Tag: ಸಂಘಟನೆ

  • ಕಾನೂನು ವಿರುದ್ಧ ಯಾವುದೇ ಸಂಘಟನೆ ನಡೆದುಕೊಂಡರೂ ಕ್ರಮ ಗ್ಯಾರಂಟಿ: ಪರಮೇಶ್ವರ್

    ಕಾನೂನು ವಿರುದ್ಧ ಯಾವುದೇ ಸಂಘಟನೆ ನಡೆದುಕೊಂಡರೂ ಕ್ರಮ ಗ್ಯಾರಂಟಿ: ಪರಮೇಶ್ವರ್

    ಬೆಂಗಳೂರು: ಯಾವುದೇ ವ್ಯಕ್ತಿಗಳು, ಸಂಘಟನೆಗಳು (Organization) ಕಾನೂನು ವಿರುದ್ಧ ನಡೆದುಕೊಂಡರೆ ಕ್ರಮ ಅನಿವಾರ್ಯ ಎಂದು ಗೃಹ ಸಚಿವ ಪರಮೇಶ್ವರ್ (G Parameshwar) ಎಚ್ಚರಿಕೆ ಕೊಟ್ಟಿದ್ದಾರೆ.

    ಬಜರಂಗದಳದ (Bajarang Dal)  ಕಾರ್ಯಕರ್ತರಿಗೆ ಗಡಿಪಾರಿಗೆ ನೋಟಿಸ್ (Deportation Notice) ನೀಡಿರುವ ವಿಚಾರವಾಗಿ ಪೇಜಾವರ ಶ್ರೀ, ಬಿಜೆಪಿ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾನೂನು ಹೊರತುಪಡಿಸಿ ಪೊಲೀಸ್ ಇಲಾಖೆ ಯಾವ ಕೆಲಸ ಮಾಡಲ್ಲ. ಬಜರಂಗದಳ ಆಗಲಿ ಯಾವುದೇ ಸಂಘ ಸಂಸ್ಥೆಗಳು ಆಗಲಿ, ವೈಯಕ್ತಿಕವಾಗಿ ಕಾನೂನು ಪ್ರಕಾರ ಏನೇ ಮಾಡಿದರೂ ನಮ್ಮ ಸರ್ಕಾರ ಅವರ ಜೊತೆ ಇರುತ್ತೆ. ಕಾನೂನಿನ ವಿರುದ್ಧವಾಗಿ ಕೆಲಸ ಮಾಡಿದರೆ ಏನು ಮಾಡಬೇಕು? ಪೊಲೀಸ್ ಇಲಾಖೆ ಇರೋದು ಕಾನೂನು ಹಾಗೂ ಶಾಂತಿ ಕಾಪಾಡಲು. ಆ ದೃಷ್ಟಿಯಲ್ಲಿ ಪೊಲೀಸ್ ಇಲಾಖೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಗಡಿಪಾರು ನೋಟಿಸ್ ಅನ್ನು ಸಮರ್ಥನೆ ಮಾಡಿಕೊಂಡರು. ಇದನ್ನೂ ಓದಿ: 68 ಸಾವಿರ ರೂ. ದಂಡ ಪಾವತಿಸಿದ್ದೇನೆ – ಲುಲು ಮಾಲ್‌ಗೆ ಕರೆಂಟ್‌ ಶಾಕ್‌ ಕೊಟ್ಟ ಕುಮಾರಸ್ವಾಮಿ

    ಯಾರನ್ನೋ ಹತ್ತಿಕ್ಕಬೇಕು ಅಥವಾ ರಾಜಕೀಯ ದುರುದ್ದೇಶಕ್ಕೆ ಕ್ರಮ ತೆಗೆದುಕೊಳ್ಳಬೇಕು ಅಂತ ಯಾವ ಪೊಲೀಸರು ಮಾಡಲ್ಲ. ನಮ್ಮ ಸರ್ಕಾರ ಜನ ಸಮುದಾಯಕ್ಕೆ, ರಾಜ್ಯದ ಜನರಿಗೆ ಶಾಂತಿ ಕಾಪಾಡುತ್ತೇವೆ ಅಂತ ಮಾತು ಕೊಟ್ಟಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಅಂತ ಹಾಕಿದ್ದೇವೆ. ಸಂಘಟನೆಗಳು ಶಾಂತಿಯುತವಾಗಿ ಸಹಕಾರ ಮಾಡಿದರೆ ನಾವು ಅವರ ಜೊತೆ ಇರುತ್ತೇವೆ. ಇಲ್ಲದೆ ಹೋದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ವಾರ್ನಿಂಗ್ ಕೊಟ್ಟರು. ಇದನ್ನೂ ಓದಿ: ಸೋಮಣ್ಣ ಕಾಂಗ್ರೆಸ್‌ಗೆ ಬಂದರೆ ಸ್ವಾಗತ ಮಾಡ್ತೀನಿ: ಪರಮೇಶ್ವರ್‌

  • ಯಾವುದೇ ಸ್ಥಾನಮಾನ ಇಲ್ಲದಿದ್ರೂ ಕೊನೇ ಉಸಿರಿರುವವರೆಗೆ ಪಕ್ಷ ಸಂಘಟನೆ ಮಾಡ್ತೇನೆ: ಬಿಎಸ್‍ವೈ

    ಯಾವುದೇ ಸ್ಥಾನಮಾನ ಇಲ್ಲದಿದ್ರೂ ಕೊನೇ ಉಸಿರಿರುವವರೆಗೆ ಪಕ್ಷ ಸಂಘಟನೆ ಮಾಡ್ತೇನೆ: ಬಿಎಸ್‍ವೈ

    ಶಿವಮೊಗ್ಗ: ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಬಲಪಡಿಸುವ ಜೊತೆಗೆ ಮತ್ತಷ್ಟು ಬೆಳೆಸಬೇಕಿದೆ. ಹೀಗಾಗಿ ನನಗೆ ಯಾವುದೇ ಸ್ಥಾನಮಾನ ಇಲ್ಲದಿದ್ದರೂ, ನನ್ನ ಕೊನೆಯ ಉಸಿರು ಇರುವವರೆಗೆ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ನಗರದ ಶುಭಮಂಗಳ ಕಲ್ಯಾಣ ಮಂದಿರದಲ್ಲಿ ನಡೆದ ಪಂಡಿತ್ ದೀನ್ ದಯಾಳ್ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 135 ರಿಂದ 140 ಸ್ಥಾನ ಪಡೆದು ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕಿದೆ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕಿದೆ ಎಂದರು. ಇದನ್ನೂ ಓದಿ: ಸೆ.28 ರಂದು ಕಾಂಗ್ರೆಸ್ ಸೇರಲಿದ್ದಾರೆ ಜಿಗ್ನೇಶ್ ಮೇವಾನಿ, ಕನ್ಹಯ್ಯ ಕುಮಾರ್

    ಮುಂದಿನ 10-15 ದಿನಗಳ ನಂತರ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ನಡೆಸುತ್ತೇನೆ. ಈ ಸಂಬಂಧ ಪಕ್ಷದ ಮುಖಂಡರ ಜೊತೆ ಚರ್ಚೆ ನಡೆಸಿ ಪ್ರವಾಸ ನಡೆಸಲಿದ್ದೇನೆ. ನಾನು ಸಾಯುವವರೆಗೂ ಪಕ್ಷ ಸಂಘಟನೆ ಮಾಡುತ್ತೇನೆ, ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.

    ಸಿದ್ದರಾಮಯ್ಯರಿಂದ ಪ್ರಜಾತಂತ್ರಕ್ಕೆ ದ್ರೋಹ
    ಕಾಂಗ್ರೆಸ್ ನವರು ಸದನದಲ್ಲಿ ಕೋವಿಡ್ ಬಗ್ಗೆ ಚರ್ಚೆ ನಡೆಸದೇ ವಿನಾಕಾರಣ ಸಭಾತ್ಯಾಗ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ವಿರೋಧ ಪಕ್ಷವಾಗಿ ಒಳ್ಳೆಯ ಕೆಲಸ ಮಾಡಿಲ್ಲ. ಸಿದ್ದರಾಮಯ್ಯ ಅವರು ವಿಪಕ್ಷ ನಾಯಕರಾಗಿ ಪ್ರಜಾತಂತ್ರಕ್ಕೆ ದ್ರೋಹ ಎಸಗಿದ್ದಾರೆ. ಇದನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಯಡಿಯೂರಪ್ಪ ಹರಿಹಾಯ್ದರು.

    ಬೆಲೆ ಏರಿಕೆ ವಿಚಾರ ಒಂದನ್ನೇ ಇಟ್ಟುಕೊಂಡು ಈ ರೀತಿ ಮಾಡುವುದು ಸರಿಯಲ್ಲ. ಸಂಬಂಧಪಟ್ಟ ಸಚಿವರು ಸದನದಲ್ಲಿ ವಿಪಕ್ಷಗಳು ಕೇಳಿದ ಪ್ರಶ್ನೆಗೆ ಸ್ಪಷ್ಟ ಉತ್ತರ ಕೊಡಲು ಸಿದ್ಧರಿದ್ದರೂ ಕೇಳುವ ತಾಳ್ಮೆ ಇಲ್ಲದೇ ಪಲಾಯನ ಮಾಡಿದರು. ಸದನಕ್ಕೆ ಲೋಕಸಭಾ ಸ್ಪೀಕರ್ ಭೇಟಿ ನೀಡಿದ ಸಂದರ್ಭದಲ್ಲೂ ಸಭಾತ್ಯಾಗ ಮಾಡಿದರು. ಸ್ಪೀಕರ್ ಬಂದಾಗ ಗೌರವಯುತವಾಗಿ ನಡೆದುಕೊಳ್ಳಲಿಲ್ಲ. ಇದು ಪ್ರತಿಪಕ್ಷಕ್ಕೆ ಶೋಭೆ ತರುವುದಿಲ್ಲ. ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಸೋಲು ನಿಶ್ಚಿತ ಎಂದು ಭಾವಿಸಿರುವ ಕಾರಣ ಈ ರೀತಿ ವರ್ತನೆ ಮಾಡುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಜನರೇ ಅವರಿಗೆ ಪಾಠ ಕಲಿಸಲಿದ್ದಾರೆ ಎಂದರು. ಇದನ್ನೂ ಓದಿ: ಭದ್ರತಾ ಮಂಡಳಿ ಜೊತೆ ಎನ್‍ಎಸ್‍ಜಿಯಲ್ಲೂ ಭಾರತ ಇರಬೇಕು: ಬೈಡನ್

    ಭಾರತ್ ಬಂದ್ ಅವಶ್ಯವಿಲ್ಲ
    ಜನತೆ ಮೊದಲೇ ಕೋವಿಡ್ ಸಂಕಷ್ಟದಲ್ಲಿ ಇದ್ದಾರೆ. ಇಂತಹ ಸಮಯದಲ್ಲಿ ಭಾರತ್ ಬಂದ್ ಅವಶ್ಯಕತೆ ಇಲ್ಲ. ಈಗಾಗಲೇ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಂಡಿದ್ದೇವೆ. ಆದರೂ ಬಂದ್ ಕರೆ ನೀಡಿರುವುದು ಸರಿಯಲ್ಲ. ಬಂದ್ ಗೆ ಯಾರೂ ಬೆಂಬಲ ಕೊಡಬಾರದು ಎಂದು ಬಿಎಸ್ ವೈ ತಿಳಿಸಿದರು.

  • ವಿಧಾನಸೌಧ ಸುತ್ತಮುತ್ತ ಮೂರು ದಿನ ನಿಷೇಧಾಜ್ಞೆ ಜಾರಿ – ಸಂಘಟನೆಗಳಿಂದ ಮುತ್ತಿಗೆ ಸಾಧ್ಯತೆ

    ವಿಧಾನಸೌಧ ಸುತ್ತಮುತ್ತ ಮೂರು ದಿನ ನಿಷೇಧಾಜ್ಞೆ ಜಾರಿ – ಸಂಘಟನೆಗಳಿಂದ ಮುತ್ತಿಗೆ ಸಾಧ್ಯತೆ

    ಬೆಂಗಳೂರು: ವಿಧಾನಸೌಧದಲ್ಲಿ ಅಧಿವೇಶನ ಹಿನ್ನೆಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

    ಸಿಎಎ ಮತ್ತು ಕರ್ನಾಟಕ ಬಂದ್, ಕಳಸ ಬಂಡೂರಿ, ಸರೋಜಿನಿ ಮಹಿಷಿ ವರದಿ, ಆಶಾ ಕಾರ್ಯಕರ್ತರ ಪ್ರತಿಭಟನೆ ನಡೆದಿತ್ತು. ವಿಧಾನಸೌಧದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಕೆಲ ಸಂಘಟನೆಗಳು ಅಧಿವೇಶನ ಸಮಯದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆ ಮತ್ತು ಪೊಲೀಸ್ ಮೂಲಗಳು ತಿಳಿಸಿವೆ.

    ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವಿಧಾನಸೌಧದ ಸುತ್ತಮುತ್ತಲಿನ 2 ಕಿ.ಮೀವರೆಗೂ ನಿಷೇಧ ಹೇರಲಾಗಿದೆ. ಜನವರಿ 20ರ ರಾತ್ರಿ 12ರವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇದರ ಜೊತೆಗೆ ನಗರ ಪೊಲೀಸರು ವಿಧಾನಸೌಧ ಸುತ್ತಮುತ್ತ ಎಂದಿನಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ.

    ಸಿಬ್ಬಂದಿ, ರಾಜಕೀಯ ನಾಯಕರು, ವಿಧಾನಸೌಧಕ್ಕೆ ಸಂಬಂಧಪಡದ ವ್ಯಕ್ತಿಗಳ ಮೇಲೆ ಪೊಲೀಸ್ ಕಣ್ಣಿಟ್ಟಿದ್ದಾರೆ. ಇಷ್ಟೆಲ್ಲಾ ಪೊಲೀಸರ ಭದ್ರತೆಯ ನಡುವೆಯೂ ಹಲವು ಸಂಘಟನೆಗಳು ವಿಧಾನಸೌಧದ ಅಧಿವೇಶನಕ್ಕೆ ಮುತ್ತಿಗೆ ಹಾಕುವ ಸಾಧ್ಯತೆಯಿದ್ದು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

  • ಬಂದ್ ವಿರೋಧಿಸಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ

    ಬಂದ್ ವಿರೋಧಿಸಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ

    ಬೆಂಗಳೂರು: ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಗೆ ಆಗ್ರಹಿಸಿ ನಾಳೆ ಕರ್ನಾಟಕ ಬಂದ್‍ಗೆ ಕರ್ನಾಟಕ ಕನ್ನಡ ಸಂಘಟನೆಗಳ ಒಕ್ಕೂಟ ಕರೆ ಕೊಟ್ಟದೆ. ಈ ಒಕ್ಕೂಟದ ಕರೆಗೆ ಕನ್ನಡ ಪರ ಸಂಘಟನೆಗಳಲ್ಲೆ ವಿರೋಧ ವ್ಯಕ್ತವಾಗುತ್ತಿದೆ. ಬಂದ್ ಬೇಡಾ ಎಂದು ಬಂದ್ ವಿರೋಧಿಸಿ ಬೆಂಗಳೂರಿನ ಟೌನ್‍ಹಾಲ್ ಬಳಿ ಪ್ರತಿಭಟನೆ ನಡೆಸಿದ್ದಾರೆ.

    ಕರ್ನಾಟಕ ಹೋರಾಟಗಾರರ ಒಕ್ಕೂಟ, ಕರ್ನಾಟಕ ಕ್ರಾಂತಿರಂಗ ಮತ್ತು ಸರ್ವ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ಮಾಡಿವೆ. ಟೌನ್ ಹಾಲ್ ಮುಂದೆ ಪ್ರತಿಭಟಿಸಿ ಆಗ್ರಹಿಸಿದ ಅವರು, ನಾಳೆ ನಡೆಯುವ ಬಂದ್, ಜೋಕರ್ ಗಳ ಬಂದ್ ಎಂದು ಕರ್ನಾಟಕ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಲಿಂಗೇಗೌಡ ಕಿಡಿಕಾರಿದರು.

    ಕರ್ನಾಟಕ ಹೋರಾಟಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಆನಂದ್ ಕುಮಾರ್ ಮಾತನಾಡಿ, ಇದೊಂದು ಅವೈಜ್ಞಾನಿಕ ಬಂದ್. ರೈತರಿಗೆ, ವ್ಯಾಪಾರಸ್ಥರಿಗೆ, ಸಾರ್ವಜನಿಕರಿಗೆ ತೊಂದರೆ ಆಗುವ ಬಂದ್ ಇದು. ಕೆಲ ಸಂಘಟನೆ ಅವರು ತೀರ್ಮಾನ ತಗೊಂಡು ಬಂದ್ ಮಾಡುತ್ತಿದ್ದಾರೆ. ನಮ್ಮನ್ನು ಯಾರು ಕೇಳಿಲ್ಲ, ಕರೆದಿಲ್ಲ ಅವರಷ್ಟೇ ತೀರ್ಮಾನ ಮಾಡಿಕೊಂಡಿದ್ದಾರೆ. ಬಂದ್‍ಗೆ ನಮ್ಮ ಬೆಂಬಲ ಇಲ್ಲ. ಬಂದ್ ಬೇಡಾ ಉದ್ಯೋಗಕ್ಕಾಗಿ ಮಾಡ್ತಿರುವ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಸರೋಜಿನಿ ಮಹಿಷಿ ವರದಿ ಪರಿಷ್ಕೃತ ಆಗಿ ಜಾರಿಗೆ ಬರಬೇಕು ಅಷ್ಟೇ. ನಾಳೆ ಯಾರಾದರೂ ಅಂಗಡಿ ಮುಚ್ಚುಸಿದ್ರೆ, ಬಲವಂತವಾಗಿ ತೊಂದರೆ ಕೊಟ್ಟರೆ ಕಲ್ಲು, ದೊಣ್ಣೆ ತಗೊಂಡು ಹೊಡೆಯಿರಿ ಎಂದು ಕಿಡಿಕಾರಿದರು.

  • ಗಮನಿಸಿ, ಫೆ.13ಕ್ಕೆ ಕರ್ನಾಟಕ ಬಂದ್

    ಗಮನಿಸಿ, ಫೆ.13ಕ್ಕೆ ಕರ್ನಾಟಕ ಬಂದ್

    ಬೆಂಗಳೂರು: ಫೆಬ್ರವರಿ 13ಕ್ಕೆ ಕರ್ನಾಟಕ ಸ್ತಬ್ಧವಾಗಲಿದ್ದು, ಅಂದು ಯಾವುದೇ ಓಲಾ, ಊಬರ್, ಆಟೋ, ಟ್ಯಾಕ್ಸಿಗಳು, ರಸ್ತೆಗಿಳಿಯಲ್ಲ. ಸರೋಜಿನಿ ಮಹಿಷಿ ವರದಿ ಜಾರಿಗೆಗೆ ಆಗ್ರಹಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಮತ್ತು ಅಖಂಡ ಕರ್ನಾಟಕ ಮುಷ್ಕರಕ್ಕೆ ಕರೆ ನೀಡಿದೆ.

    ಕರ್ನಾಟಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಾಗೇಶ್ ನೇತೃತ್ವದಲ್ಲಿ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದು, 400ಕ್ಕೂ ಹೆಚ್ಚು ಸಂಘಟನೆಗಳು ಬಂದ್‍ಗೆ ಬೆಂಬಲ ಸೂಚಿಸಿವೆ. ಓಲಾ, ಊಬರ್, ಟ್ಯಾಕ್ಸಿ, ಲಾರಿ ಮಾಲೀಕರ ಸಂಘ, ಕೊಡಿಹಳ್ಳಿ ಚಂದ್ರಶೇಖರ್ ನೇತೃತ್ವದ ರೈತ ಸಂಘಟನೆ, ದಲಿತ ಸಂಘಟನೆ, ವಿವಿಧ ಕಾರ್ಮಿಕ ಹಾಗೂ ಕನ್ನಡಪರ ಸಂಘಟನೆಗಳಿಂದ ಬಂದ್‍ಗೆ ಬೆಂಬಲ ಸಿಕ್ಕಿದೆ.

    ಅಂದು ಬೆಳಗ್ಗೆ 11 ಘಂಟೆಗೆ ಟೌನ್ ಹಾಲ್‍ನಿಂದ ಫ್ರೀಡಂಪಾರ್ಕ್ ತನಕ ಬೃಹತ್ ರ‍್ಯಾಲಿ ಮಾಡಲಾಗುತ್ತೆ. ವರದಿ ಜಾರಿಗೆ ಆಗ್ರಹಿಸಿ ನಗರದ ಮೌರ್ಯ ಸರ್ಕಲ್ ಬಳಿ ಕಳೆದ 96 ದಿನಗಳಿಂದ ಧರಣಿ ನಡೆಸಲಾಗುತ್ತಿದೆ. ಆದರೆ ಇದುವರೆಗೂ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಹೀಗಾಗಿ ಇದೇ 13ಕ್ಕೆ ಕರ್ನಾಟಕ ಬಂದ್‍ಗೆ ಕರೆ ನೀಡಲಾಗಿದೆ.

    ಏನಿದು ಸರೋಜಿನಿ ಮಹಿಷಿ ವರದಿ?
    1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ವೇಳೆ ಕನ್ನಡಿಗರಿಗೆ ಕರ್ನಾಟಕದಲ್ಲಿ ಪರಭಾಷಿಕರಿಂದ ಅನ್ಯಾಯವಾಗುತ್ತಿದೆ ಎಂಬ ಕೂಗು ಎದ್ದಿತ್ತು. ಆಗ ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ವಿಮರ್ಶಿಸಲು ಶ್ರೀಮತಿ ಸರೋಜಿನಿ ಮಹಿಷಿಯವರಿಗೆ ಕೇಳಿಕೊಂಡಿತ್ತು.

    ಮಹಿಷಿಯವರು ನೀಡಿದ ವರದಿಯು ಸರೋಜಿನಿ ಮಹಿಷಿ ವರದಿ ಎಂದೇ ಖ್ಯಾತವಾಗಿದ್ದು, ಕರ್ನಾಟಕದಲ್ಲಿ ನ್ಯಾಯವಾಗಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯಬೇಕೆಂಬುದ್ದನ್ನು ಈ ವರದಿ ಪ್ರತಿಪಾದಿಸುತ್ತೆ. ಈ ವರದಿ ಇಂದಿಗೂ ಕನ್ನಡ ಮತ್ತು ಕರ್ನಾಟಕ ಪರ ಹೋರಾಟಗಳಿಗೆ ಆಧಾರವಾಗಿದೆ.

    1986ರಲ್ಲೇ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಕನ್ನಡಿಗರಿಗೆ ಮೊದಲು ಉದ್ಯೋಗ ಅವಕಾಶ ಕಲ್ಪಿಸಿಕೊಡಬೇಕು ಎಂದು ವರದಿಯಲ್ಲಿತ್ತು. ಐಟಿ, ಬಿಟಿ ಸೇರಿದಂತೆ ರಾಜ್ಯದ ಎಲ್ಲಾ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಜಾರಿ, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡುವುದೂ ಸೇರಿ 14 ಪ್ರಮುಖ ಶಿಫಾರಸುಗಳನ್ನು ಒಳಗೊಂಡಿದೆ.

    ಅದರಲ್ಲಿ ಕನ್ನಡಿಗರಿಗೆ ಎಲ್ಲಿಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ಉದ್ಯೋಗಾವಕಾಶ ಇರಬೇಕೆಂದು ಈ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು.

  • ಭಾರತದಲ್ಲಿ ಐಸಿಸ್ ಸೆಲ್ ಸ್ಥಾಪಿಸಲು ದುಬೈನಲ್ಲಿ ಹಣ ಸಂಗ್ರಹಣೆ

    ಭಾರತದಲ್ಲಿ ಐಸಿಸ್ ಸೆಲ್ ಸ್ಥಾಪಿಸಲು ದುಬೈನಲ್ಲಿ ಹಣ ಸಂಗ್ರಹಣೆ

    ಚೆನ್ನೈ: ತಮಿಳುನಾಡಿನ ಹದಿನಾಲ್ಕು ಮಂದಿ ಶಂಕಿತ ಉಗ್ರರು ದುಬೈನಲ್ಲಿ ಇದ್ದುಕೊಂಡು ಭಾರತದಲ್ಲಿ ಐಸಿಸ್‍ನ ಭಯೋತ್ಪಾದಕ ಸೆಲ್‍ಗಳನ್ನು ಸ್ಥಾಪಿಸಲು ಹಣವನ್ನು ಸಂಗ್ರಹಿಸುತ್ತಿದ್ದ ಸ್ಫೋಟಕ ವಿಚಾರ ರಾಷ್ಟ್ರೀಯ ತನಿಖಾ ತಂಡ(ಎನ್‍ಐಎ) ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಬಂಧಿತರು ದುಬೈನಿಂದಲೇ ವಹಾದತ್-ಎ-ಇಸ್ಲಾಂ, ಜಮಾತ್ ವಹಾದತ್-ಇ-ಇಸ್ಲಾಂ ಅಲ್ ಜಿಹಾದಿಯೆ ಮತ್ತು ಜಿಹಾದಿ ಇಸ್ಲಾಮಿಕ್ ಘಟಕ ಸೇರಿದಂತೆ ವಿವಿಧ ಭಯೋತ್ಪಾದಕ ಗುಂಪುಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇವರನ್ನು ದುಬೈ ಪೊಲೀಸರು ಬಂಧಿಸಿ 6 ತಿಂಗಳು ಅಲ್ಲಿಯೇ ಜೈಲಿನಲ್ಲಿ ಇರಿಸಿ ಕಳೆದ ವಾರ ಭಾರತಕ್ಕೆ ಒಪ್ಪಿಸಿದ್ದರು.

    ಸೋಮವಾರ ಆರೋಪಿಗಳನ್ನು ಎನ್‍ಐಎ ಚೆನ್ನೈ ನ್ಯಾಯಾಲಯಕ್ಕೆ ಹಾಜರಿಪಡಿಸಲಾಗಿತ್ತು. ನ್ಯಾಯಾಲಯ ಜುಲೈ 25ರವರೆಗೆ ಕಸ್ಟಡಿಗೆ ಒಪ್ಪಿಸಿದೆ. ಈ 14 ಜನರಲ್ಲಿ ಹಲವರು ನಿರ್ವಹಣಾ ವೃತ್ತಿಪರರಾಗಿದ್ದು, ಇವರು ಯುಎಇಯಲ್ಲಿ ಹಲವಾರು ವರ್ಷಗಳಿಂದ ನೆಲೆಸಿದ್ದರು ಮತ್ತು ಇವರಲ್ಲಿ ಒಬ್ಬ 32 ವರ್ಷಗಳಿಂದ ಅಲ್ಲಿಯೇ ನೆಲೆಸಿದ್ದ.

    ಈ ವಿಚಾರದ ಬಗ್ಗೆ ಮಾತನಾಡಿರುವ ಎನ್‍ಐಎ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ಎಸ್. ಪಿಳ್ಳೈ ಅವರು, “ಭಯೋತ್ಪಾದಕಾ ದಾಳಿ ನಡೆಸುವ ಸಲುವಾಗಿ ಅವರು ಉದ್ದೇಶಪೂರ್ವಕವಾಗಿಯೇ ಹಣವನ್ನು ಸಂಗ್ರಹಿಸಿದ್ದಾರೆ. ಭಾರತ ಸರ್ಕಾರದ ವಿರುದ್ಧ ಯುದ್ಧ ಮಾಡುವ ಮೂಲಕ ಭಾರತದಲ್ಲಿ ಐಸಿಸ್ ಸಂಘಟನೆಯನ್ನು ಸ್ಥಾಪಿಸುವುದು ಅವರ ಉದ್ದೇಶವಾಗಿತ್ತು” ಎಂದು ತಿಳಿಸಿದ್ದಾರೆ.

    ವಿಚಾರಣೆ ವೇಳೆ ಬಂಧಿತರು ನೀಡಿದ ಮಾಹಿತಿ ಅನ್ವಯ ಎನ್‍ಐಎ ನಾಗಪಟ್ಟಣಂನಲ್ಲಿ ಹರೀಶ್ ಮುಹಮ್ಮದ್ ಮತ್ತು ಹಸನ್ ಅಲಿ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದೆ. ಇದರಲ್ಲಿ ಹಸನ್ ಅಲಿ ಐಸಿಸ್ ಆಪರೇಟಿವ್ ಆಗಿದ್ದು, ಅವನು ಭಾರತದಲ್ಲಿ ದಾಳಿ ಮಾಡಲು ಜನರನ್ನು ನೇಮಿಸಿಕೊಳ್ಳುತ್ತಿದ್ದ ಎಂದು ಮೂಲಗಳು ತಿಳಿಸಿವೆ.

    ಹಸನ್ ಅಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು ಇದರಲ್ಲಿ ಅವನು ವಾಹನಗಳನ್ನು ಸಾಧನಗಳಾಗಿ ಉಪಯೋಗಿಸಿ ಚಾಕು ಮತ್ತು ಸ್ಫೋಟಕವನ್ನು ಬಳಸಿ ಭಾರತದ ಮೇಲೆ ದಾಳಿ ಮಾಡಲು ತನ್ನ ಬೆಂಬಲಿಗರಲ್ಲಿ ಕೇಳಿಕೊಂಡಿದ್ದ. ಕಳೆದ ಕೆಲ ತಿಂಗಳುಗಳಿಂದ ಶಂಕಿತ ಐಸಿಸ್ ಗುಂಪುಗಳ ಮೇಲೆ ಕಣ್ಣಿಟ್ಟಿರುವ ಎನ್‍ಐಎ ಹಲವಾರು ಪ್ರಕರಣಗಳನ್ನು ಭೇದಿಸಿದೆ.

    ಶ್ರೀಲಂಕಾದಲ್ಲಿ ನಡೆದ ಈಸ್ಟರ್ ದಾಳಿಯ ಹಿಂದೆ ಇದ್ದ ಆತ್ಮಾಹುತಿ ಬಾಂಬರ್‍ನೊಂದಿಗೆ ಸಂಪರ್ಕದಲ್ಲಿ ಇದ್ದಾರೆ ಎಂಬ ಆರೋಪದ ಮೇಲೆ ಐದು ಜನರನ್ನು ಕೊಯಮತ್ತೂರಿನಲ್ಲಿ ಬಂಧಿಸಲಾಗಿತ್ತು.

  • ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ-ಯುವತಿಯರಿಗೆ ಮದ್ವೆ

    ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ-ಯುವತಿಯರಿಗೆ ಮದ್ವೆ

    ಹುಬ್ಬಳ್ಳಿ/ಧಾರವಾಡ: ಇಂದು ಪ್ರೇಮಿಗಳ ದಿನಾಚರಣೆಯಾಗಿದ್ದು, ಎಲ್ಲೆಡೆ ಪ್ರೇಮಿಗಳು ತಮ್ಮ ಪ್ರೀತಿಯ ದಿನವನ್ನು ಸಂಭ್ರಮಿಸುತ್ತಿರುತ್ತಾರೆ. ಆದರೆ ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ-ಯುವತಿಯರಿಗೆ ಮದುವೆ ಮಾಡಿಸಲು ಹುಬ್ಬಳ್ಳಿಯಲ್ಲಿ ಕೆಲವು ಸಂಘಟನೆ ಸಿದ್ಧವಾಗಿವೆ.

    ಹೌದು. ಪಾರ್ಕ್‌ಗಳಲ್ಲಿ ಅನೈತಿಕ ವರ್ತನೆ ಮಾಡುವ ಯುವಕ ಯುವತಿಯರ ವಿರುದ್ಧ ಕ್ರಮ ಜಾರಿಗೊಳಿಸುವ ಮೂಲಕ ಪಾಲಕರ ಸಮ್ಮುಖದಲ್ಲಿ ಮದುವೆ ಮಾಡಿಸಲು ಹುಬ್ಬಳ್ಳಿಯಲ್ಲಿ ಕೆಲವು ಸಂಘಟನೆ ಸಿದ್ಧವಾಗಿವೆ. ಇಂದಿನ ಯುವಕ-ಯುವತಿಯರು ನಾಳಿನ ದೇಶದ ಭದ್ರಬುನಾದಿಯ ಆಧಾರ ಸ್ತಂಭವಾಗಿದ್ದಾರೆ. ಆದರೆ ವ್ಯಾಲೆಂಟೈನ್ಸ್ ಡೇ ಹೆಸರಿನಲ್ಲಿ ಅನೈತಿಕ ಕೃತ್ಯಗಳಿಗೆ ಕೈ ಜೋಡಿಸುತ್ತಿದ್ದು, ಅವರ ವಿರುದ್ಧ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಘಟನೆಕಾರರು ಹೇಳಿದ್ದಾರೆ.

    ಪಾಶ್ಚಿಮಾತ್ಯ ದೇಶಗಳ ಸಂಸ್ಕೃತಿ ಅನುಸರಿಸುವ ಮೂಲಕ ಭಾರತದ ಸಂಸ್ಕೃತಿ ಹಾಳು ಮಾಡುವಂತ ಯುವಕರಿಗೆ ಈ ರೀತಿ ಮದುವೆ ಮಾಡಿಸುವ ಮೂಲಕ ಎಚ್ಚರಿಕೆ ನೀಡಲಾಗುತ್ತದೆ. ಈ ಹಿಂದೆ ನಗರದ ಸಂಜೀವಿನಿ ಹಾಗೂ ನೃಪತುಂಗ ಬೆಟ್ಟದ ಪಾರ್ಕ್‌ಗಳಲ್ಲಿ ಇಂತಹ ವ್ಯವಸ್ಥೆಗಳನ್ನು ನೋಡಿದ್ದೇವೆ. ಹೀಗಾಗಿ ಇದರಿಂದ ಬೇಸತ್ತು ವ್ಯಾಲೆಂಟೈನ್ಸ್ ಡೇ ಪ್ರಯುಕ್ತವಾಗಿ ಪ್ರೇಮಿಗಳಿಗೆ ಅವರ ಪಾಲಕರ ಸಮ್ಮುಖದಲ್ಲಿಯೇ ಮದುವೆ ಮಾಡಿಸಿ ಪಾಶ್ಚಾತ್ಯ ಸಂಪ್ರದಾಯಗಳನ್ನು ನಿಯಂತ್ರಣಕ್ಕೆ ತರುವ ಹಿತದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈಗಾಗಲೇ ಮಾಂಗಲ್ಯ ಹಾಗೂ ವಸ್ತ್ರಗಳನ್ನು ತೆಗೆದುಕೊಂಡು ಬಂದಿದ್ದು, ಅನೈತಿಕವಾಗಿ ವರ್ತಿಸಿದವರಿಗೆ ಮದುವೆ ಮಾಡಿಸಲಾಗುತ್ತದೆ ಎಂದು ಸಂಘಟನೆ ಮುಖಂಡ ವಿಠ್ಠಲ ಪವಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಜ್ ಕುಮಾರ್, ಕಾವೇರಿ ನದಿ ಬಗ್ಗೆ ಮಾತಾನಾಡಿದ್ದಕ್ಕೆ ಗೇಟ್‍ಪಾಸ್- ತಮಿಳು ಚಿತ್ರಗಳನ್ನು ಬಹಿಷ್ಕಾರ ಮಾಡಬೇಕೆಂದು ಮನವಿ

    ರಾಜ್ ಕುಮಾರ್, ಕಾವೇರಿ ನದಿ ಬಗ್ಗೆ ಮಾತಾನಾಡಿದ್ದಕ್ಕೆ ಗೇಟ್‍ಪಾಸ್- ತಮಿಳು ಚಿತ್ರಗಳನ್ನು ಬಹಿಷ್ಕಾರ ಮಾಡಬೇಕೆಂದು ಮನವಿ

    ಬೆಂಗಳೂರು: ಡಾ. ರಾಜ್ ಕುಮಾರ್ ಬಗ್ಗೆ ಮಾತಾನಾಡಿದ್ದಕ್ಕೆ ತಮಿಳು ಚಿತ್ರರಂಗದಿಂದ ಕನ್ನಡ ನಟನನ್ನು ಬಹಿಷ್ಕಾರ ಮಾಡಿದನ್ನು ಖಂಡಿಸಿ ಕರ್ನಾಟಕ ಸಂಘಟನೆ ಒಕ್ಕೂಟಗಳು ವಾಣಿಜ್ಯ ಮಂಡಳಿಗೆ ದೂರು ನೀಡಿ ತಮಿಳು ಚಿತ್ರಗಳನ್ನು ಬಹಿಷ್ಕಾರ ಮಾಡಬೇಕು ಎಂದು ಮನವಿ ಮಾಡಿಕೊಂಡಿದೆ.

    ನಟ ಯೋಗೇಶ್ ತಮಿಳಿನ ‘ಪಾರ್ತಿಬನ್ ಕಾದಲ್’ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದರು. ಯೋಗೇಶ್ ವರನಟ ಡಾ. ರಾಜ್ ಕುಮಾರ್ ಮತ್ತು ಕಾವೇರಿ ನದಿ ಬಗ್ಗೆ ಮಾತಾನಾಡಿದ ಹಿನ್ನೆಲೆಯಲ್ಲಿ ತಮಿಳು ಚಿತ್ರರಂಗ ಯೋಗೇಶ್‍ನನ್ನು ಹೊರದಬ್ಬಿದೆ.

    ಇದನ್ನು ಖಂಡಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟದಿಂದ ವಾಣಿಜ್ಯ ಮಂಡಳಿಗೆ ದೂರು ನೀಡಿದೆ. ಇದು ವರನಟ ರಾಜ್ ಕುಮಾರ್ ಅವರಿಗೆ ಆಗಿರುವ ಅವಮಾನ. ಇನ್ನೂ ಮುಂದೆ ರಾಜ್ಯದಲ್ಲಿ ತಮಿಳು ಚಿತ್ರಗಳನ್ನು ಬಹಿಷ್ಕಾರ ಮಾಡಬೇಕು ಎಂದು ಮನವಿ ಮಾಡಿಕೊಂಡಿದೆ.

    ಏನಿದು ವಿವಾದ?
    ಕನ್ನಡ ನಟ ಯೋಗಿ ತಮಿಳಿನ ಪಾರ್ತಿಬನ್ ಕಾದಲ್ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದರು. ಈ ಚಿತ್ರದ ಮೋಷನ್ ಪೋಸ್ಟರ್ ಕೂಡ ಚೆನ್ನೈಯಲೇ ಬಿಡುಗಡೆಯಾಗಿತ್ತು. ಆದೆ ಕಾರ್ಯಕ್ರಮ ಮುಗಿದ ಮೇಲೆ ತಮಿಳು ಪತ್ರಕರ್ತರು ಸಿನಿಮಾ ತಂಡವನ್ನು ಪ್ರಶ್ನೆ ಮಾಡಲು ಶುರು ಮಾಡಿದ್ದರು. ಸಿನಿಮಾದ ಬಗ್ಗೆ ಪ್ರಶ್ನೆ ಮುಗಿದ ಬಳಿಕ ಕಾವೇರಿ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಸಾರ್ ನಮ್ಗೆ ನೀರಿಲ್ಲ ನಿಮಗೆ ಬೇಕು ಅಂದ್ರೆ ಹೇಗೆ, ಮಂಡ್ಯ ಅಂತಾ ಊರಿದೆ ಅಲ್ಲಿ ಎಷ್ಟು ಕಷ್ಟಪಡ್ತಾರೆ ಜನ ಅಂತಾ ನೀವೇ ನೋಡಿ ಅಂತಾ ಯೋಗಿ ಉತ್ತರಿಸಿದ್ದರು. ಅಷ್ಟಕ್ಕೆ ಮುಗಿಸದೇ ಪ್ರರ್ತಕರ್ತರು ನಿಮಗೆ ರಾಜ್‍ಕುಮಾರ್ ಇಷ್ಟನೋ ಅಥವಾ ರಜನಿಕಾಂತ್ ಅನ್ನೋ ಪ್ರಶ್ನೆ ಕೇಳಿದ್ದರು. ಇದಕ್ಕೆ ಯೋಗಿ ನನಗೆ ಅಣ್ಣಾವ್ರೇ ಇಷ್ಟ ಎಂದು ಉತ್ತರಿಸಿದ್ದರು.

    ಯೋಗಿ ಅವರ ಈ ಮಾತುಗಳನ್ನು ಹಿಡಿದುಕೊಂಡು ಕನ್ನಡ ನಟನ ಅಭಿಪ್ರಾಯ ಬೇರೆ ಮಾಡಲು ಅಲ್ಲಿನ ಮಾಧ್ಯಮ ಪ್ರಯತ್ನಿಸಿತ್ತು. ಇದರ ಪರಿಣಾಮವಾಗಿ ಪಾರ್ತಿಬನ್ ಕಾದಲ್ ಸಿನಿಮಾದಿಂದ ಯೋಗಿ ಅವರನ್ನು ಗೇಟ್‍ಪಾಸ್ ನೀಡಿದ್ದರು. ಅಷ್ಟೇ ಅಲ್ಲದೇ ಈ ರೀತಿ ಮಾತಾನಾಡಬಾರದಿತ್ತು ಎಂದು ನಿರ್ಮಾಪಕರು ಬುದ್ಧಿ ಮಾತು ಹೇಳಿ ಯೋಗಿಯನ್ನು ಹೊರದಬ್ಬಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗಿನ ಸಂತ್ರಸ್ತರಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ 2 ಕೋಟಿ ರೂ. ಪರಿಹಾರ

    ಕೊಡಗಿನ ಸಂತ್ರಸ್ತರಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ 2 ಕೋಟಿ ರೂ. ಪರಿಹಾರ

    ಮಂಗಳೂರು: ಕೊಡಗಿನ ಸಂತ್ರಸ್ತರಿಗೆ ರಾಜ್ಯದ ಸಂಘ, ಸಂಸ್ಥೆ, ದೇವಸ್ಥಾನ ಸಮಿತಿ, ನಾಯಕರು ಸೇರಿದಂತೆ ಜನಸಾಮಾನ್ಯರು ಧನ ಸಹಾಯಕ್ಕೆ ಮುಂದಾಗಿದ್ದಾರೆ. ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಮಿತಿಯು 2 ಕೋಟಿ ರೂ. ನೆರವುವನ್ನು ನೀಡಿದೆ.

    ದೇವಸ್ಥಾನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ನೇತೃದಲ್ಲಿ ವ್ಯವಸ್ಥಾಪನಾ ಸಮಿತಿ ಸಭೆ ನಡೆಸಿ, ಈ ನಿರ್ಣಯ ಕೈಗೊಳ್ಳಲಾಗಿದ್ದು, ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣವನ್ನು ನೀಡಲು ಸಮಿತಿಯ ಸದಸ್ಯರು ನಿರ್ಧರಿಸಿದ್ದಾರೆ.

    ದಾವಣಗೆರೆ: ಜಿಲ್ಲಾ ಸಹಕಾರ ಬ್ಯಾಂಕ್ ಒಕ್ಕೂಟ ಗೌರವಾಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರು, ಬ್ಯಾಂಕ್‍ನಿಂದ ಕೇರಳ ಹಾಗೂ ಮಡಿಕೇರಿ ಸಂತ್ರಸ್ತರಿಗೆ ನೀಡಲು 1 ಕೋಟಿ ಪರಿಹಾರ ನೀಡಲು ನಿರ್ಧರಿಸಿದ್ದಾರೆ.

    ಒಟ್ಟು 1 ಕೋಟಿ ರೂ.ಗಳಲ್ಲಿ 50 ಲಕ್ಷ ರೂ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಾಗೂ 50 ಲಕ್ಷ ರೂ.ವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ. ಜೊತೆಗೆ ಶಾಮನೂರು ಶಿವಶಂಕರಪ್ಪ ಅವರು ಕೇರಳ ಹಾಗೂ ಕೊಡಗಿಗೆ ವೈಯಕ್ತಿಕ 25 ಲಕ್ಷ ರೂ. ನೀಡಲು ಮುಂದಾಗಿದ್ದಾರೆ.

    ಬೀದರ್: ನಗರದಲ್ಲಿಯೂ ಕೂಡಾ ಭಗತ್ ಸಿಂಗ್ ಯೂತ್ ಬ್ರೀಗೆಡ್ ಸಂಘಟನೆಯು ಶನಿವಾರದಿಂದ ಅಭಿಯಾನ ಪ್ರಾರಂಭ ಮಾಡಿದೆ. ಕಾರ್ಯಕರ್ತರು ರಸ್ತೆಗಳಿದು ಪರಿಹಾರ ನಿಧಿ, ಆಹಾರ ಸಾಮಗ್ರಿಗಳು, ಔಷಧಿ, ಸಂತ್ರಸ್ತರಿಗೆ ಬೇಕಾಗುವ ಬಟ್ಟೆ, ಆಹಾರ ಧಾನ್ಯಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/QCNusRT6oCA

  • ಉತ್ತರ ಕರ್ನಾಟಕ ಬಂದ್‍ಗೆ ಮೂಡದ ಒಮ್ಮತ – ಗುರುವಾರ ಕೇವಲ ಸಾಂಕೇತಿಕ ಪ್ರತಿಭಟನೆ

    ಉತ್ತರ ಕರ್ನಾಟಕ ಬಂದ್‍ಗೆ ಮೂಡದ ಒಮ್ಮತ – ಗುರುವಾರ ಕೇವಲ ಸಾಂಕೇತಿಕ ಪ್ರತಿಭಟನೆ

    ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕುರಿತು ಗುರುವಾರ ಕರೆ ನೀಡಿದ್ದ 13 ಜಿಲ್ಲೆಗಳ ಬಂದ್‍ಗೆ ಒಮ್ಮತ ಮೂಡದ ಕಾರಣ ಕೇವಲ ಸಾಂಕೇತಿಕ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.

    ಬಂದ್ ಆಚರಣೆ ವಿಷಯದಲ್ಲಿ ಮುಂಬೈ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಜಿಲ್ಲೆಗಳ ಮಧ್ಯೆಯೇ ಭಿನ್ನಾಭಿಪ್ರಾಯ ಸೃಷ್ಟಿಯಾಗಿದೆ. ಹೈದ್ರಾಬಾದ್ ಕರ್ನಾಟಕದ 6 ಜಿಲ್ಲೆಗಳ ಮುಖಂಡರ ಜೊತೆಗೆ ಮಹದಾಯಿ ಹೋರಾಟಗಾರರೂ ಕೂಡ ಬಂದ್‍ನಿಂದ ದೂರ ಸರಿದಿದ್ದಾರೆ. ಮುಖ್ಯಮಂತ್ರಿಗಳು ನಿನ್ನೆ ನೀಡಿದ್ದ ಭರವಸೆ ಹಿನ್ನೆಲೆಯಲ್ಲಿ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಕೂಡ ಬಂದ್ ಹಿಂಪಡೆಯಲು ಬಯಸಿದೆ.

    ಇದರ ನಡುವೆ ಉತ್ತರ ಕರ್ನಾಟಕ ರೈತ ಸಂಘ ಮಾತ್ರ ನಾಳೆ ಬಂದ್ ಆಚರಿಸುವುದಾಗಿ ಘೋಷಿಸಿತ್ತು. ಆದರೆ, ಸಂಜೆ ವೇಳೆಗೆ ಬಹುತೇಕ ಸಂಘಟನೆಗಳು ಬಂದ್ ವಾಪಸ್ ಪಡೆದಿರುವುದಾಗಿ ಘೋಷಿಸಿದವು. ಬಂದ್ ಬದಲಾಗಿ ನಾಳೆ ಸಾಂಕೇತಿಕ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾಗಿ ತಿಳಿಸಿವೆ. ಉಳಿದಂತೆ ಹುಬ್ಬಳ್ಳಿ-ಧಾರವಾಡ ಪೊಲೀಸರು ಸಹ ನಾಳೆ ಯಾವುದೇ ಕಾರಣಕ್ಕೂ ಬಂದ್ ನಡೆಸಬಾರದು ಎಂದು ಆದೇಶ ಹೊರಡಿಸಿದ್ದಾರೆ.

    ಒಮ್ಮತ ಮೂಡದಿರಲು ಕಾರಣವೇನು?
    ನಾಳಿನ ಬಂದ್ ಆಚರಣೆ ವಿಚಾರದಲ್ಲಿ ಮುಂಬೈ-ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಮುಖಂಡರಲ್ಲೇ ಭಿನ್ನಮತಕ್ಕೆ ಉಂಟಾಗಿದೆ. ಇದಕ್ಕೆ ಪ್ರಮುಖ ಕಾರಣ ನೋಡುವುದಾದರೆ ಹೈದರಬಾದ್ ಕರ್ನಾಟಕದ ಸವಲತ್ತನ್ನು ಮುಂಬೈ ಕರ್ನಾಟಕ ಪಡೆದ ಆರೋಪವಿದೆ. ಈ ಹಿಂದೆ ಹೈ-ಕ ಹೋರಾಟಕ್ಕೆ ಮುಂಬೈ ಕರ್ನಾಟಕ ಸ್ಪಂದಿಸಿರಲಿಲ್ಲ. ರಾಯಚೂರಿನಲ್ಲಿ ಸ್ಥಾಪನೆಯಾಗಬೇಕಿದ್ದ ಐಐಟಿ ಧಾರವಾಡದಲ್ಲಿ ಸ್ಥಾಪನೆಯಾಗಿದೆ. ಹೈದ್ರಾಬಾದ್ ಕರ್ನಾಟಕ ವಿಶೇಷ ಮೀಸಲಾತಿ ಸ್ಥಾನಮಾನ ಕಲ್ಪಿಸುವ 371 (ಜೆ) ಕಲಂ ವಿರೋಧಿಸಿ ಮುಂಬೈ ಕರ್ನಾಟಕ ಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ವೇಳೆಯೂ ಮುಂಬೈ-ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಮುಖಂಡರ ನಡುವೆ ಘರ್ಷಣೆ ನಡೆದಿತ್ತು.

    ಪರ-ವಿರೋಧ ಪ್ರತಿಭಟನೆ: ಬಂದ್ ವಿಚಾರದಲ್ಲಿ ಅಪಸ್ವರ ವ್ಯಕ್ತವಾಗಿದ್ದರ ಬೆನ್ನಲ್ಲೇ ರಾಜ್ಯ ಹಲವೆಡೆ ಪರ-ವಿರೋಧ ಪ್ರತಿಭಟನೆಗಳೂ ನಡೆದಿವು. ಉತ್ತರ ಕರ್ನಾಟಕ ಬಂದ್ ವಿರೋಧಿಸಿ ಕಲಬುರಗಿಯಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿಸಿದವು. ಮತ್ತೊಂದೆಡೆ ಪ್ರತ್ಯೇಕ ರಾಜ್ಯ ಒತ್ತಾಯವನ್ನು ವಿರೋಧಿಸಿ ದಾವಣಗೆರೆ ಹಾಗೂ ಚಾಮರಾಜನಗರದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.