Tag: ಸಾಕಾಣಿಕೆ

  • ಕ್ಯಾಟ್ ಫಿಶ್ ಹೊಂಡಗಳ ಮೇಲೆ ಅಧಿಕಾರಿಗಳ ದಾಳಿ – ಈ ಮೀನುಗಳು ಅಪಾಯಕಾರಿ ಯಾಕೆ?

    ಕ್ಯಾಟ್ ಫಿಶ್ ಹೊಂಡಗಳ ಮೇಲೆ ಅಧಿಕಾರಿಗಳ ದಾಳಿ – ಈ ಮೀನುಗಳು ಅಪಾಯಕಾರಿ ಯಾಕೆ?

    ಬೆಂಗಳೂರು: ದೇಶಾದ್ಯಂತ ನಿಷೇಧಗೊಂಡಿರುವ ಕ್ಯಾಟ್ ಫಿಶ್ ಗಳನ್ನು ಅಕ್ರಮವಾಗಿ ಸಾಕಾಣಿಕೆ ಮಾಡುತ್ತಿದ್ದ ಹೊಂಡಗಳ ಮೇಲೆ ಇಂದು ಅಧಿಕಾರಿಗಳು ದಾಳಿ ನಡೆಸಿ ಜೆಸಿಬಿ ಮೂಲಕ ತೆರವು ಗೊಳಿಸಿದ್ದಾರೆ.

    ಹೊಸಕೋಟೆ ತಾಲೂಕಿನ ಬೈಲಾನರಸಾಪುರ ಹಾಗು ಎನ್.ಹೊಸಹಳ್ಳಿ ಗ್ರಾಮಗಳಲ್ಲಿ ಅಕ್ರಮವಾಗಿ ಕ್ಯಾಟ್ ಫಿಶ್ ಸಾಕಾಣಿಕೆ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಹೊಸಕೋಟೆ ತಾಲೂಕು ತಹಶೀಲ್ದಾರ್, ಮೀನುಗಾರಿಕೆ ಇಲಾಖೆ ಹಾಗೂ ನಂದಗುಡಿ ಪೋಲಿಸ್ ಇಲಾಖೆಯ ಅಧಿಕಾರಿ ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.

    ಗ್ರಾಮಗಳಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ಕ್ಯಾಟ್ ಫಿಶ್ ಸಾಕಾಣಿಕೆ ಮಾಡುತ್ತಿದ್ದು ಎರಡು ತಂಡಗಳಾಗಿ 2 ಜೆಸಿಬಿಗಳ ಮೂಲಕ ಕ್ಯಾಟ್ ಫಿಶ್ ಹೊಂಡಗಳನ್ನು ತೆರವು ಕಾರ್ಯಚರಣೆ ನಡೆಸಿದರು. ಈ ಹಿಂದೆಯೂ ಸಹ ಜಿಲ್ಲಾ ಎಸ್ಪಿ ರವಿ ಡಿಚನ್ನಣ್ಣನವರ್ ಅವರ ನೇತೃತ್ವದಲ್ಲಿ ತೆರವುಗೊಳಿಸಿದ್ದರೂ ಸಹ ಮತ್ತೆ ಅಕ್ರಮವಾಗಿ ಕ್ಯಾಟ್ ಫಿಶ್ ಸಾಕಾಣಿಕೆ ಪ್ರಾರಂಭಿಸಿದ್ದ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಅಧಿಕಾರಿಗಳ ದಾಳಿ ನಡೆಸಿ ಹೊಂಡಗಳನ್ನು ಧ್ವಂಸಗೊಳಿಸಿದ್ದಾರೆ.

    ಇಂದು ದಿನಪೂರ್ತಿ ಅಧಿಕಾರಿಗಳ ತಂಡ ತೆರವು ಕಾರ್ಯಚರಣೆ ಮಾಡಿ ಎರಡು ಗ್ರಾಮಗಳಲ್ಲಿ ಸಂಪೂರ್ಣ ಕ್ಯಾಟ್ ಫಿಶ್ ಹೊಂಡಗಳನ್ನು ತೆರವುಗೊಳಿಸಿದ್ದಾರೆ. ಕ್ಯಾಟ್ ಫಿಶ್ ಸಾಕಾಣಿಕೆ ಹಾಗೂ ಹೊಂಡಗಳ ಜಾಗದ ಮಾಲೀಕರ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

    ಕ್ಯಾಟ್ ಫಿಶ್ ಅಪಾಯವೇಕೆ?
    ಕ್ಯಾಟ್ ಫಿಶ್ ಗಳನ್ನು ಕೊಳೆತ ಕೊಳದೊಳಗೆ ಸಾಕಲಾಗುತ್ತದೆ. ಈ ಮೀನಿಗೆ ಆಹಾರವಾಗಿ ಸತ್ತ ಪ್ರಾಣಿಗಳು, ಸತ್ತ ದನ ಮತ್ತು ನಾಯಿಯ ಶವ ಹಾಕಲಾಗುತ್ತದೆ. ಅದನ್ನೇ ತಿಂದ ಕ್ಯಾಟ್ ಫಿಶ್ ಗಳು ದಷ್ಟ ಪುಷ್ಟವಾಗಿ ಬೆಳೆಯುತ್ತದೆ. ಕಡಿಮೆ ಬೆಲೆ ನಿಗದಿ ಆಗಿರುವ ಕಾರಣ ಗ್ರಾಹಕರು ತಿಳಿಯದೇ ಈ ಮೀನನ್ನು ಖರೀದಿ ಮಾಡುತ್ತಾರೆ.

    ಈ ಮೀನುಗಳಲ್ಲಿ ಪಾದರಸ ಅಂಶವಿದ್ದು, ಮನುಷ್ಯ ನರವ್ಯೂಹಕ್ಕೆ ತೊಂದರೆಯಾಗುತ್ತದೆ. ಅಷ್ಟೇ ಅಲ್ಲದೇ ಇದರಲ್ಲಿ ಕ್ಯಾನ್ಸರ್ ಕಾರಕ ಅಂಶವಿದ್ದು, ಗರ್ಭಿಣಿಯರು ತಿಂದರೆ ಹುಟ್ಟುವ ಮಕ್ಕಳಲ್ಲಿ ನರ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.

    ದಷ್ಟ ಪುಷ್ಟವಾಗಿ ಬಳೆದ ಪರಿಣಾಮ ಮೀನಿನಲ್ಲಿ ಮುಳ್ಳು ಕಮ್ಮಿ ಇರುತ್ತದೆ. ಈ ಕಾರಣಕ್ಕೆ ಜನರು ಇದನ್ನು ಹೆಚ್ಚು ತಿನ್ನ ಇಷ್ಟಪಡುತ್ತಾರೆ. ಆದರೆ ಇದನ್ನು ತಿಂದರೆ ರಕ್ತ ಹೆಪ್ಪುಗಟ್ಟಿ ಹೃದಯ ಸಂಬಂಧಿ ಖಾಯಿಲೆ ಬರುತ್ತದೆ. ಮೀನುಗಾರಿಕಾ ಇಲಾಖೆಯ ಅಧ್ಯಯನದಲ್ಲಿ ಈ ಅಂಶಗಳು ದೃಢಪಟ್ಟಿರುವುದರಿಂದ ಈ ಮೀನನ್ನು ಭಾರತದಲ್ಲಿ ಸುಪ್ರೀಂ ಕೋರ್ಟ್ ನಿಷೇಧಿಸಿದೆ.

  • ಜಲಪ್ರಳಯಕ್ಕೆ ಕುಗ್ಗಿದ್ದ ಕೊಡಗು ರೈತನಿಗೆ ಆಸರೆಯಾಯಿತು ಕೋಳಿ ಸಾಕಾಣಿಕೆ

    ಜಲಪ್ರಳಯಕ್ಕೆ ಕುಗ್ಗಿದ್ದ ಕೊಡಗು ರೈತನಿಗೆ ಆಸರೆಯಾಯಿತು ಕೋಳಿ ಸಾಕಾಣಿಕೆ

    – ವರ್ಷಪೂರ್ತಿ ಮೊಟ್ಟೆ ಇಡುತ್ತವೆ ನಾಟಿ ಕೋಳಿಗಳು

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯದಲ್ಲಿ ಅದೆಷ್ಟೋ ಜನರ ಬದುಕು ಕೊಚ್ಚಿಹೋಗಿತ್ತು. ಇತ್ತ ಕಾಫಿ ತೋಟ, ಗದ್ದೆ ಸೇರಿದಂತೆ ಇತರ ಆದಾಯ ಮೂಲಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ. ಸಮಸ್ಯೆಗಳನ್ನು ಎದುರಿಸಿ ಚೇತರಿಸಿಕೊಳ್ಳಲು ಆತ್ಮವಿಶ್ವಾಸ ಅಗತ್ಯ. ಇದಕ್ಕೆ ಮಾದರಿ ಎನ್ನುವಂತೆ ಜಲಪ್ರಳಯ ಸಂತ್ರಸ್ತ ರೈತರೊಬ್ಬರು ಸ್ವಯಂ ಉದ್ಯೋಗಕ್ಕೆ ಮುಂದಾಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

    ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಡಗದಾಳು ಗ್ರಾಮದ ರೈತ ತಿಮ್ಮಯ್ಯ ಎಂಬವರು ಎಸ್.ಡಿ 308 ಹೈದರಾಬಾದ್ ತಳಿಯ ಕೋಳಿ ಸಾಕಾಣಿಕೆಯಲ್ಲಿ ತೊಡಗಿದ್ದಾರೆ. ಈ ಕೋಳಿಗಳ ವಿಶೇಷತೆ ಏನೆಂದರೆ ಇವು ವರ್ಷವಿಡಿ ಮೊಟ್ಟೆ ಕೊಡುತ್ತಿದ್ದು, ಅವುಗಳು ನಾಟಿ ಮೊಟ್ಟೆಯಂತೆ ಕಾಣುತ್ತವೆ. ಈ ಕೋಳಿಗಳು 365 ದಿನವು ಮೊಟ್ಟೆ ನೀಡುವುದರಿಂದ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಸಾಧ್ಯವಾಗುತ್ತದೆ.

    ಸಾಮಾನ್ಯವಾಗಿ ನಾಟಿ ಕೋಳಿಗಳು ತಿಂಗಳಲ್ಲಿ 15ರಿಂದ 20 ಮೊಟ್ಟೆ ಹಾಕುತ್ತವೆ. ಆದರೆ ಎಸ್.ಡಿ 308 ಹೈದರಾಬಾರ್ ತಳಿಯ ಕೋಳಿಗಳು ವರ್ಷಪೂರ್ತಿ ಮೊಟ್ಟೆ ಹಾಕುತ್ತವೆ. ಒಂದು ಮೊಟ್ಟೆಯ ಬೆಲೆ 10 ರೂ. ಆಗಿದ್ದು, ಒಟ್ಟು 72 ಕೋಳಿಗಳನ್ನು ಹೊಂದಿದ್ದೇವೆ. ಈ ಮೂಲಕ ಖರ್ಚು ವೆಚ್ಚ ಕಳೆದು ಒಂದು ತಿಂಗಳಿಗೆ 30 ಸಾವಿರ ರೂ. ಸಂಪಾದನೆ ಮಾಡುತ್ತಿರುವೆ ಎಂದು ತಿಮ್ಮಯ್ಯ ಮಾಹಿತಿ ನೀಡಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆ ಕಾಡುತ್ತಿದ್ದು ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಅನೇಕರು ನಿರುದ್ಯೋಗಿಗಳಾಗಿ ಕಾಲ ಕಳೆಯುತ್ತಿದ್ದಾರೆ. ಕಡಿಮೆ ಬಂಡವಾಳದ ಮೂಲಕ ಇಂತಹ ಸ್ವಯಂ ಉದ್ಯೋಗಕ್ಕೆ ಜನ ಮುಂದಾಗಬೇಕು. ಗ್ರಾಮೀಣ ಭಾಗದಲ್ಲಿದ್ದು ಮಾಡಬಹುದಾದ ಈ ಉದ್ಯಮಗಳು ತುಂಬಾ ಲಾಭಕಾರಿಯೂ ಹೌದು. ಇದನ್ನು ಯಾರೂ ಬೇಕಾದರೂ ಆರಂಭಿಸಬಹುದು. ಇದಕ್ಕೆ ಪೂರಕವಾಗಿ ಸರ್ಕಾರವು ಸಾಲ ಸೌಲಭ್ಯ ಒದಗಿಸುತ್ತದೆ. ಗೃಹಿಣಿಯರು ಕೂಡ ಈ ಕೋಳಿ ಸಾಕಾಣಿಕೆ ಮಾಡಬಹುದು ಎಂದು ರೈತ ತಿಮ್ಮಯ್ಯ ತಿಳಿಸಿದರು.

    ತಿಮ್ಮಯ್ಯ ಅವರ ಕೋಳಿ ಸಾಕಾಣಿಕೆ ಜಿಲ್ಲೆಯಲ್ಲಿ ಸಖತ್ ಸದ್ದು ಮಾಡಿದ್ದು, ಅವರ ಮನೆಗೆ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಯ ಮಹಿಳೆಯರು ಆಗಮಿಸಿ ಕೋಳಿ ಸಾಕಾಣಿಕೆಯ ಬಗ್ಗೆ ತಿಳಿದುಕೊಂಡು ಹೋಗುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv