Tag: ಸರಳ ವಿವಾಹ

  • ಸರಳ ವಿವಾಹವಾಗಿ ಹಣವನ್ನು ಕೊರೊನಾ ಪರಿಹಾರ ನಿಧಿಗೆ ನೀಡಿದ ನವದಂಪತಿ

    ಸರಳ ವಿವಾಹವಾಗಿ ಹಣವನ್ನು ಕೊರೊನಾ ಪರಿಹಾರ ನಿಧಿಗೆ ನೀಡಿದ ನವದಂಪತಿ

    ಚಾಮರಾಜನಗರ: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರಳ ವಿವಾಹವಾದ ನವದಂಪತಿ ಮದುವೆಯ ಖರ್ಚನ್ನು ಕೊರೊನಾ ಪರಿಹಾರ ನಿಧಿಗೆ ನೀಡಿರುವ ಘಟನೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ನಡೆದಿದೆ.

    ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಸರಳವಾಗಿ ಮದುವೆ ಮಾಡಿಕೊಂಡು ಮದುವೆ ಖರ್ಚಿಗೆ ಎಂದು ಇಟ್ಟುಕೊಂಡಿದ್ದ 50 ಸಾವಿರ ರೂಪಾಯಿಗಳನ್ನು ಕೊರೊನಾ ಪರಿಹಾರ ನಿಧಿಗೆ ನೀಡಿದ ನವಜೋಡಿ ಕಾರ್ಯಕ್ಕೆ ಪೋಷಕರು ಶಹಬ್ಬಾಸ್ ಎಂದಿದ್ದು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದ ಚಂದ್ರಶೇಖರಮೂರ್ತಿ, ಚಾಮರಾಜನಗರ ತಾಲೂಕಿನ ಹರವೆ ಗ್ರಾಮದ ಮೇಘನಾ ಸರಳವಾಗಿ ವಿವಾಹವಾಗಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಸಾವಿರ ಹಾಗೂ ಪ್ರಧಾನಿ ಕೊರೊನಾ ಪರಿಹಾರ ನಿಧಿಗೆ 25 ಸಾವಿರ ರೂ. ಅನ್ನು ಆನ್‍ಲೈನ್ ಮೂಲಕ ಪಾವತಿಸಿದ್ದಾರೆ. ನವ ವಧುವರರ ಈ ಕೆಲಸಕ್ಕೆ ಜಿಲ್ಲೆಯಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • 20 ಜನರ ಮಧ್ಯೆ ಮುಗೀತು ಮದ್ವೆ – ಕಾಫಿನಾಡಲ್ಲಿ ಸರಳ ವಿವಾಹ

    20 ಜನರ ಮಧ್ಯೆ ಮುಗೀತು ಮದ್ವೆ – ಕಾಫಿನಾಡಲ್ಲಿ ಸರಳ ವಿವಾಹ

    ಚಿಕ್ಕಮಗಳೂರು: ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆಗಿದೆ. ಈ ಮಧ್ಯೆ ಅತೀ ಸರಳ ವಿವಾಹವೊಂದು ಕಾಫಿನಾಡು ಚಿಕ್ಕಮಗಳೂರಿನಲ್ಲಿ ಜರುಗಿದೆ.

    ಗಂಡು-ಹೆಣ್ಣು ಬಿಟ್ಟು 18 ಜನ, ಒಟ್ಟು 20 ಜನರ ಮಧ್ಯೆ ಮದುವೆಯೊಂದು ಮುಗಿದಿದೆ. ಜಿಲ್ಲೆಯ ಕೊಪ್ಪ ತಾಲೂಕಿನ ಕೂಳೂರು ನಿವಾಸಿಯಾದ ಶ್ರೀನಿಧಿಯವರೊಂದಿಗೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದ ಮಿಲನ ಅವರ ಮದುವೆ ನಿಶ್ಚಯವಾಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಂದು ತೀರ್ಥಹಳ್ಳಿಯ ಮಾಧವ ಮಾಂಗಲ್ಯ ಸಭಾಭವನದಲ್ಲಿ ಮದುವೆ ನಡಯಬೇಕಿತ್ತು.

    ಕೊರೊನಾ ಆತಂಕದಿಂದ ದೇಶವೇ ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ವರನ ಊರು ಕೂಳೂರಿನಲ್ಲಿ ಕೇವಲ 20 ಸೇರಿ ಹುಡುಗನ ಮನೆಯಲ್ಲೇ ಮದುವೆ ಮಾಡಿ ಮುಗಿಸಿದ್ದಾರೆ. ಮದುವೆಯಲ್ಲಿ ವಧು-ವರ, ಇಬ್ಬರ ಹೆತ್ತವರು ಹಾಗೂ ಸಹೋದರರಷ್ಟೆ ಭಾಗಿಯಾಗಿದ್ದರು. ಸ್ನೇಹಿತರು ಹಾಗೂ ದೂರದ ಸಂಬಂಧಿಗಳನ್ನೂ ಕೂಡ ಮದುವೆಗೆ ಆಹ್ವಾನಿಸಿದೆ ಅತೀ ಸರಳ ವಿವಾಹ ಮಾಡಿ ಕೊರೊನಾ ಲಾಕ್‍ಡೌನ್‍ಗೆ ಬೆಂಬಲ ಸೂಚಿಸಿದ್ದಾರೆ.

  • ಸುಳ್ಯದಲ್ಲಿ ಆಗಬೇಕಾದ ಮದ್ವೆ ಮಡಿಕೇರಿಗೆ ಶಿಫ್ಟ್ – ವಧು, ವರ ಸೇರಿ 7 ಜನರು ಮಾತ್ರ ಭಾಗಿ

    ಸುಳ್ಯದಲ್ಲಿ ಆಗಬೇಕಾದ ಮದ್ವೆ ಮಡಿಕೇರಿಗೆ ಶಿಫ್ಟ್ – ವಧು, ವರ ಸೇರಿ 7 ಜನರು ಮಾತ್ರ ಭಾಗಿ

    ಮಡಿಕೇರಿ: ಕೊರೊನಾ ವೈರಸ್ ಕೇವಲ ಜನರ ಆರೋಗ್ಯ ಮತ್ತು ಜನಜೀವನದ ಮೇಲೆ ಮಾತ್ರವಲ್ಲದೆ ಮದುವೆ ಸಮಾರಂಭಗಳ ಮೇಲೂ ಪರಿಣಾಮ ಬೀರಿದೆ. ಜಿಲ್ಲೆಯಲ್ಲಿ ವಧು-ವರ ಸೇರಿದಂತೆ ಕೇವಲ ಏಳು ಜನರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು.

    ಮಡಿಕೇರಿಯ ರಜಿತ್ ಮತ್ತು ಕಾಸರಗೋಡು ತಾಲೂಕಿನ ಗ್ರಾಮವೊಂದರ ಹುಡುಗಿ ಅನುಷಾಗೆ ಇಂದು ಮದುವೆ ನಿಶ್ಚಿತವಾಗಿತ್ತು. ಸುಳ್ಯದ ಪುರಭವನದಲ್ಲಿ ಮದುವೆ ನಿಗದಿಯಾಗಿತ್ತು. ಮದುವೆಗಾಗಿ ಐದುನೂರು ಜನರಿಗೆ ಆಮಂತ್ರಣ ಪತ್ರಿಕೆ ನೀಡಲಾಗಿತ್ತು. ಪುರಭವನಕ್ಕೆ ಮುಂಗಡ ಹಣವಾಗಿ ಸಾವಿರಾರು ರೂಪಾಯಿಯನ್ನು ಕೊಡಲಾಗಿತ್ತು. ಅದ್ಧೂರಿ ಮದುವೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.

    ಆದರೆ ಕೊರೊನಾ ವೈರಸ್‍ನಿಂದಾಗಿ ದೇಶವನ್ನು ಲಾಕ್‍ಡೌನ್ ಮಾಡಿರುವುದರಿಂದ ಮದುವೆಯ ಸ್ಥಳವನ್ನು ಬದಲಾಯಿಸಲಾಗಿದೆ. ಮಡಿಕೇರಿ ನಗರದ ಹೊರವಲಯದಲ್ಲಿರುವ ರಾಜರಾಜೇಶ್ವರಿ ದೇವಾಲಯದಲ್ಲಿ ಕೇವಲ ಏಳು ಜನರು ಮಾತ್ರವೇ ಮದುವೆಯಲ್ಲಿ ಭಾಗಿಯಾಗಿ ಮದುವೆ ನೆರವೇರಿಸಿದರು. ವಧು-ವರರ ತಂದೆ,ತಾಯಿ ಮತ್ತು ಅರ್ಚಕರು ಮಾತ್ರವೇ ಮದುವೆಯಲ್ಲಿ ಭಾಗಿಯಾಗಿದ್ದರು.

    ವರ ರಜಿತ್ ಮಾತನಾಡಿ, ನಾವು 500 ಮದುವೆ ಆಮಂತ್ರಣ ಪತ್ರಿಕೆಯನ್ನು ನೀಡಲಾಗಿತ್ತು. ಕುಟುಂಬದ ಎಲ್ಲ ಸದಸ್ಯರ ಜೊತೆ ಸೇರಿ ಅದ್ಧೂರಿಯಾಗಿ ಮದುವೆ ಆಗಬೇಕೆಂಬ ಆಸೆ ಇತ್ತು. ಆದರೆ ಈ ಕೊರೊನಾ ವೈರಸ್‍ನಿಂದ ಇಡಿ ಜಗತ್ತಿನಲ್ಲಿ ಆಂತಕ ಉಂಟಾಗಿದೆ. ಹೀಗಾಗಿ ಈ ರೀತಿ ಸರಳವಾಗಿ ಮದುವೆ ಆಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.