Tag: ಶಾಸಕ ರೋಷನ್ ಬೇಗ್

  • ಕೈಮುಗಿಯುತ್ತೇನೆ ಜನರ ಸಾಲ ತೀರಿಸಪ್ಪ – ಮನ್ಸೂರ್‌ಗೆ ಜಮೀರ್ ಮನವಿ

    ಕೈಮುಗಿಯುತ್ತೇನೆ ಜನರ ಸಾಲ ತೀರಿಸಪ್ಪ – ಮನ್ಸೂರ್‌ಗೆ ಜಮೀರ್ ಮನವಿ

    ಬೆಂಗಳೂರು: ಐಎಂಎ ವಂಚನೆ ಹಗರಣದ ಬಗ್ಗೆ ಶಾಸಕ ರೋಷನ್ ಬೇಗ್ ಅವರು ಪತ್ರಿಕಾ ಗೋಷ್ಠಿ ನಡೆಸಿದ ಬೆನ್ನಲ್ಲೇ ಸಚಿವ ಜಮೀರ್ ಅಹಮದ್ ಅವರು ಕೂಡ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ತಾನು ಸಂಸ್ಥೆಯೊಂದಿಗೆ ಯಾವುದೇ ಬೇನಾಮಿ ಹಣದ ವ್ಯವಹಾರ ನಡೆಸಿಲ್ಲ. ಎಲ್ಲವೂ ದಾಖಲೆ ಇಟ್ಟುಕೊಂಡೆ ವ್ಯವಹಾರ ನಡೆಸಿದ್ದಾಗಿ ಸಚಿವ ಜಮೀರ್ ಅಹಮದ್ ಸ್ಪಷ್ಟನೆ ನೀಡಿದ್ದಾರೆ.

    ನಾನು ಐಎಂಎ ಸಂಸ್ಥೆಯಿಂದ ಯಾವುದೇ ಸಾಲವನ್ನು ಪಡೆದುಕೊಂಡಿಲ್ಲ. ನನ್ನ ಆಸ್ತಿಯನ್ನ ಸಂಸ್ಥೆಗೆ ಸಂಪೂರ್ಣವಾಗಿ ಮಾರಾಟ ಮಾಡಿದ್ದೇನೆ. ಈ ಮಾರಾಟದ ವಿಚಾರವಾಗಿ ನಾನು ಸಂಸ್ಥೆಯಿಂದ 5 ಕೋಟಿ ರೂ. ಮುಂಗಡ ಹಣ ಪಡೆದಿದ್ದೇನೆ. 9 ಕೋಟಿ 38 ಲಕ್ಷ ರೂ.ಗೆ ಮಾರಾಟ ಮಾಡಿದ್ದೇನೆ. ಇದರ ತೆರಿಗೆಯನ್ನು ಕೂಡ ಸರ್ಕಾರಕ್ಕೆ ನಾನು ಪಾವತಿ ಮಾಡಿದ್ದು, ಯಾವುದೇ ರೀತಿಯಲ್ಲಿ ವಂಚನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಬಡ ಜನರು ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದು, ಕೈಮುಗಿಯುತ್ತೇನೆ ಬಂದು ಜನರ ಸಾಲ ತೀರಿಸಪ್ಪ ಎಂದು ಮನವಿ ಮಾಡಿದರು.

    ಇಲ್ಲಿ ಯಾರೂ ಹರಿಶ್ಚಂದ್ರರು ಇಲ್ಲ, ಯಾವುದೇ ರೀತಿ ತಪ್ಪು ಮಾಡಿದ್ದರೆ ಅದನ್ನು ಒಪ್ಪಿಕೊಳ್ಳಬೇಕು. ಆದರೆ ನನ್ನ ವಿಚಾರದಲ್ಲಿ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಪ್ರಸಾರ ಆಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇನೆ. ನಾನು ರಿಚ್ಮಂಡ್ ಟೌನ್ ನಲ್ಲಿ ನನ್ನ ಆಸ್ತಿಯನ್ನು ಮಾರಾಟ ಮಾಡಿದ್ದೇನೆ. ಈ ಕುರಿತು ಸೇಲ್ ಮಾಹಿತಿ ನನ್ನ ಬಳಿ ಇದೆ. ಮನ್ಸೂರ್ ಬಳಿ ಯಾವುದೇ ಹಣ ಸಾಲ ಪಡೆದಿಲ್ಲ, ನನ್ನ ಆಸ್ತಿಯನ್ನೇ ಮಾರಾಟ ಮಾಡಿದ್ದೇನೆ. ಎಲ್ಲವೂ ಪಾರದರ್ಶಕ ವ್ಯವಹಾರ ಮಾಡಿದ್ದೇನೆ ಎಂದರು.

    ರಾಜಕೀಯ ನಿವೃತ್ತಿ:
    ಸದ್ಯ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ(ಎಸ್‍ಐಟಿ) ನಡೆಸುತ್ತಿದ್ದು, ತನಿಖೆಯನ್ನ ಸಿಬಿಐಗೆ ನೀಡಲು ಸಿಎಂ ಕುಮಾರಸ್ವಾಮಿ ಅವರು ಅಂತಿಮ ತೀರ್ಮಾನ ಮಾಡುತ್ತಾರೆ. ಸದ್ಯ ಎಸ್‍ಐಟಿ ತನಿಖೆಗೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ. ನಮ್ಮ ಪಕ್ಷದ ನಾಯಕರಾದ ರೋಷನ್ ಬೇಗ್ ಅವರ ಹೆಸರು ಕೇಳಿ ಬಂದಿರುವರಿಂದ ಆ ಕುರಿತು ತನಿಖೆ ಆಗುತ್ತದೆ. ನನ್ನ ಬಗ್ಗೆಯೂ ತನಿಖೆ ನಡೆಲಿದೆ. ನಾವು ತನಿಖೆಗೆ ಸಹಕಾರ ನೀಡುತ್ತೇವೆ. ಯಾವುದೇ ಆರೋಪ ಸತ್ಯಾಂಶ ತನಿಖೆಯ ಬಳಿಕಷ್ಟೇ ತೀರ್ಮಾನ ಮಾಡಲು ಸಾಧ್ಯ ಎಂದರು.

    ಇದೇ ವೇಳೆ ಕಳೆದ ತಿಂಗಳ 26ನೇ ರಂದು ಮನ್ಸೂರ್ ಅವರನ್ನ ಭೇಟಿ ಮಾಡಿ ಮಾತನಾಡಿಸಿದ್ದೆ ಎಂದ ಅವರು, ಹೂಡಿಕೆ ಹಣ ಜನರಿಗೆ ಹಿಂದಿರುಗಿಸುವ ಬಗ್ಗೆ ಚರ್ಚೆ ನಡೆಸಿದ್ದೆ. ಆದರೆ ಆ ವೇಳೆ ಹಬ್ಬದ ಬಳಿಕ ಹಣ ಮರುಪಾವತಿ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಆ ವೇಳೆಗೆ ವಂಚನೆ ಬಗ್ಗೆ ಯಾವುದೇ ಮುನ್ಸೂಚನೆ ಇರಲಿಲ್ಲ. ಅಲ್ಲದೇ ಅವರು ಹೀಗೆ ಓಡಿ ಹೋಗುತ್ತಾರೆ ಎಂದು ತಿಳಿದಿರಲಿಲ್ಲ. ಅದೇ ದಿನ ಸಿಸಿಬಿ ಅಲೋಕ್ ಕುಮಾರ್ ಅವರು ಚರ್ಚೆ ನಡೆಸಿದ್ದರು ಎಂಬ ಮಾಹಿತಿ ಇದೆ. ನಾನು ಮನ್ಸೂರ್ ನಿಂದ ಸಾಲ ಪಡೆದಿರುವುದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದರು.

    ಬೇಗ್ ನಮ್ಮ ನಾಯಕರು:
    ಜನರು ಹಣ ಕಟ್ಟಿ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಬಡವರ ಹಣ ಹಿಂದಿರುಗುವಂತೆ ಆತನಿಗೆ ಕೈ ಮುಗಿದು ಕೇಳಿ ಕೊಳ್ಳುತ್ತಿದ್ದೇನೆ ಎಂದು ಮಾಧ್ಯಮದ ಎದುರೇ ಕೈ ಮುಗಿದರು. ಅಲ್ಲದೇ ಮನ್ಸೂರ್ ಗೆ ಆಸ್ತಿ ಮಾರಾಟ ಮಾಡಿದ್ದಕ್ಕೆ ಪಶ್ಚಾತ್ತಾಪ ಇದೆ. ಅಲ್ಲದೇ ರೋಷನ್ ಬೇಗ್ ಹಾಗೂ ನನ್ನ ನಡುವೆ ಯಾವುದೇ ಅಸಮಾಧಾನ ಇಲ್ಲ. ನಾವು ಆತ್ಮೀಯರಿದ್ದೇವೆ ಎಂದು ತಿಳಿಸಿದರು.

  • ಹಣ ಕಳೆದುಕೊಂಡವರಿಗಾಗಿ ನನ್ನ ಹೃದಯ ಬಡಿದುಕೊಳ್ಳುತ್ತಿದೆ: ಶಾಸಕ ಬೇಗ್

    ಹಣ ಕಳೆದುಕೊಂಡವರಿಗಾಗಿ ನನ್ನ ಹೃದಯ ಬಡಿದುಕೊಳ್ಳುತ್ತಿದೆ: ಶಾಸಕ ಬೇಗ್

    – ಐಎಂಎ ಸಿಬಿಐ ತನಿಖೆಗೆ ನೀಡಲು ಆಗ್ರಹ

    ನವದೆಹಲಿ: ಐಎಂಎ ಪ್ರಕರಣದಲ್ಲಿ ಬಿಡುಗಡೆ ಆಗಿರುವ ಆಡಿಯೋದಲ್ಲಿ ನನ್ನ ಹೆಸರನ್ನು ಪ್ರಸ್ತಾಪ ಮಾಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ನೀಡಲು ನಾನು ಸಿಎಂ ಕುಮಾರಸ್ವಾಮಿ ಅವರು ಒತ್ತಾಯ ಮಾಡುತ್ತೇನೆ. ಕೇವಲ ಐಎಂಎ ಅಲ್ಲದೇ ಕ್ಯಾಪಿಟಲ್, ಅಲಾ, ಅಜ್ಮೇರಾ, ಅಂಬಿಡೆಂಟ್ ಸೇರಿದಂತೆ ಇತರೇ ಸಂಸ್ಥೆಗಳ ಮೇಲೂ ತನಿಖೆ ನಡೆಯಬೇಕಿದೆ ಎಂದು ಶಾಸಕ ರೋಷನ್ ಬೇಗ್ ಆಗ್ರಹಿಸಿದ್ದಾರೆ.

    ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವನೋ ಒಬ್ಬ ಫ್ರಾಡ್ ನನ್ನ ಹೆಸರು ಹೇಳಿದ ತಕ್ಷಣ ಆರೋಪ ಆಗುತ್ತದೆ ಅಷ್ಟೇ. ಆರೋಪ ಮಾಡಿ ಜನರಿಗೆ ಮೋಸ ಮಾಡಿ ಪರಾರಿಯಾಗಿರುವ ಆತನ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದು ಅಗತ್ಯ. ಆತನನ್ನು ಕೂಡಲೇ ಪತ್ತೆ ಮಾಡಿ ತನಿಖೆ ನಡೆಸಬೇಕಿದೆ. ಹಗರಣ ಮಾಡಿದಾತ 400 ಕೋಟಿ ರೂ. ಆರೋಪ ಮಾಡಿ ಓಡಿ ಹೋದರೆ ಎಷ್ಟು ಸಮಂಜಸ. ಅಲ್ಲದೇ ಇಡೀ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಹೆಚ್ಚಿನ ಅಧಿಕಾರ ಇರುವುದಿಂದ ತನಿಖೆ ಸಂಪೂರ್ಣವಾಗಿ ವೇಗವಾಗಿ ನಡೆಯುತ್ತದೆ ಎಂದು ಹೇಳಿದರು.

    ನನಗೆ ಐಎಂಎ ಸಂಸ್ಥೆಯೊಂದಿಗೆ ಯಾವುದೇ ಸಂಪರ್ಕ ಇಲ್ಲ. ನನ್ನ ಕ್ಷೇತ್ರದಲ್ಲಿ ನಾನು ಓದಿದ ಶಾಲೆಯನ್ನ ಅಭಿವೃದ್ಧಿ ಪಡಿಸಲು ಮುಂದಾದ ವೇಳೆ ಈ ಸಂಸ್ಥೆ ಅಭಿವೃದ್ಧಿ ಪಡಿಸಲು ಮುಂದಾಗಿತ್ತು. ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಲು ಸಹಕಾರ ನೀಡಿದೆ ಅಷ್ಟೇ. ಈ ಕಾರ್ಯಕ್ಕೆ ಸಿಎಂ ಕುಮಾರಸ್ವಾಮಿ ಅವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದು ಎಲ್ಲರಿಗೂ ತಿಳಿದಿದೆ ಎಂದು ಸ್ಪಷ್ಟಪಡಿಸಿದರು.

    ಸದ್ಯ ಹಗರಣದಲ್ಲಿ ಮೋಸ ಹೋಗಿ ಪರದಾಡುತ್ತಿರುವವರ ಹಣ ಅವರಿಗೆ ಕೊಡಿಸುವ ಕಾರ್ಯ ಮೊದಲು ಆಗಬೇಕು. ಪ್ರಕರಣ ಸತ್ಯಾಂಶ ಹೊರ ಬರಬೇಕು ಎಂದರೆ ಆತ ನಾಪತ್ತೆಯಾಗುವ ಮುನ್ನ 48 ಗಂಟೆಗಳ ಅವಧಿಯಲ್ಲಿ ಯಾರಿಗೆ ಕಡೆ ಮಾಡಿದ್ದ. ಆತನ ಮೊಬೈಲ್ ವಾಟ್ಸಾಪ್ ಗೆ ಯಾವ ಸಂದೇಶಗಳು ಬಂದಿತ್ತು. ಅಲ್ಲದೇ ಯಾರೊಂದಿಗೆ ಆತ ಸಂಪರ್ಕದಲ್ಲಿ ಇದ್ದ ಎಂಬುದರ ಮಾಹಿತಿ ತನಿಖೆ ವೇಳೆ ಸಿಗಲಿದೆ. ನಾನು ಪ್ರಕರಣ ವಿಚಾರಣೆ ಸಂಬಂಧ ಎಸ್‍ಐಟಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ನನ್ನ ಹೃದಯ ಮೋಸ ಹೋದವರ ಪರ ಬಡಿದುಕೊಳ್ಳುತ್ತಿದೆ ಎಂದರು.

    ಬೆಳಗಾವಿಯಲ್ಲಿಯೂ ಇಂತಹದ್ದೆ ಪ್ರಕರಣ ನಡೆದಿತ್ತು, ಇದರಲ್ಲಿ ಕೆಲ ಮಂದಿ ನಾಪತ್ತೆಯಾಗಿದ್ದರೆ ಕೆಲವರು ಜಾಮೀನು ಪಡೆದು ಹೊರಗಿದ್ದರೆ. ಯಾವುದೇ ಪ್ರಕರಣವಾದರೂ ಹಣ ಕಳೆದುಕೊಂಡ ಜನರಿಗೆ ಅದಷ್ಟು ಬೇಗ ಹಣ ವಾಪಸ್ ಮಾಡಬೇಕು. ವಂಚನೆ ಮಾಡಿರುವ ವ್ಯಕ್ತಿಯ ಬ್ಯಾಂಕ್ ಖಾತೆ ಜಪ್ತಿ ಮಾಡಬೇಕಿದೆ. ನಾನು ಯಾವಾಗ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡಿದ್ದೆನೋ ಆಗಲೇ ನನ್ನ ಮೇಲೆ ಆರೋಪ ಬಂದಿದೆ. ನಾನು ನನ್ನ ಕುಟುಂಬದ ಯಾವುದೇ ಸದಸ್ಯರು ಸಂಸ್ಥೆಯೊಂದಿಗೆ ವ್ಯವಹಾರ ನಡೆಸಿಲ್ಲ ಎಂದು ತಿಳಿಸಿದರು.