Tag: ವೃಷಭಾವತಿ ನದಿ

  • ಬೆಂಗಳೂರಿನ ಮಳೆಗೆ ವೃಷಭಾವತಿಯ ರೌದ್ರ ನರ್ತನ- ಮೈಸೂರು ರಸ್ತೆಯ ಅರ್ಧ ಭಾಗ ಕುಸಿತ

    ಬೆಂಗಳೂರಿನ ಮಳೆಗೆ ವೃಷಭಾವತಿಯ ರೌದ್ರ ನರ್ತನ- ಮೈಸೂರು ರಸ್ತೆಯ ಅರ್ಧ ಭಾಗ ಕುಸಿತ

    – ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ

    ಬೆಂಗಳೂರು: ಸಿನಿಕಾನ್ ಸಿಟಿಯಲ್ಲಿ ಇಂದು ಸುರಿದ ಧಾರಾಕಾರ ಮಳೆ ಭಾರೀ ಅವಾಂತರ ಸೃಷ್ಟಿಸಿದ್ದು, ವೃಷಭಾವತಿ ನದಿಯ ರೌದ್ರ ನರ್ತನಕ್ಕೆ ಕೆಂಗೇರಿ ಬಳಿ ತಡೆಗೋಡೆ ಸೇರಿ ಅರ್ಧ ರಸ್ತೆ ಕೊಚ್ಚಿ ಹೋಗಿದೆ. ಭಾರೀ ಪ್ರಮಾಣದ ನೀರು ರಸ್ತೆಗೆ ನುಗ್ಗಿದ್ದು, ಅರ್ಧ ಬಸ್ ಮುಳುಗಿದರೆ, ಕಾರುಗಳು ತೇಲುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

    ಕೆಂಗೇರಿಯಲ್ಲಿ ಬರೋಬ್ಬರಿ 65.5 ಮಿಲಿ ಮೀಟರ್ ಮಳೆ ಬಿದ್ದಿದ್ದು, ಹೀಗಾಗಿ ವೃಷಭಾವತಿ ನದಿಯ ಒಳ ಹರಿವು ಹೆಚ್ಚಾಗಿದೆ. ಇದರಿಂದಾಗಿ ಮೈಸೂರು ರಸ್ತೆ ತಡೆಗೋಡೆ ಕೊಚ್ಚಿ ಹೋಗಿದೆ. ಕೆಂಗೇರಿಯ ದುಬಾಸಿಪಾಳ್ಯ ಬಳಿ ತಡೆಗೋಡೆ ಕೊಚ್ಚಿ ಹೋಗಿದ್ದು, ನದಿಯ ಹರಿವಿನ ರಭಸಕ್ಕೆ ಅರ್ಧ ರಸ್ತೆ ಸಹ ಕುಸಿದಿದೆ. ರಸ್ತೆ ಮೇಲೆ 5 ಅಡಿಯಷ್ಟು ನೀರು ನಿಂತಿದ್ದು, ಕೆಲ ಕಾರುಗಳು ತೇಲುತ್ತಿವೆ. ಬಸ್‍ಗಳು ಸಹ ಅರ್ಧದಷ್ಟು ಮುಳುಗಿವೆ. ಕಾರನ್ನು ರಸ್ತೆಯಲ್ಲಿಯೇ ಬಿಟ್ಟು ಚಾಲಕ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಕಾರು ನಿರಲ್ಲಿ ತೆಲುತ್ತಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ರಸ್ತೆ ತಡೆಗೋಡೆ ಹಾಗೂ ಅರ್ಧ ರಸ್ತೆ ಕೊಚ್ಚಿ ಹೋಗಿದ್ದರಿಂದ ಕೆಲ ಕಾಲ ಸಂಚಾರವನ್ನು ನಿಷೇಧಿಸಲಾಗಿತ್ತು. ನಂತರ ಏಕಮುಖ ಸಂಚಾರ ವ್ಯವಸ್ಥೆ ಮಾಡಿ ವಾಹನಗಳನ್ನು ಬಿಡಲಾಗುತ್ತಿದೆ. ಮಳೆ ನಿಂತರೂ ನದಿಯಲ್ಲಿ ಪ್ರವಾಹ ಇಳಿದಿಲ್ಲ. ಇದರಿಂದಾಗಿ ವಾಹನ ಸವಾರರು ತೀವ್ರ ಆತಂಕಗೊಂಡಿದ್ದಾರೆ. ಯಾವಾಗಲೂ ಬ್ಯುಸಿಯಾಗಿರುತ್ತಿದ್ದ ರಸ್ತೆ ಕೊಚ್ಚಿ ಹೋಗಿದ್ದರಿಂದ ಕಿಲೋಮೀಟರ್‍ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ. ಪೊಲೀಸರು ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

    ಸ್ಥಳಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ಮೈಸೂರು ರಸ್ತೆಯಲ್ಲಿ ನದಿಗೆ ಕಟ್ಟಿದ ತಡೆಗೋಡೆ ಬಿದಿದ್ದೆ ಹಾಗೂ ರಸ್ತೆ ಕೂಡ ಕುಸಿದಿದೆ. ಎಂಜಿನಿಯರ್ಸ್ ಪ್ರಕಾರ ಮೆಟ್ರೋ ಪಿಲ್ಲರ್‍ಗೆ ಏನೂ ಆಗುವುದಿಲ್ಲ ಎಂದಿದ್ದಾರೆ. ಜನರಿಗೆ ಏನಾದರೂ ಅಪಾಯವಾಗಿದೆಯೇ ಎಂದು ಪರಿಶೀಲಿಸಲು ಸ್ಥಳಕ್ಕೆ ಬಂದಿದ್ದೇನೆ. ಇದೀಗ ಮೈಸೂರ್ ರಸ್ತೆಯ ಒಂದು ಬದಿಯನ್ನು ಬಂದ್ ಮಾಡಿದ್ದೇವೆ. ಕಾಮಗಾರಿ ಮುಗಿಯುವವರೆಗೂ ರಸ್ತೆ ಬಂದ್ ಮಾಡಲಾಗಿದೆ ಎಂದು ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ.

    ಮಳೆ ನೀರು ಕಾಲುವೆ ಮುಖ್ಯ ಎಂಜಿನಿಯರ್ ಬಸವರಾಜ್ ಈ ಕುರಿತು ಪ್ರತಿಕ್ರಿಯಿಸಿ, ವೃಷಭಾವತಿ ನದಿಯ ತಡೆಗೋಡೆ 150ಕ್ಕೂ ಹೆಚ್ಚು ಮೀಟರ್ ಕುಸಿದಿದ್ದು, ರಸ್ತೆ ಸಹ ಕುಸಿಯುತ್ತಿದೆ. ನೀರು ಕಡಿಮೆಯಾದ ತಕ್ಷಣ ಕಾಮಗಾರಿ ಪ್ರಾರಂಭ ಮಾಡುತ್ತೇವೆ. ಮೊದಲು ರಸ್ತೆ ಮತ್ತೆ ಕುಸಿಯದಂತೆ ಮರಳಿನ ಚೀಲ ಹಾಕುತ್ತೇವೆ. ಮೆಟ್ರೋ ಪಿಲ್ಲರ್‍ಗೆ ಸದ್ಯಕ್ಕೆ ಯಾವುದೇ ಅಪಾಯ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.

  • ವೃಷಭಾವತಿ ದಡದಲ್ಲಿ ಸುಡ್ತಿದ್ದಾರೆ ಕೆಮಿಕಲ್, ಪ್ಲಾಸ್ಟಿಕ್ – ದೂರು ಕೊಟ್ರು ಕ್ಯಾರೆ ಅನ್ನಲ್ಲ

    ವೃಷಭಾವತಿ ದಡದಲ್ಲಿ ಸುಡ್ತಿದ್ದಾರೆ ಕೆಮಿಕಲ್, ಪ್ಲಾಸ್ಟಿಕ್ – ದೂರು ಕೊಟ್ರು ಕ್ಯಾರೆ ಅನ್ನಲ್ಲ

    ಬೆಂಗಳೂರು: ಸಿಲಿಕಾನ್ ಸಿಟಿಯ ಕೊಳಚೆ ನೀರು ಸೇರಿ ವೃಷಭಾವತಿ ನದಿ ಈಗಾಗಲೇ ಕೊಳಚೆ ಗುಂಡಿ ರೀತಿ ಆಗಿ ಹೋಗಿದೆ. ಇನ್ನು ನದಿ ಜಾಗವನ್ನ ಸುತ್ತಲಿನ ಹಲವು ಕಾರ್ಖಾನೆಗಳು ಒತ್ತುವರಿ ಮಾಡಿಕೊಂಡಿದೆ ಎನ್ನುವ ಆರೋಪವೂ ಇದೆ. ಈ ಮಾಲಿನ್ಯ ಮಧ್ಯೆ ವೃಷಭಾವತಿ ನದಿ ದಡದಲ್ಲಿ ಪ್ಲಾಸ್ಟಿಕ್ ಸುಡುವ ಕೆಲಸ ಕೂಡ ಇತ್ತೀಚೆಗೆ ಹೆಚ್ಚಾಗಿದೆ.

    ಕತ್ತಲಾಗುತ್ತಲೇ ವೇಸ್ಟ್ ಪ್ಲಾಸ್ಟಿಕ್ ತಂದು ನದಿ ದಡದಲ್ಲಿ ಬೆಂಕಿ ಹಚ್ಚಿ ಸುಡಲಾಗುತ್ತಿದೆ. ಅದರಿಂದ ಬರುವ ವಿಷಪೂರಿತ ಹೊಗೆಯಿಂದ ವೃಷಭಾವತಿಯ ಅಸುಪಾಸಿನ ಅಪಾರ್ಟ್‌ಮೆಂಟ್‌ ನಿವಾಸಿಗಳು ಆರೋಗ್ಯ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ತರೇಹವರಿ ಪ್ಲಾಸ್ಟಿಕ್ ಸುಡುವುದರ ಜೊತೆಗೆ ಬಾಯ್ಲರ್ ಗಳಿಂದ ಹೊರಬರುವ ಕೆಮಿಕಲ್ ಮಿಶ್ರಿತ ನೀರನ್ನ ಕೂಡ ವೃಷಭಾವತಿ ನದಿಗೆ ಬಿಡಲಾಗುತ್ತಿದೆ. ಈ ಕೆಮಿಕಲ್‍ಗಳು ನದಿ ನೀರು ಸೇರುತ್ತಿರುವುದರಿಂದ ಪ್ಲಾಸ್ಟಿಕ್, ಕೆಮಿಕಲ್ ಸೇರಿ ಹೊಗೆ ಹೆಚ್ಚಾಗುತ್ತಿದ್ದು, ನದಿ ಪಾತ್ರದ ಜನರಿಗೆ ಉಸಿರಾಡಲು ಕೂಡ ಕಷ್ಟವಾಗುತ್ತಿದೆ.

    ಗ್ರಾಮ ಪಂಚಾಯ್ತಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯರು ದೂರು ನೀಡಿ, ನಮಗೆ ಈ ಕೆಮಿಕಲ್ ಹೊಗೆಯಿಂದ ರಕ್ಷಣೆ ಕೊಡಿ ಎಂದು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಒಂದೆಡೆ ಬೆಂಗಳೂರಿನ ಏಕ ಮಾತ್ರ ನದಿಯನ್ನ ಹಾಳು ಮಾಡಿ, ನದಿ ಜಾಗವನ್ನ ಕಬ್ಜ ಮಾಡಿಕೊಂಡು, ನದಿ ಹಾಗೂ ಅದರ ಸುತ್ತಲಿನ ಪರಿಸರವನ್ನ ಹಾಳು ಮಾಡುತ್ತಿದ್ದಾರೆ. ಇನ್ನೊಂದೆಡೆ ನದಿ ಆಸುಪಾಸಿನ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ.

    ಅಷ್ಟೇ ಅಲ್ಲದೆ ಪರಿಸರಕ್ಕೆ ಮಾರಕವಾಗಿರುವ ಈ ಕೆಮಿಕಲ್ ಹಾಗೂ ಪ್ಲಾಸ್ಟಿಕ್ ಸುಡುವುದರ ಹೊಗೆಯಿಂದಾಗಿ ಸುತ್ತಲಿನ ಪ್ರಾಣಿ ಪಕ್ಷಿಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಜರುಗಿಸಿ, ಕೆಮಿಕಲ್, ಪ್ಲಾಸ್ಟಿಕ್ ಸುಡುವ ಕಿಡಿಗೇಡಿಗಳಿಗೆ ಶಿಕ್ಷೆ ನೀಡದೇ ಇದ್ದರೆ, ಈ ಮಾಲಿನ್ಯ ಪರಿಸರವನ್ನು ಅಪೋಷನೆ ತೆಗೆದುಕೊಳ್ಳೊಸಂತು ಸತ್ಯ. ಈಗಲಾದರೂ ಅಧಿಕಾರಿಗಳು ಇತ್ತ ಗಮನ ಕೊಟ್ಟು ವೃಷಭಾವತಿ ನದಿಯನ್ನು, ಅದರ ಜಲಚರಗಳನ್ನು ಹಾಗೂ ಸುತ್ತಮುತ್ತಲು ವಾಸಿಸುವ ಪ್ರಾಣಿ, ಪಕ್ಷಿ, ಜನರ ಜೀವವನ್ನು ರಕ್ಷಿಸಬೇಕಿದೆ.

  • ನದಿ ಪುನಶ್ಚೇತನಕ್ಕೆ ಯುವ ಬ್ರಿಗೇಡ್‍ನಿಂದ ರನ್ ಫಾರ್ ವೃಷಭಾವತಿ

    ನದಿ ಪುನಶ್ಚೇತನಕ್ಕೆ ಯುವ ಬ್ರಿಗೇಡ್‍ನಿಂದ ರನ್ ಫಾರ್ ವೃಷಭಾವತಿ

    ಬೆಂಗಳೂರು: ಒಂದು ಕಾಲದಲ್ಲಿ ಸ್ವಚ್ಛಂದವಾಗಿ ಹರಿಯುತ್ತಿದ್ದ ವೃಷಭಾವತಿ ನದಿ ಇದೀಗ ಕೆಂಗೇರಿ ಮೋರಿಯಾಗಿ ಪರಿವರ್ತನೆಯಾಗಿದೆ. ಇದರ ಪುನಶ್ಚೇತನಕ್ಕಾಗಿ ಯುವ ಬ್ರಿಗೇಡ್ ಪಣ ತೊಟ್ಟಿದ್ದು, ವೃಷಭಾವತಿ ಉಳಿಸಲು ರನ್ ಫಾರ್ ವೃಷಭಾವತಿ ಮ್ಯಾರಾಥಾನ್ ಮೂಲಕ ಜಾಗೃತಿ ಮೂಡಿಸಿತು.

    ಜೀವಜಲ, ನದಿ ಮೂಲಗಳನ್ನು ಉಳಿಸಿ ಎನ್ನುವ ಕೂಗು ಎಲ್ಲೆಡೆಯಿಂದಲೂ ಕೇಳಿಬರುತ್ತಿದೆ. ಕಾವೇರಿ ಕೂಗಿಗೆ ವ್ಯಾಪಕ ಬೆಂಬಲ ವ್ಯಕ್ತವಾದ ಬೆನ್ನಲ್ಲೇ ಈಗ, ಒಂದು ಕಾಲದಲ್ಲಿ ಬೆಂಗಳೂರಿನ ಜೀವನಾಡಿಯಾಗಿದ್ದ ವೃಷಭಾವತಿ ಉಳಿಸಿ ಅನ್ನೋ ಕೂಗು ಸಹ ಕೇಳಿಬರುತ್ತಿದೆ. ಯುವ ಬ್ರಿಗೇಡ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಅಭಿಯಾನಕ್ಕೆ ಸಿನಿಮಾ ಸ್ಟಾರ್‍ಗಳು ಸೇರಿದಂತೆ ಸಾವಿರಾರು ಜನ ಕೈ ಜೋಡಿಸಿದ್ದು, ರನ್ ಫಾರ್ ವೃಷಾಭಾವತಿ ಮೂಲಕ ಗಮನ ಸೆಳೆಯಲಾಯಿತು.

    ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಕೆಂಗೇರಿ ಉಪನಗರದಿಂದ ಬೆಂಗಳೂರು ವಿಶ್ವವಿದ್ಯಾಲಯದವರೆಗೂ 6 ಕಿ.ಮೀ. ಮ್ಯಾರಥಾನ್ ನಡೆಸಲಾಯಿತು. 3 ಸಾವಿರಕ್ಕೂ ಅಧಿಕ ಸಾರ್ವಜನಿಕರು ಭಾಗವಹಿಸಿದ್ದರು. ನಗರದ ಮಧ್ಯ ಹರಿಯುತ್ತಿರುವ ವೃಷಾಭಾವತಿ ನದಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚು ಜನ ಭಾಗವಹಿಸುವ ಮೂಲಕ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಉತ್ತಮ ಆರಂಭವಾದಂತಾಗಿದೆ. ನದಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ತಜ್ಞರು, ಬಿಬಿಎಂಪಿ ಎಂಜಿನಿಯರ್ ಹಾಗೂ ಸರ್ಕಾರದೊಂದಿಗೆ ಚರ್ಚಿಸಲಾಗಿದ್ದು 3 ವರ್ಷದಲ್ಲಿ ನದಿಯನ್ನು ಪುನಶ್ಚೇತನಗೊಳಿಸಲಾಗುವುದು ಎಂದು ತಿಳಿಸಿದರು.

    ಅಭಿಯಾನದಲ್ಲಿ ಸಂಸದ ತೇಜಸ್ವಿಸೂರ್ಯ, ತೇಜಸ್ವಿನಿ ಅನಂತ್ ಕುಮಾರ್, ನಟ ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು. ಮಳೆಯನ್ನು ಲೆಕ್ಕಿಸದೇ 6 ಕಿ.ಮೀ ಓಡುವ ಮೂಲಕ ಜಾಗೃತಿ ಮೂಡಿಸಿದರು. ಸೇವ್ ವೃಷಭಾವತಿ ಎಂಬ ಕೂಗು ಜೋರಾಗಿತ್ತು.