Tag: ಸರ್ಕಾರ ರಚನೆ

  • ಸರ್ಕಾರ ರಚನೆಗೆ ಅಮಿತ್ ಶಾ ಆಶೀರ್ವಾದ ಬೇಕಿಲ್ಲ- ಉದ್ಧವ್ ಠಾಕ್ರೆ

    ಸರ್ಕಾರ ರಚನೆಗೆ ಅಮಿತ್ ಶಾ ಆಶೀರ್ವಾದ ಬೇಕಿಲ್ಲ- ಉದ್ಧವ್ ಠಾಕ್ರೆ

    ಮುಂಬೈ: ಒಂದಲ್ಲ ಒಂದು ದಿನ ಶಿವಸೇನೆಯವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ತಂದೆ ಬಾಳಾ ಸಾಹೇಬ್ ಠಾಕ್ರೆಯವರಿಗೆ ಮಾತು ಕೊಟ್ಟಿದ್ದೇವೆ. ಇದನ್ನು ಮಾಡಿಯೇ ತೀರುತ್ತೇವೆ ಎಂದು ಉದ್ಧವ್ ಠಾಕ್ರೆ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ತಿರುಗೇಟು ನೀಡಿದ್ದಾರೆ.

    ಫಡ್ನವೀಸ್ ಮಧ್ಯಮಗಳ ಜೊತೆ ಮಾತನಾಡಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದಲ್ಲ ಒಂದು ದಿನ ಶಿವಸೇನೆಯವರನ್ನೇ ಮುಖ್ಯಮಂತ್ರಿ ಮಾಡುತ್ತೇವೆ ಎಂದು ನಾವು ಈ ಹಿಂದೆ ನಮ್ಮ ತಂದೆ ಬಾಳಾ ಠಾಕ್ರೆಗೆ ಮಾತು ಕೊಟ್ಟಿದ್ದೇವೆ. ಹೀಗಾಗಿ ಮುಖ್ಯಮಂತ್ರಿ ಪಟ್ಟದ ಕುರಿತು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಾವು ಇದನ್ನು ಮಾಡಿಯೇ ತೀರುತ್ತೇವೆ. ನಮಗೆ ಅಮಿತ್ ಶಾ ಅವರ ಆಶೀರ್ವಾದ ಬೇಕಿಲ್ಲ ಎಂದು ಕಿಡಿಕಾರಿದರು.

    ನಾನು ಆಯ್ಕೆಗಳ ಬಗ್ಗೆ ಮಾತನಾಡುವಾಗ ಆಘಾತಕ್ಕೊಳಗಾಗಿದ್ದಾರೆ ಎಂದು ಫಡ್ನವಿಸ್ ಹೇಳಿದ್ದಾರೆ. ಆದರೆ ಸರ್ಕಾರ ರಚಿಸಿಯೇ ತೀರುತ್ತೇವೆ ಎಂಬ ಮಾಜಿ ಸಿಎಂ ಹೇಳಿಕೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಅವರು ಹೇಗೆ ಸರ್ಕಾರ ರಚನೆ ಮಾಡುತ್ತಾರೆ. ಕರ್ನಾಟಕ ಹಾಗೂ ಮಣಿಪುರದಲ್ಲಿ ಮಾಡಿದಂತೆ ಮಾಡುತ್ತಾರೆಯೇ ಎಂದು ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದರು.

    ನಾನು ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರವಾಸ ಮಾಡಿದ್ದೇನೆ, ಮುಂದೆಯೂ ಮಾಡುತ್ತೇನೆ. ಮಹಾರಾಷ್ಟ್ರದ ಜನತೆ ಶಿವಸೇನೆ ಬಗ್ಗೆ ಪ್ರೀತಿ, ವಿಶ್ವಾಸ ಹಾಗೂ ಗೌರವವನ್ನು ಹೊಂದಿದ್ದಾರೆ. ಅಮಿತ್ ಶಾ ಆ್ಯಂಡ್ ಕಂಪನಿ ವಿರುದ್ಧವಾಗಿದ್ದಾರೆ. ಮಹಾರಾಷ್ಟ್ರದ ಹೆಚ್ಚಿನ ಜನರು ಶಿವಸೇನೆ ಮತ್ತು ಬಾಳಾ ಸಾಹೇಬ ಮೇಲೆ ನಂಬಿಕೆ ಇಟ್ಟಿದ್ದಾರೆ. ಅಮಿತ್ ಶಾ ಆ್ಯಂಡ್ ಕಂಪನಿ ಮೇಲೆ ನಂಬಿಕೆ ಇಲ್ಲ ಎಂದು ಉದ್ಧವ್ ಠಾಕ್ರೆ ವಾಗ್ದಾಳಿ ನಡೆಸಿದರು.

    ಇದೇ ವೇಳೆ ಆರ್‌ಎಸ್‌ಎಸ್ ವಿರುದ್ಧವೂ ಹರಿಹಾಯ್ದಿರುವ ಉದ್ಧವ್ ಠಾಕ್ರೆ ನಾನು  ಆರ್‌ಎಸ್‌ಎಸ್ ನ್ನು ಗೌರವಿಸುತ್ತೇನೆ. ಆದರೆ ಆರ್‍ಎಸ್‍ಎಸ್ ಈ ಕುರಿತು ಮರುಚಿಂತನೆ ನಡೆಸಬೇಕು. ಸುಳ್ಳು ಹೇಳುವುದು ಯಾವ ರೀತಿಯ ಹಿಂದುತ್ವ, ರಾಮನನ್ನು ಅನುಸರಿಸುವವರು ರಾಮನ ತತ್ವಾದರ್ಶಗಳನ್ನೇಕೆ ಆಚರಿಸುತ್ತಿಲ್ಲ. ಭಗವಾನ್ ರಾಮನನ್ನು ಸ್ತುತಿಸಲು ಬಳಸುವ ಅದೇ ಬಾಯಿಂದ ಅವರು ಸುಳ್ಳು ಹೇಳಿರುವುದು ನನಗೆ ಆಘಾತವನ್ನುಂಟು ಮಾಡಿದೆ. ಈ ವಿಚಾರದಲ್ಲಿ ಆರ್‌ಎಸ್‌ಎಸ್ ನಾವು ಹಿಂದೂ ಪಕ್ಷವೇ ಅಥವಾ ಇಲ್ಲವೇ ಎಂಬುದನ್ನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.

    ಅಲ್ಲದೆ 50:50 ಫಾರ್ಮುಲಾ ಬಗ್ಗೆ ನೀವು ಸುಳ್ಳು ಹೇಳಿದ್ದೀರಿ ಎಂದು ಒಪ್ಪಿಕೊಳ್ಳುವ ವರೆಗೂ ನಾವು ನಿಮ್ಮೊಂದಿಗೆ ಮಾತನಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಫಡ್ನವಿಸ್ ಅವರಿಗೆ ಸವಾಲು ಹಾಕಿದರು.

  • ಇಬ್ಬರು ಅತೃಪ್ತರಿಂದ ಸಿದ್ದರಾಮಯ್ಯನವರಿಗೆ ಕರೆ- ಎಂ.ಬಿ.ಪಾಟೀಲ್

    ಇಬ್ಬರು ಅತೃಪ್ತರಿಂದ ಸಿದ್ದರಾಮಯ್ಯನವರಿಗೆ ಕರೆ- ಎಂ.ಬಿ.ಪಾಟೀಲ್

    ವಿಜಯಪುರ: ಇಬ್ಬರು ಅತೃಪ್ತ ಶಾಸಕರು ಶುಕ್ರವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿದ್ದರು ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಅತೃಪ್ತ ಶಾಸಕರು ಶುಕ್ರವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿದ್ದರು. ಆದರೆ, ಸಿದ್ದರಾಮಯ್ಯ ಅವರು ಇಬ್ಬರ ಕರೆಯನ್ನೂ ಸ್ವೀಕರಿಸಿಲ್ಲ ಎಂದು ತಿಳಿಸಿದ್ದಾರೆ.

    ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ಆಗಬೇಕಿದೆ. ಈ ಕಾಯ್ದೆಯ 10ನೇ ಶೆಡ್ಯೂಲ್‍ಗೆ ತಿದ್ದುಪಡಿ ತರಬೇಕು. ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ನೀಡಿರುವ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಬೇಕು. ಈ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆಯನ್ನು ವ್ಯವಸ್ಥಿತವಾಗಿ ಜಾರಿಗೆ ತರಲು ಸಹಕರಿಸಬೇಕಿದೆ ಎಂದರು.

