Tag: ಸರ್ಕಾರಿ ವೈದ್ಯ

  • ಅನಾರೋಗ್ಯದಿಂದ ಬಳಲುತ್ತಿದ್ದ ವೈದ್ಯ ಬೆಂಗ್ಳೂರಿನ ಸರ್ಕಾರಿ ಆಸ್ಪತ್ರೆ ವಾರ್ಡ್‌ನಲ್ಲೇ ನೇಣಿಗೆ ಶರಣು

    ಅನಾರೋಗ್ಯದಿಂದ ಬಳಲುತ್ತಿದ್ದ ವೈದ್ಯ ಬೆಂಗ್ಳೂರಿನ ಸರ್ಕಾರಿ ಆಸ್ಪತ್ರೆ ವಾರ್ಡ್‌ನಲ್ಲೇ ನೇಣಿಗೆ ಶರಣು

    ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ವೈದ್ಯ ಬೆಂಗಳೂರಿನ ಸರ್ಕಾರಿ ಆಸ್ಪತ್ರೆ ವಾರ್ಡ್‌ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ಡಾ.ಎಸ್.ರೇಣುಕಾನಂದ (43) ಆತ್ಮಹತ್ಯೆ ಮಾಡಿಕೊಂಡ ವೈದ್ಯ. ಇವರು ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಗುಡುಗಿದ್ರೆ ಆಸ್ಪತ್ರೆಯಲ್ಲಿ ಹೆರಿಗೆಯೇ ಆಗ್ಬಿಡುತ್ತೆ – ಶ್ರೀನಿವಾಸ್ ಪ್ರಸಾದ್ ಲೇವಡಿ

    ಮಕ್ಕಳ ತಜ್ಞರಾಗಿದ್ದ ವೈದ್ಯ ಡಾ.ಎಸ್.ರೇಣುಕಾನಂದ ಅವರು ಆಸ್ಪತ್ರೆಯ ವಾರ್ಡ್‌ನಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಬೆಡ್‌ಶೀಟ್‌ನಿಂದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ರೇಣುಕಾನಂದ ಬಾಲ್ಯದಿಂದಲೇ ಪೋಲಿಯೋದಿಂದ ಅಂಗವೈಕಲ್ಯತೆ ಹೊಂದಿದ್ದರು. ಹೀಗಾಗಿ ಹಲವು ದಿನಗಳಿಂದ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದ ಬೇಸತ್ತಿದ್ದರು. ಬೆಳಗ್ಗೆ 11:30 ರ ವೇಳೆಗೆ ರೌಂಡ್ಸ್ ಮುಗಿಸಿ ಬಂದು ಡ್ಯೂಟಿ ರೂಂಗೆ ತೆರಳಿದ್ದರು. ಮನೆಯಿಂದ ತಾಯಿಯ ಸೀರೆ ತೆಗೆದುಕೊಂಡು ಬಂದು ನೇಣು ಹಾಕಿಕೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ಪತ್ನಿ-ಮಕ್ಕಳು, ತಂದೆ-ತಾಯಿಗೆ ಕ್ಷಮೆಯಾಚಿಸಿದ್ದಾರೆ. ಮಧ್ಯಾಹ್ನದ ವೇಳೆ ಪತಿಗೆ ಪತ್ನಿ ಕರೆ ಮಾಡಿದ್ದರು. ಹಲವು ಬಾರಿ ಕರೆ ಮಾಡಿದ್ರೂ ಕರೆ ಸ್ವೀಕರಿಸಿರಲಿಲ್ಲ. ಹೀಗಾಗಿ ಗಾಬರಿಗೊಂಡು ಪತಿಯ ಸಹೋದ್ಯೋಗಿಗಳಿಗೆ ಪತ್ನಿ ಕರೆ ಮಾಡಿದ್ದರು. ಇದನ್ನೂ ಓದಿ: ಆಸ್ಪತ್ರೆಯಲ್ಲೇ ಕುಳಿತು ಪ್ರಚಾರದ ರೂಟ್ ಮ್ಯಾಪ್ ಸಿದ್ಧಪಡಿಸಿದ ಹೆಚ್‌ಡಿಕೆ

    ಆಸ್ಪತ್ರೆ ಸಿಬ್ಬಂದಿ ಗಮನಿಸಿ ತಿಲಕನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ತಿಲಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಖಾಸಗಿ ಕ್ಲಿನಿಕ್‍ನಲ್ಲಿ ಸಿಕ್ಕಿ ಬಿದ್ದ ಸರ್ಕಾರಿ ಆಸ್ಪತ್ರೆಯ ವೈದ್ಯ

    ಖಾಸಗಿ ಕ್ಲಿನಿಕ್‍ನಲ್ಲಿ ಸಿಕ್ಕಿ ಬಿದ್ದ ಸರ್ಕಾರಿ ಆಸ್ಪತ್ರೆಯ ವೈದ್ಯ

    ಕಲಬುರಗಿ: ಕೊರೊನಾ ಪರಿಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದ ಹಲವು ರೋಗಿಗಳು ಪರದಾಡುತ್ತಿದ್ದಾರೆ. ಹೀಗಿರುವಾಗ ಸರ್ಕಾರಿ ಆಸ್ಪತ್ರೆಯ ಎಲುಬು ಮತ್ತು ಕಿಲು ತಜ್ಞ ಡಾ.ಸಂಗಮೇಶ್ ಟಕ್ಕಳಕಿ ತಮ್ಮ ಕೆಲಸಕ್ಕೆ ಹಾಜರಾಗದೆ, ಅಫಜಲಪುರ ಪಟ್ಟಣದ ಖಾಸಗಿ ಕ್ಲಿನಿಕ್‍ನಲ್ಲಿ ಕಾರ್ಯ ನಿರ್ವಹಿಸುವಾಗ ತಹಶೀಲ್ದಾರ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದಿದ್ದಾರೆ.

    ಮೇ 25ರಿಂದ ಸರ್ಕಾರಿ ಕೆಲಸಕ್ಕೆ ಅನಧಿಕೃತವಾಗಿ ಡಾ.ಸಂಗಮೇಶ್ ಗೈರಾಗಿದ್ದರು, ಈ ಸಂಬಂಧ ಮೇಲಾಧಿಕಾರಿಗಳು ದೂರವಾಣಿ ಕರೆ ಮಾಡಿದ್ದರೂ ಕರೆಯನ್ನು ಸ್ವೀಕರಿಸಿರಲಿಲ್ಲ. ವೈದ್ಯ ಕರೆ ಸ್ವೀಕರಿಸದೇ ಇದ್ದಾಗ ಅನುಮಾನಗೊಂಡ ತಾಲೂಕು ಆಸ್ಪತ್ರೆಯವರು, ಸೋಮವಾರ ಸಂಜೆ ಅಫಜಲಪುರ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಮತ್ತು ತಾಲೂಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಸುಶೀಲ್ ಕುಮಾರ್ ನೇತೃತ್ವದಲ್ಲಿ ಡಾ.ಸಂಗಮೇಶ್ ಟಕ್ಕಳಕಿ ನಡೆಸುತ್ತಿದ್ದ ಸಂಗಮೇಶ್ವರ ಕ್ಲಿನಿಕ್ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.

    ಈ ವೇಳೆ ಡಾ.ಸಂಗಮೇಶ್ ಟಕ್ಕಳಕಿ ರೋಗಿಯೊಬ್ಬರನ್ನು ತಪಾಸಣೆ ಮಾಡುತ್ತಿದ್ದಾಗಲೇ ಅಧಿಅಕರಿಗಳ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಸದ್ಯ ಸರ್ಕಾರಿ ಕೆಲಸಕ್ಕೆ ಅನಧಿಕೃತವಾಗಿ ಗೈರಾಗಿರುವ ಮತ್ತು ಖಾಸಗಿ ಕ್ಲಿನಿಕ್‍ನಲ್ಲಿ ಕರ್ತವ್ಯ ನಿರ್ವಸುತ್ತಿದ್ದ ಸಂಬಂಧ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.

  • ಸರ್ಕಾರಿ ವೈದ್ಯನಿಂದಲೇ ಹೆಣ್ಣು ಮಗು ಮಾರಾಟ – ತಾಯಿಯನ್ನು ಹೆದರಿಸಿ ಮಗು ಕಿತ್ತುಕೊಂಡ್ರು

    ಸರ್ಕಾರಿ ವೈದ್ಯನಿಂದಲೇ ಹೆಣ್ಣು ಮಗು ಮಾರಾಟ – ತಾಯಿಯನ್ನು ಹೆದರಿಸಿ ಮಗು ಕಿತ್ತುಕೊಂಡ್ರು

    – ತಾಯಿಗೆ 5 ಸಾವಿರ ನೀಡಿ, ಮಗುವನ್ನು 50 ಸಾವಿರಕ್ಕೆ ಮಾರಿದ್ರು

    ಚಿಕ್ಕಮಗಳೂರು: ಸರ್ಕಾರಿ ಆಸ್ಪತ್ರೆಯ ವೈದ್ಯರೇ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ನಡೆದಿದೆ.

    ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಯುವತಿಯೊಬ್ಬಳ ಕಳೆದ ಮಾರ್ಚ್ 14ರಂದು ಹೆರಿಗೆ ನೋವು ಬಂದಿದ್ದರಿಂದ ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಹೆಣ್ಣು ಮಗು ಜನಿಸಿತ್ತು. ಆದರೆ ಆ ಯುವತಿಗೆ ಮದುವೆಯಾಗದ ಕಾರಣ ಕೊಪ್ಪ ತಾಲೂಕು ಆಸ್ಪತ್ರೆ ವೈದ್ಯ ಡಾ.ಬಾಲಕೃಷ್ಣ, ನಿನಗೆ ಮಗುವನ್ನ ಸಾಕಲು ಆಗುವುದಿಲ್ಲ. ಮಗುವನ್ನ ಇಲ್ಲೇ ಬಿಟ್ಟು ಹೋಗು, ಇಲ್ಲದ್ದಿದರೆ ಪೊಲೀಸರಿಗೆ ನಿನ್ನ ವಿರುದ್ಧ ದೂರು ನೀಡುವುದಾಗಿ ವೈದ್ಯ ಹೆದರಿಸಿದ್ದಾನೆ.

    ಮದುವೆಗೂ ಮುಂಚೆ ಮಗು ಜನಿಸಿದ್ದರಿಂದ ಹೆದರಿದ ಯುವತಿ ಮಗುವನ್ನು ಬಿಟ್ಟು ಹೋಗಿದ್ದಾಳೆ. ಆಗ ಸರ್ಕಾರಿ ಆಸ್ಪತ್ರೆ ವೈದ್ಯ ಬಾಲಕೃಷ್ಣ ಮಗುವನ್ನು ತಮಿಳುನಾಡಿನಿಂದ ಬಂದು ಶೃಂಗೇರಿಯಲ್ಲಿ ವಾಸವಿದ್ದ ಪ್ರೇಮಾಲತಾ ಎಂಬುವರಿಗೆ ಮಗುವನ್ನು ಮಾರಾಟ ಮಾಡಿದ್ದಾನೆ. ಯುವತಿಯ ತಾಯಿಗೆ ವೈದ್ಯ 5,000 ಹಣ ನೀಡಿದ್ದರು. ಆದರೆ ಈಗ 8 ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು ಮಗುವಿನ ತಾಯಿ ವೈದ್ಯ ಬಾಲಕೃಷ್ಣ ಹಾಗೂ ಇಬ್ಬರು ದಾದಿಯರಾದ ಶೋಭಾ ಹಾಗೂ ರೇಷ್ಮಾ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಾಳೆ.

    ವೈದ್ಯರು ನನಗೆ 5000 ಹಣ ನೀಡಿ ನನ್ನ ಮಗುವನ್ನು 50 ಸಾವಿರಕ್ಕೂ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿದ್ದಾರೆ ಎಂದು ದೂರು ನೀಡಿದ್ದಾಳೆ. ಹಣಕ್ಕಾಗಿ ಮಗು ಮಾರಾಟವಾಗಿರುವುದರಿಂದ ಇದೀಗ ಕೊಪ್ಪ ಠಾಣೆಯಲ್ಲಿ ಮಗು ಮಾರಾಟ ಮಾಡಿದವರು ಹಾಗೂ ಕೊಂಡವರು ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಗುವನ್ನು ಚಿಕ್ಕಮಗಳೂರಿನ ಬಾಲಮಂದಿರಕ್ಕೆ ಬಿಟ್ಟು ತನಿಖೆ ಆರಂಭಿಸಿದ್ದಾರೆ.

    ಮದುವೆಯಾಗದೆ ಗರ್ಭಿಣಿಯಾದ ಯುವತಿಗೆ ಡೆಲಿವರಿ ಮಾಡಿಸಿದ ವೈದ್ಯ ಪೊಲೀಸ್ ಕಂಪ್ಲೆಂಟ್ ಆಗುತ್ತೆ ಎಂದು ಆ ಯುವತಿಗೆ ಹೆದರಿಸಿ ಮಗುವನ್ನ 50,000 ಸಾವಿರಕ್ಕೆ ಮಾರಿ, ಆ ಯುವತಿಗೆ 5 ಸಾವಿರ ಹಣ ನೀಡಿದ್ದ. 8 ತಿಂಗಳ ಬಳಿಕ ಇಬ್ಬರು ನರ್ಸ್ ಹಾಗೂ ವೈದ್ಯ ಸೇರಿ ಮಗುವನ್ನು ಕೊಂಡುಕೊಂಡವಳ ಮೇಲೆ ಎಫ್.ಐ.ಆರ್ ದಾಖಲಾಗಿದೆ.

  • ಸರ್ಕಾರಿ ವೈದ್ಯನ ಕಳ್ಳಾಟ ಬಯಲು ಮಾಡಿದ ಮೂರನೇ ಪತ್ನಿ

    ಸರ್ಕಾರಿ ವೈದ್ಯನ ಕಳ್ಳಾಟ ಬಯಲು ಮಾಡಿದ ಮೂರನೇ ಪತ್ನಿ

    ವಿಜಯಪುರ: ನಾಲ್ಕನೇ ಮದುವೆಯಾಗಲು ಸಿದ್ಧತೆ ನಡೆಸಿಕೊಂಡಿದ್ದ ಪತಿಯ ಕಳ್ಳಾಟವನ್ನು ಮೂರನೇ ಪತ್ನಿ ಬಯಲು ಮಾಡಿದ್ದಾರೆ. ನಾಲ್ಕನೇ ಮದುವೆಯನ್ನು ತಡೆಯಬೇಕೆಂದು ಪತಿಯ ವಿರುದ್ಧ ಮೂರನೇ ಪತ್ನಿ ನೀತಾ ವಿಜಯಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಡಾ.ಮಂಜುನಾಥ್ ನಾಲ್ಕನೇ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಮಂಜುನಾಥ್ ಸದ್ಯ ಆನೇಕಲ್ ತಾಲೂಕಿನ ಇಂದಲವಾಡಿ ಆರೋಗ್ಯ ಕೇಂದ್ರದಲ್ಲಿ ವೈದ್ಯನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಈಗ ಧಾರವಾಡ ಮೂಲದ ಯುವತಿ ಜೊತೆ ಮದುವೆಗೆ ಸಿದ್ಧತೆ ನಡೆಸಿದ್ದಾನೆ. ನೀತಾ ಸದ್ಯ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ.

    ಮೊದಲ ಪತ್ನಿಗೆ ಒಂದು ಗಂಡು ಮಗುವಿದ್ದು, ಎರಡನೇ ಪತ್ನಿಗೆ ಹಣ ನೀಡಿ ರಾಜಿ ಮಾಡಿಕೊಂಡಿದ್ದಾನೆ. ನನಗೆ ಸುಳ್ಳು ಹೇಳಿ ಮಂಜುನಾಥ್ ಮದುವೆ ಆಗಿದ್ದನು. ಆರಂಭದ ಎರಡು ವರ್ಷ ಚೆನ್ನಾಗಿಯೇ ಇದ್ದ ಪತಿ ನನ್ನಿಂದ ದೂರವಾದನು. ಹೀಗಾಗಿ ಪತಿ ವಿರುದ್ಧ ದೂರು ದಾಖಲಿಸಿದ್ದೇನೆ. ಡಿವೋರ್ಸ್, ವಿಧವೆಯರನ್ನು ಟಾರ್ಗೆಟ್ ಮಾಡಿ ಮಂಜುನಾಥ್ ಮದುವೆ ಆಗುತ್ತಾನೆ ಎಂದು ಮೂರನೇ ಪತ್ನಿ ನೀತಾ ಆರೋಪಿಸಿದ್ದಾರೆ.

  • ಕೋವಿಡ್ ವರದಿ ಇಲ್ಲದೆ ದಾಖಲಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳು ನಕಾರ- ಸರ್ಕಾರಿ ವೈದ್ಯ ಸಾವು

    ಕೋವಿಡ್ ವರದಿ ಇಲ್ಲದೆ ದಾಖಲಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳು ನಕಾರ- ಸರ್ಕಾರಿ ವೈದ್ಯ ಸಾವು

    ಬೆಂಗಳೂರು: ಕೋವಿಡ್ 19 ವರದಿ ಇಲ್ಲದೆ ಮೂರು ಖಾಸಗಿ ಆಸ್ಪತ್ರೆಗಳು ದಾಖಲಿಸಿಕೊಳ್ಳಲು ನಿರಾಕರಿಸಿದ ಪರಿಣಾಮ ಸರ್ಕಾರಿ ವೈದರೊಬ್ಬರು ಮೃತಪಟ್ಟ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಹೌದು. ಮೃತ ದುರ್ದೈವಿಯನ್ನು ಡಾ. ಮಂಜುನಾಥ್ ಎಂದು ಗುರುತಿಸಲಾಗಿದೆ. ಇವರು ಕೋವಿಡ್ 19 ವಾರಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಅನಾರೋಗ್ಯ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇವರನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಗಳು ನಿರಾಕರಿಸಿದವು. ಮಂಜುನಾಥ್ ಅವರು ರಾಮನಗರ ಜಿಲ್ಲೆಯಲ್ಲಿರುವ ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದರು.

    ಈ ಸಂಬಂಧ ಬಿಬಿಎಂಪಿ ವಿಶೇಷ ಆಯುಕ್ತ ಡಿ. ರಂದೀಪ್ ಮಾತನಾಡಿ, ಡಾ. ಮಂಜುನಾಥ್ ಅವರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ ಆಸ್ಪತ್ರೆಗಳ ವಿರುದ್ಧ ಆರೋಗ್ಯ ಇಲಾಖೆ ಕ್ರಮಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

    ಜೂನ್ ಕೊನೆಯಲ್ಲಿ ಡಾ. ಮಂಜುನಾಥ್ ಅವರು ಜೆಪಿ ನಗರದಲ್ಲಿರುವ ರಾಜಶೇಖರ ಆಸ್ಪತ್ರೆ, ಕೆಂಗೇರಿಯಲ್ಲಿರುವ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಹಾಗೂ ಕುಮಾರಸ್ವಾಮಿ ಲೇ ಔಟ್ ನಲ್ಲಿರುವ ಸಾಗರ ಆಸ್ಪತ್ರೆಗೆ ಅಲೆದಾಡಿದ್ದಾರೆ. ಈ ಮೂರು ಆಸ್ಪತ್ರೆಗಳು ಕೂಡ ಕೋವಿಡ್ 19 ಟೆಸ್ಟ್ ವರದಿ ತಂದ ಬಳಿಕವೇ ದಾಖಲಿಸಿಕೊಳ್ಳುವುದಾಗಿ ತಿಳಿಸಿದವು ಎಂದು ಮಂಜುನಾಥ್ ಕುಟುಂಬಸ್ಥರು ದೂರಿದ್ದಾರೆ.

    ವಿಪರ್ಯಾಸ ಅಂದರೆ, ಮಂಜುನಾಥ್ ಸಂಬಂಧಿ ನಾಗೇಶ್ ಬಿಬಿಎಂಪಿ ವೈದ್ಯರಾಗಿದ್ದು, ಹಾಸಿಗೆ ಹಂಚುವ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಆದರೆ ಮಂಜುನಾಥ್ ಗೆ ಸಹಾಯ ಮಾಡಲು ಅವರು ಕೂಡ ಅಸಹಾಯಕರಾಗಿದ್ದರು.

    ಕೊನೆಗೆ ವೈದ್ಯ ಕುಟುಂಬಸ್ಥರು ದಯಾನಂದ ಸಾಗರ್ ಕ್ಯಾಂಪಸ್ ಫುಟ್‍ಪಾತ್ ನಲ್ಲಿ ಈ ಸಂಬಂಧ ಧರಣಿ ನಡೆಸಿದ ಬಳಿಕ ಜುಲೈ 25ರಂದು ಮಂಜುನಾಥ್ ಅವರನ್ನು ಸಾಗರ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಯಿತು. ಅಲ್ಲಿ ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಯಿತಾದರೂ ನಂತರ ಅವರನ್ನು ಅಲ್ಲಿಂದ ಮೆಡಿಕಲ್ ಕಾಲೇಜ್ ಆ್ಯಂಡ್ ರಿಸರ್ಚ್ ಇನ್ಸ್ ಸ್ಟಿಟ್ಯೂಟ್ ಗೆ ಶಿಫ್ಟ್ ಮಾಡಲಾಯಿತು. ಆದರೆ ಇಂದು ಮುಂಜಾನೆ ಮಂಜುನಾಥ್ ಇಹಲೋಕ ತ್ಯಜಿಸಿದರು. ಇತ್ತ ಮಂಜುನಾಥ್ ಅವರನ್ನು ಜುಲೈ 9 ರಂದು ಡಿಸ್ಚಾರ್ಜ್ ಮಾಡಲಾಗಿದೆ. ಯಾಕಂದರೆ ಅವರಿಗೆ ಪ್ಲಾಸ್ಮಾ ಥೆರಪಿಯ ಅವಶ್ಯಕತೆ ಇತ್ತು ಎಂದು ಆಸ್ಪತ್ರೆ ತಿಳಿಸಿದೆ.

    ಸಿಲಿಕಾನ್ ಸಿಟಿಯಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಪ್ರಾಣಬಿಟ್ಟ ಹಲವು ಪ್ರಕರಣಗಳು ಇವೆ. ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂದು ತಿಳಿಯಲು ಕೋವಿಡ್ 19 ಟೆಸ್ಟ್ ಬೇಕೇ ಬೇಕು ಎಂದು ಆಸ್ಪತ್ರೆಗಳು ಹೇಳುತ್ತಿವೆ. ಸದ್ಯ ಬೆಂಗಳೂರಿನಲ್ಲಿ 37 ಸಾವಿರ ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಇಡೀ ಭಾರತ ದೇಶದಲ್ಲಿ ಸರಿಸುಮಾರು 100 ವೈದ್ಯರು ಕೊರೊನಾಗೆ ಬಲಿಯಾಗಿದ್ದಾರೆ.

  • ಸರ್ಕಾರಿ ವೈದ್ಯೆಗೆ ಕೊರೊನಾ ಸೋಂಕು – ದೆಹಲಿ ಆಸ್ಪತ್ರೆ ಲಾಕ್

    ಸರ್ಕಾರಿ ವೈದ್ಯೆಗೆ ಕೊರೊನಾ ಸೋಂಕು – ದೆಹಲಿ ಆಸ್ಪತ್ರೆ ಲಾಕ್

    ನವದೆಹಲಿ: ಸರ್ಕಾರಿ ವೈದ್ಯೆಗೆ ಕೊರೊನಾ ವೈರಸ್ ಪಾಸಿಟಿವ್ ಬಂದ ಕಾರಣ ದೆಹಲಿ ಸರ್ಕಾರ ಸರ್ಕಾರಿ ಆಸ್ಪತ್ರೆಯೊಂದನ್ನು ಸಂಪೂರ್ಣವಾಗಿ ಲಾಕ್ ಮಾಡಿದೆ.

    ಕೊರೊನಾ ಸೋಂಕು ತಗುಲಿರುವ ವೈದ್ಯೆ ದೆಹಲಿ ರಾಜ್ಯ ಕ್ಯಾನ್ಸರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಆಸ್ಪತ್ರೆಯ ಕಟ್ಟಡದ ಒಪಿಡಿ, ಕಚೇರಿಗಳು ಮತ್ತು ಪ್ರಯೋಗಾಲಯಗಳನ್ನು ಮುಚ್ಚಲಾಗಿದ್ದು, ರಾಸಾಯನಿಕ ಬಳಸಿ ಸ್ವಚ್ಛಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೊತೆಗೆ ವೈದ್ಯರೊಂದಿಗೆ ಸಂಪರ್ಕದಲ್ಲಿ ಇದ್ದರವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಈ ವಿಚಾರವಾಗಿ ಮಾಹಿತಿ ನೀಡಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್, ಇತ್ತೀಚೆಗಷ್ಟೇ ಯುಕೆಯಿಂದ ವಾಪಸ್ ಆಗಿದ್ದ ವೈದ್ಯರ ಸಹೋದರ ಮತ್ತು ಅತ್ತಿಗೆಯಿಂದ ಅವರಿಗೆ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ. ಅಲ್ಲದೇ ವೈದ್ಯೆ ಅಣ್ಣ ಅತ್ತಿಗೆ ಯುಕೆಯಿಂದ ವಾಪಸ್ ಬಂದ ನಂತರ ಇತ್ತೀಚೆಗೆ ಅವರ ಮನೆಗೆ ಭೇಟಿ ನೀಡಿದ್ದರು ಎಂದು ತಿಳಿದು ಬಂದಿದೆ. ಅವರ ಜೊತೆ ಸಂಪರ್ಕದಲ್ಲಿದ್ದ ಎಲ್ಲರನ್ನೂ ಪರೀಕ್ಷೆ ಮಾಡುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಕೂಡ ದೆಹಲಿ ಸರ್ಕಾರದ ಮೊಹಲ್ಲಾ ಚಿಕಿತ್ಸಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ವೈದ್ಯ ದಂಪತಿಗೆ ಕೊರೊನಾ ವೈರಸ್‍ಗೆ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ಸೌದಿ ಅರೇಬಿಯಾದಿಂದ ವಾಪಸ್ ಆಗಿದ್ದ ರೋಗಿಯನ್ನು ಚಿಕಿತ್ಸೆ ಮಾಡಿದ್ದರಿಂದ ಅವರು ಸೋಂಕಿಗೆ ಒಳಗಾಗಿದ್ದಾರೆಂದು ಶಂಕಿಸಲಾಗಿತ್ತು. ಇದಾದ ನಂತರ ಮತ್ತೆ ದೆಹಲಿಯಲ್ಲಿ ಸರ್ಕಾರಿ ವೈದ್ಯರಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ಕೊರೊನಾ ವೈರಸ್ ಮಹಾಮಾರಿ ದೇಶದಲ್ಲಿ ದಿನೇ ದಿನೇ ಜಾಸ್ತಿಯಾಗುತ್ತಿದೆ. ಇಲ್ಲಿವರೆಗೆ ದೆಹಲಿಯಲ್ಲಿ 121 ಕೊರೊನಾ ವೈರಸ್ ಪ್ರಕರಣಗಳು ಕಂಡು ಬಂದಿವೆ. ಕೊರೊನಾ ವೈರಸ್ ನಿಂದ ಎರಡು ಜನ ಸಾವನ್ನಪ್ಪಿದ್ದಾರೆ. ದೆಹಲಿ ಸೋಂಕಿತರಲ್ಲಿ 24 ಜನರು ಮಾರ್ಚ್ 1ರಿಂದ 15ರವರೆಗೆ ನಡೆದಿದ್ದ ತಬ್ಲಿಘಿ ಜಮಾತ್‍ನಲ್ಲಿ ಸಭೆಯಲ್ಲಿ ಭಾಗವಹಿಸಿದ್ದವರು ಆಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 146 ಹೊಸ ಪ್ರಕರಣಗಳು ವರದಿಯಾದ ನಂತರ ಭಾರತದಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ 1,719ಕ್ಕೆ ಏರಿದೆ.

  • ಶುಲ್ಕ ನೀಡದಿದ್ರೆ ರೋಗಿಯ ಕೈ ಸಹ ಮುಟ್ಟಲ್ಲ – ಸರ್ಕಾರಿ ವೈದ್ಯನ ಲಂಚಾವತಾರ

    ಶುಲ್ಕ ನೀಡದಿದ್ರೆ ರೋಗಿಯ ಕೈ ಸಹ ಮುಟ್ಟಲ್ಲ – ಸರ್ಕಾರಿ ವೈದ್ಯನ ಲಂಚಾವತಾರ

    ರಾಯಚೂರು: ಆರೋಗ್ಯ ಸಚಿವ ಶ್ರೀರಾಮುಲು ಸರ್ಕಾರಿ ಆಸ್ಪತ್ರೆಗಳ ಸ್ಥಿತಿಗತಿ ತಿಳಿಯಲು ರಾಯಚೂರಿನ ವೈದ್ಯಕೀಯ ಬೋಧಕ ಆಸ್ಪತ್ರೆ ರಿಮ್ಸ್ ನಲ್ಲಿ ಮಲಗಿಹೋಗಿದ್ದೇ ಬಂತು. ಆದರೆ ಜಿಲ್ಲೆಯ ಗ್ರಾಮೀಣ ಭಾಗದ ಆಸ್ಪತ್ರೆಗಳ ಸ್ಥಿತಿ ಮಾತ್ರ ಬದಲಾಗಿಲ್ಲ.

    ಡಾ. ವಿಶ್ವನಾಥ್ ಸಿಂಧನೂರಿನ ಬಾದರ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಡಾಕ್ಟರ್ ದುಡ್ಡು ಕೊಡದಿದ್ದರೆ ಯಾವ ರೋಗಿಗೂ ಚಿಕಿತ್ಸೆಯನ್ನೇ ನೀಡುವುದಿಲ್ಲ. ಸುಮಾರು 10 ವರ್ಷಗಳಿಂದ ಇಲ್ಲೇ ವೈದ್ಯರಾಗಿರುವ ಡಾ.ವಿಶ್ವನಾಥ್ ಈ ವಿಚಾರದಲ್ಲಿ ಗ್ರಾಮಸ್ಥರ ಆಕ್ರೋಶಕ್ಕೂ ಗುರಿಯಾಗಿದ್ದಾರೆ.

    ರೋಗಿಗಳು ಕಡಿಮೆ ಹಣ ಕೊಟ್ಟರೆ ಇಷ್ಟೇ ಕೊಡಬೇಕು ಎಂದು ಬೇಡಿಕೆ ಮಾಡಿ ರೋಗಿಗಳಿಂದ ಹಣ ಕೀಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. 200 ರೂಪಾಯಿಯಿಂದ ಒಂದೊಂದು ಚಿಕಿತ್ಸೆಗೆ ಒಂದೊಂದು ಫೀಸ್ ಅನ್ನು ಫಿಕ್ಸ್ ಮಾಡಿದ್ದಾರೆ. ಇದರ ಜೊತಗೆ ಒಮ್ಮೊಮ್ಮೆ ವಾರಗಟ್ಟಲೇ ಆಸ್ಪತ್ರೆಯ ಕಡೆ ಬಾರದೇ ಇದ್ದರೂ ಹಾಜರಾತಿಯಲ್ಲಿ ಮಾತ್ರ ಪ್ರತಿ ದಿನ ಹಾಜರಿ ಇರುತ್ತದೆ.

    ಬಾದರ್ಲಿ ಸೇರಿದಂತೆ ಸುತ್ತಮುತ್ತಲ ಗಿಣಿವಾರ, ಒಳಬಳ್ಳಾರಿ, ಯದ್ಲಡ್ಡಿ, ಆರ್ ಎಚ್ ಕ್ಯಾಂಪ್ 5, ಅಲಬನೂರು, ಅರೆಕನೂರು ಗ್ರಾಮಗಳ ಜನ ಈ ಆಸ್ಪತ್ರೆಯ ಮೇಲೆಯೇ ಅವಲಂಬಿತರಾಗಿದ್ದಾರೆ.

    ವೈದ್ಯನ ಹಣಬಾಕುತನಕ್ಕೆ ಬೇಸತ್ತು ಜನರೇ ತಮ್ಮ ಮೊಬೈಲ್ ನಲ್ಲಿ ಲಂಚಾವತಾರ ಸೆರೆ ಹಿಡಿದಿದ್ದಾರೆ. ಈ ಹಿಂದೆ ಹಿರಿಯ ಅಧಿಕಾರಿಗಳಿಗೆ ಮೌಖಿಕ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಖಾಸಗಿ ಆಸ್ಪತ್ರೆಗೆ ಹೋಗಲಾಗದೆ ಗ್ರಾಮೀಣ ಭಾಗದ ಬಡ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಹೋದರೆ ಇಲ್ಲೂ ಫೀಸ್ ಎಂದು ಈ ವೈದ್ಯ ಹಣ ಕೀಳುತ್ತಿದ್ದಾರೆ.

    ಒಂದೆಡೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ ಅನ್ನೋ ಕೊರಗಿದ್ದರೆ ಇದ್ದ ವೈದ್ಯರಲ್ಲಿ ಇಂತಹವರು ರೋಗಿಗಳಿಂದ ಹಣ ವಸೂಲಿ ನಡೆಸಿದ್ದಾರೆ. ಒಂದು ವೇಳೆ ಈ ವೈದ್ಯನನ್ನ ಅಮಾನತು ಮಾಡಿದರೆ ಬೇರೆ ವೈದ್ಯರನ್ನ ನಿಯೋಜನೆ ಮಾಡ್ತಾರೋ ಇಲ್ವೋ ಅನ್ನೋ ಭಯ ಗ್ರಾಮಸ್ಥರಲ್ಲಿದೆ. ಕನಿಷ್ಠ ಈಗಲಾದರೂ ಮೇಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿರುವ ಆರೋಗ್ಯ ಸಚಿವ ಶ್ರೀರಾಮುಲು ಇಂತಹ ವೈದ್ಯರ ಕಡೆ ಗಮನಹರಿಸಬೇಕು ಎಂದು ಸ್ಥಳಿಯರು ಒತ್ತಾಯ ಮಾಡಿದ್ದಾರೆ.

  • ಹೌದು ರೋಗಿಗಳಿಂದ ಹಣ ಪಡೆಯುತ್ತೇನೆ ಏನಿವಾಗ – ಸರ್ಕಾರಿ ವೈದ್ಯ

    ಹೌದು ರೋಗಿಗಳಿಂದ ಹಣ ಪಡೆಯುತ್ತೇನೆ ಏನಿವಾಗ – ಸರ್ಕಾರಿ ವೈದ್ಯ

    ಹಾಸನ: ನಾನು ರೋಗಿಗಳಿಂದ ಹಣ ಪಡೆಯುತ್ತೇನೆ ಏನಿವಾಗ ಎಂದು ಸಾರ್ವಜನಿಕರ ಮುಂದೇ ಸರ್ಕಾರಿ ವೈದ್ಯರೊಬ್ಬರೊಬ್ಬರು ಅವಾಜ್ ಹಾಕಿ ದರ್ಪ ತೋರಿದ್ದಾರೆ.

    ಸಕಲೇಶಪುರ ತಾಲೂಕು ಆಸ್ಪತ್ರೆಯ ಸರ್ಕಾರಿ ವೈದ್ಯ ರಾಧಾಕೃಷ್ಣ ಅಸ್ಪತ್ರೆಗೆ ಬರುತ್ತಿದ್ದ ರೋಗಿಗಳ ಹತ್ತಿರ ಅವರು ಕೊಟ್ಟಷ್ಟು ಹಣ ಪಡೆಯುತ್ತಿದ್ದೆ ಎಂದು ತಾಲೂಕು ಆರೋಗ್ಯಾಧಿಕಾರಿ ಎದುರೇ ಒಪ್ಪಿಕೊಂಡಿದ್ದಾರೆ.

    ಸಕಲೇಶಪುರದ ಸರ್ಕಾರಿ ಅಸ್ಪತ್ರೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ರೋಗಿಗಳು ನೀಡುವಷ್ಟು ಹಣ ಪಡೆಯುತ್ತಿದ್ದೆ ಎಂದು ವೈದ್ಯ ರಾಧಾಕೃಷ್ಣ ಒಪ್ಪಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರೊಬ್ಬರು ಡಿಮ್ಯಾಂಡ್ ಮಾಡಿ ಹಣ ಪಡೆಯುತ್ತಿದ್ದಿರಾ ಎಂದು ಆರೋಪ ಮಾಡಿದ್ದಾರೆ. ಇದಕ್ಕೆ ಕೋಪಗೊಂಡ ಸರ್ಕಾರಿ ವೈದ್ಯ “ಹೌದು ಹಣ ಪಡೆಯುತ್ತೇನೆ ಏನಿವಾಗ” ಎಂದು ಅವಾಜ್ ಹಾಕಿದ್ದಾರೆ.

    ಇದಕ್ಕೆ ಆಕ್ರೋಶಗೊಂಡ ಸಾರ್ವಜನಿಕರು ಸ್ಥಳದಲ್ಲೇ ವೈದ್ಯನ ಬೆವರಿಳಿಸಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಕರ್ತವ್ಯ ನಿರತ ವೈದ್ಯನ ಕೊರಳಪಟ್ಟಿ ಹಿಡಿದು ಎಳೆದಾಡಿದ ರೋಗಿಯ ಪೋಷಕರು!

    ಕರ್ತವ್ಯ ನಿರತ ವೈದ್ಯನ ಕೊರಳಪಟ್ಟಿ ಹಿಡಿದು ಎಳೆದಾಡಿದ ರೋಗಿಯ ಪೋಷಕರು!

    ದಾವಣಗೆರೆ: ಕರ್ತವ್ಯ ನಿರತ ಸರ್ಕಾರಿ ವೈದ್ಯರೊಬ್ಬರ ಕೊರಳಪಟ್ಟಿ ಹಿಡಿದು ಎಳೆದಾಡಿ, ಹಲ್ಲೆಗೆ ಯತ್ನಿಸಿದ ಘಟನೆ ಜಿಲ್ಲೆಯ ಜಗಳೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ತಮ್ಮ ಪುತ್ರನಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿ ವೈದ್ಯ ಮಲ್ಲಪ್ಪ ಅವರ ಮೇಲೆ ಜಗಳೂರು ನಿವಾಸಿಗಳಾದ ಸುನಿಲ್ ಎಂಬವರು ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಸುನಿಲ್‍ಗೆ ಆತನ ಸಂಬಂಧಿ ಸೋಮಶೇಖರ್ ಕೂಡ ಸಾಥ್ ನೀಡಿದ್ದಾನೆ. ಇಬ್ಬರು ಸೇರಿ ಮಲ್ಲಪ್ಪ ಅವರ ಕೊರಳಪಟ್ಟಿ ಹಿಡಿದು ಎಳೆದಾಡಿದ್ದಾರೆ. ತಕ್ಷಣವೇ ಮಧ್ಯ ಪ್ರವೇಶಿಸಿದ ಸ್ಥಳೀಯರು ಹಲ್ಲೆಯನ್ನು ತಡೆದಿದ್ದಾರೆ.

    ಈ ಘಟನೆಯು ಜನವರಿ 9ರಂದು ನಡೆದಿದ್ದು, ವೈದ್ಯರ ಮೇಲೆ ಆರೋಪಿಗಳು ಹಲ್ಲೆ ಮಾಡುತ್ತಿರುವ ದೃಶ್ಯ ಆಸ್ಪತ್ರೆಯಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಮ್ಮ ಮೇಲೆ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ವೈದ್ಯ ಮಲ್ಲಪ್ಪ ಅವರು ಜಗಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv