Tag: ಶ್ರಿಲಂಕಾ

  • 515 ಓವರ್ ಎಸೆದ ಬಳಿಕ ಸಣ್ಣ ತಪ್ಪು ಮಾಡಿದ ಭುವಿ

    515 ಓವರ್ ಎಸೆದ ಬಳಿಕ ಸಣ್ಣ ತಪ್ಪು ಮಾಡಿದ ಭುವಿ

    ಕೊಲಂಬೋ: ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯನ್ನು ಭಾರತ ಕೈವಶ ಮಾಡಿಕೊಂಡಿದೆ. ಈ ನಡುವೆ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಉಪನಾಯಕ ಭುವನೇಶ್ವರ್ ಕುಮಾರ್ 5 ವರ್ಷಗಳಲ್ಲಿ 515 ಓವರ್ ಎಸೆದ ನಂತರ ಇದೀಗ ಸಣ್ಣ ತಪ್ಪೊಂದನ್ನು ಮಾಡಿದ್ದಾರೆ.

    ಹೌದು ಬೌಲರ್ ಎಸೆಯುವ ನೋ ಬಾಲ್‍ನಿಂದಾಗಿ ಅದೆಷ್ಟೊ ಪಂದ್ಯಗಳ ಚಿತ್ರಣ ಬದಲಾಗಿದೆ. ಹಾಗಾಗಿ ಬೌಲರ್ ನೋ ಬಾಲ್ ಎಸೆಯದೇ ಇರಲು ಸಾಕಷ್ಟು ಶ್ರಮವಹಿಸುತ್ತಾರೆ. ಅದರಲ್ಲೂ ನಿಗದಿತ ಓವರ್‍ ಗಳ ಪಂದ್ಯದಲ್ಲಿ ನೋ ಬಾಲ್‍ಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಒಂದು ನೋ ಬಾಲ್ ಮಾಡಿದರೆ ಅದು ಎದುರಾಳಿ ತಂಡಕ್ಕೆ ವರದಾನ ಒಂದು ಫ್ರೀ ಹಿಟ್ ಅವಕಾಶ ದೊರೆಯುತ್ತದೆ. ಹಾಗಾಗಿ ಸಾಕಷ್ಟು ಬೌಲರ್‍ ಗಳು ನೋ ಬಾಲ್ ಎಸಯದೇ ಇರಲು ಪ್ರಯತ್ನಿಸುತ್ತಾರೆ. ಇದನ್ನೂ ಓದಿ: 8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ದಾಖಲೆ ನಿರ್ಮಿಸಿದ ದೀಪಕ್ ಚಹರ್

    ಭಾರತ ವೇಗಿ ಭುವನೇಶ್ವರ್ ಕುಮಾರ್ ಕೂಡ ನೋಬಾಲ್ ಬಗ್ಗೆ ಹೆಚ್ಚಿನ ಗಮನಹರಿಸಿದ್ದಾರೆ. ಇದಕ್ಕೆ ಉತ್ತಮ ನಿದರ್ಶನ ಅವರು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಬರೋಬ್ಬರಿ 5 ವರ್ಷಗಳ ಬಳಿಕ ಒಂದು ನೋ ಬಾಲ್ ಎಸೆದಿದ್ದಾರೆ.

    ಭುವಿ ಈ ಹಿಂದೆ 2015ರ ಅಕ್ಟೋಬರ್ ನಲ್ಲಿ ನಡೆದ ಪಂದ್ಯವೊಂದರಲ್ಲಿ ನೋ ಬಾಲ್ ಎಸೆದಿದ್ದರು. ಆ ಬಳಿಕ 5 ವರ್ಷಗಳು ಕಳೆದಿದೆ. ಈ ನಡುವೆ 3093 ಎಸೆತಗಳನ್ನು ಎಸೆದಿದ್ದಾರೆ. ಆದರೆ ಒಂದೇ ಒಂದು ನೋಬಾಲ್ ಕೂಡ ಮಾಡಿರಲಿಲ್ಲ. ಇದೀಗ ಶ್ರೀಲಂಕಾ ಸರಣಿಯಲ್ಲಿ ಒಂದು ನೋ ಬಾಲ್ ಮಾಡುವ ಮೂಲಕ 5 ವರ್ಷಗಳ ಬಳಿಕ ಗೆರೆದಾಟಿ ಬೌಲಿಂಗ್ ಮಾಡಿ ಎದುರಾಳಿ ತಂಡಕ್ಕೆ ಫ್ರೀ ಹಿಟ್ ಅವಕಾಶ ನೀಡಿದ್ದಾರೆ.

    ಇದನ್ನು ಗಮನಿಸುತ್ತಿದ್ದಂತೆ ಭುವಿ ತಮ್ಮ ಬೌಲಿಂಗ್ ಬಗ್ಗೆ ಎಷ್ಟು ಚಾಕಚಕ್ಯತೆ ಹೊಂದಿದ್ದಾರೆ ಎಂಬುದರ ಬಗ್ಗೆ ನೆಟ್ಟಿಗರು ಚರ್ಚೆಗಿಳಿದಿದ್ದಾರೆ. ಭುವನೇಶ್ವರ್ ನೋ ಬಾಲ್ ಎಸೆಯದೆ 5 ವರ್ಷಗಳಾಗಿತ್ತು ಇದೀಗ ಅ ತಪಸ್ಸು ಭಂಗವಾಗಿದೆ, ಕೊನೆಗೂ ನೋ ಬಾಲ್ ಎಸೆದಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ, ಭುವನೇಶ್ವರ್ ಕ್ರಿಕೆಟ್ ಬಗ್ಗೆ ಇರುವಂತಹ ಬದ್ಧತೆ ಇದರಿಂದ ತಿಳಿಯುತ್ತದೆ ಎಂದು ಅಭಿಮಾನಿಯೊಬ್ಬರು ಹೊಗಳಿದ್ದಾರೆ. ಹೀಗೆ ಅನೇಕ ಮೆಚ್ಚುಗೆಯ ಮಾತುಗಳು ಕ್ರಿಕೆಟ್‍ವಲಯದಲ್ಲಿ ಕೇಳಿ ಬಂದಿದೆ.

  • ಶ್ರೀಲಂಕಾಗೆ ಹಾರಿದ ಧವನ್ ನೇತೃತ್ವದ ಟೀಂ ಇಂಡಿಯಾ

    ಶ್ರೀಲಂಕಾಗೆ ಹಾರಿದ ಧವನ್ ನೇತೃತ್ವದ ಟೀಂ ಇಂಡಿಯಾ

    ಮುಂಬೈ: ಶ್ರೀಲಂಕಾ ವಿರುದ್ಧದ ನಿಗದಿತ ಓವರ್‍ ಗಳ ಪಂದ್ಯಾಟಕ್ಕಾಗಿ ಶಿಖರ್ ಧವನ್ ನೇತೃತ್ವದ 20 ಸದಸ್ಯರ ಭಾರತ ತಂಡ ಶ್ರೀಲಂಕಾಗೆ ವಿಮಾನದ ಮೂಲಕ ಪ್ರಯಾಣ ಬೆಳೆಸಿದೆ.

    ಈ ಕುರಿತು ಟ್ವಿಟ್ಟರ್‍ ನಲ್ಲಿ ಟ್ವೀಟ್ ಮಾಡುವ ಮೂಲಕ ಬಿಸಿಸಿಐ ಭಾರತ ತಂಡಕ್ಕೆ ಶುಭ ಹಾರೈಸಿದೆ. ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ತಂಡವನ್ನು ಶಿಖರ್ ಧವನ್ ಮುನ್ನಡೆಸುತ್ತಿದ್ದು, ಕನ್ನಡಿಗ ರಾಹುಲ್ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ಭಾರತ ತಂಡ ಮುಂಬೈನಲ್ಲಿ ಕ್ವಾರಂಟೈನ್ ಮುಗಿಸಿ ಇಂದು ಶ್ರೀಲಂಕಾಗೆ ಪ್ರವಾಸ ಕೈಗೊಂಡಿದೆ. ಇದನ್ನೂ ಓದಿ: ಐಪಿಎಲ್ ಬಳಿಕ ಯುಎಇನಲ್ಲಿ ಟಿ20 ವಿಶ್ವಕಪ್ ಫಿಕ್ಸ್?

    ಭಾರತ ಕ್ರಿಕೆಟ್ ತಂಡದ ಖಾಯಂ ನಾಯಕ ವಿರಾಟ್ ಕೊಹ್ಲಿ ಸಹಿತ ಹಿರಿಯ ಆಟಗಾರರು ಇಂಗ್ಲೆಂಡ್ ಪ್ರವಾಸದಲ್ಲಿರುವುದರಿಂದಾಗಿ ಹೊಸ ಪ್ರತಿಭೆಗಳನ್ನೊಳಗೊಂಡ ಭಾರತ ತಂಡ ಶ್ರೀಲಂಕಾಗೆ ತೆರಳಿದೆ. ಬಳಿಕ ಅಲ್ಲಿ ಕೆಲ ದಿನ ಕ್ವಾರಂಟೈನಲ್ಲಿದ್ದು ಅಭ್ಯಾಸ ಅರಂಭಿಸಲಿದೆ. ಇದನ್ನೂ ಓದಿ: ಲಂಕಾ ಪ್ರವಾಸಕ್ಕೆ ಶಿಖರ್ ಧವನ್ ನಾಯಕ-ತಂಡದಲ್ಲಿ ಮೂವರು ಕನ್ನಡಿಗರಿಗೆ ಸ್ಥಾನ 

    ಐಪಿಎಲ್‍ನಲ್ಲಿ ಅಬ್ಬರಿಸಿದ್ದ ಯುವ ಬ್ಯಾಟ್ಸ್‌ಮ್ಯಾನ್ ಗಳಾದ ದೇವದತ್ ಪಡಿಕ್ಕಲ್ ಮತ್ತು ಋತುರಾಜ್ ಗಾಯಕ್ವಾಡ್ ತಂಡ ಸೇರಿಕೊಂಡಿದ್ದಾರೆ. ಐಪಿಎಲ್‍ನಲ್ಲಿ ಅಬ್ಬರದ ಬ್ಯಾಟಿಂಗ್‍ಗೆ ಹೆಸರುವಾಸಿಯಾದ ಎಡಗೈ ಬ್ಯಾಟ್ಸ್‌ಮ್ಯಾನ್ ನಿತೀಶ್ ರಾಣಾ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. 2 ಜೋಡಿ ಸಹೋದರರಾದ ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ ಮತ್ತು ದೀಪಕ್ ಚಹರ್, ರಾಹುಲ್ ಚಹರ್, ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆ ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್‍ಗೆ ಪಾದಾರ್ಪಣೆ ಮಾಡಿದ್ದ ಎಡಗೈ ವೇಗದ ಬೌಲರ್ ಚೇತನ್ ಸಕಾರಿಯಾ ತಂಡಕ್ಕೆ ಆಯ್ಕೆಯಾಗಿದ್ದು, ಈ ಮೂಲಕ ಭಾರತ ತಂಡದ ಪರ ಆಡುವ ಅವಕಾಶ ಸಿಕ್ಕಂತಾಗಿದೆ. ಆಲ್‍ರೌಂಡರ್ ಕೃಷ್ಣಪ್ಪ ಗೌತಮ್, ಸ್ಪಿನ್ನರ್ ಕುಲದೀಪ್ ಯಾದವ್, ವರುಣ್ ಚಕ್ರವರ್ತಿ ಮತ್ತು ವೇಗಿ ನವದೀಪ್ ಸೈನಿ ಕೂಡ ತಂಡಕ್ಕೆ ಆಯ್ಕೆಯಾಗಿದ್ದಾರೆ.

    ಶ್ರೀಲಂಕಾ ವಿರುದ್ಧ ಭಾರತ ತಂಡ 3 ಏಕದಿನ ಮತ್ತು 3 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಕೊರೊನಾ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಪಂದ್ಯಗಳು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ. ಏಕದಿನ ಪಂದ್ಯಗಳು ಜುಲೈ 13, 16 ಮತ್ತು 18 ರಂದು ನಡೆಯಲಿದ್ದು, ಟಿ20 ಪಂದ್ಯಗಳು ಜುಲೈ 21, 23 ಮತ್ತು 25 ರಂದು ನಡೆಯಲಿದೆ.

    ಭಾರತ ತಂಡ
    ಶಿಖರ್ ಧವನ್ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಪೃಥ್ವಿ ಶಾ, ದೇವದತ್ತ್ ಪಡಿಕ್ಕಲ್, ಋತುರಾಜ್ ಗಾಯಕ್ವಡ್,ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ನಿತೀಶ್ ರಾಣಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಯಜುವೇಂದ್ರ ಚಹಲ್, ರಾಹುಲ್ ಚಹರ್, ದೀಪಕ್ ಚಹರ್, ಕೆ ಗೌತಮ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ನವದೀಪ್ ಸೈನಿ, ಚೇತನ್ ಸಕರಿಯಾ

    ನೆಟ್ ಬೌಲರ್
    ಅರ್ಷ್‍ದೀಪ್ ಸಿಂಗ್, ಸಾಯಿ ಕಿಶೋರ್, ಇಶಾನ್ ಪೊರೆಲ್, ಸಂದೀಪ್ ವಾರಿಯರ್, ಸಿಮಾರ್ಜೀತ್ ಸಿಂಗ್ ಆಯ್ಕೆಯಾಗಿದ್ದಾರೆ.