Tag: ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ

  • ಏ.1 ರಂದು ನಡೆದಾಡೋ ದೇವರ ಜನ್ಮ ದಿನಾಚರಣೆ- ಅಮಿತ್ ಶಾ ಕಾರ್ಯಕ್ರಮ ಉದ್ಘಾಟನೆ

    ಏ.1 ರಂದು ನಡೆದಾಡೋ ದೇವರ ಜನ್ಮ ದಿನಾಚರಣೆ- ಅಮಿತ್ ಶಾ ಕಾರ್ಯಕ್ರಮ ಉದ್ಘಾಟನೆ

    ತುಮಕೂರು: ಕಾಯಕಯೋಗಿ, ತ್ರಿವಿಧ ದಾಸೋಹಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮಿಗಳು ಲಿಂಗೈಕ್ಯರಾಗಿ ಮೂರು ವರ್ಷ ಕಳೆದಿವೆ. ಶ್ರೀಗಳ 115ನೇ ಜನ್ಮ ದಿನೋತ್ಸವಕ್ಕೆ ಸಿದ್ದಗಂಗಾ ಮಠದಲ್ಲಿ ಭರ್ಜರಿ ಸಿದ್ದತೆ ನಡೆಯುತ್ತಿದೆ.

    ತ್ರಿವಿಧ ದಾಸೋಹಿ, ನಡೆದಾಡುವ ದೇವರು ಲಿಂಗೈಕ್ಯರಾದಾಗ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯ ಯಾವೊಬ್ಬ ರಾಷ್ಟ್ರೀಯ ನಾಯಕರೂ ಶ್ರೀಗಳ ಅಂತಿಮ ದರ್ಶನ ಪಡೆದಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯಾಗಲಿ, ಗೃಹ ಸಚಿವ ಅಮಿತ್ ಶಾ ಆಗಲಿ ಯಾರೂ ಇತ್ತ ಸುಳಿದಿರಲಿಲ್ಲ. ಕಾಂಗ್ರೆಸ್‍ನ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯೂ ಅಂದು ಮಠದ ಕಡೆ ತಲೆ ಹಾಕದವರು ಇಂದು ಪೈಪೋಟಿಗೆ ಬಿದ್ದು ತುಮಕೂರಿನ ಪ್ರವಾಸಕ್ಕೆ ಇಂಟ್ರೆಸ್ಟ್ ತೋರಿದ್ದಾರೆ.

    ಸಿದ್ದಗಂಗಾ ಮಠದಲ್ಲಿ ಶ್ರೀಗಳ ಜಯಂತ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಈ ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ರೀಗಳ 115ನೇ ಜನ್ಮ ದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸರಿಸುಮಾರು 2-3 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ವೇದಿಕೆಗೆ ‘ನಡೆದಾಡುವ ಬಸವ ಭಾರತ’ ಅಂತ ಹೆಸರಿಡಲಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಅಧ್ಯಕ್ಷತೆ ವಹಿಸಲಿದ್ದು, ಸುತ್ತೂರು ಶ್ರೀಗಳು, ಸಿಎಂ ಬೊಮ್ಮಾಯಿ ಸೇರಿ ಹಲವರು ಭಾಗಿ ಆಗಲಿದ್ದಾರೆ. ಈ ನಡುವೆ ಇಂದೇ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 4ಕ್ಕೆ ಬರಲಿರುವ ರಾಹುಲ್ ಗಾಂಧಿ ಗದ್ದುಗೆ ದರ್ಶನ ಬಳಿಕ ಸಿದ್ದಲಿಂಗಸ್ವಾಮಿಜಿಗಳ ಆಶೀರ್ವಾದ ಪಡೆಯಲಿದ್ದಾರೆ.

    ಕಾರ್ಯಕ್ರಮದಲ್ಲಿ 100 ಜನ ಗಾಯಕರು, 150 ಮಂದಿ ಕಲಾವಿದರು ಸೇರಲಿದ್ದಾರೆ. ಮಠದ ಆವರಣದಲ್ಲಿ ಬ್ಯಾನರ್, ಕಟೌಟ್‍ಗಳು ರಾರಾಜಿಸುತ್ತಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಗಣಕ್ಕಾಗಿಯೇ ಬಗೆ ಬಗೆಯ ಖಾದ್ಯಗಳು ತಯಾರಾಗ್ತಿದೆ. ಸುಮಾರು 200 ಕ್ವಿಂಟಾಲ್ ಸಿಹಿ ಬೂಂದಿ, 20 ಕ್ವಿಂಟಾಲ್ ಖಾರಾ ಬೂಂದಿ ರೆಡಿಯಾಗ್ತಿದೆ. ಕಳೆದ ಮೂರು ದಿನಗಳಿಂದ 28 ಅಡುಗೆ ಭಟ್ಟರು ಖಾದ್ಯ ತಯಾರಿಯಲ್ಲಿ ತೊಡಗಿದ್ದಾರೆ. ಇದನ್ನೂ ಓದಿ: ಉಚಿತ ಎಲ್‍ಪಿಜಿ ಸಿಲಿಂಡರ್ ನೀಡಲು ಹಣ ಮಂಜೂರು: ಪ್ರಮೋದ್ ಸಾವಂತ್

    ಒಟ್ಟಿನಲ್ಲಿ ಶ್ರೀಗಳ ಜನ್ಮದಿನೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ರಾಜ್ಯದ ಪ್ರಬಲ ಸಮುದಾಯದ ಮತ ಸೆಳೆಯಲು ಕಾಂಗ್ರೆಸ್, ಬಿಜೆಪಿ ಪಕ್ಷಗಳು ಜಿದ್ದಿಗೆ ಬಿದ್ದಿವೆ. ಆದರೆ ಅದಕ್ಕಾಗಿ ಶ್ರೀಗಳ ಜನ್ಮದಿನವನ್ನು ನೆಪಮಾಡಿಕೊಂಡಿದ್ದಂತು ಸತ್ಯ.

  • ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ 2ನೇ ಪುಣ್ಯ ಸ್ಮರಣೆ – ಸಿದ್ದಗಂಗಾ ಮಠದಲ್ಲಿ ವಿಶೇಷ ಪೂಜೆ

    ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ 2ನೇ ಪುಣ್ಯ ಸ್ಮರಣೆ – ಸಿದ್ದಗಂಗಾ ಮಠದಲ್ಲಿ ವಿಶೇಷ ಪೂಜೆ

    ತುಮಕೂರು: ಇಂದು ತ್ರಿವಿಧ ದಾಸೋಹಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಎರಡನೇ ವರ್ಷದ ಪುಣ್ಯ ಸ್ಮರಣೆ. ಹೀಗಾಗಿ ಶ್ರೀ ಕ್ಷೇತ್ರ ಸಿದ್ದಗಂಗೆಯಲ್ಲಿ ನಸುಕಿನ ಜಾವ 4 ಗಂಟೆಯಿಂದಲೇ ವಿವಿಧ ಪೂಜಾ ಕಾರ್ಯಗಳು ಆರಂಭವಾಗಿವೆ. ಅಲಂಕೃತ ಗೊಂಡ ಶ್ರೀಗಳ ಗದ್ದುಗೆಯಲ್ಲಿ ಪೂಜಾ ಕೈಂಕರ್ಯ ನಡೆಯುತ್ತಿವೆ.

    ಲಗುನ್ಯಾಸ ಸಹಿತ ಮುದ್ರಾ ರುದ್ರಾಭಿಷೇಕ, ಚಮಕ ಸಹಿತ ರುದ್ರಾಭಿಷೇಕಗಳನ್ನು ಮಾಡಲಾಗುತ್ತಿದೆ. ಶ್ರಿ ಸಿದ್ದಲಿಂಗ ಸ್ವಾಮೀಜಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಬೆಳಗಿನಿಂದಲೆ ಶ್ರೀಮಠಕ್ಕೆ ಭಕ್ತರ ದಂಡು ಆಗಮಿಸ್ತಿದೆ. 11 ಗಂಟೆ ವೇಳೆಗೆ ಮಠದ ಅವರಣದಲ್ಲೇ ಸರಳವಾದ ವೇದಿಕೆ ಕಾರ್ಯಕ್ರಮ ನಡೆಯಲಿದೆ.

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ಪಶುಸಂಗೋಪನಾ ಸಚಿವರಾದ ಪ್ರತಾಪ್‍ಚಂದ್ರ ಸಾರಂಗಿ ಮತ್ತು ಸಿಎಂ ಯಡಿಯೂರಪ್ಪ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ. ಸಂಪೂರ್ಣ ಕಾರ್ಯಕ್ರಮ ಕೊರೊನಾ ನಿಯಮದಂತೆ ರೂಪಿಸಲಾಗಿದ್ದು, ಭಕ್ತರು ಜಾಗರೂಕತೆಯಿಂದ ಇರಬೇಕೆಂದು ಸಿದ್ದಲಿಂಗ ಸ್ವಾಮೀಜಿಗಳು ಭಕ್ತರಿಗ ಮನವಿ ಮಾಡಿದ್ದಾರೆ.

  • ತುಮಕೂರಿನಲ್ಲಿ ಸಂತರ ಮುಂದೆ ಮೂರು ಸಂಕಲ್ಪವಿಟ್ಟ ಮೋದಿ

    ತುಮಕೂರಿನಲ್ಲಿ ಸಂತರ ಮುಂದೆ ಮೂರು ಸಂಕಲ್ಪವಿಟ್ಟ ಮೋದಿ

    – ಸಿಎಎ ಪರ ಮೋದಿ ಮಾತು
    – ಪಾಕಿಸ್ತಾನದ ವಿರುದ್ಧ ಮಾತನಾಡಲ್ಲ ಯಾಕೆ?

    ತುಮಕೂರು: ಪ್ರಧಾನಿ ನರೇಂದ್ರ ಮೋದಿ ಸಿದ್ದಗಂಗಾ ಮಠದಲ್ಲಿ ಮಾತನಾಡುತ್ತಾ ಸಂತರ ಮುಂದೆ ಮೂರು ಸಂಕಲ್ಪಗಳನ್ನು ಹೇಳಿ ಜಾಗೃತಿ ಮೂಡಿಸಬೇಕೆಂದು ಕೇಳಿಕೊಂಡಿದ್ದಾರೆ.

    ಜವಾಬ್ದಾರಿ ಸಹಿತವಾಗಿ ಕರ್ತವ್ಯಕ್ಕೆ ಗೌರವ ನೀಡುವ ಸಂಸ್ಕøತಿ ಬಗ್ಗೆ ಜಾಗೃತಿ ಮೂಡಿಸುತ್ತಿರಬೇಕು. ಪ್ರಕೃತಿಯ ರಕ್ಷಣೆ (ಏಕಬಳಕೆ ಪ್ಲಾಸ್ಟಿಕ್ ಬಳಸಬಾರದು) ಮತ್ತು ಜಲ ಸಂರಕ್ಷಣೆ ಮಾಡಲು ಜಾಗೃತಿ ಮೂಡಿಸಬೇಕೆಂದು ಮನವಿ ಮಾಡಿದರು.

    ಸಿದ್ದಗಂಗಾ ಶ್ರೀಗಳ ಗದ್ದುಗೆಗೆ ತೆರಳಿ ನಮನ ಸಲ್ಲಿಸಿದ ಮೋದಿಗೆ ಹಣೆಗೆ ವಿಭೂತಿ ಹಚ್ಚಿ, ಕೊರಳಿಗೆ ರುದ್ರಾಕ್ಷಿ ಮಾಲೆ ಹಾಕಿ ಸಿದ್ದಲಿಂಗ ಶ್ರೀಗಳು ಬರಮಾಡಿಕೊಂಡರು. ಸಿದ್ದಗಂಗಾ ಮಠದ ವತಿಯಿಂದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಬೆಳ್ಳಿಯ ಪುತ್ಥಳಿ ನೀಡಿ ಗೌರವಿಸಲಾಯಿತು. ನಂತರ ಮಠದ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಗಳು, ಕನ್ನಡದಲ್ಲಿಯೇ ಮಾತು ಆರಂಭಿಸಿದರು.

    ವರ್ಷದ ಆರಂಭದಲ್ಲಿ ಸಿದ್ದಗಂಗಾ ಮಠಕ್ಕೆ ಆಗಮಿಸಿದ್ದು ಖುಷಿ ತಂದಿದೆ. ಆದರೆ ಶಿವಕುಮಾರ ಸ್ವಾಮೀಜಿಗಳು ಭೌತಿಕವಾಗಿ ಇಲ್ಲದಿರೋದು ನನ್ನನ್ನು ಕಾಡುತ್ತಿದೆ. ಇಂದು ಪ್ರೇರಣಾ ಶಕ್ತಿ ಆಗಿರುವ ಸಿದ್ದಗಂಗಾ ಶ್ರೀಗಳ ವಸ್ತು ಸಂಗ್ರಹಾಲಯದ ಶಿಲಾನ್ಯಾಸ ಉದ್ಘಾಟನೆಗೆ ಆಗಮಿಸಿದ್ದು ನನ್ನ ಪುಣ್ಯ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಚರಣ ಕಮಲಗಳಿಗೆ ನಾನು ನಮಿಸುತ್ತೇನೆ. ಕೆಲವು ದಿನಗಳ ಹಿಂದೆಯಷ್ಟೇ ಉಡುಪಿಯ ಪೇಜಾವರ ಶ್ರೀಗಳು ನಮ್ಮಿಂದ ಭೌತಿಕವಾಗಿ ದೂರವಾಗಿದ್ದಾರೆ. ಇಂತಹ ಮಹಾನ್ ಸಂತರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಚಲಿಸಬೇಕು. ದೇಶವನ್ನು ಸಮೃದ್ಧ, ಸಕ್ಷಮ, ಸಶಕ್ತವನ್ನಾಗಿ ಮಾಡುವ ಆಕಾಂಕ್ಷೆ ಎಲ್ಲ ಜನರದ್ದಾಗಿದೆ. ಹಾಗಾಗಿ ದೇಶವನ್ನು ಸದೃಢವಾಗಿ ಮಾಡಲು ಎಲ್ಲರೂ ಒಂದಾಗಬೇಕಿದೆ. 2014ರ ಬಳಿಕ ಸಾಮಾನ್ಯ ಜನರ ಬದಲಾವಣೆ ತರಲು ಸರ್ಕಾರ ಸನ್ನದ್ಧವಾಗಿದೆ ಎಂದು ತಿಳಿಸಿದರು.

    ಆರ್ಟಿಕಲ್ 371 ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಜನರಿಗೆ ಅವರ ಹಕ್ಕನ್ನು ನೀಡಿದ್ದೇನೆ. ಅಲ್ಲಿಯ ಜನರ ಅನಿಶ್ಚಿತತೆ ಮತ್ತು ಭಯೋತ್ಪಾದನೆಯ ಭಯವನ್ನು ದೂರ ಮಾಡಿದ್ದೇವೆ. ದೇಶದಲ್ಲಿ ರಾಮ ಮಂದಿರ ನಿರ್ಮಾಣದ ವಾತಾವರಣ ನಿರ್ಮಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿಪಕ್ಷಗಳು ವಿರೋಧಿಸುತ್ತಿವೆ. ಪಾಕಿಸ್ತಾನದಲ್ಲಿ ಧರ್ಮದ ಆಧಾರದ ಮೇಲೆ ಹಿಂಸಿಸಲಾಗುತ್ತಿದೆ. ಅಲ್ಲಿಯ ಹಿಂದೂ, ಸಿಖ್, ಜೈನ್ ಭಾರತಕ್ಕೆ ಬರುತ್ತಿದ್ದಾರೆ. ಇಂದು ಜನರು ತಮ್ಮ ಧರ್ಮ, ಪ್ರಾಣ, ಹೆಣ್ಣು ಮಕ್ಕಳನ್ನು ರಕ್ಷಿಸಲು ಭಾರತಕ್ಕೆ ಆಗಮಿಸುತ್ತಿರುವ ಶರಣಾರ್ಥಿಗಳಿಗೆ ಸಹಾಯ ಮಾಡೋದು ನಮ್ಮ ಕರ್ತವ್ಯ. ಶರಣು ಎಂದು ದೇಶಕ್ಕೆ ಬಂದವರನ್ನು ರಕ್ಷಿಸೋದು ನಮ್ಮ ಸಂಸ್ಕøತಿ. ಆದರೆ ವಿಪಕ್ಷಗಳು ಜನರನ್ನು ದಾರಿ ತಪ್ಪಿಸುವ ಸಲುವಾಗಿ ರಸ್ತೆಗಳಿದು ಪ್ರತಿಭಟನೆ ನಡೆಸುತ್ತಿವೆ. ಆದ್ರೆ ಇವರು ಯಾಕೆ ಪಾಕಿಸ್ತಾನದ ವಿರುದ್ಧ ಮಾತನಾಡಲ್ಲ ಎಂದು ವಿಪಕ್ಷಗಳನ್ನು ಪ್ರಶ್ನಿಸಿದರು.

    ನಮ್ಮ ಸರ್ಕಾರ ಪಾರದರ್ಶಕವಾಗಿ ಹಗಲು-ರಾತ್ರಿ ಎನ್ನದೇ ಕೆಲಸ ಮಾಡಿಕೊಂಡು ಬಂದಿದೆ. ಪ್ರತಿ ವ್ಯಕ್ತಿಯ ಜೀವನಮಟ್ಟವನ್ನು ಸುಧಾರಿಸುವತ್ತ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಆರೋಗ್ಯ ವಿಮೆ, ಗ್ಯಾಸ್ ಸಂಪರ್ಕ, ಮನೆ, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸೋದು ನಮ್ಮ ಸರ್ಕಾರದ ಕೆಲಸವಾಗಿದೆ. ಮಹಾತ್ಮ ಗಾಂಧೀಜೀಯವರ 150ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಬಯಲು ಮುಕ್ತ ಶೌಚಾಲಯದತ್ತ ದಿಟ್ಟ ಹೆಜ್ಜೆ ಇಡಬೇಕಿದೆ ಎಂದು ಕರೆ ಕೊಟ್ಟರು.

  • ಜ.31ಕ್ಕೆ ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮ

    ಜ.31ಕ್ಕೆ ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮ

    ತುಮಕೂರು: ನಡೆದಾಡುವ ದೇವರು, ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣಾ ಕಾರ್ಯಕ್ರಮವನ್ನು ಜನವರಿ 31ರಂದು ಬೆಳಗ್ಗೆ ನಡೆಸಲಾಗುತ್ತದೆ ಎಂದು ಸಿದ್ದಲಿಂಗ ಸ್ವಾಮೀಜಿಗಳು ತಿಳಿಸಿದ್ದಾರೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದಲಿಂಗ ಸ್ವಾಮೀಜಿಗಳು, ಪೂಜ್ಯರ ಆಧ್ಯಾತ್ಮದ ಶಕ್ತಿಯಿಂದಲೇ ಸಕಲ ಕಾರ್ಯಗಳು ಸುಗಮವಾಗಿ ನಡೆದಿದೆ. ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ವಹಿಸಲಿದ್ದಾರೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದ ಸ್ವಾಮೀಜಿ, ಸಿರಿಗೆರೆ ತರಬಾಳು ಸಂಸ್ಥಾನಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ಆರ್ಟ್ ಆಫ್ ಲಿವಿಂಗ್‍ನ ಶ್ರೀ ರವಿಶಂಕರ್ ಗುರೂಜಿ, ಕನಕಪುರದ ಮುಮ್ಮಡಿ ನಿರ್ವಾಣಮಹಾಸ್ವಾಮೀಜಿ ದಿವ್ಯಸಾನಿಧ್ಯ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

    ಈ ಕಾರ್ಯಕ್ರಮವನ್ನು ಸಿಎಂ ಕುಮಾರಸ್ವಾಮಿ ಅವರು ಉದ್ಘಾಟಿಸಲಿದ್ದಾರೆ. ಎಲ್ಲ ಸಚಿವರು, ಶಾಸಕರು, ಸಂಸದರು, ಗಣ್ಯರು, ಮುಖಂಡರಿಗೆ ಆಮಂತ್ರಣ ನೀಡಲಾಗಿದೆ ಎಂದ ಶ್ರೀಗಳು, ಮಠ ಯಾವುದೇ ಜಾತಿ ಧರ್ಮಗಳಿಗೆ ಸೀಮಿತವಲ್ಲ ಎಂದು ಹೇಳಿದರು.

    ಸಿದ್ದಗಂಗಾ ಶ್ರೀಗಳು ರೂಪಿಸಿದ್ದ ಕೆಲ ಯೋಜನೆಗಳು ಹಾಗೇ ಉಳಿದುಕೊಂಡಿವೆ. ಹೀಗಾಗಿ ಅವುಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಹೆಚ್ಚು ಗಮನ ನೀಡಲಾಗುವುದು. ಮಠದ ಆವರಣದಲ್ಲಿ ಶಿವಕುಮಾರ ಶ್ರೀಗಳ ಕಂಚಿನ ಪ್ರತಿಮೆ ನಿರ್ಮಾಣ, ದಾಸೋಹ ಭವನ, ಇನ್ನೀತರೆ ಕೆಲಸಗಳ ಬಗ್ಗೆ ಗಮನ ಹರಿಸಲಾಗುವುದು. ಗುರುಕಾರಣ್ಯ ಕಾರ್ಯ ಪರಂಪರೆ ಮುಂದುವರಿಸಲಾಗುತ್ತದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಯಕ ಯೋಗಿ ದಿನಕ್ಕೆ 5 ಗಂಟೆ ಮಾತ್ರ ನಿದ್ದೆ!

    ಕಾಯಕ ಯೋಗಿ ದಿನಕ್ಕೆ 5 ಗಂಟೆ ಮಾತ್ರ ನಿದ್ದೆ!

    ಅನ್ನ, ಅಕ್ಷರ, ಜ್ಞಾನವನ್ನು ಸಾವಿರಾರು ಮಂದಿಗೆ ನೀಡಿ ಅವರ ಬಾಳನ್ನು ಬೆಳಗಿಸಿದ ಸಿದ್ದಗಂಗಾ ಶ್ರೀಗಳು ನಿದ್ದೆಗೆಂದು ಮೀಸಲಿಟ್ಟ ಸಮಯ ಕೇವಲ 5 ಗಂಟೆ ಮಾತ್ರ. ಹೌದು. ಶ್ರೀಗಳು ಪ್ರತಿದಿನವೂ ಬೆಳಗಿನ ನಾಲ್ಕು ಗಂಟೆಗೆ ಎದ್ದು ಸ್ನಾನಮಾಡಿ, ಪೂಜಾಕೋಣೆಯಲ್ಲಿ ಒಂದು ತಾಸಿಗೂ ಹೆಚ್ಚು ಸಮಯ ಧ್ಯಾನದಲ್ಲಿ ತಲ್ಲೀನರಾಗುತ್ತಿದ್ದರು. ನಂತರ ಇಷ್ಟಲಿಂಗ ಪೂಜೆ. ದೂರದಿಂದ ಸ್ವಾಮಿಗಳ ದರ್ಶನಕಾಗಿ ಬರುವ ಭಕ್ತರಿಗೆ ತ್ರಿಪುಂಢ್ರ ಭಸ್ಮವನ್ನು ಕೊಟ್ಟು ತಾವೂ ಧರಿಸಿ, ಪೂಜೆಯನ್ನು ಮುಗಿಸುತ್ತಿದ್ದರು.

    ಬೆಳಗ್ಗೆ 6.30ರ ಸುಮಾರಿಗೆ ಆಹಾರ ಸೇವನೆ. ಒಂದು ಅಕ್ಕಿ-ಇಡ್ಲಿ, ಸ್ವಲ್ಪ ಹೆಸರು ಬೇಳೆ-ತೊವ್ವೆ, ‘ಸಿಹಿ’ ಹಾಗೂ ‘ಖಾರ ಚಟ್ನಿ’ ಸೇವಿಸುತ್ತಿದ್ದರು. ಎರಡು ತುಂಡು ಸೇಬು. ಇದರ ಬಳಿಕ, ‘ಬೇವಿನ-ಚಕ್ಕೆ ಕಷಾಯ’ ಸೇವನೆ ಮಾಡಿ ಮಕ್ಕಳ ಸಾಮೂಹಿಕ ಪ್ರಾರ್ಥನೆಯಲ್ಲಿ ಅವರು ಪಾಲ್ಗೊಳ್ಳುತ್ತಿದ್ದರು.

    ಪ್ರಾರ್ಥನೆಯ ನಂತರ, ಕಚೇರಿಗೆ ಧಾವಿಸಿ ಅಲ್ಲಿ ಪತ್ರಿಕೆಗಳ ವಾಚನವಾಗುತಿತ್ತು. ಅಲ್ಲಿಗೆ ಬಂದ ಭಕ್ತರಿಗೆ, ದರ್ಶನಾರ್ಥಿಗಳಿಗೆ ದರ್ಶನ ನೀಡುತ್ತಿದ್ದರು. ಈ ವೇಳೆ ಮಳೆ-ಬೆಳೆ, ಕುಶಲೋಪರಿ ವಿಚಾರ, ಗಣ್ಯರ ಭೇಟಿ, ಮಠದ ಆಡಳಿತ ಕಡತಗಳ ಪರಿಶೀಲನೆ, ಪತ್ರವ್ಯವಹಾರಗಳೇ ಮುಂತಾಗಿ ಹಲವಾರು ಕಾರ್ಯಗಳಲ್ಲಿ ನಿರತರಾಗುವುದಲ್ಲದೆ ಇಳಿವಯಸ್ಸಿನಲ್ಲೂ ದಣಿವರಿಯದೇ ಕಾರ್ಯನಿರತರಾಗಿ ‘ಕಾಯಕವೇ ಕೈಲಾಸ’ ಎಂದು ನುಡಿಯಲ್ಲಿ ಮಾತ್ರ ಹೇಳದೇ, ನಡೆಯಲ್ಲೂ ತೋರಿಸಿಕೊಡುತ್ತಿದ್ದರು.

    ಮಠದ ಪ್ರಸಾದ ನಿಲಯದ ಮುಂಭಾಗದ ಮಂಚದ ಮೇಲೆ ಆಸೀನರಾದ ಬಳಿಕ ಭಕ್ತರ ಕಷ್ಟ-ಸುಖಕ್ಕೆ ಸ್ಪಂದನೆ ಮಧ್ಯಾಹ್ನ ಮೂರು ಗಂಟೆವರೆಗೆ ನಿರಂತರವಾಗಿ ಸಾಗುತಿತ್ತು. ಬಳಿಕ ಶ್ರೀಗಳು ನೇರವಾಗಿ ಮಠಕ್ಕೆ ಸಾಗಿ, ಸ್ನಾನ ಪೂಜೆಗಳಲ್ಲಿ ಮಗ್ನರಾಗುತ್ತಿದ್ದರು. ನಂತರ ಒಂದು ಎಳ್ಳಿಕಾಯಿ ಗಾತ್ರದ ಮುದ್ದೆ, ಸ್ವಲ್ಪವೇ ಅನ್ನ, ಮತ್ತು ತೊಗರಿ ಬೇಳೆ ಸಾಂಬಾರ್ ಊಟ ಮಾಡುತ್ತಿದ್ದರು. ಸಂಜೆ 4 ಗಂಟೆಯ ನಂತರ ಪುನಃ ಭಕ್ತಗಣದ ಭೇಟಿ ಮಾಡಿ ಮಠದಲ್ಲಿ ಉಳಿದುಕೊಂಡು ವಿದ್ಯಾರ್ಜನೆ ಮಾಡುವ ಮಕ್ಕಳ ಕುಶಲೋಪರಿ, ಬಳಿಕ ದಾಸೋಹದ ಮಾಹಿತಿ, ಸುಮಾರು ರಾತ್ರಿ 9 ಗಂಟೆಯವರೆಗೂ ನಡೆಯುತಿತ್ತು.

    ಹಳೆಯ ಮಠದಲ್ಲಿ ರಾತ್ರಿಯ ಕಾರ್ಯಕ್ರಮ. ಸ್ನಾನ, ಪೂಜೆ, ಮತ್ತು ಪ್ರಸಾದ. ಒಂದು ಚಪಾತಿ ಇಲ್ಲವೇ ಒಂದು ದೋಸೆ. ಅದರ ಜೊತೆಗೆ ಚಟ್ನಿ ಅಥವಾ ಪಲ್ಯ. ಇದಿಲ್ಲದೇ ಹೋದರೆ, ಉಪ್ಪಿಟ್ಟು, ನಂತರ ಹಣ್ಣಿನ ಸೇವನೆ. ಹತ್ತು ಗಂಟೆಗೆ ಸ್ವಾಮಿಗಳು ಸಭಾಂಗಣದಲ್ಲಿ ಹಾಜರಾಗುತ್ತಿದ್ದರು. ‘ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕ’ದ ಒಂದು ದೃಶ್ಯವನ್ನು ನೋಡಿದ ಬಳಿಕ ಅಂದಿನ ದಿನದ ಕಾಯಕಕ್ಕೆ ವಿರಾಮ ಹಾಕುತ್ತಿದ್ದರು.

    ಸ್ವಾಮೀಜಿ ಮಲಗುವ ವೇಳೆ ಪುಸ್ತಕ ಓದಿ ಮಲಗುವ ಹವ್ಯಾಸವಿಟ್ಟುಕೊಂಡಿದ್ದರು. ಇದು ಕನಿಷ್ಠ ಅರ್ಧತಾಸಾದರೂ ನಡೆಯುತ್ತಿತ್ತು. ಹನ್ನೊಂದು ಗಂಟೆಗೆ ಮಲಗುತ್ತಿದ್ದರು. ಓದಿನೊಂದಿಗೆ ಆರಂಭವಾಗುವ ಶ್ರೀಗಳ ದಿನಚರಿ, ಓದಿನೊಂದಿಗೆ ಮುಕ್ತಾಯವಾಗುತಿತ್ತು. ಕೆಲವು ದಿನಗಳಲ್ಲಿ ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಂಡು ಆಹ್ವಾನಿಸುವ ಭಕ್ತರ ಮನೆಗಳಿಗೂ ಭೇಟಿ ನೀಡುತ್ತಿದ್ದರು.

    ಪ್ರಸಾದ ಸ್ವೀಕರಿಸುವ ವೇಳೆಯಲ್ಲಿ ಮಾತ್ರ ಬಿಸಿನೀರು ಸೇವಿಸುತ್ತಿದ್ದ ಶ್ರೀಗಳು ಉಳಿದ ಸಂದರ್ಭದಲ್ಲಿ ಏನನ್ನೂ ಸೇವಿಸುತ್ತಿರಲಿಲ್ಲ. ಕಳೆದ 8 ದಶಕಗಳ ಜೀವನ ಇದೇ ರೀತಿ ಸಾಗಿತ್ತು.

    ಶ್ರೀಗಳಿಗೆ ಸಿಕ್ಕ ಪ್ರಶಸ್ತಿಗಳು:
    ಕಾಯಕ ಯೋಗಿ ಸಿದ್ದಗಂಗಾ ಶ್ರೀಗಳಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ. 100ನೇ ವರ್ಷದ ಹುಟ್ಟುಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವ ಸಮಯದಲ್ಲಿ ಸರ್ಕಾರದಿಂದ ಕರ್ನಾಟಕ ರತ್ನ ಹಾಗೂ 2015 ನೇ ಇಸವಿಯಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡುವ ಮೂಲಕ ಭಾರತ ಸರ್ಕಾರ ಗೌರವಿಸಿತ್ತು.

    https://www.youtube.com/watch?v=2lK_EgaS96U

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ

    ಶ್ರೀಗಳ 50 ಶ್ರೀವಾಣಿಗಳು – ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ

    ಸಿದ್ದಗಂಗಾ ಶ್ರೀಗಳು ಇವತ್ತು ನಮ್ಮ ಜೊತೆ ಇಲ್ಲದೇ ಇರಬಹುದು. ಆದರೆ ಅವರು ಪ್ರವಚನ, ಭಾಷಣದಲ್ಲಿ ಹೇಳಿದ ವಾಣಿಗಳು ನಮ್ಮ ಜೊತೆಯಲ್ಲಿವೆ. ಹೀಗಾಗಿ ಇಲ್ಲಿ ಅವರು ಹೇಳಿದ 50 ವಾಣಿಗಳನ್ನು ನೀಡಲಾಗಿದೆ.

    1. ಮದುವೆ ಸಮಾರಂಭ ಸರಳವಾಗಿ ನಡೆಯಬೇಕು; ಪ್ರೀತಿ ಪ್ರೇಮಗಳ ಆತ್ಮೀಯ ಮಂಗಳ ಕಾರ್ಯಕ್ರಮಗಳಾಗಬೇಕು; ಎರಡು ಮನೆಗಳ ಬೆಳಕಿನ ಹಬ್ಬವಾಗಬೇಕು.
    2. ದುಡಿಮೆ ಸತ್ಯಶುದ್ಧವಾಗಿರಬೇಕು; ಪರಹಿತಮುಖಿಯಾಗಿರಬೇಕು.
    3. ಮನಸ್ಸು ಪವಿತ್ರವಾದುದು; ಅದನ್ನು ಜೋಪಾನ ಮಾಡುವ ಕರ್ತವ್ಯ ನಮ್ಮದು.
    4. ಲೋಕದ ಮನೋಧರ್ಮ ಏಕಮುಖಿಯಾದುದಲ್ಲ, ಬಹುಮುಖಿಯಾದುದು; ಸಂಕೀರ್ಣ ಸ್ವರೂಪ ಅದರದ್ದು.
    5. ನಮ್ಮ ಪೂರ್ವಿಕರು ತಮಗಾಗಿ ದುಡಿದು ಎತ್ತು, ಹೋರಿ, ಹಸುಗಳು ಸತ್ತಾಗ ಸಮಾಧಿ ಮಾಡುತ್ತಿದ್ದರೆ ಹೊರತು ಅವುಗಳನ್ನು ಕಟುಕರಿಗೆ ಮಾರುತ್ತಿರಲಿಲ್ಲ; ಮಾನವೀಯತೆ ಅವರ ಜೀವನವಾಗಿತ್ತು.

    6. ‘ಸೇವೆ’ ಪ್ರಚಾರದ ಸರಕಲ್ಲ; ಅದು ಗುಪ್ತಶಕ್ತಿ; ವ್ಯಕ್ತಿಯನ್ನು ಆರೋಗ್ಯವಂತನನ್ನಾಗಿಡುವ ಸಂಜೀವಿನಿ.
    7. ನಮ್ಮ ಹಿಂದಿನ ಪೂಜ್ಯ ಗುರುಗಳು ನಮಗೆ ಕಲಿಸಿದ ಪಾಠವೆಂದರೆ, ಸದಾ ಕ್ರಿಯಾಶೀಲವಾಗಿರುವ ಜೀವನಭಾಗ್ಯ.
    8. ಮಾತು ಮಿತವಾಗಿರಬೇಕು, ಹಿತವಾಗಿರಬೇಕು, ಪ್ರೀತಿಯಿಂದಿರಬೇಕು, ಸರಳವಾಗಿರಬೇಕು, ಮಧುರವಾಗಿರಬೇಕು, ಮೃದುವಾಗಿರಬೇಕು; ಮಾತು ತಪಸ್ಸು ಎಂಬಂತಿರಬೇಕು.
    9. ಆತ್ಮಾವಲೋಕನ ಅರಿವಿನ ಅಭಾವದಿಂದ ಸಮಾಜವಿಂದು ನೈತಿಕತೆಯ ದಿವಾಳಿಯನ್ನನುಭವಿಸುತ್ತಿದೆ.
    10. ಮಾನವ ಪ್ರಜ್ಞೆ ಜಾಗೃತವಾಗದ ಹೊರತು ಇಂದಿನ ಸಮಸ್ಯೆಗಳಿಗೆ ಪರಿಹಾರ ಕಾಣದು.

    11. ಸಹಜ ಪ್ರೀತಿ ಕಲ್ಲನ್ನೂ ಕರಗಿಸುತ್ತದೆ; ಕಟುಕನನ್ನು ಕರುಣಾಮಯನನ್ನಾಗಿಸುತ್ತದೆ.
    12. ಜಗತ್ತು ವೇಗವಾಗಿ ಮುಂದುವರಿದಿದೆ. ಆದರೆ ಆ ವೇಗದಲ್ಲಿ ವಿನಯವಿಲ್ಲ, ವಿಚಾರವಿಲ್ಲ, ಮೌಲ್ಯಗಳಿಲ್ಲ.
    13. ದುಡಿದೇ ತಿನ್ನುವುದು ಕೂಳು, ಶ್ರಮ ಜೀವನ ಊಟ ಮಾಡುವುದು ಪ್ರಸಾದ.
    14. ಕ್ರಮಬದ್ಧ ಜೀವನ ಪ್ರಗತಿಯ ಮೂಲ, ಅಕ್ರಮ ಜೀವನ ವಿನಾಶಕ್ಕೆ ಹಾದಿ.
    15. ಧರ್ಮ ತತ್ವಗಳು ಉಳಿಯಬೇಕಾದರೆ ಸ್ತ್ರೀಯರು ಸಂಸ್ಕಾರವಂತರಾಗಬೇಕು, ಸಮಾಜದ ಕಣ್ಣಾಗಬೇಕು.

    16. ಧರ್ಮ ಗ್ರಂಥದಲ್ಲಿಲ್ಲ, ಗುಡಿಯಲ್ಲಿಲ್ಲ, ಬದುಕಿನಲ್ಲಿದೆ, ಹೃದಯವಂತಿಕೆಯಲ್ಲಿದೆ.
    17. ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ.
    18. ಇಂದು ರಾಷ್ಟ್ರಾದ್ಯಂತ ಜನಶಕ್ತಿಯ ಅಪವ್ಯಯವಾಗುತ್ತಿದೆ. ಇದು ಶುಭ ಲಕ್ಷಣವಲ್ಲ.
    19. ಜನನಾಯಕರು ನೀತಿವಂತರಾಗದ ತನಕ ಸಮಾಜ ಪರಿಶುದ್ಧವಾಗಲಾರದು.
    20. ವ್ಯವಸಾಯವೆಂಬುವುದು ಪವಿತ್ರ ವೃತ್ತಿ. ಅನ್ನಬ್ರಹ್ಮನ ಸೃಷ್ಟಿ ಮಾಡುವ ಅನುಪಮ ಉದ್ಯೋಗ.

    21. ಪ್ರಕೃತಿಯಲ್ಲಿ ಅಪಾರ ಶಕ್ತಿ ಇದೆ. ಅದು ನೀಡುವ ಸೊಪ್ಪಿನಲ್ಲಿ, ಉಪ್ಪಿನಲ್ಲಿ, ತುಪ್ಪದಲ್ಲಿ ಆ ಶಕ್ತಿ ನಿಕ್ಷೇಪವಾಗಿದೆ.
    22. ‘ಕಾಯಕ’ ಲೋಕ ಕಲ್ಯಾಣಕ್ಕೆ ಮಾಡುವ ಪ್ರಾರ್ಥನೆ. ಕೈಯಿಂದ ಮಾಡುವ ಪೂಜೆ.
    23. ದೃಷ್ಟಿ ಪವಿತ್ರವಾಗಿರಲಿ, ಭಾವ ಶುದ್ಧವಾಗಿರಲಿ, ಬದುಕು ಭಕ್ತಿಯಿಂದೊಡಗೂಡಿರಲಿ.
    24. ಹೆಣ್ಣಿಗೆ ಧಾರ್ಮಿಕ ಸಂಸ್ಕಾರವನ್ನು, ಸ್ವಾತಂತ್ರ್ಯವನ್ನು ಕೊಟ್ಟಿದ್ದು ಶರಣ ಧರ್ಮ.
    25. ಮನುಷ್ಯ ಮನುಷ್ಯನಾಗಿ ಬಾಳುವ ಕಲೆಯನ್ನು ಇಂದು ಮರೆಯುತ್ತಿದ್ದಾನೆ.

    26. ಭಗವಂತನನ್ನು ನಂಬಿ ಪ್ರಾರ್ಥಿಸಿದರೆ ಅದರಿಂದ ಬರುವ ಲಾಭ ಅಪಾರವಾದುದು.
    27. ಪರಮಾತ್ಮ ಕೊಟ್ಟ ಶ್ರೇಷ್ಠವಾದ ಆಸ್ತಿಯಲ್ಲಿ ಹೆಚ್ಚಿನ ಭರವಸೆಯನ್ನು ತಾಳಬೇಕು.
    28. ಆಡಳಿತ ಮಾಡುವವರು ಬಹಳ ಎಚ್ಚರಿಕೆ ಹಾಗೂ ಜಾಣ್ಮೆಯಿಂದ ಇರಬೇಕು. ಹೇಗೆಂದರೆ ಮೈಯೆಲ್ಲಾ ಕಣ್ಣಾಗಿರಬೇಕು. ಇಲ್ಲದಿದ್ದರೆ ದೇಶ ಅಧೋಗತಿಗಿಳಿಯುತ್ತದೆ.
    29. ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ; ಸ್ವಚ್ಛಂದ ಪ್ರವೃತ್ತಿಯಲ್ಲಿ ಅದೊಂದು ಆತ್ಮವಿಕಾಸಕ್ಕೆ ರಕ್ಷೆ.
    30. ವ್ಯಕ್ತಿ ಭಗವಂತನ ಸಾಕ್ಷಾತ್ಕಾರಕ್ಕೆ ಜಗತ್ತನ್ನು ಬಿಡಬೇಕಾಗಿಲ್ಲ. ಸಂಸಾರ ತೊರೆಯಬೇಕಾಗಿಲ್ಲ, ಕಾಡನ್ನು ಸೇರಬೇಕಾಗಿಲ್ಲ. ತಾನು ಇದ್ದಲ್ಲೇ ಸಾಧನೆ ಮಾಡಿ ಸಿದ್ಧಿಯನ್ನು ಪಡೆಯಬಹುದು. ಸಾಕ್ಷಾತ್ಕಾರವನ್ನು ಹೊಂದಬಹುದು. ಅದು ಹೆಚ್ಚಾಗಿ ಮನಸ್ಸನ್ನೇ ಅವಲಂಬಿಸಿರುತ್ತದೆ.

    31. ಆತ್ಮ ಎಂದರೆ ದೇಹವಲ್ಲ ಅಥವಾ ಅವಯವ ಸಮೂಹವಲ್ಲ, ಮನಸ್ಸೂ ಅಲ್ಲ. ಈ ಎಲ್ಲವುಗಳಲ್ಲಿಯೂ ಇರತಕ್ಕ ಚೈತನ್ಯ. ಅದಕ್ಕೆ ನಾಶವಿಲ್ಲ. ಆ ಆತ್ಮವನ್ನು ಕೊಲ್ಲಲು ಯಾರಿಗೂ ಸಾಧ್ಯವಿಲ್ಲ.
    32. ದೀನದಲಿತರ ಉದ್ಧಾರದ ಸಲುವಾಗಿ ತಮ್ಮ ಜೀವನವನ್ನೇ ಮುಡುಪಿಡುವ ಪುಣ್ಯಶಾಲಿಯೇ ಮಹಾತ್ಮ.
    33. ಜಗತ್ತನ್ನು ಬಿಡದೇ, ಸಂಸಾರವನ್ನು ತೊರೆಯದೆ, ಕಾಡನ್ನು ಸೇರದೇ, ತಾನು ಇದ್ದಲ್ಲಿಯೇ ಸಾಧನೆ ಮಾಡಿ ಸಿದ್ಧಿ ಪಡೆಯುವುದು ಸಾಕ್ಷಾತ್ಕಾರ.
    34. ಮಾನವನ ಮನ ನೊಂದೀತೆಂದು ಸತ್ಯಕ್ಕೆ ಅಪಚಾರ ಮಾಡದೇ ನಡೆದುಕೊಳ್ಳುವವನೇ ಧೀರ.
    35. ಪ್ರಾರ್ಥನೆ ಎಂದರೆ ಮನಸ್ಸಿಗೆ ಅವಶ್ಯಕವಾಗುವ ಪ್ರಸಾದ; ಆಹಾರ. ಅದನ್ನು ಗಳಿಸುವಾಗ ಏಕಾಗ್ರತೆಯಿರಬೇಕು. ಹೊಟ್ಟಿಗೆ ಹಸಿವಾದಾಗ ಹೇಗೆ ಪ್ರಸಾದ ಸ್ವೀಕರಿಸುತ್ತೇವೆಯೇ ಹಾಗೆಯೇ ಮನಸ್ಸಿನ ಹಸಿವೆಗೆ ಪ್ರಾರ್ಥನೆ ಪ್ರಸಾದವಾಗುತ್ತದೆ.

    36. ಪ್ರತಿನಿತ್ಯ ಮಲಗುವ ಮುನ್ನ ನಡೆ ನುಡಿಗಳು ನಡೆಸಿದ ಒಳಿತು ಕೆಡಕುಗಳ ಜಮಾ ಖರ್ಚನ್ನು ಅವಲೋಕಿಸಬೇಕು.
    37. ಜ್ಞಾನ ಎನ್ನುವುದು ಬಹಳ ಪವಿತ್ರವಾದುದು. ಶ್ರೇಷ್ಠವಾದುದು. ಅದು ಅಮೂಲ್ಯ ರತ್ನ, ಯಾರು ನಿಜವಾದ ಜ್ಞಾನ ಸಂಪಾದನೆ ಮಾಡುತ್ತಾರೋ ನಿಜವಾದ ಜ್ಞಾನಿಯಾಗುತ್ತಾನೋ ಅವನೇ ನಿಜವಾದ ಶ್ರೀಮಂತ.
    38. ಶಿಕ್ಷಕ ಎಲ್ಲಕ್ಕೂ ಮೊದಲು ಚಾರಿತ್ರ್ಯ ಶುದ್ಧಿಯನ್ನು ಕಾಪಾಡಿಕೊಳ್ಳಬೇಕು. ಅಧ್ಯಯನ ಶೀಲನಾಗಿರಬೇಕು. ಚಲಿಸುವ ಜ್ಞಾನ ಭಂಡಾರವಾಗಿರಬೇಕು.
    39. ಯಾರೂ ಸೋಮಾರಿಗಳಾಗಬಾರದು. ಪರಾವಲಂಬನೆಯಂತೂ ಆಗಲೇಬಾರದು. ದುಡಿಮೆಯೇ ಜೀವನದ ಕರ್ತವ್ಯವೆಂದು ನಂಬಿ ಪ್ರತಿಯೊಬ್ಬ ವ್ಯಕ್ತಿಯೂ ಯಾವುದಾದರೊಂದು ಕಾಯಕವನ್ನು ಅವಲಂಬಿಸಿಯೇ ಜೀವನ ಸಾಗಿಸಬೇಕು.
    40. ಶಿಕ್ಷಣ ಒಂದು ವ್ಯಾಪಾರವಲ್ಲ, ಅದು ದಾಸೋಹದ ರೀತಿಯಲ್ಲಿ ಪಸರಿಸಬೇಕು. ಉತ್ತಮ ಸಮಾಜಕ್ಕಾಗಿ ಜ್ಞಾನದ ಬೀಜ ಬಿತ್ತಬೇಕು. ಬೆವರು ಸುರಿಸದೇ, ಯಾವುದಾದರೂ ಒಂದು ರೀತಿಯ ಕಾಯಕ ಮಾಡದೆ ಫಲ ಅನುಭವಿಸಲು ಯಾರಿಗೂ ಹಕ್ಕಿಲ್ಲ.

    41. ಸಾಲಕ್ಕೆ ಬಡ್ಡಿ ಎನ್ನುವುದು ಕೃತಜ್ಞತೆಗಾಗಿ ಕೊಡುವ ಧನವಾಗಿರಬೇಕೆ ಹೊರತು, ಬಡವರ ರಕ್ತ ಹೀರುವ ಜಿಗಣೆಯಾಗಬಾರದು.
    42. ಒಂದು ಅಗುಳು ಅನ್ನದ ಹಿಂದೆ ಸಾವಿರಾರು ಜನರ ಪರಿಶ್ರಮವಿದೆ, ಆದರಿಂದ ಪ್ರಸಾದ ಸೇವಿಸುವಾಗ ವ್ಯರ್ಥ ಮಾಡುವುದು ಶ್ರೇಯಸ್ಕರವಲ್ಲ.
    43. ದೇಹಕ್ಕೆ ಹಸಿವಾದರೆ ಪ್ರಸಾದದ ಅಗತ್ಯವುಂಟು, ಹಾಗೆಯೇ ಮನಸ್ಸಿನ ಹಸಿವಿಗೆ ಪ್ರಾರ್ಥನೆಯ ಅಗತ್ಯವುಂಟು. ಪ್ರಸಾದ ಸೇವನೆಯಲ್ಲೂ, ಪ್ರಾರ್ಥನೆಯಲ್ಲೂ ಏಕಾಗ್ರತೆ ಅತ್ಯವಶ್ಯಕ.
    44. ನಾವು ಒಮ್ಮೊಮ್ಮೆ ಯೋಚಿಸುತ್ತೇವೆ ಶ್ರೀ ಮಠ ಹೇಗೆ ಇಷ್ಟು ದೊಡ್ಡದಾಗಿ ಬೆಳೆಯಿತು ಎಂದು, ಆಗ ಇದು ಗುರುಗಳ ಶ್ರೀ ರಕ್ಷೆ ಹಾಗು ‘ಶಿವಯೋಗಿಯ ದೇಹ’ ವೃಥಾ ಸವೆಯದಂತೆ ಭಕ್ತರು ನಡೆಸಿಕೊಂಡಿದ್ದರ ಪರಿ ಎನಿಸುತ್ತಿರುತ್ತದೆ.
    45. ಪ್ರಪಂಚದಲ್ಲಿ ಧರ್ಮ ಯಾವುದು ಎಂದರೆ ಒಂದೇ ಧರ್ಮ, ಅದು ಮನುಷ್ಯ ಧರ್ಮ. ಕತ್ತಲಲ್ಲಿ ಇರುವವನನ್ನು ಬೆಳಕಿಗೆ ಕರೆಯುವುದು ಧರ್ಮ, ಅನ್ನವಿಲ್ಲದವನಿಗೆ ಅನ್ನವಿಕ್ಕುವುದು ಧರ್ಮ, ಬಾಯಾರಿದವನಿಗೆ ನೀರುಣಿಸುವುದು ಧರ್ಮ, ಮತ್ತೊಬ್ಬರ ಕಷ್ಟಕ್ಕೆ ನೆರಾವಾಗುವುದು ಧರ್ಮವೇ ಪರಂತು ಧರ್ಮ ಗುಡಿ ಗುಂಡಾರಗಳಲ್ಲಿ ನೆಲೆಸಿಲ್ಲ.

    46. ಸಾಧಕನೊಬ್ಬನಿಗೆ ಸನ್ಮಾನವೆಂದರೆ ಅವನನ್ನು ಸಭೆಗೆ ಕರೆದು ಶಾಲು, ಪೇಟಾ ತೊಡಿಸಿ ಫಲ ಪುಷ್ಪಗಳನ್ನಿತ್ತರೆ ಅದು ಸನ್ಮಾನವಲ್ಲ. ಬದಲಾಗಿ ಆ ವ್ಯಕ್ತಿಯಲ್ಲಿ ಇರಬಹುದಾದ ಒಳ್ಳೆಯ ಗುಣವೊಂದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಆ ವ್ಯಕ್ತಿಗೆ ಮಾಡಬಹುದಾದ ನಿಜವಾದ ಸನ್ಮಾನ.
    47. ಸ್ವಾಮಿತ್ವದ ಸೂಕ್ಷ್ಮತೆ, ಹಣಕಾಸಿನ ನಿರ್ವಹಣೆ, ಭಕ್ತರ ಒಡನಾಟ, ಆಂತರಿಕ ಮತ್ತು ಬಾಹ್ಯ ಆಡಳಿತ, ಆಧ್ಯಾತ್ಮಿಕ ಮನೋಭಾವ ಇವುಗಳನ್ನೆಲ್ಲ ನಮ್ಮ ಪೂಜ್ಯ ಗುರುಗಳು ಹೇಳಿ ಕಲಿಸಿದವಲ್ಲ. ಬದಲಾಗಿ ಇದ್ದು ಆಚರಿಸಿ ಕಲಿಸಿದವರು.
    48. ಜೀವನದಲ್ಲಿ ಒಳ್ಳೆಯ ಭವಿಷ್ಯ ಉಂಟಾಗಬೇಕಾದರೆ, ಗೌರವವಾದ ಬಾಳ್ವಿಕೆ ಉಂಟಾಗಬೇಕಾದರೆ ಕಾಲವನ್ನು ವ್ಯರ್ಥ ಮಾಡದೇ ಜ್ಞಾನ ಸಂಪಾದನೆ ಮಾಡಬೇಕು.
    49. ದೇಶ ಭಕ್ತಿಯಿಲ್ಲದವನು ಜೀವಂತವಾಗಿದ್ದರೂ ಮರಣಪ್ರಾಯ.
    50. ಜಗತ್ತಿನ ಜೀವನದಲ್ಲಿ ಮನುಷ್ಯ ಧರ್ಮದ ಅವಶ್ಯಕತೆ ಮಿಗಿಲಾಗಿರುವುದು. ಧರ್ಮ ಆಚರಣೆಯಾದಾಗ ಜಗತ್ತು ಶಾಂತಿ ಸಾಮ್ರಾಜ್ಯವಾಗುತ್ತದೆ. ಧರ್ಮ ಉಲ್ಲಂಘನೆಯಾದರೆ ಜಗತ್ತು ಗೊಂದಲ ವಾತಾವರಣಕ್ಕೆ ಈಡಾಗುತ್ತದೆ.

    https://www.youtube.com/watch?v=2lK_EgaS96U

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಂತ್ಯಸಂಸ್ಕಾರಕ್ಕೆ ಶಿವಣ್ಣನಾಗಿ ಬಂದವರು ಶಿವಕುಮಾರ ಸ್ವಾಮೀಜಿಯಾದ್ರು!

    ಅಂತ್ಯಸಂಸ್ಕಾರಕ್ಕೆ ಶಿವಣ್ಣನಾಗಿ ಬಂದವರು ಶಿವಕುಮಾರ ಸ್ವಾಮೀಜಿಯಾದ್ರು!

    ತುಮಕೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಬಾಲ್ಯದ ಹೆಸರು ಶಿವಣ್ಣ. 1922ರಲ್ಲಿ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತ ಶಿವಣ್ಣ 1926ರಲ್ಲಿ ಮೆಟ್ರಿಕ್ಯುಲೇಷನ್ ತೇರ್ಗಡೆಯಾದರು. 1927ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಉದ್ದಾನ ಶಿವಯೋಗಿಗಳ ಜೊತೆ ಶಿವಣ್ಣ ಅವರ ಒಡನಾಟ ಹೆಚ್ಚಾಯಿತು. ಈ ವರ್ಷವೇ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ಕಾಲೇಜು ಸೇರಿದರೂ ಶ್ರೀಗಳ ಜೊತೆಗಿನ ಸಂಬಂಧ ಹಾಗೆಯೇ ಮುಂದುವರಿದಿತ್ತು.

    1941ರಲ್ಲಿ ಉದ್ದಾನ ಶಿವಯೋಗಿಗಳ ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರು ಆಕಸ್ಮಿಕವಾಗಿ ಶಿವೈಕ್ಯರಾಗುತ್ತಾರೆ. ಈ ವೇಳೆ ಅಂತ್ಯಸಂಸ್ಕಾರ ಕಾರ್ಯಕ್ರಮಕ್ಕೆ ಆಗಮಿಸಿದ ಶಿವಣ್ಣ ಅವರ ಮೇಲೆ ಶ್ರೀಗಳ ಗಮನ ಹೋಗುತ್ತದೆ. ಶಿವಣ್ಣನ ಹಿನ್ನೆಲೆಯನ್ನು ಚೆನ್ನಾಗಿ ಅರಿತ ಕಾರಣ ಉದ್ದಾನ ಶ್ರೀಗಳು ಯಾರ ಜೊತೆಯೂ ನಿರ್ಧಾರ ತೆಗೆದುಕೊಳ್ಳದೇ ಎಲ್ಲರ ಮುಂದೆ ನನ್ನ ಮುಂದಿನ ಉತ್ತರಾಧಿಕಾರಿ ಶಿವಣ್ಣ ಎಂದು ಘೋಷಿಸಿ ಬಿಡುತ್ತಾರೆ.

    ಎಲ್ಲರಂತೆ ಸಾಮಾನ್ಯರಾಗಿ ಅಂತ್ಯಸಂಸ್ಕಾರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಿವಣ್ಣನವರು ಮರಳಿ ಹೋಗುವಾಗ ಕಾವಿ, ರುದ್ರಾಕ್ಷಿಗಳನ್ನು ಧರಿಸಿ ‘ಶ್ರೀ ಶಿವಕುಮಾರ ಸ್ವಾಮೀಜಿ’ಯಾಗಿ ಮರಳುತ್ತಾರೆ.

    ಶ್ರೀಗಳ ಪೂರ್ವಾಶ್ರಮ ಹೀಗಿತ್ತು:
    ಕರ್ನಾಟಕ ರತ್ನ, ನಡೆದಾಡುವ ದೇವರು ಎಂದೇ ಬಿರುದಾಂಕಿತ ಶ್ರೀ ಶಿವಕುಮಾರ ಸ್ವಾಮೀಜಿಯವರು ಮಾಗಡಿ ತಾಲೂಕಿನ ವೀರಾಪುರದಲ್ಲಿ ಏಪ್ರಿಲ್ 1, 1908ರಂದು ಹೊನ್ನಪ್ಪ, ಗಂಗಮ್ಮ ದಂಪತಿಯ ಮಗನಾಗಿ ಜನಿಸಿದರು. ಗಂಗಮ್ಮನವವರ ಪುಣ್ಯ ಗರ್ಭದಲ್ಲಿ 13ನೇ ಮಗನಾಗಿ ಜನಿಸಿದ ಮಗುವಿಗೆ `ಶಿವಣ್ಣ’ ಎಂದು ನಾಮಕರಣ ಮಾಡಿದರು. 1913ರಲ್ಲಿ ಪ್ರಾಥಮಿಕ ಮತ್ತು 1921ರಲ್ಲಿ ಮಾಧ್ಯಮಿಕ ವಿದ್ಯಾಭ್ಯಾಸವನ್ನು ನಾಗವಲ್ಲಿಯಲ್ಲಿ ಮುಗಿಸಿ 1922ರಲ್ಲಿ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತು 1926ರಲ್ಲಿ ಮೆಟ್ರಿಕ್ಯುಲೇಷನ್ ಪೂರ್ಣಗೊಳಿಸಿದರು.

    ಸಿದ್ದಗಂಗಾ ಮಠದ ಒಡನಾಟ ಹಿಂದೆಯೇ ಇದ್ದರೂ ಹೈಸ್ಕೂಲ್ ಶಿಕ್ಷಣದ ವೇಳೆ ಮತ್ತಷ್ಟು ಹೆಚ್ಚಾಯಿತು. 1927ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಉದ್ದಾನ ಸ್ವಾಮಿಗಳ ಜೊತೆ ಇವರ ಸಂಪರ್ಕ ಬೆಳೆಯಿತು.

    1927ರಲ್ಲಿ ಪ್ರವೇಶ ಪರೀಕ್ಷೆ ತೇರ್ಗಡೆಯಾಗಿ ಹೆಚ್ಚಿನ ಶಿಕ್ಷಣಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ರಾವ್ ಬಹದ್ದೂರ್ ಶ್ರೀ ಗುಬ್ಬಿ ತೋಂಟದಪ್ಪ ಧರ್ಮ ಛತ್ರದಲ್ಲಿ ಉಳಿದುಕೊಂಡ ಶಿವಣ್ಣ, ಶಿಸ್ತುಬದ್ಧವಾದ ವಿದ್ಯಾರ್ಥಿ ಜೀವನ ನಡೆಸಿದರು. ಮಠದ ಹಿತವನ್ನೇ ಬಯಸುತ್ತಿದ್ದ ಶಿವಣ್ಣ, ಉದ್ದಾನ ಶ್ರೀಗಳು ಹೇಳಿದ ಕೆಲಸಗಳನ್ನು ನಿಷ್ಠೆಯಿಂದ ಮಾಡುತ್ತಿದ್ದರು. ಹೀಗಾಗಿ ಉದ್ದಾನ ಶ್ರೀಗಳಿಗೆ ಮತ್ತು ಕಿರಿಯ ಶ್ರೀಗಳಾಗಿದ್ದ ಮರುಳಾರಾಧ್ಯರಿಗೆ ಶಿವಣ್ಣ ಪ್ರೀತಿ ಪಾತ್ರರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಡೆದಾಡುವ ದೇವರು ಸಿದ್ದಗಂಗಾ ಶ್ರೀ ಶಿವೈಕ್ಯ

    ನಡೆದಾಡುವ ದೇವರು ಸಿದ್ದಗಂಗಾ ಶ್ರೀ ಶಿವೈಕ್ಯ

    ತುಮಕೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ(111) ಸೋಮವಾರ ನಿಧನರಾಗಿದ್ದಾರೆ. ನಡೆದಾಡುವ ದೇವರೇ ಎಂದು ಕರೆಸಿಕೊಳ್ಳುತ್ತಿದ್ದ ಶ್ರೀಗಳು ಅಪಾರ ಭಕ್ತರನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

    ಈಗಾಗಲೇ ನಾಡಿನಾದ್ಯಂತ ಮೌನ ಆವರಿಸಿದ್ದು, ಶ್ರೀಗಳ ಅಂತಿಮ ದರ್ಶನ ಪಡೆಯಲು ಭಕ್ತರು ಕಾಯುತ್ತಿದ್ದಾರೆ. ಸಿದ್ದಗಂಗಾ ಮಠದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾರ್ವಜನಿಕರು ಶಾಂತಿಯಿಂದ ಇರಬೇಕು ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

    ಏಪ್ರಿಲ್ 1, 1908ರಲ್ಲಿ ಮಾಗಡಿ ತಾಲೂಕಿನ ವೀರಾಪುರದಲ್ಲಿ ಶಿವಕುಮಾರ ಸ್ವಾಮೀಜಿ ಜನಿಸಿದ್ದರು. ವೀರಾಪುರದ ಹೊನ್ನೇಗೌಡ, ಗಂಗಮ್ಮ ದಂಪತಿಗೆ ಜನಿಸಿದ ಇವರ ಬಾಲ್ಯದ ಹೆಸರು ಶಿವಣ್ಣ ಆಗಿತ್ತು. ಮರಳಿನ ಮೇಲೆ ಅಕ್ಷರ ಬರೆಯುವ ಮೂಲಕ ಶಿವಣ್ಣನ ಶೈಕ್ಷಣಿಕ ಜೀವನ ಆರಂಭಗೊಂಡಿತ್ತು. ಪ್ರಾಥಮಿಕ ಶಾಲಾ ದಿನಗಳಲ್ಲೇ ತಾಯಿ ಕಳೆದುಕೊಂಡ ಶಿವಣ್ಣ, ನಾಗವಲ್ಲಿಯಲ್ಲಿ ಮಾಧ್ಯಮಿಕ ಶಿಕ್ಷಣ 1922ರಿಂದ ತುಮಕೂರಿನ ಸರ್ಕಾರಿ ಪ್ರೌಢ ಶಿಕ್ಷಣ, 1926ರಲ್ಲಿ ಮೆಟ್ರಿಕ್ಯುಲೇಷನ್ ಪೂರ್ಣ ಬಳಿಕ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಓದಿದ್ದರು.

    1930ರ ನವೆಂಬರ್ 11 ರಂದು ಸಿದ್ದಗಂಗಾ ಮಠದ ಶ್ರೀ ಮರುಳಾರಾಧ್ಯ ಸ್ವಾಮಿಗಳವರ ಸಮಾಧಿ ಕ್ರಿಯೆಗೆ ಬಂದಾಗ ಶ್ರೀ ಉದ್ದಾನ ಶಿವಯೋಗಿಗಳವರ ಕೃಪಾದೃಷ್ಟಿಗೆ ಒಳಗಾಗಿದ್ದರು. ಬಳಿಕ 1930ರ ಮಾ.3ರಂದು ಸಿದ್ದಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಉದ್ದಾನ ಶ್ರೀಗಳು ಶಿವಣ್ಣ ಅವರನ್ನು ಆಯ್ಕೆ ಮಾಡಿದ್ದರು.

    ಆಗಿದ್ದು ಏನು?
    ಸ್ಟಂಟ್ ಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಡಿಸೆಂಬರ್ 1ರಂದು ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಗೆ ಆಗಮಿಸಿದ್ದ ಶ್ರೀಗಳು ವ್ಹೀಲ್ ಚೇರ್ ನಲ್ಲಿ ಕುಳಿತುಕೊಳ್ಳಲು ಒಪ್ಪದೇ ನಡೆದುಕೊಂಡು ಹೋಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸಿದ್ದಗಂಗಾ ಶ್ರೀಗಳನ್ನು ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಸತತ 13 ದಿನಗಳ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಶ್ರೀಗಳು ಡಿ.19 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮಠ ತಲುಪಿದ್ದರು. ರೇಲಾ ಆಸ್ಪತ್ರೆಯಲ್ಲಿ ಡಾ. ಮೊಹಮ್ಮದ್ ರೇಲಾ ನೇತೃತ್ವದಲ್ಲಿ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಸತತ 2 ಗಂಟೆಗಳ ಕಾಲ ವೈದ್ಯರು ಶ್ರೀಗಳಿಗೆ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದರು.

    ಮಠದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಶ್ರೀಗಳು ಬೇಗನೇ ಗುಣಮುಖರಾಗಲು ಜನವರಿ 3 ರಂದು ಸಿದ್ದಗಂಗಾ ಆಸ್ಪತ್ರೆಗೆ ಕರೆ ತರಲಾಗಿತ್ತು. ಮಠದ ವಾತಾವರಣದಲ್ಲಿ ಶ್ರೀಗಳಿಗೆ ಸೋಂಕು ತಗಲುವ ಸಾಧ್ಯತೆ ಇದ್ದು, ಮಠಕ್ಕೆ ವಿಐಪಿಗಳು ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಆದ್ದರಿಂದ ಆಸ್ಪತ್ರೆಗೆ ಶಿಫ್ಟ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಯಾವುದೇ ಕಾರಣಕ್ಕೂ ನಾಡಿನ ಭಕ್ತರೂ ಇದನ್ನು ಅನ್ಯತ ತಿಳಿದುಕೊಳ್ಳಬಾರದು. ಶ್ರೀಗಳ ಆರೋಗ್ಯ ಉತ್ತಮವಾಗಿ ಚೇತರಿಕೆ ಆಗುತ್ತಿದೆ. ವಿಐಪಿಗಳ ಭೇಟಿಗೂ ಅವಕಾಶ ನಿರಾಕರಿಸಲಾಗಿದೆ ಎಂದು ಕಿರಿಯ ಶ್ರೀಗಳು ಸ್ಪಷ್ಟಪಡಿಸಿದ್ದರು.

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳು ಮಠಕ್ಕೆ ತನ್ನನ್ನು ಕರೆದುಕೊಂಡು ಹೋಗುವಂತೆ ಸೂಚನೆ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಜ.16 ರಂದು ಮಠಕ್ಕೆ ಶಿಫ್ಟ್ ಮಾಡಲಾಗಿತ್ತು. ಮಠದಲ್ಲೇ ಐಸಿಯು ಮಾದರಿಯಲ್ಲೇ ಕೊಠಡಿಯನ್ನು ನಿರ್ಮಿಸಿ ಅಲ್ಲೇ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತಿತ್ತು.

    ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳಿಗೆ ಡಾ.ಪರಮೇಶ್ ನೇತೃತ್ವದ ತಂಡ ಚಿಕಿತ್ಸೆ ನೀಡುತಿತ್ತು. ಜ.21 ಸೋಮವಾರ ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಮಠಕ್ಕೆ ದೊಡ್ಡ ಪ್ರಮಾಣದ ಭಕ್ತರು ಮತ್ತು ಮಕ್ಕಳು ಆಗಮಿಸತೊಡಗಿದರು. ಆದ್ದರಿಂದ ಮುಂಜಾಗೃತಾ ಕ್ರಮವಾಗಿ ಸಿದ್ದಗಂಗಾ ಮಠಕ್ಕೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿತ್ತು.

    ಭಕ್ತರು ಶ್ರೀಗಳು ಚಿಕಿತ್ಸೆ ಪಡೆಯುತ್ತಿದ್ದ ಕೋಣೆಯ ಕಿಟಿಕಿಯ ಮೂಲಕ ದರ್ಶನ ಪಡೆದು ಹೋಗುತ್ತಿದ್ದರು. ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ಶ್ರೀಗಳಿಗೆ ರಕ್ತದ ಒತ್ತಡ ಮತ್ತು ಉಸಿರಾಟದಲ್ಲಿ ಕೊಂಚ ಏರುಪೇರು ಕಂಡು ಬಂದಿದ್ದು, ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಗಿತ್ತು.

    ಮಠಕ್ಕೆ ಮತ್ತೆ ಶಿಫ್ಟ್ ಆದ ಬಳಿಕ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ತಮ್ಮನ್ನು ನೋಡಲು ಬಂದ ಭಕ್ತರನ್ನು ಕಣ್ತೆರೆದು ವೀಕ್ಷಿಸುತ್ತಿದ್ದರು. ಅಷ್ಟೇ ಅಲ್ಲದೆ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಶ್ರೀಗಳ ಪಾದ ಸ್ಪರ್ಶಿಸಿ ನಮಸ್ಕರಿಸಿದ ವೇಳೆ ಕಣ್ಣು ತೆರೆದು ಮುಗುಳ್ನಕ್ಕಿದ್ದರು. ಕಿರಿಯ ಶ್ರೀಗಳ ಸಹಾಯದೊಂದಿಗೆ ಇಷ್ಟಲಿಂಗ ಪೂಜೆಯಲ್ಲಿ ನಡೆದಾಡುವ ದೇವರು ಭಾಗಿಯಾಗಿ, ಅವರ ಪಕ್ಕದಲ್ಲೇ ಕುಳಿತು ಕಿರಿಯ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದ್ದರು.

  • ನಡೆದಾಡುವ ದೇವರ ಆರೋಗ್ಯದಲ್ಲಿ ಚೇತರಿಕೆ

    ನಡೆದಾಡುವ ದೇವರ ಆರೋಗ್ಯದಲ್ಲಿ ಚೇತರಿಕೆ

    ತುಮಕೂರು: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಮಠದಲ್ಲಿ ಚಿಕಿತ್ಸೆ ನೀಡಲಾಗಿದೆ. ಸದ್ಯಕ್ಕೆ ಸ್ವಾಮಿಜಿಗಳ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿದೆ.

    ಬಿಜಿಎಸ್ ಆಸ್ಪತ್ರೆಯ ಡಾ.ರವೀಂದ್ರ ಅವರ ತಂಡ ಬಂದು ತಪಾಸಣೆ ನಡೆಸಿ ಚಿಕಿತ್ಸೆಯನ್ನು ನೀಡಿದೆ. ನಡೆದಾಡುವ ದೇವರು ಚೇತರಿಸಿಕೊಂಡಿದ್ದಾರೆ. ಸಿದ್ದಗಂಗಾ ಶ್ರೀಗಳು ಆರೋಗ್ಯರಾಗಿದ್ದಾರೆಂದು ಮಠದ ಕಿರಿಯ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳ ಆಪ್ತ ವೈದ್ಯ ಡಾ. ಪರಮೇಶ್ವರ್, ಹೃದಯ ಬಡಿತದಲ್ಲಿ ಸ್ವಲ್ಪ ಏರುಪೇರು ಕಂಡುಬಂದಿದ್ದು, ಜ್ವರದಿಂದ ಬಳಲುತ್ತಿದ್ದರು. ಬಳಿಕ ಬಿಜಿಎಸ್ ಆಸ್ಪತ್ರೆಯ ಡಾ.ರವೀಂದ್ರರವರ ತಂಡ ಬಂದು ತಪಾಸಣೆ ನಡೆಸಿ ಏನು ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ. ಇಂಜೆಕ್ಷನ್ ನೀಡಿದ ಬಳಿಕ ಸ್ವಾಮೀಜಿ ಕೂಡ ಆರಾಮಗಿದ್ದಾರೆ. ಪೂಜೆಯನ್ನು ಕೂಡ ಮಾಡಿದ್ದಾರೆ ಎಂದು ಹೇಳಿದ್ದಾರೆ.

    2018 ಜನವರಿಯಲ್ಲಿ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು. ಅಂದು ಅಳವಡಿಸಿದ್ದ ಸ್ಟಂಟ್ ಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಡಿಸೆಂಬರ್ 1ರಂದು ಬಿಜಿಎಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಗೆ ಆಗಮಿಸಿದ್ದ ಶ್ರೀಗಳು ವ್ಹೀಲ್ ಚೇರ್ ನಲ್ಲಿ ಕುಳಿತುಕೊಳ್ಳಲು ಒಪ್ಪದೇ ನಡೆದುಕೊಂಡು ಹೋಗುವ ಮೂಲಕ ಎಲ್ಲರನ್ನು ಅಚ್ಚರಿಸಿಗೊಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂದ್ರಜಿತ್ ಲಂಕೇಶ್ ಹುಟ್ಟುಹಬ್ಬ- ಸಿದ್ದಗಂಗಾಶ್ರೀಗಳ ಆಶೀರ್ವಾದ ಪಡೆದುಕೊಂಡ ಇಜಿಲ

    ಇಂದ್ರಜಿತ್ ಲಂಕೇಶ್ ಹುಟ್ಟುಹಬ್ಬ- ಸಿದ್ದಗಂಗಾಶ್ರೀಗಳ ಆಶೀರ್ವಾದ ಪಡೆದುಕೊಂಡ ಇಜಿಲ

    ತುಮಕೂರು: ನಟ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ತಮ್ಮ 45 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಸಿದ್ದಗಂಗಾ ಮಠಕ್ಕೆ ಭೇಟಿಕೊಟ್ಟು ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

    ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಪಿ.ಲಂಕೇಶ್ ಅವರ ಕೆಲ ಪುಸ್ತಕಗಳನ್ನು ಕೊಟ್ಟು ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಅಷ್ಟೇ ಅಲ್ಲದೇ ಮಠದ ವಿದ್ಯಾರ್ಥಿಗಳಿಗೂ ಪಿ. ಲಂಕೇಶ್ ಅವರ ಸಾಹಿತ್ಯ ಕೃತಿಗಳನ್ನು ಕೊಟ್ಟು ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.

    ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ಸಹೋದರಿ ಗೌರಿಲಂಕೇಶರನ್ನು ಈ ವೇಳೆ ನೆನಪಿಸಿಕೊಂಡರು. ಅಕ್ಕ ಇಲ್ಲದೆ ಇರುವ ಎರಡನೇ ಹುಟ್ಟುಹಬ್ಬ ಇದಾಗಿದ್ದು, ಕಳೆದ ವರ್ಷ ನಾನು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿಲ್ಲ. ಗೌರಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತಿದ್ದೇನೆ. ನಾನು ಗೌರಿಯ ಬಗ್ಗೆ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಗೌರಿ ಕೊಲೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮಾಡಿ ಇದೀಗ ಕೊಲೆಗಾರರನ್ನು ಬಂಧಿಸಲಾಗುತ್ತಿದೆ. ಕೋರ್ಟ್ ತೀರ್ಪು ಬಂದ ನಂತರ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ. ಅಲ್ಲಿವರೆಗೂ ನಾನು ಏನೂ ಹೇಳುವುದಿಲ್ಲ ಎಂದು ಇಂದ್ರಜಿತ್ ಲಂಕೇಶ್ ಅವರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv