Tag: ಸಚಿವ ಬಿ.ಶ್ರೀರಾಮುಲು

  • ಸಾರಿಗೆ ಸಚಿವರ ಸ್ವಕ್ಷೇತ್ರದಲ್ಲೇ ಬಸ್‍ಗಾಗಿ ವಿದ್ಯಾರ್ಥಿಗಳ ಪರದಾಟ- ಡಿಸಿ ವಾಸ್ತವ್ಯ ಹೂಡಿದ್ರೂ ಬಗೆಹರಿಯದ ಸಮಸ್ಯೆ

    ಸಾರಿಗೆ ಸಚಿವರ ಸ್ವಕ್ಷೇತ್ರದಲ್ಲೇ ಬಸ್‍ಗಾಗಿ ವಿದ್ಯಾರ್ಥಿಗಳ ಪರದಾಟ- ಡಿಸಿ ವಾಸ್ತವ್ಯ ಹೂಡಿದ್ರೂ ಬಗೆಹರಿಯದ ಸಮಸ್ಯೆ

    ಚಿತ್ರದುರ್ಗ: ವಿದ್ಯಾರ್ಥಿಗಳು ಬಸ್ ಗಾಗಿ ಪರದಾಡುವ ಪರಿಸ್ಥಿತಿ ಸಾರಿಗೆ ಸಚಿವ ಶ್ರೀರಾಮುಲು ಪ್ರತಿನಿಧಿಸುವ ಮೊಳಕಾಲ್ಮೂರು ಕ್ಷೇತ್ರದ ಕಣಕುಪ್ಪೆ ಗ್ರಾಮದಲ್ಲಿ ನಿರ್ಮಾಣವಾಗಿದೆ.

    ಕಳೆದ ಹಲವು ವರ್ಷಗಳಿಂದಲೂ ಬಸ್ ಗಳಿಲ್ಲದೆ ಜನರು ನಾಲ್ಕಾರು ಕಿ.ಮೀ. ನಡೆಯುವ ದುಸ್ಥಿತಿ ಇದೆ. ಆದರೆ ಈವರೆಗೆ ಸಾರಿಗೆ ಬಸ್ ಈ ಗ್ರಾಮದತ್ತ ಧಾವಿಸಿಲ್ಲ. ಶಾಲಾ, ಕಾಲೇಜು ವಿದ್ಯಾರ್ಥಿಗಳು ನಿತ್ಯ ವಿದ್ಯಾಭ್ಯಾಸಕ್ಕೆ ತೆರಳಲು ಬಸ್ ಗಾಗಿ ಪರದಾಡುತ್ತ, ಸಿಕ್ಕ ಸಿಕ್ಕ ವಾಹನ ಏರಿ ಸಾಗಲು ಹರಸಾಹಸಪಡುವಂತಾಗಿದೆ. ವಿದ್ಯಾರ್ಥಿಗಳು ಆಟೋಗಳ ಟಾಪ್ ಮೇಲೆ ಕುಳಿತು ಪ್ರಯಾಣ ಮಾಡುತ್ತಿದ್ದಾರೆ. ಇದನ್ನೂ ಓದಿ: ಜ್ವರದಿಂದ ಬಳಲುತ್ತಿದ್ದ 14ರ ಬಾಲಕಿ ಸಾವು- ದಾವಣಗೆರೆಯಲ್ಲಿ ಹೆಚ್ಚಾಗುತ್ತಿದೆ ಡೆಂಘೀ

    ಕಳೆದ ವರ್ಷ ಫೆಬ್ರವರಿ 20ರಂದು ಚಿತ್ರದುರ್ಗ ಡಿಸಿ ಕವಿತಾ ಮನ್ನಿಕೇರಿ ಗ್ರಾಮ ವಾಸ್ತವ್ಯ ಹೂಡಿದ್ದರು. ಆಗ ಡಿಸಿ ಸೂಚನೆ ಮೇರೆಗೆ ಕೆಲ ದಿನ ಮಾತ್ರ ಬಸ್ ಸಂಚಾರ ನಡೆಸಿದ್ದು, ಇದೀಗ ಶಾಲಾ, ಕಾಲೇಜು ಆರಂಭವಾದರೂ ಗ್ರಾಮಕ್ಕೆ ಬಸ್ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ನಗರಪ್ರದೇಶಗಳಿಗೆ ಬರಲು ಪರದಾಡುವಂತಾಗಿದೆ. ಹೀಗಾಗಿ ಸರ್ಕಾರ, ಸಾರಿಗೆ ಸಚಿವರು ಹಾಗೂ ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ.

  • ರೈತ ಮಹಿಳೆ ಸುಮಂಗಲಮ್ಮಗೆ ರಾಜ್ಯೋತ್ಸವ ಪ್ರಶಸ್ತಿ- ಸಚಿವ ರಾಮುಲು ಅಭಿನಂದನೆ

    ರೈತ ಮಹಿಳೆ ಸುಮಂಗಲಮ್ಮಗೆ ರಾಜ್ಯೋತ್ಸವ ಪ್ರಶಸ್ತಿ- ಸಚಿವ ರಾಮುಲು ಅಭಿನಂದನೆ

    ಚಿತ್ರದುರ್ಗ: ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಯಾಗಿದ್ದು, ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆ ಗ್ರಾಮದ 68 ವರ್ಷದ ಎಸ್.ವಿ.ಸುಮಂಗಲಮ್ಮ ಅವರ ಕೃಷಿ ಕ್ಷೇತ್ರದಲ್ಲಿನ ಸಾಧನೆ ಪರಿಗಣಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ. ಸುಮಂಗಲಮ್ಮನವರಿಗೆ ಪ್ರಶಸ್ತಿ ಲಭಿಸಿದ್ದಕ್ಕೆ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅಭಿನಂದಿಸಿದ್ದಾರೆ.

    ಟ್ವೀಟ್ ಮಾಡಿರುವ ಸಚಿವ ಶ್ರೀರಾಮುಲು, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಪ್ರಗತಿಪರ ಕೃಷಿಕರಾದ ಬಿಜಿ ಕೆರೆ ಗ್ರಾಮದ ಎಸ್.ವಿ.ಸುಮಂಗಲಮ್ಮ ವೀರಭದ್ರಪ್ಪ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ಖುಷಿ ನೀಡಿದೆ. ಅವರಿಗೆ ಅಭಿನಂದಿಸುತ್ತ, ಇದೇ ರೀತಿ ಕೃಷಿಯಲ್ಲಿ ಯುವ ಜನತೆ ಆಸಕ್ತಿ ಬೆಳೆಸಿಕೊಳ್ಳುವಂತಹ ಕೆಲಸಗಳು ಅವರಿಂದ ಹೆಚ್ಚಾಗಲಿ ಎಂದು ಆಶಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಹಿಂದುಳಿದ ಮತ್ತು ಹೆಚ್ಚು ಬರಪೀಡಿತ ಪ್ರದೇಶವಾದ ಬಿಜಿ ಕೆರೆ ಗ್ರಾಮ ಬಳ್ಳಾರಿಯಿಂದ ಬೆಂಗಳೂರಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತದೆ. ಸುಮಂಗಲಮ್ಮ ನವರ ‘ವಸುಂಧರ ಕೃಷಿ ಕ್ಷೇತ್ರವು’ ಸುಮಾರು 80 ಎಕರೆ ಕೃಷಿ ಪ್ರದೇಶದಲ್ಲಿ 20 ರೀತಿಯ ವಿವಿಧ ಸಸ್ಯವರ್ಗದ ತಳಿಗಳೊಂದಿಗೆ ಕೃಷಿ ತೋಟವಾಗಿದೆ. ಇಲ್ಲಿ ತೆಂಗು, ಹುಣಸೆ ಮರಗಳು, ರೇಷ್ಮೆ ಮತ್ತು ರೇಷ್ಮೆ ಹುಳುಗಳ ಸಾಕಾಣಿಕೆ ಹಾಗೂ ಕೃಷಿ ಅರಣ್ಯ ಬೆಳೆಗಳಾದ ಗ್ಲೈರಿಸಿಡಿಯಾ, ಸೂಬಾಬುಲ್, ಹೆಬ್ಬೇವು, ಶ್ರೀಗಂಧ, ಬಿದಿರು, ಮುಂತಾದ ಮರಗಳನ್ನು ಬೆಳೆದಿದ್ದಾರೆ.

    ಇವರು 60ಕ್ಕೂ ಹೆಚ್ಚು ಸ್ಥಳೀಯ ಕೃಷಿ ಕಾರ್ಮಿಕರಿಗೆ ಕೆಲಸ ನೀಡಿದ್ದಾರೆ. ಅಲ್ಲದೆ ಸುಮಂಗಲಮ್ಮ ಅವರು ಕಳೆದ 40 ವರ್ಷಗಳಿಂದ ಎಲ್ಲ ವಿಧದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ‘ರಾಜ್ಯದಲ್ಲಿ ಟ್ರ್ಯಾಕ್ಟರ್ ಚಾಲನೆಯಲ್ಲಿ ಪರವಾನಿಗೆ ಪಡೆದ ಪ್ರಥಮ ಮಹಿಳೆ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಇವರಿಗೆ ಆಸ್ಪಿ ಎಲ್.ಎಮ್. ಪಟೇಲ್ ಸಂಸ್ಥೆಯಿಂದ 2010ನೇ ಸಾಲಿನ ‘ಅತ್ಯುತ್ತಮ ರೇಷ್ಮೆ ಬೆಳೆಗಾರ’ ರಾಷ್ಟ್ರೀಯ ಪುರಸ್ಕೃತ ಪ್ರಶಸ್ತಿ ಬಂದಿದ್ದು, ರೇಷ್ಮೆ ಬೆಳೆ ಅಭಿವೃದ್ಧಿಯಲ್ಲಿ ಕೇಂದ್ರಿಯ ರೇಷ್ಮೆ ಮಂಡಳಿ ನೀಡುವ 1995- 96 ನೇ ಸಾಲಿನ ಉತ್ತಮ ಮಹಿಳಾ ಉದ್ಯಮಶೀಲತೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

    ಕೋಟೆನಾಡಲ್ಲಿ ನಡೆದ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೃಷಿ ಸಮುದಾಯಕ್ಕೆ ಉತ್ತಮ ಪ್ರೇರಕರಾಗಿ ಆಯ್ಕೆಯಾಗಿರುತ್ತಾರೆ. 2007-08 ನೇ ಸಾಲಿನ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ನಿಂದ ರೈತರ ಒಕ್ಕೂಟದ ಅಭಿವೃದ್ಧಿಗೆ ಉತ್ತಮ ಸಾಧನೆ ಪ್ರಶಸ್ತಿ ಪಡೆದ್ದಾರೆ. ಹೀಗಾಗಿ ಇವರ ಕುಟುಂಬವನ್ನು ‘ಕೃಷಿ ವಿಜ್ಞಾನ ಪದವೀಧರರ ಕುಟುಂಬ’ ಎನ್ನಲಾಗುತ್ತದೆ. ಇವರ ಅಪಾರ ಸಾಧನೆ ಪರಿಗಣಿಸಿ ಸರ್ಕಾರ ಇದೀಗ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.

  • ನಟ, ನಟಿಯರು ಮಾತ್ರವಲ್ಲ ಯುವ ಪೀಳಿಗೆಯೂ ಡ್ರಗ್ಸ್ ಮಾಫಿಯಾದಲ್ಲಿದೆ: ಶ್ರೀರಾಮುಲು

    ನಟ, ನಟಿಯರು ಮಾತ್ರವಲ್ಲ ಯುವ ಪೀಳಿಗೆಯೂ ಡ್ರಗ್ಸ್ ಮಾಫಿಯಾದಲ್ಲಿದೆ: ಶ್ರೀರಾಮುಲು

    ದಾವಣಗೆರೆ: ಡ್ರಗ್ಸ್ ಮಾಫಿಯಾದಲ್ಲಿ ಕೇವಲ ಸ್ಯಾಂಡಲ್‍ವುಡ್ ನಟ, ನಟಿಯರು ಮಾತ್ರವಲ್ಲ ಯುವ ಪೀಳಿಯೇ ಇದೆ. ಈ ಡ್ರಗ್ಸ್ ಮಾಫಿಯಾವನ್ನು ನಮ್ಮ ಸರ್ಕಾರ ಬೇರು ಸಮೇತ ಕಿತ್ತು ಹಾಕಲಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

    ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಮಾತನಾಡಿದ ಅವರು, ಸ್ಯಾಂಡಲ್‍ವುಡ್ ನಟ, ನಟಿಯರು ಮಾತ್ರ ಡ್ರಗ್ಸ್ ಮಾಫಿಯಾದಲ್ಲಿಲ್ಲ. ಯುವ ಪೀಳಿಗೆಯೂ ಇದೆ. ನಮ್ಮ ಸರ್ಕಾರದ ಡ್ರಗ್ಸ್ ಮಾಫಿಯಾವನ್ನು ಬೇರು ಸಮೇತ ಕಿತ್ತು ಹಾಕಲಿದೆ. ತನಿಖೆ ಪ್ರಗತಿಯಲ್ಲಿದ್ದು, ಪೊಲೀಸರು ಆಳವಾದ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

    ನನ್ನ ಮಾತಿಗೆ ಈಗಲೂ ಬದ್ಧ
    ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಸಿಎಂ ಯಡಿಯೂರಪ್ಪ ಜಾರಿ ಮಾಡಲಿದ್ದಾರೆ. ವರದಿ ನೀಡಿ ಒಂದು ತಿಂಗಳು ಮಾತ್ರ ಆಗಿದೆ. ಅದರ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಸಿಎಂ ಬಳಿ ನಿಯೋಗ ಹೋಗಲಿದ್ದೇವೆ. ನಾಗಮೋಹನ್ ದಾಸ್ ವರದಿ ಸರ್ಕಾರದ ಮುಂದಿದೆ. ಕೋವಿಡ್ ಇರುವುದರಿಂದ ತಡೆಹಿಡಿಯಲಾಗಿದೆ. ಅದಷ್ಟು ಬೇಗ ಜಾರಿಗೊಳಿಸಲು ಸಭೆ ನಡೆಸಲಾಗುತ್ತಿದೆ. ಇಂದು ಸಭೆಯಲ್ಲಿ ಚರ್ಚೆ ಮಾಡಿ ಸರ್ಕಾರದ ಗಮನ ಸೆಳೆಯಲಿದ್ದೇವೆ. ವಾಲ್ಮೀಕಿ ಸಮಾಜಕ್ಕೆ ಶೇಕಡಾ 7.5ರಷ್ಟು ಮೀಸಲಾತಿ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ.

    ಈಗಾಗಲೇ ನ್ಯಾ.ನಾಗಮೋಹನ ದಾಸ್ ವರದಿ ನೀಡಿದ್ದಾರೆ. ಇದರಲ್ಲಿ ಶೇ.5ರಷ್ಟು ಮೀಸಲಾತಿ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಆದರೆ ಅದು ಶೇ.7.5 ರಷ್ಟು ಮೀಸಲಾತಿ ಹೆಚ್ಚಳ ಆಗಬೇಕು. ಈ ಹಿಂದೆ ನಾನು ನೀಡಿದ ಹೇಳಿಕೆಗೆ ಬದ್ಧನಾಗಿದ್ದೇನೆ. ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಆಗಬೇಕು. ಅದು ಆಗದಿದ್ದರೆ, ಈ ಹಿಂದೆ ನಾನು ಮಾತು ನೀಡಿದಂತೆ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆ.

  • ಪರಿಸ್ಥಿತಿ ಹೀಗೆ ಮುಂದುವರಿದರೆ ಮತ್ತೆ ಲಾಕ್‍ಡೌನ್‍ಗೆ ಚಿಂತನೆ – ಶ್ರೀರಾಮುಲು

    ಪರಿಸ್ಥಿತಿ ಹೀಗೆ ಮುಂದುವರಿದರೆ ಮತ್ತೆ ಲಾಕ್‍ಡೌನ್‍ಗೆ ಚಿಂತನೆ – ಶ್ರೀರಾಮುಲು

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಾಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದು, ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಹೀಗಾಗಿ ಮತ್ತೆ ಲಾಕ್‍ಡೌನ್ ಕುರಿತು ಚರ್ಚೆ ಆರಂಭವಾಗಿದೆ. ಈ ಕುರಿತು ಇದೀಗ ಸ್ವತಃ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಸ್ಪಷ್ಟನೆ ನೀಡಿದ್ದಾರೆ.

    ಟ್ವೀಟ್ ಮಾಡಿರುವ ಅವರು, ಮತ್ತೆ ಲಾಕ್‍ಡೌನ್ ಘೋಷಿಸುವ ಕುರಿತು ಸುಳಿವು ನೀಡಿದ್ದಾರೆ. ರಾಜ್ಯದಲ್ಲಿ ಇತ್ತೀಚೆಗೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮತ್ತೊಮ್ಮೆ ಲಾಕ್‍ಡೌನ್ ಬಗ್ಗೆ ಚಿಂತಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಲಾಕ್‍ಡೌನ್ ಘೋಷಿಸುವ ಕುರಿತು ಸುಳಿವು ನೀಡಿದ್ದಾರೆ.

    ಮತ್ತೊಮ್ಮೆ ಲಾಕ್‍ಡೌನ್ ಮಾಡುವ ಕುರಿತು ಟಾಸ್ಕ್‍ಫೋರ್ಸ್ ಸಭೆ, ತಜ್ಞರು ಹಾಗೂ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಕೊರೊನಾ ಸೋಂಕು ನಿಯಂತ್ರಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಮಾಸ್ಕ್ ಕಡ್ಡಾಯವಾಗಿ ಧರಿಸುವುದು, ಸ್ಯಾನಿಟೈಸರ್ ಬಳಕೆ ಹಾಗೂ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

    ಮತ್ತೊಂದು ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಮುದಾಯ ಭವನಗಳು, ಶಾಲೆ, ಮದುವೆ ಹಾಲ್‍ಗಳು, ಪ್ರದರ್ಶನ ಕೇಂದ್ರಗಳು, ಹೋಟೆಲ್ ಹಾಗೂ ಸ್ಟೇಡಿಯಂಗಳನ್ನು ಕೋವಿಡ್ ಕೇರ್ ಸೆಂಟರ್‍ಗಳಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದ್ದಾರೆ.

    ಕೋವಿಡ್ ಕೇರ್ ಸೆಂಟರ್‍ನಲ್ಲಿ ಅಗತ್ಯ ವೈದ್ಯಕೀಯ ಸಿಬ್ಬಂದಿ ಇರಲಿದ್ದು, ಎಲ್ಲ ದಿನಗಳಲ್ಲಿಯೂ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿವೆ. 50 ವರ್ಷಕ್ಕಿಂತ ಕೆಳಗಿನ, ಸೋಂಕಿನ ಲಕ್ಷಣಗಳಿಲ್ಲದವರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

    https://www.facebook.com/publictv/posts/4430613563623028