Tag: ವೀರಪ್ಪ ಮೊಯ್ಲಿ

  • ಜೆಡಿಎಸ್ ಜೊತೆ ಹೊಂದಾಣಿಕೆ ಸರಿಹೋಗದ್ದಕ್ಕೆ ನನಗೆ ಸೋಲು – ಮೊಯ್ಲಿ

    ಜೆಡಿಎಸ್ ಜೊತೆ ಹೊಂದಾಣಿಕೆ ಸರಿಹೋಗದ್ದಕ್ಕೆ ನನಗೆ ಸೋಲು – ಮೊಯ್ಲಿ

    ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ನನ್ನ ಕ್ಷೇತ್ರ ದೊಡ್ಡಬಳ್ಳಾಪುರದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಸರಿಹೋಗಲಿಲ್ಲ ಎಂದು ಮೈತ್ರಿ ಅಭ್ಯರ್ಥಿಯಾಗಿದ್ದ ವೀರಪ್ಪ ಮೊಯ್ಲಿ ಹೇಳಿದ್ದಾರೆ.

    ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣಾ ಫಲಿತಾಂಶ ಕುರಿತು ಪರಾಮರ್ಶೆ ಮಾಡುತ್ತೇವೆ. ಚುನಾವಣೆಯಲ್ಲಿ ನಾಯಕರು ಹೊಂದಾಣಿಕೆ ಮಾಡಿಕೊಂಡರೆ ಸರಿಹೋಗುವುದಿಲ್ಲ ತಳಮಟ್ಟದಲ್ಲೂ ಹೊಂದಾಣಿಕೆ ಆಗುವುದು ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಎರಡೂ ಪಕ್ಷಗಳ ನಾಯಕರು ಹೊಂದಾಣಿಕೆಯನ್ನು ಜವಾಬ್ದಾರಿಯಿಂದ ನಿರ್ವಹಿಸಲಿಲ್ಲ. ಸೂಕ್ತ ಹೊಂದಾಣಿಕೆ ಇದ್ದಿದ್ದರೆ ಈ ರೀತಿಯ ಫಲಿತಾಂಶ ಬರುತ್ತಿರಲಿಲ್ಲ. ಸಮನ್ವಯತೆಯ ಕೊರತೆಯೇ ಈ ಫಲಿತಾಂಶಕ್ಕೆ ಮೂಲ ಕಾರಣ. ಸರ್ಕಾರದ ಮಟ್ಟದಲ್ಲಿ ಹೊಂದಾಣಿಕೆ ಆಗಿತ್ತು ಆದರೆ ತಳಮಟ್ಟದಲ್ಲಿ ಹೊಂದಾಣಿಕೆ ಆಗಬೇಕು. ಈ ಕೆಲಸ ಮೊದಲು ಆಗಬೇಕು ಎಂದು ಹೇಳಿದರು.

    ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಮೊಯ್ಲಿ ಅವರು, ಯಡಿಯೂರಪ್ಪ ಅವರ ಅಸ್ತಿತ್ವ ಆಪರೇಷನ್ ಕಮಲದಿಂದಲೇ ಇರೋದು. ಅದಕ್ಕಾಗಿ ಯಡಿಯೂರಪ್ಪ ಯಾವಾಗಲೂ ಆಪರೇಷನ್ ಕಮಲ ಎನ್ನುತ್ತಿರುತ್ತಾರೆ ಎಂದು ಆರೋಪ ಮಾಡಿದರು. ರಾಷ್ಟ್ರ ಮತ್ತು ರಾಜ್ಯದ ದೃಷ್ಟಿಯಿಂದ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿರಬೇಕು. ಸರ್ಕಾದದಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಿಕೊಂಡು ಸರ್ಕಾರ ಮುನ್ನಡೆಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ಜ್ಯೋತಿಷ್ಯ ಹೇಳೋದು ಯಾವಾಗ ಕಲಿತಿದ್ದೀರಿ- ಬಿಎಸ್‍ವೈಗೆ ಮೊಯ್ಲಿ ಟಾಂಗ್

    ಜ್ಯೋತಿಷ್ಯ ಹೇಳೋದು ಯಾವಾಗ ಕಲಿತಿದ್ದೀರಿ- ಬಿಎಸ್‍ವೈಗೆ ಮೊಯ್ಲಿ ಟಾಂಗ್

    ಚಿಕ್ಕಬಳ್ಳಾಪುರ: ಭವಿಷ್ಯ ಹೇಳುವುದನ್ನು ಯಾವಾಗ ಕಲಿತಿದ್ದೀರಿ ಎಂದು ಸಂಸದ ವೀರಪ್ಪ ಮೊಯ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಪ್ರಶ್ನಿಸಿ ಟಾಂಗ್ ಕೊಟ್ಟಿದ್ದಾರೆ.

    ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಗೆ ಚಿಕ್ಕಬಳ್ಳಾಪುರ ತಾಲೂಕು ಮಂಚನಬಲೆ ಗ್ರಾಮದ ಬೀರೇಶ್ವರ ಜಾತ್ರಾ ಮಹೋತ್ಸವದಲ್ಲಿ ತಿರುಗೇಟು ನೀಡಿದ ವೀರಪ್ಪ ಮೊಯ್ಲಿ ಅವರು, ಬಿಎಸ್‍ವೈ ಅವರದ್ದು ಹುಚ್ಚು ಮಾತುಗಳು. ಮೊದಲು ಯಡಿಯೂರಪ್ಪ ತಲೆಗೆ ಸ್ನಾನ ಮಾಡಿಕೊಂಡು ಸರಿ ಮಾಡಿಕೊಳ್ಳಲಿ ಎಂದರು.

    ಮುಖ್ಯಮಂತ್ರಿಯಾಗಬೇಕು ಎಂಬುದು ಬಿ.ಎಸ್.ಯಡಿಯೂರಪ್ಪನವರ ಗುರಿ. ಆದರೆ ಅವರು ಈ ಜನ್ಮದಲ್ಲಿಯೇ ಸಿಎಂ ಆಗಲ್ಲ. ಯಡಿಯೂರಪ್ಪನವರ ಮಾತಿನಿಂದ ಯಾರೂ ಗಾಬರಿಯಾಗಬೇಕಿಲ್ಲ. ನೂರಕ್ಕೆ ನೂರರಷ್ಟು ನಾನು ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬಿಎಸ್‍ವೈ ಹೇಳಿದ್ದೇನು?:
    ಬಿಜೆಪಿ ನಾಯಕರ ಸಭೆಯಲ್ಲಿ ಮಾತನಾಡಿದ್ದ ಬಿ.ಎಸ್.ಯಡಿಯೂರಪ್ಪ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಅವರು ಸೋಲುವು ಖಚಿತ. ಅಷ್ಟೇ ಅಲ್ಲದೆ ಕೋಲಾರ ಕ್ಷೇತ್ರದಲ್ಲಿ ಕೆ.ಎಚ್.ಮುನಿಯಪ್ಪ, ಕಲಬುರಗಿ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ತುಮಕೂರಿನಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಸೋಲುತ್ತಾರೆ ಎಂದು ಹೇಳಿದ್ದರು.

  • ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ರೈಲು ವಿಸ್ತರಣೆ: ವೀರಪ್ಪ ಮೊಯ್ಲಿ

    ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ರೈಲು ವಿಸ್ತರಣೆ: ವೀರಪ್ಪ ಮೊಯ್ಲಿ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರ ತೀವ್ರಗತಿಯಲ್ಲಿ ಅಭಿವೃದ್ದಿ ಹೊಂದುತ್ತಿದ್ದು, ಮುಂದಿನ ದಿನಗಳಲ್ಲಿ ಉಪನಗರವಾಗಿ ಚಿಕ್ಕಬಳ್ಳಾಪುರ ಬೆಳೆಯಿಲಿದೆ. ಹೀಗಾಗಿ ಜಿಲ್ಲಾ ಕೇಂದ್ರಕ್ಕೆ ಮೆಟ್ರೋ ರೈಲು ವಿಸ್ತರಣೆ ಮಾಡುವುದಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಆಶ್ವಾಸನೆ ನೀಡಿದ್ದಾರೆ.

    ಮತದಾನಕ್ಕೆ ಕೆಲ ದಿನಗಳಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ವೀರಪ್ಪ ಮೊಯ್ಲಿ ಅವರು ಬಿಡುವಿಲ್ಲದ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇಂದು ಚಿಕ್ಕಬಳ್ಳಾಪುರ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ರೋಡ್ ಶೋ ನಡೆಸಿ ಮಾತನಾಡಿದ ವೀರಪ್ಪಮೊಯ್ಲಿ ಅವರು, ಎರಡು ಬಾರಿ ಚಿಕ್ಕಬಳ್ಳಾಪುರದ ಜನ ನನ್ನ ಕೈ ಹಿಡಿದಿದ್ದಾರೆ. ಮುಂದಿನ 5 ವರ್ಷಗಳಲ್ಲಿ ನಾನು ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ರೈಲು ವಿಸ್ತರಣೆ ಮಾಡುವುದಾಗಿ ಆಶ್ವಾಸನೆ ನೀಡಿದರು.

    ಇದಕ್ಕೂ ಮುನ್ನ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ಕಾಮಗಾರಿ ಭರದಿಂದ ಸಾಗಿದೆ. ಮತ್ತೊಂದೆಡೆ ಕೃಷ್ಣಾ ನದಿಯ ನೀರನ್ನ ಸಹ ಬಾಗೇಪಲ್ಲಿ ಭಾಗದಿಂದ ಈ ಕ್ಷೇತ್ರಕ್ಕೆ ತರುವುದಾಗಿ ತಿಳಿಸಿದರು. ಅಲ್ಲದೇ ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ಮಾರ್ಗದಲ್ಲಿ ಕೈಗಾರಿಕಾ ವಲಯ ಗುರುತಿಸಿ, ಈಗಾಗಲೇ ಬಜೆಟ್ ನಲ್ಲಿ ಘೋಷಣೆಯಾಗಿರುವ ಮೊಬೈಲ್ ಬಿಡಿಭಾಗಗಳ ಉತ್ಪಾದನಾ ಘಟಕ ಆರಂಭಿಸುವುದಾಗಿ ಪ್ರಚಾರ ಭಾಷಣದಲ್ಲಿ ಹೇಳಿದರು.

    ಮನೆ ಮನೆಗೆ ಕುಡಿಯುವ ನೀರು, ಹೊಲ ಹೊಲಕ್ಕೆ ಜಲ, ಮನೆ ಮನೆಗೆ ಯುವಕರಿಗೆ ಉದ್ಯೋಗ ನೀಡುವುದೇ ತಮ್ಮ ಸಂಕಲ್ಪ ಎಂದು ವೀರಪ್ಪ ಮೊಯ್ಲಿ ಘೋಷಣೆ ಮಾಡಿದರು. ಇದೆಲ್ಲದರ ನಡುವೆ ಚರ್ಚ್‍ಗಳಿಗೆ ಭೇಟಿ ನೀಡಿದ ವೀರಪ್ಪ ಮೊಯ್ಲಿ ಪ್ರಾರ್ಥನೆ ಸಲ್ಲಿಸಿ, ಮತಯಾಚನೆ ಮಾಡಿದರು.

  • ನನ್ನಷ್ಟು ದೊಡ್ಡ ಒಕ್ಕಲಿಗ ಯಾರು ಇಲ್ಲ, ನಿಜವಾದ ಒಕ್ಕಲಿಗ ನಾನು: ವೀರಪ್ಪ ಮೊಯ್ಲಿ

    ನನ್ನಷ್ಟು ದೊಡ್ಡ ಒಕ್ಕಲಿಗ ಯಾರು ಇಲ್ಲ, ನಿಜವಾದ ಒಕ್ಕಲಿಗ ನಾನು: ವೀರಪ್ಪ ಮೊಯ್ಲಿ

    ಚಿಕ್ಕಬಳ್ಳಾಪುರ: ನಾನು ಮುಖ್ಯಮಂತ್ರಿಯಾಗಿದ್ದಾಗ ಮಂಡ್ಯ ಜಿಲ್ಲೆಯ ಒಕ್ಕಲಿಗ ಸಮುದಾಯದ ಮೂವರನ್ನು ಮಂತ್ರಿ ಮಾಡಿದ್ದೆ. ಹಾಸನದಲ್ಲೂ ಒಕ್ಕಲಿಗರಿಗೆ ಪ್ರಾತಿನಿಧ್ಯ ನೀಡಿದ್ದೆ. ಅಷ್ಟು ಮಟ್ಟದಲ್ಲಿ ಒಕ್ಕಲಿಗ ಶಾಸಕರನ್ನು ಸಚಿವರನ್ನಾಗಿ ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡಲ್ಲ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.

