Tag: ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ

  • ಮಕ್ಕಳು ಮೂಲಭೂತ ಸೌಕರ್ಯದಿಂದ ವಂಚಿತರಾಗಬಾರದು: ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ

    ಮಕ್ಕಳು ಮೂಲಭೂತ ಸೌಕರ್ಯದಿಂದ ವಂಚಿತರಾಗಬಾರದು: ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ

    ನೆಲಮಂಗಲ: ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಅಸಾಧಾರಣ ಪ್ರತಿಭೆಗಳಿದ್ದು, ಉತ್ತಮ ವೇದಿಕೆ ಸಿಕ್ಕರೆ ಸಾಧಕರ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ನೆಲಮಂಗಲ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

    ತಾಲೂಕಿನ ಸೊಂಡೆಕೊಪ್ಪ ರಸ್ತೆಯ ವೆಂಕಟಪುರದಲ್ಲಿನ ಎಮರಾಲ್ಡ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ್ದಾರೆ. ಸಮಾಜದ ಪ್ರತಿ ಮಗು ಶಿಕ್ಷಣದ ಜೊತೆ ಮಾನವೀಯತೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಮಕ್ಕಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಬಾರದು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಎಮರಾಲ್ಡ್ ಶಾಲೆಯಂತಹ ಉತ್ತಮ ವಾತಾವರಣದ ಶಾಲೆಗಳು ಅನಿವಾರ್ಯ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೈಟೆಕ್ ಸೌಲಭ್ಯವಿರುವ ವೇದಿಕೆ ನಿರ್ಮಾಣ ಮಾಡಿರುವ ಈ ಶಾಲೆಯ ಮಾಲೀಕರಿಗೆ ಶ್ಲಾಘಿಸುತ್ತೇನೆ. ಯಾವ ಶಿಕ್ಷಕರು ಕೆಟ್ಟವರಲ್ಲ, ಮಕ್ಕಳ ಭವಿಷ್ಯದ ಉನ್ನತಿಗೆ ಶ್ರಮಿಸುತ್ತಾರೆ. ಪ್ರತಿಯೊಂದು ನೋವು ಪಾಠವಾಗುತ್ತದೆ, ಮನುಷ್ಯನ ಕೆಟ್ಟವಿಚಾರಗಳನ್ನು ಬದಲಿಸುತ್ತದೆ. ತೃಪ್ತಿ ಸಿಗುವುದು ಕಾಯಕದಲ್ಲಿ, ಆದ್ದರಿಂದ ಮಕ್ಕಳಿಗೆ ತೃಪ್ತಿ ಗಳಿಸುವಂತೆ ಶಿಕ್ಷಣ ಕಲಿಸಿ ಎಂದರು.

    ಎಮರಾಲ್ಡ್ ಇಂಟರ್ ನ್ಯಾಷನಲ್ ಶಾಲೆಯ ಅಧ್ಯಕ್ಷ ಎಮ್. ಲೋಕೇಶ್ ರೆಡ್ಡಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡುವ ಸುವರ್ಣಾವಕಾಶ ನಮಗೆ ಲಭ್ಯವಾಗಿದೆ. ಮಕ್ಕಳಲ್ಲಿ ಶಿಕ್ಷಣದ ಕಲಿಕೆಯಲ್ಲದೆ ಕ್ರೀಡೆ, ಸಾಂಸ್ಕೃತಿಕವಾಗಿ ಉತ್ತಮ ಪ್ರತಿಭೆಯನ್ನು ಹೊಂದಿರುತ್ತಾರೆ. ಆದ್ದರಿಂದ ಶಿಕ್ಷಣದ ಜೊತೆ ವಿವಿಧ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ತರಬೇತಿಗೆ ವಿಶಾಲ ಮೈದಾನ, ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ, ತರಬೇತಿ ನೀಡಿದರೆ ಅತ್ಯುತ್ತಮ ಸಾಧನೆ ಮಾಡುತ್ತಾರೆ ಎಂಬುದಕ್ಕೆ ನಮ್ಮ ಶಾಲೆ ಸಾಕ್ಷಿಯಾಗಿದೆ ಎಂದರು.

    ಶಾಲೆಯ ಪ್ರಸ್ತುತ ವರ್ಷದಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಸ್ಪರ್ಧೆಯಲ್ಲಿ ವಿಜೇತರಾದವರಿಗೆ, ಹೆಚ್ಚು ಅಂಕಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಪ್ರೀ ನರ್ಸರಿಯಿಂದ ಪ್ರೌಢಶಾಲಾ ಮಕ್ಕಳು ನೃತ್ಯ, ನಾಟಕ, ಸುಗಮಸಂಗೀತ, ಕರಾಟೆ ಸೇರಿದಂತೆ ಅನೇಕ ಪ್ರದರ್ಶನಗಳನ್ನು ನಡೆಸಲಾಯಿತು.

  • ‘ಪ್ರೊಡಕ್ಷನ್ ನಂ.1’ ಚಿತ್ರಕ್ಕೆ ಮುಹೂರ್ತ

    ‘ಪ್ರೊಡಕ್ಷನ್ ನಂ.1’ ಚಿತ್ರಕ್ಕೆ ಮುಹೂರ್ತ

    ಬೆಂಗಳೂರು: ಈ ಹಿಂದೆ ನವರಸ ನಾಯಕ ಜಗ್ಗೇಶ್ ಅಭಿನಯದ ‘ಅಳಿಯ ಅಲ್ಲ ಮಗಳಗಂಡ’, ‘ಸೋಮ’ದಂತಹ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದ ವೈ.ಯೇಸುದಾಸ್ ಬಹಳ ದಿನಗಳ ನಂತರ ಮತ್ತೊಂದು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಪ್ರೊಡಕ್ಷನ್ ನಂ.1 ಎಂದು ಚಿತ್ರ ಸೆಟ್ಟೇರಿದೆ. ರಾಜೇಂದ್ರ ಅಭಿನಯದ ಕಳ್ಳಪೊಲೀಸ್, ಶೋಭರಾಜ್ ಅಭಿನಯದ ಭಗವಾನ್ ದಾದಾ, ಕೆ.ಶಿವರಾಂ ಅಭಿನಯದ ಸುಭಾಷ್, ಹೀಗೆ ಹಲವಾರು ಚಿತ್ರಗಳನ್ನು ನಿರ್ದೇಶಿಸಿದ ವೈ.ಯೇಸುದಾಸ್ ಅವರೀಗ ಲವ್, ಥ್ರಿಲ್ಲರ್, ಆ್ಯಕ್ಷನ್ ಹೊಂದಿರುವ ಚಿತ್ರವೊಂದಕ್ಕೆ ಕೈಹಾಕಿದ್ದಾರೆ. ಕಳೆದ ವಾರ ನೆಲಮಂಗಲದ ಉದ್ಭವ ಗಣಪತಿ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ನಡೆಯಿತು. ನೆಲಮಂಗಲದ ಶಾಸಕ ಡಾ. ಕೆ. ಶ್ರೀನಿವಾಸಮೂರ್ತಿ ಈ ಚಿತ್ರದ ಮೊದಲ ದೃಶ್ಯಕ್ಕೆ ಕ್ಯಾಮರಾ ಚಾಲನೆ ಮಾಡಿದರು. ಹಿರಿಯ ನಟ ಬಿರಾದಾರ್ ಕ್ಲಾಪ್ ಮಾಡಿದರು.

    ಶ್ರೀ ವಿಕ್ಟರಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಮುತ್ತುರಾಜ್ ಛಾಯಾಗ್ರಹಣ, ರವಿನಂದನ್ ಜೈನ್ ಸಂಗೀತ, ಸೂರ್ಯಕಾಂತ್ ಸಂಕಲನ, ಸೂರ್ಯಪ್ರಕಾಶ್ ಸಾಹಸ, ಸಿದ್ಧರಾಜ್ ನರಗುಂದ ಮತ್ತು ಆ್ಯಂಟೋನಿ ಸಾಹಿತ್ಯವಿದೆ. ವಿನಯ್, ಆರತಿ, ಶೋಭರಾಜ್, ಡಾ. ಶ್ರೀನಿವಾಸಮೂರ್ತಿ ಆಯ್ಕೆಯಾಗಿದ್ದು ಉಳಿದ ತಾರಾಗಣದ ಆಯ್ಕೆ ನಡೆಯುತ್ತಿದೆ. ಪ್ರೇಮಿಗಳಿಗೆ ಅವರ ಪೋಷಕರೇ ಯಾವ ರೀತಿ ನಡೆಸಿಕೊಳ್ಳುತ್ತಾರೆ ಹಾಗೂ ವಿಲನ್ ಕೂಡಾ ಸೇರಿಕೊಂಡಾಗ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ? ಕೊನೆಯಲ್ಲಿ ಇವರ ಪ್ರೀತಿಗೆ ಗೆಲುವು ಸಿಗುತ್ತಾ, ಇಲ್ಲವಾ ಎನ್ನುವ ಕಥೆ ಹೊಂದಿರುವ ಈ ಚಿತ್ರಕ್ಕೆ ದಾಂಡೇಲಿ, ಧಾರವಾಡ, ಸಾಗರ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.