ಮಂಗಳೂರು: ನಗರದ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಅಂತಿಮ ದಿನದಂದು ಸಂಸದೆ ಶೋಭಾ ಕರಂದ್ಲಾಜೆ ಸ್ವಯಂಸೇವಕರಾಗಿ ಕಾಣಿಸಿಕೊಂಡಿದ್ದಾರೆ.
ಲೋಕಸಭೆ ಚುನಾವಣೆಯ ಅವಸರದ ಮಧ್ಯೆ ಪೊಳಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂಸದೆ ಶೋಭಾ ಅವರು ಅಲ್ಲಿನ ಪಾಕಶಾಲೆಗೆ ಭೇಟಿ ನೀಡಿ ಸ್ವಯಂಸೇವಕರ ಜೊತೆ ಬೆರೆತರು. ಬಳಿಕ ತರಕಾರಿ ಹೆಚ್ಚುತ್ತಿದ್ದ ಮಹಿಳೆಯರ ಜೊತೆಗೆ ತಾವೇ ತರಕಾರಿಗಳನ್ನು ಹೆಚ್ಚಿದರು. ಕೆಲಹೊತ್ತು ಮಹಿಳೆಯರ ಜೊತೆ ಹರಟಿದ ಶೋಭಾ ಮತ್ತವರ ತಂಡವು ಬಳಿಕ ದೇವರ ದರ್ಶನ ಮಾಡಿ, ಉಪಹಾರ ಸೇವಿಸಿ ನಿರ್ಗಮಿಸಿದರು.
ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ನಡೆಯುತ್ತಿರುವ ಬ್ರಹ್ಮಕಲಶೋತ್ಸವಕ್ಕೆ ಇಂದು ಕೊನೆಯ ದಿನ. ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಅವರು ಪೊಳಲಿ ಕ್ಷೇತ್ರಕ್ಕೆ ಮೊನ್ನೆ ಭೇಟಿ ನೀಡಿದ್ದರು. ಆಗ ಸಂಸದೆ ಶೋಭಾ ಅವರು ಕೂಡ ಇದ್ದರು. ಆದರೆ ಶೋಭಾ ಕರಂದ್ಲಾಜೆ ಅವರು ಇಂದು ಮತ್ತೆ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ರಾಜರಾಜೇಶ್ವರಿಯ ದರ್ಶನ ಭಾಗ್ಯ ಪಡೆದರು.
ಬ್ರಹ್ಮಕಲಶೋತ್ಸವದ ನಿಮಿತ್ತ ದಿನವೂ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ ಪಾಕಶಾಲೆಯಲ್ಲಿ ನಿರಂತರವಾಗಿ ಊಟ, ಉಪಹಾರ ಸಿದ್ಧಪಡಿಸುವ ಕಾರ್ಯ ಮಾಡಲಾಗುತ್ತಿದೆ. ಈ ವೇಳೆ ಸಂಸದೆ ಶೋಭಾ ಅವರು ಸ್ವಯಂಸೇವಕಿಯಾಗಿ ಕೆಲಸ ಮಾಡಿದ್ದು ಗಮನ ಸೆಳೆಯಿತು.
ಉಡುಪಿ: ಲೋಕೋಪಯೋಗಿ ಸಚಿವ ರೇವಣ್ಣ, ಸುಮಲತಾ ಅಂಬರೀಶ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದು ಅಕ್ಷಮ್ಯ. ಅವರು ಕೂಡಲೇ ಅವರು ಕ್ಷಮೆ ಕೇಳಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಮಲತಾ ಮೂರು ದಶಕದಿಂದ ಮಂಡ್ಯದ ಮಗಳು. ಅವರಿಗೆ ಈಗ ಅಂಬರೀಶ್ ಅವರಂತೆ ಜನಸೇವೆ ಮಾಡುವ ಮನಸ್ಸಾಗಿದೆ. ಸಚಿವ ರೇವಣ್ಣ ಜವಾಬ್ದಾರಿಯುತ ರಾಜಕಾರಣಿಯಾಗಿ ಈ ರೀತಿ ಹಗುರವಾಗಿ ಮಾತನಾಡಿರುವುದು ಅಕ್ಷಮ್ಯ. ಅಂಬರೀಶ್ ಸಾಯಲು ಸುಮಲತಾ ಕಾರಣವಲ್ಲ. ಈ ಹಿಂದೆ ಅಂಬರೀಶ್ ಅವರು ಕಾವೇರಿ ವಿಚಾರಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದರು. ಅಂತಹ ವ್ಯಕ್ತಿಯ ಪತ್ನಿ ಬಗ್ಗೆ ಕೀಳಾಗಿ ಮಾತನಾಡಿದ್ದು ಸರಿಯಲ್ಲ ಎಂದರು.
