Tag: ಶಾಸಕ ನಾರಾಯಣ ರಾವ್

  • ಮನೆ, ಕ್ಷೇತ್ರ ಬಿಟ್ಟು ಇಲ್ಲಿದ್ದರೆ ಜನ ಏನಂದಾರು- ರೆಸಾರ್ಟ್ ವಾಸ್ತವ್ಯಕ್ಕೆ ‘ಕೈ’ ಶಾಸಕರ ವಿರೋಧ

    ಮನೆ, ಕ್ಷೇತ್ರ ಬಿಟ್ಟು ಇಲ್ಲಿದ್ದರೆ ಜನ ಏನಂದಾರು- ರೆಸಾರ್ಟ್ ವಾಸ್ತವ್ಯಕ್ಕೆ ‘ಕೈ’ ಶಾಸಕರ ವಿರೋಧ

    ಬೆಂಗಳೂರು: ಮನೆ, ಮಠ, ಕ್ಷೇತ್ರ ಬಿಟ್ಟು ಇಲ್ಲಿದ್ದರೆ ಜನ ಏನು ಅಂದುಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಶಾಸಕರು ರೆಸಾರ್ಟ್ ವಾಸ್ತವ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

    ಯಶವಂತಪುರ ಸಮೀಪದ ಗೊರಗುಂಟೇಪಾಳ್ಯದಲ್ಲಿರುವ ತಾಜ್ ವಿವಾಂತ ರೆಸಾರ್ಟಿನಲ್ಲಿ ಕಾಂಗ್ರೆಸ್ ಶಾಸಕರು ಕಳೆದ ಕೆಲವು ದಿನಗಳಿಂದ ವಾಸ್ತವ್ಯ ಹೂಡಿದ್ದಾರೆ. ಹೀಗಾಗಿ ರೆಸಾರ್ಟ್ ಮುಂದೆ ಪೊಲೀಸರ ಭದ್ರತೆ ಒದಗಿಸಲಾಗಿದೆ. ಆದರೆ ಈಗ ರೆಸಾರ್ಟ್ ವಾಸ್ತವ್ಯಕ್ಕೆ ಕೆಲ ಶಾಸಕರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಬಿಟ್ಟು ಹೋಗುವವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸೋಮವಾರ ವಿಶ್ವಾಸ ಮತಯಾಚನೆ ಮಾಡಬೇಕು. ಆಗಲೂ ಸರ್ಕಾರ ಉಳಿಯುವುದು ಡೌಟ್. ಅನಾವಶ್ಯಕವಾಗಿ ರೆಸಾರ್ಟ್ ನಲ್ಲಿ ಕೂಡಿ ಹಾಕಿದ್ದೀರಿ. ಹೋಗುವವರು ಯಾವಾಗಿದ್ದರೂ ಹೋಗುತ್ತಾರೆ. ಅವರನ್ನು ತಡೆಯಲು ಸಾಧ್ಯವಿದೆಯೇ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಕಳೆದ 10 ದಿನಗಳಿಂದ ನಾವು ರೆಸಾರ್ಟಿನಲ್ಲಿಯೇ ಇದ್ದೇವೆ. ಮನೆ, ಮಠ, ಕ್ಷೇತ್ರ ಬಿಟ್ಟು ಇಲ್ಲಿದ್ದರೆ ಜನ ಏನು ಅಂದುಕೊಳ್ಳುತ್ತಾರೆ. ಊರಿಗೆ ತೆರಳಲು ಅವಕಾಶ ಮಾಡಿಕೊಡಿ. ನಾವು ಪಕ್ಷ ಬಿಟ್ಟು ಓಡಿ ಹೋಗುವವರಲ್ಲ ಎಂದು ಕೆಲ ಶಾಸಕರು ನಾಯಕರ ಬಳಿ ಮನವಿ ಮಾಡಿಕೊಂಡಿದ್ದಾರೆ.

    ಅವಶ್ಯಕತೆ ಇರುವವರು ಹೋಗಿ ಬನ್ನಿ ಎಂದು ನಾಯಕರು ತಿಳಿಸಿದ್ದಾರೆ. ಹೀಗಾಗಿ ಕೆಲವು ಶಾಸಕರು ತಮ್ಮ ಊರಿಗೆ ತೆರಳಿದ್ದು, ರೆಸಾರ್ಟಿನಲ್ಲಿ ಇದೀಗ 24 ಶಾಸಕರು ಉಳಿದುಕೊಂಡಿದ್ದಾರೆ. ಉತ್ತರ ಕರ್ನಾಟಕದ ಶಾಸಕರು ತಮ್ಮ ಕ್ಷೇತ್ರಕ್ಕೆ ಹೋಗಿ ಮತ್ತೆ ಸೋಮವಾರ ಬೆಳಗ್ಗೆ ಸದನಕ್ಕೆ ಹಾಜರಾಗುವುದು ಕಷ್ಟ. ಹೀಗಾಗಿ ಅವರು ರೆಸಾರ್ಟಿನಲ್ಲಿಯೇ ಉಳಿದುಕೊಂಡಿದ್ದಾರೆ. ಬೆಂಗಳೂರು ಸುತ್ತಮುತ್ತಲಿನ ಶಾಸಕರು ತಮ್ಮ ತಮ್ಮ ಊರಿಗೆ ತೆರಳಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.

    ಸೋಮವಾರ ವಿಶ್ವಾಸ ಮತಯಾಚನೆ ಹಿನ್ನೆಲೆಯಲ್ಲಿ ತಾಜ್ ವಿವಾಂತದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಸಭೆಯ ನೇತೃತ್ವವನ್ನು ಮಾಜಿ ಸಿಎಂ ಸಿದ್ದರಾಮಯ್ಯ ವಹಿಸಿಕೊಳ್ಳಲಿದ್ದು, ವಿಶ್ವಾಸ ಮತ ಯಾಚನೆ ವೇಳೆ ನಡೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರು ಮಧ್ಯಾಹ್ನ 3 ಗಂಟೆ ಸುಮಾರಿಗೆ ಬರುವ ಸಾಧ್ಯತೆ ಎಂಬುದಾಗಿ ತಿಳಿದುಬಂದಿದೆ.

    ಪಬ್ಲಿಕ್ ಟಿವಿಗೆ ಜೊತೆ ಬಸವಕಲ್ಯಾಣ ಶಾಸಕ ನಾರಾಯಣ ರಾವ್ ಮಾತನಾಡಿ, ನಾವು ಜನರ ಏಳಿಗೆಗಾಗಿ ಬಂದವರು. ಬಸವ ಶರಣರ ತತ್ವದ ಮೇಲೆ ನಮ್ಮ ಜೀವನ ನಡೆಯುತ್ತಿದೆ. ಆಪರೇಷನ್ ಕಮಲದ ಬಗ್ಗೆ ನಾನು ಮಾತನಾಡುವುದಿಲ್ಲ. ಆ ವಿಚಾರದಲ್ಲಿ ನಮ್ಮ ಹಿರಿಯರು ಮಾತನಾಡುತ್ತಾರೆ. ನಾನಂತು ಆಪರೇಷನ್‍ಗೆ ಒಳಗಾಗಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇರುವೆ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಬಿಜೆಪಿಗೆ ಮಾತು ಕೊಟ್ಟಿದ್ದೇವೆ, ದೋಸ್ತಿ ಕೈಬಿಡುವ ನಿರ್ಧಾರವಿಲ್ಲ: ಸಾರಾ ಮಹೇಶ್

    ಬಿಜೆಪಿಗೆ ಮಾತು ಕೊಟ್ಟಿದ್ದೇವೆ, ದೋಸ್ತಿ ಕೈಬಿಡುವ ನಿರ್ಧಾರವಿಲ್ಲ: ಸಾರಾ ಮಹೇಶ್

    – ಕಾಂಗ್ರೆಸ್ ಜೊತೆಗೆ ಸಂಬಂಧ ಹಾಳಾಗಿದ್ದಾಗ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧ
    – ದೋಸ್ತಿ ಶಾಸಕರ ವಿರುದ್ಧ ಹರಿಹಾಯ್ದ ಸಚಿವ

    ಮೈಸೂರು: ಜಿಲ್ಲಾ ಪಂಚಾಯತ್ ಮೈತ್ರಿ ವಿಚಾರದಲ್ಲಿ ಬಿಜೆಪಿಯವರಿಗೆ ಮಾತು ಕೊಟ್ಟಿದ್ದೇವೆ. ಹೀಗಾಗಿ ಅವರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ತಿಳಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಬಿಜೆಪಿ-ಜೆಡಿಎಸ್ ದೋಸ್ತಿ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಜೊತೆ ಮಾತನಾಡಿದ್ದೇನೆ. ಸ್ಥಳೀಯ ಮಟ್ಟದ ಪರಿಸ್ಥಿತಿಗೆ ಅನುಗುಣವಾಗಿ ಹೊಂದಾಣಿಕೆಯ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ನಾವು ನಿರ್ಧಾರ ಬದಲಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಜಿಲ್ಲಾ ಪಂಚಾಯತ್ ಸದಸ್ಯರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ನಾವು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇವೆ. ಈ ಹಿಂದೆ ಕಾಂಗ್ರೆಸ್ ಜೊತೆಗಿನ ಸಂಬಂಧ ಹಾಳಾಗಿದ್ದಾಗ ಮೈಸೂರಿನಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆಯ ನಿರ್ಧಾರ ಮಾಡಿಕೊಂಡಿದ್ದೇವು. ಮುಂದಿನ ಅವಧಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಯಾರು ಎನ್ನುವುದು ನಿರ್ಣಯವಾಗಿದೆ ಎಂದು ತಿಳಿಸಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂಬ ಶಾಸಕ ನಾರಾಯಣ ರಾವ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಸಾರಾ ಮಹೇಶ್ ಅವರು, ಸಿದ್ದರಾಮಯ್ಯ ಅವರನ್ನು ಓಲೈಸಲು ಹೇಳಿಕೆ ಕೊಟ್ಟಿದ್ದಾರೆ. ಇಲ್ಲವೇ ಸಚಿವ ಸ್ಥಾನ ಅಥವಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡಲಿ ಎಂದು ಹೊಗಳಿದ್ದಾರೆ ಎಂದು ತಿರುಗೇಟು ಕೊಟ್ಟರು.

    ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ನಾವು ಶಾಸಕ ನಾರಾಯಣ ರಾವ್ ರೀತಿ ಮಾತನಾಡಬಹುದು. ಆದರೆ ನಮ್ಮ ರಾಜ್ಯದ, ರಾಷ್ಟ್ರದ ನಾಯಕರು ದೋಸ್ತಿ ಪಕ್ಷದ ವಿರುದ್ಧ ಮಾತನಾಡದಂತೆ ಸೂಚನೆ ಕೊಟ್ಟಿದ್ದಾರೆ. ಯಾವುದೇ ವಿಚಾರವಿದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ. ಬಹಿರಂಗವಾಗಿ ಯಾವುದೇ ಕಾರಣಕ್ಕೂ ಚರ್ಚೆ ಬೇಡವೆಂದು ತಿಳಿಸಿದ್ದಾರೆ. ನಾವು ಸಹ ಕಾದು ನೋಡುತ್ತೇವೆ. ಕಾಂಗ್ರೆಸ್ ನಾಯಕರು ತಮ್ಮ ಶಾಸಕರಿಗೆ ಈಗಲಾದರೂ ಎಚ್ಚರಿಕೆ ಕೊಡಲಿ ಎಂದು ಗುಡುಗಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv