Tag: ಶ್ರಮದಾನ

  • ತಮ್ಮ ಸ್ವಂತ ಖರ್ಚಿನಲ್ಲಿ ಪಾರ್ಕ್ ನಿರ್ಮಿಸಿದ ಪೊಲೀಸರು

    ತಮ್ಮ ಸ್ವಂತ ಖರ್ಚಿನಲ್ಲಿ ಪಾರ್ಕ್ ನಿರ್ಮಿಸಿದ ಪೊಲೀಸರು

    – ಬಿಡುವಿನ ಸಮಯದಲ್ಲಿ ಪಾಕ್ ನಿರ್ಮಾಣಕ್ಕೆ ಶ್ರಮದಾನ

    ತುಮಕೂರು: ಪೊಲೀಸ್ ಎಂದರೆ ಕೇವಲ ಬಂದೋಬಸ್ತ್, ಕೊಲೆ, ದರೋಡೆ ಪ್ರಕರಣಗಳ ತನಿಖೆ ಈ ರೀತಿಯ ಕೆಲಸದಲ್ಲೇ ಜೀವನ ಕಳೆದು ಹೋಗುತ್ತೆ. ಆದರೆ ಈ ಎಲ್ಲಾ ಒತ್ತಡಗಳ ನಡುವೆ ತುಮಕೂರು ಜಿಲ್ಲೆಯ ಪೊಲೀಸರು ಸ್ವಲ್ಪ ಡಿಫರೆಂಟಾಗಿದ್ದಾರೆ. ಇಲ್ಲಿನ ಕುಣಿಗಲ್ ತಾಲೂಕಿನ ಅಮೃತ್ತೂರು ಠಾಣಾ ಆವರಣದಲ್ಲಿ ಸುಂದರವಾದ ಉದ್ಯಾನವನ ನಿರ್ಮಿಸಿ ಇತರರಿಗೆ ಮಾದರಿಯಾಗಿದ್ದಾರೆ.

    ಹೌದು, ಅಮೃತೂರು ಪೊಲೀಸ್ ಠಾಣೆಗೆ ಭೇಟಿ ಕೊಟ್ಟರೆ ಸೀಜಾದ ಬೈಕ್‍ಗಳು, ಅಪಘಾತವಾದ ಕಾರುಗಳ ಬದಲಾಗಿ ಹಚ್ಚ ಹಸಿರಿನ ವಾತಾವರಣ ನಮ್ಮ ಕಣ್ಣಮುಂದೆ ನಿಲ್ಲುತ್ತದೆ. ತಂಪು ತಂಗಾಳಿ ನಮ್ಮ ಮನ ಮುದಗೊಳಿಸುತ್ತದೆ. ಇಲ್ಲಿನ ಪೊಲೀಸರು ಸ್ವತಃ ತಾವೇ ಶ್ರಮದಾನದ ಮೂಲಕ ಮುದ್ದಾದ ಉದ್ಯಾನವನ ನಿರ್ಮಿಸಿಕೊಂಡು ತಮ್ಮ ಪರಿಸರ ಪ್ರೇಮ ತೋರಿದ್ದಾರೆ.

    ಪ್ರಸ್ತುತ ಕ್ಯಾತಸಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪಿಎಸ್‍ಐ ರಾಜು ಈ ಪಾರ್ಕ್ ನಿರ್ಮಾಣಕ್ಕೆ ಕಾರಣಿಕರ್ತರು. ರಾಜು ಅಮೃತ್ತೂರಲ್ಲಿ ಕಾರ್ಯನಿರ್ವಹಿಸುತಿದ್ದ ಸಂದರ್ಭದಲ್ಲಿ ಅವರ ಆಸಕ್ತಿ ಹಾಗೂ ಸಹೋದ್ಯೋಗಿಗಳ ಸಹಕಾರದಿಂದ ಸುಂದವಾದ ಪಾರ್ಕ್ ಕಂಗೊಳಿಸುತಿದೆ. ಈ ಠಾಣೆಯ ಅಧಿಕಾರಿಗಳು ಎಷ್ಟೇ ಒತ್ತಡ ಇದ್ದರೂ ತಮ್ಮ ಕರ್ತವ್ಯದ ನಡುವೆ ಶ್ರಮದಾನದ ಮೂಲಕ ಅತ್ಯಂತ ಸುಂದರವಾದ ಪಾರ್ಕ ಕಟ್ಟಿಕೊಂಡಿದ್ದಾರೆ. ಬಿಡುವಿನ ವೇಳೆ ಬಂದು ಶ್ರದ್ಧೆಯಿಂದ ಶ್ರಮದಾನ ಮಾಡಿ ತಮ್ಮ ಠಾಣೆಯ ಆವರಣ ಹಚ್ಚ ಹಸಿರಿನಂತೆ ಕಂಗೊಳಿಸುವಂತೆ ಮಾಡಿಕೊಂಡಿದ್ದಾರೆ.

    ಸುಮಾರು ಅರ್ಧ ಎಕರೆ ಭೂ ಪ್ರದೇಶದಲ್ಲಿ ಈ ಪಾರ್ಕ್ ನಿರ್ಮಾಣವಾಗಿದ್ದು, ಮಧ್ಯ ಕಲ್ಲಿನ ಮಂಟಪ, ವಿವಿಧ ಹೂವಿನ ಗಿಡಗಳು, ಅಲಂಕಾರಿಕ ಬಳ್ಳಿ, ನೆಲದ ಮೇಲೆ ಹುಲ್ಲಿನ ಹಾಸು, ಹಣ್ಣಿನ ಗಿಡಗಳು ಹೀಗೆ ಸ್ವಚ್ಚ ಸುಂದರವಾಗಿ ಉದ್ಯಾನವನ ಮೂಡಿಬಂದಿದೆ. ಸುತ್ತಲು ವಾಕಿಂಗ್ ಪಾಥ್ ನಿರ್ಮಾಣ ಮಾಡಲಾಗಿದೆ. ಅಮೃತೂರಿನ ಕೆಲ ಸಾರ್ವಜನಿಕರೂ ಕೂಡಾ ಈ ಪಾರ್ಕ್‍ಲ್ಲಿ ಬಂದು ಸುತ್ತಾಡಿ ವಿಶ್ರಾಂತಿ ಪಡೆಯುತ್ತಾರೆ. ಹಾಗೇಯೇ ಪೊಲೀಸರು ಕೂಡಾ ಹಚ್ಚಹಸಿರಿನಿಂದ ಕಂಗೊಳಿಸುವ ಈ ಪಾರ್ಕ್ ನಲ್ಲಿ ಕುಳಿತು ತಮ್ಮ ಒತ್ತಡ ಕಡಿಮೆ ಮಾಡಿಕೊಳ್ಳುತ್ತಾರೆ.

    ಈ ಪಾರ್ಕ್ ನಿರ್ಮಾಣಕ್ಕೆ ಬೇಕಾದ ಕೆಲ ಸಾಮಗ್ರಿಗಳನ್ನು ದಾನಿಗಳು ನೀಡಿದ್ದಾರೆ. ಇನ್ನೂ ಕೆಲವನ್ನು ಪೊಲೀಸರೇ ಸ್ವತಃ ತಮ್ಮ ಹಣ ವಿನಿಯೋಗಿಸಿ ಹಸಿರು ಕ್ರಾಂತಿ ಮಾಡಿದ್ದಾರೆ. ಪಿಎಸ್‍ಐ ರಾಜು ಕೇವಲ ಅಮೃತ್ತೂರು ಠಾಣೆ ಅಷ್ಟೆ ಅಲ್ಲಾ ಕೆ.ಬಿ ಕ್ರಾಸ್ ಠಾಣೆ ಎದುರಲ್ಲೂ ಉದ್ಯಾನವನ ನಿರ್ಮಿಸಿದ್ದಾರೆ. ಪ್ರತಿ ಭಾನುವಾರ ಪರೇಡ್ ಮುಗಿದ ಬಳಿಕ ಪಾರ್ಕ್ ನಿರ್ವಹಣೆ ಕೆಲಸ ಮಾಡಲಾಗುತ್ತಿದ್ದು, ಕಳೆ ಕೀಳುವುದು, ಎಲೆಗಳನ್ನು ಕಟ್ ಮಾಡಿ ಸುಂದರಗೊಳಿಸುತ್ತಾರೆ. ಒಟ್ಟಾರೆ ಖಾಕಿಗಳ ಕೈಚಳಕದಲ್ಲಿ ಕಂಗೊಳಿಸುತ್ತಿದ್ದ ಉದ್ಯಾನವನ ಎಲ್ಲರ ಆಕರ್ಷಣಿಯ ಸ್ಥಳವಾಗಿದೆ.

    ಪಿಎಸ್‍ಐ ರಾಜು ಅವರ ಈ ಹಸಿರು ಪ್ರೀತಿ ಎಲ್ಲರಿಗೂ ಮಾದರಿಯಾಗಿದೆ.

  • ಕೆರೆಯಲ್ಲಿ ಶ್ರಮದಾನ ಮಾಡಿದ ಹಾವೇರಿಯ ಜಿಲ್ಲಾಧಿಕಾರಿ

    ಕೆರೆಯಲ್ಲಿ ಶ್ರಮದಾನ ಮಾಡಿದ ಹಾವೇರಿಯ ಜಿಲ್ಲಾಧಿಕಾರಿ

    ಹಾವೇರಿ: ಜಿಲ್ಲಾಧಿಕಾರಿಗಳು ಅಂದ್ರೆ ಕಚೇರಿ ಕೆಲಸ ಮಾಡಿಕೊಂಡು ಅಧಿಕಾರಿಗಳ ಸಭೆ ನಡೆಸಿ ಕ್ರಮ ತೆಗೆದುಕೊಳ್ಳುವುದು ಕಾಮನ್. ಆದ್ರೆ ಹಾವೇರಿ ಜಿಲ್ಲಾಧಿಕಾರಿ ಡಾ.ಎಂ.ವ್ಹಿ.ವೆಂಕಟೇಶ್ ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಾವು ಹಾಗೂ ತಮ್ಮ ಸಿಬ್ಬಂದಿಯ ಜೊತೆ ಸೇರಿಕೊಂಡು ಶ್ರಮದಾನ ಮಾಡಿ, ಅವರ ಕುಂದು-ಕೊರತೆಗಳನ್ನ ಕೇಳಿದ್ದಾರೆ.

    ಹಾವೇರಿ ತಾಲೂಕಿನ ದೇವಿಹೊಸೂರು ಗ್ರಾಮದ ಕೆರೆಯಲ್ಲಿ ನಡೆಯುತ್ತಿರುವ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಕೆರೆಯಲ್ಲಿ ಹೂಳು ಎತ್ತಲಾಗುತ್ತಿತ್ತು. ಶ್ರಮದಾನದಲ್ಲಿ ಜಿಲ್ಲಾಧಿಕಾರಿಗಳು ಭಾಗವಾಹಿಸುವದರ ಜೊತೆ ಕಾರ್ಮಿಕರ ತೊಂದರೆಗಳನ್ನು ಆಲಿಸಿದರು.

    ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಪ್ರತಿಯೊಬ್ಬರ ಸಮಸ್ಯೆಗಳನ್ನು ಕೇಳಿದರು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸದ್ಯ ಪ್ರತಿ 15 ದಿನಕ್ಕೆ ವೇತನವನ್ನ ನೀಡಲಾಗುತ್ತದೆ. ಅದನ್ನ ಕಡಿಮೆ ಮಾಡಿ ಪ್ರತಿವಾರ ತಮ್ಮ ಖಾತೆಗೆ ಹಣಬರುವಂತೆ ಮಾಡಬೇಕು ಎಂದು ಕಾರ್ಮಿಕರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

    ಪ್ರಸ್ತಕ ವರ್ಷ ಬರಗಾಲ ಇರೋದ್ರಿಂದ ಬೇರೆ ಕಡೆ ಕೆಲಸ ಸಿಗುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ 100 ರಿಂದ 150 ದಿನಗಳ ಕಾಲ ಬಡಕೂಲಿಕಾರ್ಮಿಕರಿಗೆ ಉದ್ಯೋಗ ಸಿಗುತ್ತಿದೆ. ನಮ್ಮ ಜೊತೆಗೆ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಜೊತೆಗೆ ಆರೋಗ್ಯ ತಪಾಸಣೆ ಮಾಡಿಸಿದ್ರು. ನಮಗೆ ಬಹಳ ಸಂತೋಷವಾಗಿದೆ. ಅಲ್ಲದೆ ನಮ್ಮ ವೇತನವನ್ನ ವಾರಕ್ಕೆ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ಕೂಲಿ ಕಾರ್ಮಿಕೆ ಸರೋಜಮ್ಮ ಸುಣಗಾರ ಹೇಳಿದರು.