Tag: ಶಾಂತಿ ಸಭೆ

  • ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೆಂಡಾಮಂಡಲ – ನೆಲಮಂಗಲದಲ್ಲಿ ಪೌರತ್ವ ಕಾಯ್ದೆ ವಿರೋಧಿ ಸಭೆ

    ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೆಂಡಾಮಂಡಲ – ನೆಲಮಂಗಲದಲ್ಲಿ ಪೌರತ್ವ ಕಾಯ್ದೆ ವಿರೋಧಿ ಸಭೆ

    ನೆಲಮಂಗಲ: ಪೌರತ್ವ ಕಾಯ್ದೆಯ ವಿರುದ್ಧ ಮುಸ್ಲಿಂ ಸಂಘಟನೆಗಳ ವಿರೋಧ ಮುಂದುವರೆದಿದೆ. ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ಕುಣಿಗಲ್ ಬೈಪಾಸ್ ಸಮೀಪದ ಇಂದು ಮುಸ್ಲಿಂ ಸಂಘಟನೆಗಳು ಶಾಂತಿಯುತ ಪ್ರತಿಭಟನೆ ನಡೆಸಿದರು.

    ಈ ವೇಳೆ ಮಾತಾನಾಡಿದ ಮಂಗಳೂರು ಮೂಲದ ನಜ್ಮಾ ಎಂಬವರು, ಸಂಸದ ತೇಜಸ್ವಿ ಸೂರ್ಯ ಹೇಳಿಕೆಯನ್ನು ಖಂಡಿಸಿದರು. ಮಿಸ್ಟರ್ ತೇಜಸ್ವಿ ಸೂರ್ಯ ನಾನು ಪಂಕ್ಚರ್ ಹಾಕುವ ತಂದೆಯ ಮಗಳು ಎಂದು ಹೇಳುತ್ತಿದ್ದೇನೆ. ನಮ್ಮ ಎದೆ ಸೀಳಿದರೆ ನಿಜವಾದ ದೇಶಪ್ರೇಮ, ಪ್ರೀತಿ ಕಾಣುತ್ತದೆ, ನಿಮ್ಮ 56 ಇಂಚಿನ ಎದೆಯನ್ನು ಬಗೆದರೆ ಕೇವಲ ರಾಜಕೀಯ ದಳ್ಳುರಿ ಕಾಣುತ್ತದೆ ಎಂದು ಕಿಡಿಕಾರಿದರು.

    ನಿಮ್ಮ ರಾಜಕೀಯ ಕಾರಣಗಳಿಂದ ಹಿಂದೂ-ಮುಸ್ಲಿಮರನ್ನ ಕಿತ್ತಾಡುವಂತೆ ಮಾಡುತ್ತಿದ್ದೀರಾ. ನಾವು ಈ ದೇಶದ ಮೂಲ ನಿವಾಸಿಗಳು. ಆದರೆ ನಮ್ಮದು ದ್ರಾವಿಡ ಮತ್ತು ದೇಶಾಭಿಮಾನದ ಎದೆ ಎಂದು ವೇದಿಕೆಯ ಮೇಲೆ ಸಂಸದ ತೇಜಸ್ವಿ ಸೂರ್ಯಗೆ ತೀವ್ರ ತರಾಟೆಗೆ ತೆಗೆದುಕೊಂಡರು.

    ಈ ಸಭೆಯಲ್ಲಿ ತಾಲೂಕಿನ ಸಾವಿರಾರು ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು. ನೆಲಮಂಗಲ ಟೌನ್ ವ್ಯಾಪ್ತಿಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆಗಾಗಿ ಡಿಆರ್ ತುಕಡಿ, 1 ಕೆ.ಎಸ್.ಆರ್.ಪಿ ತಂಡವನ್ನು ನಿಯೋಜನೆ ಮಾಡಲಾಗಿತ್ತು.

  • ಹೆಚ್ಚು ಜನ ಸಭೆ ನಡೆಸುತ್ತಾರಷ್ಟೇ, ಯಾವುದೇ ಮೆರವಣಿಗೆಗೆ ಅವಕಾಶ ನೀಡಿಲ್ಲ- ಭಾಸ್ಕರ್ ರಾವ್

    ಹೆಚ್ಚು ಜನ ಸಭೆ ನಡೆಸುತ್ತಾರಷ್ಟೇ, ಯಾವುದೇ ಮೆರವಣಿಗೆಗೆ ಅವಕಾಶ ನೀಡಿಲ್ಲ- ಭಾಸ್ಕರ್ ರಾವ್

    – ಮೆರವಣಿಗೆಗೆ ಅವಕಾಶ ಕೇಳಿಲ್ಲ, ನೀಡಿಯೂ ಇಲ್ಲ
    – ಅಂಗಡಿ ಬಂದ್ ಮಾಡಲು ಅನುಮತಿ ನೀಡಿಲ್ಲ,
    – ಶಾಲಾ ಕಾಲೇಜುಗಳಿಗೆ ರಜೆ ಇಲ್ಲ

    ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಹಿನ್ನೆಲೆ ಶಾಂತಿ ಸಭೆ ಹಮ್ಮಿಕೊಂಡಿದ್ದು, ಈ ಹಿನ್ನೆಲೆ ಸೋಮವಾರ ಖುದ್ದೂಸ್ ಸಾಬ್ ಈದ್ಗಾ ಮೈದಾನದಲ್ಲಿ ಒಂದು ಲಕ್ಷ ಜನ ಸೇರಲಿದ್ದಾರೆ. ಹೀಗಾಗಿ ಸುತ್ತಮುತ್ತ ಹೆಚ್ಚು ಸಂಚಾರ ದಟ್ಟಣೆ ಸಂಭವಿಸುವ ಸಾಧ್ಯತೆ ಇದೆ.

    ಈ ಕುರಿತು ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ನಾಳೆ ಖುದ್ದೂಸ್ ಸಾಬ್ ಈದ್ಗಾ ಮೈದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ. ಎನ್‍ಆರ್ ಸಿ ಹಾಗೂ ಸಿಎಎ ಖಂಡಿಸಿ ಡಿ.21ರಂದು ಪ್ರತಿಭಟನೆ ಹಮ್ಮಿಕೊಂಡಿದ್ದರು. ಆದರೆ ಸಿಎಂ ಸಭೆ ನಡೆಸಿ ಮನವೊಲಿಸಿದ್ದಾರೆ. ಪ್ರತಿಭಟನೆ ನಡೆಸುವುದಿಲ್ಲ ಶಾಂತಿ ಸಭೆ ನಡೆಸುತ್ತೇವೆ ಎಂದು ಅನುಮತಿ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

    ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿ ಕ್ರಮ ಕೈಗೊಂಡಿದ್ದೇವೆ. ಕಾರ್ಯಕ್ರಮದಲ್ಲಿ ಒಂದು ಲಕ್ಷ ಜನ ಭಾಗಿಯಾಗುವ ಸಾಧ್ಯತೆಯಿದೆ. ದರ್ಗಾಕ್ಕೆ ಬರಲು ಐದು ದಾರಿಗಳಿದ್ದು, ಬಹಳ ವ್ಯಾಪಕವಾದ ಸಂಚಾರಿ ವ್ಯವಸ್ಥೆ ಮಾಡಲಾಗುತ್ತದೆ. ಮುನ್ನೆಚ್ಚರಿಕಾ ಕ್ರಮವಾಗಿ ನಾವೂ ಸಹ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಅಲ್ಲದೆ ಅಗ್ನಿಶಾಮಕ ದಳ, ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಸ್ಥಳದಲ್ಲಿ ಒಂದು ಸಾವಿರ ಕ್ಯಾಮೆರಾ ಹಾಕಲಾಗಿದೆ ಎಂದರು.

    ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1ರ ವರೆಗೆ ಕಾರ್ಯಕ್ರಮ ನಡೆಯಲಿದೆ. ಸಮುದಾಯದ ಎಲ್ಲ ಮುಖಂಡರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಲಾಗಿದೆ. ಕಾನೂನು ಕೈಗೆತ್ತಿಕೊಂಡಲ್ಲಿ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು. ನಾವು ಯಾರಿಗೂ ತೊಂದರೆ ಕೊಡುವುದಿಲ್ಲ. ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಅಹಿತಕರ ಘಟನೆ ನಡೆದರೆ ಸಂಬಂಧ ಪಟ್ಟ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.

    ನಾಳೆ ಸಾರ್ವಜನಿಕರು ಆ ರಸ್ತೆಯಲ್ಲಿ ಸಂಚರಿಸದಂತೆ ಈ ಮೂಲಕ ಮನವಿ ಮಾಡುತ್ತೇವೆ. 60 ಸಿಎಆರ್, 56 ಕೆಎಸ್‍ಆರ್‍ಪಿ ತುಕಡಿಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಎಲ್ಲ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿದೆ. ಮುಸ್ಲಿಂ ಮುಖಂಡರು ಮೆರವಣಿಗೆಗೆ ಅವಕಾಶ ಕೇಳಿಲ್ಲ, ನಾವು ನೀಡಿಯೂ ಇಲ್ಲ. ಅಂಗಡಿ ಬಂದ್ ಮಾಡುವ ಬಗ್ಗೆ ಸಹ ಅನುಮತಿ ನೀಡಿಲ್ಲ. ಶಾಲಾ ಕಾಲೇಜುಗಳು ಎಂದಿನಂತೆ ಚಾಲ್ತಿಯಲ್ಲಿರುತ್ತವೆ. ಒತ್ತಾಯ ಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

  • ಶಾಂತಿ ಸಭೆಯಲ್ಲಿ ನಿದ್ದೆ: ಗಡದ್ದಾಗಿ ತೂಕಡಿಸಿದ ಶಾಸಕರು, ಅಧಿಕಾರಿಗಳು!, ತಿಂಡಿ ಬಂದಾಗ ಎದ್ರು!

    ಶಾಂತಿ ಸಭೆಯಲ್ಲಿ ನಿದ್ದೆ: ಗಡದ್ದಾಗಿ ತೂಕಡಿಸಿದ ಶಾಸಕರು, ಅಧಿಕಾರಿಗಳು!, ತಿಂಡಿ ಬಂದಾಗ ಎದ್ರು!

    ಮಂಗಳೂರು: ಬಂಟ್ವಾಳದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವಲ್ಲಿ ರಾಜಕೀಯ ಮಾಡುತ್ತಿರುವ ಜನಪ್ರತಿನಿಧಿಗಳ ಕೆಸರೆರಚಾಟ ಮುಂದುವರಿಯುತ್ತಿದ್ದರೆ, ಗುರುವಾರ ಸರ್ಕಾರದಿಂದ ಆಯೋಜನೆಗೊಂಡಿದ್ದ ಶಾಂತಿ ಸಭೆ ಒಂದರ್ಥದಲ್ಲಿ ನಿದ್ದೆಯ ಸಭೆಯಾಗಿತ್ತು.

    ಜಿಲ್ಲೆಯಲ್ಲಿ ನಡೆಯುತ್ತಿರುವ ಗಲಾಟೆ ನಿಯಂತ್ರಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜನೆಗೊಂಡಿದ್ದ ಶಾಂತಿಸಭೆಯಲ್ಲಿ ಶಾಸಕರು, ಅಧಿಕಾರಿಗಳು ಗಡದ್ದಾಗಿ ನಿದ್ದೆ ಮಾಡಿದ್ದಾರೆ.

    ಮಂಗಳೂರು ಉತ್ತರ ವಿಧಾನಸಭೆಯ ಶಾಸಕ ಮೊಯಿದ್ದೀನ್ ಬಾವ, ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್ ಫುಲ್ ನಿದ್ದೆಗೆ ಜಾರಿದ್ದರು. ಮೊಯಿದ್ದೀನ್ ಬಾವ ಅವರು ಬಿದ್ದು ಬಿದ್ದು ತೂಕಡಿಸುತ್ತಿದ್ದರೆ, ಸಚಿವ ಯು.ಟಿ. ಖಾದರ್ ಅವರಿಗೆ ಆಗಾಗ ಆಕಳಿಕೆ ಬರುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ಜಿ ಜಗದೀಶ್ ಅವರು ನಿದ್ದೆಗೆ ಜಾರಿದ್ದರು.

    ಉಪಹಾರ ಬಂದ ಕೂಡಲೇ ನಿದ್ದೆ ಓಡಿ ಹೋಗಿತ್ತು. ನಿದ್ದೆಯಿಂದ ಕಣ್ಣೊರೆಸಿಕೊಂಡು ಶಾಸಕರು ತಿಂಡಿ ತಿನ್ನುತ್ತಿದ್ದರು.

    ಈ ಶಾಂತಿ ಸಭೆಗೆ ಬಿಜೆಪಿಯವರು ಬಹಿಷ್ಕಾರ ಹಾಕಿದ್ದರೆ, ಶಾಂತಿಯಾತ್ರೆಗೆ ಪೊಲೀಸರು ಅನುಮತಿ ನೀಡಿಲ್ಲ ಎಂದು ಜೆಡಿಎಸ್ ನಾಯಕರು ಹೊರ ನಡೆದರು. ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಲು ತೀರ್ಮಾನವಾಗಿದ್ದು, ಗೆರಿಲ್ಲಾ ರೀತಿಯ ದಾಳಿ ನಡೆಯುತ್ತಿದೆ ಅಂತ ಸಭೆಯಲ್ಲಿ ಆತಂಕ ವ್ಯಕ್ತವಾಯಿತು.

    ಶಾಂತಿ ಸಭೆಗೆ ಬರಬೇಕಾದವರೇ ಬಂದಿಲ್ಲ. ಅವರು ಯಾಕೆ ಬಂದಿಲ್ಲ ಎಂದು ಗೊತ್ತಿಲ್ಲ. ಶಾಂತಿ ನೆಲೆಸುವ ಉದ್ದೇಶ ಇದ್ದವರು ಬಂದಿದ್ದೇವೆ ಎಂದು ಬಿಜೆಪಿ ವಿರುದ್ಧ ಸಚಿವ ರಮಾನಾಥ್ ರೈ ಮತ್ತು ಖಾದರ್ ಕಿಡಿಕಾರಿದರು. ಇನ್ನು, ಬಿಜೆಪಿಗೆ ಶಾಂತಿ ನೆಲೆಸುವುದು ಅಗತ್ಯ ಇಲ್ಲ. ಘಟನೆಯನ್ನು ಬಿಜೆಪಿ ಚುನಾವಣೆಗಾಗಿ ಉಪಯೋಗಿಸುತ್ತಿದೆ ಅಂತ ಕಮ್ಯುನಿಸ್ಟ್ ನಾಯಕರು ವಾಗ್ದಾಳಿ ನಡೆಸಿದರು.