Tag: ಶ್ರೀನಿವಾಸ್ ಬಿ.ವಿ

  • ಯುವ ಕಾಂಗ್ರೆಸ್ ಮುಖ್ಯಸ್ಥ ಬಿವಿ ಶ್ರೀನಿವಾಸ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ – ರಾಹುಲ್ ವಿರುದ್ಧವು ಕಿಡಿಕಾರಿದ ಯುವ ನಾಯಕಿ

    ಯುವ ಕಾಂಗ್ರೆಸ್ ಮುಖ್ಯಸ್ಥ ಬಿವಿ ಶ್ರೀನಿವಾಸ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ – ರಾಹುಲ್ ವಿರುದ್ಧವು ಕಿಡಿಕಾರಿದ ಯುವ ನಾಯಕಿ

    ದಿಸ್ಪುರ್: ಭಾರತೀಯ ಯುವ ಕಾಂಗ್ರೆಸ್ (Indian Youth Congress ) ಅಧ್ಯಕ್ಷ ಶ್ರೀನಿವಾಸ್ ಬಿ.ವಿ (Srinivas BV) ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ತನ್ನ ಲಿಂಗದ ಬಗ್ಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಐವೈಸಿ ಅಸ್ಸಾಂ ಘಟಕದ ಮುಖ್ಯಸ್ಥೆ ಅಂಗಿತಾ ದತ್ತಾ (Angkita Dutta) ಆರೋಪಿಸಿದ್ದಾರೆ.

    ಶ್ರೀನಿವಾಸ್ ವಿರುದ್ಧ ದೂರುಗಳಿದ್ದರೂ ಯಾವುದೇ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ (Priyanka Gandhi) ಹಾಗೂ ಅವರ ಸಹೋದರ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ  (Rahul Gandhi) ವಿರುದ್ಧ ಸಹ ದತ್ತಾ ಅವರು ಸರಣಿ ಟ್ವೀಟ್‍ಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಅಣ್ಣಾಮಲೈ ವಿರುದ್ಧವೂ ಕಿಡಿಕಾರಿದ ಜಗದೀಶ್ ಶೆಟ್ಟರ್

    ಅಸ್ಸಾಂನ ತರುಣ್ ಗೊಗೊಯ್ ಅವರ ಸರ್ಕಾರದಲ್ಲಿ ಸಚಿವರಾಗಿದ್ದ ಮತ್ತು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥರಾಗಿದ್ದ ಅಂಜನ್ ದತ್ತಾ ಅವರ ಪುತ್ರಿಯಾಗಿರುವ ಅಂಗಿತಾ ದತ್ತಾ ಅವರ ಈ ಆರೋಪ ಈಗ ಯುವ ಕಾಂಗ್ರೆಸ್‍ನಲ್ಲಿ ಬಿರುಗಾಳಿ ಎಬ್ಬಿಸಿದೆ.

    ಶ್ರೀನಿವಾಸ್ ಬಿ.ವಿ, ನನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಮತ್ತು ನನ್ನ ಲಿಂಗದ ಆಧಾರದ ಮೇಲೆ ತಾರತಮ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಪಕ್ಷದ ರಾಷ್ಟ್ರೀಯ ನಾಯಕರ ಗಮನಕ್ಕೆ ತರಲಾಗಿದೆ. ಆದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ದತ್ತಾ ಅವರು ದೂರಿದ್ದಾರೆ. ಅಲ್ಲದೆ ಅವರು ತಮ್ಮ ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್ ಮತ್ತು ಪ್ರಿಯಾಂಕಾ ಗಾಂಧಿಯವರಿಗೆ ಟ್ವೀಟ್ ಮಾಡಿ ಟ್ಯಾಗ್ ಮಾಡಿದ್ದಾರೆ.

    ಕಿರುಕುಳ ನೀಡಿದ ಶ್ರೀನಿವಾಸ್ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದು ಹಲವಾರು ತಿಂಗಳಿಂದ ಸುಮ್ಮನಿದ್ದೆ. ಆದರೂ ಈ ಬಗ್ಗೆ ಯಾರು ಕ್ರಮಕ್ಕೆ ಮುಂದಾಗುತ್ತಿಲ್ಲ. ನಿರಂತರವಾಗಿ ಕಿರುಕುಳ ನೀಡುವ ಒಬ್ಬ ಕಾಮುಕ ಹಾಗೂ ಕೋಮುವಾದಿಯನ್ನು ಹೇಗೆ ಸಹಿಸುವುದು? ಪ್ರಿಯಾಂಕಾ ಗಾಂಧಿಯವರ ಮಹಿಳೆಯರ ಪರ ನಿಲುವುಗಳು ಈಗ ಏನಾಯಿತು? ಪಕ್ಷದ ಭಾರತ್ ಜೋಡೋ (Bharat Jodo Yatra) ಯಾತ್ರೆಯ ಸಂದರ್ಭದಲ್ಲಿ ಜಮ್ಮುವಿನಲ್ಲಿ (Jammu) ರಾಹುಲ್ ಗಾಂಧಿ ಅವರನ್ನು ಸಂಪರ್ಕಿಸಿದ್ದೆ ಅವರ ಮೇಲೆ ಬಹಳ ನಂಬಿಕೆ ಇತ್ತು. ಆದರೆ ಗಮನಕ್ಕೆ ತಂದು ಹಲವು ತಿಂಗಳು ಕಳೆದರೂ ಈ ಬಗ್ಗೆ ವಿಚಾರಣೆ ಆಗಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಮಹಿಳಾ ನಾಯಕಿಯಾದ ನಾನೇ ಕಿರುಕುಳಕ್ಕೆ ಒಳಗಾಗಿದ್ದು, ಕಾಂಗ್ರೆಸ್ ಸೇರಲು ಮಹಿಳೆಯರನ್ನು ಹೇಗೆ ಪ್ರೋತ್ಸಾಹಿಸಬೇಕು? ಇದು ಸುರಕ್ಷಿತ ಸ್ಥಳವೇ? ಎಂದು ಪ್ರಶ್ನಿಸಿದ್ದಾರೆ.

    ಹಿಂದಿನ ಅಧ್ಯಕ್ಷ ಕೇಶವ್ ಕುಮಾರ್ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಾಗ ಅವರನ್ನು ತೆಗೆದುಹಾಕಲು ಒತ್ತಾಯಿಸಲಾಯಿತು. ಈಗ ಆರು ತಿಂಗಳಿಂದ ಶ್ರೀನಿವಾಸ್ ಅವರಿಂದ ಮಾನಸಿಕ ಕಿರುಕುಳ ಮತ್ತು ತಾರತಮ್ಯಕ್ಕೆ ಒಳಗಾಗಿದ್ದರೂ, ನನಗೆ ಮೌನವಾಗಿರಲು ಹೇಳಲಾಗಿದೆ ಮತ್ತು ಯಾವುದೇ ವಿಚಾರಣೆಯನ್ನು ಪ್ರಾರಂಭಿಸಿಲ್ಲ. ಶ್ರೀನಿವಾಸ್ ಬಹಳ ಪ್ರಭಾವಶಾಲಿ ವ್ಯಕ್ತಿ, ದೊಡ್ಡ ನಾಯಕರ ಕೃಪೆ ಹೊಂದಿದ್ದಾರೆ ಎಂದು ಅಸಮಧಾನ ಹೊರ ಹಾಕಿದ್ದಾರೆ.

    ಶ್ರೀನಿವಾಸ್ ವಿರುದ್ಧ ಕ್ಷುಲ್ಲಕ ಆರೋಪ ಮಾಡಲಾಗಿದೆ. ಅವರ ವಿರುದ್ಧ ಮಾನಹಾನಿ ಹಾಗೂ ಅಸಂಸದೀಯ ಪದಗಳನ್ನು ಬಳಕೆ ಮಾಡಲಾಗಿದೆ. ಅದಕ್ಕಾಗಿ ದತ್ತಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಕ್ಷದ ಕಾನೂನು ವಿಭಾಗ ಟ್ವೀಟ್‍ನಲ್ಲಿ ತಿಳಿಸಿದೆ.

    ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಶ್ರೀನಿವಾಸ್ ವಿರುದ್ಧ ದತ್ತಾ ಅವರ ಸರಣಿ ಟ್ವೀಟ್ ಬಳಸಿ, ಮಹಿಳೆಯರಿಗೆ ಕಿರುಕುಳ ನೀಡುವುದು ಕಾಂಗ್ರೆಸ್‍ನಲ್ಲಿ ಸರ್ವೇಸಾಮಾನ್ಯವಾಗಿದೆ ಎಂದು ಬರೆದುಕೊಂಡಿದ್ದಾರೆ.

    2019ರಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರು ಮಥುರಾದಲ್ಲಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ ಕೆಲವು ಕಾಂಗ್ರೆಸ್ ಕಾರ್ಯಕರ್ತರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಂಡ ನಂತರ ಶಿವಸೇನೆಗೆ ಸೇರಿದ್ದರು. ಇದನ್ನೂ ಓದಿ: ಬಿಜೆಪಿಯಲ್ಲಿ ಪಕ್ಷ ನಿಷ್ಠೆ ಇಲ್ಲ, ವ್ಯಕ್ತಿ ನಿಷ್ಠೆಯಿದೆ – ಜೋಷಿ ವಿರುದ್ಧ ಶೆಟ್ಟರ್ ಕಿಡಿ

  • ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಈ ನಿರ್ಧಾರ ತೆಗೆದುಕೊಂಡಿದೆ: ಶ್ರೀನಿವಾಸ್ ಬಿ.ವಿ

    ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಈ ನಿರ್ಧಾರ ತೆಗೆದುಕೊಂಡಿದೆ: ಶ್ರೀನಿವಾಸ್ ಬಿ.ವಿ

    ನವದೆಹಲಿ: ಕೇಂದ್ರ ಸರ್ಕಾರ ಕೃಷಿ ಕಾನೂನು ವಾಪಸ್ ಪಡೆದುಕೊಂಡಿರುವುದು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಯೂಥ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ಹೇಳಿದ್ದಾರೆ.

    ದೆಹಲಿಯಲ್ಲಿ ಪಬ್ಲಿಕ್ ಟಿವಿಗೆ ಜೊತೆಗೆ ಮಾತನಾಡಿದ ಅವರು, ಗಾಂಧಿಯ ಶಾಂತಿಯ ತತ್ವ ಮತ್ತೊಮ್ಮೆ ಸಾಬೀತಾಗಿದೆ. ಶಾಂತಿಯುತ ಹೋರಾಟದಿಂದ ಎಲ್ಲವನ್ನೂ ಗೆಲ್ಲಬಹುದಾಗಿದೆ, ಅನ್ನದಾತರು ಇದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಎಂದಿದ್ದಾರೆ.  ಇದನ್ನೂ ಓದಿ: ಸರ್ಕಾರ ಅನ್ನದಾತನ ಮುಂದೆ ಮಂಡಿಯೂರಿದೆ: ಡಿ.ಕೆ. ಶಿವಕುಮಾರ್

    ನೂರಾರು ರೈತರು ಹುತಾತ್ಮರಾದರೂ ಅನ್ನದಾತರು ಶಾಂತಿಯುತ ಪ್ರತಿಭಟನೆ ನಡೆಸಿದರು. ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ಬಿಜೆಪಿ ತೆಗೆದುಕೊಂಡಿದೆ. ಬೈ ಎಲೆಕ್ಷನ್ ನಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಆತಂರಿಕ ವರದಿಯಲ್ಲಿ ನೆಗೆಟಿವ್ ರಿಪೋರ್ಟ್ ಬಂದಿದೆ. ಇದಕ್ಕೆ ಬೆದರಿರುವ ಮೋದಿ ಸರ್ಕಾರ ಕಾನೂನು ವಾಪಸ್ ಪಡೆದಿದೆ. ಇದು ರೈತರ ಹೋರಾಟಕ್ಕೆ ಸಂದ ಅತಿದೊಡ್ಡ ಜಯವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:   ಕೃಷಿ ಕಾಯ್ದೆ ವಾಪಸ್ ಪಡೆದ ಮೋದಿ ಸರ್ಕಾರ

  • ಬಿಜೆಪಿಯನ್ನ ಮೆಚ್ಚಿಸಲು ಸಿ.ಟಿ. ರವಿ, ಯತ್ನಾಳ್ ಹೇಳಿಕೆ: ಶ್ರೀನಿವಾಸ್ ಬಿವಿ

    ಬಿಜೆಪಿಯನ್ನ ಮೆಚ್ಚಿಸಲು ಸಿ.ಟಿ. ರವಿ, ಯತ್ನಾಳ್ ಹೇಳಿಕೆ: ಶ್ರೀನಿವಾಸ್ ಬಿವಿ

    ನವದೆಹಲಿ: ಬಿಜೆಪಿ ನಾಯಕರಾದ ಸಿ.ಟಿ.ರವಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಆಗಬೇಕೆಂದು ಬಟ್ಟೆ ಹೊಲಿಸಿಕೊಂಡಿದ್ದರು. ಆದರೀಗ ಮುಖ್ಯಮಂತ್ರಿ ಸ್ಥಾನ ಸಿಗದೆ ಅವರಿಗೆ ಬುದ್ಧಿ ಭ್ರಮಣೆ ಆಗಿದೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ದೆಹಲಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬ ಹುಚ್ಚ ಎನ್ನುವ ಬಗ್ಗೆ ನಾವು ಸರ್ಟಿಫಿಕೇಟ್ ಕೊಡಬೇಕಾದ ಅಗತ್ಯ ಇಲ್ಲ. ಬಿಜೆಪಿ ನಾಯಕರೇ ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬ ಹುಚ್ಚ ಎಂದು ಹೇಳುತ್ತಾರೆ. ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಬುದ್ಧಿ ಭ್ರಮಣೆ ಆಗಿರುವ ಬಿಜೆಪಿ ನಾಯಕರಿಗೆ ಕೌನ್ಸೆಲಿಂಗ್ ಮಾಡಿಸಲಿ ಎಂದು ಮನವಿ ಮಾಡಿದರು. ಹಾಗಾಗಿ ಹತಾಶರಾಗಿ ಕಾಂಗ್ರೆಸ್ ನಾಯಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಬಿಜೆಪಿ ನಾಯಕರನ್ನು ಮೆಚ್ಚಿಸಲು ಆ ಮೂಲಕ ಪದವಿ ಗಳಿಸಲು ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ದೂರಿದರು.

    Srinivas B V

    ಸಿ.ಟಿ.ರವಿಯದ್ದು ಕುಟುಂಬ ರಾಜಕಾರಣ ಅಲ್ವಾ?: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಕಾಂಗ್ರೆಸ್ ಪಕ್ಷದ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಆದರೆ ಚಿಕ್ಕಮಗಳೂರು ಮಹಿಳಾ ಮೋರ್ಚಾ ಉಪಾಧ್ಯಕ್ಷರನ್ನಾಗಿ ಸಿ.ಟಿ. ರವಿ ಅವರ ಮಡದಿ ಪಲ್ಲವಿ ಅವರನ್ನು ನೇಮಕ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿಯಲ್ಲಿ ಸಮರ್ಥ ಮಹಿಳಾ ಕಾರ್ಯಕರ್ತರು ಇರಲಿಲ್ಲವೇ? ಸಿ.ಟಿ.ರವಿ ಪತ್ನಿ ನೇಮಕ ಕುಟುಂಬ ರಾಜಕಾರಣ ಅಲ್ಲವೇ? ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಗಣೇಶೋತ್ಸವ ಆಚರಿಸ್ತೇವೆ, ಗುಂಡು ಹೊಡೆಯೋದಾದ್ರೆ ಹೊಡೆಯಿರಿ

    c t ravi

    ಸಿ.ಟಿ.ರವಿ ಕಾಂಗ್ರೆಸ್ ಪಕ್ಷ ದೇಶದಲ್ಲಿ 70 ವರ್ಷದಿಂದ ಏನೂ ಮಾಡಿಲ್ಲ ಎಂದು ಹೇಳುತ್ತಾರೆ. ಇದೇ ವೇಳೆ 217 ಯೋಜನೆಗಳಿಗೆ ಕಾಂಗ್ರೆಸ್ ನಾಯಕರ ಹೆಸರನ್ನು ಇಡಲಾಗಿದೆ ಎಂದು ಕೂಡ ಹೇಳುತ್ತಾರೆ. ಕಾಂಗ್ರೆಸ್ ಯೋಜನೆಗಳನ್ನು ನೆನಪಿಸಿಕೊಂಡ ಸಿ.ಟಿ ರವಿ ಅವರಿಗೆ ಧನ್ಯವಾದಗಳು. ಆದರೆ ಸಿ.ಟಿ. ರವಿ ಅವರು ಸೇರಿದಂತೆ ಬಿಜೆಪಿ ನಾಯಕರಿಗೆ ಮಾಜಿ ಪ್ರಧಾನ ಮಂತ್ರಿ ದಿವಂಗತ ಇಂದಿರಾಗಾಂಧಿ ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಇಂದಿರಾ ಗಾಂಧಿ ಅವರು ‘ಉಳುವವನೇ ಒಡೆಯ’ ಎಂಬ ಯೋಜನೆ ತಂದರು. ಉಳುವವನೇ ಒಡೆಯ ಯೋಜನೆಯ ಫಲಾನುಭವಿಗಳಲ್ಲಿ ಬಿಜೆಪಿಯವರೂ ಇದ್ದಾರೆ. ಇದು ಇಂದಿರಾ ಗಾಂಧಿ ಅವರು ನೀಡಿದ ಕೊಡುಗೆ ಎಂದು ಹೇಳಿದರು. ಇದನ್ನೂ ಓದಿ: ರಾಷ್ಟ್ರಧ್ವಜದ ಧ್ವಜದ ಮೇಲೆ ಬಿಜೆಪಿ ಬಾವುಟ – ಕಾಂಗ್ರೆಸ್, ಟಿಎಂಸಿ ಪ್ರಶ್ನೆ

    Basanagowda Patil Yatnal

    ಬಿಜೆಪಿ ಎಂದರೆ ಬೆಲೆ ಏರಿಕೆ!: ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆ ಆಗಿದ್ದಾರೆ. ಆದರೆ ಅವರು ಎಂದಾದರೂ ಬೆಲೆ ಏರಿಕೆ ಬಗ್ಗೆ ಮಾತನಾಡಿದ್ದಾರಾ ಅಥವಾ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಜಿಎಸ್ ಟಿ ದುಡ್ಡು ಬಂದಿಲ್ಲದಿರುವ ಬಗ್ಗೆ ಧ್ವನಿ ಎತ್ತಿದ್ದಾರಾ? ಕೇಂದ್ರ ಸರ್ಕಾರದ ಕಳಪೆ ನಿರ್ವಹಣೆಯಿಂದ ಕೊರೋನಾ ಸಂದರ್ಭದಲ್ಲಿ ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಧ್ವನಿ ಎತ್ತಿದ್ದಾರಾ? ಅಲ್ಲದೆ ದೇಶಾದ್ಯಂತ ಈಗ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 100 ರೂಪಾಯಿಗಳ ಗಡಿ ದಾಟಿದೆ. ಅಡುಗೆ ಅನಿಲದ ಬೆಲೆ ಏರಿಕೆ ಆಗಿದ್ದು, ಬಿಜೆಪಿ ಎಂದರೆ ಬೆಲೆ ಏರಿಕೆ ಎನ್ನುವಂತಾಗಿದೆ. ಬಿಜೆಪಿ ನಾಯಕರು ಈ ವಿಷಯಗಳ ಬಗ್ಗೆ ಚರ್ಚೆ ಮಾಡಲಿ ಎಂದು ಶ್ರೀನಿವಾಸ್ ಬಿ.ವಿ. ತಾಕೀತು ಮಾಡಿದರು.

  • ಯುವ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರಾಗಿ ಭದ್ರಾವತಿಯ ಶ್ರೀನಿವಾಸ್ ಬಿವಿ ಆಯ್ಕೆ

    ಯುವ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರಾಗಿ ಭದ್ರಾವತಿಯ ಶ್ರೀನಿವಾಸ್ ಬಿವಿ ಆಯ್ಕೆ

    ನವದೆಹಲಿ: ಭಾರತ ಯುವ ಕಾಂಗ್ರೆಸ್ಸಿನ(ಐವೈಸಿ) ಹಂಗಾಮಿ ಅಧ್ಯಕ್ಷರಾಗಿ ಕರ್ನಾಟಕ ಮೂಲದ ಶ್ರೀನಿವಾಸ್ ಬಿ.ವಿ ಅವರನ್ನು ಆಯ್ಕೆ ಮಾಡಲಾಗಿದೆ.

    ಕರ್ನಾಟದ ಭದ್ರಾವತಿಯವರಾದ ಶ್ರೀನಿವಾಸ್.ಬಿ.ವಿ ಅವರು ಈ ಹಿಂದೆ ಅಖಿಲ ಭಾರತ ಯುವ ಕಾಂಗ್ರೆಸ್ ಘಟಕದ ಉಪಾಧ್ಯಕ್ಷರಾಗಿದ್ದ ಕಾರ್ಯನಿರ್ವಹಿಸಿದ್ದರು. ಆದರೆ ಈಗ ಅವರಿಗೆ ಸಂಘಟನೆಯ ಹಂಗಾಮಿ ಅಧ್ಯಕ್ಷರಾಗಿ ಬಡ್ತಿ ನೀಡಲಾಗಿದೆ.

    ಈ ಹಿಂದೆ ಕೇಶವ್ ಚಂದ್ ಯಾದವ್ ಆವರು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು. ಆದರೆ 2019ರ ಲೋಕಸಭಾ ಚುನಾವಣೆ ಸೋಲಿನ ಹೊಣೆ ಹೊತ್ತು ಅವರು ತಮ್ಮ ಹುದ್ದೆ ತ್ಯಜಿಸಿದ್ದರು. ಯಾದವ್ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಖಾಲಿಯಿದ್ದ ಸ್ಥಾನಕ್ಕೆ ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಲಾಗಿದೆ.

    ಈ ಬಗ್ಗೆ ಟ್ವೀಟ್ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಪ್ರಕಟಣೆ ಹೊರಡಿಸಿದ್ದಾರೆ. ಶ್ರೀನಿವಾಸ್ ಬಿ.ವಿ ಅವರನ್ನು ಅಖಿಲ ಭಾರತ ಯುವ ಕಾಂಗ್ರೆಸ್ ಘಟಕದ ಮಧ್ಯಂತರ ಅಧ್ಯಕ್ಷರನ್ನಾಗಿ ಎಐಸಿಸಿ ಅಧ್ಯಕ್ಷರು ನೇಮಕ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಹಾಗೆಯೇ ಐವೈಸಿ ಕೂಡ ಈ ಬಗ್ಗೆ ಟ್ವೀಟ್ ಮಾಡಿ ಶುಭಕೋರಿದೆ. ಅಖಿಲ ಭಾರತ ಯುವ ಕಾಂಗ್ರೆಸ್ ಘಟಕದ ಮಧ್ಯಂತರ ಅಧ್ಯಕ್ಷರನ್ನಾಗಿ ಆಯ್ಕೆಯಾಗಿರುವುದಕ್ಕೆ ನಮ್ಮ ಪ್ರೀತಿಯ ನಾಯಕ ಶ್ರೀನಿವಾಸ್ ಬಿ.ವಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ನಮ್ರತೆ, ಪ್ರೀತಿ, ಸ್ವೀಕಾರಿಸುವ ರೀತಿ ಹಾಗೂ ಧೈರ್ಯದಿಂದ ಮುನ್ನುಗುವ ಛಲ ಎಲ್ಲರನ್ನು ಪ್ರೇರೆಪಿಸುತ್ತದೆ. ಇದು ಹೀಗೆಯೇ ಮುಂದುವರಿಯಲಿ. ದೇವರು ಒಳ್ಳೆದು ಮಾಡಲಿ ಎಂದು ಬರೆದು ಟ್ವೀಟ್ ಮಾಡಿದೆ.

    ಈ ಹಿಂದೆ ಯುವ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ಶ್ರೀನಿವಾಸ್ ಅವರು, ಪಕ್ಷ ನೀಡಿದ ಹಲವು ಗುರುತರ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಗುಜರಾತ್, ಉತ್ತರಪ್ರದೇಶ, ತೆಲಂಗಾಣ ಉಸ್ತುವಾರಿಯನ್ನು ನಿರ್ವಹಿಸಿದ್ದರು. ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ರಾಹುಲ್ ಗಾಂಧಿ ಅವರ ಮೆಚ್ಚುಗೆಗೆ ಪಾತ್ರವಾಗಿದ್ದರು.

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರೇಮಿಗಳ ದಿನಾಚರಣೆ ದಿನಕ್ಕೆ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅಡ್ಡಿಪಡಿಸಿದಾಗ ಅವರ ಮುಖಕ್ಕೆ ಮಸಿ ಬಳಿಯುವ ಮೂಲಕ ಶ್ರೀನಿವಾಸ್ ಮುನ್ನೆಲೆಗೆ ಬಂದಿದ್ದರು. ಆದಾದ ಬಳಿಕ ಇವರನ್ನು ರಾಹುಲ್ ಗಾಂಧಿ ಅವರು ಯೂತ್ ಕಾಂಗ್ರೆಸ್ ಘಟಕಕ್ಕೆ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿದ್ದರು.