Tag: ಸರ್ಕಾರಿ ಬಸ್

  • ಮಂಡ್ಯ ಬಸ್ ದುರಂತದ ನಾಲೆಗೆ ತಡೆಗೋಡೆ ನಿರ್ಮಾಣ- ಶಾಂತಿ ಹೋಮ ನಡೆಸಲು ಗ್ರಾಮಸ್ಥರ ನಿರ್ಧಾರ

    ಮಂಡ್ಯ ಬಸ್ ದುರಂತದ ನಾಲೆಗೆ ತಡೆಗೋಡೆ ನಿರ್ಮಾಣ- ಶಾಂತಿ ಹೋಮ ನಡೆಸಲು ಗ್ರಾಮಸ್ಥರ ನಿರ್ಧಾರ

    ಮಂಡ್ಯ: 30 ಜನರನ್ನು ಬಲಿ ಪಡೆದ ಕನಗನಮರಡಿ ಬಸ್ ದುರಂತದ ನಂತರ ಎಚ್ಚೆತ್ತುಕೊಂಡ ಸರ್ಕಾರ ನಾಲೆಗೆ ತಡೆಗೋಡೆಯನ್ನು ನಿರ್ಮಿಸಿದೆ. ಹಾಗೆಯೆ ಗ್ರಾಮಸ್ಥರು ಸ್ಥಳದಲ್ಲಿ ಶಾಂತಿ ಹೋಮ ನಡೆಸಲು ಮುಂದಾಗಿದ್ದಾರೆ.

    ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ನಾಲೆಯ ಎಡಭಾಗದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಸರ್ಕಾರ ತಡೆಗೋಡೆ ನಿರ್ಮಾಣ ಮಾಡಿದೆ. ಅಷ್ಟೆ ಅಲ್ಲದೆ ದುರಂತದಿಂದ ಎಚ್ಚೆತ್ತುಕೊಂಡ ಸರ್ಕಾರ ಅಪಘಾತ ನಡೆದ ಮಾರನೇ ದಿನದಿಂದಲೇ ಈ ಭಾಗದಲ್ಲಿ ಸರ್ಕಾರಿ ಬಸ್ ಸಂಚಾರ ಆರಂಭಿಸಿದೆ. ಸದ್ಯ ಗ್ರಾಮದ ಮಾರ್ಗವಾಗಿ ದಿನಕ್ಕೆ ನಾಲ್ಕು ಬಾರಿ ಸರ್ಕಾರಿ ಬಸ್ ಸಂಚಾರ ನಡೆಸುತ್ತಿದೆ.

    ಈ ನಡುವೆ ಗ್ರಾಮಸ್ಥರಲ್ಲಿ ಇನ್ನೂ ದುರಂತದ ಭಯದ ಛಾಯೆ ಹಾಗೆ ಉಳಿದಿದೆ. ಆದರಿಂದ ಇದೇ ತಿಂಗಳ 21ಕ್ಕೆ ದುರಂತ ನಡೆದ ನಾಲೆಯ ಬಳಿ ಶಾಂತಿ ಹೋಮ ನಡೆಸಲು ಕನಗನಮರಡಿ ಗ್ರಾಮಸ್ಥರು ನಿರ್ಧರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಿಳಾ ಕಂಡಕ್ಟರ್‌ಗಳ ಅರ್ಧ ಗಂಟೆ ಬೀದಿ ರಂಪಾಟ- ವಿಡಿಯೋ ವೈರಲ್

    ಮಹಿಳಾ ಕಂಡಕ್ಟರ್‌ಗಳ ಅರ್ಧ ಗಂಟೆ ಬೀದಿ ರಂಪಾಟ- ವಿಡಿಯೋ ವೈರಲ್

    ಗದಗ: ಪಾಳಿ ವಿಷಯಕ್ಕೆ ಸಂಬಂಧಪಟ್ಟಂತೆ ಇಬ್ಬರು ಮಹಿಳಾ ಕಂಡಕ್ಟರ್‌ಗಳು  ಬೀದಿ ರಂಪಾಟ ಮಾಡಿಕೊಂಡ ಘಟನೆ ಗದಗನ ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ.

    ಕಳೆದ ಎರಡು ದಿನಗಳ ಹಿಂದೆ ನಡೆದ ಈ ಬೀದಿ ರಂಪಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು ಸಾರ್ವಜನಿಕರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ನಗರ ಸಾರಿಗೆಯ ಇಬ್ಬರು ನಿರ್ವಾಹಕಿಯರು ಪಾಳಿಯ ವಿಷಯಕ್ಕೆ ಬಾಯಿಗೆ ಬಂದಂತೆ ಅವಾಚ್ಯ ಪದಗಳನ್ನು ಬಳಸಿ ಬೈದಾಡಿಕೊಂಡಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಿತ್ತಾಡಿಕೊಂಡ ಮಹಿಳಾ ಕಂಡಕ್ಟರ್‌ಗಳ ಈ ಬೀದಿ ರಂಪಾಟಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

    ಅಷ್ಟೇ ಅಲ್ಲದೆ ಎರಡು ಬಸ್ಸುಗಳಲ್ಲಿ ಇದ್ದ ಪ್ರಯಾಣಿಕರು ಯಾಕಾದರೂ ಈ ಸರ್ಕಾರಿ ಬಸ್ ಏರಿದೆ ಅಂತ ಕಿಡಿಕಾರಿದ್ದಾರೆ. ನಿರ್ವಾಹಕಿಯರ ಹಾದಿ ರಂಪಾಟ ನೋಡಿದ ಮೇಲಾಧಿಕಾರಿಗಳು ಇಬ್ಬರಿಗೂ ಕ್ಲಾಸ್ ತೆಗೆದುಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

    https://www.youtube.com/watch?v=efo0zDEVT-w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಳಿ ಮೇಲೆ ನಿಂತ ಸರ್ಕಾರಿ ಬಸ್ – ಗೇಟ್ ಮನ್ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ಹಳಿ ಮೇಲೆ ನಿಂತ ಸರ್ಕಾರಿ ಬಸ್ – ಗೇಟ್ ಮನ್ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    ಬೆಳಗಾವಿ: ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಬ್ರೇಕ್ ಫೇಲ್ ಆದ ಪರಿಣಾಮ ರೈಲ್ವೇ ಹಳಿ ಮೇಲೆ ನಿಂತಿದ್ದು, ಈ ವೇಳೆ ಗೇಟ್‍ಮನ್ ಸಮಯಪ್ರಜ್ಞೆಯಿಂದಾಗಿ ನಡೆಯಬಹುದಾದ ಭಾರೀ ಅನಾಹುತ ತಪ್ಪಿದೆ.

    ಜಿಲ್ಲೆಯ ಖಾನಾಪುರ ತಾಲೂಕಿನ ಗೋದಗೇರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ರೈಲು ಬರುವ ವೇಳೆ ಮುಚ್ಚಲಾಗಿತ್ತು. ಇದೇ ಮಾರ್ಗದಲ್ಲಿ ಬಂದ 40 ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದ ಬಸ್ಸು ಬ್ರೇಕ್ ಫೇಲ್ ಆಗಿ ರೈಲ್ವೇ ಗೇಟಿಗೆ ಡಿಕ್ಕಿ ಹೊಡೆದು ಬಳಿಕ ಹಳಿ ಮೇಲೆ ನಿಂತಿದೆ. ಇದೇ ವೇಳೆ ರೈಲು ಬರುತ್ತಿರುವುದನ್ನು ಕಂಡ ಗೇಟ್‍ಮನ್ ತಕ್ಷಣ ರೈಲ್ವೇ ಪೈಲಟ್‍ಗೆ ಕೆಂಪು ಬಾವುಟ ತೋರಿಸಿ ತಡೆದಿದ್ದಾರೆ. ಇದರಿಂದ ಬಸ್ಸಿನಲ್ಲಿದ್ದ ಅಷ್ಟು ಪ್ರಯಾಣಿಕರ ಜೀವ ಉಳಿದಿದೆ.

    ರೈಲು ಬರುವುದನ್ನು ಕಂಡು ಕರ್ತವ್ಯ ಪ್ರಜ್ಞೆಯನ್ನು ತೋರಿದ ರೈಲ್ವೇ ಗೇಟ್‍ಮನ್ ಕಾರ್ಯಕ್ಕೆ ಸದ್ಯ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಸರಿಯಾಗಿ ಬಸ್ ನಿರ್ವಹಣೆ ಮಾಡದೇ ಅವಘಡಕ್ಕೆ ಕಾರಣವಾಗುತ್ತಿದ್ದ ಸಾರಿಗೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 30 ಅಡಿ ಆಳದ ಕಂದಕಕ್ಕೆ ಬಿತ್ತು ಸರ್ಕಾರಿ ಬಸ್ – 20 ಕ್ಕೂ ಅಧಿಕ ಮಂದಿಗೆ ಗಾಯ, ಮೂವರು ಗಂಭೀರ

    30 ಅಡಿ ಆಳದ ಕಂದಕಕ್ಕೆ ಬಿತ್ತು ಸರ್ಕಾರಿ ಬಸ್ – 20 ಕ್ಕೂ ಅಧಿಕ ಮಂದಿಗೆ ಗಾಯ, ಮೂವರು ಗಂಭೀರ

    ಚಿಕ್ಕಮಗಳೂರು: ಸರ್ಕಾರಿ ಬಸ್ಸೊಂದು ಸುಮಾರು 30 ಅಡಿ ಆಳದ ಕಂದಕಕ್ಕೆ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಕಡೂರು ತಾಲೂಕು ತಂಗಲಿ ಸಮೀಪದ ವೇದಾ ನದಿ ಸೇತುವೆಯಿಂದ ಬಸ್ ಪಲ್ಟಿಯಾಗಿದೆ. ಬಸ್ಸಿನಲ್ಲಿ ಸುಮಾರು 20 ಅಧಿಕ ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ಬಸ್ ಬೆಂಗಳೂರಿನಿಂದ ಕುಂದಾಪುರಕ್ಕೆ ಹೋಗುತ್ತಿತ್ತು. ಬಸ್ ತಂಗಲಿ ಸಮೀಪ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ವೇದಾ ನದಿ ಸೇತುವೆಗೆ ಡಿಕ್ಕಿ ಹೊಡೆದು ನದಿಗೆ ಬಿದ್ದಿದೆ.

    ಬಸ್ ನದಿಗೆ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

    ಇನ್ನು ಈ ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಕಡೂರು ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೇದಾ ನದಿ ಸುಮಾರು ವರ್ಷಗಳಿಂದ ನೀರಿಲ್ಲದೇ ಬತ್ತಿಹೋಗಿತ್ತು. ಈ ಘಟನೆ ಕಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  • ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಕೊಲೆ ಆರೋಪಿಯೇ ಬರ್ಬರವಾಗಿ ಹತ್ಯೆಯಾದ!

    ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಕೊಲೆ ಆರೋಪಿಯೇ ಬರ್ಬರವಾಗಿ ಹತ್ಯೆಯಾದ!

    ಚೆನ್ನೈ: ಇಲ್ಲಿನ ವಾಡಿಪಟ್ಟಿ ಬಳಿಯ ತನಿಚಿಯಂನಲ್ಲಿ ದಿಂಡಿಗುಲ್- ಮಧುರೈ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ಸಿನೊಳಗೆಯೇ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ.

    ಈ ಘಟನೆ ಶುಕ್ರವಾರ ಮಧ್ಯಾಹ್ನ ಸುಮಾರು 2.15ರ ಸುಮಾರಿಗೆ ನಡೆದಿದೆ. ಮೃತನನ್ನು ಆರ್ ಅಮರ್ ಸೇನ್(22) ಎಂದು ಗರುತಿಸಲಾಗಿದೆ. 6 ವರ್ಷಗಳ ಹಿಂದೆ ನಡೆದ ಕೊಲೆಯೊಂದರ ಸೇಡು ತೀರಿಸಿಕೊಳ್ಳುವ ಸಲುವಾಗಿ ಈ ಕೃತ್ಯ ಎಸಗಲಾಗಿದೆ ಅಂತ ವಿರುದುವಾಘ್‍ನಗರ್ ಎಸ್‍ಪಿ ಎಂ ರಾಜರಾಜನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಕರಿಮೆದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2011ರಲ್ಲಿ ನಡೆದ ರಾಮ್ ಪ್ರಸಾದ್ ಕೊಲೆ ಪ್ರಕರಣದಲ್ಲಿ ಅಮರ್ ಮೂರನೇ ಆರೋಪಿಯಾಗಿದ್ದ. ಅಮರ್ ಕೊಲೆಯ ಹಿಂದೆ ರಾಮ್ ಪ್ರಸಾದ್ ಸಂಬಂಧಿಕರು ಹಾಗೂ ಗೆಳೆಯರ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

     

    ದಿಂಡಿಗುಲ್ ಜಿಲ್ಲೆಯ ಬಟ್ಲಗುಂಡುವಿನಿಂದ ಅರಪಾಳಯಂ ಬಸ್ ನಿಲ್ದಾಣದ ಕಡೆಗೆ ಹೋಗುತ್ತಿದ್ದ ಸಾರಿಗೆ ಬಸ್ ನಲ್ಲಿ ಅಮರ್ ಸಂಚರಿಸುತ್ತಿದ್ದ. ಈ ವೇಳೆ ಬಸ್ ತನಿಚಿಯಂ ಬಳಿ ಹೋಗುತ್ತಿದ್ದಾಗ, ಚತುಷ್ಪಥ ಹೆದ್ದಾರಿಯಲ್ಲಿ ಕಾರ್ ಮತ್ತು 2 ಬೈಕ್ ನಲ್ಲಿ ಬಂದ 10 ಜನರ ತಂಡ ಬಸ್ಸನ್ನು ಅಡ್ಡಹಾಕಿತ್ತು. ನೋಡನೋಡುತ್ತಿದ್ದಂತೆಯೇ 10 ಮಂದಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಸ್ಸಿನೊಳಗೆ ನುಗ್ಗಿ ಮುಂಬದಿ ಸೀಟಲ್ಲಿ ಕುಳಿತಿದ್ದ ಅಮರ್ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ. ಪರಿಣಾಮ ಗಂಭೀರ ಗಾಯಗೊಂಡ ಅಮರ್ ರಕ್ತದ ಮಡುವಿನಲ್ಲಿ ಬೀಳುತ್ತಿದ್ದಂತೆಯೇ ದುಷ್ಕರ್ಮಿಗಳು ಬಸ್ ನಿಂದ ಇಳಿದು ತಮ್ಮ ವಾಹನದಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ.

    ಸದ್ಯ ಘಟನೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ 3 ವಿಶೇಷ ತನಿಖಾ ತಂಡಗಳನ್ನ ರಚಿಸಲಾಗಿದೆ ಎಂದು ಎಸ್‍ಪಿ ಹೇಳಿದ್ದಾರೆ.

  • ಸರ್ಕಾರಿ ಬಸ್ ಡ್ರೈವರ್ ಮೇಲೆ ಆಟೋ ಚಾಲಕರಿಂದ ಹಲ್ಲೆ

    ಸರ್ಕಾರಿ ಬಸ್ ಡ್ರೈವರ್ ಮೇಲೆ ಆಟೋ ಚಾಲಕರಿಂದ ಹಲ್ಲೆ

    ಚಿತ್ರದುರ್ಗ: ಆಟೋ ಚಾಲಕರಿಬ್ಬರು ಆಟೋ ಅಡ್ಡ ನಿಲ್ಲಿಸಿ ಸರ್ಕಾರಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿರೋ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

    ಐಯುಡಿಪಿ ಬಡಾವಣೆಯ 10ನೇ ಅಡ್ಡರಸ್ತೆಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಇಳಿಯುತ್ತಿದ್ದ ವೇಳೆ ರಸ್ತೆ ಬದಿ ಬಸ್ ನಿಲ್ಲಿಸಿದರೆಂದು ಆಕ್ರೋಶಗೊಂಡ ರಾಜು ಹಾಗು ರವಿ ಎಂಬ ಆಟೋ ಚಾಲಕರು ಆಟೋವನ್ನು ವೇಗವಾಗಿ ಚಲಾಯಿಸಿಕೊಂಡು ಬಂದು ಬಸ್ ಗೆ ಅಡ್ಡಲಾಗಿ ನಿಲ್ಲಿಸಿದ್ದಾರೆ. ಮಾತ್ರವಲ್ಲದೇ ಅವಾಚ್ಯ ಶಬ್ಧಗಳಿಂದ ನಿಂದಿಸಿ ಏಕಾಏಕಿ ನಗರ ಸಾರಿಗೆ ಬಸ್ ಚಾಲಕ ಲಕ್ಷ್ಮಣ್ ಮೇಲೆ ಹಲ್ಲೆ ನಡೆಸಿದ್ದಾರೆ.

    ಪರಸ್ಪರ ಮಾತು ಬೆಳೆದು ರಸ್ತೆ ಮಧ್ಯದಲ್ಲಿಯೇ ಒಬ್ಬರ ಕುತ್ತಿಗೆ ಒಬ್ಬರು ಹಿಡಿದು ಕುಸ್ತಿಯಾಡಿದ್ದಾರೆ. ಆಗ ಖಾಕಿಗಳ ಜಗಳ ಬಿಡಿಸಲು ಘಟನಾ ಸ್ಥಳದಲ್ಲಿದ್ದ ಹಿರಿಯ ನಾಗರಿಕರು ಮುಂದಾದರು ಕೂಡ ಪ್ರಯೋಜನವಾಗಲಿಲ್ಲ. ಹೀಗಾಗಿ ಉಳಿದ ಪ್ರಯಾಣಿಕರು ಮೂಕ ಪ್ರೇಕ್ಷಕರಾಗಿ ನಿಂತಿದ್ದರು.

    ಕಳೆದ ಒಂದು ವರ್ಷದ ಹಿಂದೆಯಷ್ಟೇ ನಗರ ಸಾರಿಗೆ ಚಿತ್ರದುರ್ಗದಲ್ಲಿ ಸಂಚಾರ ಆರಂಭಿಸಿರುವುದು ಆಟೋ ಚಾಲಕರಿಗೆ ಇದು ನುಂಗಲಾರದ ತುತ್ತಾಗಿದೆ. ಹೀಗಾಗಿ ಚಿತ್ರದುರ್ಗದ ಹೊರ ವಲಯದಲ್ಲಿರೋ ಐಯುಡಿಪಿ ಬಡಾವಣೆಯಲ್ಲಿ ಇಂತಹ ಘಟನೆ ಪದೇ ಪದೇ ಮರುಕಳಿಸುತ್ತಿದೆ ಅಂತ ನಗರ ಸಾರಿಗೆ ಚಾಲಕ ಲಕ್ಷ್ಮಣ್ ಆರೋಪಿಸಿದ್ದಾರೆ. ಮದ್ಯಪಾನ ಮಾಡಿಕೊಂಡು ಬಂದು ಹಲ್ಲೆ ನಡೆಸಿರೋ ಆಟೋ ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಂಡು ನಮಗೆ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

  • ಕಾರಿಗೆ ಡಿಕ್ಕಿಯಾಗಿ ಗಿಡ, ಮರದ ರೆಂಬೆಗಳ ನಡುವೆ ನುಗ್ಗಿ ಹಳ್ಳಕ್ಕೆ ಇಳಿದ KSRTC ಬಸ್- ಐವರಿಗೆ ಗಾಯ

    ಕಾರಿಗೆ ಡಿಕ್ಕಿಯಾಗಿ ಗಿಡ, ಮರದ ರೆಂಬೆಗಳ ನಡುವೆ ನುಗ್ಗಿ ಹಳ್ಳಕ್ಕೆ ಇಳಿದ KSRTC ಬಸ್- ಐವರಿಗೆ ಗಾಯ

    ಮಂಡ್ಯ: ಕೆಎಸ್‍ಆರ್ ಟಿಸಿ ಬಸ್ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಐವರಿಗೆ ಗಾಯವಾಗಿದ್ದು, ಬಸ್ ಪ್ರಯಾಣಿಕರು ಅದೃಷ್ಟವಶಾತ್ ಪ್ರಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

    ಈ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕಾಂತಾಪುರ ಗ್ರಾಮದ ಬಳಿ ನಡೆದಿದೆ. ಘಟನೆಯಿಂದ ಸುನೀಲ್, ಪ್ರಭಾಕರ್, ಸಚಿನ್, ಮುತ್ತು, ಮದನ್ ಎಂಬುವವರು ಗಾಯಗೊಂಡಿದ್ದಾರೆ.

    ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ ರಸ್ತೆ ಬದಿ ಹಳ್ಳಕ್ಕೆ ಇಳಿದಿದ್ದು, ಗಿಡ ಮತ್ತು ಮರದ ರೆಂಬೆಗಳ ನಡುವೆ ನುಗ್ಗಿದೆ. ಇದ್ರಿಂದ ಭಯಗೊಂಡ ಪ್ರಯಾಣಿಕರು ಜೋರಾಗಿ ಕೂಗಿಕೊಂಡಿದ್ದಾರೆ. ಆದ್ರೆ ಅದೃಷ್ಟವಶಾತ್ ಬಸ್‍ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನೆ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದೀಪಾವಳಿ ಪ್ರಯುಕ್ತ ಊರಿಗೆ ಹೊರಟ ಪ್ರಯಾಣಿಕರಿಂದ ಬಸ್, ರೈಲು ನಿಲ್ದಾಣ ಜಾಮ್

    ದೀಪಾವಳಿ ಪ್ರಯುಕ್ತ ಊರಿಗೆ ಹೊರಟ ಪ್ರಯಾಣಿಕರಿಂದ ಬಸ್, ರೈಲು ನಿಲ್ದಾಣ ಜಾಮ್

    ಬೆಂಗಳೂರು: ದೇಶಾದ್ಯಂತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಸಿಲಿಕಾನ್ ಸಿಟಿಯಿಂದ ಜನರು ಊರಿನ ಕಡೆ ಹೊರಟ ಪರಿಣಾಮ ನಗರದ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ತುಂಬಿದ್ದರು.

    ಪ್ರಯಾಣಿಕರು ಹಾಗೂ ಬಸ್ ಗಳಿಂದ ನಗರದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೀಗಾಗಿ ಜನರು ನಿಲ್ದಾಣ ತಲುಪಲು ಹರಸಾಹಸ ಪಡಬೇಕಾಯಿತು. ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಮಂಗಳವಾರ ರಾತ್ರಿ ಮಳೆ ಇಲ್ಲದಿದ್ದರಿಂದ ಪ್ರಯಾಣಿಕರು ನೆಮ್ಮದಿಯ ನಿಟ್ಟಿಸುರು ಬಿಟ್ಟಿದ್ದರು. ಆದ್ರೆ ಸಂಜೆಯಿಂದಲೇ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಮುಗಿಬೀಳೂತ್ತಿದ್ದು, ಇದರಿಂದ ಸಂಚಾರ ದಟ್ಟಣೆ ಅಧಿಕವಾಗಿತ್ತು.

    ಮೈಸೂರು ರಸ್ತೆಯ ಬಾಪೂಜಿನಗರ, ಯಶವಂತಪುರ, ಪೀಣ್ಯ, ಹೊಸೂರು ರಸ್ತೆ ಹಾಗೂ ಶಾಂತಿನಗರ ಆನಂದರಾವ್ ಸರ್ಕಲ್ ಸೇರಿದಂತೆ ಮೆಜೆಸ್ಟಿಕ್ ಸುತ್ತಮುತ್ತ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಹಬ್ಬದ ಹಿನ್ನೆಲೆಯಲ್ಲಿ ಸುಮಾರು 1500 ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಕೆಎಸ್‍ಆರ್‍ಟಿಸಿ ಮಾಡಿದೆ. ಸರ್ಕಾರಿ ಬಸ್ ಮಾತ್ರವಲ್ಲದೇ ಖಾಸಗಿ ಬಸ್ ಗಳು ಕೂಡ ಅಧಿಕವಾಗಿದ್ದವು. ಈ ಹಿನ್ನೆಲೆಯಲ್ಲಿ ವಾಹನ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಲು ಕಾರಣವಾಗಿತ್ತು. ಕೆ.ಜಿ ರಸ್ತೆ, ಯಶವಂತಪುರ, ಆನಂದ ರಾವ್ ಸರ್ಕಲ್, ಮೌರ್ಯ ವೃತ್ತ, ಶಾಂತಿ ನಗರ, ವಿಜಯನಗರ ಮೊದಲಾದ ಕಡೆಗಳಲ್ಲಿ ಖಾಸಗಿ ಬಸ್ ಏಜೆನ್ಸಿಗಳ ಕಚೇರಿ ಬಳಿ ಪ್ರಯಾಣಿಕರ ದಂಡೇ ನೆರೆದಿತ್ತು.

    ಖಾಸಗಿ ಬಸ್‍ಗಳು ರಸ್ತೆಯಲ್ಲಿಯೇ ನಿಂತಿದ್ದರಿಂದ ಪಾದಾಚಾರಿಗಳ ಓಡಾಟಕ್ಕೂ ತೊಂದರೆಯಾಗಿತ್ತು. ಅಲ್ಲದೇ ಇದರಿಂದ ವಾಹನ ಸವಾರರು ಕೂಡ ಪರದಾಡಬೇಕಾಯಿತು. ಒಟ್ಟಿನಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಟ್ರಾಫಿಕ್ ಪೊಲೀಸರು ಹರಸಾಹಸಪಡಬೇಕಾಯಿತು.

    ಇನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಯಶವಂತಪುರ ರೈಲು ನಿಲ್ದಾಣ, ಬೆಂಗಳೂರು ದಂಡು ನಿಲ್ದಾಣ, ಕೆಆರ್ ಪುರ ರೈಲು ನಿಲ್ದಾಣ ಸೇರಿದಂತೆ ಸಿಲಿಕಾನ್ ಸಿಟಿಯಲ್ಲಿರೋ ಎಲ್ಲಾ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು.

  • ಚಲಿಸುತ್ತಿದ್ದ ಸರ್ಕಾರಿ ಬಸ್ಸಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

    ಚಲಿಸುತ್ತಿದ್ದ ಸರ್ಕಾರಿ ಬಸ್ಸಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

    ಚಿತ್ರದುರ್ಗ: ಚಲಿಸುತ್ತಿದ್ದ ಸರ್ಕಾರಿ ಬಸ್ಸಿನಲ್ಲಿಯೇ ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

    ಬೆಂಗಳೂರಿನಿಂದ ಕುಷ್ಟಗಿಗೆ ಹೋಗುವ ಕೆಎ28ಈ2194 ಬಸ್ಸಿನಲ್ಲಿ ತೆರಳುತ್ತಿದ್ದ ಹನುಮವ್ವ (21) ಎಂಬವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ದಂಪತಿ ಸಮೇತ ಸರ್ಕಾರಿ ಬಸ್‍ನಲ್ಲಿ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹನುಮನಗರಕ್ಕೆ ಹೋಗುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

    ಪ್ರಯಾಣ ಮಾಡುತ್ತಿದ್ದಾಗ ಚಿತ್ರದುರ್ಗದಲ್ಲಿ ಹನುಮವ್ವ ಅವರಿಗೆ ಹೆರಿಗೆನೋವು ಕಾಣಿಸಿಕೊಂಡಿದೆ. ತಕ್ಷಣ ಸಹಪ್ರಯಾಣಿಕರು ಚಾಲಕನಿಗೆ ವಿಷಯ ತಿಳಿಸಿದ್ದಾರೆ. ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಬಾರದ ಕಾರಣ ಹನುಮವ್ವ ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಅವಧಿಗೂ ಮುನ್ನವೇ ಅಂದರೆ 7 ತಿಂಗಳಿಗೆ ಮಗು ಜನಿಸಿದ್ದು, ಮಗು ಸುಮಾರು 759 ಗ್ರಾಂ ತೂಕವಿದೆ. ಆದ್ದರಿಂದ ಮಗು ಸ್ಥಿತಿ ಚಿಂತಾಜನಕವಾಗಿದೆ.

    ಸದ್ಯಕ್ಕೆ ಜಿಲ್ಲಾಸ್ಪತ್ರೆಯ ಎನ್‍ಐಸಿಯು ವಾರ್ಡನಲ್ಲಿ ಮಗುವಿನ ಆರೈಕೆ ಮಾಡಲಾಗುತ್ತಿದ್ದು, ತಾಯಿ ಹನುಮವ್ವ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

  • ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕಿಳಿದ KSRTC ಬಸ್- 20 ಮಂದಿಗೆ ಗಾಯ

    ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕಿಳಿದ KSRTC ಬಸ್- 20 ಮಂದಿಗೆ ಗಾಯ

    ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್‍ಆರ್‍ಟಿಸಿ ಬಸ್ ಹಳ್ಳಕ್ಕಿಳಿದ ಪರಿಣಾಮ ಬಾಲಕ ಸೇರಿದಂತೆ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ

    ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಲಾಳು ಗೇಟ್ ಸಮೀಪ ಇಂದು ಬೆಳಗಿನ ಜಾವದಲ್ಲಿ ಈ ಘಟನೆ ನಡೆದಿದೆ. ಕೆಎ13- ಎಫ್2065 ಸಂಖ್ಯೆಯ ಸರ್ಕಾರಿ ಬಸ್ ಬೆಂಗಳೂರಿನಿಂದ ಹಾಸನಕ್ಕೆ ಬರುತ್ತಿತ್ತು. ಬೆಳಗ್ಗಿನ ಜಾವ 5 ಗಂಟೆ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬಿಟ್ಟು ಹಳ್ಳದ ಕಡೆಗೆ ನುಗ್ಗಿದೆ. ಕೂಡಲೇ ಬಸ್ ನಿಂತ ಪರಿಣಾಮ ಯಾವುದೇ ಅನಾಹುತ ಸಂಭವಿಸಿಲ್ಲ. ಆದ್ರೆ ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಜನರಿಗೆ ಗಾಯಾಗಳಾಗಿವೆ.

    ರಮೇಶ್ ಹಾಗೂ ಪ್ರದೀಪ್ ಎಂಬವರಿಗೆ ಕಾಲು ಮುರಿದಿದೆ. ಜವರೇಗೌಡ ಎಂಬವರಿಗೆ ತಲೆಗೆ ಪೆಟ್ಟಾಗಿದ್ದು, ಒಂಭತ್ತು ವರ್ಷದ ಮಂಜುನಾಥ್ ಕೈ ಬೆರಳು ಮುರಿದಿದೆ. ಗಾಯಾಳುಗಳನ್ನ ಬಿಜಿ ನಗರದ ಎಐಎಂಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಗಂಭೀರವಾಗಿ ಗಾಯಗೊಂಡಿರುವವರನ್ನು ಬೆಂಗಳೂರು ಹಾಗೂ ಹಾಸನಕ್ಕೆ ರವಾನಿಸಲಾಗಿದೆ. ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.