Tag: ಸಪ್ತಕತೆಗಳ ಕಥಾಸಂಗಮ

  • ಕಥಾಸಂಗಮ: ಟ್ರೇಲರ್ ಪ್ರಭೆಯಲ್ಲಿ ಮಹಾ ಗೆಲುವಿನ ಮುನ್ಸೂಚನೆ!

    ಕಥಾಸಂಗಮ: ಟ್ರೇಲರ್ ಪ್ರಭೆಯಲ್ಲಿ ಮಹಾ ಗೆಲುವಿನ ಮುನ್ಸೂಚನೆ!

    ನ್ನಡದ ಪ್ರೇಕ್ಷಕರು ವೈವಿಧ್ಯತೆ ಬಯಸುವ ಮನಸ್ಥಿತಿ ಹೊಂದಿರುವವರು. ಈ ಕಾರಣದಿಂದಲೇ ಇಲ್ಲಿ ಹೊಸ ಆಲೋಚನೆ, ಪ್ರಯೋಗಗಳ ಚಿತ್ರಗಳು ಸೋಲುವುದಿಲ್ಲ. ಅದೆಂಥಾ ಸವಾಲುಗಳೆದುರಾದ ಘಳಿಗೆಯಲ್ಲಿಯೂ ಪ್ರೇಕ್ಷಕರು ಅಂಥಾ ಸಿನಿಮಾಗಳನ್ನು ಕೈ ಬಿಡುವುದಿಲ್ಲ. ಬಹುಶಃ ಪ್ರೇಕ್ಷಕರ್ಯಾರೂ ನಿರೀಕ್ಷೆ ಮಾಡಿರದ ರೀತಿಯಲ್ಲಿ ಮೂಡಿ ಬಂದು ತೆರೆಗಾಣಲು ಸಜ್ಜುಗೊಂಡಿರೋ ಕಥಾ ಸಂಗಮ ಚಿತ್ರ ರೂಪುಗೊಂಡಿದ್ದರ ಹಿಂದೆಯೂ ಪ್ರೇಕ್ಷಕರ ಔದಾರ್ಯವಿದೆ. ಇಂಥಾ ಸೂಕ್ಷ್ಮಗಳನ್ನು ಖಚಿತವಾಗಿಯೇ ಅರ್ಥ ಮಾಡಿಕೊಂಡಿರುವ ರಿಷಬ್ ಶೆಟ್ಟಿ ವರ್ಷಗಳ ಹಿಂದೆಯೇ ಕಥಾ ಸಂಗಮವೆಂಬ ಕನಸಿಗೆ ಕಾವು ಕೊಟ್ಟಿದ್ದರು. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಸಿನಿಮಾ ಟ್ರೇಲರ್‍ಗೆ ಸಿಕ್ಕಿರೋ ಅಭೂತಪೂರ್ವ ಬೆಂಬಲವೇ ಮಹಾ ಗೆಲುವೊಂದರ ಮುನ್ಸೂಚನೆಯಂತೆ ಕಾಣಿಸುತ್ತಿದೆ. ಇದರ ಬೆನ್ನಲ್ಲಿಯೇ ಹೊರ ಬಿದ್ದಿರುವ ಪೂರಕ ಮಾಹಿತಿಗಳು ಕಥಾ ಸಂಗಮದತ್ತ ಮತ್ತಷ್ಟು ಪ್ರೇಕ್ಷಕರು ಆಕರ್ಷಿತರಾಗುವಂತಿವೆ.

    ಈ ಟ್ರೇಲರ್‌ನಲ್ಲಿ ಏಳೂ ಕಥೆಗಳ ಝಲಕ್ಕುಗಳನ್ನು ಜಾಹೀರು ಮಾಡುತ್ತಲೇ ಪಾತ್ರಗಳ ಪರಿಚಯವನ್ನೂ ಮಾಡಿಸಲಾಗಿದೆ. ಅದರಲ್ಲಿ ಎಂಥವರೂ ಆಹ್ಲಾದಗೊಳ್ಳುವಂಥಾ ತಾಜಾ ತಾಜ ಸನ್ನಿವೇಶಗಳು, ನಿಗೂಢ ಕಥೆಗಳ ಮುನ್ಸೂಚನೆಗಳೆಲ್ಲ ಗೋಚರಿಸುತ್ತಾ ಲಕ್ಷ ಲಕ್ಷ ವೀಕ್ಷಣೆಯೊಂದಿಗೆ ಟ್ರೆಂಡಿಂಗ್‍ನಲ್ಲಿದೆ. ಶ್ರೀದೇವಿ ಎಂಟರ್‍ಪ್ರೈಸಸ್ ಬ್ಯಾನರಿನಡಿಯಲ್ಲಿ ಹೆಚ್.ಕೆ ಪ್ರಕಾಶ್, ಪ್ರದೀಪ್ ಎನ್ ಆರ್ ಮತ್ತು ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಕಥಾ ಸಂಗಮ ಅಪರೂಪದ ಕಥೆಗಳ ಮಹಾ ಸಂಗಮವಾಗಿದೆ ಎಂಬ ಸ್ಪಷ್ಟ ಸೂಚನೆಯನ್ನು ಪ್ರತೀ ಪ್ರೇಕ್ಷಕರಿಗೂ ಮನವರಿಕೆ ಮಾಡಿ ಕೊಡುವಲ್ಲಿ ಈ ಟ್ರೇಲರ್ ಗೆದ್ದಿದ್ದಾರೆ. ಈ ಚಿತ್ರ ಡಿಸೆಂಬರ್ 6ರಂದು ಬಿಡುಗಡೆಗೊಳ್ಳಲಿದೆ.

    ಸಾಮಾನ್ಯವಾಗಿ ಒಂದು ಸಿನಿಮಾದಲ್ಲಿ ಒಂದು ಕಥೆಯನ್ನು ಎಲ್ಲಿಯೂ ಸಿಕ್ಕಾಗದಂತೆ ನಿರೂಪಿಸೋದೇ ಕಷ್ಟದ ಸಂಗತಿ. ಅಂಥಾದ್ದರಲ್ಲಿ ಏಳು ಕಥೆಗಳ ಸೂತ್ರ ಹಿಡಿದು ಎಲ್ಲಿಯೂ ಗೊಂದಲ ಉಂಟಾಗದಂತೆ ರೂಪಿಸೋದೊಂದು ಸಾಹಸ. ನಿರ್ದೇಶಕ ರಿಷಬ್ ಶೆಟ್ಟಿ ಏಳು ಮಂದಿ ಪ್ರತಿಭಾನ್ವಿತ ಯುವ ನಿರ್ದೇಶಕರ ಬೆಂಬಲದೊಂದಿಗೆ ಅದನ್ನು ಸಾಧ್ಯವಾಗಿಸಿದ್ದಾರೆ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿಯೇ ದಾಖಲೆ ಸೃಷ್ಟಿಸುವಂತಿದೆ ಎಂಬ ನಂಬಿಕೆಯಂತೂ ಎಲ್ಲೆಡೆ ವ್ಯಾಪಿಸಿಕೊಳ್ಳುತ್ತಿದೆ. ರಿಷಬ್ ಶೆಟ್ಟಿ ಯಾವ ಚಿತ್ರ ಮಾಡಿದರೂ ಅಲ್ಲೊಂದು ಹೊಸತನ ಇರುತ್ತದೆ. ಆದರೆ ಈ ಬಾರಿ ಹೊಸತನವೇ ಕಥಾ ಸಂಗಮವಾಗಿ ಮೈದಾಳಿದೆ. ಚೆಂದದ ಏಳು ಕಥೆ, ಚಿತ್ರವಿಚಿತ್ರವಾದ ಪಾತ್ರಗಳನ್ನು ಒಡಲಲ್ಲಿಟ್ಟುಕೊಂಡಿರೋ ಈ ಚಿತ್ರ ವಾರದೊಪ್ಪತ್ತಿನಲ್ಲಿಯೇ ತೆರೆಗಾಣಲಿದೆ.

  • ರಿಷಬ್ ಶೆಟ್ಟರ ಕಥಾ ಸಂಗಮ ಸಾಧ್ಯವಾದ ಅಚ್ಚರಿ!

    ರಿಷಬ್ ಶೆಟ್ಟರ ಕಥಾ ಸಂಗಮ ಸಾಧ್ಯವಾದ ಅಚ್ಚರಿ!

    ಶ್ರೀದೇವಿ ಎಂಟರ್ ಪ್ರೈಸಸ್ ಬ್ಯಾನರಿನಡಿಯಲ್ಲಿ ಹೆಚ್.ಕೆ ಪ್ರಕಾಶ್, ಪ್ರದೀಪ್ ಎನ್ ಆರ್ ಮತ್ತು ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಕಥಾ ಸಂಗಮ ಚಿತ್ರ ಡಿಸೆಂಬರ್ 6ನೇ ತಾರೀಕಿನಂದು ತೆರೆ ಕಾಣಲಿದೆ. ಒಂದು ಕಥೆಯ ಸೂತ್ರ ಹಿಡಿದು ಒಂದು ಸಿನಿಮಾವನ್ನು ಸಮರ್ಥವಾಗಿ ನಿರ್ದೇಶನ ಮಾಡೋವಷ್ಟರಲ್ಲಿ ಹೈರಾಣಾಗಬೇಕಾಗುತ್ತದೆ. ಅಂಥದ್ದರಲ್ಲಿ ಏಳು ಕಥೆ, ಏಳು ಮಂದಿ ನಿರ್ದೇಶಕರು, ಏಳು ಜನ ಛಾಯಾಗ್ರಾಹಕರು ಮತ್ತು ಅಷ್ಟೇ ಸಂಖ್ಯೆಯ ಸಂಗೀತ ನಿರ್ದೇಶಕರ ದೊಡ್ಡ ತಂಡವನ್ನು ಸಂಭಾಳಿಸುತ್ತಾ ಚೆಂದದ ಚಿತ್ರ ಕಟ್ಟಿ ಕೊಡೋದು ಕಷ್ಟದ ಕೆಲಸ. ಆದರೆ ಅದನ್ನು ರಿಷಬ್ ಶೆಟ್ಟಿ ಮತ್ತವರ ತಂಡ ಇಷ್ಟಪಟ್ಟು ಮಾಡಿದೆ. ಆದ್ದರಿಂದಲೇ ಬಿಡುಗಡೆಯ ಕಡೆಯ ಕ್ಷಣಗಳೆಲ್ಲ ಗೆಲುವಿನ ಸೂಚನೆಗಳಿಂದಲೇ ಕಳೆಗಟ್ಟಿಕೊಂಡಿವೆ.

    ಇಂಥಾ ಮಹಾ ಕನಸುಗಳು ಹುಟ್ಟು ಪಡೆಯುವ ರೀತಿಯೂ ಒಂದು ಸಿನಿಮಾದಷ್ಟೇ ಸುಂದರವಾಗಿರುತ್ತವೆ. ಕಥಾ ಸಂಗಮವೆಂಬ ಕನಸು ಊಟೆಯೊಡೆದ ಕ್ಷಣಗಳ ಬಗ್ಗೆ ರಿಷಬ್ ಶೆಟ್ಟಿ ಕೂಡಾ ಒಂದಷ್ಟು ವಿಚಾರಗಳನ್ನು ನೆನಪಿಸಿಕೊಳ್ಳುತ್ತಾರೆ. ಸದಾ ಏನಾದರೊಂದು ಹೊಸತು ಸೃಷ್ಟಿಸಬೇಕೆಂಬ ಹಂಬಲ ಹೊಂದಿರೋ ರಿಷಬ್ ಶೆಟ್ಟರ ಪಾಲಿಗೆ ಪುಟ್ಟಣ್ಣ ಕಣಗಾಲ್ ರೋಲ್ ಮಾಡೆಲ್. ತಂತ್ರಜ್ಞಾನವೂ ಸೇರಿದಂತೆ ಏನೆಂದರೆ ಏನೂ ಇಲ್ಲದಿದ್ದ ಕಾಲದಲ್ಲಿಯೇ ಕಣಗಾಲರು ಸೃಷ್ಟಿಸಿದ್ದ ಅಚ್ಚರಿಗಳೇನು ಕಡಿಮೆಯವುಗಳಾ? ಅಂಥಾದ್ದೇ ಹೊಸ ಸೃಷ್ಟಿಯನ್ನು ಮಾಡಬೇಕೆಂಬ ಹಂಬಲದಲ್ಲಿಯೇ ರಿಷಬ್‍ರೊಳಗೆ ಮತ್ತೊಂದು ಕಥಾ ಸಂಗಮದ ಕನಸು ಊಟೆಯೊಡೆದಿತ್ತಂತೆ.

    ವರ್ಷಾಂತರಗಳ ಹಿಂದೆ ರಂಗಿತರಂಗದಂಥಾ ಚಿತ್ರ ಕೊಟ್ಟಿದ್ದ ನಿರ್ಮಾಪಕ ಹೆಚ್.ಕೆ ಪ್ರಕಾಶ್‍ರೊಂದಿಗೆ ರಿಷಬ್ ಶೆಟ್ಟರ ಅಚಾನಕ್ ಭೇಟಿ ಸಂಭವಿಸಿತ್ತು. ಇಂಥಾ ಭೇಟಿಗಳೆಲ್ಲ ರಿಷಬ್ ಪಾಲಿಗೆ ಸಿನಿಮಾ ಕನಸಿಗೆ ಕಾವು ಕೊಡುವ ಸಂದರ್ಭಗಳಷ್ಟೇ. ಸಿನಿಮಾ ಬಿಟ್ಟರೆ ಬೇರ್ಯಾವ ಚರ್ಚೆಗಳೂ ಇಂಥಾ ಬೇಟಿಗಳಲ್ಲಿ ಹುಟ್ಟಿಕೊಳ್ಳುವುದಿಲ್ಲ. ಅದಕ್ಕೆ ಸರಿಯಾಗಿ ಅಂದೂ ಕೂಡಾ ಕಥಾ ಸಂಗಮದ ಪರಿಕಲ್ಪನೆಯನ್ನು ನಿರ್ಮಾಪಕ ಹೆಚ್.ಕೆ ಪ್ರಕಾಶ್ ಅವರ ಮುಂದೆ ಹೇಳಿಕೊಂಡಿದ್ದರಂತೆ. ಅದರಿಂದ ಇಂಪ್ರೆಸ್ ಆಗಿದ್ದ ಪ್ರಕಾಶ್ ತನ್ನ ಸ್ನೇಹಿತ ಪ್ರದೀಪ್ ಎನ್ ಆರ್ ಅವರ ಜೊತೆಗೂಡಿ ಈ ಸಿನಿಮಾ ನಿರ್ಮಾಣ ಮಾಡೋದಾಗಿ ಹೇಳಿದ್ದರಂತೆ. ಆ ನಂತರದಲ್ಲಿ ಏಳು ಮಂದಿ ಪ್ರತಿಭಾವಂತ ನಿರ್ದೇಶಕರನ್ನು ಹುಡುಕಿ, ಕಥೆಗಳನ್ನು ಕಲೆ ಹಾಕಿ ಕಡೆಗೂ ಕನಸಿನ ಕಥಾ ಸಂಗಮವನ್ನು ಅಣಿಗೊಳಿಸಿದ್ದಾರೆ. ಇದು ಇದೇ ಡಿಸೆಂಬರ್ 6ರಂದು ತೆರೆಗಾಣಲಿದೆ.