ಬೆಂಗಳೂರು: ವೃದ್ಧಾಶ್ರಮಕ್ಕೆ (Old Age Home) ಸೇರಿಸಿದ್ದಕ್ಕೆ ಮನನೊಂದು ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ (Bengaluru) ಜೆಪಿ ನಗರದಲ್ಲಿ (JP Nagar) ನಡೆದಿದೆ.
ನಗರದ ಎಂಟನೇ ಹಂತದ ವೃದ್ಧಾಶ್ರಮದಲ್ಲಿ ಘಟನೆ ನಡೆದಿದೆ. ಕೃಷ್ಣಮೂರ್ತಿ (81), ರಾಧ (74) ಆತ್ಮಹತ್ಯೆಗೆ ಶರಣಾದ ದಂಪತಿ. ಮನೆಯಲ್ಲಿ ಸೊಸೆ ಮಾಡಿದ ಅಡುಗೆ ಚೆನ್ನಾಗಿರಲ್ಲ ಎಂಬ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಈ ಹಿನ್ನೆಲೆ ವಯಸ್ಸಾದ ತಂದೆ ತಾಯಿಯನ್ನು ಮಗ ಕಳೆದ ತಿಂಗಳು ವೃದ್ಧಾಶ್ರಮಕ್ಕೆ ಸೇರಿಸಿದ್ದ. ಇದರಿಂದ ನೊಂದ ವೃದ್ಧ ದಂಪತಿ ಸೋಮವಾರ ರಾತ್ರಿ ವೃದ್ಧಾಶ್ರಮದಲ್ಲಿ ನೇಣಿಗೆ ಶರಣಾಗಿದ್ದಾರೆ. ಇದನ್ನೂ ಓದಿ: ಮಾವು ಬೆಳೆಗೆ ಬೆಂಬಲ ಬೆಲೆ ಕೊಡಿಸಿದ್ದು ಕುಮಾರಣ್ಣ, ಡಿಕೆ ಬ್ರದರ್ಸ್ ಏನ್ಮಾಡ್ತಿದ್ದಾರೆ: ನಿಖಿಲ್ ಕಿಡಿ
ಮಡಿಕೇರಿ: ಗ್ಯಾಸ್ ಸಿಲಿಂಡರ್ (Gas Cylinder) ಸ್ಫೋಟಗೊಂಡು ದಂಪತಿ ಮೃತಪಟ್ಟ ಹಿನ್ನೆಲೆಯಲ್ಲಿ ಇದೀಗ ಅವರು ನಡೆಸುತ್ತಿದ್ದ ವೃದ್ಧಾಶ್ರಮ ಅನಾಥವಾಗಿದೆ.
ಸದ್ಯ ಹಿರಿಜೀವಗಳ ಸಂಕಷ್ಟದ ಸ್ಥಿತಿಯನ್ನು ಕಂಡ ಪಬ್ಲಿಕ್ ಟಿವಿ, ತಕ್ಷಣವೇ ಕೊಡಗು ಉಸ್ತುವಾರಿ ಸಚಿವ ಹಾಗೂ ಸಣ್ಣ ನೀರಾವರಿ ಸಚಿವರಾಗಿರುವ ಬೋಸರಾಜ್ ಅವರಿಗೆ ಕರೆ ಮಾಡಿ ಆಶ್ರಮದ ಸ್ಥಿತಿ ಬಗ್ಗೆ ವಿವರಣೆ ನೀಡಿದೆ. ಈ ಬೆನ್ನಲ್ಲೇ ಉಸ್ತುವಾರಿ ಸಚಿವರು ಪಬ್ಲಿಕ್ ಟಿವಿ ಮನವಿಗೆ ಸ್ಪಂದಿಸಿ ಆಶ್ರಮಕ್ಕೆ ಯಾವುದೇ ನ್ಯೂನತೆಗಳು ಅಗದಂತೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ದಂಪತಿ ಸಾವು- ಅನಾಥವಾದ ವೃದ್ಧಾಶ್ರಮ
ಬೆಂಗಳೂರಿನ ವಿಕಾಸಸೌಧದಲ್ಲಿ ಮಾತಾನಾಡಿದ ಅವರು, ಅನಿಲ ಸೋರಿಕೆಯಿಂದ ಉಂಟಾದ ಬೆಂಕಿ ಅವಘಡದಲ್ಲಿ ಪತಿ-ಪತ್ನಿ ಇಬ್ಬರು ಮೃತಪಟ್ಟಿರುವುದು ವಿಷಾದನೀಯ. ಆದರೆ ಪಬ್ಲಿಕ್ ಟಿವಿ ಅವರು ತಕ್ಷಣವೇ ಆಶ್ರಮ ಬಗ್ಗೆ ಮಾಹಿತಿ ನೀಡಿದ್ದು, ಎಲ್ಲಾ ರೀತಿಯಲ್ಲಿ ಆಶ್ರಮಕ್ಕೆ ಸ್ಪಂದಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಹೀಗಾಗಿ ಎಲ್ಲಾ ಅಧಿಕಾರಿಗಳು ಭೇಟಿ ನೀಡಿ ತಕ್ಷಣವೇ ಸ್ಪಂದಿಸುತ್ತಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರು/ಉಡುಪಿ: ತಂದೆ-ತಾಯಿಗೆ ವಯಸ್ಸಾಯ್ತು ಅಂತಾ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿರುವ ಕಾರಣ ವೃದ್ಧಾಶ್ರಮಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಆದರೆ ಇಲ್ಲೊಬ್ಬ 23ರ ತರುಣ ವೃದ್ಧಾಶ್ರಮವನ್ನ ಕಟ್ಟಿ ಬೀದಿಯಲ್ಲಿ ಬಿದ್ದಿದ್ದವರನ್ನ ತಂದು ನೋಡಿಕೊಳ್ಳತ್ತಿದ್ದಾರೆ.
ಮೂಲತಃ ಕುಂದಾಪುರದವರಾದ ರಂಜಿತ್ ಶೆಟ್ಟಿ (Ranjith Shetty Kundapura) ಬಾಲ್ಯದಲ್ಲೇ ಮನೆ ಬಿಟ್ಟು ಬೆಂಗಳೂರಿಗೆ ಬಂದು ನಾನಾ ಕಡೆ ಕೆಲಸ ಮಾಡಿ, ಬೀದಿಯಲ್ಲೇ ಜೀವನ ಕಳೆದ್ದಿದ್ದರು. ಆದರೆ ತಾನು ಆ ದಿನಗಳಲ್ಲಿ ಬೀದಿಯಲ್ಲಿ ಅನುಭವಿಸಿದ್ದ ನೋವು, ಹಸಿವು, ಸಂಕಟ ಯಾರಿಗೂ ಬರಬಾರದು ಅನ್ನೋ ಉದ್ದೇಶದಿಂದ ಈಗ ತಾನೇ ಒಂದು ವೃದ್ದಾಶ್ರಮವನ್ನ ನಡೆಸುತ್ತಿದ್ದಾರೆ.
ಬೆಂಗಳೂರಿನ ಕೆಂಗೇರಿ (Kengeri Bengaluru) ಬಳಿಯ ಚಿಕ್ಕಬಸ್ತಿಯಲ್ಲಿ ಒಂದು ಮನೆ ಮಾಡಿ ಸರಿಸುಮಾರು ಎರಡೂವರೆ ವರ್ಷಗಳಿಂದ ವಯೋವೃದ್ಧರ ಆರೈಕೆ ಮಾಡುತ್ತಿದ್ದಾರೆ. ತಮ್ಮ ಆಶ್ರಮಕ್ಕೆ ‘ಆರೈಕೆ’ (Aaraike) ಎಂದೇ ಹೆಸರಿಟ್ಟಿರೋ ಅವರು ಈಗ ತನ್ನ ಸಂಪಾದನೆಯನ್ನ ಅನಾಥರಾಗಿ ರಸ್ತೆಯಲ್ಲಿ ಇರೋ ವಯೋವೃದ್ದರಿಗೆ ಮೀಸಲಿಟ್ಟಿದ್ದಾರೆ. ತನ್ನದೇ ಆದ ಬೇಕರಿ ಮತ್ತು ಹೋಟಲ್ ಉದ್ಯೋಗ ನಡೆಸುತ್ತಿರುವ ರಂಜಿತ್ ದುಡಿಮೆಯಲ್ಲಿ ಬಂದ ಲಾಭವನ್ನ ಆಶ್ರಮಕ್ಕೆ ಬಳಕೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಹಿಳಾ ಶಕ್ತಿಗೆ ಜಗ್ಗಲಿಲ್ಲ- ಫ್ರೀ ಬಸ್ನಲ್ಲಿ ಪುರುಷ ಪ್ರಯಾಣಿಕರ ಸಂಖ್ಯೆ 13 ಲಕ್ಷಕ್ಕೆ ಏರಿಕೆ
ಒಟ್ಟಿನಲ್ಲಿ 23 ವರ್ಷಕ್ಕೆ ಹೀಗೆ ಜನರ ಸೇವೆ ಮಾಡಬೇಕು ಅನ್ನೋ ಮನಸ್ಸು ಯಾರಿಗೆ ಬರುತ್ತೆ ಹೇಳಿ, ತಂದೆ ತಾಯಿಯನ್ನೇ ನೋಡಿಕೊಳ್ಳೋದು ಕಷ್ಟ ಅಂತದ್ರಲ್ಲಿ ಈ ಆರೈಕೆ ಕೇಂದ್ರದಲ್ಲಿ ಬರೋಬ್ಬರಿ 40 ಜನರನ್ನ ರಂಜಿತ್ ತಮ್ಮ ಸ್ವಂತ ತಂದೆತಾಯಿಯಂತೆ ನೋಡಿಕೊಳ್ಳುತ್ತಿದ್ದಾರೆ.
ಕೊಪ್ಪಳ: ತಾಯಿಯೇ ದೇವರು ಎನ್ನುತ್ತಾರೆ. ಆದರೆ, ಇಲ್ಲೊಬ್ಬ ಪುತ್ರ ಎರಡು ದಿನದ ಹಿಂದೆ ತನ್ನ ಹೆತ್ತಮ್ಮನನ್ನೇ ಒಂಟಿಯಾಗಿ ಕೊಪ್ಪಳದಲ್ಲಿರುವ ದೇವಸ್ಥಾನದ ಬಳಿ ಬಿಟ್ಟ ತೆರಳಿದ್ದಾನೆ.
ಅಜ್ಜಿಯನ್ನು ನೋಡಿದ ಸ್ಥಳೀಯರು ಹಿರಿಯ ನಾಗರಿಕರ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಪ್ರಸ್ತುತ ಅವರು ಅಜ್ಜಿಯನ್ನು ರಕ್ಷಣೆ ಮಾಡಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ. ವೃದ್ಧೆ ತನ್ನ ಹೆಸರು ಖಾಸೀಂ ಬಿ, ತನ್ನದು ಉಜ್ಜಯಿನಿ ಗ್ರಾಮ ಎಂದು ಹೇಳಿಕೊಂಡಿದ್ದಾರೆ. ಇತರ ವಿವರಗಳನ್ನು ಸರಿಯಾಗಿ ನೀಡಿಲ್ಲ. ಅಜ್ಜಿಯಿಂದ ಹೆಚ್ಚಿನ ವಿವರಗಳಾಗಲಿ ಅಥವಾ ದಾಖಲೆಗಳಾಗಲಿ ದೊರಕಿಲ್ಲ. ಆದರೆ ವೃದ್ಧೆಗೆ ಸುಮಾರು 80 ವರ್ಷ ವಯಸ್ಸಾಗಿದೆ ಎಂದು ಅಧಕಾರಿಗಳು ಅಂದಾಜಿಸಿದ್ದಾರೆ. ಇದನ್ನೂ ಓದಿ: ಪಾಕ್ನಲ್ಲಿದ್ದ 1,200 ವರ್ಷಗಳಷ್ಟು ಹಳೆ ಹಿಂದೂ ದೇವಾಲಯ ಮರುಸ್ಥಾಪಿಸಲು ಅನುಮತಿ
ನಡೆದಿದ್ದೇನು?
ಎರಡು ದಿನದ ಹಿಂದೆ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಮಗನೊಡನೆ ಖಾಸೀಂ ಬಿ ಬಂದಿದ್ದಾರೆ. ನಂತರ ಆಕೆಯ ಮಗ ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಹಾಗೂ ತನ್ನ ಮೊಬೈಲ್ ನಂಬರ್ ಇದೆ ಎಂದು ಖಾಲಿ ಹಾಳೆ ಕೈಗಿತ್ತು ತೆರಳಿದ್ದಾನೆ.
ರಾತ್ರಿಯಾದರೂ ಅಜ್ಜಿ ಬಳಿ ಯಾರೂ ಬರದಿರುವುದನ್ನು ಗಮನಿಸಿದ ಸ್ಥಳೀಯರು ತಿನ್ನಲು ಆಹಾರ ನೀಡಿದ್ದಾರೆ. ಮಲಗಲು ಹಾಸಿಗೆ, ದಿಂಬು ನೀಡಿದ್ದಾರೆ. ಬಳಿಕ ಮೊಬೈಲ್ ಪರಿಶೀಲಿಸಿದಾಗ ಸಿಮ್ ಕಾರ್ಡ್ ಇಲ್ಲದಿರುವುದು ಬೆಳಕಿಗೆ ಬಂದಿದೆ. ಅಜ್ಜಿ ಯಾರು, ಯಾವ ಊರು ಎಂಬಿತ್ಯಾದಿ ವಿವರ ಸಿಕ್ಕಿಲ್ಲ. ಕೂಡಲೇ ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಇದನ್ನೂ ಓದಿ: ಅನಿವಾಸಿ ಭಾರತೀಯರಿಗೆ ಪಂಜಾಬ್ ಸರ್ಕಾರ ಹೊಸ ನೀತಿಯನ್ನು ತರಲಿದೆ: ಕುಲದೀಪ್ ಸಿಂಗ್
ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ ಕ್ಷೇತ್ರದ ಪ್ರತಿಕ್ರಿಯೆ ಅಧಿಕಾರಿ ಮುತ್ತಣ್ಣ ಗುದ್ನೆಪ್ಪನವರ್ ಹಾಗೂ ಇತರ ಸಿಬ್ಬಂದಿ ತೆರಳಿ ಅಜ್ಜಿಯನ್ನು ರಕ್ಷಿಸಿದ್ದಾರೆ. ಪೊಲೀಸ್ ಠಾಣೆಗೆ ಮಾಹಿತಿ ನೀಡಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮುಂಬೈ: 62 ನಿವಾಸಿಗಳಿಗೆ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆ ಮಹಾರಾಷ್ಟ್ರದ ಥಾಣೆ ಜಿಲ್ಲಾಡಳಿತ ವೃದ್ಧಾಶ್ರಮವನ್ನು ಕಂಟೈನ್ಮೆಂಟ್ ಝೋನ್ ಮಾಡಿದೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ‘ಮಾತೋಶ್ರೀ ವೃದ್ಧಾಶ್ರಮ’ದ 62 ನಿವಾಸಿಗಳಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಈ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ ಎಂದು ಜಿಲ್ಲಾಡಳಿತ ಘೋಷಿಸಿದೆ. ಪ್ರಸ್ತುತ ಈ 62 ನಿವಾಸಿಗಳನ್ನು ಹತ್ತಿರದ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಆಸ್ಪತ್ರೆಗೆ ದಾಖಲಾದ 62 ರೋಗಿಗಳಲ್ಲಿ 37 ಪುರುಷರು ಮತ್ತು 25 ಮಹಿಳೆಯರು. ಇವರಲ್ಲಿ 41 ಜನರು ಅಸ್ವಸ್ಥ ಸ್ಥಿತಿಯಲ್ಲಿದ್ದಾರೆ. ಎಲ್ಲ ರೋಗಿಗಳನ್ನು ನಾವು ಗಮನಿಸುತ್ತಿದ್ದು, ಆಸ್ಪತ್ರೆಯ ವೈದ್ಯಕೀಯ ತಂಡವು ಹಗಲು-ರಾತ್ರಿ ಅವರನ್ನು ನೋಡಿಕೊಳ್ಳುತ್ತಿದೆ. 10 ದಿನಗಳ ಕಾಲ ಇವರನ್ನು ಆಸ್ಪತ್ರೆಯಲ್ಲಿ ಇರಿಸಲಾಗುವುದು. ವೃದ್ಧಾಶ್ರಮದಿಂದ ಇತರ ಐದು ಶಂಕಿತ ಸೋಂಕಿತರನ್ನು ಆಸ್ಪತ್ರೆಯ ಸಾಮಾನ್ಯ ವಾರ್ಡ್ಗೆ ದಾಖಲಿಸಲಾಗಿದೆ. 15 ಜನರ ಪರೀಕ್ಷಾ ಮಾದರಿಗಳನ್ನು ಜಿನೋಮ್ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿ ತಿಳಿಸಿದರು. ಇದನ್ನೂ ಓದಿ: ಇಂದು ಕರ್ನಾಟಕದಲ್ಲಿ 257 ಪಾಸಿಟಿವ್, 5 ಸಾವು
ಸಿವಿಲ್ ಸರ್ಜನ್ ಡಾ ಕೈಲಾಸ್ ಪವಾರ್ ಈ ಕುರಿತು ಮಾತನಾಡಿದ್ದು, ದಾಖಲಾದ ನಾಲ್ವರನ್ನು ಐಸಿಯುನಲ್ಲಿ ಇಡಲಾಗಿದ್ದು, ಆಮ್ಲಜನಕದ ಸಹಾಯದಿಂದ ಅವರು ಬದುಕಿದ್ದಾರೆ. ಈ ನಿವಾಸಿಗಳು ‘ಮಾತೋಶ್ರೀ ವೃದ್ಧಾಶ್ರಮ’ ದವರಾಗಿದ್ದು, 2 ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಈ ವೃದ್ಧಾಶ್ರಮದಲ್ಲಿ 55 ಹಿರಿಯ ನಾಗರಿಕರು, 5 ಜನ ನೌಕರರು ಮತ್ತು ಒಂದೂವರೆ ವರ್ಷದ ಮಗು ಸೇರಿದಂತೆ ಸಿಬ್ಬಂದಿಯ ಎರಡು ಕುಟುಂಬದ ಸದಸ್ಯರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಈ ವಾರಾಂತ್ಯದಲ್ಲಿ ಪಾಸಿಟಿವ್ ಬಂದ ಹಿನ್ನೆಲೆ ಅವರೆಲ್ಲರನ್ನು ಥಾಣೆ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು ಎಂದರು.
ಜಿಲ್ಲಾಡಳಿತವು ಪ್ರಸ್ತುತ ಭಿವಂಡಿ ತಹಸಿಲ್ನ ಸೊರ್ಗಾಂವ್ ಗ್ರಾಮವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿದೆ. ಹಿರಿಯ ನಾಗರಿಕರು ವೃದ್ಧಾಶ್ರಮದಲ್ಲಿ ಒಟ್ಟಿಗೆ ಓಡಾಡುವುದು, ತಿನ್ನುವುದು ಮತ್ತು ಹಲವು ಚಟುವಟಿಕೆಗಳನ್ನು ಒಟ್ಟಿಗೆ ನಡೆಸುವುದರಿಂದ ಸೋಂಕು ಇವರಿಗೆ ಬೇಗ ಹರಡಿಕೊಂಡಿದೆ ಎಂದು ಹೇಳಿದರು. ಇದನ್ನೂ ಓದಿ: ಗುರುದ್ವಾರದಲ್ಲಿ ಫೋಟೋಶೂಟ್ – ಮಾಡೆಲ್ ವಿರುದ್ಧ ನೆಟ್ಟಿಗರು ಗರಂ
ಮಂಗಳೂರು: ಹಲವರು ವಿವಾಹ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಮಾಡಿಕೊಳ್ಳಬೇಕು ಎನ್ನುತ್ತಾರೆ. ಆದರೆ ಈ ದಂಪತಿ ವೃದ್ಧಾಶ್ರಮಕ್ಕೆ 1 ಲಕ್ಷ ರೂ. ದೇಣಿಗೆ ನೀಡುವ ಮೂಲಕ ವಿಶಿಷ್ಟವಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.
ನಗರದ ಶ್ರೀ ಸುಬ್ರಹ್ಮಣ್ಯ ಸಭಾದ ಮಹಿಳಾ ವೇದಿಕೆಯ ಕಾರ್ಯದರ್ಶಿಯಾಗಿರುವ ಪುಷ್ಪಾವತಿ ಮತ್ತು ಶ್ರೀನಿವಾಸ್ ಅವರು ವೃದ್ಧಾಶ್ರಮಕ್ಕೆ ದೇಣಿಗೆ ನೀಡುವ ಮೂಲಕ ತಮ್ಮ 42ನೇ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ದಂಪತಿ ತಮ್ಮ ಮದುವೆಯ ದಿನದ ಸವಿನೆನಪಿಗಾಗಿ ತಮ್ಮ ವೈಯಕ್ತಿಕವಾಗಿ ಶ್ರೀ ಸಭಾದ ಪುತ್ತೂರಿನ ಶಿವಸದನ ವೃದ್ಧಾಶ್ರಮಕ್ಕೆ ಒಂದು ಲಕ್ಷ ರೂ. ದೇಣಿಗೆಯನ್ನು ನೀಡಿದ್ದಾರೆ.
ಇವರ ಕೊಡುಗೆಯನ್ನು ಸುಬ್ರಹ್ಮಣ್ಯ ಸಭಾದ ಕಾರ್ಯದರ್ಶಿ ಕರುಣಾಕರ ಬೆಳ್ಳೆ, ಸಂತೋಷ ಕುಮಾರ್ ಮತ್ತು ಮಹಿಳಾ ವೇದಿಕೆಯ ಅಧ್ಯಕ್ಷೆ ಕುಸುಮಾ ನವೀನ ಕುಮಾರ್, ಉಪಾಧ್ಯಕ್ಷೆ ಸ್ನೇಹ ಲತಾ ದಿವಾಕರ್ ಸ್ವೀಕರಿಸಿದರು.
ಇದೇ ವೇಳೆ ದಂಪತಿ ವಿವಾಹ ವಾರ್ಷಿಕೋತ್ಸವ ದಿನವನ್ನು ಹಾರ ಬದಲಾಯಿಸಿ, ರಾಗಿ ಹಾಲುಬಾಯಿ ಕಟ್ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಮಾತ್ರವಲ್ಲದೆ ಈ ದಂಪತಿ ಮಹಿಳಾ ವೇದಿಕೆ ಸದನ, ಸುರತ್ಕಲ್ ಸ್ಥಾನಿಕ ಸಂಘ ಹಾಗೂ ಚಿತ್ರಾಪುರ ಸರ್ಕಾರಿ ಶಾಲೆಯ ಮಕ್ಕಳಿಗೆ ಹಲವಾರು ವರ್ಷಗಳಿಂದ ಉಚಿತ ನೋಟ್ ಬುಕ್, ಪುಸ್ತಕ ವಿತರಣೆ ಸೇರಿದಂತೆ ಶಾಲೆಯಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಗಳಿಗೆ ಹತ್ತು ಹಲವು ರೀತಿಯಲ್ಲಿ ತನುಮನ, ಧನ ಸಹಾಯ ನೀಡಿದ್ದಾರೆ.
ನಿಮ್ಮ ಸೇವಾ ಮನೋಭಾವಕ್ಕೆ ಶ್ರೀ ಸುಬ್ರಹ್ಮಣ್ಯ ಸಭಾ ಮತ್ತು ಮಹಿಳಾ ವೇದಿಕೆಯಿಂದ ಮಹಿಳಾ ವೇದಿಕೆಯ ಅಧ್ಯಕ್ಷೆ ಕುಸುಮಾ ನವೀನ್ ಕುಮಾರ್ ಅಭಿನಂದನೆ ತಿಳಿಸಿದರು. ಅಲ್ಲದೆ ದಾಂಪತ್ಯ ಜೀವನ ಸುವರ್ಣ ಮಹೋತ್ಸವದತ್ತ ಸಾಗಲಿ ಎಂದು ಹಾರೈಸಿದರು.
ಹಾವೇರಿ: ಕಳೆದ ಕೆಲವು ದಿನಗಳಿಂದ ಬೀದಿಯಲ್ಲಿ ವಾಸಮಾಡುತ್ತಿದ್ದ ವೃದ್ದೆಗೆ ಪಿಎಸ್ಐಯೊಬ್ಬರು ಚಿಕಿತ್ಸೆ ಕೊಡಿಸಿ ವೃದ್ದಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದಲ್ಲಿ 65 ವರ್ಷದ ವೃದ್ಧೆಯೊಬ್ಬಳು ಅನಾಥವಾಗಿ ಎಲ್ಲೆಂದರಲ್ಲಿ ವಾಸ ಮಾಡುತ್ತಿದ್ದಾಳೆ ಎಂದು ಪಿಎಸ್ಐ ಡಿ.ಕೆ.ಬಳಿಗಾರವರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ಪಿಎಸ್ಐ ವೃದ್ದೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ವಿಚಾರಣೆ ವೇಳೆ ವೃದ್ಧೆಯನ್ನು ಗೌರಮ್ಮ ಸಣ್ಮನಿ(65) ಎಂದು ಗುರುತಿಸಲಾಗಿದೆ. ಬಳಿಕ ಖಾಸಗಿ ವಾಹನದ ವ್ಯವಸ್ಥೆ ಮಾಡಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಶಿಗ್ಗಾಂವಿ ಪಟ್ಟಣದಲ್ಲಿರುವ ವೃದ್ಧಾಶ್ರಮಕ್ಕೆ ಸೇರಿಸಿದರು. ಗೌರಮ್ಮಳ ಪತಿ ಹಲವು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಪತಿಯ ಮರಣದ ನಂತರ ಗೌರಮ್ಮ ಅಲ್ಲಿ ಇಲ್ಲಿ ವಾಸ ಮಾಡಿಕೊಂಡು ಅನಾಥೆಯಂತೆ ಜೀವನ ಸಾಗಿಸುತ್ತಿದ್ದಳು. ಮಾಹಿತಿದಾರರೊಬ್ಬರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪಿಎಸ್ಐ ಬಳಿಗಾರ ವೃದ್ಧೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.
ಗೌರಮ್ಮಳಿಗೆ ಇಬ್ಬರು ಗಂಡು ಮತ್ತು ಒಬ್ಬ ಹೆಣ್ಣು ಮಗಳು ಸೇರಿದಂತೆ ಒಟ್ಟು ಮೂವರು ಮಕ್ಕಳಿದ್ದಾರೆ. ಆದರೆ ಯಾವುದಾದರೂ ಕಾರಣಕ್ಕೆ ಗೌರಮ್ಮನೇ ಸ್ವತಃ ಮನೆಬಿಟ್ಟು ಬಂದು ಅಲ್ಲಿ ಇಲ್ಲಿ ವಾಸ ಮಾಡಿಕೊಂಡಿದ್ದಾಳೋ ಅಥವಾ ಮಕ್ಕಳೇ ವೃದ್ದೆಯನ್ನು ಆರೈಕೆ ಮಾಡಲಾಗದೆ ಮನೆಯಿಂದ ಹೊರಗೆ ಹಾಕಿದ್ದಾರೋ ಎಂದು ತಿಳಿದುಬಂದಿಲ್ಲ. ಗೌರಮ್ಮ ಮಾತ್ರ ಥೇಟ್ ಅನಾಥಳಂತೆ ಕಾಗಿನೆಲೆ ಗ್ರಾಮ ಸೇರಿದಂತೆ ಅಲ್ಲಲ್ಲಿ ವಾಸವಾಗಿದ್ದಳು. ಆದರೆ ಪಿಎಸ್ಐ ಡಿ.ಕೆ.ಬಳಿಗಾರ ವೃದ್ದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಪಿಎಸ್ ಐ ಬಳಿಗಾರ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ: ಮೂರು ವರ್ಷದ ಹಿಂದೆ ಕಳೆದು ಹೋಗಿದ್ದ ಮಾನಸಿಕ ಅಸ್ವಸ್ಥ ತಾಯಿ ಈಗ ಮತ್ತೆ ಮಗನಿಗೆ ಸಿಕ್ಕಿರುವ ಅಪರೂಪದ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಹೆತ್ತವ್ವನ ಹುಡುಕಿಕೊಂಡು ಹಾತೊರೆದು ಬರುತ್ತಿರುವ ಎದೆಯುದ್ದದ ಮಗ. ಎಲ್ಲಿದ್ದಾಳೋ, ಹೇಗಿದ್ದಾಳೋ ಎಂದು ತನ್ನ ಹಡೆದವ್ವನಿಗಾಗಿ ಮಮ್ಮಲ ಮರುಗುತ್ತಿರುವ ದೃಶ್ಯ. ಹೌದು ಮೂರು ವರ್ಷಗಳಿಂದ ತಾಯಿಗಾಗಿ ಹಾತೊರೆಯುತ್ತಿದ್ದ ಮಗನ ಕರುಳ ಹಿಂಡುವ ಕರುಣಾಜನಕ ದೃಶ್ಯ ಕಂಡಿದ್ದು ಮಡಿಕೇರಿಯಲ್ಲಿ. ಹೀಗೆ ತಾಯಿಯ ಕೈ ಕೈ ಹಿಡಿದು ಈಗಲಾದರೂ ಸಿಕ್ಕಿದೆಯಲ್ಲಾ ಎಂದು ಪೇಚಾಡುತ್ತಿರುವ ಮಗ ಮಹೇಶ್ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನ ಸಾಲಿಗ್ರಾಮದವರು.
ಮಾನಸಿಕ ಅಸ್ವಸ್ಥರಾಗಿ ಊರಿನಿಂದ ತಪ್ಪಿಸಿಕೊಂಡಿದ್ದ ತಾಯಿ ಪಾರ್ವತಿಗಾಗಿ ಹುಡುಕಾಡದ ಊರುಗಳಿಲ್ಲ. ತಾಯಿ ಸಿಕ್ಕರೆ ಸಾಕು ಎಂದು ಹರಕೆ ಕಟ್ಟದ ದೇವರುಗಳಿಲ್ಲ. ಆದರೆ ತಪ್ಪಿಸಿಕೊಂಡ ತಾಯಿ ಮಾತ್ರ ಸಿಕ್ಕಿರಲಿಲ್ಲ. ಅದ್ಹೇಗೋ ಮಡಿಕೇರಿಗೆ ಬಂದಿದ್ದ ಮಾನಸಿಕ ಅಸ್ವಸ್ಥರಾದ ಪಾರ್ವತಿ ಬೀದಿ ಬೀದಿಗಳಲ್ಲಿ ಓಡಾಡಿಕೊಂಡಿದ್ದರು. ಇದನ್ನು ಗಮನಿಸಿದ್ದ ಮಡಿಕೇರಿ ಪೊಲೀಸರು ತಲನ್ ಸಂಸ್ಥೆಯ ವೃದ್ಧಾಶ್ರಮಕ್ಕೆ ಸೇರಿಸಿದ್ದರು.
ಅಂದಿನಿಂದ ಇವರನ್ನು ಶುಶ್ರೂಷೆ ಮಾಡುತ್ತಾ ಚಿಕಿತ್ಸೆ ನೀಡುತ್ತಿದ್ದ ತನಲ್ ಸಂಸ್ಥೆ, ಇವರ ಹೆಸರು ಗೊತ್ತಾಗದೆ ಜಲಜಾ ಎನ್ನೋ ಹೆಸರಿಟ್ಟು ಸಲಹುತಿದ್ದರು. ತಮ್ಮ ನಿಯಮದ ಪ್ರಕಾರ ತನಲ್ ಸಂಸ್ಥೆ ಮುಖಂಡರು ಕೊನೆಗೂ ಪಾರ್ವತಿ ಅವರ ವಿಳಾಸ ಹುಡುಕಿ ತಾಯಿ ಮಗನನ್ನು ಒಂದಾಗಿಸಿದ್ದಾರೆ.
ಕಳೆದು ಹೋದ ತಾಯಿಗಾಗಿ ಮೂರು ವರ್ಷಗಳಿಂದ ಹುಡುಕಾಡಿ ಬೇಸತ್ತಿದ್ದ ಮಗ ಮಹೇಶ್, ನಮ್ಮ ಪಾಲಿಗೆ ನಮ್ಮ ತಾಯಿ ಇನ್ನಿಲ್ಲ ಎಂದುಕೊಂಡಿದ್ದರಂತೆ. ಆದರೆ ತನಲ್ ಸಂಸ್ಥೆಯು ಇವರಿಗೆ ಕರೆ ಮಾಡಿ ನಿಮ್ಮ ತಾಯಿ ಇದ್ದಾರೆ ಎಂದು ತಿಳಿಸಿದಾಗ ಹೆತ್ತವ್ವನಿಗಾಗಿ ಹಗಲುರಾತ್ರಿ ಹುಡುಕಾಡುತ್ತಿದ್ದ ಮಗನ ಸಂತೋಷಕ್ಕೆ ಪಾರವೇ ಇರಲಿಲ್ಲ. ಕೊನೆಗೂ ತನ್ನ ತಾಯಿ ಸಿಕ್ಕಳಲ್ಲಾ ಎಂದು ಸಾಲಿಗ್ರಾಮದಿಂದ ಮಡಿಕೇರಿಗೆ ಬಂದು ಇಂದು ತನ್ನ ತಾಯಿಯನ್ನು ಪ್ರೀತಿಯಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ನನ್ನ ತಾಯಿಯನ್ನು ಇನ್ನೆಂದು ಕಳೆದುಕೊಳ್ಳದಂತೆ ಕಣ್ಣಿಟ್ಟು ನೋಡಿಕೊಳ್ಳುತ್ತೇವೆ ಎನ್ನುವಾಗ ಮಹೇಶ್ ಗದ್ಗತಿರಾಗುತ್ತಿದ್ದರು. ಇವರಂತೆಯೇ ತನಲ್ ಸಂಸ್ಥೆಯಲ್ಲಿರುವ ಇನ್ನೂ ಹಲವರು, ಇಂದು ಪಾರ್ವತಿ ಸಂಸ್ಥೆ ಬಿಟ್ಟು ತಮ್ಮ ಮನೆಗೆ ಹೋಗುತ್ತಿದ್ದರೆ, ಹೊರಗೆ ನಿಂತು ಕೈಬೀಸಿ ಬೀಳ್ಕೊಡುತ್ತಿದ್ದರು. ಮತ್ತೊಂದೆಡೆ ನಮ್ಮವರೂ ಯಾರದರೂ ನಮ್ಮನ್ನು ಮನೆಗೆ ಕರೆದೊಯ್ಯಲು ಬರಬಹುದಾ ಎನ್ನೋ ಆಸೆಗಣ್ಣಿನಿಂದಲೇ ದಾರಿ ಎದುರು ನೋಡುತ್ತಾ ನಿಂತಿದ್ದರು.
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಹೀಗಾಗಿ ಡಿ ಬಾಸ್ ಹುಟ್ಟುಹಬ್ಬವನ್ನು ಆಚರಿಸಲು ಸಜ್ಜಾಗುತ್ತಿರುವ ಅಭಿಮಾನಿಗಳು ದರ್ಶನ್ ಮಾತಿಗೆ ಬೆಲೆಕೊಟ್ಟು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ದವಸ-ಧಾನ್ಯ ವಿತರಿಸಿ ಮಾದರಿಯಾಗಿದ್ದಾರೆ.
ಫೆಬ್ರವರಿ 16ರಂದು ದರ್ಶನ್ ಅವರ ಹುಟ್ಟುಹಬ್ಬವಿದ್ದು, ಡಿ-ಬಾಸ್ ಜನ್ಮದಿನವನ್ನು ಅಭಿಮಾನಿಗಳು ದೊಡ್ಡ ಹಬ್ಬದಂತೆ ಆಚರಿಸುತ್ತಾರೆ. ನೆಚ್ಚಿನ ನಟನಿಗಾಗಿ ಅಭಿಮಾನಿಗಳು ಕೇಕ್, ಹಾರ, ಗಿಫ್ಟ್ ಗಳನ್ನು ತರುವುದು ಸಾಮಾನ್ಯ. ಆದರೆ ದರ್ಶನ್ ಅವರು, “ಬ್ಯಾನರ್, ಕೇಕ್ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ. ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರೆ ದವಸ-ಧಾನ್ಯಗಳನ್ನು ದಾನ ನೀಡಿ, ಅದನ್ನು ಒಗ್ಗೂಡಿಸಿ ಸೇರಬೇಕಾದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು” ಎಂದು ಅಭಿಮಾನಿಗಳಿಗೆ ತಿಳಿಸಿದ್ದರು.
ಈ ಬಗ್ಗೆ ತಿಳಿಯುತ್ತಿದ್ದಂತೆ ಅಭಿಮಾನಿಗಳು ದವಸ-ಧಾನ್ಯಗಳನ್ನು ತಂದು ದರ್ಶನ್ ಅವರಿಗೆ ನೀಡುತ್ತಿದ್ದಾರೆ. ಅಕ್ಕಿ, ಬೇಳೆ ಸೇರಿದಂತೆ ಹಲವು ದವಸ-ಧಾನ್ಯಗಳು ತಂದುಕೊಟ್ಟು ಕೈಲಾದ ಸಹಾಯ ಮಾಡುತ್ತಿದ್ದಾರೆ. ಅಭಿಮಾನಿಗಳು ನೀಡಿದ್ದ ದವಸ ಧಾನ್ಯಗಳ ಮೂಟೆಯ ರಾಶಿಯೇ ದರ್ಶನ್ ಮನೆಯಲ್ಲಿದ್ದು, ರಾಶಿ ರಾಶಿ ಮೂಟೆಯನ್ನು ಈಗ ವಿತರಿಸುವ ಕೆಲಸ ನಡೆಯುತ್ತಿದೆ. ದರ್ಶನ್ ಹಾಗೂ ಅವರ ಅಭಿಮಾನಿಗಳು ಮಾಡುತ್ತಿರುವ ಈ ಕಾರ್ಯ ನಿಜಕ್ಕೂ ಎಲ್ಲರ ಮನ ಗೆದ್ದಿದೆ.
ಈಗಾಗಲೆ ಅನಾಥಾಶ್ರಮ, ವೃದ್ಧಾಶ್ರಮ ಸೇರಿದಂತೆ ಆಹಾರದ ಅಗತ್ಯವಿರುವವರಿಗೆ ಸಂಗ್ರಹವಾಗಿರುವ ದವಸ-ಧಾನ್ಯಗಳನ್ನು ವಿತರಿಸಲಾಗುತ್ತಿದೆ. ಅಭಿಮಾನಿಗಳು ಅನಾಥಾಶ್ರಮಕ್ಕೆ, ವೃದ್ಧಾಶ್ರಮಕ್ಕೆ ತೆರಳಿ ಅಕ್ಕಿ, ಬೇಳೆ ಧಾನ್ಯಗಳನ್ನು ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಕ್ಕಳು ದರ್ಶನ್ ಹಾಗೂ ಅವರ ಅಭಿಮಾನಿಗಳಿಗೆ ಧನ್ಯವಾದ ಹೇಳಿ ಹುಟ್ಟುಹಬ್ಬಕ್ಕೆ ಶುಭಕೋರುತ್ತಿದ್ದಾರೆ. ಇತ್ತ ವೃದ್ಧಾಶ್ರಮದಲ್ಲಿರುವ ಹಿರಿಯರು ದರ್ಶನ್ ನಮಗೆ ಅನ್ನ ದಾನ ಮಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ನೂರು ವರ್ಷ ಚೆನ್ನಾಗಿ ಇರಲಿ ಎಂದು ಹರಸಿ ಖುಷಿ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷದ ದರ್ಶನ್ ಮಾತಿಗೆ ಬೆಲೆಕೊಟ್ಟು ಅಭಿಮಾನಿಗಳು ಅಕ್ಕಿ, ಬೇಳೆ ಸೇರಿದಂತೆ ಹಲವು ಪದಾರ್ಥಗಳನ್ನು ದಾನ ನೀಡಿ ಡಿ ಬಾಸ್ ಹುಟ್ಟುಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಿದ್ದರು. ಈ ವರ್ಷವು ಅದೇ ರೀತಿ ಅರ್ಥಪೂರ್ಣವಾಗಿ ದರ್ಶನ್ ಹುಟ್ಟುಹಬ್ಬ ಆಚರಣೆ ಮಾಡಲು ಅಭಿಮಾನಿಗಳು ಸಜ್ಜಾಗಿದ್ದಾರೆ.
ಚಿಕ್ಕಬಳ್ಳಾಪುರ: ಟಾಲಿವುಡ್ನ ಖ್ಯಾತ ನಟಿ ಮೌರ್ಯಾನಿ, ಇಂದು ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳದ ಬಳಿ ಇರುವ ಮಾನಸ ವೃದ್ಧಾಶ್ರಮದಲ್ಲಿ ತಮ್ಮ 25ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಚಿಕ್ಕಬಳ್ಳಾಪುರ ತಾಲೂಕಿನ ಇಟಪನಹಳ್ಳಿ ಗ್ರಾಮದವರಾದ ಮೌರ್ಯಾನಿಯವರು, ಇಂದು ಸ್ವಗ್ರಾಮಕ್ಕೆ ಆಗಮಿಸಿದ್ದಾಗ ತಮ್ಮ ಸಂಬಂದಿ ಜೊತೆ ವೃದ್ಧಾಶ್ರಮಕ್ಕೆ ಆಗಮಿಸಿ ವಿಶೇಷವಾಗಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಅನಾಥಾಶ್ರಮದಲ್ಲಿ ಕೇಕ್ ಕತ್ತರಿಸಿ ವೃದ್ಧರಿಗೆ ಕೇಕ್ ತಿನ್ನಿಸುವುದರ ಮೂಲಕ ಸರಳ ರೀತಿಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ಮೌರ್ಯಾನಿಯವರು ಇದೊಂದು ವಿಶೇಷ ಹುಟ್ಟು ಹಬ್ಬ ಅಂತ ಮನದಾಳದ ಇಂಗಿತ ವ್ಯಕ್ತಪಡಿಸಿದರು.
ಅಂದಹಾಗೆ ಪ್ರತಿ ಬಾರಿ ಹೋಟೆಲ್ಗಳಲ್ಲಿ ಮನೆಯವರ ಜೊತೆ ಹುಟ್ಟು ಹಬ್ಬ ಆಚರಿಸುತ್ತಿದ್ದೆ. ಆದರೆ ಈ ಬಾರಿ ವೃದ್ಧಾಶ್ರಮದಲ್ಲಿ ಆಚರಣೆ ಮಾಡಿದ್ದು ತುಂಬಾ ಖುಷಿ ತಂದಿದೆ. ಆದರೆ ಈ ರೀತಿ ಮಕ್ಕಳು ಯಾಕೆ ತಮ್ಮ ಹೆತ್ತ ತಂದೆ ತಾಯಿಯನ್ನ ವೃದ್ಧಾಶ್ರಮಕ್ಕೆ ಬಿಡುತ್ತಾರೆ ಎಂದು ನೋವು ತೋಡಿಕೊಂಡರು. ವೃದ್ಧಾಶ್ರಮದಲ್ಲಿದ್ದ ವೃದ್ಧರ ಜೊತೆ ಕೆಲ ಕಾಲ ಕಳೆದ ನಟಿ ಮೌರ್ಯಾನಿ ಈ ಹುಟ್ಟು ಹಬ್ಬ ತಮ್ಮ ಜೀವನದ ಅತ್ಯಂತ ಮರೆಯಲಾಗದ ದಿನ. ಮುಂದಿನ ವರ್ಷವೂ ಸಹ ಇದೇ ರೀತಿ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುವುದಾಗಿ ತಿಳಿಸಿದರು.
ಚಿತ್ರರಂಗದ ಬಗ್ಗೆ ಪ್ರತಿಕ್ರಿಯಿಸಿದ ಮೌರ್ಯಾನಿ, ತಮ್ಮ ಸಂಬಂಧಿಕರೊಬ್ಬರು ಟಾಲಿವುಡ್ನಲ್ಲಿ ಸಿನಿಮಾ ನಿರ್ಮಾಣ ಮಾಡಿದಾಗ ನನಗೆ ನಟನೆಗೆ ಅವಕಾಶ ಸಿಕ್ಕಿತ್ತು. ತದನಂತರ ತೆಲುಗು ಭಾಷೆಯಲ್ಲಿ ಸಾಕಷ್ಟು ಅವಕಾಶಗಳು ಸಿಕ್ಕ ಕಾರಣ ಅಲ್ಲೇ ನಟಿಸಬೇಕಾಯಿತು. ಸದ್ಯ ಸ್ಯಾಂಡಲ್ವುಡ್ನಿಂದಲೂ ಅವಕಾಶಗಳು ಬರುತ್ತಿದ್ದು, ಸದ್ಯದಲ್ಲೇ ಸ್ಯಾಂಡಲ್ವುಡ್ನ ಚಲನಚಿತ್ರವೊಂದರಲ್ಲಿ ನಟಿಸುವುದಾಗಿ ಹೇಳಿದರು.