Tag: ಶ್ರೀ ಶಿವಕುಮಾರ ಸ್ವಾಮೀಜಿ

  • ಮಠದಲ್ಲಿ ಅಚ್ಚುಕಟ್ಟಾಗಿ ನಡೆಯುತ್ತಿದೆ ದಾಸೋಹದ ವ್ಯವಸ್ಥೆ

    ಮಠದಲ್ಲಿ ಅಚ್ಚುಕಟ್ಟಾಗಿ ನಡೆಯುತ್ತಿದೆ ದಾಸೋಹದ ವ್ಯವಸ್ಥೆ

    ತುಮಕೂರು: ನಡೆದಾಡುವ ದೇವರು, ಕಲಿಯುಗದ ಬಸವಣ್ಣ ಶತಾಯುಷಿ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಯ ಅಂತಿಮ ದರ್ಶನ ಪಡೆಯಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಸಾಗರ ತುಮಕೂರು ಸಿದ್ದಗಂಗಾ ಮಠದತ್ತ ಹರಿದು ಬರುತ್ತಿದ್ದು, ಭಕ್ತರಿಗಾಗಿ ಅಚ್ಚುಕಟ್ಟಾಗಿ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ.

    ಶಿವಕುಮಾರ ಸ್ವಾಮೀಜಿಗಳು ಮಠಕ್ಕೆ ಆಗಮಿಸುವ ಭಕ್ತರಿಗೆ ದಾಸೋಹ ತಪ್ಪಬಾರದು. ತಡವಾದರೂ ದಾಸೋಹ ಸಿಗದೇ ಭಕ್ತರು ತೆರಳಬಾರದು ಎಂದು ಹೇಳುತ್ತಿದ್ದರು. ನಡೆದಾಡುವ ದೇವರ ಈ ವಾಕ್ಯ ಈಗಲೂ ಪಾಲನೆಯಾಗುತ್ತಿದ್ದು, ಅಂತಿಮ ದರ್ಶನಕ್ಕೆ ಬರುತ್ತಿರುವ ಭಕ್ತರಿಗೆ ಯಾವುದೇ ಅನಾನುಕೂಲ ಉಂಟಾಗದಂತೆ ಹಾಗೂ ಪ್ರಸಾದ ವ್ಯವಸ್ಥೆಯಲ್ಲಿ ಯಾವುದೇ ತೊಂದರೆಯಾಗದಂತೆ ರಾತ್ರಿಯಿಂದಲೇ ಪ್ರಸಾದವನ್ನ ತಯಾರಿಸಿ, ಊಟದ ವ್ಯವಸ್ಥೆಯನ್ನ ಅಚ್ಚುಕಟ್ಟಾಗಿ ನೀಡಲಾಗುತ್ತಿದೆ.  ಇದನ್ನೂ ಓದಿ:ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ

    ದಾಸೋಹದಲ್ಲಿ ಸಹಾಯ ಮಾಡಲು ಹಲವಾರು ಭಕ್ತರು ಕೂಡ ಕೈ ಜೋಡಿಸುತ್ತಿದ್ದಾರೆ. ದೇವರ ಮೇಲಿನ ಪ್ರೀತಿಗಾಗಿ ದಾಸೋಹ ಕೇಂದ್ರಕ್ಕೆ ಬಂದು ತರಕಾರಿ ಕತ್ತರಿಸಿಕೊಟ್ಟು, ಭಕ್ತ ಸಮೂಹ ಪ್ರಸಾದ ತಯಾರಿಗೆ ಸಹಾಯ ಮಾಡುತ್ತಿದ್ದಾರೆ. ಇದನ್ನೂ ಓದಿ: ಶ್ರೀಗಳು ಇಲ್ಲದ ರಾತ್ರಿ ಕಳೆದ ಮಠದ ಮಕ್ಕಳು- ಒಬ್ಬರಿಗೆ ಒಬ್ಬರು ಆಸರೆಯಾಗಿ ಮಲಗಿದ್ರು

    ಸಿದ್ದಗಂಗಾ ಮಠದಲ್ಲಿ ಒಟ್ಟು 10 ಕಡೆ ದಾಸೋಹ ವ್ಯವಸ್ಥೆ ನಡೆಯುತ್ತಿದ್ದು, ಹೊಸ ಮಠ ದಾಸೋಹ ಭವನ ಹಾಗೂ ಹೊಸ ಮಠದ ಶ್ರೀಗಳ ಕಚೇರಿಯ ಬಳಿ ಕೂಡ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಹೊಸ ಮಠದ ಹಿಂಭಾಗದಲ್ಲಿ 3 ಕಡೆ, ಕ್ಯಾತಸಂದ್ರ ಸರ್ಕಲ್, ಮಠದ ಹಿಂದಿನ ಗೇಟ್, ಬಂಡೇಪಾಳ್ಯ, ಶ್ರೀನಗರ ಕ್ರಾಸ್ ಹಾಗೂ ವಜ್ರಮಹೋತ್ಸವ ಕಟ್ಟಡದ ಬಳಿ ತಲಾ ಒಂದೊಂದರಂತೆ ಒಟ್ಟು 10 ಕಡೆ ದಾಸೋಹದ ವ್ಯವಸ್ಥೆ ಮಾಡಲಾಗಿದೆ.

    ಸಿದ್ದಗಂಗಾ ಮಠಕ್ಕೆ ಬಂದ ಭಕ್ತರು ಖಾಲಿ ಹೊಟ್ಟೆಯಲ್ಲಿ ಹೋಗಬಾರದೆಂದು ಅನ್ನದಾಸೋಹ 24 ಗಂಟೆಯಿಂದ ನಡೆಯುತ್ತಿದೆ. ಇವರೆಗೆ 2.5 ಲಕ್ಷ ಜನ ಅನ್ನ ದಾಸೋಹ ಸಹ ಪಡೆದಿದ್ದಾರೆ. ಉಪ್ಪಿಟ್ಟು, ಕೇಸರಿ ಬಾತ್, ಅನ್ನ, ಸಾಂಬರ್ ಸೇರಿದಂತೆ ಹಲವು ಪದಾರ್ಥಗಳು ಸಿದ್ಧವಾಗುತ್ತಲೇ ಇದೆ. ಸಿದ್ದಗಂಗಾ ಮಠದಲ್ಲಿ ಅಡವಿ ಶ್ರೀಗಳು ಆರಂಭಿಸಿದ ಅನ್ನ ದಾಸೋಹ ಪದ್ಧತಿ ನೂರಾರು ವರ್ಷದಿಂದ ನಡೆದುಕೊಂಡು ಬಂದಿದ್ದು, ಇಂದು ಕೂಡ ಮುಂದುವರಿದಿದೆ.  ಇದನ್ನೂ ಓದಿ:ಜೀವಿತಾವಧಿಯಲ್ಲಿ 5 ಬಾರಿ ವಿಮಾನ ಪ್ರಯಾಣ – ಸರಳತೆಗೆ ಮತ್ತೊಂದು ಹೆಸರೇ ‘ನಡೆದಾಡುವ ದೇವರು’

    ಕೇವಲ ಸಿದ್ದಗಂಗಾ ಮಠದಲ್ಲಿ ಮಾತ್ರವಲ್ಲದೇ ತುಮಕೂರು ನಾಗರೀಕರ ವೇದಿಕೆಯಿಂದ ಉಚಿತ ಊಟ ಹಾಗೂ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಅಂತಿಮ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಉಪಹಾರ ಮತ್ತು ಊಟವನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಒಟ್ಟು ಜಿಲ್ಲೆಯಲ್ಲಿ 60 ಕಡೆ ರೈಸ್ ಮಿಲ್ ಮಾಲೀಕರ ಸಂಘ ಊಟ, ಉಪಹಾರ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ಹಾಗೆಯೇ ಜಿಲ್ಲೆಯ ಹಲವೆಡೆ ಹೋಟೆಲ್‍ಗಳ ಬಂದ್ ಹಿನ್ನಲೆ ಊಟ, ಉಪಹಾರಕ್ಕೆ ಸಮಸ್ಯೆಯಾಗದಂತೆ ನಾಗರೀಕರು ಹಾಗು ಸಂಘ, ಸಂಸ್ಥೆಗಳು ಕಾಳಜಿ ವಹಿಸಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಹಾಗೂ ಬಸ್ ನಿಲ್ದಾಣದ ಬಳಿ ಊಟ, ಉಪಹಾರ ವ್ಯವಸ್ಥೆ ಮಾಡಲಾಗಿದೆ.

    https://www.youtube.com/watch?v=mxA9HE4qgJQ

    https://www.youtube.com/watch?v=WTHN3QhN8Zg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕ್ಯಾತಸಂದ್ರ ನಿಲ್ದಾಣದ ಬಳಿ ಪ್ರತಿ ರೈಲಿಗೆ ನಿಲುಗಡೆ!

    ಕ್ಯಾತಸಂದ್ರ ನಿಲ್ದಾಣದ ಬಳಿ ಪ್ರತಿ ರೈಲಿಗೆ ನಿಲುಗಡೆ!

    ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿ ಶಿವೈಕ್ಯಗೊಂಡ ಹಿನ್ನೆಲೆಯಲ್ಲಿ ಕ್ಯಾತಸಂದ್ರ ರೈಲ್ವೆ ನಿಲ್ದಾಣದ ಬಳಿ ಪ್ರತಿಯೊಂದು ರೈಲುಗಳು ಸ್ಟಾಪ್ ನೀಡುತ್ತಿವೆ.

    ಮಠದ ಸಮೀಪವೇ ಕ್ಯಾತಸಂದ್ರ ರೈಲ್ವೆ ನಿಲ್ದಾಣ ಇದೆ. ಈ ಹಿಂದೆ ಪ್ಯಾಸೆಂಜರ್ ರೈಲು ಮಾತ್ರ ಕ್ಯಾತಸಂದ್ರ ರೈಲು ನಿಲ್ದಾಣದಲ್ಲಿ ನಿಂತು ಮುಂದೆ ಸಾಗುತ್ತಿತ್ತು. ಆದರೆ ಈಗ ಲಕ್ಷಾಂತರ ಭಕ್ತರು ರೈಲಿನಲ್ಲಿ ಶ್ರೀಗಳ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕೆ ಕ್ಯಾತಸಂದ್ರದ ಬಳಿ ಸ್ಟಾಪ್ ನೀಡಲು ರೈಲ್ವೆ ಇಲಾಖೆ ವ್ಯವಸ್ಥೆ ಮಾಡಿದೆ.

    ಅಷ್ಟೇ ಅಲ್ಲದೇ ಮಠದ ಬಳಿ ಗಂಟೆಗೆ 20 ಕಿ.ಮೀ ವೇಗದಲ್ಲಿ ಮಾತ್ರ ರೈಲು ಸಂಚಾರ ಮಾಡುತ್ತಿದೆ. ಲಕ್ಷಾಂತರ ಭಕ್ತರು ರೈಲ್ವೆ ಹಳಿ ಕ್ರಾಸ್ ಮಾಡುತ್ತಿರುವ ಕಾರಣ ಮಠದ ಬಳಿ ರೈಲು ನಿಧಾನವಾಗಿ ಚಲಿಸುತ್ತಿದೆ. ಭಕ್ತರು ರೈಲ್ವೆ ಹಳಿ ದಾಟುವ ಜಾಗದಲ್ಲೂ ರೈಲ್ವೆ ಪೊಲೀಸರು ಭದ್ರತೆ ನಿಯೋಜನೆ ಮಾಡಿದ್ದಾರೆ.

    ಸುಮಾರು 60 ಜನ ರೈಲ್ವೆ ರಕ್ಷಣಾ ಸಿಬ್ಬಂದಿಯಿಂದ ಮಠದ ಬಳಿಯಿರುವ ರೈಲ್ವೆ ಹಳಿ ಬಳಿ ಭದ್ರತೆ ನೀಡುತ್ತಿದ್ದು, ರೈಲು ಬರುವಾಗ ಯಾರಾದರೂ ಹಳಿ ದಾಟುವಾಗ ಅವಸರ ಮಾಡಬಹುದೆಂದು ಮುನ್ನೆಚ್ಚರಿಕಾ ಕ್ರಮವಾಗಿ ರೈಲ್ವೆ ಹಳಿ ಪಕ್ಕದಲ್ಲೇ ರೈಲ್ವೆ ಪೊಲೀಸರು ರಕ್ಷಣೆಗೆ ನಿಂತಿದ್ದಾರೆ.

    https://www.youtube.com/watch?v=N87G5rvOTYs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜೀವಿತಾವಧಿಯಲ್ಲಿ 5 ಬಾರಿ ವಿಮಾನ ಪ್ರಯಾಣ – ಸರಳತೆಗೆ ಮತ್ತೊಂದು ಹೆಸರೇ ‘ನಡೆದಾಡುವ ದೇವರು’

    ಜೀವಿತಾವಧಿಯಲ್ಲಿ 5 ಬಾರಿ ವಿಮಾನ ಪ್ರಯಾಣ – ಸರಳತೆಗೆ ಮತ್ತೊಂದು ಹೆಸರೇ ‘ನಡೆದಾಡುವ ದೇವರು’

    ತುಮಕೂರು: ಸಿದ್ದಗಂಗಾ ಶ್ರೀಗಳು ವಿಮಾನ ಪ್ರಯಾಣಕ್ಕೆ ಒಲ್ಲೆ ಎಂದು ಹೇಳುತ್ತಿದ್ದರು. ಹೀಗಾಗಿ ತಮ್ಮ ಜೀವಿತಾವಧಿಯಲ್ಲಿ ಒಂದು ಬಾರಿಯೂ ವಿದೇಶ ಪ್ರವಾಸ ಕೈಗೊಂಡಿರಲಿಲ್ಲ.

    ಶ್ರೀಗಳು ಸನ್ಯಾಸ ದೀಕ್ಷೆ ಪಡೆದು ಸುಮಾರು 89 ವರ್ಷಗಳ ಕಾಲ ಕಳೆದಿದ್ದಾರೆ. ಶ್ರೀಗಳು ಎಷ್ಟು ಸರಳವಾಗಿದ್ದರು ಎಂದರೆ ತಮಗೆ ಗ್ರಾಮೀಣ ಜನರ ಒಡನಾಟವೇ ಸಾಕೆಂದು ಮಠ, ಹಳ್ಳಿ ಕಡೆ ಹೆಚ್ಚಾಗಿ ಪ್ರಯಾಣಿಸುತ್ತಿದ್ದರು. ವಿದೇಶದಲ್ಲಿದ್ದ ಭಕ್ತರು ಎಷ್ಟೇ ಕರೆದರೂ ಶ್ರೀಗಳು ವಿಮಾನ ಪ್ರಯಾಣಕ್ಕೆ ಹಿಂದೇಟು ಹಾಕುತ್ತಿದ್ದರು.

    ಶ್ರೀಗಳು ಧಾರ್ಮಿಕ ಕಾರ್ಯಕ್ರಮಗಳ ಸಲುವಾಗಿ ದೆಹಲಿ, ಮುಂಬೈ ಮತ್ತು ಚೆನ್ನೈನಂತಹ ನಗರಗಳಿಗೆ ಹೋಗಿದ್ದಾರೆ. ಆದರೆ ವಿದೇಶ ಪ್ರಯಾಣ ಎಂದೂ ಮಾಡಲಿಲ್ಲ. ಅವರು 20ನೇ ಶತಮಾನದ ಆರಂಭದಲ್ಲಿ ಎತ್ತಿನಗಾಡಿ, ಕುದುರೆದಾರೋಟು, ರೈಲಿನಲಷ್ಟೇ ಪ್ರಯಾಣಿಸುತ್ತಿದ್ದರು. 70ರ ದಶಕದ ನಂತರ ಶ್ರೀಗಳು ಕಾರು, ವಿಮಾನ, ಹೆಲಿಕಾಪ್ಟರ್ ನನ್ನು ಹತ್ತಿದ್ದರು.

    ಐದು ಬಾರಿ ಮಾತ್ರ ವಿಮಾನ ಪ್ರಯಾಣ!
    ಶ್ರೀಗಳು ತಮ್ಮ ಜೀವಿತಾವಧಿಯಲ್ಲಿ ಕೇವಲ ಐದಾರು ಬಾರಿ ಮಾತ್ರ ವಾಯು ಮಾರ್ಗದಲ್ಲಿ ಸಂಚರಿಸಿದ್ದರು. ಒಮ್ಮೆ ಮೈಸೂರು ದಸರಾ ಉತ್ಸವದ ಉದ್ಘಾಟನೆಗೆ ಹೆಲಿಕಾಪ್ಟರ್ ನಲ್ಲಿ ಹೋಗಿದ್ದರು. ಬಳಿಕ ದಾವಣಗೆರೆಗೆ ಹೋಗಿದ್ದರು. ನವದೆಹಲಿಯ ಸುತ್ತೂರು ಮಠದ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಮಾನದಲ್ಲಿ ಹೋಗಿದ್ದರು. ಕೊನೆಯದಾಗಿ ಶ್ರೀಗಳು ಚಿಕಿತ್ಸೆಗಾಗಿ ಏರ್ ಆಂಬುಲೆನ್ಸ್ ನಲ್ಲಿ ಚೆನ್ನೈಗೆ ಹೋಗಿ ಬಂದಿದ್ದರು. ಇದು ಬಿಟ್ಟು ಬೇರೆ ಎಲ್ಲೂ ಶ್ರೀಗಳು ವಿಮಾನ ಪ್ರಯಾಣ ಮಾಡಲಿಲ್ಲ.

    ದೂರದ ಬೀದರ್ ಗೆ ಹೋಗಬೇಕಾದರೂ ಅವರು ಕಾರಿನಲ್ಲಿ ಹೋಗುತ್ತಿದ್ದರು. ಅಷ್ಟು ಸರಳ ಜೀವನವನ್ನು ಶ್ರೀಗಳು ನಡೆಸುತ್ತಿದ್ದರು. ಶ್ರೀಗಳು ಕಾರಿನಲ್ಲೂ ಯಾವುದೇ ಬೆಂಗಾವಲು ಪಡೆಯಿಲ್ಲದೆ, ಕಾರಿಗೆ ನಾಮಫಲಕವನ್ನು ಹಾಕಿಕೊಳ್ಳದೇ ಸಂಚರಿಸುತ್ತಿದ್ದರು. ಶ್ರೀಗಳು ಮಠ ತೊರೆದು ಬೇರೆ ಕಡೆಗೆ ತೆರಳಿದರೂ ನಿತ್ಯದ ಇಷ್ಟಲಿಂಗ ಪೂಜೆಯನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ ಇಷ್ಟಲಿಂಗ ಪೂಜೆ ಮಾಡುತ್ತಿದ್ದರು.

    https://www.youtube.com/watch?v=WTHN3QhN8Zg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ

    ನಡೆದಾಡುವ ದೇವರ ಅಂತಿಮ ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ

    ತುಮಕೂರು: ಶ್ರೀ ಶಿವಕುಮಾರ ಸ್ವಾಮೀಜಿಗಳ ಅಂತಿಮ ದರ್ಶನ ಪಡೆಯಲು ಕಳೆದ ರಾತ್ರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಈ ವೇಳೆ ಜನ ಸಾಗರದಿಂದ ಮಹಿಳೆಯರು ವೃದ್ಧರು ಅವಕಾಶ ಸಿಗದೇ ಇಂದು ಬೆಳಗ್ಗೆ ಶ್ರೀಗಳ ದರ್ಶನಕ್ಕೆ ಮುಂದಾಗಿದ್ದಾರೆ.

    ರಾತ್ರಿ ವೇಳೆ ಬಂದಿರುವ ಭಕ್ತರು ಸಿದ್ದಗಂಗಾ ಮಠದ ಆವರಣದಲ್ಲಿಯೇ ಕೆಲಕಾಲ ವಿಶ್ರಾಂತಿಯನ್ನ ಪಡೆದರು. ಇಂದು ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಭಕ್ತರ ದಾಸೋಹಕ್ಕೆ ಯಾವುದೇ ಸಮಸ್ಯೆಯಾಗದೇ ಇರಲು ಮಠದ ಸುತ್ತಲೂ ಹತ್ತು ಕಡೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: 70ರ ದಶಕದಲ್ಲೇ ಗದ್ದುಗೆ ನಿರ್ಮಾಣಕ್ಕೆ ಜಾಗ ಸೂಚಿಸಿದ್ದ ಶ್ರೀ: ಭವನದ ವಿಶೇಷತೆ ಏನು?

    ಸಿದ್ದಗಂಗಾ ಮಠದಲ್ಲಿ ಮಾತ್ರವಲ್ಲದೇ ಮಠದ ಭಕ್ತರಿಂದ ತುಮಕೂರು ಸುತ್ತಮುತ್ತಲಿನ ಹಲೆವೆಡೆ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ದೂರದ ಊರಿನಿಂದ ಸಿದ್ದಗಂಗಾ ಮಠಕ್ಕೆ ಹೋಗುವ ಜನರಿಗಾಗಿ ಈ ವ್ಯವಸ್ಥೆ ಕಲ್ಪಿಸಲಾಗಿದೆ. ರಾತ್ರಿ ವೇಳೆಯೇ 1 ಲಕ್ಷಕ್ಕೂ ಹೆಚ್ಚು ಭಕ್ತರು ಅಂತಿಮ ದರ್ಶನ ಪಡೆದಿದ್ದಾರೆ. ಸರದಿ ಸಾಲಿನಲ್ಲಿ ಬಂದು ಭಕ್ತರು ಶ್ರೀಗಳ ದರ್ಶನ ಪಡೆಯುತ್ತಿದ್ದಾರೆ.

    ನಟಿ ಸುಮಲತ, ಮಗ ಅಭಿಷೇಕ್ ಗೌಡ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ, ದೊಡ್ಡಣ್ಣ ಶ್ರೀಗಳ ಅಂತಿಮ ದರ್ಶನ ಪಡೆದಿದ್ದಾರೆ. ಸಾಗರೋಪಾದಿಯಲ್ಲಿ ಬರುತ್ತಿರುವ ಭಕ್ತಾದಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಡವರು, ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ – ಜ್ಞಾನಗಂಗೆಯನ್ನು ಧರೆಗಿಳಿಸಿದ ದೇವರು

    ಬಡವರು, ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ – ಜ್ಞಾನಗಂಗೆಯನ್ನು ಧರೆಗಿಳಿಸಿದ ದೇವರು

    ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಸೇವೆಯ ಬೀಜಾಂಕುರವಾಗಿದ್ದು 1913 ರಲ್ಲಿ. ಸಿದ್ದಗಂಗಾ ಶ್ರೀಗಳ ಧರ್ಮಸ್ವೀಕಾರದ ನಂತರ ಸರಸ್ವತಿ ಶಾಶ್ವತವಾಗಿ ನೆಲೆಸಿದಳು. ವಿದ್ಯಾಬಿಕ್ಷೆ ಕೊಟ್ಟ ಶ್ರೀಗಳು ಲಕ್ಷ ಲಕ್ಷ ಜನರ ಪಾಲಿಗೆ ಜ್ಞಾನ ಗಂಗೆಯನ್ನು ಧರೆಗಿಳಿಸಿದ ದೇವರಾದರು.

    ಸಂಸ್ಕೃತವೆಂದರೆ ಒಂದು ವರ್ಗದರಿಗೆ ಮಾತ್ರ ಎಂಬಂತೆ ಇದ್ದ ಸನ್ನಿವೇಶದಲ್ಲಿ ಸಿದ್ದಗಂಗೆಯಲ್ಲಿ ಎಲ್ಲಾ ವರ್ಗದ ಮಕ್ಕಳಿಗೆ ಜಾತಿ ಮತ ಧರ್ಮ ಪಂಥ ಎಲ್ಲವನ್ನು ಮೀರಿ ಸಂಸ್ಕೃತಾಭ್ಯಾಸಕ್ಕೆ ಅವಕಾಶ ಕಲಿಸಿಕೊಟ್ಟಿರುವುದು ಒಂದು ದಾಖಲೆ. 20 ವಿದ್ಯಾರ್ಥಿಗಳಿಂದ ಆರಂಭಿಸಿದ ಶ್ರೀ ಸಿದ್ದಲಿಂಗೇಶ್ವರ ಸಂಸ್ಕೃತ ಪಾಠಶಾಲೆ ಇದು ಬಹುಶಃ ದೊಡ್ಡದಾದ ಮಹಾವಿದ್ಯಾಲಯವಾಗಿ ಬೆಳೆದಿರುವುದೇ ಇದಕ್ಕೆ ಸಾಕ್ಷಿ. ಇದನ್ನೂ ಓದಿ:2011ರಲ್ಲೇ ಕಿರಿಯ ಶ್ರೀಗಳಿಗೆ ಮಠದ ಅಧಿಕಾರ ಹಸ್ತಾಂತರಿಸಿದ್ದರು ಶ್ರೀಗಳು!

