Tag: ಶ್ರೀನಿವಾಸ್ ರಾವ್

  • ರಾಜಮೌಳಿ ಮೇಲೆ ಗಂಭೀರ ಆರೋಪ : ನಿರ್ಮಾಪಕ ಆತ್ಮಹತ್ಯೆ

    ರಾಜಮೌಳಿ ಮೇಲೆ ಗಂಭೀರ ಆರೋಪ : ನಿರ್ಮಾಪಕ ಆತ್ಮಹತ್ಯೆ

    ಭಾರತೀಯ ಸಿನಿಮಾ ರಂಗದ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ (S S Rajamouli)ಮೇಲೆ ಗಂಭೀರ ಆರೋಪ ಮಾಡಿ, ಆತ್ಮಹತ್ಯೆಗೆ ಶರಣಾಗಿದ್ದಾರೆ ಖ್ಯಾತ ನಿರ್ಮಾಪಕ ಶ್ರೀನಿವಾಸ್ ರಾವ್. ಜ್ಯೂನಿಯರ್ ಎನ್.ಟಿ.ಆರ್ ನಟನೆಯ ಯಮದೊಂಗ (Yamadonga) ಸಿನಿಮಾವನ್ನು ಶ್ರೀನಿವಾಸ್ ರಾವ್  (Srinivas Rao)ನಿರ್ಮಾಣ ಮಾಡಿದ್ದರು.

    ಎಸ್.ಎಸ್ ರಾಜಮೌಳಿಯ ಆತ್ಮಿಯ ಸ್ನೇಹಿತನೂ ಆಗಿದ್ದ ಶ್ರೀನಿವಾಸ್ ರಾವ್‍ ಡೆತ್ ನೋಟ್ ಮತ್ತು ಸಾಯುವ ಮುನ್ನ ವಿಡಿಯೋವೊಂದನ್ನು ಮಾಡಿ, ತನ್ನ ಸಾವಿಗೆ ರಾಜಮೌಳಿ ಮತ್ತು ಅವರ ಪತ್ನಿ ರಮಾ ಕಾರಣ ಅಂತ ಹೇಳಿಕೊಂಡಿದ್ದಾರೆ. ಜೊತೆಗೆ ರಾಜಮೌಳಿ ಮತ್ತು ತನ್ನ ನಡುವಿನ ಲವ್ ಸ್ಟೋರಿಯನ್ನು ಶ್ರೀನಿವಾಸ್ ಹಂಚಿಕೊಂಡಿದ್ದಾರೆ.

    ರಾಜಮೌಳಿ ಮತ್ತು ನಾನು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದೆವು.  ಆ ಹುಡುಗಿಯನ್ನು ರಾಜಮೌಳಿ ತ್ಯಾಗ ಮಾಡುವಂತೆ ನನಗೆ ಹೇಳಿದ. ಹಾಗಾಗಿ ನಾನು ಆ ಹುಡುಗಿಯನ್ನು ರಾಜಮೌಳಿಗೆ ಬಿಟ್ಟು ಕೊಟ್ಟೆ. ಅಲ್ಲಿಂದ ನಾನು ಮದುವೆ ಆಗಿಲ್ಲ. ರಾಜಮೌಳಿಗೂ ನನಗೂ 34 ವರ್ಷದ ಸ್ನೇಹ.  ಇತ್ತೀಚೆಗೆ ಸಣ್ಣ ಮನಸ್ತಾಪ ಆಯಿತು. ನಾನು ನಮ್ಮ ಲವ್ ಸ್ಟೋರಿಯನ್ನು ಸಿನಿಮಾ ಮಾಡೋದಾಗಿ ಹೇಳಿದೆ. ಅಲ್ಲಿಂದ ರಾಜಮೌಳಿ ನಿರಂತರವಾಗಿ ನನಗೆ ಟಾರ್ಚರ್ ಮಾಡಲು ಶುರು ಮಾಡಿದ ಅಂತ ಡೆತ್ ನೋಟ್ ನಲ್ಲಿ  ಶ್ರೀನಿವಾಸ್ ರಾವ್ ಬರೆದಿದ್ದಾರೆ.

    ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ರಾಜಮೌಳಿ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಲಾಗಿದೆ. ಈವರೆಗೂ ಶ್ರೀನಿವಾಸ್ ರಾವ್ ಅವರ ಮೃತದೇಹ ಸಿಕ್ಕಿಲ್ಲ ಅನ್ನೋ ಮಾಹಿತಿಯೂ ಇದೆ.

  • ನವನಾಯಕ ಆರ್ಯವರ್ಧನ್ ಕನಸಿನ ‘ಖನನ’!

    ನವನಾಯಕ ಆರ್ಯವರ್ಧನ್ ಕನಸಿನ ‘ಖನನ’!

    ಬೆಂಗಳೂರು: ವಿಶಿಷ್ಟವಾದ ಟೈಟಲ್ ನಿಂದಲೇ ಸಖತ್ ಸೌಂಡ್ ಮಾಡೋ ಚಿತ್ರಗಳ ಜಮಾನ ಶುರುವಾಗಿ ಒಂದಷ್ಟು ಕಾಲವೇ ಕಳೆದಿದೆ. ಅದೇ ಸಾಲಿನಲ್ಲಿ ಮೂಡಿ ಬಂದು ಬಿಡುಗಡೆಗೆ ತಯಾರಾಗಿರುವ ಚಿತ್ರ ಖನನ. ಶೀರ್ಷಿಕೆಯೇ ಇಷ್ಟು ವಿಶಿಷ್ಟವಾಗಿರುವಾಗ ಅಂಥಾದ್ದೇ ವಿಶೇಷವಾದ ಕಥೆಯನ್ನೂ ಈ ಚಿತ್ರ ಹೊಂದಿದೆ ಅಂತ ಯಾರಿಗಾದರೂ ಅನ್ನಿಸದಿರೋದಿಲ್ಲ. ನಿಜಕ್ಕೂ ಖನನ ಕನ್ನಡ ಚಿತ್ರರಂಗಕ್ಕೆ ಮೈಲಿಗಲ್ಲಾಗುವಂಥಾ ಕಥೆ, ಹೊಸತನದ ನಿರೂಪಣೆಯನ್ನ ಹೊಂದಿದೆ. ಏಕಕಕಾಲದಲ್ಲಿಯೇ ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ತಯಾರಾಗಿರೋ ಈ ಚಿತ್ರದ ಮೂಲಕವೇ ಆರ್ಯವರ್ಧನ್ ನಾಯಕ ನಟನಾಗಿ ಎಂಟ್ರಿ ಕೊಡಲು ತಯಾರಾಗಿದ್ದಾರೆ.

    ಇದೀಗ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಆರ್ಯವರ್ಧನ್ ಪಾಲಿಗೆ ಖನನ ಎಂಬುದು ಬಹುದಿನದ ಕನಸೊಂದನ್ನು ನನಸು ಮಾಡಿದ ಚಿತ್ರ. ನಟಿಸೋ ಚಿತ್ರಗಳ ಸಂಖ್ಯೆ ಕಡಿಮೆಯಾದರೂ ಪರವಾಗಿಲ್ಲ ಆದರೆ ವಿಶಿಷ್ಟ ಕಥೆಗಳಲ್ಲಿಯೇ ಪಾತ್ರವಾಗಬೇಕೆಂಬಂಥಾ ತುಡಿತ ಹೊಂದಿರುವವರು ಆರ್ಯವರ್ಧನ್. ಈ ಚಿತ್ರದ ನಿರ್ಮಾಪಕರಾದ ಶ್ರೀನಿವಾಸ್ ರಾವ್ ಅವರ ಪುತ್ರರಾದ ಆರ್ಯ, ಸಾಕಷ್ಟು ಸೈಕಲ್ಲು ಹೊಡೆದೇ ಇಲ್ಲಿವರೆಗೆ ಸಾಗಿ ಬಂದಿದ್ದಾರೆ.

    ತಂದೆಯೇ ಚಿತ್ರ ನಿರ್ಮಾಣ ಮಾಡೋ ಶಕ್ತಿ ಹೊಂದಿರುವಾಗ ಹೀರೋ ಆಗೋದು ಸಲೀಸು ಅಂತ ಯಾರಾದರೂ ಅಂದುಕೊಂಡರೆ ಅದು ನಿಜಕ್ಕೂ ಸುಳ್ಳು. ಯಾಕೆಂದರೆ, ಈಗ ನಿರ್ಮಾಪಕರಾಗಿ ಮಗನ ಕನಸಿಗೆ ಸಾಥ್ ನೀಡಿರೋ ತಂದೆ ಶ್ರೀನಿವಾಸ್ ರಾವ್ ಅವರೂ ಬಣ್ಣದ ಕನಸು ಕಟ್ಟಿಕೊಂಡು ಸಾಕಷ್ಟು ಶ್ರಮ ವಹಿಸಿದ್ದಾರೆ. ಅದೇ ಹಾದಿಯಲ್ಲಿ ಆರ್ಯವರ್ಧನ್ ಕೂಡಾ ಪರಿಶ್ರಮದಿಂದಲೇ ಹೀರೋ ಆಗಿದ್ದಾರೆ.

    ವರ್ಷಗಳ ಹಿಂದೆ ಮಾರ್ಚ್ 22 ಎಂಬ ಚಿತ್ರವೊಂದು ತೆರೆ ಕಂಡಿತ್ತಲ್ಲಾ? ಎಲ್ಲರ ಮೆಚ್ಚುಗೆ ಗಳಿಸಿಕೊಂಡು ರಾಷ್ಟ್ರ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದ ಆ ಚಿತ್ರದಲ್ಲಿ ಸಲ್ಮಾನ್ ಎಂಬ ಪಾತ್ರ ಎಲ್ಲರ ಗಮನ ಸೆಳೆದಿತ್ತು. ಚಿತ್ರ ನೋಡಿದವರ್ಯಾರೂ ಆ ಪಾತ್ರವನ್ನು ಮರೆಯಲು ಸಾಧ್ಯವೇ ಇಲ್ಲ. ಆ ಪಾತ್ರಕ್ಕೆ ಅಷ್ಟೊಂದು ಪರಿಣಾಮಕಾರಿಯಾಗಿ ಜೀವ ತುಂಬಿದ್ದವರು ಆರ್ಯವರ್ಧನ್. ಇದಕ್ಕಾಗಿ ಅವರಿಗೆ ಎಲ್ಲ ದಿಕ್ಕುಗಳಿಂದಲೂ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ಇದರಿಂದ ಉತ್ತೇಜಿತರಾದ ಆರ್ಯವರ್ಧನ್ ಆ ನಂತರ ಚಿಟ್ಟೆ ಎಂಬ ಚಿತ್ರದಲ್ಲಿ ಅತಿಥಿ ಪಾತ್ರವೊಂದರಲ್ಲಿ ನಟಿಸಿದ್ದರು. ಆ ಹೊತ್ತಿಗೆಲ್ಲಾ ಆರ್ಯವರ್ಧನ್ ಅವರಿಗೆ ತಮ್ಮ ಗುರಿ ಮತ್ತು ದಾರಿಗಳೆಲ್ಲವೂ ಸ್ಪಷ್ಟವಾಗಿತ್ತು.

    ಒಂದೊಳ್ಳೆ ಕಥೆಯ ಮೂಲಕ ಹೀರೋ ಆಗಿ ಎಂಟ್ರಿ ಕೊಡಬೇಕೆಂದು ತಯಾರಿ ಆರಂಭಿಸಿದ್ದ ಆರ್ಯವರ್ಧನ್ ಅವರಿಗೆ ತಂದೆ ಶ್ರೀನಿವಾಸ ರಾವ್ ಸಾಥ್ ಕೊಟ್ಟಿದ್ದರು. ತಮ್ಮ ಎಸ್. ನಲಿಗೆ ಪ್ರೊಡಕ್ಷನ್ ಬ್ಯಾನರಿನಡಿಯಲ್ಲಿಯೇ ನಿರ್ಮಾಣ ಮಾಡೋದಾಗಿ ಹಸಿರು ನಿಶಾನೆಯನ್ನೂ ತೋರಿಸಿದ್ದರು. ಅದಕ್ಕೆ ತಕ್ಕುದಾಗಿಯೇ ನಿರ್ದೇಶಕ ರಾಧಾ ಅವರು ವಿಶಿಷ್ಟವಾದೊಂದು ಕಥೆ ಹೇಳೋದರ ಮೂಲಕ ವಿಧ್ಯುಕ್ತ ಚಾಲನೆ ಪಡೆದುಕೊಂಡಿದ್ದ ಖನನ ಚಿತ್ರವೀಗ ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ತಯಾರಾಗಿ ಬಿಡುಗಡೆಗೆ ಸಜ್ಜುಗೊಂಡಿದೆ.

    ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಆರ್ಯವರ್ಧನ್ ಪಾಲಿಗೆ ಸಿನಿಮಾ ಕನಸು ಚಿಗುರಿಕೊಳ್ಳಲು ಕಾರಣವಾಗಿದ್ದೇ ತಂದೆ ಶ್ರೀನಿವಾಸ ರಾವ್ ಅವರಲ್ಲಿದ್ದ ಸಿನಿಮಾ ಪ್ರೇಮ. ಶ್ರೀನಿವಾಸ ರಾವ್ ಎಪ್ಪತ್ತರ ದಶಕದಲ್ಲಿಯೇ ನಾಯಕನಾಗಬೇಕೆಂಬ ಕನಸು ಕಂಡಿದ್ದವರು.

    ಕಾಲೇಜು ದಿನಗಳಲ್ಲಿಯೇ ನಟನಾಗೋ ಹಂಬಲದಿಂದ ನಾನಾ ಸಾಹಸ ಮಾಡಿ ಭ್ರಮನಿರಸನ ಹೊಂದಿದ್ದ ಅವರು ಆ ನಂತರದಲ್ಲಿ ತಮ್ಮದೇ ವಹಿವಾಟಿನಲ್ಲಿ ಕಳೆದು ಹೋಗಿದ್ದವರು. ಆದರೆ ತಮ್ಮೆಲ್ಲ ಕನಸು ತನ್ನ ಮಗನ ಮೂಲಕ ನನಸಾಗಲೆಂಬ ಕಾರಣದಿಂದಲೇ ಶ್ರೀನಿವಾಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

    ಹೀಗೆ ತಂದೆಯ ಉತ್ತೇಜನದೊಂದಿಗೇ ಬೆಳೆದು ಬಂದ ಆರ್ಯವರ್ಧನ್ ಓದಿಕೊಂಡಿದ್ದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್. ಹದಿಮೂರು ವರ್ಷಗಳ ಕಾಲ ಬಹು ಪ್ರತಿಷ್ಠಿತ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಿದ್ದ ಅವರು ಈಗಲೂ ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿದ್ದಾರೆ. ಓದಿಗೆ ಮೋಸ ಮಾಡಬಾರದೆಂಬ ಕಾರಣದಿಂದ ಅಲ್ಲಿಯೇ ತೊಡಗಿಸಿಕೊಂಡಿರೋ ಆರ್ಯವರ್ಧನ್ ಅದರ ನಡುವೆಯೂ ಸಿನಿಮಾ ನಟನೆಯತ್ತ ಆಕರ್ಷಣೆ ಹೊಂದಿದ್ದವರು. ಈ ಚಿತ್ರ ಒಪ್ಪಿಕೊಂಡ ಮೇಲೂ ರಾತ್ರಿಯೆಲ್ಲ ಕೆಲಸ ಮಾಡಿ ಬೆಳಗೆ ಸೀದಾ ಬಂದು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೂ ಇದೆ.

    ಸಂಪೂರ್ಣ ತರಬೇತಿ ಪಡೆದುಕೊಂಡೇ ನಾಯಕನಾಗಿ ಅಖಾಡಕ್ಕಿಳಿದಿರುವ ಅವರು ಯಾವುದನ್ನೇ ಆದರೆ ಒಂದು ಸಲ ಹಿಡಿದರೆ ಬಿಡುವ ಜಾಯಮಾನದವರಲ್ಲ. ಮೊದಲ ಚಿತ್ರದಲ್ಲಿಯೇ ಇವರ ಸಮರ್ಪಣಾ ಭಾವ ಕಂಡು ನಿರ್ದೇಶಕರು ಸೇರಿದಂತೆ ಇಡೀ ಚಿತ್ರತಂಡದಲ್ಲೊಂದು ಮೆಚ್ಚುಗೆಯಿದೆ.

    ಶಾಲಾ ಕಾಲೇಜು ದಿನಗಳಲ್ಲಿಯೇ ಕಲೆ ಮತ್ತು ಸಾಹಿತ್ಯದತ್ತ ಅಪಾರ ಒಲವು ಹೊಂದಿದ್ದ ಆರ್ಯವರ್ಧನ್ ಅವರಿಗೆ ಆ ಕಾರಣದಿಂದಲೇ ಸಿನಿಮಾ ಆಸಕ್ತಿಯೂ ರೂಪುಗೊಂಡಿದೆ. ತಾನಿಂಥಾದ್ದೇ ಚಿತ್ರ ಮಾಡಬೇಕೆಂಬ ಸ್ಪಷ್ಟತೆ ಹುಟ್ಟಿಕೊಂಡಿದ್ದು, ಕಥೆಯ ಆಯ್ಕೆಯಲ್ಲಿ ಪ್ರೌಢಿಮೆ ಸಾಧ್ಯವಾದದ್ದರ ಹಿಂದೆ ಓದಿನ ಪಾತ್ರವಿದೆ ಅನ್ನೋದು ಆರ್ಯ ಅಭಿಪ್ರಾಯ.

    ತಾನು ಯಾವ ಚಿತ್ರವನ್ನೇ ಮಾಡಿದರೂ ಅದರಲ್ಲಿ ಸಮಾಜಕ್ಕೇನಾದರೂ ಸಂದೇಶ ಇರಬೇಕೆಂಬ ಕಾಳಜಿ ಹೊಂದಿರುವ ಅವರ ಪಾಲಿಗೆ ಖನನ ಮೂಲಕ ಅಂಥಾದ್ದೇ ಕಥೆ ಸಿಕ್ಕಿದೆ. ಕನ್ನಡದ ಮಟ್ಟಿಗೆ ಅತ್ಯಂತ ಅಪರೂಪದ ಈ ಚಿತ್ರದ ಮೂಲಕ ತಮಗೆ ಗ್ರ್ಯಾಂಡ್ ಓಪನಿಂಗ್ ಸಿಗಲಿದೆ ಎಂಬ ಭರವಸೆಯೂ ಅವರಲ್ಲಿದೆ.

    ಖನನ ಎಂಬುದು ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರ. ಚೆಂದದ ಕಥೆ ಹೇಳುತ್ತಲೇ ಬದುಕಿನ ವಾಸ್ತವ ದಿಗ್ದರ್ಶನ ಮಾಡಿಸುವಂಥಾ ಈ ಚಿತ್ರದಲ್ಲಿ ಸಾಹಸ, ಪ್ರೀತಿ ಪ್ರೇಮ ಸೇರಿದಂತೆ ಎಲ್ಲ ಅಂಶಗಳೂ ಇವೆ. ಪಕ್ಕಾ ಕಮರ್ಶಿಯಲ್ ಜಾನರಿನಲ್ಲಿಯೇ ಹಲವಾರು ಪ್ರಯೋಗಗಳು ಮತ್ತು ತಾಂತ್ರಿಕ ಶ್ರೀಮಂತಿಕೆಯಿಂದ ಖನನ ಮೂಡಿ ಬಂದಿದೆಯಂತೆ. ಈ ಹಿಂದೆ ಮಾರ್ಚ್ 22 ಚಿತ್ರದ ಮೂಲಕವೇ ಆರ್ಯವರ್ಧನ್ ಒಳ್ಳೆ ನಟ ಎಂಬುದು ಸಾಬೀತಾಗಿತ್ತು. ಖನನ ಚಿತ್ರದ ಮೂಲಕ ಅವರು ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹಾಗೆಂದ ಮೇಲೆ ನಿರೀಕ್ಷೆಗಳು ಇದ್ದೇ ಇರುತ್ತವೆ. ಈ ಚಿತ್ರ ಇದೇ ತಿಂಗಳು ತೆರೆ ಕಾಣಲಿದೆ.

  • ಖನನ ಮೂಲಕ ನಿರ್ದೇಶಕರಾಗಿ ಬಂದ್ರು ರಾಯಚೂರಿನ ರಾಧಾ!

    ಖನನ ಮೂಲಕ ನಿರ್ದೇಶಕರಾಗಿ ಬಂದ್ರು ರಾಯಚೂರಿನ ರಾಧಾ!

    ಬೆಂಗಳೂರು: ಎಸ್. ನಲಿಗೆ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಶ್ರೀನಿವಾಸ ರಾವ್ ನಿರ್ಮಾಣ ಮಾಡಿರುವ ಖನನ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಆರ್ಯವರ್ಧನ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಈ ಚಿತ್ರವನ್ನು ನಿರ್ದೇಶನ ಮಾಡಿರುವವರು ರಾಧಾ. ರಾಯಚೂರು ಮೂಲದ ಅಪ್ಪಟ ಕನ್ನಡಿಗರಾದರೂ ತೆಲುಗು ಚಿತ್ರರಂಗದಲ್ಲಿ ಛಾಪು ಮೂಡಿಸಿರೋ ರಾಧಾ ಕೂಡಾ ಈ ಚಿತ್ರದ ಮೂಲಕವೇ ನಿರ್ದೇಶಕರಾಗಿ ಕನ್ನಡಕ್ಕೆ ಪರಿಚಯವಾಗುತ್ತಿದ್ದಾರೆ.

    ತೆಲುಗು ಚಿತ್ರರಂಗದಲ್ಲಿ ರಾಧಾ ಎಂದೇ ಜನಪ್ರಿಯರಾಗಿರೋ ಇವರ ಪೂರ್ತಿ ಹೆಸರು ರಾಧಾ ಕೃಷ್ಣ. ಆದರೆ ರಾಧಾ ಎಂಬ ನಾಮಧೇಯದೊಂದಿಗೇ ಕನ್ನಡಕ್ಕೂ ಆಗಮಿಸಿರೋ ಅವರು ತಮ್ಮ ಜನರಿಗೆ ಒಂದೊಳ್ಳೆ ಕಂಟೆಂಟಿನ ಚಿತ್ರವನ್ನು ಕೊಡುವ ಕಾತರದಲ್ಲಿದ್ದಾರೆ. ರಾಧಾ ಮೂಲತಃ ರಾಯಚೂರಿನ ಸಿಂಧಗಿ ತಾಲೂಕಿನ ಪುಟ್ಟ ಹಳ್ಳಿಯವರು. ಅಪ್ಪಟ ರೈತಾಪಿ ವರ್ಗದಲ್ಲಿಯೇ ಹುಟ್ಟಿ ಬೆಳೆದ ಅವರು ಹೈಸ್ಕೂಲುವರೆಗಿನ ವ್ಯಾಸಂಗವನ್ನು ಮುದನೂರು ಮುಂತಾದೆಡೆಗಳಲ್ಲಿ ಪೂರೈಸಿಕೊಂಡು ಡಿಗ್ರಿ ಮಗಿಸಿಕೊಂಡಿದ್ದು ಮೈಸೂರಿನ ಜೆಎಸ್ ಎಸ್ ಕಾಲೇಜಿನಲ್ಲಿ. ಅವರೊಳಗಿನ ನೈಜ ಆಸಕ್ತಿಗೆ ವೇದಿಕೆ ಮತ್ತು ಪ್ರೋತ್ಸಾಹ ಸಿಕ್ಕಿದ್ದೂ ಕೂಡಾ ಇಲ್ಲಿಯೇ.

    ರಾಧಾ ಅವರಿಗೆ ಅಕ್ಷರಗಳ ಪರಿಚಯವಾದ ಘಳಿಗೆಯಿಂದಲೇ ಸಾಹಿತ್ಯದತ್ತ ಕಣ್ಣಾಡಿಸುವ, ತಮ್ಮ ಸುತ್ತಲಿನ ವಾತಾವರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಕಥೆ ಬರೆಯುವ ಹವ್ಯಾಸ ಬೆಳೆದು ಬಂದಿತ್ತು. ಇವರ ತಾಯಿಯ ತಂದೆಯವರಾದ ವೆಂಕಟರಾವ್ ಅವರೂ ಕೂಡಾ ಕಥೆಗಾರರೇ. ಬ್ರಿಟಿಷರ ವಿರುದ್ಧ ಕಥೆ ಬರೆದು ಆಕ್ರೋಶ ಹೊರ ಹಾಕೋ ಕ್ರಾಂತಿಕಾರಿ ಮನಸ್ಥಿತಿ ಹೊಂದಿದ್ದ ವೆಂಕಟರಾಯರು ಬರೆದ ಅದೆಷ್ಟೋ ಕಥೆಗಳನ್ನು ಬ್ರಿಟಿಷ್ ಅಧಿಕಾರಿಗಳ ದರ್ಪಕ್ಕೆ ಬೆದರಿ ಮನೆ ಮಂದಿ ಸುಟ್ಟು ಹಾಕುತ್ತಿದ್ದರಂತೆ. ಆ ತಾತನ ಕಥೆ ಬರೆಯೋ ಪ್ರತಿಭೆಯೇ ಮೊಮ್ಮಗ ರಾಧಾಗೂ ಬಂದಿದೆ ಅಂತ ಆಗಾಗ ಅಪ್ಪ ಅಮ್ಮ ಹೇಳುತ್ತಿದ್ದರಂತೆ. ಶಾಲೆಯಲ್ಲಿ ರಾಧಾರ ಈ ಪ್ರತಿಭೆಗೆ ಮೇಸ್ಟರಾಗಿದ್ದ ವೆಂಕೋಬ ಪಾಟೀಲರೂ ಕೂಡಾ ಪ್ರೋತ್ಸಾಹ ಕೊಡುತ್ತಾ ಬಂದಿದ್ದರಿಂದಲೇ ಕಾಲೇಜು ತಲುಪೋ ಹೊತ್ತಿಗೆಲ್ಲ ಅವರೊಳಗೊಬ್ಬ ಕಥೆಗಾರ ಜೀವ ಪಡೆದು ಬಿಟ್ಟಿದ್ದ.

    ಶಾಲಾ ದಿನಗಳಲ್ಲಿಯೇ ರಾಧಾ ಯಾವ ಪರಿಯಾಗಿ ಬರವಣಿಗೆಯ ಗುಂಗಿಗೆ ಬಿದ್ದಿದ್ದರೆಂದರೆ ಪ್ರತೀ ದಿನವೂ ಏನಾದರೊಂದು ಬರೆಯದಿದ್ದರೆ ನಿದ್ದೆ ಹತ್ತದಂತಾಗುತ್ತಿದ್ದರು, ಕಡೆಯ ಪಕ್ಷ ಡೈರಿಯಾದರೂ ಗೀಚಿದರೇನೇ ಸಮಾಧಾನ. ಮಗ ಚೆಂದಗೆ ಓದಿ ದೊಡ್ಡ ಕೆಲಸ ಹಿಡಿಯ ಬೇಕೆಂಬ ಆಸೆ ಹೊಂದಿದ್ದ ತಂದೆ ಇದರಿಂದ ಗಾಬರಿಗೀಡಾಗುತ್ತಿದ್ದದ್ದೂ ಇದೆ. ಆದರೂ ಬರವಣಿಗೆಯನ್ನೇ ನೆಚ್ಚಿಕೊಂಡಿದ್ದ ಅವರು ಶಾಲಾ ಕಾಲೇಜು ದಿನಗಳಲ್ಲಿ ಲೇಖನಗಳ ಮೂಲಕ ಸುತ್ತಲಿನವರಿಗೆ ವಿಶೇಷ ವ್ಯಕ್ತಿಯಾಗಿ ಕಾಣಿಸಲಾರಂಭಿಸಿದ್ದರು. ಹೀಗೆ ಬರೆಯೋ ಹವ್ಯಾಸ ಬೆಳೆಸಿಕೊಳ್ಳುತ್ತಲೇ ತಾನು ಸಿನಿಮಾ ರಂಗದಲ್ಲಿ ಏನಾದರೊಂದು ಸಾಧಿಸಲೇ ಬೇಕೆಂಬ ಕನಸು ಅವರೊಳಗೆ ಚಿಗುರಿಕೊಂಡಿತ್ತು. ಅದುವೇ ಅವರನ್ನು ಅನಾಯಾಸವಾಗಿ ಚಿತ್ರರಂಗದ ಸಂಪರ್ಕಕ್ಕೂ ಪಕ್ಕಾಗಿಸಿತ್ತು.

    ರಾಯಚೂರು ಸೀಮೆಯಲ್ಲಿ ತೆಲುಗು ಚಿತ್ರರಂಗದ ನಂಟು ಹೊಂದಿರೋ ಅನೇಕರಿದ್ದಾರೆ. ಬಾಹುಬಲಿ ಖ್ಯಾತಿಯ ರಾಜಮೌಳಿಯವರೂ ಕೂಡಾ ರಾಧಾರ ದೂರದ ಸಂಬಂಧಿಕರೇ. ಈ ನಂಟಿನೊಂದಿಗೇ ರಾಧಾ ತೆಲುಗು ಚಿತ್ರರಂಗಕ್ಕೆ ರೈಟರ್ ಆಗಿ ಪಾದಾರ್ಪಣೆ ಮಾಡಿದ್ದರು. 2006ರಲ್ಲಿ ಹೀಗೆ ಪಾದಾರ್ಪಣೆ ಮಾಡಿದ್ದ ಅವರು ಈವರೆಗೆ ಎಂಬತ್ತಕ್ಕೂ ಹೆಚ್ಚು ತೆಲುಗು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಅಲ್ಲಿ ಹೀಗೆ ಯಶಸ್ವಿಯಾದರೂ ಕನ್ನಡ ಚಿತ್ರವೊಂದನ್ನು ಮಾಡಬೇಕೆಂಬ ಆಸೆ ಅವರಿಗೆ ಇದ್ದೇ ಇತ್ತು. ಅದಕ್ಕೆ ಸರಿಯಾದ ಮುಹೂರ್ತ ಕೂಡಿ ಬಂದಿದ್ದು ಖನನ ಚಿತ್ರದ ಮೂಲಕ.

    ಶ್ರೀನಿವಾಸ್ ರಾವ್ ಅವರು ತಮ್ಮ ಮಗನ ಎಂಟ್ರಿಗೆ ವಿಶೇಷವಾದೊಂದು ಕಥೆಗಾಗಿ ಕಾದು ಕೂತಿದ್ದರಲ್ಲಾ? ಅದು ಹೇಗೋ ಅವರ ಸಂಪರ್ಕವಾಗಿ, ಅವರಿಗೆ ರಾಧಾ ಹೇಳಿದ ಕಥೆ ಇಷ್ಟವಾಗಿ ಹೋಗಿತ್ತು. ತೀರಾ ಮೂವತ್ತು ನಲವತ್ತು ಕೋಟಿ ಬಜೆಟ್ಟಿನ ಚಿತ್ರಗಳಿಗೆ ಕೆಲಸ ಮಾಡಿದ್ದ ರಾಧಾ ಸಣ್ಣ ಮೊತ್ತದ ಚಿತ್ರ ಮಾಡೋದು ಹೇಗೆಂದು ಆರಂಭದಲ್ಲಿ ಚಿಂತೆಗೆ ಬಿದ್ದಿದ್ದರಂತೆ. ಆದರೆ ಕಥೆ ಚೆನ್ನಾಗಿದ್ದುದರಿಂದಾಗಿ ಏಕಕಾಲದಲ್ಲಿ ಮೂರು ಭಾಷೆಗಳಲ್ಲಿ ಖನನವನ್ನು ನಿರ್ಮಾಣ ಮಾಡಲೂ ನಿರ್ಮಾಪಕರು ಮುಂದಾಗಿದ್ದರು. ಯಾವ ಕೊರತೆಯೂ ಆಗದಂತೆ ನೋಡಿಕೊಂಡಿದ್ದರಂತೆ. ಈ ಕಾರಣದಿಂದಲೇ ಈಗ ಖನನ ಬಿಡುಗಡೆಗೆ ತಯಾರಾಗಿ ನಿಂತಿದೆ.

    ತೆಲುಗಿನಲ್ಲಿ ಎಂಬತ್ತಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿದ್ದರೂ ರಾಧಾ ಖನನ ಮೂಲಕವೇ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಯಾವ ಭಾಷೆಗೇ ಆದರೂ ಹೊಸತಾಗುವಂಥಾ ಖನನ ಎಲ್ಲ ವರ್ಗದವರಿಗೂ ಇಷ್ಟವಾಗುವ, ಬದುಕಿನ ವಾಸ್ತವವನ್ನು ತೆರೆದಿಡುವ ಭಿನ್ನ ಮಾದರಿಯಲ್ಲಿ ಮೂಡಿ ಬಂದಿದೆಯಂತೆ. ಹೇಳಿಕೇಳಿ ರಾಧಾ ತೆಲುಗು ಚಿತ್ರರಂಗದಲ್ಲಿ ಪಳಗಿಕೊಂಡಿರುವವರು. ಆದ್ದರಿಂದ ವಿಶಿಷ್ಟವಾದ ಈ ಕಥೆಯನ್ನು ಅವರು ಪಕ್ಕಾ ಕಮರ್ಶಿಯಲ್ ಶೈಲಿಯಲ್ಲಿಯೇ ನಿರ್ದೇಶನ ಮಾಡಿದ್ದಾರಂತೆ. ಈ ಚಿತ್ರದ ಅಸಲೀ ಮಜಾ ಏನೆಂಬುದು ಮುಂದಿನ ತಿಂಗಳ ಹೊತ್ತಿಗೆಲ್ಲ ತಿಳಿಯಲಿದೆ.