    ಚಿಕ್ಕಬಳಾಪುರ ವಿಧಾನಸಭಾ ಕ್ಷೇತ್ರದ ಮಂಚನಬಲೆ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಮಂಡ್ಯ, ಹಾಸನ, ಚಿಕ್ಕಬಳ್ಳಾಪುರ ಸೇರಿದಂತೆ ಎಲ್ಲಾ ಕಡೆ ಒಕ್ಕಲಿಗರನ್ನ ಮಂತ್ರಿ ಮಾಡಿದ್ದು ನಾನೇ. ಶಾಸಕ ಡಾ.ಸುಧಾಕರ್ ಅವರನ್ನು ಸಹ ಮಂತ್ರಿ ಮಾಡುವುದು ನಾನೇ. ಹೀಗಾಗಿ ಒಕ್ಕಲಿಗ ಸಮುದಾಯಕ್ಕೆ ಅತಿ ಹೆಚ್ಚು ಕೊಡುಗೆ ಕೊಟ್ಟ ನಾನು ನಿಜವಾದ ಒಕ್ಕಲಿಗ. ನನ್ನಷ್ಟು ದೊಡ್ಡ ಒಕ್ಕಲಿಗ ಯಾರು ಇಲ್ಲ ಎಂದು ಹೇಳಿದರು.

    ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಜಾತಿ ಹೆಸರಲ್ಲಿ ನನಗೆ ಮತ ನೀಡದಂತೆ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನೀವು ಜಾತಿ ನೋಡದೇ ನನಗೆ ಮತ ನೀಡಿ. ಈ ಬಾರಿಯೂ ಗೆಲ್ಲಿಸುತ್ತೀರಿ ಎನ್ನುವ ವಿಶ್ವಾಸವಿದೆ ಎಂದು ಮತದಾರರ ಮನವೊಲಿಸಿದರು.

    ಈ ಭಾಗಕ್ಕೆ ಎತ್ತಿನಹೊಳೆ ನೀರು ಹರಿಸಿಯೇ ನಾನು ಪ್ರಾಣ ಬಿಡುತ್ತೇನೆ ಎಂದು ಪುನರುಚ್ಚರಿಸಿದ ಸಂಸದರು, ಇದಕ್ಕೆ ಅನೇಕ ಮಂದಿ ವಿರೋಧಿಸಿದರು. ಆದರೆ ನಾನು ಹೆದರುವುದಿಲ್ಲ. ಈ ಭಾಗಕ್ಕೆ ನೀರು ಹರಿಸದೆ ಸಾಯುವುದಿಲ್ಲ. ಎತ್ತಿನಹೊಳೆ ಯೋಜನೆಯಿಂದ ಕರಾವಳಿ ಭಾಗದ ಜನರು ನನಗೆ ಕಪ್ಪು ಪತಾಕೆ ಹಾರಿಸಿದರು. ನಾನು ಅವರ ವಿರೋಧ ಕಟ್ಟಿಕೊಂಡೆ. ಯಾಕೆ ಸ್ವಂತ ಊರಿನವರ ವಿರೋಧ ಕಟ್ಟಿಕೊಳ್ಳುತ್ತಿಯಾ ಅಂತ ನನ್ನ ಕೆಲ ಹಿತೈಷಿಗಳು ಹೇಳಿದರು. ಆದರೆ ಎತ್ತಿನಹೊಳೆ ನೀರನ್ನು ಈ ಭಾಗಕ್ಕೆ ಹರಿಸುತ್ತೇನೆ ಎಂದು ಚಿಕ್ಕಬಳ್ಳಾಪುರ ಜನರಿಗೆ ಮಾತುಕೊಟ್ಟಿದ್ದೇನೆ. ಹೀಗಾಗಿ ಎತ್ತಿನಹೊಳೆ ಕಾಮಗಾರಿ ಐದು ವರ್ಷದಿಂದ ಭರದಿಂದ ಸಾಗುತ್ತಿದೆ. ಅದಕ್ಕೆ ಅಡ್ಡಿಪಡಿಸುವ ಕೆಲಸವನ್ನು ಈಗಲೂ ಮಾಡುತ್ತಿದ್ದಾರೆ. ನಾನು ಧರ್ಮಸ್ಥಳದ ಮಂಜುನಾಥನ ಪಾದ ತೊಳೆಯುವ ಪರಿಶುದ್ಧವಾದಂತಹ ಎತ್ತಿನಹೊಳೆ ನೀರನ್ನು ಹರಿಸಿಯೇ ಸಿದ್ಧ ಎಂದರು.

  • ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಾಣದ ಕಥೆ ಹೇಳಿ ಮೊಯ್ಲಿಗೆ ಟಾಂಗ್ ಕೊಟ್ಟ ಎಸ್‍ಎಂಕೆ

    ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಾಣದ ಕಥೆ ಹೇಳಿ ಮೊಯ್ಲಿಗೆ ಟಾಂಗ್ ಕೊಟ್ಟ ಎಸ್‍ಎಂಕೆ

    – ನನ್ನ ಅಭಿವೃದ್ಧಿ ಕಾರ್ಯಗಳನ್ನ ಮೊಯ್ಲಿ ತಮ್ಮದೆಂದು ಹೇಳುತ್ತಿದ್ದಾರೆ
    – ಕೇಂದ್ರದಲ್ಲಿ ಶಕ್ತಿಶಾಲಿ ಸರ್ಕಾರಕ್ಕಾಗಿ ಮೋದಿಗೆ ಮತ ನೀಡಿ

    ಚಿಕ್ಕಬಳ್ಳಾಪುರ: ಬಿಜೆಪಿಯಿಂದ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ವಿರುದ್ಧವಾಗಿ ಮತ ಚಲಾವಣೆ ಮಾಡುವಂತೆ ಈಗಾಗಲೇ ತೀರ್ಮಾನ ಮಾಡಿರುವುದರಿಂದ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರ ಪ್ರಚಾರ ಮಾಡಲು ಪಕ್ಷ ಹೇಳಿದರೆ ಪ್ರಚಾರ ಮಾಡ್ತೇನೆ ಎಂದು ಮಾಜಿ ಸಿಎಂ ಎಸ್‍ಎಂ ಕೃಷ್ಣ ಹೇಳಿದ್ದಾರೆ.

    ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಅವರ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಪಕ್ಷ ನನಗೆ ಎಲ್ಲಿ ಪ್ರಚಾರ ಮಾಡಿ ಎಂದರೆ ನಾನು ಅಲ್ಲಿಗೆ ಹೋಗುತ್ತೇನೆ. ಇವತ್ತು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರಚಾರ ಮಾಡು ಎಂದು ಹೇಳಿದ್ದಾರೆ. ಹೀಗಾಗಿ ನಾನು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದೇನೆ ಎಂದರು.

    ಇದೇ ವೇಳೆ ಮಹಾಘಟಬಂಧನ್ ವಿಚಾರವಾಗಿ ಪ್ರತಿಕ್ರಿಯೆ ನೀಡಿ, 25 ಪಕ್ಷಗಳು ಸೇರಿ ಸರ್ಕಾರ ಮಾಡಿದರೆ ಎಂತಹ ವೈವಿಧ್ಯಮಯ ಸರ್ಕಾರ ಮಾಡಲು ಸಾಧ್ಯ ನೀವೇ ಒಮ್ಮೆ ಯೋಚಿಸಿ. ಕೇಂದ್ರದಲ್ಲಿ ಯಾವಾಗಲೂ ಗಟ್ಟಿ, ಶಕ್ತಿ ಶಾಲಿ ಸರ್ಕಾರ ಇರಬೇಕು. ಹೀಗಾಗಿ ಮೋದಿಯವರ ಗಟ್ಟಿ ಸರ್ಕಾರ ಹೇಗಿದೆ ಎಂಬುದನ್ನು ಎಂದು ಅರ್ಥಮಾಡಿಕೊಂಡು ಮತ ಚಲಾಯಿಸಿ, ಮುಂದಿನ 5 ವರ್ಷವೂ ಮತ್ತೆ ಮೋದಿ ಪ್ರಧಾನಿಯಾಗಬೇಕು ಎಂಬುದೇ ತಮ್ಮ ಕೋರಿಕೆ ಎಂದರು.

    ಮೊಯ್ಲಿ ವಿರುದ್ಧ ಅಸಮಾಧಾನ: ಎತ್ತಿನಹೊಳೆ ಯೋಜನೆ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹಾಗೂ ವಿಮಾನ ನಿಲ್ದಾಣಕ್ಕೆ ಕೇಂಪೇಗೌಡ ಹೆಸರಿಡಲು ಶ್ರಮಿಸಿದ್ದ ತಾನು ಎಂದು ವೀರಪ್ಪಮೊಯ್ಲಿ ಹೇಳಿಕೊಳ್ಳುತ್ತಿದ್ದಾರೆ. ಆ ಮೂಲಕ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಕೆಲ ಅಪಪ್ರಚಾರಗಳು ನಡೆಯುತ್ತಿದ್ದಾರೆ. ಸುಳ್ಳಿನ ಸರಮಾಲೆಗಳ ಮೂಲಕ ವೀರಪ್ಪ ಮೊಯ್ಲಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

    ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿದ್ದು ನಾನು. ಆದರೆ ಮೊಯ್ಲಿ ತಾವು ಮಾಡಿದ್ದು ಎನ್ನುತ್ತಿದ್ದಾರೆ. ಜನ ಮುರ್ಖರು ಎಂದು ತಿಳಿದುಕೊಂಡು ಹಾಗೇ ಹೇಳಿದ್ದಾರಯೇ ಎಂಬುವುದು ತಿಳಿಯುತ್ತಿಲ್ಲ. ಜನ ಬುದ್ಧಿವಂತಾರಗಿದ್ದು ಚರಿತ್ರೆಯನ್ನ ತಿಳಿದುಕೊಳ್ಳುತ್ತಾರೆ. 2001-2002 ರಲ್ಲಿ ದೆಹಲಿಗೆ ಹೋಗಿ ಪ್ರಧಾನಿ ವಾಜಪೇಯಿ ರನ್ನ ಭೇಟಿ ಮಾಡಿ ವಿಮಾನ ನಿಲ್ದಾಣದ ಶಂಕುಸ್ಥಾಪನೆಗೆ ಮನವಿ ಮಾಡಿದ್ದೆ. ಆಗ ಬಿಜೆಪಿಯವರು ಎಸ್‍ಎಂ ಕೃಷ್ಣ ಕಾಂಗ್ರೆಸ್ ಸಿಎಂ ಬರಬೇಡಿ ಎಂದಿದ್ದರು. ಅದನ್ನ ಕೇಳಿಸಿಕೊಂಡ ವಾಜಪೇಯಿ ಅವರು ಒಂದು ಕಿವಿಯಲ್ಲಿ ಕೇಳಿ ಸುಮ್ಮನಾದರು. ಕೊನೆಗೆ ಮತ್ತೊಮ್ಮೆ ನಾನು ದಿವಂಗತ ಅನಂತ್ ಕುಮಾರ್ ಹಾಗೂ ನಿತಿನ್ ಗಡ್ಕರಿ ಮೂಲಕ ಮತ್ತೆ ಭೇಟಿ ಮಾಡಿದಾಗ ಬರಲು ಒಪ್ಪಿದರು. ಆದರೆ ಸೂಕ್ತ ರಕ್ಷಣೆ ಸಮಸ್ಯೆಯಿಂದ ದೇವನಹಳ್ಳಿ ಬದಲು ವಿಧಾನಸೌಧಕ್ಕೆ ಬಂದು ಒಂದು ಬಟನ್ ಒತ್ತುವ ಮೂಲಕ ಅಲ್ಲಿದಂಲೇ ವಿಮಾನ ನಿಲ್ದಾಣಕ್ಕೆ ಅಡಿಪಾಯ ಚಾಲನೆ ಹಾಕಿದರು. ಇದು ಚರಿತ್ರೆ, ಇತಿಹಾಸ ಎಂದರು.

    ಆಗ ವೀರಪ್ಪಮೊಯ್ಲಿ ಎಲ್ಲಿದ್ದರು ಎನ್ನುವುದೇ ನನಗೆ ಗೊತ್ತಿಲ್ಲ. ಹೀಗಾಗಿ ಜನರಿಗೆ ತಪ್ಪು ಸಂದೇಶ ನೀಡುವುದು ಸರಿಯಲ್ಲ. ಕರಾವಳಿಯವರು ಅತಿ ಬುದ್ದಿವಂತರು ಎಂಬುವುದನ್ನು ತೋರಿಸುವ ಪ್ರಯತ್ನ ಮಾಡಬೇಡಿ. ಚರಿತ್ರೆಗಳನ್ನ ತಿರುಚಿ ಬೇರೆ ವ್ಯಾಖ್ಯಾನ ನೀಡುವುದು ಸಾಧುವಲ್ಲ ಎಂದು ವೀರಪ್ಪ ಮೊಯ್ಲಿಗೆ ಟಾಂಗ್ ನೀಡಿದರು. ಕಳೆದ ಬಾರಿ ಕೇಂಪೇಗೌಡ ವಂಶಸ್ಥರಾದ ಬಚ್ಚೇಗೌಡರನ್ನ ಯಾವ ಕಾರಣಕ್ಕೆ ಸೋಲಿಸಿದ್ದಾರೆ ಎಂಬುದು ಗೊತ್ತಿಲ್ಲ. ಬಚ್ಚೇಗೌಡರನ್ನ ಬಿಟ್ಟು ಎಲ್ಲಿಂದಲೋ ಬಂದವರನ್ನ ಎರಡನೇ ಸಲ ಗೆಲ್ಲಿಸಿದ್ದು, ಇದು ಈ ಮಣ್ಣಿಗೆ ಕಳಂಕ ಬಗೆದಂತೆ ಎಂದು ಬಣ್ಣಿಸಿದರು. ಈ ಬಾರಿಯಾದರು ಬಚ್ಚೇಗೌಡ ರನ್ನ ಗೆಲ್ಲಿಸಿ ಮೋದಿ ಕೈಯನ್ನ ಬಲಪಡಿಸುವಂತೆ ಮನವಿ ಮಾಡಿಕೊಂಡರು.

  • ಸಿಎಂಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಸಚಿವ ಎಂಟಿಬಿ ನಾಗರಾಜ್

    ಸಿಎಂಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಸಚಿವ ಎಂಟಿಬಿ ನಾಗರಾಜ್

    – ಪ್ರಚಾರದ ರಿಲಾಕ್ಸ್ ಮೂಡ್‍ನಲ್ಲಿ ನಾಟಕದ ಡೈಲಾಗ್ ಹೇಳಿದ ಕಾಂಗ್ರೆಸ್ ಮುಖಂಡರು

    ಬೆಂಗಳೂರು: ಜಾತಿ ಇರುವುದು ಮದುವೆ, ಸಂಪ್ರದಾಯ ಪಾಲನೆಗೆ ಅಷ್ಟೇ. ರಾಜಕಾರಣದಲ್ಲಿ ಬೆರಳಣಿಕೆಯಷ್ಟು ಮಂದಿ ಜಾತಿ ರಾಜಕೀಯ ಮಾಡುತ್ತಾರೆ ಎಂದು ಸಚಿವ ಎಂಟಿಬಿ ನಾಗರಾಜ್, ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ನೆಲಮಂಗಲ ತಾಲೂಕಿನ ಡಾಬಸ್‍ಪೇಟೆಯಲ್ಲಿ ವೀರಪ್ಪ ಮೊಯ್ಲಿ ಪರ ಪ್ರಚಾರದ ವೇಳೆ ಮಾತನಾಡಿದ ಸಚಿವರು, ಮಂಡ್ಯದಲ್ಲಿ ಜಾತಿಯ ರಾಜಕೀಯ ಮಾಡಿದ್ದಕ್ಕೆ ಅಸಮಾಧಾನ ಹೊರ ಹಾಕಿದರು. ಈ ಮೂಲಕ ಪರೋಕ್ಷವಾಗಿ ಸುಮಲತಾ ಅಂಬರೀಶ್ ಪರ ಬ್ಯಾಟಿಂಗ್ ಬೀಸಿದ್ದಾರೆ.

    ಸಿಎಂ ಕುಮಾರಸ್ವಾಮಿ ಅವರದ್ದು ಗೌಡರ ಜಾತಿ ಅಲ್ವಾ? ಅವರು 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಇರಬೇಕಲ್ವಾ? ಹೀಗಾಗಿ ರಾಜ್ಯದ ಮೈತ್ರಿ ಸರ್ಕಾರ ಸುಭದ್ರವಾಗಿರಲು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷವು ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಬೇಕು. ಬಚ್ಚೇಗೌಡ ಒಬ್ಬರೇ ಗೌಡರಲ್ಲ, ಕುಮಾರಸ್ವಾಮಿ ಅವರು ಕೂಡ ಗೌಡರೇ. ಚುನಾವಣೆಯಲ್ಲಿ ಜಾತಿ ಕೆಲಸ ಮಾಡಲ್ಲ. ಯಾರದರೂ ಶಾಸಕರು ಅಥವಾ ಸಂಸದರು ಜಾತಿ ಆಧಾರವಾಗಿ ಗೆದ್ದಿದ್ದಾರಾ ಎಂದು ಪ್ರಶ್ನಿಸಿ ವ್ಯಂಗ್ಯವಾಡಿದರು.

    ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರದ ವೇಳೆಯ ರಿಲಾಕ್ಸ್ ಮೂಡಿನಲ್ಲಿ ವಸತಿ ಸಚಿವ ಎಂ.ಟಿ.ಬಿ ನಾಗರಾಜ್, ಅಭ್ಯರ್ಥಿ ವೀರಪ್ಪ ಮೊಯ್ಲಿ ಹಾಗೂ ನೆಲಮಂಗಲ ಸ್ಥಳೀಯ ಶಾಸಕ ಡಾ.ಕೆ.ಶ್ರೀನಿವಾಸ್ ಮೂರ್ತಿ ನಾಟಕದ ಡೈಲಾಗ್ ಹೇಳಿ ರಂಜಿಸಿದರು.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಅಗಳಕುಪ್ಪೆಯಲ್ಲಿ ನೆಲಮಂಗಲ ಶಾಸಕ ಶ್ರೀನಿವಾಸಮೂರ್ತಿ ಕುರುಕ್ಷೇತ್ರ ನಾಟಕದ ಕರ್ಣನ ಕಂದ ಪದ್ಯ ಹಾಡಿ ರಂಜಿಸಿದ್ದಾರೆ. ದುರ್ಯೋಧನನ ಪಾತ್ರದ ಜೊತೆಗೆ ಕರ್ಣ ಹೇಳುವ ಹಾಡನ್ನು ನೆಲಮಂಗಲ ಶಾಸಕ ಹಾಡಿದರು. ವಸತಿ ಸಚಿವ ಎಂಟಿಬಿ ನಾಗರಾಜ್ ಅವರು ಒತ್ತಾಯದ ಮೇರೆಗೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಸಿಲಿನ ನಡುವೆ ಗಾನಬಜಾನ ಮಾಡಿದ್ದಾರೆ.

    ಈ ವೇಳೆ ಕಾರ್ಯಕರ್ತರು ಹಾಗೂ ಹಲವಾರು ನಾಯಕರು ಹಾಡಗಳನ್ನು ಹಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಶಾಸಕರ ಧ್ವನಿಗೆ ಧ್ವನಿಗೂಢಿಸಿದ ವೀರಪ್ಪ ಮೊಯ್ಲಿ ನಮ್ಮ ಭಾಗದಲ್ಲಿ ಯಕ್ಷಗಾನ ಬಲು ಜೋರಾಗಿರುತ್ತದೆ ಎಂದು ಮಾತಿನ ಚಟಾಕಿ ಹಾರಿಸಿದರು.

  • ಘಟಾನುಘಟಿ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ-ಎಲೆಕ್ಷನ್ ಗೆಲ್ಲಲು ದೇವಮೂಲೆಗೆ ಮೊರೆ!

    ಘಟಾನುಘಟಿ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ-ಎಲೆಕ್ಷನ್ ಗೆಲ್ಲಲು ದೇವಮೂಲೆಗೆ ಮೊರೆ!

    ಚಿಕ್ಕಬಳ್ಳಾಪುರ: ಲೋಕಸಭಾ ಅಖಾಡದಲ್ಲಿರೋ ಈ ಇಬ್ಬರು ಘಟಾನುಘಟಿ ನಾಯಕರುಗಳಿಗೆ ಮಾಡು ಇಲ್ಲವೇ ಮಡಿ ಎನ್ನುವಂತಾಗಿದೆ. ಒಬ್ಬರು ಮಂತ್ರಿಯಾಗಿ ಹೆಸರು ಮಾಡಿದ್ರೆ ಮತ್ತೊಬ್ಬರು ಮುಖ್ಯಮಂತ್ರಿಗಳಾಗಿ ಹೆಸರು ಮಾಡಿದವರು. ಈ ಬಾರಿ ಗೆಲ್ಲಲೇ ಬೇಕು ಅಂತ ಹಠಕ್ಕೆ ಬಿದ್ದ ಇವರಿಬ್ಬರೂ ಇದೀಗ ದೇವಮೂಲೆಯ ಮೊರೆ ಹೋಗಿದ್ದಾರೆ.

    ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಮಾಜಿ ಸಿಎಂ ಡಾ.ಎಂ.ವೀರಪ್ಪ ಮೊಯ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕಳೆದ ಭಾರಿ ತ್ರಿಕೋನ ಸ್ಪರ್ಧೆ ನಡುವೆಯೂ ಸುಲಭವಾಗಿ ಗೆಲುವು ಸಾಧಿಸಿದ್ದ ಮೊಯ್ಲಿ, ಈ ಬಾರಿ ಜಯಕ್ಕಾಗಿ ಕಷ್ಟಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಮೈತ್ರಿ ಕಾರ್ಯಕರ್ತರಲ್ಲಿ ಸಮನ್ವಯ ಮೂಡದ ಕಾರಣ ಮೊಯ್ಲಿ ಏನಾದ್ರು ಮಾಡಿ ಈ ಬಾರಿಯೂ ತಮ್ಮನ್ನು ಗೆಲ್ಲಿಸುವಂತೆ ದೇವರ ಮೊರೆ ಹೋಗಿದ್ದಾರೆ. ಹಾಗಾಗಿ ಬಾಗೇಪಲ್ಲಿ ತಾಲೂಕಿನ ಗೂಳೂರು, ಚಾಕವೇಲು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ.

    ತಮ್ಮ ಎದುರಾಳಿ ಅಭ್ಯರ್ಥಿ ದೇವಮೂಲೆಯಿಂದ ಪ್ರಚಾರ ಆರಂಭಿಸಿದ್ದೆ ತಡ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ಸಹ, ತಮ್ಮ ಅಪಾರ ಬೆಂಬಲಿಗರ ಜೊತೆ ಬಾಗೇಪಲ್ಲಿಯ ಚಾಕವೇಲು ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದಲೇ ಅಧಿಕೃತ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಕ್ಷೇತ್ರದ ದೇವಮೂಲೆಯಿಂದ ಈ ಬಾರಿ ಚುನಾವಣಾ ಪ್ರಚಾರ ಮಾಡಿದ್ರೆ ಗೆಲ್ಲುತ್ತೀರಿ ಅಂತ ಪಂಡಿತರು ಹೇಳಿದ್ದರಿಂದ ಈ ಇಬ್ಬರು ನಾಯಕರು ಚಾಚು ತಪ್ಪದೆ ಪಾಲಿಸುತ್ತಿದ್ದಾರೆ. ಇಬ್ಬರು ದೇವಮೂಲೆಯಲ್ಲಿರುವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಪ್ರಚಾರ ಆರಂಭಿಸಿದ್ದಾರೆ.

    ಇಬ್ಬರು ಘಟಾನುಘಟಿ ಅಭ್ಯರ್ಥಿಗಳು ಈ ಬಾರಿಯ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಲೆಕ್ಕಚಾರ ತಪ್ಪಾಗಬಾರದೆಂಬ ಲೆಕ್ಕದಲ್ಲಿ ಹೋದ ಕಡೆಯೆಲ್ಲಾ ದೇವರ ಮೊರೆ ಹೋಗುತ್ತಿದ್ದಾರೆ.

  • ಯಡಿಯೂರಪ್ಪಗೆ ಹಣ ವಸೂಲಿ ಮಾಡಿ ಡೆಲ್ಲಿಗೆ ಕಳಿಸೋದು ಕಾಯಕ: ವೀರಪ್ಪ ಮೊಯ್ಲಿ

    ಯಡಿಯೂರಪ್ಪಗೆ ಹಣ ವಸೂಲಿ ಮಾಡಿ ಡೆಲ್ಲಿಗೆ ಕಳಿಸೋದು ಕಾಯಕ: ವೀರಪ್ಪ ಮೊಯ್ಲಿ

    ಚಿಕ್ಕಬಳ್ಳಾಪುರ: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪಗೆ ಹಣ ವಸೂಲಿ ಮಾಡಿ ದೆಹಲಿಗೆ ಕಳಿಸುವುದು ಕೆಲಸ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ ಗಂಭೀರ ಆರೋಪ ಮಾಡಿದ್ದಾರೆ.

    ವೀರಪ್ಪ ಮೊಯ್ಲಿ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ರಾಜ್ಯ ಹಾಗೂ ದೇಶದ ಜನರ ಅಭಿವೃದ್ಧಿ ಕಾಂಗ್ರೆಸ್-ಜೆಡಿಎಸ್‍ನಿಂದ ಮಾತ್ರ ಸಾಧ್ಯ. ಆದರೆ ಬಿಜೆಪಿಯ ಯಡಿಯೂರಪ್ಪಗೆ ಹಣ ವಸೂಲಿ ಮಾಡಿ ದೆಹಲಿಗೆ ಕಳಿಸುವುದು ಕಾಯಕ ಎಂದು ಟೀಕೆ ಮಾಡಿದರು.

    ಈಗಾಗಲೇ ದೆಹಲಿಗೆ ಯಡಿಯೂರಪ್ಪ ವರ್ಗಾವಣೆಯ 1,800 ಕೋಟಿ ರೂಪಾಯಿಯ ಡೈರಿ ಸಿಕ್ಕಿದೆ. ಅದನ್ನು ಈಗ ಮೋದಿ ಸರ್ಕಾರ ಅಡಗಿಸಬಹುದು. ಮುಂದೆ ಚುನಾವಣೆ ನಂತರ ಮೇ ತಿಂಗಳಿನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಅದನ್ನು ಬಯಲು ಮಾಡ್ತೇವೆ ಎಂದರು.

    ಕಳೆದ ಎರಡು ಬಾರಿ ನೀವು ಸಂಸದರಾಗಿ ಆಯ್ಕೆ ಮಾಡಿದ್ದು, ಈ ಬಾರಿಯೂ ನೀವು ನಮಗೆ ಅವಕಾಶ ಮಾಡಿಕೊಡಿ. ಈ ರಾಜ್ಯದಲ್ಲಿ ಕುಮಾರಸ್ವಾಮಿ ಸರ್ಕಾರ ಭದ್ರವಾಗಿರಬೇಕು. ಕೇಂದ್ರದಲ್ಲಿ ರಾಹುಲ್ ಗಾಂಧಿ ಪ್ರಧಾನಿಯಾಗಬೇಕಿದೆ. ಇದಲ್ಲದೆ ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸಲು ನೀವು ನನಗೆ ಮತ ನೀಡಬೇಕಿದೆ. ಮನೆ ಮನೆಯಲ್ಲಿ ಯುವಕ – ಯುವತಿಯರಿಗೆ ಕೆಲಸ, ಹೊಲ, ಹೊಲಕ್ಕೆ ಜಲ, ಮನೆ ಮನೆಗೆ ಕುಡಿಯುವ ನೀರು ಈ ಮೂರು ದೀಕ್ಷೆಗಳನ್ನು ಈಡೇರಿಸಲು ತಾವು ಮತ ನೀಡಬೇಕು ಎಂದು ವೀರಪ್ಪ ಮೊಯ್ಲಿ ತಮ್ಮ ಪ್ರಚಾರ ಭಾಷಣದಲ್ಲಿ ಮನವಿ ಮಾಡಿಕೊಂಡರು.

    ದೊಡ್ಡಬಳ್ಳಾಪುರ ತಾಲೂಕಿನ ಎಸ್ ಎಸ್ ಘಾಟಿ, ತೂಬಗರೆ, ಮೇಳೆಕೋಟೆ ಹಾಗೂ ಕಾರಹಳ್ಳಿ ಗ್ರಾಮಗಳಲ್ಲಿ ವೀರಪ್ಪ ಮೊಯ್ಲಿ ಚುನಾವಣಾ ಪ್ರಚಾರ ನಡೆಸಿದ್ದು, ವೀರಯ ಮೊಯ್ಲಿಗೆ ದೇವನಹಳ್ಳಿ ಜೆಡಿಎಸ್ ಶಾಸಕ ನಾರಾಯಣಸ್ವಾಮಿ, ವಸತಿ ಸಚಿವ ಎಂಟಿಬಿ ನಾಗರಾಜ್ ಸಾಥ್ ನೀಡಿದರು.

  • ಮೊಯ್ಲಿ ಹೆಸರೇ ನಮ್ಮ ಗೆಲುವಿಗೆ ಶ್ರೀರಕ್ಷೆ, ಮೊಯ್ಲಿ ಅಂದ್ರೆ ಸಾಕು ನಾವ್ ಗೆದ್ದು ಬಿಡ್ತೀವಿ: ಸುಧಾಕರ್

    ಮೊಯ್ಲಿ ಹೆಸರೇ ನಮ್ಮ ಗೆಲುವಿಗೆ ಶ್ರೀರಕ್ಷೆ, ಮೊಯ್ಲಿ ಅಂದ್ರೆ ಸಾಕು ನಾವ್ ಗೆದ್ದು ಬಿಡ್ತೀವಿ: ಸುಧಾಕರ್

    ಚಿಕ್ಕಬಳ್ಳಾಪುರ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಎಂ ವೀರಪ್ಪ ಮೊಯ್ಲಿ ಗೆಲುವಿಗೆ ಕಾಂಗ್ರೆಸ್ ಕಾರ್ಯಕರ್ತರೆಲ್ಲಾ ಶ್ರಮಿಸಬೇಕು ಎಂದು ಚಿಕ್ಕಬಳ್ಳಾಪುರ ಶಾಸಕ ಡಾ.ಕೆ. ಸುಧಾಕರ್ ಮನವಿ ಮಾಡಿದ್ದಾರೆ.

    ಚಿಕ್ಕಬಳ್ಳಾಪುರ ಪಕ್ಷದ ಕಾಂಗ್ರೆಸ್ ಕಚೇರಿಯಲ್ಲಿ ತಮ್ಮ ಬೆಂಬಲಿಗರ ನೇತೃತ್ವದಲ್ಲಿ ಚುನಾವಣಾ ಸಂಬಂಧ ಶಾಸಕ ಸುಧಾಕರ್ ಸಭೆ ನಡೆಸಿದ್ದಾರೆ. ಈ ವೇಳೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನ ಬೆಂಬಲಿಸಬೇಕು. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ನಾವು ನಮಗೆ ಎಷ್ಟೇ ನೋವಾಗಿದ್ದರೂ, ಕೆಲ ನಾಯಕರಿಂದ ಅವಮಾನ ಆಗಿದ್ರೂ, ಪಕ್ಷಕ್ಕೆ ನಿಷ್ಠೆಯಿಂದ ಇರುತ್ತೇವೆ. ನಾನು ನನ್ನ ಕಾರ್ಯಕರ್ತರು ಮತ್ತು ಬೆಂಬಲಿಗರು ಎಂದೂ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಮಾಡಲ್ಲ ಎಂದು ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ.

    ಸೋಮವಾರ ವೀರಪ್ಪ ಮೊಯ್ಲಿ ನಾಮಪತ್ರ ಸಲ್ಲಿಸಲಿದ್ದು, ಅಂದೇ ಬಿಜೆಪಿ ಅಭ್ಯರ್ಥಿ ಸಹ ನಾಮಪತ್ರ ಸಲ್ಲಿಸಲಿದ್ದಾರೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಂದು ಕಾಂಗ್ರೆಸ್ ಕಾರ್ಯಕರ್ತರು ಸಮಯಕ್ಕೆ ಸರಿಯಾಗಿ ಬರಬೇಕು ಎಂದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮಗೆ ವೀರಪ್ಪ ಮೊಯ್ಲಿ ಅವರೇ ನಮ್ಮ ಶಕ್ತಿ, ಮೊಯ್ಲಿ ಹೆಸರೇ ನಮ್ಮ ಗೆಲುವಿಗೆ ಶ್ರೀರಕ್ಷೆ, ವೀರಪ್ಪ ಮೊಯ್ಲಿ ಅಂದರೆ ಸಾಕು ನಾವ್ ಗೆದ್ದು ಬಿಡುತ್ತೇವೆ. ಅವರ ಹೆಸರೇ ನಮ್ಮನ್ನ ಗೆಲ್ಲಿಸಲಿದೆ ಎಂದರು.

    ಕಳೆದ ವಿಧಾನಸಭಾ ಚುನಾವಣೆ ವೇಳೆ ನಾನು 80 ಸಾವಿರ ಮತಗಳನ್ನ ಪಡೆದಿದ್ದು, ಜೆಡಿಎಸ್ ಅಭ್ಯರ್ಥಿ 50 ಸಾವಿರ ಮತಗಳನ್ನ ಪಡೆದಿದ್ದರು. ಸ್ವತಂತ್ರ ಅಭ್ಯರ್ಥಿ ಸಹ 29 ಸಾವಿರ ವೋಟು ಪಡೆದಿದ್ದರು. ಈ ಎಲ್ಲಾ ಮತಗಳು ಈಗ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ಅವರಿಗೆ ಸಿಗಬೇಕು. ಚಿಕ್ಕಬಳ್ಳಾಪುರ ವಿಧಾನಸಬಾ ಕ್ಷೇತ್ರದಿಂದಲೇ 1.5 ಲಕ್ಷದ ಮತಗಳನ್ನ ನಾವು ಕೊಡಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅತಿ ಹೆಚ್ಚಿನ ಶ್ರಮ ವಹಿಸಬೇಕು ಎಂದು ಮನವಿ ಮಾಡಿದರು.

  • ‘ಸುಳ್ಳು’ಗಳೇ ಮೊಯ್ಲಿಯ ಮನೆ ದೇವರು: ಶಾಸಕ ವಿಶ್ವನಾಥ್ ಲೇವಡಿ

    ‘ಸುಳ್ಳು’ಗಳೇ ಮೊಯ್ಲಿಯ ಮನೆ ದೇವರು: ಶಾಸಕ ವಿಶ್ವನಾಥ್ ಲೇವಡಿ

    ಚಿಕ್ಕಬಳ್ಳಾಪುರ: ಮಹಾನ್ ಸುಳ್ಳಿನ ಸರದಾರರಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಎಂ.ವೀರಪ್ಪ ಮೊಯ್ಲಿ ಈ ಬಾರಿಯೂ ನಮ್ಮ ಕೆಲಸಗಳನ್ನ ಹೈಜಾಕ್ ಮಾಡಿಕೊಂಡಿದ್ದು, ಸುಳ್ಳುಗಳನ್ನೇ ತಮ್ಮ ಮನೆ ದೇವರನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಈ ಬಾರಿ ಅವರ ಮನೆ ದೇವರು ಅವರಿಗೆ ಕೈ ಕೊಡಲಿದ್ದಾರೆಂದು ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಲೇವಡಿ ಮಾಡಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕು ಕೊತ್ತಕೋಟೆ ಗ್ರಾಮದಲ್ಲಿ ನಡೆದ ಬಿಜೆಪಿ ಮಹಿಳಾ ಮೋರ್ಚಾದ ಸಭೆಯಲ್ಲಿ ಪಾಲ್ಗೊಂಡು ಎಸ್.ಆರ್.ವಿಶ್ವನಾಥ್ ಮಾತನಾಡಿದರು. ನಮಗೆ ಸುಳ್ಳು ಹೇಳಿ ಅಭ್ಯಾಸವಿಲ್ಲ. ಆದರೂ ಕೆಲ ವೇಳೆ ಸಣ್ಣ ಪುಟ್ಟ ಸುಳ್ಳು ಹೇಳುತ್ತೇವೆ. ಆದರೆ ಯಲಹಂಕ ಕ್ಷೇತ್ರದಲ್ಲಿ ಶಾಸಕರ ಅನುದಾನದಲ್ಲಿ ಮಾಡಿದ ಕೆಲಸಗಳನ್ನು ಸಂಸದ ವೀರಪ್ಪ ಮೊಯ್ಲಿ ತಮ್ಮದೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರದ ಕಾಮಗಾರಿಗಳಿಗೂ ಅವರದ್ದೇ ಫೋಟೋ ಹಾಕಿಕೊಂಡಿದ್ದಾರೆ. ಇದನ್ನು ನಂಬಲು ಜನ ಏನು ಗುಗ್ಗು ಅಂದುಕೊಂಡಿದ್ದಾರಾ ಎಂದು ಖಾರವಾಗಿ ಪ್ರಶ್ನಿಸಿದರು.

    ವೀರಪ್ಪ ಮೊಯ್ಲಿ ಬಿಡುಗಡೆ ಮಾಡಿರುವ ಸಾಧನೆಗಳ ಪುಸ್ತಕವೇ ಅವರಿಗೆ ಮಾರಕವಾಗಲಿದೆ. ಸದಾ ಸುಳ್ಳನ್ನೇ ಹೇಳುತ್ತಿರುವ ಮೊಯ್ಲಿ ಇನ್ನು 10 ವರ್ಷವಾದರೂ ಎತ್ತಿನಹೊಳೆ ನೀರು ತರಲ್ಲ. ಅವರ ವಿರುದ್ಧ ಕ್ಷೇತ್ರದ ಜನ ಬಹಳಷ್ಟು ಬೇಸತ್ತು ಹೋಗಿದ್ದಾರೆ. ಸೀಟು ಹಂಚಿಕೆ ಬಗ್ಗೆ ದೋಸ್ತಿ ಪಕ್ಷಗಳು ಗುದ್ದಾಡುತ್ತಿರುವುದರಿಂದ ಮೊಯ್ಲಿ ಅವರಿಗೆ ಅವರಿಗೆ ಟಿಕೆಟ್ ಸಿಗುವುದೇ ಅನುಮಾನವಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಚುನಾವಣಾ ಉತ್ಸಾಹವೇ ಇಲ್ಲ. ಈ ಬಾರಿ ಬಿಜೆಪಿಗೆ ಒಳ್ಳೆಯ ವಾತಾವರಣವಿದ್ದು, ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡರು ಅವರು ಈ ಬಾರಿ ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಭರವಸೆ ಇದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv