Tag: ಶಾಹೀನ್ ಬಾಗ್

  • ಇದು ಶಾಹೀನ್ ಬಾಗ್ ಅಲ್ಲ, ರೈತರ ಆಂದೋಲನ: ರಾಕೇಶ್ ಟಿಕಾಯತ್

    ಇದು ಶಾಹೀನ್ ಬಾಗ್ ಅಲ್ಲ, ರೈತರ ಆಂದೋಲನ: ರಾಕೇಶ್ ಟಿಕಾಯತ್

    – ಕರ್ಫ್ಯೂ, ಲಾಕ್‍ಡೌನ್ ಬಂದ್ರೂ ಪ್ರತಿಭಟನೆ ನಿಲ್ಲಲ್ಲ

    ನವದೆಹಲಿ: ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಕರ್ಫ್ಯೂ, ಲಾಕ್‍ಡೌನ್ ತಂದರೂ ರೈತರ ಪ್ರತಿಭಟನೆ ಮುಂದುವರಿಯಲಿದೆ. ಇದು ಶಾಹೀನ್ ಬಾಗ್ ಅಲ್ಲ, ರೈತರ ಆಂದೋಲನ ಎಂದು ಕೇಂದ್ರ ಸರ್ಕಾರಕ್ಕೆ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಸಂದೇಶ ರವಾನಿಸಿದ್ದಾರೆ.

    ಸಹಾರನುಪುರದಲ್ಲಿ ರೈತರನ್ನ ಉದ್ದೇಶಿಸಿ ಮಾತನಾಡಿದ ರಾಕೇಶ್ ಟಿಕಾಯತ್, ದೇಶದಲ್ಲಿ ರೈತರ ಆಂದೋಲನ ನಿರಂತರವಾಗಿರಲಿದೆ. ನವೆಂಬರ್-ಡಿಸೆಂಬರ್ ವರೆಗೂ ಧರಣಿ ನಡೆಯಲಿದೆ ಎಂದು ತಿಳಿಸಿದರು. ಕೊರೊನಾ ಹೆಸರಿನಲ್ಲಿ ರೈತರನ್ನ ಹೆದರಿಸೋದನ್ನ ನಿಲ್ಲಿಸಿ. ಕರ್ಫ್ಯೂ, ಲಾಕ್‍ಡೌನ್ ಹೆಸರಿನ ಮೂಲಕ ರೈತರ ಆಂದೋಲನವನ್ನ ವಿಫಲಗೊಳಿಸುವ ವ್ಯರ್ಥ ಪ್ರಯತ್ನಕ್ಕೆ ಮುಂದಾಗಬೇಡಿ ಎಂದು ಆಕ್ರೋಶ ಹೊರ ಹಾಕಿದರು.

    ಇದೇ ವೇಳೆ ಸಹರಾನಪುರದ ಹುತಾತ್ಮ ಭಗತ್ ಸಿಂಗ್ ಅವರ ಸಂಬಂಧಿ ಕಿರಣ್‍ಜಿತ್ ಸಿಂಗ್ ಪುತ್ರಿಯ ಮದುವೆ ಸಮಾರಂಭದಲ್ಲಿ ಭಾಗಿಯಾದರು. ಅಲ್ಲಿಂದ ನೇರವಾಗಿ ಹಿಮಾಚಲ ಪ್ರದೇಶಕ್ಕೆ ತೆರಳಿ ರೈತರನ್ನ ಭೇಟಿಯಾಗಲಿದ್ದಾರೆ. ತದನಂತರ ಬಿಹಾರದಲ್ಲಿ ಕಿಸಾನ್ ಪಂಚಾಯ್ತನಲ್ಲಿ ಭಾಗಿಯಾಗಿ ರೈತರನ್ನ ಉದ್ದೇಶಿಸಿ ಮಾತನಾಡಲಿದ್ದಾರೆ.

    2019 ಸೆಪ್ಟೆಂಬರ್ ನಿಂದ ಕೇಂದ್ರ ಸರ್ಕಾರ ನೂತನ ಕೃಷಿ ಕಾನೂನುಗಳನ್ನ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 26ರಿಂದ ದೆಹಲಿ ಗಡಿ ಭಾಗಗಳಲ್ಲಿಯೇ ವಾಸ್ತವ್ಯ ಹೂಡಿರುವ ಅಪಾರ ಸಂಖ್ಯೆಯ ರೈತರು ತಮ್ಮ ಧರಣಿ ಮುಂದುವರಿಸಿದ್ದಾರೆ. ರೈತರು ಮತ್ತು ಸರ್ಕಾರದ ನಡುವೆ 11 ಬಾರಿ ಮಾತುಕತೆ ನಡೆದ್ರೂ ಯಶಸ್ವಿಯಾಗಿಲ್ಲ. ಸರ್ಕಾರ ಮೂರು ಕಾನೂನುಗಳನ್ನು ಹಿಂಪಡೆದು, ಎಂಎಸ್‍ಪಿ ಗ್ಯಾರೆಂಟಿ ಕಾನೂನು ತರಬೇಕೆಂದು ಆಗ್ರಹಿಸಿದ್ದಾರೆ.

  • ಶಾಹೀನ್ ಭಾಗ್‍ನಂತಹ ಸ್ಥಳಗಳಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವಂತಿಲ್ಲ- ಸುಪ್ರೀಂ

    ಶಾಹೀನ್ ಭಾಗ್‍ನಂತಹ ಸ್ಥಳಗಳಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವಂತಿಲ್ಲ- ಸುಪ್ರೀಂ

    ನವದೆಹಲಿ: ಪ್ರತಿಭಟನೆ ನಡೆಸಲು ಪ್ರತಿಯೊಬ್ಬರಿಗೆ ಹಕ್ಕಿದೆ. ಆದರೆ ಅನಿರ್ದಿಷ್ಟಾವಧಿಗೆ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿ ಪ್ರತಿಭಟನೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

    ಶಾಹೀನ್ ಬಾಗ್‍ನಲ್ಲಿ ನಡೆದ ಪೌರತ್ವ ತಿದ್ದು ಪಡಿ ಕಾಯ್ದೆ(ಸಿಎಎ) ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಾರ್ವಜನಿಕಾ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲು ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಹಲವು ಸಾರ್ವಜನಿಕಾ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ಕೋರ್ಟ್ ಇಂದು ಆದೇಶ ಪ್ರಕಟಿಸಿದೆ.

    ಆದೇಶದಲ್ಲಿ ಏನಿದೆ?
    ಅನಿರ್ದಿಷ್ಟಾವಧಿಗೆ ಯಾವುದೇ ವ್ಯಕ್ತಿ ಅಥವಾ ಗುಂಪು ಸಾರ್ವಜನಿಕಾ ಸ್ಥಳಗಳನ್ನು ಬಂದ್ ಮಾಡುವಂತಿಲ್ಲ. ಈ ರೀತಿ ಮಾಡಿದ್ದಲ್ಲಿ ಅಧಿಕಾರಿಗಳು ಪ್ರತಿಭಟನೆಯನ್ನು ತೆರವು ಮಾಡಬೇಕು. ಪ್ರತಿಭಟನೆಗಳು ನಿರ್ಧಿಷ್ಟ ಜಾಗದಲ್ಲಿ ನಡೆಯಬೇಕು.

    ಪ್ರತಿಭಟನೆಯ ಹೆಸರಿನಲ್ಲಿ ಸಾರ್ವಜನಿಕಾ ಸ್ಥಳ ಅಥವಾ ರಸ್ತೆಯನ್ನು ಬಂದ್ ಮಾಡಿದ್ದಲ್ಲಿ ಭಾರೀ ಸಂಖ್ಯೆಯ ಜನರಿಗೆ ಸಮಸ್ಯೆಯಾಗುತ್ತದೆ. ಇದು ಆ ಜನರ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ಶಾಂತ ರೀತಿಯ ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೆ ಇದೆ. ಸಂವಿಧಾನವೇ ಈ ಹಕ್ಕನ್ನು ನೀಡಿದೆ.

    ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ ಶಾಹೀನ್ ಬಾಗ್ ಮಾರುಕಟ್ಟೆ ಸಂಘಟನೆಯ ಅಧ್ಯಕ್ಷ ಡಾ. ನಾಸೀರ್, ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಪ್ರತಿಭಟನೆಯಿಂದ 200ಕ್ಕೂ ಹೆಚ್ಚು ಅಂಗಡಿಗಳನ್ನು ಮುಚ್ಚಬೇಕಾಯಿತು. 2 ಸಾವಿರ ಕೆಲಸಗಾರರು ಕೆಲಸ ಕಳೆದುಕೊಳ್ಳಬೇಕಾಯಿತು. ಈ ಅಂಗಡಿಗಳಲ್ಲಿ ಬ್ರಾಂಡ್ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿತ್ತು. ಪ್ರತಿಭಟನೆಯಿಂದ ಕೋಟ್ಯಂತರ ರೂ. ನಷ್ಟವಾಗಿದೆ ಎಂದು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಸಿಎಎ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯ ಶಾಹೀನ್ ಬಾಗ್‍ನಲ್ಲಿ 2019ರ ಡಿಸೆಂಬರ್ 14 ರಿಂದ ಪ್ರತಿಭಟನೆ ಆರಂಭವಾಗಿತ್ತು. ಈ ನಡುವೆ ಕೊರೊನಾ ಬಂದ ಕಾರಣ ದೇಶವ್ಯಾಪಿ ಮಾ.22 ರಿಂದ ಲಾಕ್‍ಡೌನ್ ಘೋಷಣೆಯಾಗಿತ್ತು. ಲಾಕ್‍ಡೌನ್ ಘೋಷಣೆಯಾಗಿದ್ದರೂ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ಮುಂದುವರಿದಿತ್ತು.

    ಮಾ.24ರಂದು ದೆಹಲಿ ಪೊಲೀಸರು ಜೆಸಿಬಿ ಮೂಲಕ ಸ್ಥಳವನ್ನು ತೆರವುಗೊಳಿಸಿದ್ದರು. ಪೊಲೀಸರು ಸೆಕ್ಷನ್ 144 ನಿಷೇಧಿತ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ 6 ಮಹಿಳೆಯರು ಮತ್ತು 3 ಪುರುಷರನ್ನು ಶಾಹೀನ್ ಬಾಗ್‍ನಿಂದ ವಶಕ್ಕೆ ಪಡೆದಿದ್ದರು. ಈ ಮೂಲಕ 101 ದಿನಗಳ ಪ್ರತಿಭಟನೆ ಮುಕ್ತಾಯಗೊಂಡಿತ್ತು. ಸಾರ್ವಜನಿಕಾ ಸ್ಥಳವನ್ನು ಪ್ರತಿಭಟನಾ ಹೋರಾಟಕ್ಕೆ ಬಳಸಿದ್ದನ್ನು ಪ್ರಶ್ನಿಸಿ ಹಲವು ಮಂದಿ ಪಿಐಎಲ್ ಸಲ್ಲಿಸಿದ್ದರು.

  • ಜೆಸಿಬಿ ತಂದು ಶಾಹೀನ್ ಬಾಗ್ ಪ್ರತಿಭಟನಾ ಸ್ಥಳ ತೆರವುಗೊಳಿಸಿದ ಪೊಲೀಸರು

    ಜೆಸಿಬಿ ತಂದು ಶಾಹೀನ್ ಬಾಗ್ ಪ್ರತಿಭಟನಾ ಸ್ಥಳ ತೆರವುಗೊಳಿಸಿದ ಪೊಲೀಸರು

    ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೆಹಲಿ ಸೇರಿದಂತೆ ದೇಶದ ಎಲ್ಲ ರಾಜ್ಯಗಳನ್ನು ಲಾಕ್‍ಡೌನ್ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈ ಹಿಂದೆ ನೂರಾರು ಮಹಿಳೆಯರು ಹಲವು ದಿನಗಳಿಂದ ಬೀಡುಬಿಟ್ಟಿದ್ದ ಶಾಹೀನ್ ಬಾಗ್ ಪ್ರತಿಭಟನಾ ಸ್ಥಳವನ್ನು ದೆಹಲಿ ಪೊಲೀಸ್ ಸಿಬ್ಬಂದಿ ಇಂದು ತೆರವುಗೊಳಿಸಿದ್ದಾರೆ.

    ದೆಹಲಿ ಪೊಲೀಸರು ಪ್ರತಿಭಟನಾಕಾರರನ್ನು ಶಾಹೀನ್ ಬಾಗ್‍ನಿಂದ ಬಲವಂತವಾಗಿ ಹೊರಹಾಕಿದ್ದಾರೆ. ಕೆಲವೇ ಮಹಿಳಾ ಪ್ರತಿಭಟನಾಕಾರರು ಮಾತ್ರ ಶಾಹೀನ್ ಬಾಗ್ ಸ್ಥಳದಲ್ಲಿದ್ದರು. ಹೀಗಾಗಿ ಇತರರು ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದಾರೆ ಎಂದು ತೋರಿಸಲು ತಮ್ಮ ಚಪ್ಪಲಿಗಳನ್ನು ಇಟ್ಟುಕೊಂಡಿದ್ದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ವಾಕ್ ಸಮರ ನಡೆಯಿತು. ಬಳಿಕ ಪೊಲೀಸರು ಸೆಕ್ಷನ್ 144 ನಿಷೇಧಿತ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ 6 ಮಹಿಳೆಯರು ಮತ್ತು 3 ಪುರುಷರನ್ನು ಶಾಹೀನ್ ಬಾಗ್‍ನಿಂದ ವಶಕ್ಕೆ ಪಡೆದಿದ್ದಾರೆ. ಬಳಿಕ ಜೆಸಿಬಿ ಮೂಲಕ ಸ್ಥಳವನ್ನು ತೆರವುಗೊಳಿಸಲಾಯಿತು.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ದೆಹಲಿ ಆಗ್ನೇಯ ಡಿಸಿಪಿ, ‘ದೆಹಲಿ ಲಾಕ್‍ಡೌನ್ ಘೋಷಿಸಿದ್ದರಿಂದ ಶಾಹೀನ್ ಬಾಗ್ ಪ್ರತಿಭಟನಾ ಸ್ಥಳವನ್ನು ತೊರೆಯುವಂತೆ ಕೋರಲಾಗಿತ್ತು. ಆದರೆ ಪ್ರತಿಭಟನಾಕಾರರು ನಿರಾಕರಿಸಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಯಿತು. ಈಗಾಗಲೇ ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಲಾಗಿದೆ. ಅದರಲ್ಲಿ ಕೆಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಕೊರೊನಾ ವೈರಸ್ ಏಕಾಏಕಿ ಹರಡಿ ದೆಹಲಿ ಬೀಗ ಹಾಕುತ್ತಿದ್ದಂತೆ ಶಾಹೀನ್ ಬಾಗ್‍ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹೆಚ್ಚಿನ ಮಹಿಳೆಯರು ಪ್ರತಿಭಟನಾ ಸ್ಥಳದಿಂದ ಹೊರಬಂದಿದ್ದರು. ಆದರೆ ಕೆಲವರು ಸಿಎಎ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮುಂದುವರಿಸಿದ್ದರು.

  • ಶಾಹೀನ್ ಬಾಗ್ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದು ಆಪ್ ಕಾರ್ಯಕರ್ತ

    ಶಾಹೀನ್ ಬಾಗ್ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದು ಆಪ್ ಕಾರ್ಯಕರ್ತ

    ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯ ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ್ದ ಆರೋಪಿ ಕಪಿಲ್ ಗುಜ್ಜರ್ ಆಮ್ ಅದ್ಮಿ ಕಾರ್ಯಕರ್ತ ಎಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ.

    ಕಪಿಲ್ ಗುಜ್ಜರ್ ಬಂಧಿಸಿದ ದೆಹಲಿ ಕ್ರೈಂ ಬ್ರ್ಯಾಂಚ್ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ತನಿಖೆ ವೇಳೆ ಆರೋಪಿಯ ಮೊಬೈಲ್ ಪರಿಶೀಲನೆ ನಡೆಸಿದ್ದು ಈ ವೇಳೆ ಆಮ್ ಅದ್ಮಿ ಸೇರ್ಪಡೆಗೊಂಡಿದ್ದ ಫೋಟೋಗಳು ದೊರಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೊಬೈಲ್‍ನಲ್ಲಿ ವಾಟ್ಸಪ್ ಸಂದೇಶಗಳನ್ನು ಪರಿಶೀಲನೆ ನಡೆಸಲಾಯಿತು. ಎಲ್ಲ ಸಂದೇಶಗಳನ್ನು ಡಿಲಿಟ್ ಮಾಡಲಾಗಿತ್ತು. ತಂತ್ರಜ್ಞಾನ ಸಹಾಯದಿಂದ ಎಲ್ಲ ಮಾಹಿತಿಯನ್ನು ಮರಳಿ ಪಡೆಯಲಾಗಿದ್ದು, ಈ ವೇಳೆ ಆಮ್ ಅದ್ಮಿ ಸೇರ್ಪಡೆಗೊಂಡಿರುವ ಫೋಟೋಗಳು ಪತ್ತೆಯಾಗಿದೆ. ಈ ಫೋಟೋಗಳು ಒಂದು ವರ್ಷ ಹಳೆಯದು ಎನ್ನಲಾಗಿದ್ದು ಆಪ್ ನಾಯಕಿ ಅತಿಶಿ ಮತ್ತು ಸಂಜಯ್ ಸಿಂಗ್ ಜೊತೆಗೆ ಆರೋಪಿ ಕಪಿಲ್ ಗುಜ್ಜರ್ ಗುರುತಿಸಿಕೊಂಡಿದ್ದಾನೆ. ತಂದೆಯೂ ಸೇರಿ ಹಲವರೊಂದಿಗೆ ಕಪಿಲ್ ಆಮ್ ಅದ್ಮಿ ಸೇರ್ಪಡೆಗೊಂಡಿದ್ದರು ಎಂದು ಕ್ರೈಂ ಬ್ರ್ಯಾಂಚ್ ಡಿಸಿಪಿ ರಾಜೇಶ್ ಡಿಯೊ ಪ್ರತಿಕ್ರಿಯಿಸಿದ್ದಾರೆ.

    ಫೆಬ್ರವರಿ ಒಂದರಂದು ದಕ್ಷಿಣ ದೆಹಲಿ ಪ್ರದೇಶದ ಶಾಹೀನ್ ಬಾಗ್ ನಲ್ಲಿ ಮಹಿಳೆಯರು ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ್ದ ಕಪಿಲ್ ಗುಜ್ಜರ್, ‘ನಮ್ಮ ದೇಶದಲ್ಲಿ ಹಿಂದುಗಳದಷ್ಟೇ ನಡೆಯೋದು, ಬೇರೆ ಯಾರದ್ದು ಅಲ್ಲ’ ಎನ್ನುತ್ತಾ ಎರಡು ಮೂರು ಬಾರಿ ಗುಂಡು ಹಾರಿಸಿದ್ದ. ತಕ್ಷಣವೇ ವಶಕ್ಕೆ ಪಡೆದಿದ್ದ ಪೊಲೀಸರು ತನಿಖೆ ನಡೆಸಿದ್ದರು ಪ್ರಾಥಮಿಕ ತನಿಖೆಯಲ್ಲಿ ಬಂಧಿತ ವ್ಯಕ್ತಿ ನೋಯ್ಡಾ ಬಾರ್ಡರ್ ನಲ್ಲಿರುವ ದಲ್ಲಾಪುರ ಗ್ರಾಮಾದ ನಿವಾಸಿ ಎಂದು ತಿಳಿದು ಬಂದಿತ್ತು.