    ಗೃಹ ಸಚಿವನಾಗಿ ನಾನೇ ಝೀರೋ ಟ್ರಾಫಿಕ್ ಬಳಸಿಲ್ಲ. ಅಂಥದ್ದರಲ್ಲಿ ಅತೃಪ್ತರಿಗೆ ಹೇಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲು ಸಾಧ್ಯ. ಆಡಳಿತ ಪಕ್ಷದ ಶಾಸಕರನ್ನು ಸೆಳೆದು, ಪಕ್ಷಾಂತರ ಮಾಡಿಸಿ ಅವರಿಗೆ ಸಚಿವ ಸ್ಥಾನದ ಆಫರ್ ನೀಡುವುದು ಸರಿಯಾದ ವ್ಯವಸ್ಥೆಯಲ್ಲ. ಈ ರೀತಿಯ ವ್ಯವಸ್ಥೆ ಪ್ರಾರಂಭವಾದರೆ ಬೇರೆ ರಾಜ್ಯಗಳಿಗೂ ಹರಡುತ್ತದೆ. ನಂತರ ಇದು ಕರ್ನಾಟಕದ ಫಾರ್ಮುಲಾ ಎಂದು ದೇಶಾದ್ಯಂತ ಪ್ರಚಾರ ಪಡೆಯುತ್ತದೆ. ಆಗ ರಾಜ್ಯದ ಗೌರವಕ್ಕೆ ಧಕ್ಕೆ ಬರುತ್ತದೆ ಇದನ್ನು ರಾಜಕೀಯ ನಾಯಕರು ಅರಿಯಬೇಕಿದೆ ಎಂದು ಹರಿಹಾಯ್ದರು.

    ಯಡಿಯೂರಪ್ಪನವರಿಗೆ ಶತಾಯಗತಾಯ ಅಧಿಕಾರಕ್ಕೇರುವುದು ಅನಿವಾರ್ಯವಾಗಿದೆ. ಅವರು ರಾಜಕೀಯ ಜೀವನದ ಕಟ್ಟ ಕಡೆಯ ಹಂತದಲ್ಲಿದ್ದಾರೆ. ಹೀಗಾಗಿ ನಾಲ್ಕು ವರ್ಷ ಕಾಯುವ ತಾಳ್ಮೆ ಅವರಿಗಿಲ್ಲ. ನಾಲ್ಕು ವರ್ಷದ ನಂತರ ಮುಖ್ಯಮಂತ್ರಿಯಾಗುತ್ತೇನೋ ಇಲ್ಲವೋ ಎಂದು ಈ ರೀತಿ ಮಾಡಿದ್ದಾರೆ. ಅವರ ಪಕ್ಷದ ನಿಯಮದಂತೆ ವಯಸ್ಸಿನ ಪರಿಮಿತಿಯಲ್ಲಿ ಆಡಳಿತ ನಡೆಸಬೇಕಾಗಿದೆ. ಹೀಗಾಗಿ ಯಡಿಯೂರಪ್ಪನವರು ತರಾತುರಿಯಲ್ಲಿ ಸರ್ಕಾರ ರಚನೆ ಮಾಡಿದ್ದು, ಇದು ಅನೈತಿಕ ಸರ್ಕಾರವಾಗಿದೆ. ಈ ಸರ್ಕಾರ ತುಂಬಾ ದಿನ ಉಳಿಯುವುದಿಲ್ಲ. ಇದರ ಅವಧಿ ಕೇವಲ ಆರು ತಿಂಗಳಿಂದ ಒಂದು ವರ್ಷ ಮಾತ್ರ ಎಂದು ಅವರು ವಾಗ್ದಾಳಿ ನಡೆಸಿದರು.

    ಸಿದ್ದರಾಮಯ್ಯ ಅವರಿಗೆ ಕರೆ ಮಾಡಿರುವ ಅತೃಪ್ತರು ಯಾರೆಂದು ತನಗೆ ಗೊತ್ತು, ಆದರೆ ಮಾಧ್ಯಮದ ಮುಂದೆ ನಾನು ಹೇಳೋದು ಸರಿಯಿರಲ್ಲ. ಅದನ್ನು ಸಿದ್ದರಾಮಯ್ಯ ಅವರೇ ಹೇಳುತ್ತಾರೆ ಎಂದು ಹೇಳುವ ಮೂಲಕ ಕರೆ ಮಾಡಿದವರು ಯಾರು ಎಂಬುದನ್ನು ಎಂ.ಬಿ ಪಾಟೀಲ್ ಬಾಯಿ ಬಿಟ್ಟಿಲ್ಲ.

  • ಮೈತ್ರಿ ನಾಯಕರು ಅತೃಪ್ತರನ್ನು ಏನು ಬೇಕಾದರೂ ಮಾಡಲಿ, ನಮ್ಮ ಬಳಿ ಸಂಖ್ಯಾಬಲವಿದೆ- ಸುಕುಮಾರ್ ಶೆಟ್ಟಿ

    ಮೈತ್ರಿ ನಾಯಕರು ಅತೃಪ್ತರನ್ನು ಏನು ಬೇಕಾದರೂ ಮಾಡಲಿ, ನಮ್ಮ ಬಳಿ ಸಂಖ್ಯಾಬಲವಿದೆ- ಸುಕುಮಾರ್ ಶೆಟ್ಟಿ

    ಬೆಂಗಳೂರು: ಸಮ್ಮಿಶ್ರ ಸರ್ಕಾರ ಬೇಡ ಎಂಬುದು ಜನರ ಆದೇಶ. ಅಲ್ಲದೆ ಸಮ್ಮಿಶ್ರ ಸರ್ಕಾರದ ಆಡಳಿತದಿಂದ ಬೇಸತ್ತು ಅವರ ಶಾಸಕರೇ ರಾಜೀನಾಮೆ ಕೊಟ್ಟಿದ್ದಾರೆ ಎಂದು ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.

    ಯಡಿಯೂರಪ್ಪನವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಆಗಮಿಸಿರುವ ಶಾಸಕ ಸುಕುಮಾರ್ ಶೆಟ್ಟಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರ ಜೊತೆ ಮಾತನಾಡಿದರು.

    ನಮ್ಮಲ್ಲಿ 105 ಶಾಸಕರಿದ್ದು, ಮೈತ್ರಿ ಸರ್ಕಾರದ 20 ಶಾಸಕರು ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಸಂಖ್ಯಾ ಬಲ ನಮ್ಮ ಪರವಾಗಿದೆ. ಮೈತ್ರಿ ನಾಯಕರು ಅವರ ಶಾಸಕರನ್ನು ಏನು ಬೇಕಾದರೂ ಮಾಡಲಿ ಎಂದು ಹೇಳುವ ಮೂಲಕ ಶಾಸಕರ ಅನರ್ಹ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

    ಬಿ.ಎಸ್.ಯಡಿಯೂರಪ್ಪನವರ ಅಧಿಕಾರಾವಧಿಯಲ್ಲಿ ರಾಜ್ಯ ಸುಭೀಕ್ಷೆಯಿಂದರಲಿ ಎಂದು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬಂದಿದ್ದೇನೆ. ಕಾಂಗ್ರೆಸ್‍ನವರು ಅವರ ಶಾಸಕರನ್ನು ಏನು ಬೇಕಾದರೂ ಮಾಡಿಕೊಳ್ಳಲಿ, ನಮ್ಮ ಬಳಿ ಸಂಖ್ಯಾಬಲವಿದೆ. ಅಲ್ಲದೆ, ಅತೃಪ್ತ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಆದರೆ ಮುಂಬೈನಲ್ಲಿರುವ ಶಾಸಕರಿಗೂ ಕಾಂಗ್ರೆಸ್‍ಗೂ ಸಂಬಂಧವಿದೆ ಎಂದು ಗುಡುಗಿದ್ದಾರೆ.

    ಕ್ಷೇತ್ರದ ಜನತೆ ಸರ್ಕಾರ ರಚನೆ ಮಾಡಿಯೇ ಕ್ಷೇತ್ರಕ್ಕೆ ಬರಬೇಕೆಂದು ಹೇಳಿ ಕಳುಹಿಸಿದ್ದಾರೆ. ಕುಡಿಯುವ ನೀರಿಗೆ ನಮ್ಮ ಮೊದಲ ಆದ್ಯತೆ, ನಾಲ್ಕು ವರ್ಷ ಸುಭದ್ರ ಸರ್ಕಾರ ನಡೆಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು. ಬಿಎಸ್‍ವೈ ಪ್ರಮಾಣವಚನ ಸ್ವಿಕಾರ ಸಮಾರಂಭ ಹಿನ್ನೆಲೆ ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಬೆಂಗಳೂರಿಗೆ ಆಗಮಿಸಿದ್ದಾರೆ.

  • ಬಿಜೆಪಿಯವರು ಮಂಗನಾಟ ಆಡುತ್ತಿದ್ದಾರೆ: ಎಸ್.ಆರ್.ಪಾಟೀಲ್

    ಬಿಜೆಪಿಯವರು ಮಂಗನಾಟ ಆಡುತ್ತಿದ್ದಾರೆ: ಎಸ್.ಆರ್.ಪಾಟೀಲ್

    ಬೆಂಗಳೂರು: ಬಿಜೆಪಿ ಇಂತಹ ದೊಡ್ಡ ಸಾಹಸಕ್ಕೆ ಇಳಿಯಬಾರದಿತ್ತು, ಅವರು ಮಾಡಿದ ಪಾಪಕ್ಕೆ ತಕ್ಕ ಶಿಕ್ಷೆಯಾಗುತ್ತದೆ ಎಂದು ಶಾಸಕ, ಮಾಜಿ ಸಚಿವ ಎಸ್.ಆರ್.ಪಾಟೀಲ್ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

    ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಾಸ ಮತಯಾಚನೆಗೂ ಮುನ್ನವೇ ಬಿಜೆಪಿಯವರ ಕೋಟು, ಸೂಟು ರೆಡಿಯಾಗಿತ್ತು. ಮುಖ್ಯಮಂತ್ರಿ ಹಾಗೂ ಸಚಿವ ಸ್ಥಾನಕ್ಕಾಗಿ ತುದಿಗಾಲಲ್ಲಿ ನಿಂತು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ಪ್ರಮಾಣವಚನ ಸ್ವೀಕರಿಸಲು ಸಹ ಕಾತರದಿಂದ ಕಾಯುತ್ತಿದ್ದರು. ಆದರೆ ಈವರೆಗೂ ಸರ್ಕಾರವೇ ರಚನೆಯಾಗಿಲ್ಲ ಎಂದು ವ್ಯಂಗ್ಯವಾಡಿದರು.

    ನನ್ನ 45 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇಂತಹ ರಾಜಕಾರಣವನ್ನು ನೋಡಿಲ್ಲ. ಬಿಜೆಪಿಯವರು ಮಂಗನಾಟದಂತೆ ಆಡುತ್ತಿದ್ದಾರೆ. ಆಪರೇಷನ್ ಕಮಲದ ಮೂಲಕ ಪ್ರಜಾಪ್ರಭುತ್ವಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಇದರಿಂದ ಬಿಜೆಪಿಯವರ ಪರಿಸ್ಥಿತಿ ನೆಟ್ಟಗಾಗುವುದಿಲ್ಲ ಎಂದು ಕಿಡಿ ಕಾರಿದರು.

    ಅತೃಪ್ತ ಶಾಸಕರ ಅನರ್ಹತೆ ವಿಚಾರ ಸ್ಪೀಕರ್ ಅಂಗಳದಲ್ಲಿದ್ದು, ಸ್ಪೀಕರ್ ತೀರ್ಮಾನವೇ ಅಂತಿಮ. ಬಿಜೆಪಿಯವರ ಸರ್ಕಾರ ರಚನೆಯ ಕಾತರಕ್ಕೆ ಹೈ ಕಮಾಂಡ್ ಬ್ರೇಕ್ ಹಾಕಿದ್ದು, ಅವರ ಪರಿಸ್ಥಿತಿ ನೆನಸಿಕೊಂಡರೆ ಮರುಕವಾಗುತ್ತದೆ. ಬಿಜೆಪಿಯಿಂದ ಸ್ಥಿರ ಸರ್ಕಾರ ನೀಡಲು ಸಾಧ್ಯವೇ ಇಲ್ಲ, ಅವರಿಂದ ರಾಜ್ಯದ ಅಭಿವೃದ್ಧಿ ಕನಸಿನ ಮಾತು ಎಂದು ಎಸ್.ಆರ್.ಪಾಟೀಲ್ ಟೀಕಿಸಿದರು.

  • ಇಂದೇ ಪರಿಕ್ಕರ್ ಪ್ರಮಾಣವಚನ ಸ್ವೀಕಾರ- ಗುರುವಾರದಂದು ಬಹುಮತ ಸಾಬೀತು

    ಇಂದೇ ಪರಿಕ್ಕರ್ ಪ್ರಮಾಣವಚನ ಸ್ವೀಕಾರ- ಗುರುವಾರದಂದು ಬಹುಮತ ಸಾಬೀತು

    ನವದೆಹಲಿ: ಗೋವಾ ಸಿಎಂ ಆಗಿ ಮನೋಹರ್ ಪರಿಕ್ಕರ್ ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಬಹುದು, ಆದರೆ ಗುರುವಾರದಂದು ಬಹುಮತ ಸಾಬೀತುಪಡಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಇದರಿಂದ ಕಾಂಗ್ರೆಸ್‍ಗೆ ತೀವ್ರ ಹಿನ್ನಡೆಯಾಗಿದೆ.

    ಗೋವಾದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ರಾಜ್ಯಪಾಲರ ಆಹ್ವಾನವನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಸುಪ್ರೀಂಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಖೇಹರ್ ಪೀಠ, ಮೊದಲು ನೀವೇಕೆ ರಾಜ್ಯಪಾಲರನ್ನು ಸರ್ಕಾರ ರಚಿಸಲು ಹಕ್ಕು ಮಂಡಿಸಲಿಲ್ಲ? ಇಂತಹ ಸಂದರ್ಭದಲ್ಲಿ ಒಂದು ಪಕ್ಷಕ್ಕೆ ಮಾತ್ರ ಸಂಖ್ಯಾಬಲ ಇದ್ದಿದ್ದರಿಂದ ಕಾಂಗ್ರೆಸ್‍ಗೆ ಆಹ್ವಾನ ನೀಡುವ ಪ್ರಶ್ನೆಯೇ ಇಲ್ಲ. ನಿಮಗೆ ಸಂಖ್ಯಾಬಲವಿದ್ದರೆ ಅದನ್ನು ಈಗಲೇ ಸಾಬೀತುಪಡಿಸಿ ಎಂದು ಕಾಂಗ್ರೆಸ್ ಪರ ವಕೀಲ ಅಭಿಷೇಕ್ ಸಿಂಗ್ವಿ ಅವರಿಗೆ ನ್ಯಾ. ಪ್ರಶ್ನಿಸಿತು.

    ಅಲ್ಲದೆ ಮನೋಹರ್ ಪರಿಕ್ಕರ್ ಅವರ ಪ್ರಮಾಣವಚನ ಸ್ವೀಕಾರಕ್ಕೆ ತಡೆ ನೀಡಲು ಕೋರ್ಟ್ ನಿರಾಕರಿಸಿದ್ದು, ಮಾರ್ಚ್ 16ರಂದು ಬಹುಮತ ಸಾಬೀತುಪಡಿಸುವಂತೆ ಸೂಚನೆ ನೀಡಿತು. ಈ ನಡುವೆ ಇಂದು ಮಧ್ಯಾಹ್ನ 1.30ಕ್ಕೆ ಕಾಂಗ್ರೆಸ್ ನಿಯೋಗ ರಾಜ್ಯಪಾಲ ಮೃದುಲಾ ಸಿನ್ಹಾ ಅವರನ್ನ ಭೇಟಿಯಾಗಲಿದೆ.

    ಗೋವಾ ವಿಧಾನಸಭೆಯ ಒಟ್ಟು 40 ಸ್ಥಾನಗಳಲ್ಲಿ ಕಾಂಗ್ರೆಸ್ 17 ಹಾಗೂ ಬಿಜೆಪಿ 13 ಸ್ಥಾನಗಳನ್ನ ಗೆದ್ದಿದವು. ಬಹುಮತಕ್ಕೆ ಬೇಕಾಗಿದ್ದಿದ್ದು 21 ಸ್ಥಾನಗಳು. ಬಿಜೆಪಿ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರು ಇತರೆ ಪ್ರಾದೇಶಿಕ ಪಕ್ಷ ಹಾಗೂ ಸ್ವತಂತ್ರ ಅಭ್ಯರ್ಥಿಗಳ ಬೆಂಬಲ ಪಡೆದು ಭಾನುವಾರದಂದು ಸರ್ಕಾರ ರಚನೆಗೆ ಹಕ್ಕು ಮಂಡಿಸಿತ್ತು.