Tag: ಸಮಸ್ಯೆ

  • ಎತ್ತಿನ ಹೊಳೆಗೂ ದಕ್ಷಿಣ ಕನ್ನಡದ ನೀರಿನ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ – ರಮೇಶ್ ಕುಮಾರ್

    ಎತ್ತಿನ ಹೊಳೆಗೂ ದಕ್ಷಿಣ ಕನ್ನಡದ ನೀರಿನ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ – ರಮೇಶ್ ಕುಮಾರ್

    ಕೋಲಾರ: ಎತ್ತಿನ ಹೊಳೆ ನೀರಿನ ಯೋಜನೆಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ನೀರಿ ಸಮಸ್ಯೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅವರು ಹೇಳಿದ್ದಾರೆ.

    ಇಂದು ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎತ್ತಿನ ಹೊಳೆ ಯೋಜನೆಗೂ ಮಂಗಳೂರು ಹಾಗೂ ಧರ್ಮಸ್ಥಳದಲ್ಲಿ ಇರುವ ನೀರಿನ ಸಮಸ್ಯೆಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

    ಎತ್ತಿನ ಹೊಳೆ ಯೋಜನೆ ವೇಗವಾಗಿ ಸಾಗುತ್ತಿದ್ದು, ಜೂ.12 ರಂದು ಬಯಲುಸೀಮೆಯ ಎಲ್ಲಾ ಶಾಸಕರು ಕಾಮಗಾರಿಯನ್ನು ಪರಿಶೀಲನೆ ಮಾಡಲಿದ್ದಾರೆ. ಮಂಗಳೂರಲ್ಲಿ ನೀರಿನ ಸಮಸ್ಯೆಗೂ ಎತ್ತಿನ ಹೊಳೆಗೂ ಸಂಬಂಧವಿಲ್ಲ ಕೆಲವರು ಬೇಕಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ವಿರೋಧ ಮಾಡುವರು ನಮ್ಮ ವಿರೋಧಿಗಳಲ್ಲ. ಅವರೆಲ್ಲ ನಮ್ಮ ಅಣ್ಣ ತಮ್ಮಂದಿರು ಅವರಿಗೆ ನಮ್ಮ ಸಮಸ್ಯೆ ಕುರಿತು ಮನವರಿಕೆ ಮಾಡಲಾಗುವುದೆಂದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಆಕಾಶದಿಂದ ಬೀಳುವ ನೀರು ಪಶ್ಚಿಮಘಟ್ಟಗಳ ಮೂಲಕ ಅರಬ್ಬಿ ಸಮುದ್ರಕ್ಕೆ ಸೇರುತಿತ್ತು. 65 ವರ್ಷಗಳ ಇತಿಹಾಸದ ಅಂಕಿ ಅಂಶಗಳ ಪ್ರಕಾರ ಸಕಲೇಶಪುರದ ಕೆಂಪುಹೊಳೆ, ವಾಟೆ ಹೊಳೆ, ಹೊಸ ಹೊಳೆ ಸೇರಿದಂತೆ 7 ಹೊಳೆಗಳಿದ್ದು, ಇಲ್ಲಿ ಸುಮಾರು 400 ರಿಂದ 450 ಟಿಎಂಸಿ ನೀರು ಹರಿದು ಪ್ರತಿ ವರ್ಷ ಅರಬ್ಬಿ ಸಮುದ್ರ ಸೇರುತ್ತಿದೆ. ಇಲ್ಲಿ ಸಣ್ಣದಾದ ಗೋಡೆಯನ್ನು ನಿರ್ಮಿಸಿ 24 ಟಿಎಂಸಿ ನೀರನ್ನು ಬಯಲುಸೀಮೆ ಪ್ರದೇಶಗಳಿಗೆ ಹರಿಸುವುದೇ ಎತ್ತಿನಹೊಳೆ ಯೋಜನೆ ಉದ್ದೇಶ ಎಂದರು.

    ಈ ವಿಚಾರದ ಬಗ್ಗೆ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ಶಾಸಕರುಗಳಿಗೆ ಚಿಕ್ಕ ಆಕ್ಷೇಪವಿತ್ತು. ಅದನ್ನು ದೂರವಾಣಿ ಮೂಲಕ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

  • ಸಪ್ತ ನದಿಗಳ ನಾಡಲ್ಲೇ ನೀರಿಗಾಗಿ ಪರದಾಟ

    ಸಪ್ತ ನದಿಗಳ ನಾಡಲ್ಲೇ ನೀರಿಗಾಗಿ ಪರದಾಟ

    -ಡ್ರಮ್ ಇರದಿದ್ರೆ ಬದುಕೇ ಇಲ್ಲ

    ಚಿಕ್ಕಮಗಳೂರು: ಸಪ್ತ ನದಿಗಳ ನಾಡು ಚಿಕ್ಕಮಗಳೂರಿನ ಹಿರೇಗೌಜ ಗ್ರಾಮದಲ್ಲಿ ಕುಡಿಯಲು ನೀರಿಲ್ಲದೆ ಜನರು ಪರದಾಡುವ ದುಸ್ಥಿತಿ ನಿರ್ಮಾಣವಾಗಿದೆ.

    ಹಿರೇಗೌಜ ಗ್ರಾಮದ ನಲ್ಲಿಗಳಲ್ಲಿ ನೀರು ಬಂದು ವರ್ಷಗಳೆ ಕಳೆದಿವೆ. ಈಗ 10-15 ದಿನಕ್ಕೊಮ್ಮೆ ಬರುವ ಟ್ಯಾಂಕರ್ ನೀರಿಗಾಗಿ ಜನ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಮನೆಯೊಂದಕ್ಕೆ 8-10 ದಿನಗಳಿಗೆ 3-4 ಡ್ರಮ್ ನೀರು. ಅದರಲ್ಲೇ ದನ-ಕರು, ಅಡುಗೆ, ಸ್ನಾನ ಎಲ್ಲ ಮಾಡಬೇಕು. ಇಲ್ಲಿ ಡ್ರಮ್ ಇರದಿದ್ದರೇ ಬದುಕೇ ಇಲ್ಲದಂತಾಗಿದೆ ಎಂದು ಸ್ಥಳೀಯ ಮಹಿಳೆಯರು ಹೇಳುತ್ತಿದ್ದಾರೆ.

    ವಾರಕ್ಕೊಮ್ಮೆ ಪಂಚಾಯಿತಿ ಬಿಡುತ್ತಿರುವ ಟ್ಯಾಂಕರ್ ನೀರು ಶುದ್ಧವೋ-ಫ್ಲೋರೈಡ್ ನೀರೋ ಗೊತ್ತಿಲ್ಲ. ನೀರನ್ನ ಡ್ರಮ್‍ಗೆ ತುಂಬಿದ್ದಂತೆ ಬಿಳಿಯ ಪಾಚಿ ಹರಡುತ್ತೆ. ಅದನ್ನೆ ಕುಡೀಬೇಕು. ಟ್ಯಾಂಕರ್ ಬರದಿದ್ದರೆ 2-3 ಕಿಲೋ ಮೀಟರ್ ನಷ್ಟು ದೂರ ನೀರನ್ನ ಹೊರಬೇಕು. ನೀರನ್ನ ಹೊತ್ತು-ಹೊತ್ತು ಗ್ರಾಮದ ಗಂಡಸರ ತೋಳಲ್ಲಿ ಶಕ್ತಿಯೇ ಇಲ್ಲದಂತಾಗಿದೆ. ಹಣ ಕೊಟ್ಟು ನೀರು ತಗೆದುಕೊಳ್ಳೋದಾದರೆ ಒಂದು ಡ್ರಮ್ ನೀರಿಗೆ 50 ರೂಪಾಯಿ. ಆದರೆ ಈಗ ಹಣ ಕೊಡುತ್ತೀವಿ ಅಂದರು ಖಾಸಗಿಯವರು ನೀರು ತರಲ್ಲ. ಯಾಕಂದರೆ ಟ್ಯಾಂಕರ್‍ಗೆ ನೀರು ತುಂಬಲು ಕರೆಂಟ್ ಇರಲ್ಲ. ಹಾಗಾಗಿ ಸ್ಥಳೀಯರು ಶಾಸಕರು ಹಾಗೂ ಸಂಸದರು ಕೆಂಡಕಾರುತ್ತಿದ್ದಾರೆ ಎಂದು ಸ್ಥಳೀಯ ದೇವೇಂದ್ರ ತಿಳಿಸಿದ್ದಾರೆ.

    ಚುನಾವಣೆಗು ಮುನ್ನ ನೀರು ಕೊಡುತ್ತೀವಿ, ರೋಡ್ ಮಾಡುತ್ತೀವಿ ನಿಮ್ಮ ಹಳ್ಳಿನ ಮಾದರಿ ಮಾಡುತ್ತೀವಿ ಅನ್ನೋ ಜನಪ್ರತಿನಿಧಿಗಳು ಗೆದ್ದ ಮೇಲೆ ಆ ಕಡೆ ತಲೆ ಹಾಕಿ ಮಲಗಲ್ಲ. ಅಧಿಕಾರಿಗಳಾದರೂ ನೀರು ಕೊಡುತ್ತಾರೆಂದರೆ ಅವರು ಬ್ಯುಸಿ. ಕಾಫಿನಾಡ ಜನ ಒಂದೆಡೆ ನೀರಿಗಾಗಿ ಗುಳೆ ಹೋಗುತ್ತಿದ್ದಾರೆ.

  • ಧರ್ಮಸ್ಥಳದ ನಂತರ ರಾಯರ ಮಂತ್ರಾಲಯಕ್ಕೂ ತಟ್ಟಿದ ಬರದ ಬಿಸಿ!

    ಧರ್ಮಸ್ಥಳದ ನಂತರ ರಾಯರ ಮಂತ್ರಾಲಯಕ್ಕೂ ತಟ್ಟಿದ ಬರದ ಬಿಸಿ!

    ರಾಯಚೂರು: ಧರ್ಮಸ್ಥಳದ ನಂತರ ಈ ಬಾರಿಯ ಬರಗಾಲದ ಎಫೆಕ್ಟ್ ಗುರುರಾಯರ ಸನ್ನಿಧಿ ಮಂತ್ರಾಲಯಕ್ಕೂ ತಟ್ಟಿದೆ. ಮಂತ್ರಾಲಯಕ್ಕೆ ಬರುವ ಭಕ್ತರಿಗೆ ನೀರಿನ ಸಮಸ್ಯೆ ಎದುರಾಗಿದೆ.

    ಈ ಬಾರಿಯ ಬರಗಾಲ ಎಲ್ಲ ಕಡೆ ನೀರಿನ ಸಮಸ್ಯೆಯನ್ನು ಉಂಟು ಮಾಡಿದೆ. ಈ ಪರಿಣಾಮ ಈಗ ಪುಣ್ಯಕ್ಷೇತ್ರಗಳಿಗೂ ತಟ್ಟಿದೆ. ತುಂಗಭದ್ರಾ ನದಿ ದಡದಲ್ಲಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಬರುವ ಭಕ್ತರಿಗೆ ನೀರಿನ ಸಮಸ್ಯೆ ಎದುರಾಗಿದೆ. ನದಿ ಸಂಪೂರ್ಣ ಬತ್ತಿರುವುದರಿಂದ ಭಕ್ತರು ಪುಣ್ಯ ಸ್ನಾನ ಮಾಡಲು ಆಗದೆ ಪರದಾಡುವಂತಾಗಿದೆ.

    ಕಳೆದ ಮೂರು ತಿಂಗಳುಗಳಿಂದ ನದಿ ಸಂಪೂರ್ಣ ಬತ್ತಿ ಹೋಗಿದ್ದು, ನೀರಿನ ಸಮಸ್ಯೆ ಉಂಟಾಗಿದೆ ಆದ್ದರಿಂದ ಭಕ್ತರ ಸ್ನಾನಕ್ಕೆ ನೀರಿನ ಸಮಸ್ಯೆಯಾಗಿದೆ. ಪ್ರತಿ ವರ್ಷ ತುಂಗಭದ್ರಾ ನದಿ ಸಾಮಾನ್ಯವಾಗಿ ಏಪ್ರಿಲ್ ತಿಂಗಳಲ್ಲಿ ಖಾಲಿಯಾಗುತ್ತಿತ್ತು. ಆದರೆ ಈ ಬಾರಿ ಮಾರ್ಚ್ ತಿಂಗಳಲ್ಲಿಯೇ ತುಂಗಭದ್ರಾ ನದಿಯೂ ಸಂಪೂರ್ಣ ಬತ್ತಿ ಹೋಗಿದೆ. ಇದರಿಂದ ಗುರುವಾರ ಹಾಗೂ ವಿಶೇಷ ಸಂದರ್ಭದಲ್ಲಿ ಕ್ಷೇತ್ರಕ್ಕೆ ಆಗಮಿಸುವ ಲಕ್ಷಾಂತರ ಸಂಖ್ಯೆಯ ಭಕ್ತರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

    ಮಠದ ವತಿಯಿಂದ ಕೊಳವೆ ಬಾವಿ ಕೊರೆಸಿದ್ದು ಇದರಿಂದ ನೀರು ಪಡೆದು ಭಕ್ತರು ಸ್ನಾನ ಘಟ್ಟದಲ್ಲಿ ನಲ್ಲಿಗಳ ಮೂಲಕ ಸ್ನಾನ ಮಾಡುತ್ತಿದ್ದಾರೆ. ಕುಡಿಯುವ ನೀರಿಗೆ ಮಠ ಹಾಗೂ ಖಾಸಗಿಯವರು ಅಲ್ಲಲ್ಲಿ ವ್ಯವಸ್ಥೆಗಳನ್ನು ಮಾಡಿದ್ದಾರೆ. ಇದೇ ರೀತಿಯಲ್ಲಿ ಧರ್ಮಸ್ಥಳದಲ್ಲೂ ನೀರಿನ ಸಮಸ್ಯೆ ಉಂಟಾದ ಕಾರಣ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಕ್ಷೇತ್ರದಲ್ಲಿ ನೀರಿನ ಸಮಸ್ಯೆ ತುಂಬ ಇದೆ. ಆದ್ದರಿಂದ ಭಕ್ತರು ಕ್ಷೇತ್ರಕ್ಕೆ ಬರುವುದನ್ನು ಮುಂದೂಡಿ ಎಂದು ವಿನಂತಿ ಮಾಡಿದ್ದರು.

  • ಬಣ್ಣಗಳಲ್ಲಿ ಮಿಂದೇಳುವ ಮುನ್ನ ತ್ವಚೆಯ ಬಗ್ಗೆ ಎಚ್ಚರ – ಸರಳವಾದ ಸಲಹೆಗಳು ಇಲ್ಲಿವೆ

    ಬಣ್ಣಗಳಲ್ಲಿ ಮಿಂದೇಳುವ ಮುನ್ನ ತ್ವಚೆಯ ಬಗ್ಗೆ ಎಚ್ಚರ – ಸರಳವಾದ ಸಲಹೆಗಳು ಇಲ್ಲಿವೆ

    ಕೆಲ ದಿನಗಳಲ್ಲಿ ಬಣ್ಣಗಳ ಹೋಳಿ ಹಬ್ಬ ಬಂದೇ ಬಿಡುತ್ತದೆ. ಎಲ್ಲರೂ ಓಕುಳಿ ಹಬ್ಬದಲ್ಲಿ ಮಿಂದೇಳಲು ಈಗಿನಿಂದಲೇ ಸಿದ್ಧರಾಗುತ್ತಿದ್ದೀರ. ಫಾಲ್ಗುಣ ಮಾಸದ ಹುಣ್ಣಿಮೆಯ ದಿನ ಬಣ್ಣದ ಹಬ್ಬವನ್ನು ಆಚರಿಸುತ್ತೇವೆ. ವಿಶೇಷ ಪೂಜೆ ಮಾಡಿ ಸಿಹಿ ಹಂಚಿ ಕಾಮನ ದಹನ ಮಾಡಿ ಸಂಭ್ರಮಿಸುತ್ತೇವೆ. ಜೊತೆಗೆ ಎಲ್ಲದರಗಿಂತ ಮಿಗಿಲಾಗಿ ಪರಸ್ಪರ ಬಣ್ಣವನ್ನು ಹಚ್ಚಿಕೊಂಡು ಫುಲ್ ಎಂಜಾಯ್ ಮಾಡುತ್ತೀರಿ.

    ಆದರೆ ಎಲ್ಲಿಂದರಲ್ಲಿ ಕಡಿಮೆ ಬೆಲೆಗೆ ಸಿಗುವ ಬಣ್ಣಗಳ ಖರೀದಿ ಬಗ್ಗೆ ಎಚ್ಚರವಿರಬೇಕು. ಕೆಲ ಹೊತ್ತಿನ ಬಣ್ಣ ಬದುಕಿನ ರಂಗನ್ನೇ ಕಿತ್ತುಕೊಳ್ಳಬಾರದು. ಹೀಗಾಗಿ ರಾಸಾಯನಿಕ ಮಿಶ್ರಿತ ಬಣ್ಣಗಳಿಂದ ದೂರವಿದ್ದರೆ ಒಳಿತು. ನಿಮ್ಮ ಚರ್ಮ, ತ್ವಚೆ, ಕೂದಲಿನ ಆರೋಗ್ಯದ ಬಗ್ಗೆ ತುಂಬಾನೇ ಜಾಗ್ರತೆ ವಹಿಸಬೇಕು. ಹಾಗಾದರೆ ಆರೋಗ್ಯಕರ ಕಲರ್ ಫುಲ್ ಹೋಳಿಯಾಟ ಹೇಗೆ ಆಡಬೇಕು ಎಂಬ ಬಗ್ಗೆ ಸರಳವಾದ ಸಲಹೆಗಳು ನಿಮಗಾಗಿ. ಒಮ್ಮೆ ಈ ಸಲಹೆಗಳನ್ನು ಪಾಲಿಸಿ ನೋಡಿ ನೀವು ಕಾಮನ ಹಬ್ಬಕ್ಕಿಂತಲೂ ಹೆಚ್ಚು ಸಂಭ್ರಮಿಸುತ್ತೀರ.

    ಸಲಹೆಗಳು:
    * ಮೊಟ್ಟಮೊದಲಿಗೆ ಹೋಳಿ ಹಬ್ಬಕ್ಕೆ ಪರಿಸರ ಸ್ನೇಹಿ ಬಣ್ಣ ಬಳಸಿರಿ.
    * ಒತ್ತಾಯದಿಂದ ಬಣ್ಣ ಎರಚುವುದು, ತಲೆ ಮೇಲೆ ಮೊಟ್ಟೆ ಒಡೆಯುವುದು, ಕೊಳತೆ ತರಕಾರಿ ಬಳಕೆ ಬೇಡ.
    * ಚರ್ಮದ ಸಮಸ್ಯೆ ಹಾಗೂ ಅಲರ್ಜಿ ಇರುವವರು ಬಣ್ಣದಾಟದಿಂದ ಹೊರಗಿದ್ದರೆ ಒಳಿತು. ಇಲ್ಲವಾದಲ್ಲಿ ಧೂಳು, ರಾಸಾಯನಿಕ ನಿಮ್ಮ ದೇಹ ಸೇರಿ ಉಸಿರಾಟ ಸಮಸ್ಯೆ, ಕೆಮ್ಮು, ಅಸ್ತಮಾ ಸಮಸ್ಯೆ ಎದುರಾಗಬಹುದು.
    * ಆಚರಣೆ ಬಳಿಕ ಉತ್ತಮವಾದ ಸೋಪ್ ಬಳಿಸಿ ಸ್ನಾನ ಮಾಡುವುದು ಅಗತ್ಯ.
    * ರಾಸಾಯನಿಕ ಮಿಶ್ರಣದ ಬಣ್ಣದ ಬಳಕೆಯಿಂದ ಕಣ್ಣಿಗೆ ಹಾನಿಯಾಗುತ್ತದೆ. ಆದ್ದರಿಂದಲೇ ನ್ಯಾಚುರಲ್ ಕಲರ್ ಬಳಸಬೇಕು. ಕಣ್ಣಿನ ಹಾನಿ ತಪ್ಪಿಸಲು ಕನ್ನಡಕ ಬಳಸಿ.

    * ಒಂದು ವೇಳೆ ಕಣ್ಣಿಗೆ ಬಣ್ಣ ಬಿದ್ದರೆ, ಕಣ್ಣನ್ನು ಉಜ್ಜುವುದು, ರಬ್ ಮಾಡುವುದು ಮಾಡಲೇ ಬಾರದು. ಎರಡೂ ರೆಪ್ಪೆಗಳನ್ನು ಅಗಲವಾಗಿ ತೆರೆದು ಶುದ್ಧ ನೀರಿನಿಂದ ತೊಳೆಯಬೇಕು.
    * ಸಾವಯವ ಬಣ್ಣಗಳನ್ನು ಮನೆಯಲ್ಲೇ ತಯಾರಿಸಬಹುದು. ಗೋರಂಟಿ ಸೊಪ್ಪು, ಚೆಂಡು ಹೂ, ಅರಿಶಿನ ಪುಡಿ ಬಳಸಿ ಮನೆಯಲ್ಲಿ ಬಣ್ಣ ತಯಾರಿಸಬಹುದು.
    * ಹೋಳಿ ವೇಳೆ ತುಂಬು ತೋಳಿನ ಬಟ್ಟೆ ಧರಿಸಿದ್ದರೆ ಉತ್ತಮ.
    * ಮಕ್ಕಳು ಬಣ್ಣ ಆಡುವಾಗ ಪಾಲಕರು ಜಾಗೃತೆ ವಹಿಸಿರಿ.
    * ಮುಖ, ತೋಳು, ಕಾಲುಗಳು ಮತ್ತು ಚರ್ಮದ ಯಾವುದೇ ತೆರೆದ ಭಾಗಕ್ಕೆ ಕ್ರೀಮ್ ಹಚ್ಚಿ ಹೊರಡಿ.
    * ಕಣ್ಣುಗಳ ರಕ್ಷಣೆಗಾಗಿ ಸನ್‍ಗ್ಲಾಸ್ ಧರಿಸುವುದು ಉತ್ತಮ.

    * ಕಡುಗಾಢವಾದ ಬಣ್ಣಗಳ ಬಳಕೆ ಬೇಡ. ರಾಸಾಯನಿಕಗಳ ಬಳಕೆ ಹೆಚ್ಚಿರುವುದರಿಂದ ಹಾನಿಯೂ ಹೆಚ್ಚಿರುತ್ತದೆ..
    * ದೇಹದ ತೆರೆದ ಭಾಗದಲ್ಲಿ ಬಣ್ಣ ತಗುಲಿ ತುರಿಕೆ, ಕೆರೆತ, ನವೆ ಉಂಟಾದರೆ ತಕ್ಷಣವೇ ಶುದ್ಧ ನೀರಿನಿಂದ ತೊಳೆದುಕೊಳ್ಳಿ.
    * ಮುಖಕ್ಕೆ ತಗುಲಿರುವ, ಅಂಟಿರುವ ಬಣ್ಣ ತೆಗೆಯಲು ಮೊದಲು ಮುಖವನ್ನು ತಣ್ಣೀರಿನಲ್ಲಿ ಅದ್ದಿ ಬಳಿಕ ಸೌಮ್ಯವಾದ ಕ್ರೀಮ್ ಹಚ್ಚಿ, ಹತ್ತಿ ಬಟ್ಟೆಯಿಂದ ಒರೆಸಿಕೊಳ್ಳಿ. ಇದರಿಂದ ಮುಖಕ್ಕೆ ಅಂಟಿರುವ ಬಣ್ಣವನ್ನು ಸುಲಭವಾಗಿ ತೆಗೆಯಬಹುದು.

    * ಹಾಲಿಗೆ ಸೂರ್ಯಕಾಂತಿ, ಆಲಿವ್ ಆಯಿಲ್, ಕೊಬ್ಬರಿ ಎಣ್ಣೆ ಯಾವುದಾದರೊಂದು ಎಣ್ಣೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಚರ್ಮಕ್ಕೆ ಹಚ್ಚಿ. ಇದರಿಂದ ಮುಖ ಮಾತ್ರವಲ್ಲದೇ, ದೇಹದಿಂದಲೂ ಬಣ್ಣವನ್ನು ತೆಗೆಯಬಹುದಾಗಿದೆ
    * ಜೊತೆಗೆ ಅರ್ಧ ಕಪ್ ಗಟ್ಟಿ ಮೊಸರಿಗೆ 2 ಚಮಚ ಜೇನುತುಪ್ಪ ಹಾಗೂ ಅರಿಶಿನ ಪುಡಿ ಬೆರೆಸಿ ಚೆನ್ನಾಗಿ ಕಲಸಿ. ಬಳಿಕ ಇದನ್ನು ಮುಖ, ಕುತ್ತಿಗೆಗೆ ಹಚ್ಚಿ ಸುಮಾರು ಅರ್ಧ ಗಂಟೆ ಬಳಿಕ ತಣ್ಣೀರಿನಲ್ಲಿ ತೊಳೆಯುವುದರಿಂದ ಅಂಟಿರುವ ಬಣ್ಣ ಹೋಗುತ್ತದೆ. ಚರ್ಮದ ತಾಜತೆ ಹಾಗೇ ಉಳಿದಿರುತ್ತದೆ.

    ಇನ್ನು ಓಕುಳಿಯಾಟದ ವೇಳೆ ಕೂದಲಿಗಾಗುವ ಹಾನಿಯನ್ನು ತಡೆಯಬೇಕಾದ್ರೆ:
    * ಕೂದಲಿಗೆ ಬಣ್ಣವಾದಲ್ಲಿ ಕೂದಲನ್ನು ಶುದ್ಧ ನೀರಿನಿಂದ ತೊಳೆಯಬೇಕು. ಕೂದಲಿಗೆ ಅಂಟಿಕೊಂಡಿದ್ದ ಬಣ್ಣ ಹೋಗೋವರೆಗೂ ನಿಧಾನವಾಗಿ ಉಜ್ಜಿ ತೊಳೆಯಬೇಕು.
    * ಗಟ್ಟಿ ಮೊಸರಿನಲ್ಲಿ ಮೆಂತ್ಯಕಾಳುಗಳನ್ನು ನೆನಸಿಡಿ. 5-10 ನಿಮಿಷದ ನಂತರ ಅದನ್ನು ತಲೆಗೆ ಹಚ್ಚಿ ಅರ್ಧಗಂಟೆ ಹಾಗೇ ಬಿಡಬೇಕು. ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಬೇಕು.
    * ಪರಸ್ಪರ ಬಣ್ಣ ಎರಚಾಡುವುದಕ್ಕೂ ಮುಂಚೆಯೇ ಹೇರ್ ಮಸಾಜ್ ಮಾಡಿಸಿಕೊಳ್ಳುವುದು ಉತ್ತಮ. ಇದರಿಂದ ಮೆದುಳಿನ ರಕ್ತ ಸಂಚಲನ ಹೆಚ್ಚಾಗಿ, ಕೂದಲಿನ ಬುಡ ಗಟ್ಟಿಯಾಗುತ್ತದೆ.
    * ಬೆಚ್ಚಗಿನ ಕೊಬ್ಬರಿಯನ್ನು ತಲೆಕೂದಲಿಗೆ ಹಚ್ಚಿ, ಕೂದಲ ಬುಡಕ್ಕೆ ಮಸಾಜ್ ಮಾಡಬೇಕು. ಇದರಿಂದ ಕೂದಲಿಗೆ ರಾಸಾಯನಿಕ ಮಿಶ್ರಿತ ಬಣ್ಣ ಅಂಟುವುದನ್ನು ತಡೆಯಬಹುದು.
    * ಓಕುಳಿಯಾಟದ ವೇಳೆ ಕೂದಲು ಬಿಡುವ ಬದಲಾಗಿ ಕೂದಲನ್ನು ಒಟ್ಟು ಮಾಡಿ ಜಡೆ ಎಣೆದುಕೊಂಡರೆ ಉತ್ತಮ.

    ಹೋಳಿ ಹಬ್ಬದಲ್ಲಿ ಬಣ್ಣ ಎರಚಾಡಲು ತಯಾರಿ ಇಲ್ಲದಿದ್ದರೆ ಏನಾಗುತ್ತೆ?:
    * ನಿಮ್ಮ ಅವಶ್ಯಕತೆಯೆ, ಕ್ರೇಜ್‍ಅನ್ನೇ ಬಂಡವಾಳ ಮಾಡಿಕೊಂಡು ಮಾರುಕಟ್ಟೆಯಲ್ಲಿ ಮನಸೋಇಚ್ಛೆ ಕಲರ್‍ಗಳು ದಾಂಗುಡಿ ಇಟ್ಟಿವೆ. ಇದರಿಂದ ಎಚ್ಚರವಾಗಿರಬೇಕು. ಇಲ್ಲವಾದಲ್ಲಿ ತೊಂದರೆ ಕಟ್ಟಿಟ್ಟಬುತ್ತಿ.
    * ಕ್ವಾಲಿಟಿ ಇಲ್ಲದ ಬಣ್ಣಗಳ ಬಳಕೆಯಿಂದ ಚರ್ಮದ ಸಮಸ್ಯೆ, ಉಸಿರಾಟದ ಸಮಸ್ಯೆ, ಕಣ್ಣಿನ ಕಿರಿಕಿರಿ ಉಂಟಾಗುವ ಸಾಧ್ಯತೆಗಳು ಇವೆ.
    * ಸಾಮಾನ್ಯವಾಗಿ ಬಣ್ಣಗಳಲ್ಲಿ ಟಾಕ್ಸಿಕ್ ರಾಸಾಯನಿಕ ಇರುವುದರಿಂದ ಅದು ಕಣ್ಣಿಗೆ ಬಿದ್ದ ಕೂಡಲೇ ಕಣ್ಣು ಕೆಂಪಗಾಗುವುದು, ನೋಯುವುದು, ಇಲ್ಲವೆ ಕಣ್ಣಿನ ಕಣ್ಣಗುಡ್ಡೆಗೆ ಹಾನಿ ಆಗುವ ಸಾಧ್ಯತೆಗಳಿರುತ್ತವೆ.
    * ಅಸ್ತಮಾ, ಉಸಿರಾಟದ ತೊಂದರೆ ಇರುವವರು ಶ್ವಾಸಕೋಶದ ತೊಂದರೆ ಅನುಭವಿಸಬೇಕಾಗುತ್ತದೆ.
    * ಬಣ್ಣ ಗುಣಮಟ್ಟದಲ್ಲವಾದರೆ ಅಲರ್ಜಿ, ತುರಿಕೆಯಂತಹ ಚರ್ಮದ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ.

    ಯಾವ ರಾಸಾಯನಿಕ ಮಿಶ್ರಿತ ಬಣ್ಣಗಳಿಂದ ಯವ್ಯಾವ ತೊಂದರೆಗಳು ಉಂಟಾಗುತ್ತೆ:
    * ಹಸಿರು ರಾಸಾಯನಿಕ ಬಣ್ಣದಲ್ಲಿರುವ ಕಾಪರ್ ಸಲ್ಫೇಟ್ – ಕಣ್ಣಿನ ಮೇಲೆ ದುಷ್ಪರಿಣಾಮ ಬೀರುತ್ತದೆ.
    * ನೇರಳೆ ರಾಸಾಯನಿಕ ಬಣ್ಣದಲ್ಲಿರುವ ಕ್ರೋಮಿಯಂ ಅಯೋಡೈಡ್ – ಅಸ್ತಮಾ ಸಮಸ್ಯೆಗೆ ಕಾರಣವಾಗುತ್ತೆ.
    * ಕಪ್ಪು ರಾಸಾಯನಿಕ ಬಣ್ಣದಲ್ಲಿರುವ ಲೆಡ್ ಆಕ್ಸೈಡ್ – ಕಿಡ್ನಿ ಸಮಸ್ಯೆಗೆ ಕಾರಣವಾಗುತ್ತೆ.
    * ಕೆಂಪು ರಾಸಾಯನಿಕ ಬಣ್ಣದಲ್ಲಿರುವ ಮಕ್ರ್ಯೂರಿಕ್ ಸಲ್ಫೇಟ್ – ಚರ್ಮ ಸಮಸ್ಯೆಗೆ ಕಾರಣವಾಗುತ್ತೆ
    * ಸಿಲ್ವರ್ ರಾಸಾಯನಿಕ ಬಣ್ಣದಲ್ಲಿರುವ ಅಲ್ಯುಮಿನಿಯಂ ಬ್ರೋಮೈಡ್ – ತುರಿಕೆ, ಕೆರೆತ ಸಮಸ್ಯೆಗೆ ಕಾರಣವಾಗುತ್ತೆ.

  • ಪತ್ರಕರ್ತೆಯ ಸ್ಟೈಲ್ ನಲ್ಲೇ ತನ್ನೂರಿನ ಸಮಸ್ಯೆ ಬಿಚ್ಚಿಟ್ಟ ಬಾಲಕಿ!

    ಪತ್ರಕರ್ತೆಯ ಸ್ಟೈಲ್ ನಲ್ಲೇ ತನ್ನೂರಿನ ಸಮಸ್ಯೆ ಬಿಚ್ಚಿಟ್ಟ ಬಾಲಕಿ!

    ಬಳ್ಳಾರಿ: ಮೊನ್ನೆಯಷ್ಟೇ ಕೊಡಗಿನ ಬಾಲಕನೊಬ್ಬ ತನ್ನೂರಿನ ಸಮಸ್ಯೆಗಳ ಬಗ್ಗೆ ಮಾತನಾಡಿ ಸಿಎಂ ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದನು. ಇದೀಗ ಅದೇ ರೀತಿಯಾಗಿ ಮತ್ತೊಬ್ಬ ಬಾಲಕಿ ತನ್ನೂರಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪತ್ರಕರ್ತೆಯ ರೀತಿಯಲ್ಲೇ ವರದಿ ಮಾಡಿದ್ದಾಳೆ.

    ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ತಳಕಲ್ ಗ್ರಾಮದ 7ನೇ ತರಗತಿಯಲ್ಲಿ ಓದುತ್ತಿರುವ ರೋಜಾ ಎಂಬ ಬಾಲಕಿ ತನ್ನೂರಿನ ಕೆರೆಯ ಸಮಸ್ಯೆ ಬಗ್ಗೆ ವಿವರಿಸಿದ್ದಾಳೆ. ಈ ಭಾಗದ ರೈತರ ಪ್ರಮುಖ ಜೀವನಾಧಾರವಾದ ಕೆರೆಗೆ ನೀರು ತುಂಬಿಸುವ ಯೋಜನೆಗೆ ಪೂಜೆ ಮಾಡಿ ಎರಡು ವರ್ಷವಾಗಿದೆ. ಆದರೆ ಇದುವರೆಗೂ ಕೆರೆಗೆ ಹನಿ ನೀರುಬ ಸಹ ಬಂದಿಲ್ಲ ಎಂದು ಹೇಳಿದ್ದಾಳೆ.

    ಶಾಸಕ ಪರಮೇಶ್ವರ ನಾಯ್ಕ್ ಭರವಸೆ ನೀಡಿ ಪೂಜೆ ಮಾಡಿ ಹೋದ ಕೆರೆಗೆ ಇನ್ನೂ ನೀರು ಬಂದಿಲ್ಲ. ಅಲ್ಲದೇ ಶಿಂಗಟಾಲೂರ ಬ್ಯಾರೇಜ್ ನಿಂದ ನಿತ್ಯ 40 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿದುಹೋಗುತ್ತಿದೆ. ಆ ನೀರನ್ನ ಕೆರೆ ತುಂಬಿಸುವ ಯೋಜನೆಗೆ ಬಳಸಬೇಕಾದ ರಾಜಕಾರಣಿಗಳು, ಅಧಿಕಾರಿಗಳ ನಿರ್ಲಕ್ಷ್ಯತನ ಇದಕ್ಕೆ ಸಾಕ್ಷಿಯಾಗಿದೆ. ಈಗಾಗಲೇ ಶಿಂಗಟಲೂರ ಬ್ಯಾರೇಜ್ ಬಳಿಯಿಂದ ಪೈಪ್ ಲೈನ್ ಕಾರ್ಯ ಆಳವಡಿಕೆ ಕಾರ್ಯ ನಡೆದಿದ್ದರು ಕೂಡ ಕೆರೆಗೆ ನೀರು ಹರಿದಿಲ್ಲ. ಅಲ್ಲದೇ ಕೆರೆಯ ನಿರ್ವಹಣೆ ಇಲ್ಲದೇ ಮುಳ್ಳುಗಂಟೆಗಳೇ ಹರಡಿಕೊಂಡಿದೆ ಎಂದು ಮಾಹಿತಿ ನೀಡಿದ್ದಾಳೆ.

  • ಸಚಿವರ ಸನ್ಮಾನ ಕಾರ್ಯಕ್ರಮದಲ್ಲಿ ಪವರ್ ಕಟ್- ಅಧಿಕಾರಿಗಳ ವಿರುದ್ಧ ಬಂಡೆಪ್ಪ ಕಾಶಂಪುರ್ ಗರಂ

    ಸಚಿವರ ಸನ್ಮಾನ ಕಾರ್ಯಕ್ರಮದಲ್ಲಿ ಪವರ್ ಕಟ್- ಅಧಿಕಾರಿಗಳ ವಿರುದ್ಧ ಬಂಡೆಪ್ಪ ಕಾಶಂಪುರ್ ಗರಂ

    ಬೀದರ್: ಸನ್ಮಾನ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡುವಾಗ ಎರಡು ಬಾರಿ ಕರೆಂಟ್ ಕಟ್ಟಾಗಿದ್ದಕ್ಕೆ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ಗರಂ ಆಗಿದ್ದ ಘಟನೆ ಬೀದರ್‍ ರಂಗಮಂದಿರದಲ್ಲಿ ನಡೆದಿದೆ.

    ಇಂದು ಸಚಿವರಿಗೆ ದಲಿತ ಪರ ಸಂಘಟನೆಗಳಿಂದ ಸನ್ಮಾನ ಕಾರ್ಯಕ್ರಮ ಅಯೋಜನೆ ಮಾಡಲಾಗಿತ್ತು. ಈ ವೇಳೆ ಎರಡು ಬಾರಿ ವಿದ್ಯುತ್ ಕೈಕೊಟ್ಟಿತ್ತು. ಇದರಿಂದ ಗರಂ ಆದ ಸಚಿವರು ರೈತರಿಗಾಗಿ ನಿರಂತರ ಜ್ಯೋತಿ ನೀಡಬೇಕು ಹಾಗೂ ಸಮಸ್ಯೆ ಇರುವ ಕಡೆ ದುರಸ್ಥಿ ಕಾರ್ಯ ನಡೆಸ ಬೇಕು ಎಂದು ಜೆಎಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೆ ಅದರು ಸಮಸ್ಯೆ ಬಗೆಹರಿದಿಲ್ಲ ಎಂದು ಗರಂ ಆದರು.

    ರೈತರು ನಿರಂತವಾಗಿ ಈ ಕುರಿತು ತಮಗೇ ದೂರು ನೀಡುತ್ತಾರೆ. ವಿದ್ಯುತ್ ಸರಿಯಾಗಿ ನೀಡದ ಹಿನ್ನೆಲೆ ಕಬ್ಬು ಸೇರಿದಂತೆ ಹಲವು ಬೆಳೆಗಳು ಒಣಗಿ ಹೋಗಿದೆ. ರೈತರು ಅಧಿಕಾರಿಗಳಿಗೆ ಫೋನ್ ಮಾಡಿ ಸುಸ್ತಾಗಿ ಕೊನೆಗೆ ನಮಗೆ ಫೋನ್  ಮಾಡುವ ಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

  • ಉಮ್ಮಳೆ ಜೋಗ್ ಗ್ರಾಮದ ಯುವಕರು ಮದ್ವೆಯಾಗಬೇಕೆಂದ್ರೆ ಊರು ಬಿಡ್ಲೇ ಬೇಕು!

    ಉಮ್ಮಳೆ ಜೋಗ್ ಗ್ರಾಮದ ಯುವಕರು ಮದ್ವೆಯಾಗಬೇಕೆಂದ್ರೆ ಊರು ಬಿಡ್ಲೇ ಬೇಕು!

    ಕಾರವಾರ: ಇಲ್ಲಿನ ಉಮ್ಮಳೆ ಜೋಗ್ ಗ್ರಾಮದ ಯುವಕರಿಗೆ ಹೆಣ್ಣು ಕೊಡುವುದಿಲ್ಲ. ಮದುವೆಯಾಗಲೇಬೇಕು ಅಂದರೆ ಊರನ್ನ ಬಿಡಲೇ ಬೇಕು. ಇನ್ನು ಈ ಗ್ರಾಮದ ಜನರಿಗೆ ಸ್ವಂತ ಮನೆಯಿದ್ದರು ಬಾಡಿಗೆ ಮನೆಯಲ್ಲಿ ಇರುವ ಸ್ಥಿತಿ ಇಲ್ಲಿಯದ್ದು, ಇದೊಂದು ಶಾಪಗ್ರಸ್ಥ ಗ್ರಾಮವಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಿಂದ 20 ಕಿಲೋಮೀಟರ್ ದೂರದ ವೈಲವಾಡ ಗ್ರಾಮಪಂಚಾಯ್ತಿ ವ್ಯಾಪ್ತಿಯ ಉಮ್ಮಳೆ ಜೋಗ್ ಗ್ರಾಮದಲ್ಲಿ ಯುವಕರಿಗೆ ಮದುವೆಯಾಗದಂತೆ ಅಡ್ಡಿಯಾಗಿರುವುದು. ಈ ಗ್ರಾಮದ ಸುತ್ತಲೂ ಕಾಳಿ ನದಿನೀರು ಹರಿಯುತಿದ್ದು, ದ್ವೀಪ ಪ್ರದೇಶವಾಗಿದೆ. ಹೀಗಾಗಿ ಈ ಗ್ರಾಮಕ್ಕೆ ತೆರಳಬೇಕೆಂದರೆ ಸಣ್ಣ ಪಾತಿ ದೋಣಿಯಲ್ಲಿ ಕುಳಿತು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕು.

    ಸುಮಾರು 35 ಮನೆಗಳಿರುವ ಈ ದ್ವೀಪದಲ್ಲಿ 50 ಎಕರೆ ವಿಸ್ತೀರ್ಣ ಹೊಂದಿರುವ ಕೃಷಿ ಪ್ರದೇಶವಾಗಿದೆ. ಸುಮಾರು 500 ಜನರು ಈ ಗ್ರಾಮದಲ್ಲಿ ವಾಸವಾಗಿದ್ದು, ವ್ಯವಸಾಯವನ್ನು ನಂಬಿ ಬದುಕುತಿದ್ದಾರೆ. ಇಷ್ಟೆಲ್ಲಾ ಜನರಿದ್ದರೂ ವಿದ್ಯುತ್ ಹೊರತುಪಡಿಸಿ ಸರ್ಕಾರದಿಂದ ಈ ಗ್ರಾಮಕ್ಕೆ ರಸ್ತೆಯಾಗಲಿ ಸೇತುವೆಯನ್ನಾಗಲಿ ನಿರ್ಮಿಸಿಲ್ಲ. ಹೀಗಾಗಿ ಈ ಗ್ರಾಮದ ಯುವಕರಿಗೆ ಹೊರಗಿನವರು ಹೆಣ್ಣು ಕೂಡ ಕೊಡುತ್ತಿಲ್ಲ. ಮೊದಲು ಒಪ್ಪಿದರೂ ಈ ಗ್ರಾಮಮನ್ನು ನೋಡಿ ಮದುವೆ ಮಾತುಕತೆ ಮರಿದುಕೊಂಡ ನಿದರ್ಶನಗಳಿವೆ. ಹೀಗಾಗಿ 30 ವರ್ಷ ದಾಟಿದ 10ಕ್ಕೂ ಹೆಚ್ಚು ಯುವಕರು ಮದುವೆಯಾಗದೇ ಉಳಿದಿದ್ದಾರೆ. ಇನ್ನು ಇಲ್ಲಿನ ಮಕ್ಕಳು ವಿದ್ಯಾಭ್ಯಾಸ ಮಾಡಬೇಕೆಂದರೆ ಪಕ್ಕದ ಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿ ಇರಿಸಿ ವಿದ್ಯಾಭ್ಯಾಸ ಮಾಡಿಸುವ ಸ್ಥಿತಿ ನಿರ್ಮಾಣವಾಗಿದೆ.

    ಈ ಭಾಗದಲ್ಲಿ ಭತ್ತ, ತೆಂಗು, ಬಾಳೆ ಫಸಲನ್ನು ಬೆಳಸುತ್ತೇವೆ. ಆದರೆ ಅವುಗಳನ್ನು ಮಾರಾಟ ಮಾಡಲು ಚಿಕ್ಕ ದೋಣಿಯಲ್ಲಿ ಕೊಂಡೊಯ್ಯಬೇಕಿದ್ದು ಬಲು ತ್ರಾಸದಾಯಕವಾಗಿದೆ. ಹೀಗಾಗಿ ಹಲವರು ವ್ಯವಸಾಯವನ್ನು ಮಾಡುವುದು ಬಿಟ್ಟು ನಗರದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಇನ್ನು ಸ್ವಲ್ಪ ವಿದ್ಯಾಭ್ಯಾಸ ಮಾಡಿದ ಯುವಕರು ನೆರೆಯ ಗೋವಾದಲ್ಲಿ ನೆಲೆ ಕಂಡುಕೊಂಡಿದ್ದಾರೆ. ನದಿ ಭಾಗದಿಂದ ಸುಮಾರು 150 ಮೀಟರ್ ಅಂತರವಿರುವ ಈ ಗ್ರಾಮದಿಂದ ಮೊತ್ತೊಂದೆಡೆ ಸಾಗಬೇಕಿದ್ದರೆ ದೋಣಿಗಾಗಿ ಕೋಗಿಟ್ಟು ಕರೆಯಬೇಕು. ಈ ದ್ವನಿ ಮೊತ್ತೊಂದು ದಡದಲ್ಲಿ ಇರುವವರಿಗೆ ಕೇಳಿದರೆ ಮಾತ್ರ ದೋಣಿ ತೆಗೆದುಕೊಂಡು ಬರುತ್ತಾರೆ. ಮಳೆಗಾಲದಲ್ಲಿ ಪ್ರವಾಹ ಹೆಚ್ಚಾದಾಗ ಈ ಗ್ರಾಮದ ಸಂಚಾರವೇ ಸಂಪೂರ್ಣ ಬಂದ್ ಆಗುತ್ತದೆ. ಹೀಗಾಗಿ ಊರನ್ನು ಬಿಟ್ಟು ಬೇರೆಡೆ ಮನೆ ಮಾಡಿಕೊಂಡು ಮಳೆಗಾಲ ಮುಗಿಯುವವರೆಗೂ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ವರ್ಷಗಳಿಂದ ತಮ್ಮ ಗ್ರಾಮಕ್ಕೆ ಸೇತುವೆ ಮಾಡಿಕೊಡುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದರೂ ಇಲ್ಲಿವರೆಗೂ ಈಡೇರಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

    ಭೂಮಿಯನ್ನೇ ನಂಬಿ ಇಲ್ಲಿನ ಜನರು ಬದುಕು ಕಟ್ಟಿಕೊಂಡಿದ್ದಾರೆ. ಅನೇಕ ವರ್ಷಗಳಿಂದ ಈ ಗ್ರಾಮಕ್ಕೆ ಸೇತುವೆ ನಿರ್ಮಿಸುವಂತೆ ಸರ್ಕಾರಕ್ಕೆ ಪ್ರತಿಭಟನೆ ನಡೆಸಿ ಮನವಿ ಸಹ ನೀಡಿದ್ದಾರೆ. ಆದರೆ ಈವರೆಗೂ ಸರ್ಕಾರ ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದೆ. ತಮ್ಮ ಊರಿಗೆ ಒಂದು ಸೇತುವೆಯಾದರೆ ಊರಿನಲ್ಲಿ ಮದುವೆಯಾಗದೇ ಉಳಿದ ಯುವಕರಿಗೆ ಮದುವೆ ಭಾಗ್ಯ ಸಿಗುತ್ತದೆ. ಕೆಲಸಮಾಡಲಾಗದೇ ಬರಡಾಗಿ ಬಿಟ್ಟ ಭೂಮಿ ಹಸನಾಗುತ್ತದೆ ಎಂಬ ಆಶಾ ಭಾವನೆಯಲ್ಲಿ ಈ ಗ್ರಾಮದವರು ಇಟ್ಟುಕೊಂಡಿದ್ದಾರೆ.

  • ಮೈತ್ರಿ ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ಬಿಎಸ್‍ವೈ ಪ್ಲಾನ್!

    ಮೈತ್ರಿ ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ಬಿಎಸ್‍ವೈ ಪ್ಲಾನ್!

    – ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು 6 ತಂಡಗಳೊಂದಿಗೆ ಸಜ್ಜಾದ ಯಡಿಯೂರಪ್ಪ!

    ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಪ್ಲಾನ್ ಮಾಡಿದ್ದಾರೆ.

    ಯಡಿಯೂರಪ್ಪ ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗುತ್ತಿದ್ದಾರೆ. ರಾಜ್ಯದ ರೈತರ ಸಮಗ್ರ ಸಮಸ್ಯೆಗಳನ್ನರಿಯಲು ಯಡಿಯೂರಪ್ಪ 6 ತಂಡಗಳನ್ನು ರಚಿಸಿದ್ದಾರೆ. ಇಂದಿನಿಂದ ಜೂನ್ 30 ವರೆಗೆ ಒಟ್ಟು 15 ದಿನಗಳ ಕಾಲ ರಾಜ್ಯಾದ್ಯಂತ ಆ 6 ತಂಡಗಳು ಪ್ರವಾಸ ಆರಂಭಿಸಲಿವೆ. ರೈತ ಮೋರ್ಚಾದ ಐದು ತಂಡಗಳಿಂದ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಲಿವೆ.

    ಪ್ರವಾಸ ಮಾಡಲಿರುವ ತಂಡಗಳು
    ತಂಡ 1 – ರಾಜ್ಯ ಬಿಜೆಪಿ ರೈತ ಮೋರ್ಚಾ ಅದ್ಯಕ್ಷ ಲಕ್ಷ್ಮಣ್ ಸವದಿ ನೇತೃತ್ವದಲ್ಲಿ ಪ್ರವಾಸ ಮಾಡಲಿದ್ದು, ಈ ತಂಡ ಬೆಳಗಾವಿ ನಗರ, ಬೆಳಗಾವಿ ಗ್ರಾಮಾಂತರ, ಬಾಗಲಕೋಟೆ, ವಿಜಯಪುರ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುತ್ತದೆ.

    ತಂಡ 2 – ಬಳ್ಳಾರಿ, ಬೀದರ್, ಕಲಬುರ್ಗಿ ನಗರ, ಕಲಬುರ್ಗಿ ಗ್ರಾಮಾಂತರ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದು, ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತವೆ.

    ತಂಡ -3 – ಈಶ್ವರ ಚಂದ್ರ ಹೊಸಮನಿ ನೇತೃತ್ವದಲ್ಲಿ ಮೂರನೇ ತಂಡದ ಕಾರ್ಯ ನಿರ್ವಹಣೆ ಮಾಡುತ್ತದೆ. ಈ ತಂಡ ಹಾವೇರಿ, ಗದಗ, ಧಾರವಾಡ, ಧಾರವಾಡ ಗ್ರಾಮೀಣ, ಕೊಪ್ಪಳ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತವೆ.

    ತಂಡ -4 – ನಂಜುಂಡೇಗೌಡ ಅವರ ನೇತೃತ್ವದಲ್ಲಿ ನಾಲ್ಕನೇ ತಂಡದ ಪ್ರವಾಸ ಮಾಡಲಿದ್ದು, ಮೈಸೂರು ನಗರ, ಗ್ರಾಮಾಂತರ, ಹಾಸನ, ಕೊಡಗು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುತ್ತವೆ.

    ತಂಡ 5 – ಪವಿತ್ರಾ ರಾಮಯ್ಯ ಅವರ ನೇತೃತ್ವದಲ್ಲಿ ಕಾರ್ಯ ನಿರ್ವಹಿಸಲಿದ್ದು, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತವೆ.

    ತಂಡ 6 – ಶಿವಪ್ರಸಾದ್ ನೇತೃತ್ವದಲ್ಲಿ ಕೊನೆಯ 6ನೇ ತಂಡದ ಪ್ರವಾಸ ಮಾಡಲಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತವೆ.

    ತಂಡಗಳಿಗೆ ಯಡಿಯೂರಪ್ಪ ನೀಡಿದ ಟಾಸ್ಕ್:
    * ಸಾಲ ಮನ್ನಾಕ್ಕೆ ಆಗ್ರಹಿಸಿ ಮೈತ್ರಿ ಸರ್ಕಾರದ ವಿರುದ್ದ ರೈತರನ್ನು ಹುರಿದುಂಬಿಸಬೇಕು.
    * ಮೈತ್ರಿ ಸರ್ಕಾರ ರೈತರ ಸಾಲ ಮನ್ನಾ ಮಾಡಿಲ್ಲ ಎಂದು ಜನರಿಗೆ ಮನವರಿಕೆ ಮಾಡುವುದು.
    * ಆಯಾ ಜಿಲ್ಲೆಗಳಲ್ಲಿನ ರೈತರ ಮೂಲಭೂತ ಸಮಸ್ಯೆಗಳನ್ನು ಪಟ್ಟಿ ಮಾಡುವುದು.
    * ಪ್ರಧಾನಿ ನರೇಂದ್ರ ಮೋದಿ ರೈತರಿಗೆ ನೀಡಿರುವ ಯೋಜನೆಗಳ ಮನವರಿಕೆ ಮಾಡುವುದು.
    * ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಗೆ ಬೆಂಬಲಿಸುವಂತೆ ರೈತರಿಗೆ ಮನವಿ ಮಾಡುವುದು.
    * ಪ್ರತಿ ಜಿಲ್ಲೆಗಳಲ್ಲಿ ರೈತ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆ ನಡೆಸುವುದು.

    ಆರು ತಂಡಗಳ ಕಾರ್ಯ ನಿರ್ವಹಣೆ:
    * ಬಿ.ಎಸ್.ವೈ ನೀಡಿರುವ ಟಾಸ್ಕ್ ಕಡ್ಡಾಯವಾಗಿ ಪೂರೈಸಲೇಬೇಕು.
    * ಪ್ರವಾಸದ ಸಂಪೂರ್ಣ ವರದಿ ರೈತ ಮೋರ್ಚಾ ಅದ್ಯಕ್ಷ ಲಕ್ಷ್ಮಣ ಸವದಿ ಕೈ ಸೇರಲಿದೆ.
    * ಲಕ್ಷ್ಮಣ ಸವದಿ ಸಂಪೂರ್ಣ ವರದಿಯನ್ನು ರೈತ ಮೋರ್ಚಾ ಉಸ್ತುವಾರಿ ರವಿಕುಮಾರ್ ಗೆ ನೀಡಬೇಕು.
    * ರೈತ ಮೋರ್ಚಾ ಉಸ್ತುವಾರಿ ಹೊತ್ತಿರುವ ರವಿಕುಮಾರ್.
    * ರವಿಕುಮಾರ್ ಸಂಪೂರ್ಣ ವರದಿಯನ್ನು ಯಡಿಯೂರಪ್ಪ ಕೈಗೊಪ್ಪಿಸಲಿದ್ದಾರೆ.

  • ಸಿಎಂ ಆದ ಬೆನ್ನಲ್ಲೇ ಎಚ್‍ಡಿಕೆಗೆ ಬೆಟ್ಟದಷ್ಟು ಸವಾಲುಗಳು!

    ಸಿಎಂ ಆದ ಬೆನ್ನಲ್ಲೇ ಎಚ್‍ಡಿಕೆಗೆ ಬೆಟ್ಟದಷ್ಟು ಸವಾಲುಗಳು!

    ರಾಮನಗರ: ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಎಚ್‍ಡಿ ಕುಮಾರಸ್ವಾಮಿಯವರಿಗೆ ಸ್ವಕ್ಷೇತ್ರ ರಾಮನಗರದಲ್ಲಿ ಬೆಟ್ಟದಷ್ಟು ಸವಾಲುಗಳು ಎದುರಾಗಿವೆ.

    ರೇಷ್ಮೆನಗರಿ ರಾಮನಗರ ಹಾಗೂ ಬೊಂಬೆನಗರಿ ಚನ್ನಪಟ್ಟಣ ಇವೆರಡೂ ಕೂಡ ಅವಳಿ ನಗರಗಳು. ಸಿಲಿಕಾನ್ ಸಿಟಿಯಿಂದ ಕೂಗಳತೆ ದೂರದಲ್ಲಿದ್ದು, ಬೆಂಗಳೂರು -ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಅಕ್ಕಪಕ್ಕದಲ್ಲಿಯೇ ಇರುವ ಈ ಎರಡು ನಗರಗಳು ದಿನದಿಂದ ದಿನ ಬೆಳೆಯುತ್ತಿವೆ. ಅಷ್ಟೆ ಅಲ್ಲದೇ ರಾಜ್ಯ ರಾಜಕಾರಣದಲ್ಲೂ ಕೂಡ ಸಾಕಷ್ಟು ಹೆಸರು ಮಾಡಿವೆ. ಇಂತಹ ಎರಡು ಕ್ಷೇತ್ರಗಳಿಂದ ಕುಮಾರಸ್ವಾಮಿ ಅವರು ಸ್ವರ್ಧಿಸಿ ಗೆಲುವು ಸಾಧಿಸಿ, ಇದೀಗ ರಾಮನಗರಕ್ಕೆ ರಾಜೀನಾಮೆ ನೀಡಿ ಚನ್ನಪಟ್ಟಣ ಕ್ಷೇತ್ರವನ್ನ ಉಳಿಸಿಕೊಂಡಿದ್ದಾರೆ.

    ಎರಡು ಕ್ಷೇತ್ರಗಳಲ್ಲೂ ಸಾಕಷ್ಟು ಸಮಸ್ಯೆಗಳು ತಾಂಡವವಾಡುತ್ತಿವೆ. ಕಳೆದ 10 ವರ್ಷಗಳಿಂದ ನೆನೆಗುದಿಗೆ ಬಿದ್ದಿರೋ ರಾಜೀವ್ ಗಾಂಧಿ ಆರೋಗ್ಯ ವಿವಿಯ ಕಟ್ಟಡ ಕಾಮಗಾರಿ, ಹತ್ತಾರು ವರ್ಷದಿಂದ ಬಂದ್ ಆಗಿರುವ ಕೆಎಸ್‍ಐಸಿಯ ಸಿಲ್ಕ್ ಮಿಲ್‍ನ್ನು ಪುನಃ ಆರಂಭಿಸಬೇಕಿದೆ. ವಿವಿ ಪ್ರಾರಂಭವಾದರೆ ಜಿಲ್ಲೆಯ ಜನರ ಆರೋಗ್ಯ ಸಮಸ್ಯೆಗೆ ಪರಿಹಾರ ಕೂಡ ಸಿಗಲಿದೆ.

    ಇನ್ನೂ ಜಿಲ್ಲೆಯಲ್ಲಿ ಅಧಿಕಾರಿಗಳ ಬೆಂಬಲದಿಂದ ಆಕ್ರಮ ಮರಳುಗಾರಿಕೆ ಮೂಲಕ ರಾಜಾರೋಷವಾಗಿ ಮರಳು ಸಾಗಾಟ ನಡೆಯುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಜೊತೆಗೆ ಏತನೀರಾವರಿ ಯೋಜನೆ ಶಾಶ್ವತ ನೀರಾವರಿ ಯೋಜನೆಯಾಗಬೇಕೆಂಬುದು ಬೊಂಬೆನಗರಿ ಜನರ ಆಗ್ರಹವಾಗಿದೆ.

    ಇದರ ಜೊತೆಗೆ ಚೀನಾ ಬೊಂಬೆಗಳ ಹಾವಳಿಗೆ ಸಿಲುಕಿ ಮೂಲೆಗುಂಪಾಗುತ್ತಿರುವ ಬೊಂಬೆ ತಯಾರಕರ ಬೊಂಬೆಗಳ ನೆರವಿಗೆ ರಾಜ್ಯ ಸರ್ಕಾರ ನಿಲ್ಲಬೇಕು. ಅರ್ಕಾವತಿ ನದಿಗೆ ಥೇಮ್ಸ್ ನದಿ ಕಲ್ಪನೆ ಸಾಕಾರವಾಗಬೇಕು ಎಂಬುದರ ಜೊತೆಗೆ ರಸ್ತೆ ಡಾಂಬರೀಕರಣ, ಉತ್ತಮವಾದ ಕಾಲೇಜುಗಳ ಸ್ಥಾಪನೆಯಾಗಬೇಕು. ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಬೇಕು ಎಂಬುದು ಸ್ಥಳೀಯರ ಒತ್ತಾಯಗಳಾಗಿವೆ.

    ಎರಡು ಕ್ಷೇತ್ರಗಳಲ್ಲಿನ ಸಾಕಷ್ಟು ಮೂಲಭೂತ ಸಮಸ್ಯೆಗಳ ಜೊತೆಗೆ ಅವಳಿ ನಗರಗಳನ್ನ ಅಭಿವೃದ್ದಿಪಡಿಸಬೇಕಾದ ಸವಾಲುಗಳು ಇದೀಗ ಎಚ್‍ಡಿಕೆ ಹೆಗಲ ಮೇಲಿದೆ.