Tag: ಸಬ್ ರಿಜಿಸ್ಟ್ರಾರ್

  • ರಾಜಸ್ವ ಹಣ ದುರುಪಯೋಗ – ಮಂಡ್ಯದ ಏಳು ಮಂದಿಗೆ ಜೈಲು ಶಿಕ್ಷೆ

    ರಾಜಸ್ವ ಹಣ ದುರುಪಯೋಗ – ಮಂಡ್ಯದ ಏಳು ಮಂದಿಗೆ ಜೈಲು ಶಿಕ್ಷೆ

    ಮಂಡ್ಯ: ರಾಜಸ್ವ ಹಣ ದುರುಪಯೋಗ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ 7 ಜನ ಸಬ್ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿಗೆ ಮಂಡ್ಯದ 1ನೇ ಹೆಚ್ಚುವರಿ ಸಿವಿಲ್ ಜೆಎಂಎಫ್‍ಸಿ ಕೋರ್ಟ್ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.

    2006 ಕ್ಕೂ ಮೊದಲು ಮಂಡ್ಯದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಾಲ್ವರು ಉಪ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ರಾಜಸ್ವ ಹಣವನ್ನು ತಮ್ಮ ಸ್ವಂತಕ್ಕೆ ಬಳಕೆ ಮಾಡಿಕೊಂಡು ಸರ್ಕಾರಕ್ಕೆ ಮೋಸ ಮಾಡಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ತಲಾ 4 ವರ್ಷ ಜೈಲು ಹಾಗೂ ದಂಡವನ್ನು ನ್ಯಾಯಾಲಯ ವಿಧಿಸಿದೆ. ಈ ಪ್ರಕರಣದಲ್ಲಿ ಮೂವರು ಪತ್ರ ಬರಹಗಾರಗಾರರು ಭಾಗಿಯಾಗಿರುವ ಹಿನ್ನೆಲೆ ಅವರಿಗೆ ತಲಾ 5 ವರ್ಷ ಶಿಕ್ಷೆ ಹಾಗೂ 1 ಕೋಟಿ 29 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶ ನೀಡಲಾಗಿದೆ.

    ಎಸ್ಎನ್ ಪ್ರಭಾ, ಚೆಲುವರಾಜು, ಲೀಲಾವತಿ ಹಾಗೂ ಸುನಂದಾ ಶಿಕ್ಷೆಗೊಳಗಾದ ಉಪ ನೋಂದಣಾಧಿಕಾರಿಯಾಗಿದ್ದಾರೆ. ಬಿಕೆ ರಾಮರಾವ್, ನರಸಿಂಹಮೂರ್ತಿ ಹಾಗೂ ಚಂದ್ರಶೇಖರ್ ಪತ್ರಬರಹಗಾರರು. ಇವರುಗಳು ಒಟ್ಟು 154 ಪ್ರಕರಣಗಳಲ್ಲಿ ಹಣ ದುರುಪಯೋಗ ಮಾಡಿದ್ದಾರೆ ಎಂದು 2006 ರಲ್ಲಿ ಉಪ ನೋಂದಣಾಧಿಕಾರಿಯಾದ್ದ ನರಸಿಂಹಯ್ಯ ಎಂಬುವವರು ದೂರು ನೀಡಿದ್ದರು. ಈ ಸಂಬಂಧ ಮಂಡ್ಯದ ಪಶ್ಚಿಮ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು. ಸದ್ಯ ರಾಜ್ಯದ ವಿವಿಧ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ದೋಷಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

  • ಕೊರೊನಾ ಆತಂಕದಲ್ಲಿ ನೆಲಮಂಗಲ ಸಬ್ ರಿಜಿಸ್ಟ್ರಾರ್ ಅಧಿಕಾರಿಗಳಿಂದ ಕೆಲಸ

    ಕೊರೊನಾ ಆತಂಕದಲ್ಲಿ ನೆಲಮಂಗಲ ಸಬ್ ರಿಜಿಸ್ಟ್ರಾರ್ ಅಧಿಕಾರಿಗಳಿಂದ ಕೆಲಸ

    ಬೆಂಗಳೂರು: ಪ್ರಪಂಚದಾದ್ಯಂತ ಕೊರೊನಾ ಹರಡುತ್ತಿದೆ. ಅಲ್ಲದೆ ನಮ್ಮ ದೇಶದಲ್ಲೂ ಕೂಡ ಕೊರೊನಾ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ರಾಜ್ಯದಲ್ಲೂ ಕೂಡ ಮಾರ್ಚ್ 31ರವರೆಗೆ ಮೆಡಿಕಲ್ ಎಮರ್ಜೆನ್ಸಿಯನ್ನು ಸಹ ಘೋಷಣೆ ಮಾಡಿದೆ.

    ಮೆಡಿಕಲ್ ಎಮೆರ್ಜೆನ್ಸಿ ಸಮಯದಲ್ಲಿ ಗುಂಪು ಗುಂಪಾಗಿ ಜನ ಸೇರುವುದನ್ನು ನಿಷೇಧಿಸಿದೆ. ಬೆಂಗಳೂರು ಹೊರವಲಯ ನೆಲಮಂಗಲ ನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಾತ್ರ ಅಧಿಕಾರಿಗಳು ಕೊರೊನಾ ಭಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಶುಕ್ರವಾರ ಹಿನ್ನೆಲೆಯಲ್ಲಿ ರಿಜಿಸ್ಟರ್ ಮಾಡಿಸಲು ಮುಗಿಬಿದ್ದಿದ್ದಾರೆ. ಇದರಿಂದ ರಿಜಿಸ್ಟ್ರಾರ್ ಕಚೇರಿಯಲ್ಲಿ ಜನಸಂದಣಿ ಉಂಟಾಗಿದೆ.

    ರಿಜಿಸ್ಟರ್ ಸಮಯದಲ್ಲಿ ಬೆರಳಿನ ಇಂಪ್ರೆಷನ್ ಕೂಡ ನೀಡಬೇಕು ಅನೇಕ ಜನ ಒಂದೇ ಮೆಷಿನ್ ನಲ್ಲಿ ಬೆರಳು ನೀಡುವುದರಿಂದ ಬಹು ಬೇಗನೆ ವೈರಸ್ ಹರಡುವ ಭೀತಿಯಲ್ಲಿ ಇಲ್ಲಿನ ಅಧಿಕಾರಿಗಳು ಸಹ ಕೆಲಸ ಮಾಡುವಂತಾಗಿದೆ.

    ನೆಲಮಂಗಲ ಸಬ್ ರಿಜಿಸ್ಟ್ರಾರ್ ಗಳಾದ ನಾಗೇಂದ್ರ ಮತ್ತು ಗಿರೀಶ್ ಮಾತನಾಡಿ, ಇದು ಸರ್ಕಾರಿ ಕಚೇರಿ ಇಲ್ಲಿಗೆ ಸಾರ್ವಜನಿಕರನ್ನು ಬರಬೇಡಿ ಎಂದು ನಾವು ಹೇಳುವುದಕ್ಕೆ ಸಾಧ್ಯವಿಲ್ಲ. ಅಲ್ಲದೆ ಇಲ್ಲಿ ನೂರಾರು ಜನ ಒಟ್ಟಿಗೆ ಬಂದು ಹೋಗುತ್ತಾರೆ. ಅದರಲ್ಲಿ ಯಾರಿಗೆ ಸೋಕಿದೆ ಎನ್ನುವುದು ತಿಳಿಯುವುದಿಲ್ಲ, ಎಲ್ಲರ ಜೊತೆ ನಾವು ಮಾತನಾಡಲೇಬೇಕು. ಇದರಿಂದ ನಾವು ಕೂಡ ಮನೆಯಲ್ಲಿ ನಮ್ಮ ಕುಟುಂಬದ ಜೊತೆ ಮುಕ್ತವಾಗಿ ಮಾತನಾಡಲು ಕೂಡ ಭಯಪಡುವಂತಾಗಿದೆ ಎಂದಿದ್ದಾರೆ.