Tag: ಶೋಭಿತ

  • ಮಹಿಳೆಯಾಗಿ ಮಸೀದಿಗೆ ಹೋಗಿಲ್ಲ ಅಧಿಕಾರಿಯಾಗಿ ಹೋಗಿದ್ದೇನೆ: ತಹಶೀಲ್ದಾರ್ ಶೋಭಿತ

    ಮಹಿಳೆಯಾಗಿ ಮಸೀದಿಗೆ ಹೋಗಿಲ್ಲ ಅಧಿಕಾರಿಯಾಗಿ ಹೋಗಿದ್ದೇನೆ: ತಹಶೀಲ್ದಾರ್ ಶೋಭಿತ

    – ಮಸೀದಿಯಲ್ಲಿ ಇದ್ದ 10 ಜನರ ಮೇಲೆ ಕೇಸ್, ಮುಖಂಡರಿಗೆ ವಾರ್ನಿಂಗ್

    ಕೋಲಾರ: ಲಾಕ್‍ಡೌನ್ ನಡುವೆ ಮಸೀದಿಯಲ್ಲಿ ನಮಾಜ್ ಸಲ್ಲಿಸಲು ಹೋಗಿದ್ದ 10 ಮಂದಿಯನ್ನು ವಶಕ್ಕೆ ಪಡೆದು ಅವರ ಮೇಲೆ ಕೇಸ್ ದಾಖಲಿಸಲಾಗಿದೆ ಎಂದು ಕೋಲಾರ ತಹಶೀಲ್ದಾರ್ ಶೋಭಿತ ಅವರು ಹೇಳಿದ್ದಾರೆ.

    ಇಂದು ಈ ವಿಚಾರವಾಗಿ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಅವರು, ನನಗೆ ಸಾರ್ವಜನಿಕರೊಬ್ಬರು ಕರೆ ಮಾಡಿ ಮಸೀದಿಯಲ್ಲಿ ನಮಾಜ್ ಸಲ್ಲಿಸುತ್ತಿರುವ ಬಗ್ಗೆ ದೂರು ನೀಡಿದರು. ಆ ಸಮಯದಲ್ಲಿ ನಾನು ಕೂಡ ರೌಂಡ್ಸ್ ನಲ್ಲಿ ಇದ್ದೆ. ತಕ್ಷಣ ಸ್ಥಳಕ್ಕೆ ಹೋಗಿ ನೋಡಿದಾಗ ಸುಮಾರು 10 ಮಂದಿ ಮಸೀದಿಯೊಳಗೆ ನಮಾಜ್ ಮಾಡುತ್ತಿರುವುದು ಕಂಡು ಬಂತು ಎಂದು ಹೇಳಿದ್ದಾರೆ.

    ನಮ್ಮ ಕೋಲಾರ ಗ್ರೀನ್ ಝೋನ್ ಅಲ್ಲಿ ಇರುವ ಕಾರಣ ನಮ್ಮ ಜನರಿಗೆ ಸ್ವಲ್ಪ ಗಂಭೀರತೆ ಕಡಿಮೆಯಾಗಿದೆ. ಹೀಗಾಗಿ ಆ ಮಸೀದಿ ನಗರದ ಮಧ್ಯಭಾಗದಲ್ಲಿ ಇದ್ದು ಅದರ ಸುತ್ತಮುತ್ತಾ ಬಟ್ಟೆ ಅಂಗಡಿಯಂತಹ ಕೆಲ ಶಾಪ್‍ಗಳು ಇವೆ. ಇಲ್ಲಿನ ಕೆಲ ಯುವಕರು ರಜೆ ಇರುವ ಕಾರಣ ನಮಾಜ್ ಸಮಯದಲ್ಲಿ ಪ್ರಾರ್ಥನೆ ಸಲ್ಲಿಸಲು ಹೋಗಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಾಗ ಅವರನ್ನು ವಶಕ್ಕೆ ಪಡೆದು ಕೇಸ್ ದಾಖಲಿಸಿ, ಮಸೀದಿ ಮುಖಂಡರಿಗೂ ಎಚ್ಚರಿಕೆ ನೀಡಿದ್ದೇವೆ ಎಂದು ಶೋಭಿತ ತಿಳಿಸಿದರು.

    ಕೊರೊನಾ ತಡೆಯಲು ನಮ್ಮ ತಾಲೂಕಿನ ಎಲ್ಲ ಅಧಿಕಾರಿಗಳು ಕಷ್ಟಪಡುತ್ತಿದ್ದಾರೆ. ಬೆಳಗ್ಗೆ ಮತ್ತು ಸಂಜೆ ನಾನು ಕೂಡ ಪರಿಶೀಲನೆ ಹೋಗುತ್ತೇನೆ. ಅದರೂ ಜನರು ನಮಗೆ ತಿಳಿಯದ ಹಾಗೇ ಈ ರೀತಿ ಮಾಡುತ್ತಾರೆ. ನಾವು ಎಷ್ಟೇ ಹೇಳಿದರು ಅದೂ ಜನರ ಮನಸ್ಸಿನಲ್ಲಿ ಬರಬೇಕು. ಅವರನ್ನು ಅವರು ಮೊದಲು ರಕ್ಷಣೆ ಮಾಡಿಕೊಳ್ಳಬೇಕು. ನಾವು ಏನೇ ಹೇಳಿದರು ಜನರು ತಮಗೆ ತಾವೇ ತಿಳಿದುಕೊಳ್ಳಬೇಕು ಎಂದು ಶೋಭಿತ ಅಭಿಪ್ರಾಯ ವ್ಯಕ್ತಪಡಿಸಿದರು.

    ಇದೇ ವೇಳೆ ಮಹಿಳೆಯಾಗಿ ಮಸೀದಿಗೆ ಹೋಗಿದ್ದರ ಬಗ್ಗೆ ಮಾತನಾಡಿದ ಅವರು, ನಾನು ಮಹಿಳೆಯಾಗಿ ಮಸೀದಿಗೆ ಹೋಗಿಲ್ಲ. ಆದರೆ ಓರ್ವ ಅಧಿಕಾರಿಯಾಗಿ ನಾನು ಮಸೀದಿಯೊಳಗೆ ಹೋದೆ. ನನಗೆ ವೈಯಕ್ತಿಕವಾಗಿ ಯಾವುದೇ ಧರ್ಮದ ನಂಬಿಕೆಯನ್ನು ಘಾಸಿಗೊಳಿಸುವ ಉದ್ದೇಶವಿಲ್ಲ. ನನಗೆ ನಮ್ಮ ಜಿಲ್ಲೆ ಗ್ರೀನ್ ಝೋನ್ ಅಲ್ಲಿ ಇದೆ. ಅದು ಹಾಗೇ ಮುಂದುವರಿಯಬೇಕು ಅದು ನನ್ನ ಉದ್ದೇಶ. ಮಸೀದಿಯವರು ಮಹಿಳೆಯಾಗಿ ಒಳಗೆ ಹೋಗಿದಕ್ಕೆ ಪರವಾಗಿಲ್ಲ ಏನೂ ತೊಂದರೆಯಿಲ್ಲ ಎಂದು ಹೇಳಿದ್ದಾರೆ ಎಂದು ಶೋಭಿತ ತಿಳಿಸಿದ್ದಾರೆ.

    ಮಹಿಳೆಯರಿಗೆ ಮಸೀದಿಯೊಳಗೆ ನಿರ್ಬಂಧದ ನಡುವೆಯೂ ಮಸೀದಿಯೊಳಗೆ ತೆರಳಿದ್ದ ತಹಶೀಲ್ದಾರ್ ಶೋಭಿತ, ಲಾಕ್‍ಡೌನ್ ನಡುವೆಯೂ ನಿಯಮಗಳನ್ನು ಗಾಳಿಗೆ ತೂರಿ ಮಸೀದಿಯಲ್ಲಿ ನಮಾಜ್ ಮಾಡುತ್ತಿದ್ದ 10 ಜನರನ್ನು ವಶಕ್ಕೆ ಪಡೆದಿದ್ದಾರೆ. ಮಸೀದಿಗೆ ನುಗ್ಗಿದ ತಹಶೀಲ್ದಾರ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಜೊತೆಗೆ ಮಸೀದಿಯೊಳಗೆ ಕಾಲಿರಿಸಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

    ನಮಾಜ್ ಮಾಡುತ್ತಿರುವ ಮಾಹಿತಿ ಮೇರೆಗೆ ಕೋಲಾರ ನಗರದ ಮುನಿಸಿಪಾಲ್ ಆಸ್ಪತ್ರೆ ಮುಂಭಾಗದ ಮಸೀದಿಗೆ ನುಗ್ಗಿದ ಶೋಭಿತ ಅವರು, ನಿಮಗೆ ಲಾಕ್‍ಡೌನ್ ಸಮಯದಲ್ಲಿ ನಮಾಜ್ ಮಾಡಲು ಯಾರು ಹೇಳಿದ್ದು? ಈ ರೀತಿ ಮಾಡಬಾರದು ಎಂದು ನಿಮಗೆ ಗೊತ್ತಿಲ್ವಾ? ಇವರೆಲ್ಲರನ್ನೂ ಇಲ್ಲಿಯೇ ಕೂಡಿಹಾಕಿ. ಯಾರನ್ನೂ ಹೊರಗೆ ಬಿಡಬೇಡಿ ಎಂದು ಹೇಳಿ ಕಾನೂನು ಉಲ್ಲಂಘನೆ ಮಾಡಿದವರಿಗೆ ಸರಿಯಾದ ಪಾಠ ಕಲಿಸಿದ್ದರು.