Tag: ಶ್ರೀಕೃಷ್ಣ

  • 2 ಕಿಲೋ ಚಿನ್ನ, ಮುಷ್ಠಿ ತುಂಬಾ ನಾಣ್ಯವಿಟ್ಟು ಶ್ರೀಕೃಷ್ಣನಿಗೆ ತುಲಾಭಾರ

    2 ಕಿಲೋ ಚಿನ್ನ, ಮುಷ್ಠಿ ತುಂಬಾ ನಾಣ್ಯವಿಟ್ಟು ಶ್ರೀಕೃಷ್ಣನಿಗೆ ತುಲಾಭಾರ

    ಉಡುಪಿ: ದೇವಾಲಯಗಳ ನಗರ ಉಡುಪಿ ಒಂದು ಕ್ಷಣ ದ್ವಾರಕೆಯಾಗಿ ಮಾರ್ಪಾಟಾಗಿತ್ತು. ಒಂದು ತಕ್ಕಡಿಯಲ್ಲಿ ಭಗವಾನ್ ಶ್ರೀಕೃಷ್ಣ, ಮತ್ತೊಂದು ಭಾಗದಲ್ಲಿ ಚಿನ್ನದ ಆಭರಣಗಳು, ನಾಣ್ಯಗಳು. ದ್ವಾಪರದಲ್ಲಿ ಮುರಾರಿಯ ತುಲಾಭಾರ ಎಷ್ಟು ಜನ ನೋಡಿದ್ದಾರೋ ಗೊತ್ತಿಲ್ಲ. ಕಲಿಯುಗದಲ್ಲಿ ಮಾತ್ರ ದೇವರ ತುಲಾಭಾರವನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡಿದ್ದಾರೆ.

    ದ್ವಾಪರ ಯುಗ ಹೇಗಿತ್ತೋ..? ದ್ವಾರಕೆಯ ನಗರ ಹೇಗಿತ್ತೋ ನೋಡಿದವರಿಲ್ಲ. ಪುರಾಣದ ಕಥೆಗಳಿಂದ ಆ ಕಾಲವನ್ನು ಇಮ್ಯಾಜಿನೇಶನ್ ಮಾಡಿಕೊಳ್ಳಬಹುದಷ್ಟೇ. ದ್ವಾರಕೆಯಲ್ಲಿ ಶ್ರೀಕೃಷ್ಣನಿಗೆ ಸತ್ಯಭಾಮೆ, ರುಕ್ಮಿಣಿ ಚಿನ್ನದ ಮತ್ತು ತುಳಸಿಯಲ್ಲಿ ತುಲಾಭಾರ ಮಾಡಿದ್ದರು. ಇದೀಗ ದೇವರಿಗೆ ಕಲಿಗಾಲದಲ್ಲಿ ಕೃಷ್ಣನಗರಿ ಉಡುಪಿಯಲ್ಲಿ ಮತ್ತೆ ತುಲಾಭಾರ ಸಂಪನ್ನಗೊಂಡಿದೆ.

    ಪರ್ಯಾಯ ಪಲಿಮಾರು ಸ್ವಾಮೀಜಿ ಪೂಜಾಧಿಕಾರ ಮುಗಿಯಲು ಎರಡು ವಾರ ಇರುವಾಗ ಈ ಸಂಪ್ರದಾಯ ನೆರವೇರಿಸಿದ್ದಾರೆ. ಸತ್ಯಭಾಮೆ ಕೃಷ್ಣನಿಗೆ ಚಿನ್ನದ ತುಲಾಭಾರ ಮಾಡಿಸಿದ್ದಳಂತೆ. ಎಷ್ಟು ಚಿನ್ನ ಇಟ್ಟರೂ ಕೃಷ್ಣ ಕೂತ ತಕ್ಕಡಿ ಮೇಲೆ ಏಳಲೇ ಇಲ್ವಂತೆ. ಆ ಸಂದರ್ಭ ರುಕ್ಮಿಣಿ ದೇವಿ ಒಂದು ತುಳಸಿ ದಳವನ್ನು ತಕ್ಕಡಿಗೆ ಹಾಕಿದ್ದರಿಂದ ತುಲಾಭಾರ ಆಗಿತ್ತು. ಕೃಷ್ಣ ಕೂತ ತಕ್ಕಡಿ ತುಳಸಿಯಿಟ್ಟಾಗ ತೂಗಿದೆ.

    ಉಡುಪಿಯಲ್ಲಿ ಚಿನ್ನ, ನಾಣ್ಯದ ಜೊತೆ ದೇವರಿಗೆ ಬಹಳ ಪ್ರಿಯವಾದ ಗೋಪಿ ಚಂದನದ ತುಂಡುಗಳನ್ನು ಇಟ್ಟು ತುಲಾಭಾರ ಮಾಡಲಾಯ್ತು. ರಥಬೀದಿಯಲ್ಲಿ ನಡೆದ ಕಾರ್ಯಕ್ರಮವನ್ನು ಸಾವಿರಾರು ಮಂದಿ ಕಣ್ತುಂಬಿಕೊಂಡರು. ದೇವರ ತುಲಾಭಾರ ನೋಡಿದ್ರೆ ಪುಣ್ಯಪ್ರಾಪ್ತಿ ಎಂಬ ನಂಬಿಕೆಯೂ ಇದೆ. ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಮಾತನಾಡಿ, ತುಲಾಭಾರ ಹರಕೆ ರೂಪದಲ್ಲಿ, ಸೇವೆಯ ರೂಪದಲ್ಲಿ ನಡೆಯುತ್ತದೆ. ಕೃಷ್ಣನಿಗೆ ಚಿನ್ನದ ಗರ್ಭಗುಡಿ ಸೇವೆಯ ಅರ್ಥದಲ್ಲಿ ಇದನ್ನು ಆಯೋಜಿಸಲಾಗಿದ್ದು ಭಗವದ್ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿದರು.

    ಪಲಿಮಾರು ಮಠದ ಕಾರ್ಯದರ್ಶಿ ಗಿರೀಶ್ ಆಚಾರ್ಯ ಮಾತನಾಡಿ, ಚಿನ್ನದ ಮೇಲಿನ ವ್ಯಾಮೋಹ ಕಡಿಮೆಯಾಗಬೇಕು. ದೇವರ ಮೇಲೆ ಭಕ್ತಿ ಹೆಚ್ಚಬೇಕೆಂದು ತುಲಾಭಾರ ಸೇವೆ ಹುಟ್ಟಿರಬೇಕು. ಭಗವಂತನಿಗಿಂತ ಶ್ರೇಷ್ಠ ಮತ್ತೊಂದಿಲ್ಲ ಎಂಬೂದು ಆಚರಣೆಯ ಉದ್ದೇಶ ಎಂದು ಹೇಳಿದರು.

    ಈಗಿನ ಪರ್ಯಾಯ ಪಲಿಮಾರು ಸ್ವಾಮೀಜಿ ಕೃಷ್ಣಮಠದ ಗರ್ಭಗುಡಿಗೆ ಚಿನ್ನದ ಹಾಸು ಹೊದೆಸಿದ್ದರು. ಸುಮಾರು ಮೂರುವರೆ ಕೋಟಿ ರುಪಾಯಿ ಮೌಲ್ಯದ ಚಿನ್ನದ ತಗಡು ಕಡಿಮೆಯಾಗಿತ್ತು. ಆ ಯೋಜನೆ ಸರಿ ತೂಗಿಸಲು ತುಲಾಭಾರ ನಡೆಸಿದ್ದು ಎರಡು ಕೆಜಿಯಷ್ಟು ಮೌಲ್ಯದ ನಾಣ್ಯ, ಚಿನ್ನದ ತುಳಸಿದಳ ಸಂಗ್ರಹವಾಗಿದೆ. ಮುಂದಿನ ಎರಡು ವಾರದಲ್ಲಿ ಮತ್ತಷ್ಟು ಕನಕ ಸಂಗ್ರಹವಾಗುವ ಸಾಧ್ಯತೆಯಿದೆ ಎಂದು ಪಲಿಮಾರು ಮಠ ಹೇಳಿದೆ.

  • ಬಿಯರ್ ಹಿಡಿದು ಕೃಷ್ಣನ ಹಾಡಿಗೆ ಟಿಕ್ ಟಾಕ್ – ಚಳಿ ಬಿಡಿಸಿದ ಜನ

    ಬಿಯರ್ ಹಿಡಿದು ಕೃಷ್ಣನ ಹಾಡಿಗೆ ಟಿಕ್ ಟಾಕ್ – ಚಳಿ ಬಿಡಿಸಿದ ಜನ

    ಉಡುಪಿ: ಗುರುವಾಯೂರಿನ ಶ್ರೀಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆಯ ಹಾಡನ್ನು ಬಿಯರ್ ಬಾಟಲಿ ಹಿಡ್ಕೊಂಡು ಟಿಕ್ ಟಾಕ್ ಮಾಡಿದ ಯುವಕರ ಚಳಿ ಬಿಡಿಸಲಾಗಿದೆ.

    ಮೊಸರು ಕುಡಿಕೆಯ ಉತ್ಸವದಲ್ಲಿ ಕುಣಿದ ಕೇರಳದ ಯುವತಿಯ ವೀಡಿಯೋ ಅಷ್ಟಮಿ ಸಂದರ್ಭ ಸಿಕ್ಕಾಪಟ್ಟೆ ವೈರಲಾಗಿತ್ತು. ಆ ನಂತರ ಬಂದ ವೈಷ್ಣವಿಯ ಫೋಟೋಗಳು ಭಾರೀ ಜನಮನ್ನಣೆ ಪಡೆದಿತ್ತು. ಫೇಸ್ ಬುಕ್, ವಾಟ್ಸಾಪ್ ನಲ್ಲಿ ಗುರುವಾಯೂರು ಕೃಷ್ಣೆ ಆವರಿಸಿದ್ದಳು.

    ಇದನ್ನು ಟಿಕ್ ಟಾಕ್ ಕಿಡಿಗೇಡಿಗಳು ಅದೇ ಹಾಡಿಗೆ ವೈಷ್ಣವಿಯನ್ನು ಹೋಲುತ್ತಾ ಕುಣಿದಿದ್ದರು. ಮೊಸರು ಕುಡಿಕೆಯ ಬದಲು ಬಿಯರ್ ಬಾಟಲಿ ನೇತು ಹಾಕಿದ್ದರು. ಚಿಕ್ಕಮಗಳೂರಿನ ಈ ಯುವಕರಿಗೆ ಉಡುಪಿ ಜಿಲ್ಲೆ ಕಾರ್ಕಳದ ಹಿಂದೂ ಸಂಘಟನೆಯವರು ಚಳಿ ಬಿಡಿಸಿದ್ದಾರೆ. ಕಾರ್ಕಳ ತಾಲೂಕು ಬಜರಂಗದಳದ ಕಾರ್ಯಕರ್ತರು ಟಿಕ್ ಟಾಕ್ ಶೂರರ ವಿಳಾಸ ಪತ್ತೆ ಮಾಡಿದ್ದಾರೆ. ಇದನ್ನು ಓದಿ:ಕೃಷ್ಣನ ಅವತಾರದಲ್ಲಿ ಯುವತಿ ವೈರಲ್ – ವಿಡಿಯೋದ ಅಸಲಿಯತ್ತು ಏನು?

    ದಕ್ಷಿಣ ಕ್ನನಡ ಜಿಲ್ಲೆಯ ಮೂಡುಬಿದಿರೆಯ ಹುಡುಗನೊಬ್ಬ ತಂಡದಲ್ಲಿದ್ದು, ಅವನಿಗೆ ಎಚ್ಚರಿಕೆ ನೀಡಿ, ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಇದರಿಂದ ಭಯಗೊಂಡ ಮೂರು ಟಿಕ್ ಟಾಕ್ ಕಲಾವಿದರು ಕ್ಷಮೆ ಕೇಳಿದ್ದಾರೆ. ವೀಡಿಯೋ ಮಾಡಿ ತಮ್ಮ ತಪ್ಪಾಗಿದೆ ಎಂದು ಕೇಳಿಕೊಂಡಿದ್ದಾರೆ.

    ಭಜರಂಗದಳದ ನಾಯಕ ಮಹೇಶ್ ಶೆಣೈ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಟಿಕ್ ಟಾಕ್ ಅವಾಂತರ ಮಿತಿ ಮೀರಿದೆ. ಅದರಲ್ಲೂ ದೇವರ ವಿಚಾರದಲ್ಲಿ ಟಿಕ್ ಟಾಕ್ ಮಾಡಿದ್ದು ನೋವಿನ ಸಂಗತಿ. ಕಲೆ, ಸಂಸ್ಕೃತಿ, ನಂಬಿಕೆ ವಿಚಾರವನ್ನು ವಿಡಂಬನೆ ಮಾಡುವುದು ಎಷ್ಟು ಸರಿ? ಯುವಕರನ್ನು ಫೋನ್  ಮೂಲಕ ಪತ್ತೆಹಚ್ಚಿ ಕ್ಷಮೆ ಕೇಳಿಸಿದ್ದೇವೆ. ಇನ್ನು ಈ ತರಹ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇಂತಹ ಘಟನೆ ಮುಂದುವರೆಯಬಾರದು ಎಂದು ಹೇಳಿದರು.

  • ಚೌತಿ ದಿನ ಚಂದ್ರನನ್ನು ನೋಡಿದ್ದಕ್ಕೆ ‘ಕಳ್ಳ’ನಾದ ಕೃಷ್ಣ

    ಚೌತಿ ದಿನ ಚಂದ್ರನನ್ನು ನೋಡಿದ್ದಕ್ಕೆ ‘ಕಳ್ಳ’ನಾದ ಕೃಷ್ಣ

    ಪ್ರತಿ ತಿಂಗಳು ಹಿಂದೂಗಳು ಕೃಷ್ಣ ಚತುರ್ಥಿಯಂದು ಸಂಕಷ್ಟ ಆಚರಿಸುತ್ತಾರೆ. ಅಂದು ಉಪವಾಸ ವ್ರತ ಆಚರಿಸುತ್ತಾರೆ. ಸಂಕಷ್ಟ ಹರ ಚತುರ್ಥಿಯ ವಿಶೇಷತೆಗಳೇನು ಎಂಬುದರ ಕುರಿತಾದ ಕಿರು ಮಾಹಿತಿ ಇಲ್ಲಿದೆ.

    ಬಹಳ ಹಿಂದೆ ಯಾದವ ಕುಲದಲ್ಲಿ ಸತ್ರಾರ್ಜಿತ ಎಂಬ ರಾಜನಿದ್ದನು. ಸತ್ರಾರ್ಜಿತ ನೂರು ವರ್ಷ ಸೂರ್ಯ ಉಪಾಸನೆ ಮಾಡಿ ಸೂರ್ಯದೇವನನ್ನು ಒಲಿಸಿಕೊಂಡಿದ್ದನು. ಸತ್ರಾರ್ಜಿತನ ಭಕ್ತಿಗೆ ಪ್ರಸನ್ನನಾದ ಸೂರ್ಯದೇವ ‘ಸ್ಯಮಂತಕ’ ಹೆಸರಿನ ದಿವ್ಯವಾದ ಮಣಿಯನ್ನು ನೀಡಿದ್ದನು. ಈ ಮಣಿ ಸೂರ್ಯನಂತೆ ಪ್ರಕಾಶಮಾನವಾಗಿ ಹೊಳೆಯುತಿತ್ತು. ಈ ಮಣಿಯಿಂದ ರಾಜನ ಖಜಾನೆಯಲ್ಲಿ ಬಂಗಾರ ಪ್ರಾಪ್ತಿಯಾಗುತಿತ್ತು. ಹೀಗಾಗಿ ಸತ್ರಾರ್ಜಿತ ರಾಜ ಪ್ರತಿದಿನ ಸಹಸ್ರಾರು ಜನರಿಗೆ ಭೋಜನದ ವ್ಯವಸ್ಥೆ ಕಲ್ಪಿಸುತ್ತಿದ್ದನು.

    ಕೆಲವು ವರ್ಷಗಳ ಬಳಿಕ ಸತ್ರಾರ್ಜಿತನ ಬಳಿ ಸ್ಯಮಂತಕ ಮಣಿ ಇರುವ ವಿಷಯ ಶ್ರೀಕೃಷ್ಣನಿಗೆ ತಿಳಿಯಿತು. ಶ್ರೀಕೃಷ್ಣ ಆ ಮಣಿ ತನಗೆ ನೀಡಬೇಕೆಂದು ಹೇಳಿ ಕಳುಹಿಸಿದ್ದನು. ಆದ್ರೆ ಸತ್ರಾರ್ಜಿತ ಮಣಿ ನೀಡಲು ಒಪ್ಪಿಗೆ ಸೂಚಿಸಲಿಲ್ಲ. ಸತ್ರಾರ್ಜಿತ ಮಣಿ ನೀಡಲು ಹಿಂದೇಟು ಹಾಕಿದ್ದರಿಂದ ಬಲವಂತದಿಂದ ಪಡೆಯುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬಂದು ಕೃಷ್ಣ ಸುಮ್ಮನಿದ್ದ. ಇದನ್ನೂ ಓದಿ: ಗಣೇಶ ಮೋದಕ ಪ್ರಿಯ ಯಾಕೆ?

    ಒಂದು ದಿನ ಸತ್ರಾರ್ಜಿತನ ಬಂಧು ಪ್ರಸೇನ ಈ ಮಣಿಯನ್ನು ಧರಿಸಿಕೊಂಡು ಬೇಟೆಗೆ ತೆರಳಿದ್ದ. ಈ ಸಂದರ್ಭದಲ್ಲಿ ಅರಣ್ಯದಲ್ಲಿ ಪ್ರಸೇನ ಮೇಲೆ ದಾಳಿ ಮಾಡಿದ ಸಿಂಹವೊಂದು ಆತನನ್ನು ಕೊಂದು ಆ ದಿವ್ಯಮಣಿಯನ್ನು ತೆಗೆದುಕೊಂಡು ಹೋಯಿತು. ಅದೇ ಸಿಂಹವನ್ನು ಅಡವಿಯ ರಾಜ ಜಾಂಬವಂತ ಕೊಂದು ಹಾಕಿದನು. ಸಿಂಹದ ಬಳಿಯಲ್ಲಿದ್ದ ಮಣಿಯನ್ನು ತೆಗೆದುಕೊಂಡು ತನ್ನ ಮಗಳು ಜಾಂಬವಂತೆಗೆ ನೀಡಿದನು. ಜಾಂಬವಂತನ ಮಗಳು ಸ್ಯಮಂತಕ ಮಣಿಯನ್ನು ಧರಿಸತೊಡಗಿದಳು.

    ಇತ್ತ ಬೇಟೆಗೆ ತೆರಳಿದ ಪ್ರಸೇನ ಹಿಂದಿರುಗಿ ಬರದನ್ನು ಕಂಡಾಗ ಸತ್ರಾರ್ಜಿತ ಕೃಷ್ಣನೇ ಸ್ಯಮಂತಕ ಮಣಿಯನ್ನು ಕದ್ದಿರಬಹುದು. ಕೃಷ್ಣನೇ ಸ್ಯಮಂತಕ ಮಣಿಗಾಗಿ ಪ್ರಸೇನನ್ನು ಅಪಹರಿಸಿರಬಹುದು ಎಂದು ಊಹಿಸತೊಡಗಿದೆ. ಸತ್ರಾರ್ಜಿತ ಮಾಡಿರುವ ಆರೋಪ ಶ್ರೀಕೃಷ್ಣನ ಗಮನಕ್ಕೂ ಬಂತು. ಹಿಂದೆ ನಾನು ಮಣಿಯನ್ನು ಕೇಳಿದ್ದು ಹೌದು. ಆದರೆ ಮಣಿ ನನ್ನ ಮೇಲೆ ಇಲ್ಲದೇ ಇರುವಾಗ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಈ ಮಣಿ ಎಲ್ಲಿದೆ ಎನ್ನುವುದು ತಿಳಿಯಲೇಬೇಕೆಂದು ಶಪಥಗೈದ. ತನ್ನ ಮೇಲಿನ ಆರೋಪಗಳು ಸುಳ್ಳು ಎಂದು ಸಾಬೀತುಪಡಿಸಲು ಶ್ರೀಕೃಷ್ಣ ಪ್ರಸೇನನ್ನು ಹುಡುಕಲು ಅರಣ್ಯಕ್ಕೆ ಹೊರಟನು. ಇದನ್ನೂ ಓದಿ:   ಗಣೇಶನಿಗಾಗಿ ಸಿಹಿ ಕಡುಬು ಮಾಡುವ ವಿಧಾನ

    ಹೀಗೆ ಅರಣ್ಯದಲ್ಲಿ ಪ್ರಾಣಿಗೆ ದಾಳಿಗೆ ತುತ್ತಾಗಿ ಸಾವನ್ನಪ್ಪಿರುವ ಪ್ರಸೇನ ಶವ ಶ್ರೀಕೃಷ್ಣನಿಗೆ ಸಿಗುತ್ತದೆ. ಸ್ಥಳದಲ್ಲಿ ಎಲ್ಲಿಯೂ ಸ್ಯಮಂತಕ ಮಣಿ ಸಿಗಲಿಲ್ಲ. ಅಲ್ಲಿಯೇ ಸಿಂಹದ ಹಜ್ಜೆಗಳು ಗುರುತು ಕಾಣುತ್ತವೆ. ಸಿಂಹದ ಹೆಜ್ಜೆಗಳನ್ನು ಶ್ರೀಕೃಷ್ಣ ಹಿಂಬಾಲಿಸುತ್ತಾ ಜಾಂಬವಂತನ ಗುಹೆ ತಲುಪಿದನು. ತನ್ನ ಗುಹೆಯಲ್ಲಿ ಅನಾಮಧೇಯ ವ್ಯಕ್ತಿ ಪ್ರವೇಶಿಸಿದ್ದನ್ನು ಕಂಡ ಜಾಂಬವಂತನ ಮಗಳು ಕೂಗಲು ಆರಂಭಿಸಿದಳು. ಈ ವೇಳೆ ಅಲ್ಲಿಗೆ ಜಾಂಬವಂತನು ಸಹ ಬಂದನು.

    ಮಗಳ ಧ್ವನಿ ಕೇಳಿ ಬಂದ ಜಾಂಬವಂತ ನೇರವಾಗಿ ಶ್ರೀಕೃಷ್ಣನ ಮೇಲೆ ಆಕ್ರಮಣ ನಡೆಸಿದನು. ಇಬ್ಬರ ಮಧ್ಯೆ 21 ದಿನಗಳ ಕಾಲ ಯುದ್ಧ ನಡೆಯಿತು. ಇತ್ತ ಇಬ್ಬರ ಯುದ್ಧದ ವಿಷಯ ತಿಳಿದು ದ್ವಾರಕದಲ್ಲಿ ಭಯ ಉಂಟಾಯಿತು. ಗೋಕುಲದಲ್ಲಿದ್ದ ನಂದ ಯಶೋಧೆಗೂ ಯುದ್ಧದ ಬಗ್ಗೆ ಮಾಹಿತಿ ತಿಳಿದಾಗ ಶ್ರೀಕೃಷ್ಣನ ಬಗ್ಗೆ ಚಿಂತಿಸತೊಡಗಿದರು. ಶ್ರೀಕೃಷ್ಣನ ಬಗ್ಗೆ ಚಿಂತಿತರಾದ ನಂದ ಯಶೋಧೆ ಸಂಕಷ್ಟಹರ ಗಣೇಶನ ಸಂಕಷ್ಟ ಚತುರ್ಥಿ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಮಾಡತೊಡಗಿದರು. ಗಣೇಶನ ಸಂಕಷ್ಟ ಚತುರ್ಥಿಯ ವ್ರತದ ಆಚರಣೆಯಿಂದಾಗಿ ಶ್ರೀಕೃಷ್ಣನಿಗೆ ವಿಜಯ ಲಭಿಸಿತು. ಯುದ್ಧದಲ್ಲಿ ಸೋತ ಜಾಂಬವಂತ ಸ್ಯಮಂತಕ ಮಣಿಯೊಂದಿಗೆ ಮಗಳು ಜಾಂಬವಂತೆಯನ್ನು ಶ್ರೀಕೃಷ್ಣನಿಗೆ ಅರ್ಪಿಸಿದನು. ಗೋಕುಲದಲ್ಲಿ ಆನಂದ ವ್ಯಾಪಿಸಿ ಶ್ರೀಕೃಷ್ಣನು ಜಾಂಬವಂತನ ಮಗಳನ್ನು ಮದುವೆಯಾದನು. ಇದನ್ನೂ ಓದಿ: ಗಣೇಶನಿಗೆ ಪ್ರಿಯವಾದ ಮೋದಕ ಮಾಡುವ ವಿಧಾನ

    ಶ್ರೀಕೃಷ್ಣನ ಮೇಲೆ ಸ್ಯಮಂತಕ ಮಣಿ ಕದ್ದ ಎಂಬ ಆರೋಪ ಬಂದಿದ್ದು ಯಾಕೆ ಎನ್ನುವುದಕ್ಕೂ ಪುರಾಣದಲ್ಲಿ ಕಥೆ ಸಿಗುತ್ತದೆ. ಹಿಂದೆ ಗಣೇಶ ಚತುರ್ಥಿಯ ದಿನ ಸಂಜೆ ಗೋವುಗಳ ಜೊತೆ ಅರಣ್ಯದಿಂದ ಮನೆಗೆ ಹಿಂದಿರುಗಿ ಬರುತ್ತಿದ್ದಾಗ, ದಾರಿಯಲ್ಲಿ ಜಾನುವಾರುಗಳ ಹೆಜ್ಜೆಯ ಗುರುತಿನಲ್ಲಿ ಮಳೆಯ ನೀರು ನಿಂತಿತ್ತು. ಆ ನೀರಿನಲ್ಲಿ ಶ್ರೀಕೃಷ್ಣ ಚಂದ್ರನನ್ನು ನೋಡಿದ್ದನು. ಗಣೇಶ ಚಂದ್ರನಿಗೆ ನೀಡಿದ ಶಾಪ ಶ್ರೀಕೃಷ್ಣನಿಗೆ ಕಳ್ಳತನದ ಆರೋಪವಾಗಿ ತಟ್ಟಿತ್ತು. ನಂದ ಯಶೋಧೆಯರ ಸಂಕಷ್ಟ ಚತುರ್ಥಿಯ ವ್ರತದಿಂದ ಶ್ರೀಕೃಷ್ಣ ಶಾಪದಿಂದ ಮುಕ್ತವಾಗಿದ್ದನು.

    ಜಾಂಬವಂತೆಯನ್ನು ಮದುವೆಯಾದ ಬಳಿಕ ಶ್ರೀಕೃಷ್ಣ ಸ್ಯಮಂತಕ ಮಣಿಯನ್ನು ಸತ್ರಾರ್ಜಿತನಿಗೆ ಹಿಂದಿರುಗಿಸಿದನು. ತನ್ನ ತಪ್ಪಿನ ಅರಿವಾಗಿ ಸತ್ರಾರ್ಜಿತ ಶ್ರೀಕೃಷ್ಣ ಬಳಿ ಕ್ಷಮೆ ಯಾಚಿಸಿ ತನ್ನ ಪುತ್ರಿ ಸತ್ಯಭಾಮೆಯನ್ನು ಅರ್ಪಿಸಿದನು. ಹೀಗಾಗಿ ಪ್ರತಿ ತಿಂಗಳ ಕೃಷ್ಣ ಪಕ್ಷದಂದು ಸಂಕಷ್ಟಿ ಚತುರ್ಥಿಯ ವ್ರತ ಮಾಡುತ್ತಾರೆ. ಈ ವ್ರತದ ಫಲವಾಗಿ ಸಂಕಷ್ಟಾಹರ್ಥ ಶ್ರೀಗಣೇಶನ ಕೃಪೆ ದೊರೆಯುತ್ತದೆ. ಭಕ್ತರ ಸಂಕಷ್ಟಗಳು ದೂರ ಆಗುವುದರ ಜೊತೆಗೆ ಅವರ ಮನಸ್ಸಿನ ಇಚ್ಛೆಗಳು ಪೂರ್ಣಗೊಳ್ಳುತ್ತವೆ ಎನ್ನುವ ನಂಬಿಕೆಯೂ ಇದೆ. ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಫಟಾಫಟ್ ಮಾಡಿ ಚೂರ್ಮಾ ಲಡ್ಡು

  • ಶೋಭಾ ಕರಂದ್ಲಾಜೆಯಿಂದ ಶ್ರೀಕೃಷ್ಣನಿಗೆ ಅವಮಾನ – ಮಧ್ವರಾಜ್ ಟಾಂಗ್

    ಶೋಭಾ ಕರಂದ್ಲಾಜೆಯಿಂದ ಶ್ರೀಕೃಷ್ಣನಿಗೆ ಅವಮಾನ – ಮಧ್ವರಾಜ್ ಟಾಂಗ್

    ಉಡುಪಿ: ಕೃಷ್ಣ ಮಠದಲ್ಲಿ ಪ್ರಧಾನಿಗೆ ಭದ್ರತೆ ಇಲ್ಲ ಎಂದರೆ ಶ್ರೀ ಕೃಷ್ಣನನ್ನೇ ಅವಮಾನಿಸಿದಂತೆ. ಉಡುಪಿ ಜಿಲ್ಲೆಯ ಜನತೆಗೂ ಮಾಡಿದ ಅವಮಾನ ಅಂತ ಸಚಿವ ಪ್ರಮೋದ್ ಮಧ್ವರಾಜ್ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.

    ಉಡುಪಿಯಲ್ಲಿ ಮತಯಾಚನೆ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಕಾನೂನು ಸುವ್ಯವಸ್ಥೆಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಈ ಬಗ್ಗೆ ಲೋಕಸಭಾ ಸದಸ್ಯರು ಹೆಮ್ಮೆಪಡಬೇಕು. ಅದು ಬಿಟ್ಟು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

    ಶ್ರೀ ಕೃಷ್ಣ ನಷ್ಟು ಶಕ್ತಿಶಾಲಿ ದೇವರು ಯಾರಿದ್ದಾರೆ. ಕೃಷ್ಣನ ಆಶೀರ್ವಾದದಿಂದ ನನಗೆ ಮೂರು ಬಾರಿ ಭಡ್ತಿ ಸಿಕ್ಕಿತು. ಪ್ರಧಾನಿ ಬಾರದೇ ಇರುವುದಕ್ಕೆ ಈ ರೀತಿ ಸಬೂಬು ನೀಡುವುದು ಸರಿಯಲ್ಲ ಎಂದು ಹೇಳಿದರು.

    ಈ ಮೊದಲು ಬಿಜೆಪಿಯವರು ಸಿದ್ದರಾಮಯ್ಯ ಮಠಕ್ಕೆ ಬಂದಿಲ್ಲ ಎಂದು ಬೊಬ್ಬೆ ಹಾಕುತ್ತಿದ್ದರು. ಆದರೆ ಪ್ರಧಾನ ಮಂತ್ರಿ ಬರುವುದಿಲ್ಲ ಎಂದು ಗೊತ್ತಾದ ಮೇಲೂ ನಾಟಕಮಾಡಿದ್ದು ಯಾಕೆ? ಪೂಜೆ ಸ್ಥಗಿತ ಮಾಡಿ ಭಕ್ತರನ್ನು ತಡೆದಿದ್ದೇಕೆ? ಪ್ರಧಾನಿ ಭೇಟಿ ನೀಡುತ್ತಾರೆ ಅಂತಾ ಸುಳ್ಳು ಸುದ್ದಿ ಹಬ್ಬಿಸಿದ್ದೇಕೆ ಎಂದು ಪ್ರಶ್ನೆ ಮಾಡಿದರು.

    ಶೋಭಾ ಕರಂದ್ಲಾಜೆ ಇಡೀ ರಾಜ್ಯ ಸುತ್ತಾಡುವುದರಿಂದ ತಮ್ಮದು ಯಾವ ಕ್ಷೇತ್ರ ಅಂತಾನೇ ಮರೆತುಹೋಗಿರಬಹುದು ಅಂತ ಸಚಿವರು ವ್ಯಂಗ್ಯವಾಡಿದರು.

    ಪ್ರಧಾನಿ ಮೋದಿಯವರಿಗೆ ಜೀವ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಮಠಕ್ಕೆ ಭೇಟಿ ನೀಡಿರಲಿಲ್ಲ ಎಂದು ನಿನ್ನೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದರು.

  • ಅಮೆರಿಕದಲ್ಲಿ ಮೊಳಗಿದ ಕೃಷ್ಣನಾದ: ನ್ಯೂಜೆರ್ಸಿಯ ಎಡಿಸನ್ ನಗರದಲ್ಲಿ ಶ್ರೀಕೃಷ್ಣನ ದೇವಸ್ಥಾನ ಸ್ಥಾಪನೆ

    ಅಮೆರಿಕದಲ್ಲಿ ಮೊಳಗಿದ ಕೃಷ್ಣನಾದ: ನ್ಯೂಜೆರ್ಸಿಯ ಎಡಿಸನ್ ನಗರದಲ್ಲಿ ಶ್ರೀಕೃಷ್ಣನ ದೇವಸ್ಥಾನ ಸ್ಥಾಪನೆ

    ಉಡುಪಿ: ದೂರದ ಅಮೆರಿಕದಲ್ಲಿ ಕೃಷ್ಣನಾದ ಮೊಳಗಿದೆ. ಡೋನಾಲ್ಡ್ ಟ್ರಂಪ್ ದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ಅವತಾರ ಪುರುಷನ ನಿತ್ಯ ದರುಶನ ಪಡೆಯಬೇಕೆಂಬ ಆಸೆ ನನಸಾಗಿದೆ.

    ಉಡುಪಿಯ ಪುತ್ತಿಗೆ ಮಠಾಧೀಶರು ನ್ಯೂಜೆರ್ಸಿಯ ಎಡಿಸನ್ ನಗರದಲ್ಲಿ ಶ್ರೀಕೃಷ್ಣನ ದೇವಸ್ಥಾನವನ್ನು ಸ್ಥಾಪಿಸಿದ್ದಾರೆ. ವಿಶೇಷ ಅಂದ್ರೆ 7 ಕೋಟಿ ರೂಪಾಯಿ ಕೊಟ್ಟು ಹಳೆಯ ಚರ್ಚ್ ಖರೀದಿಸಿ ಅದನ್ನು ಕೃಷ್ಣ ದೇವಸ್ಥಾನವನ್ನಾಗಿ ಪರಿವರ್ತಿಸಿದ್ದಾರೆ. ದೇಗುಲದಲ್ಲಿ ಸಾಲಿಗ್ರಾಮ ಕಲ್ಲಿನಿಂದ ಕೆತ್ತಲಾಗಿರುವ ಕೃಷ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀಮುಖ್ಯಪ್ರಾಣ ದೇವರ ಗುಡಿ, ರಾಘವೇಂದ್ರ ಗುರುಸಾರ್ವಭೌಮರ ವೃಂದಾವನವೂ ಇದೆ.

    ತಜ್ಞ ಶಿಲ್ಪಿಗಳ ಸುಮಾರು ಒಂದು ವರ್ಷದ ಕೈಚಳಕದಲ್ಲಿ ವಿಶೇಷ ಕೆತ್ತನೆಗಳುಳ್ಳ ಭವ್ಯ ದೇಗುಲ ನಿರ್ಮಾಣವಾಗಿದೆ. ಭಾಗವತದಲ್ಲಿ ವರ್ಣಿಸಿದ ಕೃಷ್ಣನ ಲೀಲೆಗಳನ್ನು ಕೆತ್ತಲಾಗಿದ್ದು, ಬೇಲೂರು-ಹಳೇಬೀಡಿನಲ್ಲಿರುವ ದೇವಸ್ಥಾನದಂತೆ ಆಕರ್ಷಿಸುತ್ತಿದೆ. ಒಂದು ವಾರಗಳ ಬ್ರಹ್ಮ ಕಲಶೋತ್ಸವ ನಡೆಯುತ್ತಿದ್ದು ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರ ಮಾರ್ಗದರ್ಶನದಲ್ಲಿ ಧಾರ್ಮಿಕ ಪ್ರಕ್ರಿಯೆಗಳು ನಡೆಯುತ್ತಿವೆ.