿದರೆ ಒಳ್ಳೆಯ ಸ್ನೇಹಿತರಾಗಿರುವ ಹಾಲಪ್ಪ ಮತ್ತು ಗೋಪಾಲಕೃಷ್ಣ ಮಧ್ಯೆ ಪೈಪೋಟಿ ನಡೆಯುವ ಸಾಧ್ಯತೆಗಳಿವೆ.

    ಬಿಜೆಪಿ ಹೈಕಮಾಂಡ್ ಮಾತ್ರ ಅಭ್ಯರ್ಥಿಗಳ ಪಟ್ಟಿಯನ್ನು ಎಚ್ಚರಿಕೆಯಿಂದ ತಯಾರಿಸುತ್ತದೆ. ಟಿಕೆಟ್ ಯಾವ ನಾಯಕರಿಗೆ ಯಾವ ಕ್ಷೇತ್ರದಿಂದ ಲಭಿಸಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

  • ಬಂಗಾರಪ್ಪ ವರ್ಸಸ್ ಬಂಗಾರಪ್ಪ: ಶಿವಮೊಗ್ಗದ ಸೊರಬದಲ್ಲಿ ಸಹೋದರರ ಸವಾಲ್

    ಬಂಗಾರಪ್ಪ ವರ್ಸಸ್ ಬಂಗಾರಪ್ಪ: ಶಿವಮೊಗ್ಗದ ಸೊರಬದಲ್ಲಿ ಸಹೋದರರ ಸವಾಲ್

    ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಲೆಕ್ಕಾಚಾರಗಳು ದಿನದಿಂದ ದಿನಕ್ಕೆ ಚುರುಕುಗೊಳ್ಳುತ್ತಿವೆ. ಈಗಾಗಲೇ ಎಲ್ಲ ನಾಯಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಚುನಾವಣಾ ಕಾರ್ಯತಂತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಅಂತೆಯೇ ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಕುಮಾರ್ ಬಂಗಾರಪ್ಪ ವರ್ಸಸ್ ಮಧು ಬಂಗಾರಪ್ಪ ನಡುವೆ ಅಖಾಡ ಆರಂಭವಾಗಲಿದೆ.

    ಬಿಎಸ್‍ವೈ ಸೂಚನೆಯಂತೆ ಸೊರಬ ಕ್ಷೇತ್ರದಲ್ಲಿ ಕುಮಾರ್ ಬಂಗಾರಪ್ಪ ಕಾರ್ಯತಂತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ಸೊರಬ ಕ್ಷೇತ್ರದ ಶಾಸಕರಾಗಿರುವ ಸಹೋದರ ಮಧು ಬಂಗಾರಪ್ಪ ಕೂಡ ಜೆಡಿಎಸ್ ನಿಂದ ಚುನವಾಣಾ ಕಣಕ್ಕೆ ಇಳಿಯಲಿದ್ದಾರೆ. ಒಂದು ವೇಳೆ ಬಿಜೆಪಿ ಹೈಕಮಾಂಡ್ ಕುಮಾರ್ ಬಂಗಾರಪ್ಪರಿಗೆ ಸೊರಬ ಕ್ಷೇತ್ರದ ಟಿಕೆಟ್ ನೀಡಿದ್ರೆ ಸಹೋದರರ ಮಧ್ಯೆ ವಾರ್ ನಡೆಯಲಿದೆ.

    ಸೊರಬ ಕ್ಷೇತ್ರದಿಂದಲೇ ಕುಮಾರ್ ಬಂಗಾರಪ್ಪ ಈಗಾಗಲೇ ಮೂರು ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದಾರೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಮಧು ಬಂಗಾರಪ್ಪ, ಬಿಜೆಪಿಯ ಹರತಾಳು ಹಾಲಪ್ಪರನ್ನು ಸೋಲಿಸಿ ವಿಜಯಪತಾಕೆಯನ್ನು ಹಾರಿಸಿದ್ದರು. ಆದ್ರೆ ಈ ಬಾರಿ ಹರತಾಳು ಹಾಲಪ್ಪ ಮಾತ್ರ ಸಾಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಈಗಾಗಲೇ ರಾಜ್ಯ ನಾಯಕರ ಮುಂದೆ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಅಂತ ಹೇಳಲಾಗುತ್ತಿದೆ.

    ಸ್ನೇಹಿತರ ಸವಾಲ್: ಸಾಗರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿರುವ ಬೇಳೂರು ಗೋಪಾಲಕೃಷ್ಣ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‍ನ ಕಾಗೋಡು ತಿಮ್ಮಪ್ಪ ಅವರನ್ನು 2004 ಮತ್ತು 2008ರ ವಿಧಾನ ಸಭಾ ಚುನಾವಣೆಯಲ್ಲಿ ಬೇಳೂರು ಗೋಪಾಲಕೃಷ್ಣ ಅವರು ಸೋಲಿಸಿ ಶಾಸಕರಾಗಿದ್ದರು. ಹೀಗಾಗಿ ಸಾಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ತಮಗೆ ಸಾಗರ ಕ್ಷೇತ್ರದಿಂದಲೇ ಟಿಕೆಟ್ ಬೇಕೆಂದು ಹಠ ಹಿಡಿದರೆ ಒಳ್ಳೆಯ ಸ್ನೇಹಿತರಾಗಿರುವ ಹಾಲಪ್ಪ ಮತ್ತು ಗೋಪಾಲಕೃಷ್ಣ ಮಧ್ಯೆ ಪೈಪೋಟಿ ನಡೆಯುವ ಸಾಧ್ಯತೆಗಳಿವೆ.

    ಬಿಜೆಪಿ ಹೈಕಮಾಂಡ್ ಮಾತ್ರ ಅಭ್ಯರ್ಥಿಗಳ ಪಟ್ಟಿಯನ್ನು ಎಚ್ಚರಿಕೆಯಿಂದ ತಯಾರಿಸುತ್ತದೆ. ಟಿಕೆಟ್ ಯಾವ ನಾಯಕರಿಗೆ ಯಾವ ಕ್ಷೇತ್ರದಿಂದ ಲಭಿಸಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

  • ಹುಣ್ಣಿಮೆ ಜೊತೆ ಕೈ ಜೋಡಿಸಿದ ಓಖಿ- ಬೆಳದಿಂಗಳ ಇಂದಿನ ರಾತ್ರಿ ಏನಾಗುತ್ತೋ..?

    ಹುಣ್ಣಿಮೆ ಜೊತೆ ಕೈ ಜೋಡಿಸಿದ ಓಖಿ- ಬೆಳದಿಂಗಳ ಇಂದಿನ ರಾತ್ರಿ ಏನಾಗುತ್ತೋ..?

    – ದೀಪಕ್ ಜೈನ್
    ಉಡುಪಿ: ಓಖಿ ಚಂಡಮಾರುತ ತಮಿಳ್ನಾಡು ಮತ್ತು ಕೇರಳ ರಾಜ್ಯದ ನಿದ್ದೆಗೆಡಿಸಿದೆ. ಕರ್ನಾಟಕದ ಕರಾವಳಿಗರಿಗೆ ಚಳಿ ಹಿಡಿಸಿದೆ. ಸಮುದ್ರದಲ್ಲೆದ್ದ ಸುಳಿಗಾಳಿಗೂ ಬಾನಿನಲ್ಲಿರುವ ಚಂದ್ರನಿಗೂ ಲಿಂಕ್ ಇದೆ. ಸಮುದ್ರದ ಅಲೆಗಳನ್ನು ಫುಲ್ ಕಂಟ್ರೋಲ್ ಮಾಡೋನೇ ಆ ಚಂದ ಮಾಮ.

    ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನ ಸಾಮಾನ್ಯವಾಗಿ ಕಡಲು ಎಂದಿನಂತೆ ಇರೋದಿಲ್ಲ. ಅಲೆಗಳ ಅಬ್ಬರ ಜಾಸ್ತಿ ಇರುತ್ತದೆ. ಈ ಬಾರಿ ಹುಣ್ಣಿಮೆ ಜೊತೆ ಓಖಿ ಚಂಡಮಾರುತ ರೌದ್ರ ನರ್ತನ ತೋರುತ್ತಿದೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಭಾರಿ ಅನಾಹುತ ಸೃಷ್ಟಿಸಿರುವ ಓಖಿ ಹುಣ್ಣಿಮೆ ಸಂದರ್ಭದಲ್ಲೇ ಹುಟ್ಟಿಕೊಂಡಿರೋದರಿಂದ ಅಪಾಯ ಜಾಸ್ತಿ.

    ಓಖಿ ಚಂಡಮಾರುತದ ಎಫೆಕ್ಟ್ ರಾಜ್ಯದ ಕರಾವಳಿ ಜಿಲ್ಲೆಗಳಿಗೆ ತಟ್ಟಿದೆ. ಉಡುಪಿಯಲ್ಲಿ ಹುಣ್ಣಿಮೆಯ ಹಿಂದಿನ ದಿನ (ಡಿ.2) ಕಡಲು ತನ್ನ ರೌದ್ರ ನರ್ತನ ತೋರಿದೆ. ಕಾಪು- ಪಡುಕೆರೆಯಲ್ಲಿ ಸಮುದ್ರದ ನೀರು ರಸ್ತೆಗೆ ಅಪ್ಪಳಿಸಿದೆ. ರಾತ್ರೋ ರಾತ್ರಿ ದೋಣಿಗಳನ್ನು ತೀರದಿಂದ ತಟಕ್ಕೆ ಎಳೆದು ಹಾಕಲಾಗುತ್ತಿದೆ.

    200 ನಾಟಿಕಲ್ ಮೈಲಿ ದೂರ ಚಂಡಮಾರುತದ ಸುಂಟರಗಾಳಿ ಇದ್ದರೂ, ಹುಣ್ಣಿಮೆ ಎಫೆಕ್ಟ್ ನಿಂದ ಸಮುದ್ರ ತೀರದಲ್ಲಿ ಅಲೆಗಳು ಉಬ್ಬುಬ್ಬಿ ಬರುತ್ತಿದೆ. ಅಬ್ಬರದ ಅಲೆಗಳಿಗೆ ಹೆದರಿ ಕಡಲತೀರದ ಜನ ಬೇರೆಡೆ ಶಿಫ್ಟ್ ಆಗುತ್ತಿದ್ದಾರೆ. ಹುಣ್ಣಿಮೆಯ ಭಯವೂ ಜನರನ್ನು ಕಾಡುತ್ತಿದೆ.

    ಸಮುದ್ರಕ್ಕೂ ಚಂದ್ರನಿಗೂ ಸಂಬಂಧ!: ಸಮುದ್ರಕ್ಕೂ ಚಂದ್ರನಿಗೂ ಸಂಬಂಧವಿದೆ. ಚಂದ್ರನ ಚಲನೆಯ ಮೇಲೆಯೇ ಎಲ್ಲಾ ರಾಶಿ, ನಕ್ಷತ್ರಗಳು ನಿಂತಿರುವುದು. ತಿಂಗಳಿಗೊಂದು ಹುಣ್ಣಿಮೆ ಅಮವಾಸ್ಯೆ ಬರುತ್ತದೆ. 15 ದಿನಕ್ಕೊಮ್ಮೆ ಸಮುದ್ರದ ಮೇಲೆ ಎಫೆಕ್ಟ್ ಆಗುತ್ತದೆ. ಸಾಗರದ ನೀರು ದಡಕ್ಕೆ ಹತ್ತಿರಾಗೋದು ಈ ಎರಡು ದಿನಗಳಲ್ಲೇ ಜಾಸ್ತಿ.

    ಅಮಾವಾಸ್ಯೆಯ ಹಿಂದಿನ ಮತ್ತು ನಂತರದ ದಿನ, ಹುಣ್ಣಿಮೆ ಮತ್ತು ಎರಡು ದಿನ ಅಲೆಗಳ ಸಂಖ್ಯೆ ಮತ್ತು ಅಪ್ಪಳಿಸುವ ರಭಸ ಹೆಚ್ಚಾಗಿರುತ್ತದೆ. ಹೀಗಾಗಿ ಓಖಿ ಮತ್ತು ಹುಣ್ಣಿಮೆ ಒಟ್ಟಾಗಿದ್ದು, ಅರಬ್ಬೀ ಸಮುದ್ರದ ಅಬ್ಬರ ಹೆಚ್ಚಾಗಲು ಒಂದು ಕಾರಣವಾಗಿದೆ. ಓಖಿ ಚಂಡಮಾರುತದಿಂದ ಸಮುದ್ರ ತೀರದ ಜನರು ಆತಂಕಗೊಂಡಿದ್ದಾರೆ. ಎರಡು ದಿನಗಳಲ್ಲಿ ಕಡಲು ಸಮಸ್ಥಿತಿಗೆ ಬರಲಪ್ಪಾ ಎಂದು ಸಮುದ್ರ ರಾಜನಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

    ಕಾಪು, ಪಡುಕೆರೆ, ಮಲ್ಪೆ, ಪಿತ್ರೋಡಿ ಆಸುಪಾಸಿನಲ್ಲಿ ಸಮುದ್ರ ತೀರದಲ್ಲಿದ್ದ ದೋಣಿಗಳನ್ನು ಮೇಲಕ್ಕೆ ಶಿಫ್ಟ್ ಮಾಡಿದ್ದೇವೆ. ಮೀನುಗಾರಿಕೆಗೆ ಹೋಗದಂತೆ ಎಚ್ಚರಿಕೆ ಕೊಟ್ಟಿರುವ ಕಾರಣ ಎರಡು ದಿನ ರಜೆ ತೆಗೆದುಕೊಂಡಿದ್ದೇವೆ ಎಂದು ಪಿತ್ರೋಡಿ ಸಂಜೀವ ಸಾಲಿಯಾನ್ ಮಾಹಿತಿ ನೀಡಿದರು.

    ಪ್ರತೀ ಅಮವಾಸ್ಯೆ – ಹುಣ್ಣಿಮೆ ದಿನ ಬರುವಾಗ ಕಡಲು ಕಪ್ಪಗೆ ಮತ್ತು ಬೆಳ್ಳಗೆ ಆಗುತ್ತದೆ. ಈ ಬಾರಿ ಹುಣ್ಣಿಮೆ ದಿನದಂದೇ ದಕ್ಷಿಣದಲ್ಲಿ ಸುಳಿಗಾಳಿ ಎದ್ದಿರುವುದರಿಂದ ನಾವು ಕಸುಬಿಗೆ ಇಳಿಯಲು ಸ್ವಲ್ಪ ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರು.

    ಹುಣ್ಣಿಮೆಯ ಹಿಂದಿನ ದಿನದ ರಾತ್ರಿ ಕೊಂಚಮಟ್ಟಿನ ರೌದ್ರಾವತಾರ ತೋರಿರುವ ಕಡಲು, ಹುಣ್ಣಿಮೆ ರಾತ್ರಿ ಯಾವ ರೀತಿಯಲ್ಲಿ ವರ್ತಿಸುತ್ತದೆ ಎಂಬ ಕುತೂಹಲ ಮತ್ತು ಆತಂಕ ಕರಾವಳಿಯ ಜನರಲ್ಲಿ ಇದೆ. ಅದರಲ್ಲೂ ಸಮುದ್ರವನ್ನೇ ಜೀವನ ಮಾಡಿಕೊಂಡಿರುವ, ತಟದಲ್ಲಿ ಮನೆ ಕಟ್ಟಿಕೊಂಡಿರುವ ಮೀನುಗಾರರಿಗೆ ಆತಂಕ ಕೊಂಚ ಹೆಚ್ಚೇ ಇದೆ.

  • ಮಾರಿಕಾಂಬೆ ಜಾತ್ರೆಯಲ್ಲಿ ಲೂಸ್ ಮಾದ ಅಭಿನಯದ ದುನಿಯಾ2 ಚಿತ್ರದ ಆಡಿಯೋ, ಟ್ರೇಲರ್ ಬಿಡುಗಡೆ

    ಮಾರಿಕಾಂಬೆ ಜಾತ್ರೆಯಲ್ಲಿ ಲೂಸ್ ಮಾದ ಅಭಿನಯದ ದುನಿಯಾ2 ಚಿತ್ರದ ಆಡಿಯೋ, ಟ್ರೇಲರ್ ಬಿಡುಗಡೆ

    ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ನಡೆಯುತ್ತಿರುವ ಮಾರಿಕಾಂಬೆ ಜಾತ್ರೆಯಲ್ಲಿ ಲೂಸ್ ಮಾದ ಯೋಗೀಶ್ ಅಭಿನಯದ ದುನಿಯಾ 2 ಚಿತ್ರದ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆ ಮಾಡಲಾಯಿತು.

    ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆಡಿಯೋ ಬಿಡುಗಡೆ ಮಾಡಿ, ಚಿತ್ರ ಶತದಿನ ಪ್ರದರ್ಶನ ಕಾಣಲಿ ಅಂತಾ ಹೇಳಿದ್ರು.

    10 ವರ್ಷಗಳ ಹಿಂದೆ ದುನಿಯಾ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡುವ ಮೂಲಕ ಚಿತ್ರರಂಗಕ್ಕೆ ಬಂದಿದ್ದೆ. ಇದೀಗ ದುನಿಯಾ 2 ಚಿತ್ರದಲ್ಲಿ ನಾಯಕನಾಗಿ ಮತ್ತೆ ಅಭಿನಯಿಸಿದ್ದೇನೆ. ಸಾಗರ ಮಾರಿಕಾಂಬೆ ಜಾತ್ರೆಯಲ್ಲಿ ಆಡಿಯೋ ಬಿಡುಗಡೆ ಮಾಡುತ್ತಿರುವುದು ಖುಷಿ ಕೊಟ್ಟಿದೆ. ಈ ಸಿನೆಮಾವನ್ನೂ ಗೆಲ್ಲಿಸಿ ಅಂತಾ ಯೋಗೀಶ್ ಹೇಳಿದ್ರು.

    ಬಳಿಕ ಅಭಿಮಾನಿಗಳ ಆಗ್ರಹದ ಮೇರೆಗೆ ಹುಡುಗರು ಹಾಗೂ ಸಿದ್ಲಿಂಗು ಚಿತ್ರದ ಡೈಲಾಗ್ ಹೇಳಿ ರಂಜಿಸಿದರು. ಚಿತ್ರದ ಸಂಗೀತ ನಿರ್ದೇಶಕ ಭರತ್, ನಿರ್ದೇಶಕ ಹರಿ, ನಿರ್ಮಾಪಕರಾದ ಸಿದ್ದರಾಜು, ಶೃತಿ ವೆಂಕಟೇಶ್ ಇನ್ನಿತರರು ಇದ್ದರು.