    ಶ್ರೀಮಠದ ಸೇವೆಗೆ ಸಿದ್ದಗಂಗಾ ಶ್ರೀ ನಿಂತ ನಂತರ ಸಿದ್ದಗಂಗಾ ಕ್ಷೇತ್ರದ ಶಿಕ್ಷಣ ಸೇವೆ ಮಹಾ ವೃಕ್ಷವಾಗಿ ಬೆಳೆಯತೊಡಗಿತ್ತು. ಗ್ರಾಮೀಣ ಜನರ ಬದುಕಿನ ಸುಧಾರಣೆ ಆಗಬೇಕಾದರೆ ಶಿಕ್ಷಣವೊಂದೇ ತಾರಕ ಮಂತ್ರ ಅಂತ ಶ್ರೀಗಳು ಅರಿತರು. ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಅವಕಾಶ ಒದಗಿಸಿದರು. ಇದನ್ನೂ ಓದಿ: ಶ್ರೇಷ್ಠ ನ್ಯಾಯಮೂರ್ತಿಗಳು – ವರ್ಷಗಟ್ಟಲೇ ನ್ಯಾಯಾಲಯದಲ್ಲಿ ಮುಗಿಯದ ಪ್ರಕರಣ ಒಂದೇ ದಿನದಲ್ಲಿ ಇತ್ಯರ್ಥ!

    ಜೋಳಿಗೆ ಹಿಡಿದು ಬಿಕ್ಷಾಟನೆಗೆ ಹೋಗುತ್ತಿದ್ದ ಶ್ರೀಗಳು ಗ್ರಾಮಾಂತರ ಭಾಗದಲ್ಲಿ ಶಾಲೆಗೆ ಹೋಗಬೇಕಾಗಿದ್ದ ಪುಟಾಣಿ ಮಕ್ಕಳು ಕೂಲಿಗೆ ಹೋಗುತ್ತಿದ್ದ ದೃಶ್ಯ ಶ್ರೀಗಳನ್ನು ಬಹುವಾಗಿ ಕಾಡಿತ್ತು. ಅಲ್ಲಿಂದಲೇ ಶಿಕ್ಷಣ ಕ್ರಾಂತಿಯ ಮಂತ್ರ ಪಠಿಸಿಯೇ ಬಿಟ್ಟರು. ಭಿಕ್ಷಾ ಜೋಳಿಗೆಯ ಬಲದಿಂದಲೇ ಶಾಲೆ ಆರಂಭಿಸಿ ಅನಾಥಲಾಯದ ಸೇವೆ ವಿಸ್ತರಿಸಿದ್ರು.

    ಶ್ರೀಮಠದ ಎಲ್ಲಾ ಶಾಲಾ ಕಾಲೇಜುಗಳಿಗೆ ಪೂಜ್ಯರೇ ಅಧ್ಯಕ್ಷರಾಗಿ ಶಿಕ್ಷಣ ಕ್ರಾಂತಿಯನ್ನು ಪಸರಿಸುವ ಕಾರ್ಯವನ್ನು ಅವಿರತವಾಗಿ ಶುರುಮಾಡಿದರು. ಈ ಶಾಲೆಗೆ ಸೇರಲು ಬಡತನವೊಂದೆ ಸರ್ಟಿಫಿಕೇಟ್. ಎಲ್ಲ ಜಾತಿ ಧರ್ಮಗಳನ್ನು ಮೀರಿದ ಶಿಕ್ಷಣ ಇಲ್ಲಿ ಲಭ್ಯ.

    ಹಿರಿಯ ಸಾಹಿತಿ ಗೊ.ರು ಚೆನ್ನಬಸಪ್ಪ ಹೇಳಿದಂತೆ ಒಂದು ಬಾರಿ ಮಠದ ಅವರಣದಲ್ಲಿ ಪುಟಾಣಿ ಬಡ ಮುಸ್ಲಿಂ ಬಾಲಕನೊಬ್ಬ ವಿದ್ಯಾಭ್ಯಾಸ ಕಲಿಯಲು ಶ್ರೀಗಳ ಅನುಮತಿಗಾಗಿ ಕಾಯುತ್ತ ನಿಂತಿದ್ದಾನಂತೆ. ಆತನ ಪೋಷಕರಿಗೆ ಒಳಗೊಳಗೆ ಭಯ. ಅಯ್ಯೋ ಶ್ರೀಗಳು ನಮ್ಮನ್ನೆಲ್ಲ ಭೇಟಿಯಾಗ್ತಾರಾ? ಯಾರ ರಾಜಕೀಯ ನಾಯಕರ ದೊಡ್ಡವರ ರೆಫರೆನ್ಸ್ ಇಲ್ಲದೇ ಶ್ರೀಗಳನ್ನು ಭೇಟಿಯಾಗೋದಾದ್ರೂ ಹೇಗೆ ಅಂತಾ ಭಯ ಪಡುತ್ತಿದ್ದರಂತೆ. ಆಗಲೇ ಅಲ್ಲೊಬ್ಬ ಪುಟಾಣಿ ಮಠದ ವಿದ್ಯಾರ್ಥಿ ಸಿಕ್ಕಾಗ ಶ್ರೀಗಳು ಭೇಟಿ ಮಾಡೋದಾದ್ರೇ ಯಾರಿಂದ ಶಿಪಾರಸ್ಸು ಮಾಡಬೇಕು ಏನಾದ್ರೂ ಗೊತ್ತಿದ್ಯಾ? ನೀವೆಲ್ಲ ಹೇಗೆ ಬಂದ್ರಿ ಇಲ್ಲಗೆ ಅಂದ್ರಂತೆ. ಇಲ್ಲಿ ವಿದ್ಯಾಭ್ಯಾಸಕ್ಕೆ ಬಡತನ, ಕಲಿಯುವ ಹಪಾಹಪಿಯೊಂದೆ ಸರ್ಟಿಫಿಕೇಟು ಶ್ರೀಗಳು ಎಲ್ಲಾ ಭಕ್ತರನ್ನು ಭೇಟಿಯಾಗ್ತಾರೆ. ಅವರ ಭೇಟಿಗೆ ಬೇರೆಯವರ ಶಿಫಾರಸು ಯಾಕೆ ಅಂತಾ ಚೋಟುದ್ಧ ಬಾಲಕ ಹೇಳಿ ಹೋದನಂತೆ.

    ಥೇಟು ಬಾಲಕ ಹೇಳಿದಂತೆ ದೈವಸ್ವರೂಪಿ ಶ್ರೀಗಳು ಈ ಬಡ ಮುಸ್ಲಿಂ ಬಾಲಕನ ಪೋಷಕರನ್ನು ಭೇಟಿಯಾಗಿ ಸುಮಾರು ಅರ್ಧಗಂಟೆ ಮಾತಾನಾಡಿ ಶಾಲೆಗೆ ಸೇರಿಸಿಕೊಂಡರಂತೆ. ಹೀಗೆ ಬಡಮಕ್ಕಳಿಗೆ , ಗ್ರಾಮೀಣ ಭಾಗದ ಮಕ್ಕಳಿಗಷ್ಟೇ ಇಲ್ಲಿ ಮೊದಲ ಆದ್ಯತೆಯನ್ನು ಗುರುಗಳು ಕೊಡುತ್ತಿದ್ದರು. ಇದನ್ನೂ ಓದಿ: ಓದುವುದರ ಜೊತೆಗೆ ಸಿದ್ದಗಂಗಾ ವಿದ್ಯಾರ್ಥಿಗಳು ಗದ್ದೆ ಕೆಲಸಕ್ಕೂ ಸೈ!

    ಸಿದ್ದಗಂಗಾ ಕ್ಷೇತ್ರ ಕನ್ನಡ ನಾಡಿನ ಬೃಹತ್ ಶೈಕ್ಷಣಿಕ ಕೇಂದ್ರಗಳಲ್ಲಿ ಒಂದಾಗಿದೆ. ಬೇಸಗೆಯ ರಜೆಯ ನಂತರ ಶಾಲೆಗಳ ಪುನಾರಾರಂಭದಲ್ಲಿ ಸಿದ್ದಗಂಗಾ ಕ್ಷೇತ್ರವನ್ನು ನೋಡಬೇಕು. ಸಿದ್ದಗಂಗಾ ಸುತ್ತಮುತ್ತಿನ ಅಷ್ಟೇ ಅಲ್ಲದೇ ದೂರದ ಬೀದರ್ ಬೆಳಗಾವಿ ನೆರೆಯ ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳ ಬಡಮಕ್ಕಳು ತಮ್ಮ ತಂದೆ ತಾಯಿಗಳೊಡನೆ ತಲೆಯ ಮೇಲೆ ಪುಟ್ಟ ಪೆಟ್ಟಿಗೆ ಹೊತ್ತು ಬರುವ ದೃಶ್ಯ ನಿಜಕ್ಕೂ ಹೃದಯಸ್ಪರ್ಶಿ. ಸಿದ್ದಗಂಗಾ ಮಠಕ್ಕೆ ತಮ್ಮ ಮಕ್ಕಳು ಸೇರಿದವರೆಂದರೆ ಹೆತ್ತವರಿಗೆ ಆ ಮಕ್ಕಳನ್ನು ತಾಯಿ ಮಡಿಲಲ್ಲಿ ಇಟ್ಟಷ್ಟು ನೆಮ್ಮದಿ.

    ಸಿದ್ದಗಂಗಾ ತಾಂತ್ರಿಕ ಮಹಾ ವಿದ್ಯಾಲಯ, ಆಡಳಿತ ಮಹಾವಿದ್ಯಾಲಯ, ಶಿಕ್ಷಣ ಮಹಾವಿದ್ಯಾಲಯ, ಶಿಕ್ಷಕರ ತರಬೇತಿ ಕೇಂದ್ರ, ಪಾಲಿಟೆಕ್ನಿಕ್ ಕೇಂದ್ರ, ನರ್ಸಿಂಗ್ ಕಾಲೇಜ್, ಕೈಗಾರಿಕಾ ತರಬೇತಿ ಕೇಂದ್ರ, ಅಂಧ ಮಕ್ಕಳ ಶಾಲೆ, ಸಂಸ್ಕೃತ ಪಾಠಶಾಲೆ ಫಾರ್ಮಸಿ ಕಾಲೇಜು ಹೀಗೆ ಶ್ರೀಮಠದ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಒಟ್ಟು 125 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿವೆ.

    ಶಿಕ್ಷಕರ ತರಬೇತಿ ಕೇಂದ್ರವಿರಲಿ, ಗ್ರಂಥ ಭಂಡಾರವಿರಲಿ, ಪಾಠ ಶಾಲೆಯಿರಲಿ, ಆಟದ ಮೈದಾನವಿರಲಿ, ಎಲ್ಲರೂ ಕೂಡಿ ಬದುಕುವ ಕಮ್ಮಟವಾಗಿದೆ ಸಿದ್ದಗಂಗಾ ಕ್ಷೇತ್ರ.

    https://www.youtube.com/watch?v=FbJf6G0kt3E

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಓದುವುದರ ಜೊತೆಗೆ ಸಿದ್ದಗಂಗಾ ವಿದ್ಯಾರ್ಥಿಗಳು ಗದ್ದೆ ಕೆಲಸಕ್ಕೂ ಸೈ!

    ಓದುವುದರ ಜೊತೆಗೆ ಸಿದ್ದಗಂಗಾ ವಿದ್ಯಾರ್ಥಿಗಳು ಗದ್ದೆ ಕೆಲಸಕ್ಕೂ ಸೈ!

    ಸಿದ್ದಗಂಗಾ ಶ್ರೀಗಳು ಕಾಯಕ ಯೋಗಿ. ಪೂಜ್ಯ ಶ್ರೀಗಳ ಮಠದಲ್ಲಿ ಕಲಿಯುವ ಅಷ್ಟು ವಿದ್ಯಾರ್ಥಿಗಳಿಗೆ ಮಣ್ಣಿನೊಂದಿಗೆ ಬೆರೆತು ಕೆಲಸ ಮಾಡುವುದು ಗೊತ್ತಿದೆ. ಗದ್ದೆಯ ಕೆಲಸವೂ ಗೊತ್ತಿದೆ.

    ಇಲ್ಲಿನ ಶಿಕ್ಷಣ ಕ್ಷೇತ್ರ ಕೇವಲ ಪಠ್ಯವಿಷಯಗಳಿಗಷ್ಟೇ ಸೀಮಿತವಾಗಿಲ್ಲ. ಸಮರ್ಥ ವ್ಯಕ್ತಿನಿರ್ಮಾಣದ ಕೆಲ್ಸವಾಗತ್ತದೆ. ಪ್ರತಿನಿತ್ಯವೂ ಮಠದ ಆವರಣದಲ್ಲಿ ಎಂಟು ಸಾವಿರ ವಿದ್ಯಾರ್ಥಿಗಳು ಸಾಮೂಹಿಕ ಪ್ರಾರ್ಥನೆ ಮಾಡುವ ಆ ಒಂದು ದೃಶ್ಯ. ಇದೆಯಲ್ಲ ಅದು ಶ್ರೀಗಳ ಧೀ ಶಕ್ತಿಗೆ ಸಾಕ್ಷಿ.

    ಮುಂಜಾನೆಯ ಬೆಳಕಲ್ಲಿ, ಸಂಜೆಯ ಹೊಂಬೆಳಕಲ್ಲಿ ಪ್ರಶಾಂತ ಬಯಲು ಪ್ರಾರ್ಥನೆಯ ಆಲಯವಾಗಿ ಬಿಡುತ್ತದೆ. ಇಲ್ಲಿಯ ಮಕ್ಕಳು ಗದ್ದೆ ಕೆಲ್ಸಕ್ಕೆ ಸೈ. ಮಠದಲ್ಲಿ ನಡೆಯುವ ಶ್ರಮದಾನದ ಕೆಲ್ಸದಲ್ಲಿ ವಿದ್ಯಾರ್ಥಿಗಳು ಮುಂಚೂಣಿಯಲ್ಲಿರುತ್ತಾರೆ.

    ಅಂಧರಿಗೂ ಇಲ್ಲಿದೆ ಶಾಲೆ:
    ಸಿದ್ದಗಂಗಾ ಮಠ ತಮ್ಮ ಪಾಲಿಗೆ ಲೋಕವೇ ಕತ್ತಲೆಯೆನಿಸಿದ ನೂರಾರು ಅಂಧಮಕ್ಕಳ ಪಾಲಿಗೆ ಬೆಳಕಿನ ಸೆಲೆಯಾಗಿದೆ. ಮಠದ ಮಾನವೀಯ ಸೇವೆಗೆ ಸಾಕ್ಷಿಯಾಗಿ ಅಂಧರ ಶಾಲೆಯೂ ಇದೆ. ಅಂಧಮಕ್ಕಳಿಗೆ ಉಚಿತ ಊಟ ವಸತಿ ಪಾಠ ಪ್ರವಚನಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಷ್ಟೆ ಅಲ್ಲ ಪೂಜ್ಯರಿಗೆ ಈ ಅಂಧ ಮಕ್ಕಳ ಮೇಲೆ ವಿಶೇಷ ಪ್ರೀತಿ ಗುರುಗಳು ಹೆಸರಿಡಿದು ಮಕ್ಕಳನ್ನು ಕರೆಯುತ್ತಿದ್ರೆ ಕತ್ತಲೆಯ ಲೋಕದ ಈ ಕಂದಮ್ಮಗಳಿಗೆ ಬೆಳಕೊಂದು ಮೂಡಿ ಬಂದ ಅನುಭವವಾಗುತಿತ್ತು.

    https://www.youtube.com/watch?v=FbJf6G0kt3E

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇವರಿಗಾಗಿ ಮುಗಿಲುಮುಟ್ಟಿದ ಆಕ್ರಂದನ – ಸುಡುಬಿಸಿಲಿನಲ್ಲೇ ಅಳುತ್ತಿದ್ದಾರೆ ಮಕ್ಕಳು

    ದೇವರಿಗಾಗಿ ಮುಗಿಲುಮುಟ್ಟಿದ ಆಕ್ರಂದನ – ಸುಡುಬಿಸಿಲಿನಲ್ಲೇ ಅಳುತ್ತಿದ್ದಾರೆ ಮಕ್ಕಳು

    ತುಮಕೂರು: ಕೋಟಿ ಕೋಟಿ ಭಕ್ತರನ್ನು ಹೊಂದಿರುವ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಇಂದು ಶಿವೈಕ್ಯರಾಗಿದ್ದಾರೆ. ಇದೀಗ ನಡೆದಾಡುವ ದೇವರ ಅಗಲಿಕೆಯನ್ನು ಸಹಿಸಿಕೊಳ್ಳಲಾಗದೇ ಮಠದ ಮಕ್ಕಳು ಬಿಕ್ಕಳಿಸಿ ಸುಡುಬಿಸಿಲಿನಲ್ಲಿಯೇ ನಿಂತು ಅಳುತ್ತಿದ್ದಾರೆ.

    ಇಂದು ಬೆಳಗ್ಗೆ 11.44ರ ಸುಮಾರಿಗೆ ಶ್ರೀಗಳು ಶಿವೈಕ್ಯವಾಗಿದ್ದರು. ಆದರೆ ಅವರು ತಮ್ಮ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ. ತಾವು ಮೃತಪಟ್ಟರೆ ಮಕ್ಕಳು ಮಧ್ಯಾಹ್ನದ ಭೋಜನವನ್ನು ಸ್ವೀಕರಿಸಿದ ಬಳಿಕವಷ್ಟೇ ಘೋಷಣೆ ಮಾಡಬೇಕು. ಯಾಕಂದ್ರೆ ಅವರು ಹಸಿವಿನಿಂದ ಇರುವುದು ತಮಗೆ ಇಷ್ಟವಿಲ್ಲ ಎಂದು ಮಠದ ಸಿಬ್ಬಂದಿ ಬಳಿ ತಮ್ಮ ಕೊನೆಯ ಆಸೆಯನ್ನು ಹೇಳಿಕೊಂಡಿದ್ದರು.

    ಹೀಗಾಗಿ ಇಂದು ಶ್ರೀಗಳು ಬೆಳಗ್ಗೆ ಶಿವೈಕ್ಯರಾದ್ರೂ ಮಠದ ಸಿಬ್ಬಂದಿ, ಮಕ್ಕಳು ಊಟ ಮಾಡಿದ ಮೇಲೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಅಂದರೆ ಸುಮಾರು ಮಧ್ಯಾಹ್ನ 1.56ಕ್ಕೆ ವೈದ್ಯರು ಶ್ರೀಗಳು ಸಾವಿನ ವಿಚಾರವನ್ನು ಘೋಷಣೆ ಮಾಡಿದ್ದಾರೆ. ಆದರೆ ಇಷ್ಟು ದಿನ ತಂದೆ, ತಾಯಿ, ಗುರು ಮತ್ತು ದೇವರಾಗಿದ್ದ ಶ್ರೀಗಳನ್ನು ಕಳೆದುಕೊಂಡ ಮಕ್ಕಳ ಆಕ್ರಂದನ ಮುಗಿಲುಮುಟ್ಟಿದೆ.

    ಇತ್ತ ಶ್ರೀ ಶಿವಕುಮಾರ ಸ್ವಾಮೀಜಿ ಅವರ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆಯೇ ಲಕ್ಷಾಂತರ ಭಕ್ತರು ಮಠಕ್ಕೆ ಭೇಟಿ ನೀಡುತ್ತಿದ್ದು, ಶ್ರೀಗಳ ಅಂತಿಮ ದರ್ಶನ ಪಡೆದುಕೊಂಡು ಕಣ್ಣೀರಿಡುತ್ತಿದ್ದಾರೆ.

    https://www.youtube.com/watch?v=FbJf6G0kt3E

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಣಿವರಿಯದ ಮಹಾನ್ ಚೇತನದ ಹಿಂದಿದೆ ಮಹಾ ರಹಸ್ಯ!

    ದಣಿವರಿಯದ ಮಹಾನ್ ಚೇತನದ ಹಿಂದಿದೆ ಮಹಾ ರಹಸ್ಯ!

    ಹೋಟೆಲ್ ಊಟವನ್ನು ಎಂದೂ ಸೇವಿಸದ ಸಿದ್ದಗಂಗೆಯ ಬೆಳಕು ಶ್ರೀಗಳದ್ದು ಸದಾ ಸಾತ್ವಿಕ ಆಹಾರ. ರಾಗಿ ಜೋಳದಿಂದ ತಯಾರಿಸಲ್ಪಟ್ಟ ಆಹಾರ ಹಾಗೂ ಹಣ್ಣು ಹಂಪಲುಗಳನ್ನು ಅಷ್ಟೇ ಶ್ರೀಗಳು ಸೇವಿಸುತ್ತಿದ್ದರು.

    ಅದು ಮಿತ ಆಹಾರ ಸೇವನೆ. ಇನ್ನು ಹೆಚ್ಚಾಗಿ ಬೇವಿನ ಚಕ್ಕೆ ರಸವನ್ನು ಹಾಲಿನೊಂದಿಗೆ ಬೆರೆಸಿ ನಿತ್ಯ ಸೇವನೆ ಮಾಡುತ್ತಿದ್ದ ಶ್ರೀಗಳು ಯೋಗಭ್ಯಾಸವನ್ನು ಎಂದೂ ತಪ್ಪಿಸಿದವರಲ್ಲ. ಇದು ಬೇವಿನ ಚಕ್ಕೆ ಕಷಾಯವೇ ಅವರ ದಿವ್ಯ ಆರೋಗ್ಯದ ಮಹಾ ರಹಸ್ಯ.  ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ 111 ಸಾಧನೆಗಳು ಹಾಗೂ ವೈಶಿಷ್ಟಗಳು

    ಹುಳಿ, ಖಾರ ಎಣ್ಣೆ ಮಸಾಲೆ ಪದಾರ್ಥಗಳನ್ನು ಮುಟ್ಟುವುದೇ ಇಲ್ಲ, ಒಗ್ಗರಣೆಯ ಪದಾರ್ಥ ಸೇವಿಸುವುದು ಕೂಡ ತೀರಾ ಅಪರೂಪ. ಬೆಳಗ್ಗೆ ಹೆಸರು ಬೇಳೆಯನ್ನು ಸ್ವಲ್ಪ ಸೈಂಧಲವಣ ಜೀರಿಗೆ ಪುಡಿ ಹಾಕಿ ಕುದಿಸಿದರೆ ಆಯ್ತು. ಅದೇ ಅವರ ಸಾರು ಪಲ್ಯ, ಅದರ ಜೊತೆ ಉಪ್ಪು ಖಾರ ಹಾಕದೇ ಇರುವ ತೆಂಗಿನಕಾಯಿ ಚಟ್ನಿ ಇದ್ದರಾಯಿತು. ಇದನ್ನೂ ಓದಿ: ಶಿವೈಕ್ಯದಲ್ಲಿಯೂ ಮಾನವೀಯತೆ ಮೆರೆದ ನಡೆದಾಡುವ ದೇವರು!

    ಕೇವಲ ಅರ್ಧಕಪ್ ಹಾಲು ಮಾತ್ರ ಕುಡಿಯುತ್ತಿದ್ದರು. ಕೊಬ್ಬು ಉಂಟುಮಾಡುವ ಯಾವ ಪದಾರ್ಥಗಳನ್ನು ಸ್ವೀಕರಿಸುತ್ತಿಲ್ಲ. ಮಧ್ಯಾಹ್ನ ಈ ಹಿಂದೆ ಕೆಲವೊಮ್ಮೆ ಮುದ್ದೆ ಹಾಗೂ ತೊಗರಿ ಬೇಳೆ ಸಾರು ಸೇವಿಸುತ್ತಿದ್ದರು. ಈ ದೇಹ ಈಶ್ವರನ ಪ್ರಸಾದ ಕಾಯ, ಅದನ್ನು ಕೆಡಿಸಬಾರದು, ಅನಾರೋಗ್ಯಗೊಳಿಸಬಾರದು, ದೇಹವನ್ನು ರೋಗಾದಿಗಳಿಂದ ತುತ್ತಾಗದಂತೆ ನೋಡಿಕೊಳ್ಳುವುದು ಒಂದು ಪೂಜೆಯೇ ಅನ್ನೋದು ಶ್ರೀಗಳ ಮಾತು.

    https://www.youtube.com/watch?v=2lK_EgaS96U

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳು, ಕ್ಷೇತ್ರದ ಬಗ್ಗೆ ಗಣ್ಯರು ಈ ಹಿಂದೆ ಹೇಳಿದ್ದೇನು?

    ಸಿದ್ದಗಂಗಾ ಶ್ರೀಗಳು, ಕ್ಷೇತ್ರದ ಬಗ್ಗೆ ಗಣ್ಯರು ಈ ಹಿಂದೆ ಹೇಳಿದ್ದೇನು?

    ಬೆಂಗಳೂರು: ತುಮಕೂರಿನ ಸಿದ್ದಗಂಗಾ ಕ್ಷೇತ್ರ ಹಾಗೂ ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳ ಬಗ್ಗೆ ಅನೇಕರು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಆಯ್ದ ಗಣ್ಯರ ಅನಿಸಿಕೆಗಳನ್ನು ಇಲ್ಲಿ ನೀಡುತ್ತಿದ್ದೇವೆ.

    ಎಸ್ ನಿಜಲಿಂಗಪ್ಪ: ನಿಷ್ಠೆ, ಸೇವಾಕಾಂಕ್ಷೆ, ದೃಢ ನಿಶ್ಚಯ, ಅಡಚಣೆಗಳನ್ನು ಎದುರಿಸುವ ಧೈರ್ಯ, ಪವಿತ್ರತೆ, ವಿಶಾಲ ದೃಷ್ಟಿ, ಸತ್ಯ ಪ್ರೇಮ, ಮೇಲ್ಮಟ್ಟದ ಧ್ಯೇಯ ಇವೆಲ್ಲ ಸಿದ್ದಗಂಗಾ ಕ್ಷೇತ್ರದ ಶ್ರೀ ಶಿವಕುಮಾರ ಸ್ವಾಮಿಗಳಲ್ಲಿ ಕೇಂದ್ರೀಕೃತವಾಗಿವೆ. ಇದು ಸಮಾಜದ ರಾಷ್ಟ್ರದ ಸುದೈವ ಎಂದು ಮುಖ್ಯಮಂತ್ರಿಯಾಗಿದ್ದ ಎಸ್ ನಿಜಲಿಂಗಪ್ಪ ಅವರು 1966ರ ಫೆಬ್ರವರಿ 27ರಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು.

    ಡಿ. ದೇವರಾಜ ಅರಸು: ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ದೀನದಲಿತರ ಉದ್ಧಾರಕ್ಕಾಗಿ ನಾಡಿನ ಬಡತನ ನಿವಾರಣೆಗಾಗಿ ಲಕ್ಷಾಂತರ ಬಡ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಮಹಿಮಾಶಾಲಿಗಳು ಎಂದು ಮಾಜಿ ಮುಖ್ಯಮಂತ್ರಿಗಳಾಗಿದ್ದ ಡಿ.ದೇವರಾಜ ಅರಸು ಬಣ್ಣಿಸಿದ್ದರು.

    ಡಾ.ಕೆ.ಶಿವರಾಮ ಕಾರಂತ: ನಾಡಿನ ಮೂಲೆ ಮೂಲೆಗಳಿಂದ ಅನಾಥರನ್ನು ಬರಮಾಡಿಕೊಂಡು, ಅವರಿಗೆಲ್ಲ ಅನ್ನದಾನದ ಜತೆಯಲ್ಲಿ ಜ್ಞಾನವನ್ನೂ ದಾನ ಮಾಡುತ್ತಿರುವ ದೃಶ್ಯವಂತೂ ನನ್ನ ಪಾಲಿಗೆ ಅಸಾಮಾನ್ಯ ನೋಟವೆನಿಸಿದೆ. ಅಸಂಖ್ಯಾತ ಬಡಬಗ್ಗರ ಇಹದ ಅವಶ್ಯಕತೆಗಳನ್ನು ಪೂರೈಸುತ್ತಿರುವುದು ಮಾತ್ರವಲ್ಲದೇ ಅವರ ‘ಪರ’ವನ್ನು ಸಹ ಈ ತಾಯಿಗೆ ಋಣಿಯನ್ನಾಗಿ ಮಾಡುತ್ತಿರುವ ಕರ್ಮ ಭೂಮಿ ಇದಾಗಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಕೆ ಶಿವರಾಮ ಕಾರಂತರು ಬಣ್ಣಿಸಿದ್ದರು.

    ಜೆ.ಎಚ್ ಪಟೇಲ್: ಅನ್ನದಾನ ವಿದ್ಯಾದಾನಗಳನ್ನು ಮಠ ಮಾನ್ಯಗಳು ನಿರತಂತರವಾಗಿ ನಡೆಸಿಕೊಂಡು ಬಂದಿರುವುದರಿಂದಲೇ ಸಮಾಜವಿನ್ನೂ ಅಧೋಗತಿಯತ್ತ ತಲುಪಿಲ್ಲ. ಇದಕ್ಕೆ ಉದಾಹರಣೆ ಶ್ರೀ ಸಿದ್ದಗಂಗಾ ಮಠದ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಸಾಮಾಜಿಕ ಸೇವೆಗೆ ತಮ್ಮನ್ನೇ ತಾವು ಅರ್ಪಣೆ ಮಾಡಿಕೊಂಡಿರುವ ಮಹಾ ದಾಸೋಹಿಗಳು. ಇಂತಹ ಕಾಯಕ ಯೋಗಿಗಳೂ ನಮ್ಮ ಕಣ್ಣ ಮುಂದೆ ಇರುವುದರಿಂದಲೇ ಸಮಾಜದಲ್ಲಿ ಮೌಲ್ಯಗಳು ಇನ್ನೂ ಜೀವಂತವಾಗಿಯೇ ಉಳಿದುಕೊಂಡಿವೆ. ಇದನ್ನು ಸರ್ವರೂ ಸ್ವಾಗತಿಸಿ ಬೆಂಬಲಿಸಿದಾಗ ಮಾತ್ರ ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿಗಳಾಗಿದ್ದ ಜೆ.ಎಚ್.ಪಟೇಲ್ 1997ರ ಮೇ ತಿಂಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ವೀರೇಂದ್ರ ಹೆಗ್ಗಡೆ: ಪೂಜ್ಯರಾದ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು ಅಪರೂಪದ, ತ್ಯಾಗದ ಪ್ರತೀಕವಾದ ಒಂದು ಶಕ್ತಿಯಾಗಿದ್ದಾರೆ. ನಮ್ಮ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳವರು ನಮ್ಮ ಸಮಾಜಕ್ಕೆ ಆದರ್ಶವಾಗಿದ್ದಾರೆ. ಏಕೆಂದರೆ ಅವರು ತಮ್ಮ ದೇಹವನ್ನು ಶ್ರೀಗಂಧದ ಹಾಗೆ ಸವೆಸುತ್ತಾ ಬಂದಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅನಿಸಿಕೆ ವ್ಯಕ್ತಪಡಿಸಿದ್ದರು.

    ಮಾಸ್ತಿ ವೆಂಕಟೇಶ್ ಅಯ್ಯಂಗಾರ್: ಶ್ರೀ ಶಿವಕುಮಾರ ಸ್ವಾಮಿಗಳು ಉನ್ನತ ತರದ ಸನ್ಯಾಸಿಗಳು. ತಮ್ಮ ಸೇವೆಯಿಂದ ಇವರು ಸನ್ಯಾಸಿಗಳ ಸಮುದಾಯಕ್ಕೆ ಒಂದು ಆದರ್ಶವಾಗಿದ್ದಾರೆ. ಒಂದು ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ ಎಂದು ಕವಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅಭಿಪ್ರಾಯಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿದ್ದಗಂಗಾ ಶ್ರೀಗಳ 111 ಸಾಧನೆಗಳು ಹಾಗೂ ವೈಶಿಷ್ಟಗಳು

    ಸಿದ್ದಗಂಗಾ ಶ್ರೀಗಳ 111 ಸಾಧನೆಗಳು ಹಾಗೂ ವೈಶಿಷ್ಟಗಳು

    ನಡೆದಾಡುವ ದೇವರು, ಕಾಯಕ ಯೋಗಿ ಸಿದ್ದಗಂಗಾ ಡಾ. ಶ್ರೀ ಶ್ರೀಗಳು ಇಂದು ನಿಧನರಾಗಿದ್ದಾರೆ. ಆದರೆ ಅವರ ಕೆಲಸ, ಅವರ ಪ್ರವಚನಗಳು ಈಗಲೂ ನಮ್ಮ ಕಣ್ಣ ಮುಂದಿದೆ. ಹೀಗಾಗಿ ಶ್ರೀಗಳ 111 ಸಾಧನೆ, ವೈಶಿಷ್ಟ್ಯಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

    1) ಶತಾಯುಷಿ ಸಿದ್ದಗಂಗಾ ಶ್ರೀಗಳು ಹುಟ್ಟಿದ್ದು 1908 ರ ಏಪ್ರಿಲ್ 1 ರಂದು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಈಗಿನ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ. ಹೊನ್ನಪ್ಪ, ಗಂಗಮ್ಮ ದಂಪತಿ ಪುತ್ರರತ್ನರಾಗಿ ಹುಟ್ಟಿ ಈಗ ಇಡೀ ಜಗವೇ ಮೆಚ್ಚುವ ಶಾಂತಿದೂತರಾಗಿದ್ದಾರೆ.

    2) 1913-27: ವೀರಾಪುರ, ಪಾಲಹಳ್ಳಿಯಲ್ಲಿ ಪ್ರಾಥಮಿಕ, ನಾಗವಲ್ಲಿಯಲ್ಲಿ ಮಾಧ್ಯಮಿಕ, ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಹಾಗೂ ಮೆಟ್ರಿಕ್ಯೂಲೇಷನ್ ತೇರ್ಗಡೆ.

    3) 1927-30: ಬೆಂಗಳೂರಿನ ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ, ಸೆಂಟ್ರಲ್ ಕಾಲೇಜಿನಲ್ಲಿ ಬಿಎ ವಿದ್ಯಾಭ್ಯಾಸ.

    4) 1930 : ನವೆಂಬರ್ 11 ರಂದು ಸಿದ್ದಗಂಗಾ ಮಠದ ಶ್ರೀ ಮರುಳಾರಾಧ್ಯ ಸ್ವಾಮಿಗಳವರ ಸಮಾಧಿ ಕ್ರಿಯೆಗೆ ಬಂದಾಗ ಶ್ರೀ ಉದ್ದಾನ ಶಿವಯೋಗಿಗಳವರ ಕೃಪಾದೃಷ್ಟಿಗೆ ಒಳಗಾದ ಶಿವಣ್ಣ.

    5) 1930: ಮಾ.3ರಂದು ಸಿದ್ದಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಆಯ್ಕೆ. ಗುರುಗಳ ಪೂರ್ವಾನುಗ್ರಹ ಹಾಗೂ ಶಿವಕುಮಾರ ಸ್ವಾಮಿಗಳೆಂದು ನೂತನ ನಾಮಧೇಯ.

    6) 1937 : 1917ರಲ್ಲಿ ಪ್ರಾರಂಭವಾದ ಸಂಸ್ಕೃತ ಪಾಠ ಶಾಲೆಯನ್ನು ಕಾಲೇಜಾಗಿ ಪರಿವರ್ತಿಸಿದರು.

    7) 1941: ಜ.11ರಂದು ಶ್ರೀ ಉದ್ಧಾನಶಿವಯೋಗಿ ಸ್ವಾಮೀಜಿ ಲಿಂಗೈಕ್ಯರಾದ ನಂತರ ಮಠಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ.

    8) 1944 : ತುಮಕೂರು ನಗರದಲ್ಲಿ ಸಿದ್ದಗಂಗಾ ಪ್ರೌಢ ಶಾಲೆ ಆರಂಭ.

    9) 1949: ಜೂ.18ರಂದು ಶ್ರೀಸಿದ್ದಲಿಂಗೇಶ್ವರರ ಸಂಸ್ಕೃತ ಮತ್ತು ವೇದಪಾಠ ಶಾಲೆ ರಜತಮಹೋತ್ಸವ.

    10) 1950: ಧರ್ಮಸ್ಥಳದ ಶ್ರೀಮಂಜಯ್ಯ ಹೆಗ್ಗಡೆಯವರಿಂದ ಮಹಾ ನಡಾವಳಿ ಉತ್ಸವದಲ್ಲಿ ಗೌರವ ಸ್ವೀಕಾರ.

    11) 1951: ಶ್ರೀಗಳಿಂದ ಪ್ರಭುಲಿಂಗ ಲೀಲೆ ಪ್ರವಚನ – ಪ್ರಭುಲಿಂಗ ಲೀಲೆಯ ತತ್ವಸಾರಾಂಶಗಳನ್ನು ಪ್ರಚಾರ ಪಡಿಸಿದ ಮೊದಲ ಹೆಜ್ಜೆ.

    12) 1954 : ಶ್ರೀಕ್ಷೇತ್ರದ ಹಳೆಯ ವಿದ್ಯಾರ್ಥಿಗಳ ಸಂಘ ಸ್ಥಾಪನೆ.

    13) 1955 : ಶ್ರೀ ಕ್ಷೇತ್ರದಲ್ಲಿ ಶ್ರೀ ಸಿದ್ದಲಿಂಗೇಶ್ವರ ಸನಿವಾಸ ಪ್ರೌಢಶಾಲೆ ಸ್ಥಾಪನೆ.

    14) 1956 : ಸಿದ್ದಗಂಗಾ ಉಪಧ್ಯಾಯ ಶಿಕ್ಷಣ ತರಬೇತಿ ಸಂಸ್ಥೆ ಸ್ಥಾಪನೆ.

    15) 1956 : ಶ್ರೀಕ್ಷೇತ್ರದಲ್ಲಿ ಸಂಸ್ಕೃತ ಕಾಲೇಜು ಕಟ್ಟಡ ನಿರ್ಮಾಣ.

    16) 1960 : ಶ್ರೀಮಠದಲ್ಲಿ ಸಾರ್ವಜನಿಕ ವಿದ್ಯಾರ್ಥಿನಿಲಯ ನಿರ್ಮಾಣ ಆರಂಭ.

    17) 1962 : ಧರ್ಮಸ್ಥಳದಲ್ಲಿ ನಡೆದ ವಿಶ್ವ ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಇಡೀ ವಿಶ್ವವೇ ಮೆಚ್ಚುವಂತೆ ಪ್ರವಚನ ನೀಡಿದ್ದ ಶ್ರೀಗಳು.

    18) 1962 : ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಸ್ಥಾಪನೆ.

    19) 1963 : ಜಾತ್ರೆಯಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ ಆರಂಭ ಹಾಗೂ ಸಿದ್ದಗಂಗಾ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ.

    20) 1963 : ತುಮಕೂರಿನಲ್ಲಿ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯ ಪ್ರಾರಂಭ.

    21) 1963 : 44ನೇ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನ ಶ್ರೀಮಠದಲ್ಲಿ ನಡೆದಿದ್ದು, ಶ್ರೀಗಳು ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದರು. ರಂ.ಶ್ರೀ ಮುಗಳಿ ಅವರು ಸಮ್ಮೇಳನಾಧ್ಯಕ್ಷರಾಗಿದ್ದರು.

    22) 1965 : ಶ್ರೀಮಠದಲ್ಲಿ ಕನ್ನಡ ಪಂಡಿತ ತರಗತಿ ಸ್ಥಾಪನೆ.

    23) 1965: ಸಿದ್ದಗಂಗಾ ತ್ರೈಮಾಸಿಕ ಪತ್ರಿಕೆ ಆರಂಭ.

    24) 1965: ಕರ್ನಾಟಕ ವಿವಿಯಿಂದ ಗೌರವ ಡಿ.ಲಿಟ್ ಸ್ವೀಕಾರ.

    25) 1966 : ತುಮಕೂರಿನಲ್ಲಿ ಸಿದ್ದಗಂಗಾ ಕಲಾ ವಾಣಿಜ್ಯ ವಿಜ್ಞಾನ ಕಾಲೇಜು ಸ್ಥಾಪನೆ.

    26) 1967 : ಸಂಜೆ ಕಾಲೇಜು ಸ್ಥಾಪನೆ – ಬೆಳಗ್ಗೆ ಕೆಲಸ ಮಾಡಿ, ಸಂಜೆ ಓದು. ಆಸ್ತಕ ವಿದ್ಯಾರ್ಥಿ ಅನುಕೂಲವಾಗುವ ರೀತಿಯಲ್ಲಿ ಸ್ಥಾಪನೆ.

    27) 1968 : ಬಸವ ಕಲ್ಯಾಣದಲ್ಲಿ ನಡೆದ ಬಸವೇಶ್ವರರ ಅಷ್ಟ ಶತಮಾನೋತ್ಸವದ ಅಧ್ಯಕ್ಷತೆ, ಬಸವಣ್ಣರ ಮಹಾತತ್ವ ಸಾರಿದ ಶ್ರೀಗಳು – ದೇಶದ ಮೂಲೆ ಮೂಲೆಯಿಂದ ಆಗಮಿಸಿದ್ದ ಭಕ್ತರು.

    28) 1969 : ಮುಂಬೈನಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾ ಅಧಿವೇಶನದ ಅಧ್ಯಕ್ಷತೆ.

    29) 1969 : ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಸಮಾವೇಶದಲ್ಲಿ ನೇತೃತ್ವ, ಹಿಂದೂಧರ್ಮದ ಜಾಗೃತಿಯಲ್ಲಿ ಭಾಗಿ.

    30) 1970 : ಡಿ.27 ಬೆಂಗಳೂರಿನಲ್ಲಿ ನಡೆದ 47ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ.

    31) 1972 : ಮೇ.26 ಶ್ರೀಮಠದ ಪೀಠಾಧಿಕಾರ ಸ್ವೀಕಾರದ ರಜತ ಮಹೋತ್ಸವ. ಮುದ್ರಣಾಲಯ ಪ್ರಾರಂಭ

    32) 1972 : ಮೇ.28 ಉಚಿತ ವಿದ್ಯಾರ್ಥಿ ನಿಲಯ ಮತ್ತು ಸಂಸ್ಕೃತ ಕಾಲೇಜಿನ ಸುವರ್ಣ ಮಹೋತ್ಸವ.

    33) 1974 : ಅಖಿಲ ಭಾರತ ವೀರಶೈವ ಮಠಾಧೀಪತಿಗಳ ಸಂಘದ ಅಧ್ಯಕ್ಷತೆ.

    34) 1977 : ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರಗಳ ಗಂಗಾಧರರಾಜ ಯೋಗೀಂದ್ರ ಸ್ವಾಮೀಜಿಗಳ ರಜತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ.

    25) 1978 : ಗ್ರಾಮಾಂತರ ಬಸವಜಯಂತಿ ಯೋಜನೆ ಆರಂಭ.

    36) 1982: ಏ.24ರಂದು ರಾಷ್ಟ್ರಪತಿ ನೀಲಂ ಸಜೀವರೆಡ್ಡಿ ಸಮ್ಮುಖದಲ್ಲಿ ಮುಖ್ಯಮಂತ್ರಿ ಎಸ್.ಗುಂಡೂರಾವ್ ಅವರಿಂದ ಸುವರ್ಣಮಹೋತ್ಸವ ನೆನಪಿಗಾಗಿ ಗೌರವ ಗ್ರಂಥ `ಸಿದ್ಧಗಂಗಾಶ್ರೀ’ ಬಿಡುಗಡೆ.

    37) 1982 : ಶ್ರೀಸಿದ್ಧಗಂಗಾ ಮಹಿಳಾ ಕಾಲೇಜು ಸ್ಥಾಪನೆ.

    38) 1982 : ಪೀಠಾರೋಹಣ ಸುವರ್ಣ ಮಹೋತ್ಸವ ಸಮಾರಂಭ

    39) 1984 : ನೆಲಮಂಗಲದಲ್ಲಿ ಶ್ರೀ ಸಿದ್ದಗಂಗಾ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ.

    40) 1984 : ತುಮಕೂರಿನಲ್ಲಿ ಶ್ರೀ ಸಿದ್ದಗಂಗಾ ಫಾರ್ಮಸಿ ಕಾಲೇಜು ಸ್ಥಾಪನೆ.

    41) 1987: ಏ.20 ಹುಬ್ಬಳ್ಳಿ 3 ಸಾವಿರ ಮಠದ ಜಗದ್ಗುರು ಗಂಗಾಧರರಾಜ ಯೋಗೀಂದ್ರ ಸ್ವಾಮೀಜಿ ರಜತ ಮಹೋತ್ಸವದ ಅಧ್ಯಕ್ಷತೆ.

    42) 1988 : ಮಾ.30 ಉತ್ತರಾಧಿಕಾರಿಯಾಗಿ ಕಿರಿಯ ಶ್ರೀ ಸಿದ್ಧಲಿಂಗಸ್ವಾಮೀಜಿ ನೇಮಕ.

    43) 1992 : ಫೆ.16 ಶ್ರೀಗಳ ವಜ್ರ ಮಹೋತ್ಸವ ಸಮಾರಂಭದಲ್ಲಿ ಉಪರಾಷ್ಟ್ರಪತಿ ಡಾ.ಶಂಕರ್ದಯಾಳ್ ಶರ್ಮ ಅವರಿಂದ ಸಿದ್ದಗಂಗಾ ನರ್ಸಿಂಗ್ ಕಾಲೇಜು ಸ್ಥಾಪನೆಗೆ ಶಂಕುಸ್ಥಾಪನೆ.

    44) 1995 : ಫೆ.2 ಸಿದ್ದಗಂಗಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪನೆ.

    45) 1995 : ತಮಿಳುನಾಡು ಧರ್ಮಪುರಿ ಜಿಲ್ಲೆ ಡೆಂಕಟಣ ಕೋಟೆ ತಾಲೂಕು ಮೊಳ್ಳಳ್ಳಿ ಗ್ರಾಮದಲ್ಲಿ ವಿಶ್ವ ಬಸವ ಜಯಂತಿ ಕಾರ್ಯಕ್ರಮದ ನೇತೃತ್ವ.

    46) 1996 : ಕರ್ನಾಟಕ ಫ್ರೌಢಶಿಕ್ಷಣ ಮಂಡಳಿಯ 1995ನೇ ವರ್ಷದ ಘಟಿಕೋತ್ಸವದಲ್ಲಿ ಅನುಗ್ರಹ ಭಾಷಣ.

    47) 1997 : ಮಾ.22 ಶ್ರೀಗಳ ವಜ್ರಮಹೋತ್ಸವ ಬೃಹತ್ ವಿದ್ಯಾರ್ಥಿ ನಿಲಯ, ಪ್ರಸಾದ ನಿಲಯ ಹಾಗೂ ದಾಸೋಹ ಸಿರಿ ಗ್ರಂಥ ಸಮರ್ಪಣೆ.

    48) 1997 : ತಮಿಳುನಾಡಿನ ಸೇಲಂನಲ್ಲಿ ನಡೆದ ವೀರಶೈವ ಸಮಾಜದ ಸಮ್ಮೇಳನದ ಅಧ್ಯಕ್ಷತೆ.

    49) 2000 : ಜ.30ರಂದು ಪ್ರಧಾನಿ ವಾಜಪೇಯಿ ಅವರಿಂದ ಸಂಸ್ಕೃತ ಕಾಲೇಜು, ಅಮೃತ ಮಹೋತ್ಸವ ಉದ್ಘಾಟನೆ. ಅಂಧ ಮಕ್ಕಳಿಗೆ ನೂತನ ಶಾಲಾ ಕಟ್ಟಡ ಹಾಗೂ ವಸತಿ ನಿಲಯ ನಿರ್ಮಾಣ.

    50) 2005 : ಶ್ರೀಗಳ 98ನೇ ಜನ್ಮದಿನೋತ್ಸವ ಸಮಾರಂಭದಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ.ಆಡ್ವಾಣಿ ಭಾಗಿ.

    51) 2005 : ಪೀಠಾರೋಹಣ(ಅಮೃತ ಮಹೋತ್ಸವ) ಸಮಾರಂಭ ಗೃಹಸಚಿವ ಶಿವರಾಜ್ ಪಾಟೀಲ್, ಸಿಎಂ ಧರಂಸಿಂಗ್ ಭಾಗಿ.

    52) 2006 : ಏ.7 ಶ್ರೀಗಳ ಗುರುವಂದನಾ ಕಾರ್ಯಕ್ರಮ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ರಾಜ್ಯಪಾಲ ಚತುರ್ವೇದಿ, ಸಿಎಂ ಕುಮಾರಸ್ವಾಮಿ, ಡಿಸಿಎಂ ಯಡಿಯೂರಪ್ಪ, ಸುತ್ತೂರು ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧ್ಯಕ್ಷರು ಭಾಗವಹಿಸಿದ್ದರು.

    53) 2007 : ರಾಜ್ಯ ಸರ್ಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿ. ಸಿದ್ದಗಂಗಾ ಶ್ರೀಗಳ ಜನ್ಮಶತಮಾನೋತ್ಸವ ಸಮಾರಂಭ

    54) 2009 : ಕೃಷಿ ಸಮಾವೇಶ ಹಾಗೂ ಮಹಿಳಾ ಸಮಾವೇಶ

    55) 2009 : ಶ್ರೀಗಳ ಶತಮಾನೋತ್ಸವ ಗುರುವಂದನಾ ಕಾರ್ಯಕ್ರವಕ್ಕೆ ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ ಆಗಮಿಸಿದ್ದರು.

    56) 2010 : ಶ್ರೀಗಳಿಗೆ ಬಸವಶ್ರೀ ಪುರಸ್ಕಾರದ ಗೌರವ.

    57) 2011 : ಶ್ರೀ ಸಿದ್ದಲಿಂಗ ಸ್ವಾಮೀಜಿಗೆ ಶ್ರೀಮಠದ ಅಧ್ಯಕ್ಷ ಪದವಿಯ ವರ್ಗಾವಣೆ

    58) 2012 : ಗುರುವಂದನಾ ಕಾರ್ಯಕ್ರಮ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಭಾಗಿ.

    59) 2013 : ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ.

    60) 2013 : ಗುರು ಪಟ್ಟ ಏರಿದ 80 ವರ್ಷದ ಅಮೃತ ಮಹೋತ್ಸವ ಆಚರಣೆ.

    61) 2014 : ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಸುವರ್ಣ ಮಹೋತ್ಸವದ ಅಂಗವಾಗಿ ಹಳೆಯ ವಿದ್ಯಾರ್ಥಿಗಳ ಜಾಗತಿಕ ಸಮಾವೇಶ.

    62) 2015 : ಜುಲೈನಲ್ಲಿ ಪದ್ಮಭೂಷಣ ಪ್ರಶಸ್ತಿ ಪ್ರದಾನ

    63) 2017 : ಕರ್ನಾಟಕ ಸರ್ಕಾರದ ಮಹಾವೀರ ಶಾಂತಿ ಪ್ರಶಸ್ತಿ ಪ್ರಧಾನ

    64) 2017: ಸಿದ್ದಗಂಗಾ ಆಸ್ಪತ್ರೆ ಆರಂಭ

    65) ಜಾತ್ಯಾತೀತ ಸಂಪ್ರದಾಯವನ್ನು ಕಾರ್ಯರೂಪಕ್ಕೆ ತಂದಿರುವ ಖ್ಯಾತಿ ಮಠಕ್ಕಿದೆ.

    66) ಶರಣ ಶ್ರೀ ಬಸವೇಶ್ವರರ ಹಾಗೂ ಇತರ ಶರಣರ ತತ್ವಾದರ್ಶಗಳನ್ನು ಕಾರ್ಯರೂಪಕ್ಕೆ ತಂದಿರುತ್ತದೆ.

    67) ದಿನಂಪ್ರತಿ 10 ಸಾವಿರ ವಿದ್ಯಾರ್ಥಿಗಳಿಗೆ ಮತ್ತು 3, 5 ಸಾವಿರ ಭಕ್ತಾಧಿಗಳಿಗೆ ಅನ್ನದಾಸೋಹ.

    68) ಇದುವರೆಗೆ 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತ್ರಿವಿಧ ದಾಸೋಹದ ಅನುಕೂಲ ಪಡೆದು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.

    69) ರಾಜ್ಯಾದ್ಯಂತ 125 ವಿವಿಧ ಶಿಕ್ಷಣ ಸಂಸ್ಥೆಗಳು, ಸಂಸ್ಕೃತ ಕಾಲೇಜು ಹಾಗೂ ಸಂಸ್ಕೃತ ಪಾಠ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ.

    70) ಅನಾರೋಗ್ಯಕ್ಕೆ ತುತ್ತಾಗುವ ಮೊದಲು ಶ್ರೀಗಳು ದಿನಂಪ್ರತಿ 18 ಗಂಟೆ ಪೂಜೆ, ಜಪ, ಭಕ್ತರಿಗೆ ದರ್ಶನ ನೀಡುತ್ತಿದ್ದರು.

    71) 82 ವರ್ಷಗಳಿಂದ ಶ್ರೀ ಕ್ಷೇತ್ರದ ಜವಾಬ್ದಾರಿಯನ್ನು ವಹಿಸಿಕೊಂಡು ಬಂದಿದ್ದ ಶ್ರೀಗಳ ರಜತ, ಸುವರ್ಣ, ವಜ್ರ, ಪ್ಲಾಟಿನಂ, ಮತ್ತು ಶತಮಾನೋತ್ಸವ ಸಮಾರಂಭಗಳು ಶ್ರೀ ಕ್ಷೇತ್ರದಲ್ಲಿ ಅಚ್ಚಳಿಯದಂತೆ ವಿಜ್ರಂಭಣೆಯಿಂದ ನಡೆದಿತ್ತು.

    72) 1905 ರಿಂದ ಸಿದ್ದಲಿಂಗೇಶ್ವರ ಜಾತ್ರೆ ಮತ್ತು ದಿನಗಳ ಪರಿಷೆ ವ್ಯವಸ್ಥಿತವಾಗಿ ನಡೆದುಕೊಂಡು ಬಂದಿದೆ.

    73) ಸಾಮಾಜಿಕ ಕ್ರಾಂತಿಕಾರರಾದ ಜಗಜ್ಯೋತಿ ಬಸವೇಶ್ವರ ನಾಟಕ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಪ್ರದರ್ಶನ ಕಂಡಿದೆ.

    74) 50 ವರ್ಷಗಳಿಂದ ಶ್ರೀ ಸಿದ್ದಲಿಂಗೇಶ್ವರ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ಪ್ರತಿವರ್ಷವೂ ನಡೆಸಿಕೊಂಡು ಬರಲಾಗುತ್ತಿದೆ.

    75) ಶ್ರೀ ಕ್ಷೇತ್ರದ ವಿದ್ಯಾರ್ಥಿಗಳು ದಿನನಿತ್ಯ ಸಾಮೂಹಿಕ ಪ್ರಾರ್ಥನೆಯಲ್ಲಿ ತಪ್ಪದೇ ಶೃದ್ಧೆಯಿಂದ ಪಾಲ್ಗೊಳ್ಳುತ್ತಿದ್ದಾರೆ.

    76) ಅನಾರೋಗ್ಯಕ್ಕೆ ತುತ್ತಾಗುವ ಮೊದಲು ಸ್ವತಂತ್ರವಾಗಿ ನಡೆಯುತ್ತಿದ್ದ ಶ್ರೀಗಳು ಕನ್ನಡಕವಿಲ್ಲದೆ ಓದುತ್ತಿದ್ದರು.

    77) 1982 ಕುಣಿಗಲ್ ನಲ್ಲಿ ಕರ್ನಾಟಕ ನವಚೈತನ್ಯ ಎಂಬ ಅಂಧ ಮಕ್ಕಳ ಶಾಲೆಯನ್ನು ಶ್ರೀಗಳು ತೆರೆದಿದ್ದರು.

    78) 1941ರಲ್ಲಿ ಉದ್ಧಾನ ಶಿವಯೋಗಿಗಳು ಲಿಂಗೈಕ್ಯರಾದಾಗ ಮಠದಲ್ಲಿ ಕೇವಲ 300 ರೂಪಾಯಿ, 16 ಎಕರೆ ಖುಷ್ಕಿ ಜಮೀನು ಮಾತ್ರವಿತ್ತು, ಆದರೆ ಇಂದು ಮಠದ ಸಾರ್ವಜನಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರವಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ. ಇದರಲ್ಲಿ ಶ್ರೀಗಳ ಶ್ರಮ ಅನನ್ಯ.

    79) ಯಂತ್ರಧಾರಣ ಮಂಚದಲ್ಲಿ ಕುಳಿತು ಭಕ್ತಾದಿಗಳಿಗೆ ಹಾಗೂ ಮಕ್ಕಳಿಗೆ ಯಂತ್ರ ಧಾರಣೆ ಮಾಡುವ ಪರಿಪಾಠ ಇಂದು ಕೂಡ ಚಾಚುತಪ್ಪದೇ ನಡೆದುಕೊಂಡು ಬಂದಿದೆ. ಮಕ್ಕಳ ಎಷ್ಟೋ ಕಾಯಿಲೆಗಳಿಗೆ ಪರಿಹಾರ ಸಿಕ್ಕಿದೆ.

    80) ಮಠದ ಆವರಣದಲ್ಲಿ ಬೃಹತ್ ಕಲ್ಯಾಣಿಯನ್ನು ಶ್ರೀಗಳು ನಿರ್ಮಿಸಿದ್ದಾರೆ. ಶ್ರೀಗಳ ಪಾದಸ್ಪರ್ಶದಿಂದ ಈ ಕಲ್ಯಾಣಿ ಬತ್ತಿಲ್ಲ ಎಂದು ಭಕ್ತರು ಹೇಳುತ್ತಾರೆ.

    81) ಶ್ರೀಗಳು ನಿರ್ಮಿಸಿರುವ ಕಲ್ಯಾಣಿಯಲ್ಲಿ ಸಿದ್ದಲಿಂಗೇಶ್ವರ ದೇವರ ತೆಪೋತ್ಸವ ಪ್ರತಿ ವರ್ಷ ನಡೆದುಕೊಂಡು ಬರುತ್ತಿದೆ. ಇಲ್ಲಿಯವರೆಗೂ ಖುದ್ದು ಸಿದ್ದಗಂಗಾ ಶ್ರೀಗಳು ಚಾಲನೆ ನೀಡುತ್ತಿದ್ದರು.

    82) ಏಕಾಕಾಲದಲ್ಲಿ 5 ಸಾವಿರ ಜನರಿಗೆ ಊಟ ತಯಾರಿಸುವ ಬೃಹತ್ ಅಡುಗೆ ಮನೆ ಮಠದಲ್ಲಿದೆ.

    83) ಹತ್ತು ಸಾವಿರ ಜನರು ಕುಳಿತು ಏಕಾಕಾಲದಲ್ಲೇ ಪ್ರಾರ್ಥನೆ ಮಾಡಲು ಸ್ಥಳಾವಕಾಶವಿರುವ ದೊಡ್ಡದಾದ ಪ್ರಾರ್ಥನಾ ಮಂದಿರ ನಿರ್ಮಾಣಗೊಂಡಿದೆ.

    84) ಶ್ರೀದರ್ಶನ ಮ್ಯೂಸಿಯಂ ಸ್ಥಾಪನೆ – ಸಿದ್ದಗಂಗಾ ಶ್ರೀಗಳ ಪರಿಕರ ಹಾಗೂ ಜೀವನ ಚರಿತ್ರೆಗೆ ಸೇರಿದ ವಸ್ತುಗಳ ಸಂಗ್ರಹಾಲಯ ನಿರ್ಮಾಣ.

    85) ವಿವಿಧ ಜಾತಿಯ ಪುಷ್ಪಗಳ ಗಿಡಗಳಿರುವ ಬಿಲ್ವವನ ನಿರ್ಮಾಣವಾಗಿತ್ತು. ಸಿದ್ದಗಂಗಾ ಶ್ರೀಗಳ ಇಷ್ಟಲಿಂಗ ಪೂಜೆಗೆ ಇಲ್ಲಿಂದಲೇ ಹೂಗಳ ಸರಬರಾಜು ಆಗುತಿತ್ತು.

    86) ಇಷ್ಟಲಿಂಗ ಸೃಷ್ಟಿ ಹಾಗೂ ಭಿನ್ನಗೊಂಡ ಇಷ್ಟಲಿಂಗಗಳ ಯಥಾವತ್ತು ರೂಪ ಕೊಡುವ ಸಿದ್ದಲಿಂಗೇಶ್ವರ ಛದ್ರರಸ ಕೇಂದ್ರ ಸ್ಥಾಪನೆ. ರಾಜ್ಯದ ಮೊದಲ ಇಷ್ಟಲಿಂಗ ನಿರ್ಮಾಣ ಕೇಂದ್ರ.

    87) ಪ್ರತಿ ವರ್ಷ ಜಾನುವಾರು ಜಾತ್ರೆಯಲ್ಲಿ ವಿಶೇಷ ಗೋವುಗಳಿಗೆ ಬಹುಮಾನ ಘೋಷಣೆ ಪರಿಪಾಠ. ಗರಿಷ್ಟ 5 ಲಕ್ಷ ರೂ.ವರೆಗೆ ಬಹುಮಾನ ನೀಡಲಾಗುತ್ತದೆ.

    88) ಕುದುರೆ ಸವಾರಿಯಲ್ಲಿ ಶ್ರೀಗಳು ನೈಪುಣ್ಯತೆ ಹೊಂದಿದ್ದರು. ಆರಂಭದ ದಿನಗಳಲ್ಲಿ ಕುದುರೆ ಸವಾರಿ ಮಾಡಿ ಭಕ್ತರ ಮನೆಗೆ ಭೇಟಿ ನೀಡುತ್ತಿದ್ದರು.

    89) ಎಂದು ಬತ್ತದ ಸಿಹಿ ನೀರಿನ ಬಾವಿ ಮಠದಲ್ಲಿದೆ. ಈ ಬಾವಿಯಿಂದಲೇ ಶ್ರೀಗಳ ಸ್ನಾನಕ್ಕೆ ಪೂಜೆಗೆ ನೀರು ರವಾನೆ, ಇಂದಿಗೂ ಸ್ವಚ್ಛತೆ ಹಾಗೂ ಪೂಜ್ಯಭಾವದಿಂದ ಬಾವಿ ಸಂರಕ್ಷಣೆ ಮಾಡಲಾಗಿದೆ.

    90) ಆರೋಗ್ಯವೇ ಭಾಗ್ಯ ಎಂದ ಶ್ರೀಗಳು ಪ್ರತಿನಿತ್ಯ ಬೇವಿನ ಕಷಾಯ ಸೇವಿಸುತ್ತಿದ್ದರು. ಈ ಮೂಲಕ ಆಯುರ್ವೇದದ ಮಹಿಮೆ ಸಾರಿದ್ದರು.

    91) ಪ್ರತಿನಿತ್ಯ ಬೆಳಗ್ಗೆ, ಮಧ್ಯಾಹ್ನ, ಸಂಜೆ ವೇಳೆ ತಪ್ಪದೆ ಇಷ್ಟಲಿಂಗ ಪೂಜೆ ನೆರವೇರಿಸುತ್ತಿದ್ದರು. ಇಷ್ಟಲಿಂಗ ಪೂಜೆಯನ್ನು ತಪ್ಪಸ್ಸಿನಂತೆ ಮಾಡಿಕೊಂಡು ಬರುತ್ತಿದ್ದರು.

    92) ಇತಿ ಮಿತಿ ಆಹಾರ ಸೇವನೆ ಮೂಲಕ ಸ್ವಸ್ಥ ಆರೋಗ್ಯ ಶ್ರೀಗಳು ಕಾಪಾಡಿಕೊಂಡಿದ್ದರು.

    93) ನೂರಾರು ವಾಣಿಗಳ ಮೂಲಕ ಭಕ್ತರಿಗೆ ಜೀವನದ ಪಾಠ ಹೇಳಿದ್ದರು ಶಿವಕುಮಾರಸ್ವಾಮೀಜಿ.

    94) ಪ್ರತಿನಿತ್ಯ ಚಾಚೂತಪ್ಪದೆ ಬರಿಗಣ್ಣಿನಿಂದ ದಿನಪತ್ರಿಕೆ ಓದುತ್ತಿದ್ದರು. ಪ್ರಾಪಂಚಿಕ ವಿದ್ಯಾಮಾನಗಳ ಬಗ್ಗೆ ತಿಳಿದುಕೊಳ್ಳುವ ಹಸಿವನ್ನು ಸಿದ್ದಗಂಗಾ ಶ್ರೀಗಳು ಹೊಂದಿದ್ದರು.

    95) ಸಿದ್ದಗಂಗಾ ಶ್ರೀಗಳು ಉತ್ತಮ ಬರಹಗಾರರು ಹೌದು. ಶ್ರೀಗಳ ಪ್ರವಚನಗಳನ್ನು ಶ್ರೀವಾಣಿ ಎಂದು ಸಾಹಿತ್ಯ ರೂಪದಲ್ಲಿ ಮುದ್ರಿಸಲಾಗಿದ್ದು ದಾರಿ ದೀಪವಾಗಿದೆ.

    96) ಬೇರೆ ಬೇರೆ ಕಾರ್ಯಕ್ರಮಕ್ಕೆ, ಸಂಸ್ಥೆಗಳಿಗೆ ತೆರಳಿದಾಗ ನೀಡಿ ಆಶೀರ್ವಾಚನ `ಸಂದೇಶ ಸಂಚಯ’ದ ಹೆಸರಿನಲ್ಲಿ ಮುದ್ರಿತವಾಗಿದೆ.

    97) ಶ್ರೀ ಮಠದಲ್ಲಿ ಓದಿದವರು ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ರಾಷ್ಟ್ರಕಮಿ ಜಿಎಸ್ ಶಿವರುದ್ರಪ್ಪ, ವಿಶ್ರಾಂತ ಕುಲಪತಿ ಡಾ.ಬಿ ತಿಮ್ಮೇಗೌಡ, ಡಾ. ಮಲ್ಲೆಪುರ ವೆಂಕಟೇಶ್ ಈ ಹಿಂದೆ ಶ್ರೀ ಮಠದಲ್ಲಿ ಓದಿದ್ದರು.

    98) ಸಿದ್ದಲಿಂಗೇಶ್ವರ ದೇವಸ್ಥಾನವನ್ನು ಶ್ರೀಗಳು ಜೀರ್ಣೋದ್ಧಾರ ಮಾಡಿದ್ದರು. ಮಠಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ದೇವಸ್ಥಾನದ ಮಾರ್ಗಕ್ಕೆ ಶ್ರೀಗಳು ವ್ಯವಸ್ಥೆ ಮಾಡಿದ್ದರು.

    99) ಮದುವೆಗಳು ಸರಳವಾಗಿ ನಡೆಯಬೇಕು ಎನ್ನುವುದನ್ನು ಭಕ್ತಾದಿಗಳಿಗೆ ಮೇಲಿಂದ ಮೇಲೆ ಶ್ರೀಗಳು ಪ್ರವಚನ ಮಾಡುತ್ತಿದ್ದರು.

    100) ದುಡಿಮೆ ಸತ್ಯ ಶುದ್ಧವಾಗಿರಬೇಕು ಎನ್ನುವ ವಿಚಾರವನ್ನು ಶ್ರೀಗಳು ಪದೇಪದೇ ತಮ್ಮ ಮಾತಿನಲ್ಲಿ ಹೇಳುತ್ತಿದ್ದರು.

    101) ಸೇವೆ ಪ್ರಚಾರದ ಸರಕಲ್ಲ, ಅದು ಗುಪ್ತ ಶಕ್ತಿ. ವ್ಯಕ್ತಿಯನ್ನು ಆರೋಗ್ಯವಂತನಾಗಿಡುವ ಸಂಜೀವಿನಿ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದರು.

    102) ರಾಜಕಾರಣಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾಗ, ಜನನಾಯಕರು ನೀತಿವಂತರಾಗದ ತನಕ ಸಮಾಜ ಪರಿಶುದ್ಧವಾಗಲಾರದು ಎನ್ನುವ ಕಿವಿಮಾತನ್ನು ಹೇಳುತ್ತಿದ್ದರು.

    103) ಸಿದ್ದಗಂಗಾ ಶ್ರೀಗಳ ಸಾಧನೆ ಗಮನಿಸಿದ ಸರ್ಕಾರ ಶ್ರೀಗಳ ಹುಟ್ಟೂರು ಮಾಗಡಿ ತಾಲೂಕಿನ ವೀರಾಪುರ ಗ್ರಾಮವನ್ನು ದತ್ತು ತೆಗೆದುಕೊಂಡು ಮಾದರಿ ಗ್ರಾಮವಾಗಿ ನಿರ್ಮಾಣ ಮಾಡಿದೆ.

    104) 2014ರಲ್ಲಿ ಸಿದ್ದಗಂಗಾ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಶ್ರೀಗಳ ಸಾಧನೆಯನ್ನು ಕೊಂಡಾಡಿದ್ದರು.

    105) ಸಿದ್ದಗಂಗಾ ಶ್ರೀಗಳಿಗೆ ಮಾಜಿ ರಾಷ್ಟ್ರಪತಿ ದಿ. ಅಬ್ದುಲ್ ಕಲಾಂ ಎಂದರೆ ಅಭಿಮಾನ ಹೆಚ್ಚು, ಅಬ್ದುಲ್ ಕಲಾಂ ಬಗ್ಗೆ ಶ್ರೀಗಳು ಆಗಾಗ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

    106) ಜಾನುವಾರುಗಳ ಮೇಲೆ ಶ್ರೀಗಳಿಗೆ ವಿಶೇಷವಾದ ಮಮತೆ. ಮಠದಲ್ಲಿ ಸಾವಿರಾರು ಜಾನುವಾರುಗಳಿದ್ದು, ಇವುಗಳು ನೀಡುವ ಹಾಲನ್ನು ಮಠದ ಮಕ್ಕಳಿಗೆ ಬಳಕೆ ಮಾಡಲಾಗುತ್ತದೆ.

    107) ತಮಿಳುನಾಡಿನಲ್ಲಿ ಚಂಡಮಾರುತದಿಂದ ನಿರಾಶ್ರಿತರಿಗೆ ಮಠದಿಂದ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ಹಣವನ್ನು ದೇಣಿಗೆಯಾಗಿ ನೀಡಿದ್ದರು.

    108) ಪ್ರತಿ ಚುನಾವಣೆ ಬಂದಾಗಲೂ ತಪ್ಪದೇ ಮತದಾನ ಮಾಡುತ್ತಿದ್ದರು.

    109) ಖಾದಿಗೆ ಹೆಚ್ಚಿನ ಒತ್ತು ನೀಡಿದ್ದ ಶ್ರೀಗಳು ಮಠದ ಆವರಣದಲ್ಲಿ ಖಾದಿ ಬಟ್ಟೆಗಳ ಅಂಗಡಿ ಸ್ಥಾಪನೆ ಮಾಡಿದ್ದಾರೆ.

    110) ವಿಶಿಷ್ಟವಾಗಿ ಗೋ ಸಗಣಿಯಿಂದ ವಿಭೂತಿ ತಯಾರಿಸುವ ಕೇಂದ್ರವನ್ನು ಶ್ರೀಗಳು ಪ್ರಾರಂಭಿಸಿದ್ದರು.

    111) ಪ್ರತಿನಿತ್ಯ ಯೋಗ, ಧ್ಯಾನದ ದಿನಚರಿ, ಸರಳ ಜೀವನ, ಸೇವೆ ಮೂಲಕ ಸಮಾಜಕ್ಕೆ ಕಾಯಕವೇ ಕೈಲಾಸ ಎಂಬ ಸಂದೇಶವನ್ನು ಸಿದ್ದಗಂಗಾ ಶ್ರೀಗಳು ಸಾರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv