Tag: ಶೀರೂರು ಮಠ

  • ಬಾಲ ಸನ್ಯಾಸತ್ವ ರಿಟ್ ಅರ್ಜಿ ವಜಾ – ಪಟಾಕಿ ಸಿಡಿಸಿ, ಸಿಹಿ ಹಂಚಿದ ಸೋದೆ ಮಠದ ಭಕ್ತರು

    ಬಾಲ ಸನ್ಯಾಸತ್ವ ರಿಟ್ ಅರ್ಜಿ ವಜಾ – ಪಟಾಕಿ ಸಿಡಿಸಿ, ಸಿಹಿ ಹಂಚಿದ ಸೋದೆ ಮಠದ ಭಕ್ತರು

    ಉಡುಪಿ: ಶೀರೂರು ಮಠಕ್ಕೆ ನೂತನ ಪೀಠಾಧಿಕಾರಿ ಆಯ್ಕೆ ವಿರುದ್ಧ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಕೋರ್ಟ್ ಆದೇಶ ಬಂದ ಹಿನ್ನೆಲೆಯಲ್ಲಿ ಶೀರೂರು ಮತ್ತು ಸೋದೆ ಮಠದ ಭಕ್ತರು ರಥಬೀದಿಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿದ್ದಾರೆ.

    ಅಷ್ಟಮಠಗಳಲ್ಲಿ ಒಂದಾದ ಶೀರೂರು ಮಠದ ದ್ವಂದ್ವ ಮಠವಾದ ಸೋದೆ ಮಠದ ಸ್ವಾಮೀಜಿ ಬಾಲವಟುವನ್ನು ಆಯ್ಕೆ ಮಾಡಿದ್ದಾರೆ. ಇದು ಸಂವಿಧಾನ ವಿರೋಧಿ ಚಟುಚಟಿಕೆ ಎಂದು ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು. ವೃಂದಾವನಸ್ಥ ಶೀರೂರು ಮಠಾಧೀಶ ಲಕ್ಷ್ಮೀವರತೀರ್ಥ ಶ್ರೀಪಾದರು ಸಹೋದರ ಲಾತವ್ಯ ಆಚಾರ್ಯ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಸೋದೆ ಮಠದ ನಡೆ ಮತ್ತು ವಾದವನ್ನು ಪುರಸ್ಕರಿಸಿದೆ. ಇದನ್ನೂ ಓದಿ: ಶಿರೂರು ಮಠದ ಪೀಠಾಧಿಪತಿಯಾಗಿ ಉಡುಪಿ ವಿದ್ಯೋದಯ ಶಾಲೆಯ ಅನಿರುದ್ಧ್ ಆಯ್ಕೆ

    ಅರ್ಜಿ ವಜಾವಾದ ಹಿನ್ನೆಲೆಯಲ್ಲಿ ಉಡುಪಿ ರಥಬೀದಿಯ ಶಿರೂರು ಮಠದ ಮುಂಭಾಗದಲ್ಲಿ ಮಠದ ಭಕ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಸೋದೆ ಮಠಾಧೀಶರಿಗೆ ಜೈಕಾರ ಕೂಗಿದರು. ಸೋದೆ ಮಠದ ಪರವಾಗಿ ರತ್ನಕುಮಾರ್ ಮಾತನಾಡಿ, ಕಳೆದ ಮೇ ತಿಂಗಳಲ್ಲಿ ಸೋದೆ ಸ್ವಾಮೀಜಿಯವರು ಶೀರೂರು ಮಠಕ್ಕೆ ಸನ್ಯಾಸತ್ವ ದೀಕ್ಷೆಯನ್ನು ಕೊಟ್ಟಿದ್ದರು. ವೇದ ವರ್ಧನ ತೀರ್ಥ ಸ್ವಾಮೀಜಿ ಎಂದು ನಾಮಕರಣ ಮಾಡಿ ಪಟ್ಟಾಭಿಷೇಕ ಮಾಡಿದ್ದರು. ದಾಖಲಾದ ರಿಟ್ ಅರ್ಜಿ ವಜಾ ಆಗಿದೆ. ಬಾಲ ಸನ್ಯಾಸ ಮತ್ತು ಸೋದೆ ಸ್ವಾಮೀಜಿ ಕೊಟ್ಟ ಸನ್ಯಾಸತ್ವವನ್ನು ಹೈಕೋರ್ಟ್ ಎತ್ತಿಹಿಡಿದಿದೆ ಎಂದರು.

  • ಶೀರೂರು ಮಠಕ್ಕೆ ನಾಳೆ ನೂತನ ಪೀಠಾಧಿಪತಿ ಘೋಷಣೆ- ಪೂರ್ವಾಶ್ರಮ ಸಹೋದರರ ಆಕ್ಷೇಪ

    ಶೀರೂರು ಮಠಕ್ಕೆ ನಾಳೆ ನೂತನ ಪೀಠಾಧಿಪತಿ ಘೋಷಣೆ- ಪೂರ್ವಾಶ್ರಮ ಸಹೋದರರ ಆಕ್ಷೇಪ

    ಉಡುಪಿ: ಸೋದೆ ಮಠಾಧೀಶರಿಂದ ಬುಧವಾರ ಶೀರೂರು ಮಠಕ್ಕೆ ನೂತನ ಪೀಠಾಧಿಪತಿ ಘೋಷಣೆ ಆಗಲಿದೆ. ನೂತನ ಪೀಠಾಧಿಪತಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ, ವೃಂದಾವನಸ್ಥ ಲಕ್ಷ್ಮಿವರ ತೀರ್ಥ ಶ್ರೀಗಳ ಸಹೋದರರಿಂದ ಆಕ್ಷೇಪ ವ್ಯಕ್ತವಾಗಿದೆ.

    ಲಕ್ಷ್ಮೀವರತೀರ್ಥ ಸ್ವಾಮೀಜಿ 2018ರ ಜುಲೈ 19 ರಂದು ಸಂಶಯಾಸ್ಪದ ರೀತಿಯಲ್ಲಿ ನಿಧನರಾಗಿದ್ದರು. ಆನಂತರ ಪೀಠ ಖಾಲಿಯಿತ್ತು. ದ್ವಂದ್ವ ಮಠವಾಗಿರುವ ಸೋದೆ ಮಠ ಶಿರೂರು ಮಠದ ನಿರ್ವಹಣೆ ಮಾಡುತ್ತಿದ್ದು, ಮಠದ ವ್ಯವಹಾರ, ಆಸ್ತಿಪಾಸ್ತಿ, ತೆರಿಗೆ ನಿರ್ವಹಣೆಯಲ್ಲಿ ಪಾರದರ್ಶಕತೆ ಇಲ್ಲ. ಈ ಬಗ್ಗೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ ಎಂದು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಹೋದರ ಲಾತವ್ಯ ಆಚಾರ್ಯ ಹೇಳಿದ್ದಾರೆ.

    ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ಪೀಠಾಧಿಪತಿ ನೇಮಕ ಸರಿಯಲ್ಲ. ಅದರಲ್ಲೂ ಎಳೆಯ ವಯಸ್ಸಿನ ವಟುವನ್ನು ನಾಳೆ ಪೀಠಕ್ಕೆ ಘೋಷಣೆ ಮಾಡುತ್ತಿದ್ದಾರೆ. ಕನಿಷ್ಠ ಹತ್ತು ವರ್ಷದ ವೇದ ಅಧ್ಯಯನ ಮಾಡಿದವರನ್ನು ಪೀಠಾಧಿಪತಿ ಮಾಡಬೇಕು. ನೂತನ ಪೀಠಾಧಿಪತಿ ನೇಮಕಕ್ಕೆ ನಮ್ಮ ಸಮ್ಮತಿ ಇಲ್ಲ. ಈ ಬಗ್ಗೆ ಅಷ್ಟ ಮಠಾಧೀಶರ ಗಮನಕ್ಕೂ ತಂದಿದ್ದೇವೆ ಎಂದರು.

    ಶೀರೂರು ಶ್ರೀ ನಿಧನ ನಂತರ ಅನೇಕ ಅಪವಾದ ಬಂದವು. ಆಸ್ತಿ ವಿಚಾರದಲ್ಲಿ ವ್ಯವಹಾರ ಸರಿಯಿಲ್ಲ. ಪಾರದರ್ಶಕದ ಕೊರತೆ ಕಂಡುಬಂದಿದೆ. ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ. ಮೊಕದ್ದಮೆ ಜಾರಿಯಲ್ಲಿದೆ. 17 ವರ್ಷದ ಹುಡುಗನನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡುವುದು ಸರಿಯಲ್ಲ. 10 ವರ್ಷ ಯೋಗ್ಯ ವಿದ್ವತ್ ಬೇಕಿತ್ತು. ಸೋದೆ ಮಠದ ವ್ಯವಹಾರ ನಡೆಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

    ಮತ್ತೋರ್ವ ಸಹೋದರ ವಾದಿರಾಜ ಆಚಾರ್ಯ ಮಾತನಾಡಿ, ದೊಡ್ಡ ಹುದ್ದೆ ಸ್ವೀಕರಿಸುವಾಗ ಜ್ಞಾನ ಪರಿಪೂರ್ಣ ಆಗಿರಬೇಕು. ಒಂದು ಕಾಲದಲ್ಲಿ ಬಾಲ ಸನ್ಯಾಸ ನಡೆದಿದೆ. ಈಗ ಒಪ್ಪಲು ತಯಾರಿಲ್ಲ. ಮೂರು ವರ್ಷದ ಹಿಂದೆ ಎಲ್ಲಾ ಪೀಠಾಧಿಪತಿಗಳ ಮಾತು ಕತೆಯಾಗಿತ್ತು. ದಾವೆ ಇರುವಾಗ ಪೀಠಾಧಿಪತಿ ನೇಮಕ ಸರಿಯಲ್ಲ ಎಂದರು. ಶೀರೂರು ಸ್ವಾಮೀಜಿ ವೃಂದಾವನಸ್ಥರಾಗಿ ಎರಡು ತಿಂಗಳೊಳಗೆ ನೂತನ ಪೀಠಾಧಿಪತಿ ನೇಮಕವಾಗಬೇಕಿತ್ತು. ಒಂದು ಪರ್ಯಾಯ ದಾಟಿ ಹೋಗಿದೆ. ಯತಿಯಿಲ್ಲದೆ ಎರಡೂವರೆ ವರ್ಷ ಕಳೆದು ಹೋದದ್ದು ಇತಿಹಾಸದಲ್ಲೇ ಇದೇ ಮೊದಲು ಎಂದರು.

  • ಉತ್ತರಾಯಣ ನಂತರ ಶೀರೂರು ಮಠಕ್ಕೆ ಉತ್ತರಾಧಿಕಾರಿ: ವಿಶ್ವವಲ್ಲಭ ಸ್ವಾಮೀಜಿ ಘೋಷಣೆ

    ಉತ್ತರಾಯಣ ನಂತರ ಶೀರೂರು ಮಠಕ್ಕೆ ಉತ್ತರಾಧಿಕಾರಿ: ವಿಶ್ವವಲ್ಲಭ ಸ್ವಾಮೀಜಿ ಘೋಷಣೆ

    ಉಡುಪಿ: ಜಿಲ್ಲೆಯ ಶಿರೂರು ಮಠಕ್ಕೆ ಉತ್ತರಾಯಣ ನಂತರ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಘೋಷಣೆ ಮಾಡಿದ್ದಾರೆ.

    ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಶಿರೂರು ಮಠಕ್ಕೆ ಉತ್ತರಾಧಿಕಾರಿ ಯಾರು ಎಂಬ ನಿರೀಕ್ಷೆ ಎಲ್ಲರಲ್ಲಿತ್ತು. ಉತ್ತರಾಧಿಕಾರಿ ಉತ್ತರಾಯಣ ನಂತರ ಆಗಲಿದೆ. ಯೋಗ್ಯ ವಟುವನ್ನು ಆಯ್ಕೆ ಮಾಡಲಾಗಿದೆ. ಆ ವಟುವಿಗೆ ಈಗ ತರಬೇತಿ ನಡೆಯುತ್ತಿದೆ. ಮುಂದಿನ ವರ್ಷದ ಉತ್ತರಾಯಣದಲ್ಲಿ ಅವರಿಗೆ ಪಟ್ಟಾಭಿಷೇಕ ನಡೆಯಲಿದೆ ಎಂದರು.

    ಶಿರೂರು ಮಠದ ಭಕ್ತರ ಸಹಕಾರದಿಂದ, ಅಷ್ಟ ಮಠದ ಹಿರಿಯ ಯತಿಗಳ ಸಹಕಾರ, ಪ್ರೋತ್ಸಾಹದಿಂದ ಶೀರೂರು ಮಠ ಉತ್ತಮ ಸ್ಥಿತಿಯಲ್ಲಿ ಮುನ್ನಡೆಯಬೇಕು ಎಂಬೂದು ದೇವರಲ್ಲಿ ಪ್ರಾರ್ಥನೆ. ಉತ್ತರಾಧಿಕಾರಿ ಯಾರು ಎಂದು ಮುಂದಿನ ದಿನಗಳಲ್ಲಿ ಘೋಷಣೆ ಮಾಡುತ್ತೇನೆ. ಈಗಲೇ ಘೋಷಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

    ಲಕ್ಷ್ಮೀವರ ತೀರ್ಥರ ನಿಧನಾ ನಂತರ ತೆರವಾಗಿದ್ದ ಪೀಠ, ಜುಲೈ 19, 2018ರಿಂದ ಖಾಲಿಯಾಗಿತ್ತು. ಶೀರೂರು ಮಠದ ಆರ್ಥಿಕ ಸಂಕಷ್ಟಗಳಿಗೂ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಮಠದ ತೆರಿಗೆ ಬಾಕಿ, ಕಟ್ಟಡ ವಿವಾದ ಇತ್ಯರ್ಥ ಆಗುವ ಭರವಸೆ ಇದೆ ಎಂದು ಸೋದೆ ಮಠಾಧೀಶ ವಿಶ್ವವಲ್ಲಭ ತೀರ್ಥರು ಹೇಳಿದ್ದಾರೆ.

  • ಶೀರೂರು ಮಠದ ಜಮೀನಿನಲ್ಲಿ ಸೋದೆ ಮಠದ ಜೆಸಿಬಿ ಘರ್ಜನೆ

    ಶೀರೂರು ಮಠದ ಜಮೀನಿನಲ್ಲಿ ಸೋದೆ ಮಠದ ಜೆಸಿಬಿ ಘರ್ಜನೆ

    – ಪೂರ್ವಾಶ್ರಮದ ಸಹೋದರರ ಆಕ್ರೋಶ

    ಉಡುಪಿ: ಅಷ್ಟಮಠಗಳಲ್ಲಿ ಒಂದಾಗಿರುವ ಶಿರೂರು ಮಠಕ್ಕೆ ಒಳಪಟ್ಟ ಜಮೀನಿಗೆ ಸೋದೆ ಮಠದವರು ಜೆಸಿಬಿ ನುಗ್ಗಿಸಿದ್ದಾರೆ. ಏಕಾಏಕಿ ಜೆಸಿಬಿ ನುಗ್ಗಿಸಿ ಮರಗಳನ್ನು ಉರುಳಿಸಿರುವ ವಿರುದ್ಧ ಶೀರೂರು ಸ್ವಾಮೀಜಿಯ ಪೂರ್ವಾಶ್ರಮದ ಸಹೋದರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಎರಡು ಎಕರೆ ಜಮೀನಿನಲ್ಲಿ ಸೋದೆ ಮಠ ಲೇಔಟ್ ಮಾಡಲು ಮುಂದಾಗಿದೆ ಎಂಬೂದು ಅವರು ಆರೋಪ. ಶೀರೂರು ಸ್ವಾಮೀಜಿ ಮೃತರಾಗಿ ಎರಡು ವರ್ಷ ಕಳೆದಿದೆ. ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಕವಾಗದೇ ಸೋದೆ ಮಠ ಶಿರೂರು ಮಠದ ಆಸ್ತಿಯಲ್ಲಿ ಕೈಯಾಡಿಸಬಾರದು. ಶಿರೂರು ಮಠದ ಜಮೀನಿನಲ್ಲಿ ಯಾವುದೇ ಕಟ್ಟಡ ನಿರ್ಮಾಣ ಅಥವಾ ಸ್ವಚ್ಛತಾ ಕಾರ್ಯ ನಡೆಸಬಾರದು ಎಂದು ಪೂರ್ವಾಶ್ರಮದವರು ತಾಕೀತು ಮಾಡಿದ್ದಾರೆ.

    ಇಷ್ಟಾಗುತ್ತಲೇ ಮಾಧ್ಯಮಗಳ ಕ್ಯಾಮೆರಾಗಳು ಸ್ಥಳಕ್ಕಾಗಮಿಸಿದ್ದನ್ನು ಕಂಡು ಜೆಸಿಬಿ ತನ್ನ ಕೆಲಸ ನಿಲ್ಲಿಸಿದೆ. ಗಿಡಗಂಟಿಗಳ ಸ್ಚಚ್ಛತಾ ಕಾರ್ಯ ಮಾಡಲು ಜೆಸಿಬಿ ಕರೆಸಿರುವುದಾಗಿ ಸೋದೆ ಮಠ ಸ್ಪಷ್ಟಪಡಿಸಿದೆ. ಶಿರೂರು ಮಠದ ಲಕ್ಷ್ಮೀವರತೀರ್ಥರು ಸಂಶಯಾಸ್ಪದ ಸಾವನ್ನಪ್ಪಿ ಒಂದು ಮುಕ್ಕಾಲು ವರ್ಷ ಕಳೆಯಿತು. ಇನ್ನು ಕೂಡ ಶೀರೂರು ಮಠದ ಉತ್ತರಾಧಿಕಾರಿ ಆಯ್ಕೆ ನಡೆದಿಲ್ಲ. ದ್ವಂದ್ವ ಸೋದೆ ಮಠದವರೇ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

    ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರರಿಗೆ ದೂರು ನೀಡಿದ್ದು, ಮಠದ ವಿಚಾರ ಆಗಿರುವುದರಿಂದ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಎರಡು ಮಠದವರು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಅಧಿಕಾರಿಗಳು ಹೇಳಿದ್ದಾರೆಂದು ಲಾತವ್ಯ ಆಚಾರ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿದರು.