Tag: ಶಸ್ತ್ರಚಿಕಿತ್ಸೆ

  • 12 ಗಂಟೆ ಶಸ್ತ್ರಚಿಕಿತ್ಸೆ,  6 ಬಾರಿ ಹೃದಯಾಘಾತದ ಬಳಿಕ ಬದುಕುಳಿದ 45 ದಿನದ ಮಗು!

    12 ಗಂಟೆ ಶಸ್ತ್ರಚಿಕಿತ್ಸೆ, 6 ಬಾರಿ ಹೃದಯಾಘಾತದ ಬಳಿಕ ಬದುಕುಳಿದ 45 ದಿನದ ಮಗು!

    ಮುಂಬೈ: ಸಾಮಾನ್ಯವಾಗಿ ಹೃದಯಾಘಾತವಾಗಿ ಬದುಕುಳಿದ ಮಂದಿ ತುಂಬಾ ವಿರಳ. ಅಂತದ್ದರಲ್ಲಿ 6 ಬಾರಿ ಹೃದಯಾಘಾತವಾಗಿ 45 ದಿನದ ಪುಟ್ಟ ಮಗುವೊಂದು ಬದುಕುಳಿದ ಅಚ್ಚರಿಯ ಘಟನೆಯೊಂದು ನಡೆದಿದೆ.

    ಹೌದು. ಮುಂಬೈನ ಕಲ್ಯಾಣ್ ನಿವಾಸಿಗಳಾದ ವಿಶಾಖ ಹಾಗೂ ವಿನೋದ್ ದಂಪತಿಯ ಪುತ್ರಿ ವಿಧಿಶಾ ಸತತ 12 ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ಬದುಕುಳಿದ ಪುಟಾಣಿ.

    45 ದಿನದ ಈ ಪುಟ್ಟ ಕಂದಮ್ಮನಿಗೆ ಮೊದಲು ತಾಯಿಯ ಹಾಲು ಕುಡಿದ ತಕ್ಷಣವೇ ವಾಂತಿಯಾಗುತ್ತಿತ್ತು. ಅಲ್ಲದೇ ಕೂಡಲೇ ಪ್ರಜ್ಞೆ ತಪ್ಪುತ್ತಿತ್ತು. ಎಚ್ಚರಿಸಿದ್ರೂ ಮತ್ತೆ ಮತ್ತೆ ಹಾಗೇ ಆಗುತ್ತಿತ್ತು. ಈ ಘಟನೆ ನಮ್ಮನ್ನ ಬೆಚ್ಚಿ ಬೀಳಿಸಿತ್ತು. ಕೂಡಲೇ ಸ್ಥಳೀಯ ನರ್ಸಿಂಗ್ ಹೋಂ ಗೆ ಮಗುವನ್ನು ಕರೆತೆರಲಾಯಿತು. ಆದ್ರೆ ಅಲ್ಲಿನ ವೈದ್ಯರು ಆಕೆಯನ್ನು ಮುಂಬೈನ ಬಿಜೆ ವಾಡಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ರು. ಅಂತೆಯೇ ಆಕೆಯನ್ನು ಪರೀಕ್ಷಿಸಿದ ಅಲ್ಲಿನ ತಜ್ಞ ವೈದ್ಯ ಡಾ.ಬಿಸ್ವಾ ಪಂಡಾ ಹೃದಯದ ತೊಂದರೆ ಇರುವುದಾಗಿ ಪತ್ತೆ ಮಾಡಿದ್ದಾರೆ. ಬಳಿಕ ಮಾರ್ಚ್ 14ರಂದು 12 ಗಂಟೆಗಳ ಕಾಲ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

    ಸರ್ಜರಿ ಬಳಿಕ 51 ದಿನಗಳ ಕಾಲ ಮಗುವನ್ನು ಐಸಿಯುನಲ್ಲಿ ಇಡಲಾಗಿತ್ತು. ಈ ವೇಳೆ 6 ಬಾರಿ ಮಗುವಿಗೆ ಹೃದಯಾಘಾತವಾಗುವ ಹಂತಕ್ಕೆ ತಲುಪಿದ್ಳು. ಒಂದು ಬಾರಿ ಆಕೆಗೆ ಹೃದಯಘಾತವಾಗಿ ಚೇತರಿಕೆ ಕಾಣಲು ಆಕೆಗೆ 15 ನಿಮಿಷಗಳೇ ಬೇಕಾಗಿತ್ತು ಅಂತಾ ವೈದ್ಯರು ಹೇಳಿದ್ದಾರೆ.

    ಮಗುವಿನ ಚಿಕಿತ್ಸೆಗೆ 5 ಲಕ್ಷ ರೂಪಾಯಿ ವೆಚ್ಚವಾಗಿದ್ದು, ದಾನಿಗಳು ಆಸ್ಪತ್ರೆಯ ಶುಲ್ಕ ಕಟ್ಟಲು ನೆರವಾಗಿದ್ದಾರೆ. ಹಾಗೂ ಮಗುವಿನ ಹತ್ತವರಾದ ವಿಶಾಖಾ ಮತ್ತು ವಿನೋದ್ ಈಗಾಗಲೇ 25,000 ರೂ. ಅನ್ನು ಆಸ್ಪತ್ರೆಗೆ ನೀಡಿದ್ದಾರೆ.

    ವಿಧಿಶಾಗೆ ಈಗ ನಾಲ್ಕು ತಿಂಗಳಾಗಿದ್ದು, ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾಳೆ. ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೂಡ ಆಗಲಿದ್ದಾಳೆ ಅಂತಾ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.

  • ಕಲಬುರಗಿಯಲ್ಲಿ ಹೆಚ್ಚಾಗುತ್ತಿದೆ ಗರ್ಭಕೋಶ ತೆಗೆಯುವ ದಂಧೆ

    ಕಲಬುರಗಿಯಲ್ಲಿ ಹೆಚ್ಚಾಗುತ್ತಿದೆ ಗರ್ಭಕೋಶ ತೆಗೆಯುವ ದಂಧೆ

    – ಮಹಿಳಾ ಆಯೋಗವೇ ವರದಿ ಕೊಟ್ರೂ ಕಣ್ಮುಚ್ಚಿ ಕುಳಿತ ಸರ್ಕಾರ

    ಕಲಬುರಗಿ: ವೈದ್ಯಕೀಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತವರು ಜಿಲ್ಲೆಯಲ್ಲಿ ಗರ್ಭಕೋಶ ತೆಗೆಯುವ ದಂಧೆ ವ್ಯಾಪಕವಾಗಿ ನಡೆಯುತ್ತಿದೆ.ಕೆಲ ಖಾಸಗಿ ಆಸ್ಪತ್ರೆಗಳು ಈ ದಂಧೆಯಲ್ಲಿ ಶಾಮೀಲಾಗಿವೆ. ಖುದ್ದು ರಾಜ್ಯ ಮಹಿಳಾ ಆಯೋಗವೇ ಸರ್ಕಾರಕ್ಕೆ ವರದಿ ಸಲ್ಲಿಸಿ ತಿಂಗಳುಗಳು ಕಳೆದಿದೆ. ಆದ್ರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

    ಸಾಮಾನ್ಯವಾಗಿ ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಆದ್ರೆ ಅವರ ಜೀವ ಕಾಪಾಡುವ ದೃಷ್ಟಿಯಿಂದ ಗರ್ಭಕೋಶ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಆದ್ರೆ ಕಲಬುರಗಿ ಜಿಲ್ಲೆಯ ಕೆಲ ಖಾಸಗಿ ಆಸ್ಪತ್ರೆಗಳು ಇದನ್ನೇ ಬಂಡವಾಳ ಮಾಡಿಕೊಂಡಿದ್ದು, ಹೊಟ್ಟೆ ನೋವು ಹಾಗೂ ಬಿಳಿ ಮುಟ್ಟಿನ ಸಮಸ್ಯೆ ಎದುರಿಸುವ ಮಹಿಳೆಯರ ಗರ್ಭಕೋಶ ತೆಗೆಯುವ ದಂಧೆ ಮಾಡುತ್ತಿದ್ದಾರೆ.

    ರಾಜ್ಯ ಮಹಿಳಾ ಆಯೋಗ 2015ರಲ್ಲಿ ಕೆ.ನೀಲಾ ನೇತೃತ್ವದಲ್ಲಿ 6 ಜನರ ತಂಡ ರಚಿಸಿ ಈ ಬಗ್ಗೆ ವರದಿ ನೀಡುವಂತೆ ಸೂಚಿಸಿತ್ತು. ಜಿಲ್ಲೆಯಾದ್ಯಂತ ಸಂಚರಿಸಿದ ತಂಡಕ್ಕೆ ಸಿಕ್ಕ ಮಾಹಿತಿ ನಿಜಕ್ಕೂ ಬೆಚ್ಚಿ ಬೀಳಿಸುತ್ತಿದ್ದು, 1 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಬೇಕಾಬಿಟ್ಟಿ ಗರ್ಭಕೋಶ ತೆಗೆದಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

    ಗರ್ಭಕೋಶ ತೆಗೆಯುವ ಅನಿವಾರ್ಯತೆ ಎದುರಾದ್ರೆ ಹಲವು ವೈದ್ಯಕೀಯ ಪರೀಕ್ಷೆ ನಡೆಸಬೇಕಾಗುತ್ತದೆ. ಆದರೆ ಕಲಬುರಗಿ ಜಿಲ್ಲೆಯ ಕೆಲ ಖಾಸಗಿ ಆಸ್ಪತ್ರೆಗಳು ಹಣಕ್ಕಾಗಿ ಗರ್ಭಕೋಶ ತೆಗೆಯುವ ದಂಧೆ ನಡೆಸುತ್ತಿವೆ. ಇದನ್ನರಿತ ಜಿಲ್ಲಾಡಳಿತ 4 ಆಸ್ಪತ್ರೆಗಳ ಲೈಸೆನ್ಸ್ ಕೂಡ ರದ್ದು ಮಾಡಿತ್ತು. ಇಷ್ಟಾದ್ರೂ ವೈದ್ಯರು ಬೇರೆ ಹೆಸರಿನಲ್ಲಿ ಲೈಸೆನ್ಸ್ ಪಡೆದು ಮತ್ತೆ ದಂಧೆ ಮಾಡ್ತಿದ್ದಾರೆ.

    ಸಮಸ್ಯೆ ನಿವಾರಣೆಗೆ ಹೋಗುವ ಮಹಿಳೆಯರ ಗರ್ಭಕೋಶಕ್ಕೆ ಕತ್ತರಿ ಹಾಕಿ ದುಡ್ಡು ಮಾಡುವ ದಂಧೆಯನ್ನು ಆರೋಗ್ಯ ಇಲಾಖೆ ಮಟ್ಟ ಹಾಕಬೇಕಿದೆ. ಕಲಬುರಗಿ ಜಿಲ್ಲೆಯಲ್ಲಿ ಮಾತ್ರವಲ್ಲದೆ ಇನ್ನೂ ಬೇರೆ ಬೇರೆ ಜಿಲ್ಲೆಯಲ್ಲೂ ದಂಧೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.