Tag: ಸಚಿವ ಬಿಸಿ ಪಾಟೀಲ್

  • ಎದುರಾಳಿಯನ್ನು ಎಂದಿಗೂ ಪ್ರಬಲ ಎಂದೇ ಭಾವಿಸಬೇಕು: ಬಿ.ಸಿ.ಪಾಟೀಲ್

    ಎದುರಾಳಿಯನ್ನು ಎಂದಿಗೂ ಪ್ರಬಲ ಎಂದೇ ಭಾವಿಸಬೇಕು: ಬಿ.ಸಿ.ಪಾಟೀಲ್

    ಹಾವೇರಿ: ಯುದ್ಧದಲ್ಲಿ ನಮ್ಮ ಎದುರಾಳಿ ಎಷ್ಟೇ ದುರ್ಬಲವಾಗಿದ್ದರೂ ಮೈಮರೆತು ಕೂರದೇ ಪ್ರಬಲವಾಗಿಯೇ ಇದ್ದಾನೆ ಎಂದು ಭಾವಿಸಿ ಕಣದಲ್ಲಿ ಹೋರಾಡಲೇಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದ್ದಾರೆ.

    ವಿಧಾನ ಪರಿಷತ್ತಿಗೆ ಅ.28 ರಂದು ನಡೆಯಲಿರುವ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿರುವ ಎಸ್.ವಿ.ಸಂಕನೂರು ಅವರು ಹಿರೆಕೆರೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಹಾಗೂ ಚುನಾವಣಾ ಪ್ರಚಾರ ಕುರಿತು ಬಿ.ಸಿ.ಪಾಟೀಲ್ ನೇತೃತ್ವದಲ್ಲಿ ಚುನಾವಣಾ ಪೂರ್ವಭಾವಿ ಸಿದ್ಧತಾ ಸಭೆ ನಡೆಯಿತು.

    ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿ.ಸಿ.ಪಾಟೀಲ್, ಪಶ್ಚಿಮ ಪದವೀಧರ ಕ್ಷೇತ್ರದ ನಾಲ್ಕು ಜಿಲ್ಲೆಗಳಲ್ಲಿ ಬಿಜೆಪಿಯ 23 ಶಾಸಕರು, ಐವರು ಮಂತ್ರಿಗಳು, ನಾಲ್ವರು ಸಂಸದರಿದ್ದು, ಪಶ್ಚಿಮ ಪದವೀಧರ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಹೀಗಿದ್ದರೂ ಸಹ ಎದುರಾಳಿಯನ್ನು ಹಗುರವಾಗಿ, ಗೆಲುವು ಸುಲಭ ಎಂದು ಪರಿಗಣಿಸದೆ ಹೊಸ ಚುನಾವಣೆ ಎಂದು ಅಷ್ಟೇ ಹುಮ್ಮಸ್ಸಿನಿಂದ ಮನೆಮನೆಗೆ ಹೋಗಿ ಪಕ್ಷದ ಪರ ಪ್ರಚಾರ ಮಾಡಬೇಕು. ಶಿಕ್ಷಣ ಸಂಸ್ಥೆಗಳ ಮುಖಂಡರು, ಶಿಕ್ಷಕರ ಸಂಘದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿಯೊಬ್ಬರು ದುಡಿಯಬೇಕು. ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿಯಿಂದ ಹಿಡಿದು ಶಾಸಕರವರೆಗೆ ಎಲ್ಲರೂ ಅನುಭವಿಗಳೇ ಇರುವುದರಿಂದ ಈ ಚುನಾವಣೆಯನ್ನು ಗೆಲ್ಲಲೇಬೇಕು ಸಂಕನೂರು ಅವರಿಗೆ ಕ್ಷೇತ್ರದಲ್ಲಿ ಜಯಗಳಿಸಲೇಬೇಕೆಂದು ಚುನಾವಣಾ ನೀತಿ ರೂಪಿಸಬೇಕು ಎಂದು ಕರೆ ನೀಡಿದರು.

    ಅಕ್ಟೋಬರ್ 18 ರಂದು ಹಿರೆಕೆರೂರು ತಾಲೂಕಿಗೆ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡುತ್ತಿದ್ದು, ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಶೆಟ್ಟರ್ ಭೇಟಿಗೂ ಮುನ್ನ ಪಕ್ಷ ಸಂಘಟನೆಗೆ ಒತ್ತು ನೀಡಲು ಈ ಪೂರ್ವಭಾವಿ ಸಭೆ ನಡೆಸಲಾಗಿದೆ. ಕ್ಷೇತ್ರದಲ್ಲಿ ಸಂಘಟಿತ ಉತ್ಸಾಹಿ ಬಿಜೆಪಿಯ ಕಾರ್ಯಕರ್ತರ ಪಡೆಯೇ ಇದೆ. ಎಲ್ಲರೂ ಸಂಕನೂರರ ಗೆಲುವಿಗಾಗಿ ಶ್ರಮಿಸಬೇಕು ಎಂದು ಬಿ.ಸಿ.ಪಾಟೀಲ್ ಹೇಳಿದರು.

    ಅಭ್ಯರ್ಥಿ ಎಸ್.ವಿ.ಸಂಕನೂರು ಮಾತನಾಡಿ, ಹಿರೆಕೆರೂರಿನಲ್ಲಿ ಬಿಜೆಪಿಯ ಸಾಹಸಿ ಕಾರ್ಯಪಡೆಯೇ ಇದೆ.ಕೃಷಿ ಸಚಿವರಾದ ಬಿ.ಸಿ.ಪಾಟೀಲರ ನೇತೃತ್ವದಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ತಮ್ಮ ಗೆಲುವಿಗೆ ಕ್ಷೇತ್ರದ ಕಾರ್ಯಕರ್ತರು, ಮುಖಂಡರು ಶ್ರಮಿಸುವಂತೆ ಮನವಿ ಮಾಡಿದರು.

    ಸಭೆಯಲ್ಲಿ ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ಷಣ್ಮುಖಯ್ಯ ಮಳಿಮಠ್, ಪಟ್ಟಣ ಪಂಚಾಯಿತಿ ಸದಸ್ಯರಾದ ಗುರುಶಾಂತ ಎತ್ತಿನಹಳ್ಳಿ, ಮಹೇಂದ್ರ ಬಡಳ್ಳಿ, ಶಕ್ತಿಕೇಂದ್ರದ ಪ್ರಮುಖರು ಸೇರಿದಂತೆ ಮತ್ತಿತ್ತರರು ಭಾಗವಹಿಸಿದ್ದರು.

  • ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ ಮೊದಲ ವಾರ್ಷಿಕೋತ್ಸವ: ಸಚಿವ ಬಿ.ಸಿ.ಪಾಟೀಲ್

    ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ ಮೊದಲ ವಾರ್ಷಿಕೋತ್ಸವ: ಸಚಿವ ಬಿ.ಸಿ.ಪಾಟೀಲ್

    ಶಿವಮೊಗ್ಗ: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಇಂದಿಗೆ ಒಂದು ವರ್ಷವಾಯ್ತು ಎಂದು ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ದಿನವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ನೆನಪಿಸಿಕೊಂಡರು.

    ಶಿವಮೊಗ್ಗದ ಇರುವಕ್ಕಿಯಲ್ಲಿ ನಿರ್ಮಾಣ ಆಗುತ್ತಿರುವ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕಟ್ಟಡ ಕಾಮಗಾರಿ ವೀಕ್ಷಣೆಗೆ ಸಚಿವರು ಆಗಮಿಸಿದ್ದ ವೇಳೆ ಕೃಷಿ ವಿವಿ ಉಪಕುಲಪತಿ ಅವರು ಸಚಿವರನ್ನು ಸನ್ಮಾನಿಸಿದರು.

    ಈ ವೇಳೆ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದನ್ನು ನೆನಪಿಸಿಕೊಂಡ ಸಚಿವರು ಇಂದು ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ ಮೊದಲ ವಾರ್ಷಿಕೋತ್ಸವ. ಇನ್ನು ಇದೇ ದಿನ ಸಚಿವನಾಗಿ ವಿಶ್ವವಿದ್ಯಾಲಯದಲ್ಲಿ ಸನ್ಮಾನ ಸ್ವೀಕರಿಸುತ್ತಿದ್ದೇನೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

  • ‘ಬಿಜೆಪಿ ಸರ್ಕಾರದಲ್ಲಿ ಇಬ್ಬರು ಸಿಎಂ’- ಸಿದ್ದು ಹೇಳಿಕೆಗೆ ಸಚಿವ ಬಿಸಿ ಪಾಟೀಲ್ ತಿರುಗೇಟು

    ‘ಬಿಜೆಪಿ ಸರ್ಕಾರದಲ್ಲಿ ಇಬ್ಬರು ಸಿಎಂ’- ಸಿದ್ದು ಹೇಳಿಕೆಗೆ ಸಚಿವ ಬಿಸಿ ಪಾಟೀಲ್ ತಿರುಗೇಟು

    ಕೊಪ್ಪಳ: ಬಿಜೆಪಿ ಸರ್ಕಾರದಲ್ಲಿ ಇಬ್ಬರು ಸಿಎಂ ಇದ್ದಾರೆ ಎಂಬ ಮಾಜಿ ಸಿದ್ದರಾಮಯ್ಯ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಕೃಷಿ ಸಚಿವ ಬಿಸಿ ಪಾಟೀಲ್ ಅವರು, ಸಿದ್ದರಾಮಯ್ಯ ಅವರ ಕಾಲದಲ್ಲೂ ಇಬ್ಬರು ಸಿಎಂ ಇದ್ದರು. ಒಬ್ಬರು ಸಿದ್ದರಾಮಯ್ಯ ಆದರೆ ಮತ್ತೊಬ್ಬರು ರಾಕೇಶ್ ಆಗಿದ್ದರು ಎಂದು ಹೇಳಿದ್ದಾರೆ.

    ಕೊಪ್ಪಳದಲ್ಲಿ ಮಾತನಾಡಿದ ಬಿಸಿ ಪಾಟೀಲ್ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಿ ಕೆಂಪಯ್ಯ ಕೂಡ ಹೋಂ ಮಿನಿಸ್ಟರ್ ಆಗಿದ್ದರು. ಆದರೆ ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಯಾವತ್ತು ವಿಜಯೇಂದ್ರ ಹಸ್ತಕ್ಷೇಪ ಮಾಡಿಲ್ಲ. ಕೇವಲ ಇದು ಸಿದ್ದರಾಮಯ್ಯ ಅವರು ಮಾಡಿರುವ ರಾಜಕೀಯ ಆರೋಪ. ಚುನಾವಣೆ ಸಮಯದಲ್ಲಿ ಹೆಂಡತಿ, ಮಕ್ಕಳು ಸಂಬಂಧಿಕರು ದುಡಿಯುತ್ತಾರೆ. ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ಮೇಲೆ ಅವರನ್ನು ದೂರ ಮಾಡೋಕ್ಕಾಗುತ್ತಾ? ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನಡೆಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಸಮ್ಮಿಶ್ರ ಸರ್ಕಾರ ಬೀಳಲು ಅವರೇ ಕಾರಣ ಎಂದು ಕಿಡಿಕಾರಿದ್ರು.

    ಕಾಮನ್ ಸೆನ್ಸ್, ಸಾಮಾನ್ಯ ಜ್ಞಾನ ಇರಬೇಕು: ಇದೇ ವೇಳೆ ಕೊರೊನಾ ಸೋಂಕು ನಿಯಂತ್ರಣದ ಕುರಿತು ಸರ್ಕಾರದ ವಿರುದ್ಧ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೊರೊನಾ ಬಗ್ಗೆ ತಿಳಿದುಕೊಳ್ಳಲು ಬರಿ ಕಾಮನ್ ಸೆನ್ಸ್ ಇದ್ದರೆ ಸಾಲದು. ಜೊತೆಗೆ ಸಾಮಾನ್ಯ ಜ್ಞಾನ ಕೂಡ ಇರಬೇಕು. ಕೊರೊನಾ ಮಾಹಿತಿಗಾಗಿ ಪಿಎಚ್‍ಡಿ ಮಾಡಬೇಕೆಂದಿಲ್ಲ. ಕಾಮನ್ ಸೆನ್ಸ್ ಸಾಕು ಎಂದು ಟೀಕೆಗಳಿಗೆ ಟಾಂಗ್ ನೀಡಿದರು.

    ಇಡೀ ಜಗತ್ತಿನಲ್ಲಿ ಕೊರೊನಾ ಕೇಸ್‍ಗಳು ಹೆಚ್ಚಿರುವುದು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರ ಇಟಲಿ ದೇಶದಲ್ಲಿ. ಅತ್ಯಂತ ಕಡಿಮೆ ಕೊರೊನಾ ಕೇಸ್‍ಗಳು ಪತ್ತೆಯಾಗುತ್ತಿರುವ ಬೃಹತ್ ಜನಸಂಖ್ಯೆ ಹೊಂದಿರುವ ಭಾರತದಲ್ಲಿ. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಜ್ಯದ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದಾರೆ ಎಂದರು.

    ಕೊಪ್ಪಳದಲ್ಲಿ ಪ್ರಾಯೋಗಿಕವಾಗಿ 55 ಸ್ಯಾಂಪಲ್ ಪರೀಕ್ಷೆಯನ್ನು ಮಾಡಲಾಗಿದೆ. 55 ಸ್ಯಾಂಪಲ್ ಟೆಸ್ಟ್ ನೆಗೆಟಿವ್ ಬಂದಿದೆ. ಈಗ ಕೋವಿಡ್ ಟೆಸ್ಟ್ ಇಲ್ಲಿಯೇ ನಡೆಯುತ್ತದೆ. ಇದಕ್ಕೂ ಮುನ್ನ ಬಳ್ಳಾರಿ, ಬೆಂಗಳೂರು ಟೆಸ್ಟ್ ಕಳುಹಿಸಲಾಗುತ್ತಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಇಲ್ಲಿ ಲ್ಯಾಬ್ ಮಾಡಲಾಗಿದೆ ಎಂದರು. ಇದೇ ವೇಳೆ ಸ್ಥಳೀಯ ಶಾಸಕರು ಕಾರ್ಯಕ್ರಮಕ್ಕೆ ಗೈರ ಹಾಜರಿ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸ್ಥಳೀಯ ಶಾಸಕರಿಗೆ ಇವತ್ತಿನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಗಿತ್ತು. ಆದರೆ ಯಾವುದೇ ಸಮನ್ವಯದ ಕೊರತೆ ಇಲ್ಲ ಎಂದರು.

  • ರಾಜ್ಯಕ್ಕೆ ಮಿಡತೆ ಬರುವ ಸಾಧ್ಯತೆ ಕಡಿಮೆ- ರೈತರಿಗೆ ಧೈರ್ಯ ತುಂಬಿದ ಸಚಿವ ಬಿಸಿ ಪಾಟೀಲ್

    ರಾಜ್ಯಕ್ಕೆ ಮಿಡತೆ ಬರುವ ಸಾಧ್ಯತೆ ಕಡಿಮೆ- ರೈತರಿಗೆ ಧೈರ್ಯ ತುಂಬಿದ ಸಚಿವ ಬಿಸಿ ಪಾಟೀಲ್

    ಬೆಂಗಳೂರು: ಪಾಕಿಸ್ತಾನದ ಮೂಲಕ ದೇಶದ ವಿವಿಧ ರಾಜ್ಯಗಳಲ್ಲಿ ದಾಳಿ ನಡೆಸುತ್ತಿರುವ ಆಫ್ರಿಕನ್ ಮಿಡತೆಯ ಬಗ್ಗೆ ರಾಜ್ಯದ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಧೈರ್ಯ ತುಂಬಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಾಳಿಯ ವಿರುದ್ಧ ದಿಕ್ಕಿಗೆ ಆಫ್ರಿಕನ್ ಮಿಡತೆ ಸಂಚರಿಸುವುದಿಲ್ಲ. ಮುಂದಿನ 8 ದಿನಗಳ ಕಾಲ ಗಾಳಿ ಉತ್ತರ ಭಾಗದತ್ತ ತಿರುಗಲಿದೆ. ಆದ್ದರಿಂದ ರಾಜ್ಯಕ್ಕೆ ಮಿಡತೆ ಬರುವ ಸಾಧ್ಯತೆ ಕಡಿಮೆ. ಉತ್ತರದಲ್ಲಿ ಬೀಸುತ್ತಿರುವ ಬಿಸಿ ಗಾಳಿ ಕರ್ನಾಟಕದತ್ತ ಬರೋದಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಈಶಾನ್ಯದಿಂದ ನೈರುತ್ಯ ಭಾಗಕ್ಕೆ ಗಾಳಿ ಬೀಸುತ್ತಿದೆ. ಹೀಗಾಗಿ ಶೇಕಡಾ 99 ರಷ್ಟು ಭಾಗ ಮಿಡತೆ ಕರ್ನಾಟಕಕ್ಕೆ ಪ್ರವೇಶ ಮಾಡುವ ಸಾಧ್ಯತೆ ಇಲ್ಲ. ರಾಜ್ಯದ ರೈತರು ಈ ಕುರಿತು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

    ಜಿಲ್ಲಾ ಮಟ್ಟದ ಕೃಷಿ ಸಮಿತಿಗೆ ಈ ಬಗ್ಗೆ ಎಲ್ಲಾ ಸೂಚನೆ ನೀಡಿದ್ದೇವೆ. ಅಗ್ನಿ ಶಾಮಕ ಇಲಾಖೆ ಹಾಗೂ ಡ್ರೋನ್ ಮೂಲಕ ಕೀಟನಾಶಕ ಸಿಂಪಡಣೆಗೆ ತಯಾರಿ ನಡೆಸಿದ್ದೇವೆ. ಕೃಷಿ ನಿರ್ದೇಶಕರು ಹಾಗೂ ತೋಟಗಾರಿಕಾ ನಿರ್ದೇಶಕರ ನೇತೃತ್ವದಲ್ಲಿ ಉನ್ನತ ಮಟ್ಟದ ತಂಡ ರಚಿಸಲಾಗಿದೆ. ಈ ತಂಡ ಕೊಪ್ಪಳ ಯಾದಗಿರಿ ಬೀದರ್, ರಾಯಚೂರಿಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಲಿದೆ ಎಂದು ವಿವರಿಸಿದರು. ಇದನ್ನು ಓದಿ:  2 ದಿನದಲ್ಲಿ ಬೀದರ್‌ಗೆ ಮಿಡತೆ ಸೈನ್ಯ ಎಂಟ್ರಿ – ದಾಳಿ ತಡೆಯಲು ಏನೆಲ್ಲ ಕ್ರಮಕೈಗೊಳ್ಳಲಾಗಿದೆ?

    ಭಾರತ ಸರ್ಕಾರದ ಸಂಶೋಧನಾ ಕೇಂದ್ರದಲ್ಲಿ ಮಿಡತೆಗಳ ದಾಳಿ ಕುರಿತಂತೆ ಹೆಚ್ಚಿನ ಸಂಶೋಧನೆಗಳು ನಡೆಯಲಿವೆ. ರೈತರು ಕೂಡ ಕೀಟಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬಹುದು. ರಾಜ್ಯ ಸರ್ಕಾರ ಮಹಾರಾಷ್ಟ್ರ ಸಹಭಾಗಿತ್ವದಲ್ಲಿ ಚರ್ಚೆ ನಡೆಸಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಸದ್ಯ ಉತ್ತರದಲ್ಲಿ ದಾಳಿ ನಡೆಸಿರುವ ಮಿಡತೆಗಳು ದಕ್ಷಿಣ ಆಫ್ರಿಕಾದಿಂದ ಬಂದಿದೆ. ಒಂದು ಮಿಡತೆ ದಿನಕ್ಕೆ ಒಂದು ಗ್ರಾಂ ನಿಂದ ಎರಡು ಗ್ರಾಂ ಆಹಾರ ತಿನ್ನುತ್ತೆ. ಸಂಜೆ 4 ರಿಂದ 7 ಗಂಟೆವರೆಗೂ ಮಾತ್ರ ಆಹಾರ ತಿನ್ನುತ್ತವೆ. ಕ್ಲೋರೋಫೈಪಾಸ್ ಮಿಡತೆ ಹಾವಳಿ ತಡೆಗೆ ಔಷಧಿಯಾಗಿದೆ. ಇದನ್ನ ಬೆಳೆಗಳಿಗೆ ಸಿಂಪಡಣೆ ಮಾಡಿ ರೈತರು ಮಿಡತೆ ದಾಳಿಯನ್ನು ತಡೆಯಬಹುದು. ಅಲ್ಲದೇ ಲಾಂಡಾಸಾಹಲೋತ್ರಿನ್ ಎಂಬ ಔಷಧಿಯನ್ನು ಸಹ ಸಿಂಪಡಣೆ ಮಾಡಬಹುದು. 200 ಕೋಟಿ ಹಣವನ್ನು ಕೀಟನಾಶಕಕ್ಕೆ ಬಳಸಿಕೊಳ್ಳಬಹುದು ಎಂದು ಕೇಂದ್ರ ಹೇಳಿದೆ ಎಂದು ಮಾಹಿತಿ ನೀಡಿದರು. ಇದನ್ನು ಓದಿ: ಉತ್ತರ ಭಾರತ, ಮಹಾರಾಷ್ಟ್ರ ಆಯ್ತು, ಈಗ ಕರ್ನಾಟಕಕ್ಕೂ ಮಿಡತೆ ಆತಂಕ

  • ಹೂವು ಬೆಳೆಗಾರರಿಗೆ ಮಾತ್ರ ಪರಿಹಾರ!- ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟನೆ

    ಹೂವು ಬೆಳೆಗಾರರಿಗೆ ಮಾತ್ರ ಪರಿಹಾರ!- ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟನೆ

    ಮಡಿಕೇರಿ: ರೈತರಿಗೆ ಬಡ್ಡಿ ರಹಿತ ಸಾಲ ಮರುಪಾವತಿ ಅವಧಿಯನ್ನು ವಿಸ್ತರಿಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

    ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಈಗಾಗಲೇ ಬಡ್ಡಿ ರಹಿತ ಸಾಲ ಮರುಪಾವತಿ ಅವಧಿ ಮುಗಿದು ಹೋಗಿದೆ. ಆದರೆ ಲಾಕ್‍ಡೌನ್ ಕಾರಣ ರೈತರಿಗೆ ಅನುಕೂಲ ಆಗಬೇಕೆಂಬ ದೃಷ್ಠಿಯಿಂದ ಅವಧಿ ವಿಸ್ತರಿಸಲಾಗಿದೆ. ಸಾಲ ಮಾಡಿರುವ ರೈತರಿಗೆ ಯಾವುದೇ ಕಾರಣಕ್ಕೂ ಬ್ಯಾಂಕ್‍ಗಳು ಕಿರುಕುಳ ನೀಡಬಾರದು ಎಂದರು.

    ಲಾಕ್ ಡೌನ್ ಸಂದರ್ಭದಲ್ಲಿ ತರಕಾರಿ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ ಎನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಮುಖ್ಯಮಂತ್ರಿಗಳು ಹೂವು ಬೆಳೆಗಾರರ ಸಮೀಕ್ಷೆ ಮಾಡಿ ಅವರಿಗೆ ಪರಿಹಾರ ನೀಡಲು ಚಿಂತಿಸಿದ್ದಾರೆ. ಇಂದು ವಿಶ್ವವೇ ಕೋವಿಡ್ ಸಮಸ್ಯೆಯಲ್ಲಿರುವುದರಿಂದ ಯಾವುದೇ ಕಾರ್ಯಕ್ರಮಗಳು, ಸಮಾರಂಭಗಳು ಇಲ್ಲ. ಹೀಗಾಗಿ ತರಕಾರಿ ಬೆಳೆಗಾರರು ಸರ್ಕಾರದೊಂದಿಗೆ ಕೈ ಜೋಡಿಸಿ ಸಹಕಾರ ನೀಡಬೇಕು ಎಂದರು.

    ಮಳೆಗಾಲ ಆರಂಭವಾಗುತ್ತಿದ್ದು, ಸರ್ಕಾರವೂ ರೈತರಿಗೆ ಬಿತ್ತನೆ ಬೀಜ ಗೊಬ್ಬರ ಸೇರಿದಂತೆ ಎಲ್ಲವನ್ನೂ ಪೂರೈಸಲು ಸಿದ್ಧವಿದೆ. ಅಲ್ಲದೆ ರೈತರಿಗೆ ಕಿಸಾನ್ ಕಾರ್ಡ್ ಕೊಡಲು ಸಿದ್ಧತೆ ನಡೆಸಿದ್ದು ಅದರಲ್ಲಿ ರೈತರ ಎಲ್ಲಾ ಮಾಹಿತಿಯೂ ಇರಲಿದೆ. ಇದರಿಂದ ರೈತರಿಗೆ ಎಲ್ಲಾ ಸೌಲಭ್ಯ ಒದಗಿಸಲು ಅನುಕೂಲವಾಗಲಿದೆ ಎಂದಿದ್ದಾರೆ. ಇದಕ್ಕೂ ಮೊದಲು ಮಡಿಕೇರಿಯಲ್ಲಿ ಕೃಷಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ರೈತ ಮುಖಂಡರೊಂದಿಗೆ ಸಭೆ ನಡೆಸಿ, ಜಿಲ್ಲೆಯ ರೈತರ ಸಮಸ್ಯೆಗಳನ್ನು ಆಲಿಸಿದ್ರು. ಜಿಲ್ಲೆಯ ರೈತರಿಗೆ ಅಗತ್ಯವಿರುವ ಕೃಷಿ ಪರಿಕರಗಳು, ಸಬ್ಸಿಡಿ ಸಹಾಯಗಳ ಕುರಿತು ಚರ್ಚಿಸಿದರು.