ಗಂಡ ಸತ್ತವರು ರಾಜಕೀಯಕ್ಕೆ ಬರಲು ಇಷ್ಟೇ ದಿನ ಆಗಬೇಕಾಗಿಲ್ಲ. ಅವರು ರಾಜಕಾರಣಿಯಾಗಿ ಜನಸೇವೆ ಮಾಡುತ್ತಾ ತಮ್ಮ ದುಃಖ ಮರೆಯುವ ಪ್ರಯತ್ನದಲ್ಲಿದ್ದಾರೆ. ಸಮಾಜಸೇವೆಗೆ ಬರುವ ಹೆಣ್ಣು ಮಕ್ಕಳ ಬಗ್ಗೆ ಹೀಗೆಲ್ಲಾ ಮಾತನಾಡಿದ್ದು ಸರಿಯಲ್ಲ. ಅದ್ದರಿಂದ ರೇವಣ್ಣ ಅವರು ಕೂಡಲೇ ಕ್ಷಮೆ ಯಾಚಿಸಲಿ. ಗಂಡ ಕಳೆದುಕೊಂಡ ನೋವಲ್ಲಿರುವವರಿಗೆ ಮತ್ತೆ ನೋವು ಕೊಡಬೇಡಿ. ಅದು ಕೂಡ ಮಹಿಳಾ ದಿನಾಚರಣೆ ದಿನ ರೇವಣ್ಣ ಅವರು ಹೀಗೆ ಮಾತನಾಡಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಮಲತಾ ಸ್ಪರ್ಧೆ ಮಾಡುವ ಬಗ್ಗೆ ಪಕ್ಷದ ನಾಯಕರು ಸ್ಪಷ್ಟಪಡಿಸಿದ್ದು, ಅವರು ಪಕ್ಷೇತರವಾಗಿ ನಿಂತರೆ ಬಿಜೆಪಿ ಬೆಂಬಲ ನೀಡುತ್ತದೆ. ಆದರೆ ಈಗ ಸುಮಲತಾ ಅವರು ಕಾಂಗ್ರೆಸ್ ಮನೆಯ ರಾಜಕಾರಣಿ. ಅವರು ಬಿಜೆಪಿಗೆ ಬಂದರೆ ಸ್ವಾಗತ ಮಾಡುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇಶದಲ್ಲಿ ಕಾಂಗ್ರೆಸ್ ಸೋಲುವ ಭೀತಿಯಲ್ಲಿದೆ. ಹೀಗಾಗಿ ಕೀಳು ರಾಜಕಾರಣಕ್ಕೆ ಕಾಂಗ್ರೆಸ್ ಇಳಿದಿದೆ. ದೇಶದ ಸೈನಿಕರಿಗೆ ಅವರನ್ನು ಅವಮಾನ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬರಲ್ಲ ಎಂದು ಗೊತ್ತಿದ್ದು ನಾಯಕರು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ದೇಶದ ವಿರುದ್ಧವಾಗಿ ಮಾತನಾಡಿದವರಿಗೆ ಕಾಂಗ್ರೆಸ್ ಪಕ್ಷ ಇದುವರೆಗೂ ಶಿಕ್ಷೆ ಕೊಟ್ಟಿಲ್ಲ. ಇಷ್ಟೆಲ್ಲಾ ಮಾತನಾಡುವ ನೀವು ಪುಲ್ವಾಮಾ ಘಟನೆ ಬಗ್ಗೆ ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್ ವಿರುದ್ಧ ಕಿಡಿಕಾರಿದರು.
ಮುಸಲ್ಮಾನರು ಒಪ್ಪಿದ್ರೆ ಎಲ್ಲ ಸಮಸ್ಯೆ ಬಗೆ ಹರಿಯುತ್ತೆ: ಮುಸಲ್ಮಾನರು ರಾಮ ಮಂದಿರ ನಿರ್ಮಾಣಕ್ಕೆ ಒಪ್ಪಿಗೆ ನೀಡಲಿ. ಆಗ ಎಲ್ಲಾ ಸಮಸ್ಯೆ ಬಗೆ ಹರಿದು, ಹಿಂದುಗಳ ಕನಸು ನನಸಾಗುತ್ತದೆ. ರಾಮಮಂದಿರ ವಿವಾದ ಸುಪ್ರೀಂ ಆದೇಶದಂತೆ ಸಂಧಾನದಲ್ಲೇ ಬಗೆಹರಿಯಲಿ. ಅಯೋಧ್ಯೆಯ ರಾಮಮಂದಿರ ವಿಚಾರವನ್ನು ನಾವು ಚುನಾವಣೆಗೆ ಬಳಸಲ್ಲ. ಅಯೋಧ್ಯೆ ಭಕ್ತಿಯ ಶ್ರದ್ಧಾಕೇಂದ್ರ. ಈ ಬಗ್ಗೆ ನ್ಯಾಯಾಲಯ ನೀಡಿದ ಆದೇಶಕ್ಕೆ ತಲೆಬಾಗುತ್ತೇವೆ. ಎಂಟು ವಾರದ ಗಡುವಿನಲ್ಲಿ ಏನಾಗುತ್ತೋ ಗೊತ್ತಿಲ್ಲ. ಮಾತುಕತೆ ಪ್ರಯತ್ನದಿಂದ ಸಮಸ್ಯೆ ಬಗೆಹರಿದರೆ ಸಂತಸ ಎಂದರು.
2014 ರಲ್ಲಿ ಮೋದಿ ಅವರು ಜನತೆಯ ಮುಂದಿಟ್ಟ ನಾಲ್ಕು ಭರವಸೆ ಈಡೇರಿದೆ. ಇನ್ನೆರಡು ದಿನಗಳಲ್ಲಿ ಚುನಾವಣೆ ಘೋಷಣೆ ಆಗಲಿದೆ. 2014 ರಲ್ಲಿ ನೀಡಿರುವ ಭರವಸೆಯಂತೆ ಭ್ರಷ್ಟಾಚಾರ ರಹಿತ, ಅಭಿವೃದ್ಧಿ, ಸ್ವಚ್ಛತೆ, ವಿದೇಶಾಂಗ ನೀತಿ, ಕೃಷಿ ಸಹಿತ ರಕ್ಷಣೆ ಒತ್ತು ಕೊಟ್ಟಿದ್ದೇವೆ. ದೇಶದ ಸೈನಿಕರು ಮೋದಿ ಸರ್ಕಾರದ ಆಡಳಿತ ಮೆಚ್ಚಿದ್ದಾರೆ. ಒನ್ ರಾಂಕ್ ಒನ್ ಪೆನ್ಶನ್ ನಂತರ ಸೈನಿಕರು ಖುಷಿಯಲ್ಲಿದ್ದಾರೆ ಎಂದರು.
ರಾಜ್ಯ ಸರ್ಕಾರ ಕೇಂದ್ರದ ಅನುದಾನ ಬಿಡುಗಡೆಯೇ ಮಾಡಿಲ್ಲ. ಟೆಂಡರ್ ಕರೆಯದೆ ಕೋಟಿ ಕೋಟಿ ರೂ. ಹಣ ನೆನೆಗುದಿಗೆ ಬಿದ್ದಿದೆ. ರಾಜ್ಯದಲ್ಲಿ ಅತೀ ಹೆಚ್ಚು ಅನುದಾನ ಉಡುಪಿ-ಚಿಕ್ಕಮಗಳೂರಿಗೆ ಬಂದಿದೆ. ರಸ್ತೆ, ಪಾಸ್ ಪೋರ್ಟ್, ಸಖಿ ಸೆಂಟರ್ ಸ್ಥಾಪನೆಯಾಗಿದೆ ತಮ್ಮ ಐದು ವರ್ಷದ ರಿಪೋಟ್ ಕಾರ್ಡನ್ನು ತೆರೆದಿಟ್ಟರು.
ಬೆಂಗಳೂರು: ಯಲಹಂಕ ಏರ್ ಶೋದಲ್ಲಿ ನಡೆದ ಅಗ್ನಿ ಅವಘಡಕ್ಕೆ ರಾಜ್ಯ ಸರ್ಕಾರವೇ ಕಾರಣವಾಗಿದ್ದು, ಸರ್ಕಾರ ತನ್ನ ಜವಾಬ್ದಾರಿ ನಿರ್ವಹಣೆಯನ್ನು ಮಾಡಲು ವಿಫಲವಾಗಿದೆ. ಒಬ್ಬ ಸಂಸದರಾಗಿ ಶೋಭಾ ಕರಂದ್ಲಾಜೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕಿದೆ ಎಂದು ಆಗ್ರಹಿಸಿದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಸ್ವೈ ಅವರು, ಏರ್ ಶೋ ಒಂದು ಅಂತರಾಷ್ಟ್ರಿಯ ಕಾರ್ಯಕ್ರಮ. ಇಂತಹ ಕಾರ್ಯಕ್ರಮಕ್ಕೆ ಸೌಲಭ್ಯ ನೀಡಲು ರಾಜ್ಯ ಸರ್ಕಾರ ವಿಫಲವಾಗಿದೆ. ಕಾರ್ಯಕ್ರಮದಲ್ಲಿ ಸೂಕ್ತ ವ್ಯವಸ್ಥೆ ಮಾಡಲು ಸರ್ಕಾರ ನಿರ್ಲಕ್ಷ್ಯ ವಹಿಸಿದ ಕಾರಣ ಸಿಎಂ ಎಚ್ಡಿಕೆ ಹಾಗೂ ಗೃಹ ಸಚಿವರು ಜವಾಬ್ದಾರಿ ತೆಗೆದುಕೊಳ್ಳಬೇಕು. ಅಂತರಾಷ್ಟ್ರಿಯ ಕಾರ್ಯಕ್ರಮದಲ್ಲಿ ಇಂತಹ ದೊಡ್ಡ ಅವಘಡ ನಡೆದರೆ ದೇಶದ ಹೆಸರಿಗೆ ಕಳಂಕ ಆಗುತ್ತದೆ ಎಂದು ಕನಿಷ್ಠ ಮುನ್ನೆಚ್ಚರಿಕೆ ಆದರೂ ವಹಿಸಬೇಕಿತ್ತು ಎಂದರು.
ಗೃಹ ಸಚಿವರಾದ ಎಂಬಿ ಪಾಟೀಲ್ ಅವರು ಪ್ರತಿಕ್ರಿಯೆ ನೀಡಿ ಕಾರುಗಳು ಮಾತ್ರ ಸುಟ್ಟಿದೆ. ಸಾವು ನೋವು ಸಂಭವಿಸಿಲ್ಲ ಎಂದು ಹೇಳುವ ಮೂಲಕ ಬೇಜಾಬ್ದಾರಿ ಹೇಳಿಕೆ ನೀಡಿದ್ದಾರೆ. ಅದ್ದರಿಂದ ಅವರು ಕೂಡಲೇ ಜನರ ಕ್ಷಮೆ ಕೋರಬೇಕು ಎಂದರು. ಅಲ್ಲದೇ ಪಾರ್ಕಿಂಗ್ ಸ್ಥಳಕ್ಕೆ ಎನ್ಒಸಿ ಕೊಟ್ಟ ಬಗ್ಗೆ ಹಾಗೂ ಸೂಕ್ತ ಮುನ್ನೆಚ್ಚರಿಕಾ ತೆಗೆದುಕೊಳ್ಳದ ಕುರಿತು ತನಿಖೆ ಆಗಲಿ. ಘಟನೆ ವೇಳೆ ಕಾರಿನಲ್ಲಿದ ಪ್ರಮುಖ ದಾಖಲೆಗಳು ಸುಟ್ಟ ಭಸ್ಮವಾಗಿದೆ. ರಾಜ್ಯ ಪೊಲೀಸ್ ಇಲಾಖೆಯೂ ಕಾರ್ಯಕ್ರಮಕ್ಕೆ ಸೂಕ್ತ ವ್ಯವಸ್ಥೆ ನೀಡಲು ವಿಫಲವಾಗಿದೆ. ಸಿಎಂ ಎಚ್ಡಿಕೆ ಅವರು ಏರ್ ಶೋ ಬೆಂಗಳೂರಿನಲ್ಲಿ ಮಾಡಬೇಕೆಂದು ಎಂದು ಹೇಳಿದ್ದರು. ಆದರೆ ಇಂತಹ ಕಾರ್ಯಕ್ರಮದಲ್ಲೇ ಇಂತಹ ಅವಘಡ ನಡೆದರೆ ಹೇಗೆ ಎಂದು ಪ್ರಶ್ನಿಸಿದರು.
ಹುಟ್ಟು ಹಬ್ಬದ ಆಚರಣೆ ಇಲ್ಲ:
ಇದೇ ತಿಂಗಳು 27 ರಂದು ನನ್ನ ಹುಟ್ಟಹಬ್ಬ ಇದ್ದು, ಸಿದ್ದಗಂಗಾ ಶ್ರೀಗಳು ಹಾಗೂ ಪುಲ್ವಾಮಾ ದಾಳಿಯಲ್ಲಿ ಯೋಧರು ಹುತಾತ್ಮರಾಗಿರುವ ಹಿನ್ನೆಲೆಯಲ್ಲಿ ಹುಟ್ಟಹಬ್ಬ ಮಾಡಿಕೊಳ್ಳದಿರಲು ನಿರ್ಧಾರ ಮಾಡಿದ್ದೇನೆ. ಆ ದಿನ ಚಿತ್ರದುರ್ಗದಲ್ಲಿ ಪಕ್ಷದ ಕಾರ್ಯಕ್ರಮ ಇದ್ದು, ಅಲ್ಲಿ ತೆರಳಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ನನ್ನ ಪರವಾಗಿ ಯಾವುದೇ ಅಭಿಮಾನಿಗಳು ಕೂಡ ಸಂಭ್ರಮಾಚರಣೆ ಮಾಡದಿರಲು ಮನವಿ ಮಾಡುತ್ತೇನೆ ಎಂದು ಬಿಎಸ್ವೈ ಹೇಳಿದರು.
ನವದೆಹಲಿ: ಸಂಸದೆ ಶೋಭಾ ಕರಂದ್ಲಾಜೆ ಅವರ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿರುವ ಖದೀಮರು 20 ಲಕ್ಷ ರೂ. ಎಗರಿಸಿದ್ದಾರೆ.
ಪಾರ್ಲಿಮೆಂಟ್ನ ಎಸ್ಬಿಐ ಬ್ಯಾಂಕ್ನಲ್ಲಿ ಶೋಭಾ ಕರಂದ್ಲಾಜೆ ಅವರು ಸ್ಯಾಲರಿ ಅಕೌಂಟ್ ಹೊಂದಿದ್ದಾರೆ. ಈ ಖಾತೆಯನ್ನು ಹ್ಯಾಕ್ ಮಾಡಿರುವ ದುಷ್ಕರ್ಮಿಗಳು 2018ರ ಡಿಸೆಂಬರ್ ನಿಂದ ನಿರಂತರವಾಗಿ ಹಣ ಡ್ರಾ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಹಣ ಡ್ರಾ ಮಾಡಿಕೊಳ್ಳುವುದು ಶೋಭಾ ಕರಂದ್ಲಾಜೆ ಅವರಿಗೆ ತಿಳಿಯದಂತೆ ಕೈಚಳಕ ತೋರಿದ್ದಾರೆ.
ಶೋಭಾ ಕರಂದ್ಲಾಜೆ ಅವರು ಪಾಸ್ಬುಕ್ ಎಂಟ್ರಿ ಮಾಡಿಸಲು ಇತ್ತೀಚೆಗೆ ಬ್ಯಾಂಕ್ಗೆ ಹೋಗಿದ್ದಾಗ ಹಣ ಡ್ರಾ ಮಾಡಿಕೊಂಡಿರುವ ಬೆಳಕಿಗೆ ಬಂದಿದೆ. ಭಾರೀ ಪ್ರಮಾಣದ ಮೊತ್ತವನ್ನು ಕಳೆದುಕೊಂಡ ಅವರು ಕೇಂದ್ರ ಸಚಿವರ ಮುಂದೆ ಅಳಲು ತೊಡಿಕೊಂಡಿದ್ದಾರೆ. ಹೀಗಾಗಿ ಖದೀಮರ ಪತ್ತೆಗಾಗಿ ಕೇಂದ್ರ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ತನಿಖೆಗೆ ಮುಗಿಯುವವರೆಗೂ ಅಕೌಂಟ್ ಹ್ಯಾಕ್ ಆಗಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಶೋಭಾ ಕರಂದ್ಲಾಜೆ ಅವರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಖಾತೆ ಹ್ಯಾಕ್ ಆಗಿರುವ ಕುರಿತು ಒಪ್ಪಿಕೊಂಡಿರುವ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಚಿಕ್ಕಮಗಳೂರು: ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಕ್ಷೇತ್ರದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಪರಸ್ಪರ ವಾಗ್ವಾದ ನಡೆಸಿ ಹೈಡ್ರಾಮ ನಡೆಸಿದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ನರಸೀಪುರ ಗ್ರಾಮದಲ್ಲಿ ನಡೆದಿದೆ.
ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಇಂದು ಶಂಕು ಸ್ಥಾಪನೆ ನಡೆಸಲು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಶಾಸಕ ಸುರೇಶ್ ಆಗಮಿಸಿದ್ದರು. ಈ ವೇಳೆ ಸಂಸದರು ಹಾಗೂ ಶಾಸಕರ ಎದುರೇ ಎರಡು ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.
ಮಾಜಿ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಶಾಸಕ ಸುರೇಶ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಪೊಲೀಸರು ಪ್ರತಿಭಟನೆಗೆ ಮುಂದಾದ ಶ್ರೀನಿವಾಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಬಂಧನ ಮಾಡಿ ಕರೆದ್ಯೊಯ್ದರು. ಇದರಿಂದ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಇತ್ತ ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರ ಹರಸಾಹಸ ಪಟ್ಟರು. ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಮಾಜಿ ಶಾಸಕ ಶ್ರೀನಿವಾಸ್ ಅವರು, ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಬರುವ ಸುಮಾರು 59 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇದ್ದ ವೇಳೆಯೇ ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಆದರೆ ಇಂದು ಬಿಜೆಪಿ ಶಾಸಕರು ಮತ್ತೆ ಶಂಕುಸ್ಥಾಪನೆ ಮಾಡಲು ಮುಂದಾಗಿದ್ದಾರೆ. ಯೋಜನೆ ಆರಂಭವಾಗಿಯೇ 6 ತಿಂಗಳು ಆಗಿದೆ ಎಂದು ಆರೋಪ ಮಾಡಿದರು.
ಉಡುಪಿ: ಮೊದಲು ನಾನು ಶ್ರೀರಾಮ ಭಕ್ತೆ ನಂತರ ಸಂಸದೆ ಎಂದು ಉಡುಪಿ, ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.
ಉಡುಪಿಯಲ್ಲಿ ನಡೆದ ರಾಮಮಂದಿರ ಜನಾಗ್ರಹ ಸಭೆಯಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ, ದೇಶದಲ್ಲಿ ಜಾತ್ಯಾತೀತತೆಯ ಹೆಸರಿನಲ್ಲಿ ಬಂದ ಸರ್ಕಾರಗಳು ರಾಮಮಂದಿರ ನಿರ್ಮಾಣ ಮಾಡಿಲ್ಲ. ಆದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಮಮಂದಿರ ನಿರ್ಮಾಣಕ್ಕೆ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಸುಪ್ರೀಂ ಕೋರ್ಟ್ ನಲ್ಲೂ ಪ್ರಯತ್ನ ಮಾಡಿದ್ದೇವೆ. ಕೇಂದ್ರ ಸರ್ಕಾರ ಸುಪ್ರೀಂ ಆದೇಶಕ್ಕಾಗಿ ಕಾಯುತ್ತಿದೆ. ರಾಮಮಂದಿರ ನಿರ್ಮಾಣ ಕುರಿತು ಇಂದು ಇಲ್ಲಿ ಸೇರಿರುವ ನಿಮ್ಮ ಭಾವನೆಯನ್ನು ಪ್ರಧಾನಿ ಮೋದಿ ಅವರಿಗೆ ಮುಟ್ಟಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡ ಕಪಿಲ್ ಸಿಬಲ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಮಮಂದಿರ ನಿರ್ಮಾಣದ ಕುರಿತು ಸುಪ್ರೀಂ ಕೋರ್ಟ್ ಅಕ್ಟೋಬರ್ 29 ರಂದು ನೀಡಬೇಕಿದ್ದ ತೀರ್ಪಿಗಾಗಿ ಕಾಯುತ್ತಿದ್ದೆವು. ಆದರೆ ಕಪಿಲ್ ಸಿಬಲ್ ಅವರು 2019ರ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಮುಂದುಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಕಳೆದ 4 ವರ್ಷಗಳಿಂದಲೂ ಕಪಿಲ್ ಸಿಬಲ್ ನೇತೃತ್ವದ ವಕೀಲರ ತಂಡ ಇದೇ ಪ್ರಯತ್ನ ನಡೆಸಿದೆ. ಪ್ರಕರಣದ ವಿಚಾರಣೆ ಮತ್ತೆ ಜನವರಿ 29ಕ್ಕೆ ಬರಲಿದ್ದು, ಈ ಕುರಿತ ತೀರ್ಪು ಏನಾಗಲಿದೆ ಎಂಬ ಭಯ ನಮ್ಮಲಿದೆ. ಡಿಸೆಂಬರ್ 11 ರಿಂದ ಲೋಕಸಭಾ ಅಧಿವೇಶನ ಆರಂಭವಾಗಲಿದ್ದು, ಈ ವೇಳೆ ರಾಮಮಂದಿರ ನಿರ್ಮಾಣದ ಚರ್ಚೆಗೆ ಪ್ರಸ್ತಾಪ ಮಾಡಲಾಗುವುದು ಎಂದು ತಿಳಿಸಿದರು.
ರಾಮಮಂದಿರ ನಿರ್ಮಾಣ ಮಾಡುವ ಕುರಿತು ಸುಗ್ರೀವಾಜ್ಞೆ ಹೊರಡಿಸಲು ಇಂದು ಇಷ್ಟು ಮಂದಿ ಸೇರಿದ್ದೀರಾ. ಒಬ್ಬ ಜನಪ್ರತಿನಿಧಿಯಾಗಿ ನಾನು ಕೂಡ ಅಧಿವೇಶನದಲ್ಲಿ ಸುಗ್ರೀವಾಜ್ಞೆ ತರಲು ಪ್ರತ್ನಿಸುತ್ತೇನೆ. ನಿಮ್ಮ ಈ ಕಾರ್ಯಕ್ಕೆ ನಮ್ಮ ಬೆಂಬಲವೂ ಇದೆ. ದೇಶದಲ್ಲಿ ನಮ್ಮ ಸರ್ಕಾರ ಬರಲು ನಿಮ್ಮ ಬೆಂಬಲ ಕಾರಣ, ನಿಮ್ಮ ಆಗ್ರಹವನ್ನು ಪ್ರಧಾನಿಗಳಿಗೆ ನನ್ನ ಮೂಲಕ ಮುಟ್ಟಿಸುತ್ತೇನೆ ಎಂದು ತಿಳಿಸಿದರು. ಇದನ್ನು ಓದಿ : `ಮುಸಲ್ಮಾನರು ಕಲಿಯುಗದ ರಾಕ್ಷಸರು’: ರಾಘವಲು ಪ್ರಚೋದನಕಾರಿ ಭಾಷಣ
ಬೆಂಗಳೂರು: ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಕನ್ನಡ ರಾಜ್ಯೋತ್ಸವ ದಿನದಂದೇ ನಾಡಿನ ಜನತೆಗೆ ಇಂಗ್ಲಿಷ್ನಲ್ಲಿ ಶುಭಾಶಯ ಕೋರಿದ್ದರು.
ಕನ್ನಡ ರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಕನ್ನಡದಲ್ಲೇ ಟ್ವೀಟ್ ಮಾಡಿ ಶುಭ ಕೋರಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಅವರು ಮೋದಿ ಅವರ ಟ್ವೀಟನ್ನು ರೀ ಟ್ವೀಟ್ ಮಾಡಿದ್ದಾರೆ. ಆದರೆ ಇದರ ನಡುವೆ ನಾಡಿನ ಜನತೆಗೆ ಶುಭಕೋರುವ ವೇಳೆ ಇಂಗ್ಲಿಷ್ನಲ್ಲಿ ಶುಭಕೋರಿದ್ದರು.
ಶೋಭಾ ಕರಂದ್ಲಾಜೆ ಅವರು ಇಲ್ಲಿಯೂ ಇಂಗ್ಲಿಷ್ ಪ್ರೇಮ ತೋರಿದ ಬಗ್ಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಶೋಭಾ ಅವರು ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಕನ್ನಡ ಜನತೆಗೆ ಇಂದು ವಿಶೇಷ ದಿನವಾಗಿದ್ದು, ರಾಜ್ಯದ ಸಂಸ್ಕೃತಿ ಹಾಗೂ ಸಂಪ್ರದಾಯಗಳ ಬಗ್ಗೆ ಹೆಮ್ಮೆ ಪಡುವ ಸಮಯವಾಗಿದೆ. ಇಂದು ನಮ್ಮ ಐತಿಹಾಸಿಕ ಪರಂಪರೆಯನ್ನು ನೆನೆಯುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ ಮಾಡೋಣ ಎಂದು ಶೋಭಾ ಕರಂದ್ಲಾಜೆ ತಮ್ಮ ಟ್ವೀಟಿನಲ್ಲಿ ಬರೆದುಕೊಂಡಿದ್ದರು.
ಪ್ರಧಾನಿ ಮೋದಿ, ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜ್ಯ, ರಾಷ್ಟ್ರದ ನಾಯಕರು ಕನ್ನಡದಲ್ಲೇ ಶುಭಾಶಯ ತಿಳಿಸಿ ಟ್ವೀಟ್ ಮಾಡಿ ನಾಡಿನ ಜನರು ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದ್ದರು. ಇದನ್ನು ಓದಿ:ರಾಜ್ಯೋತ್ಸವಕ್ಕೆ ಕನ್ನಡದಲ್ಲಿ ಶುಭಾಶಯ ತಿಳಿಸಿದ್ರು ಮೋದಿ
ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಕರ್ನಾಟಕದ ನನ್ನ ಸಹೋದರ ಸಹೋದರಿಯರಿಗೆ ಶುಭಾಶಯಗಳು. ಕರ್ನಾಟಕ ಶ್ರೀಮಂತ ಇತಿಹಾಸ ಹೊಂದಿದ್ದು, ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಪ್ರತಿಭಾವಂತರಿಗೆ ನೆಲೆಯಾಗಿದೆ. ನಾನು ರಾಜ್ಯದ ಜನರ ಸಂತೋಷ ಹಾಗೂ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ.
ಬೆಂಗಳೂರು: ನಗರದ ಹೆಚ್ಎಎಲ್ ನೌಕಕರೊಂದಿಗೆ ರಾಹುಲ್ ಗಾಂಧಿ ನಡೆಸುತ್ತಿರುವ ಸಭೆ, ಸಂವಾದ ಅನಧಿಕೃತವಾಗಿದ್ದು, ಈ ಮೂಲಕ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಗೊಂದಲ ನಿರ್ಮಾಣ ಮಾಡಲು ಆಗಮಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಅಷ್ಟೇ. ಆದರೆ ಇಂದು ನಡೆಯುವ ಸಭೆ ಅನಧಿಕೃತ ಎಂದು ಹೆಚ್ಎಎಲ್ ನೌಕರರೇ ಹೇಳಿದ್ದಾರೆ. ಅಲ್ಲದೇ ನಿಷೇಧಿತ ಪ್ರದೇಶದಲ್ಲಿ ಅವರು ಸಂವಾದ ನಡೆಸುತ್ತಿದ್ದು, ಮೀನ್ಸ್ ಸ್ಕ್ವೈಯರ್ ನಿಷೇಧಿತ ಪ್ರದೇಶ. ಇಲ್ಲಿ ಯಾವುದೇ ಪ್ರತಿಭಟನೆ, ಸಭೆ, ಸಂವಾದಗಳನ್ನ ನಡೆಸುವಂತಿಲ್ಲ ಎಂದು ಹೇಳಿದರು.
ರಾಹುಲ್ ಗಾಂಧಿ ರಫೇಲ್ ಒಪ್ಪಂದವನ್ನು ಮುಂದಿಟ್ಟುಕೊಂಡು ಸಭೆ ನಡೆಸುತ್ತಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಸಂವಾದ ನಡೆಸ್ತಿದ್ದಾರೆ? ಹೆಚ್ಎಎಲ್ ನೌಕರರ ಸಭೆ ಕರೆಯುವ ಅಧಿಕಾರ ರಾಹುಲ್ ಗಾಂಧಿಗೆ ಎಲ್ಲಿದೆ? ಈ ಸಂವಾದ ಮೂಲಕ ಭಾರತೀಯ ಸೈನ್ಯದ ಮಾನಸಿಕಯನ್ನು ಕುಗ್ಗಿಸುವ ಪ್ರಯತ್ನ ರಾಹುಲ್ ಗಾಂಧಿ ಅವರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸೈನ್ಯಕ್ಕೆ ಬೇಕಾದ ಅಗತ್ಯ ವಸ್ತುಗಳು ನಮ್ಮಲ್ಲಿ ಕಳೆದ 70 ವರ್ಷಗಳಲ್ಲಿ ಸರಿಯಾಗಿ ಪೂರೈಕೆ ಮಾಡಿಲ್ಲ. ಆದರೆ ಈಗ ಸರ್ಕಾರದ ರಫೇಲ್ ಯುದ್ಧ ವಿಮಾನ ಖರೀದಿಸಿದರೆ ಸಂಶಯ ಹುಟ್ಟು ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಈ ಹಿಂದೆ ಸೈನ್ಯಕ್ಕೆ ಬೇಕಾದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ತಡೆದವರು ಯಾರು? ದೇಶದಲ್ಲಿ ಹಾಗೂ ರಾಜ್ಯದಲ್ಲಿ ಹಲವಾರು ಕಂಪನಿಗಳು ಮುಚ್ಚಿದ ಕೀರ್ತಿ ಕಾಂಗ್ರೆಸ್ಗೆ ಸಲ್ಲಬೇಕು ಎಂದರು.
ಇದೇ ವೇಳೆ ಸಿಎಂ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧವೂ ಆರೋಪ ಮಾಡಿದ ಸಂಸದೆ, ಸಿಎಂ ತಮ್ಮ ತಪ್ಪು ಮುಚ್ಚಿಟ್ಟುಕೊಳ್ಳಲು ದಿನಕ್ಕೊಂದು ವಿಚಾರ ಹೇಳುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ತಮ್ಮ ಆಡಳಿತದ ಅರ್ಧದಷ್ಟು ಸಮಯ ದೇವಸ್ಥಾನಗಳಲ್ಲಿ ಕಳೆದಿದ್ದಾರೆ. ಬಾಕಿ ಅರ್ಧದಷ್ಟು ಸಮಯ ಕೇವಲ ಭರವಸೆ ನೀಡುವಲ್ಲಿ ಸರ್ಕಾರ ಕಳೆದಿದೆ. ಮೈತ್ರಿ ಸರ್ಕಾರದಲ್ಲಿ ಯಾವ ಮಂತ್ರಿ ಯಾವ ಖಾತೆ ನಿರ್ವಹಿಸುತ್ತಿದ್ದಾರೆ ಎಂಬುದು ಹಲವರಿಗೆ ಗೊತ್ತಿಲ್ಲ. ಎನ್ ಮಹೇಶ್ ರಾಜೀನಾಮೆ ನೀಡುವ ಪರಿಸ್ಥಿತಿ ಏಕೆ ನಿರ್ಮಾಣ ಆಯ್ತು? ಅಪವಿತ್ರ ಮೈತ್ರಿ ಎಂದು ಮಹೇಶ್ ರಾಜೀನಾಮೆ ಸ್ಪಷ್ಟಪಡಿಸಿದೆ. ಕಾಂಗ್ರೆಸ್ ದೇಶದಲ್ಲಿ ಮುಳುಗುತ್ತಿರುವ ಹಡಗು. ಮಹಾಘಟಬಂಧನ ಕರ್ನಾಟಕದಲ್ಲಿಯೇ ಹುಟ್ಟಿ ಕರ್ನಾಟಕದಲ್ಲಿಯೇ ಅಂತ್ಯ ಕಂಡಿದೆ. ರಾಹುಲ್ ಗಾಂಧಿ ತಮ್ಮ ಸಂವಾದದಲ್ಲಿ ಕರ್ನಾಟಕದಲ್ಲಿ ಏನು ಪ್ರಗತಿ ಆಗಿದೆ ಆಗಿದೆ ಎಂಬ ಬಗ್ಗೆ ಮಾತನಾಡಬೇಕು ಎಂದು ಆಗ್ರಹಿಸಿದರು.
ಬೆಂಗಳೂರು: ನಿಮ್ಮ ವ್ಯವಹಾರದ ಸೂಕ್ತ ದಾಖಲೆ ಪತ್ರಗಳು ಇದ್ದರೆ ಏಕೆ ಬಿಜೆಪಿ ಮೇಲೆ ಆರೋಪ ಮಾಡುತ್ತಿರುವಿರಿ ಎಂದು ಸಂಸದೆ ಶೋಭಾ ಕರಂದ್ಲಾಜೆ, ಸಂಸದ ಡಿ.ಕೆ.ಸುರೇಶ್ಗೆ ತಿರುಗೇಟು ಕೊಟ್ಟಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ವಾಗ್ದಾಳಿ ನಡೆಸಿರುವ ಸಂಸದೆ, ರಾಜಕೀಯ ಹಿತಾಸಕ್ತಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಸಹೋದರರು ಬಿಜೆಪಿ ನಾಯಕರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಡಿ.ಕೆ.ಸುರೇಶ್ ಅವರು ಸುಳ್ಳು ದಾಖಲೆಗಳನ್ನು ಸುದ್ದಿಗೋಷ್ಠಿಯಲ್ಲಿ ತೋರಿಸಿದ್ದಾರೆ. ಅವರಿಗೆ ಭಯ ಪ್ರಾರಂಭವಾಗಿದೆ ಎಂದು ಬರೆದು #JustAsking ಬಳಸಿ ಟ್ವೀಟ್ ಮಾಡಿದ್ದಾರೆ.
ಇಂದು ನಗರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಡಿಕೆ ಸುರೇಶ್, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ 2017ರ ಜೂನ್ 10 ರಂದು ಕೇಂದ್ರ ತೆರಿಗೆ ಇಲಾಖೆಗೆ ಡಿಕೆ ಶಿವಕುಮಾರ್ ಮತ್ತು ನನ್ನ ವಿರುದ್ಧ ಪತ್ರ ಬರೆದು ದೂರು ನೀಡಿ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ ಎಂದು ಹೇಳಿ ಬಿಎಸ್ವೈ ಬರೆದ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು.
ಬಿಜೆಪಿ ತಿರುಗೇಟು:
ಡಿಕೆ ಸಹೋದರರು ಫೋಟೋ ಶಾಪ್ ಮೂಲಕ ಪತ್ರ ರೆಡಿ ಮಾಡಿದ್ದಾರೆ. ಬಿಎಸ್ ವೈ ಮೂಲ ಲೆಟರ್ ಹೆಡ್ಗೂ ಮತ್ತು ಡಿ.ಕೆ.ಸುರೇಶ್ ಬಿಡುಗಡೆ ಮಾಡಿರುವ ಲೆಟರ್ ಹೆಡ್ಗೂ ವ್ಯತ್ಯಾಸ ಇದೆ. ಲೆಟರ್ ಹೆಡ್ ಬಲಭಾಗದ ಮೇಲ್ಭಾಗದಲ್ಲಿ ಕರ್ನಾಟಕ ಮಾಜಿ ಸಿಎಂ ಅನ್ನೋದು ಮಿಸ್ ಆಗಿದೆ. ಲೆಟರ್ ಹೆಡ್ ಕೆಳಭಾಗದಲ್ಲಿ ದೆಹಲಿ ವಿಳಾಸ ಬದಲು ಬೆಂಗಳೂರು ವಿಳಾಸ ಮುದ್ರಿಸಲಾಗಿದೆ. ಇದು #420Congress ಕಾಂಗ್ರೆಸ್ ನ ಮುಂದುವರೆದ ಭಾಗ ಎಂದು ಬರೆದು ಬಿಜೆಪಿ ಟ್ವೀಟ್ ಮಾಡಿದೆ.
Difference b/w original letterhead of BSY & photoshopped letterhead of DK brothers
1. Right hand top corner “Former Chief Minister of Karnataka” missing 2.Footer “Residential address in original is New Delhi & photoshopped is Bangalore”
DK brothers by spreading fake news in media are desperately trying to bring caste into picture to save themselves & their unaccountable wealth from clutches of law & hence they restored to releasing fake photoshopped letters of BSY in press conference. #420Congress
ವಿಜಯಪುರ/ ಬೆಳಗಾವಿ/ಉಡುಪಿ: ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮಕ್ಕೆ ಉಡುಪಿ, ವಿಜಯಪುರ, ಬೆಳಗಾವಿಯಲ್ಲಿ ಪಕ್ಷದ ಕಾರ್ಯಕರ್ತರು ಪುಷ್ಪಾರ್ಚನೆ ಸಲ್ಲಿಸಿ ಬಳಿಕ ಪವಿತ್ರ ನದಿಗಳಲ್ಲಿ ವಿಸರ್ಜನೆ ಮಾಡಿದರು.
ಕುಂದಾಪುರದಿಂದ ಹೂವಿನಿಂದ ಅಲಂಕೃತ ರಥದಲ್ಲಿ ಉಡುಪಿಗೆ ಬಂದ ರಥಯಾತ್ರೆಯನ್ನು ರಾಜಕೀಯ ಮುಖಂಡರು, ಗಣ್ಯರು ಉಡುಪಿ ನಗರದ ಚಿತ್ತರಂಜನ್ ವೃತ್ತದ ಬಳಿ ಸ್ವಾಗತಿಸಿದರು. ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಸುನಿಲ್ ಕುಮಾರ್, ರಘುಪತಿ ಭಟ್, ಎಂಎಲ್ಸಿ ಕೋಟಾ ಶ್ರೀನಿವಾಸ ಪೂಜಾರಿ, ವಾಜಪೇಯಿ ಆಪ್ತರಾದ ಬಿಜೆಪಿ ಹಿರಿಯ ಮುಖಂಡ ಸೋಮಶೇಖರ್ ಭಟ್ ಸೇರಿದಂತೆ ಹಲವು ಗಣ್ಯರು ಹಾಗೂ ಸಾರ್ವಜನಿಕರು ಚಿತಾಭಸ್ಮಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮವನ್ನು ಉಡುಪಿಯಲ್ಲಿ ಸ್ವಾಗತಿಸಿ ನಮನ ಸಲ್ಲಿಸಿದ್ದೇವೆ. ಈ ಚಿತಾಭಸ್ಮವನ್ನು ರಾಜ್ಯದ 8 ಕಡೆಯ ಪವಿತ್ರ ನದಿಗಳಲ್ಲಿ ವಿಸರ್ಜನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಉಡುಪಿಯಲ್ಲಿ ಸ್ವಾಗತಿಸಿದ ಚಿತಾಭಸ್ಮವನ್ನು ಮಂಗಳೂರು ಮೂಲಕ ದಕ್ಷಿಣದ ಗಯಾ ಎಂದೇ ಕರೆಯಲ್ಪಡುವ ಉಪ್ಪಿನಂಗಡಿಯಲ್ಲಿ ವಿಸರ್ಜನೆ ಮಾಡುತ್ತಿದ್ದೇವೆ. ಉಪ್ಪಿನಂಗಡಿಯ ಗಯಾ ಪ್ರದೇಶ ಕುಮಾರಧಾರ ಹಾಗೂ ನೇತ್ರಾವತಿಯ ಸಂಗಮ ಸ್ಥಾನವಾಗಿರುವುದರಿಂದ ಅಲ್ಲಿ ವಿಸರ್ಜನೆ ನಡೆಯುವ ಮೂಲಕ ವಾಜಪೇಯಿವರಿಗೆ ಮೋಕ್ಷ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಲಾಗುವುದು. ಇನ್ನು ಈ ಚಿತಾಭಸ್ಮ ವಿಸರ್ಜನೆಯಲ್ಲೂ ರಾಜಕೀಯ ನೋಡಬಾರದು, ಇಲ್ಲೂ ರಾಜಕಾರಣ ಮಾಡಿದರೆ ಅವರ ಸಣ್ಣತನ ಹಾಗೂ ಕ್ಷುಲ್ಲಕತನವನ್ನು ತೋರಿಸುತ್ತದೆ ಎಂದು ಶೋಭಾ ಕರಂದ್ಲಾಜೆ ಕಿಡಿ ಕಾರಿದರು.
ಇನ್ನು ವಾಜಪೇಯಿ ಅವರ ಚಿತಾಭಸ್ಮವನ್ನು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದ ಕೃಷ್ಣಾ ನದಿಯಲ್ಲಿ ಸಮರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ವಿಜಯಪುರ, ಬಾಗಲಕೋಟ ಜಿಲ್ಲೆಗಳ ಬಿಜೆಪಿ ಸಂಸದರು, ಶಾಸಕರು, ಅಟಲ್ ಅಭಿಮಾನಿಗಳು ಭಾಗಿಯಾಗಿದ್ದರು. ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಅಟಲ್ ಚಿತಾಭಸ್ಮವನ್ನು ಸಾರ್ವಜನಿಕರ ದರ್ಶನದ ಬಳಿಕ ಹಂಪಿ ಬಳಿಯ ತುಂಗಭದ್ರೆಯಲ್ಲಿ ಚಿತಾಭಸ್ಮ ವಿಸರ್ಜಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ, ಬಿ. ಶ್ರೀರಾಮುಲು, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಬಳ್ಳಾರಿ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಮಾಜಿ ಶಾಸಕ ಟಿಎಚ್ ಸುರೇಶ್ ಬಾಬು, ವಿಧಾನ ಪರಿಷತ್ ಮಾಜಿ ಸದಸ್ಯ ಮೃತ್ಯುಂಜಯ ಜಿನಗಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.