Tag: ವಿ.ಮುನಿಯಪ್ಪ

  • ಸುಳ್ಳು ಆರೋಪ ಮಾಡಿದ್ರೆ ದಾಖಲೆ ಸಮೇತ ನಿಮ್ಮ ಅವ್ಯವಹಾರಗಳನ್ನ ಬಯಲು ಮಾಡ್ತೇನೆ: ಸುಧಾಕರ್

    ಸುಳ್ಳು ಆರೋಪ ಮಾಡಿದ್ರೆ ದಾಖಲೆ ಸಮೇತ ನಿಮ್ಮ ಅವ್ಯವಹಾರಗಳನ್ನ ಬಯಲು ಮಾಡ್ತೇನೆ: ಸುಧಾಕರ್

    ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಕಾಂಗ್ರೆಸ್ ಪಕ್ಷದ ಶಾಸಕ ವಿ.ಮುನಿಯಪ್ಪ ಅವರು ನಿನ್ನೆ ಶಾಸಕ ಸುಧಾಕರ್ ಅವರ ಮೇಲೆ ಮಾಡಿದ್ದ ಆರೋಪಗಳಿಗೆ ಅನರ್ಹ ಶಾಸಕ ಸುಧಾಕರ್ ತಿರುಗೇಟು ನೀಡಿದ್ದು, ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದರೆ ನಿಮ್ಮ ಅವ್ಯವಹಾರಗಳನ್ನು ದಾಖಲೆ ಸಮೇತ ಬಯಲು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಿ.ಮುನಿಯಪ್ಪ ಅವರು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನ ಮಾಡಿದ್ದಾರೆ. ಆದರೆ ನಾನು ರಾಜಕಾರಣಕ್ಕೂ ಬರುವ ಮುನ್ನವೇ ಆರ್ಥಿಕವಾಗಿ ಸದೃಢನಾಗಿದ್ದೇನೆ. ಕೋಟ್ಯಾಂತರ ರೂಪಾಯಿ ಸಾಲ ಮಾಡಿ ನಾನು ವಿದ್ಯಾಸಂಸ್ಥೆ ಕಟ್ಟಿರುತ್ತೇನೆ. 20 ವರ್ಷದಿಂದ ನಾನು ಆದಾಯ ತೆರಿಗೆ ಪಾವತಿಸುತ್ತಿದ್ದು ಪಾರದರ್ಶಕವಾಗಿದೆ. ಆದರೆ ರಾಜಕಾರಣಕ್ಕೆ ಬಂದ ಮೇಲೆ ಮುನಿಯಪ್ಪ ಅವರು ಯಾವ ಮಟ್ಟಕ್ಕೆ ಬೆಳೆದಿದ್ದಾರೆ ಎಂಬುದು ಗೊತ್ತು ಎಂದಿದ್ದಾರೆ.

    ಇದೇ  ವೇಳೆ ವಿ.ಮುನಿಯಪ್ಪ ಅವರ ವಿರುದ್ಧವೂ ಆರೋಪ ಮಾಡಿದರುವ ಸುಧಾಕರ್ ಅವರು, ಬೆಂಗಳೂರಿನಲ್ಲಿ ನಿಮಗೆ ಎಷ್ಟು ಕಟ್ಟಡಗಳಿವೆ ಎಷ್ಟು ಬಾಡಿಗೆ ಬರುತ್ತಿದೆ. ವಿದ್ಯಾಸಂಸ್ಥೆಗಳ ವಹಿವಾಟು ಎಷ್ಟರ ಮಟ್ಟಿಗೆ ಅಭಿವೃದ್ಧಿ ಪಡಿಸಿಕೊಂಡಿದ್ದೀರಿ ಎಂಬುವುದು ನನಗೆ ಅರಿವಿದೆ. ನನ್ನ ಶಿಕ್ಷಣದ ಬಗ್ಗೆ ನಿಮಗೇ ಸಂದೇಹಗಳಿದ್ದಾರೆ ಆರ್ ಟಿಐ ಹಾಕಿ ನನ್ನ ವಿದ್ಯಾಭ್ಯಾಸದ ಮಾಹಿತಿ ಪಡೆದುಕೊಳ್ಳಿ. ರಾಜಕೀಯಕ್ಕೆ ಬಂದ ನಂತರ ನನ್ನ ವಹಿವಾಟು ಎಷ್ಟು, ನಿಮ್ಮ ವಹಿವಾಟು ಎಷ್ಟು ಎಂಬ ಮಾಹಿತಿ ಪಡೆಯಿರಿ ಎಂದು ಸವಾಲು ಎಸೆದಿದ್ದಾರೆ.

    ಮಾನ್ಯ ವಿ.ಮುನಿಯಪ್ಪ ಅವರು ಗಣಿ ಇಲಾಖೆಯ ಮಂತ್ರಿಗಳಾಗಿದ್ದಾಗ ಏನೇನು ಅವ್ಯವಾಹಾರ ಮಾಡಿದ್ದೀರಿ. ಅಧಿಕಾರಿಗಳ ವರ್ಗಾವಣೆಯಲ್ಲಿ ಯಾವ ರೀತಿ ದಂಧೆ ಮಾಡಿದ್ದೀರಿ ಗೊತ್ತಿದೆ. ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನ ಮಾಡಿದಲ್ಲಿ ನಾನು ಸಹಿಸುವುದಿಲ್ಲ. ದಾಖಲೆಗಳ ಸಮೇತ ನಿಮ್ಮ ಅವ್ಯವಹಾರಗಳನ್ನ ಬಯಲು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು. ಇದನ್ನು ಓದಿ: ಸುಧಾಕರ್‌ಗೆ ಕೋಟ್ಯಂತರ ಹಣ ಎಲ್ಲಿಂದ ಬರುತ್ತೆ – ವಿ ಮುನಿಯಪ್ಪ ಕಿಡಿ

    ನಿನ್ನೆಯಷ್ಟೇ ಅನರ್ಹ ಶಾಸಕ ಸುಧಾಕರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ, ಅವರು ಸುಧಾಕರ್ ಎಂಬಿಬಿಎಸ್ ಮಾಡಿರುವುದು ಅನುಮಾನ ಎಂದಿದ್ದರು. ಅಲ್ಲದೇ ಸುಧಾಕರ್ ಅವರಿಗೆ ಕೋಟ್ಯಾಂತರ ರೂಪಾಯಿ ಎಲ್ಲಿಂದ ಬರುತ್ತೆ. ಸುಧಾಕರ್ ಕುಟುಂಬ ಗಣಿಗಾರಿಕೆಯಲ್ಲಿ ತೊಡಗಿದ್ದು, ಗಣಿಗಾರಿಕೆ ಮಡುವ ಪ್ರತಿಯೊಬ್ಬರು ಸುಧಾಕರ್ ಗೆ ಪ್ರತಿ ತಿಂಗಳು ಇಂತಿಷ್ಟು ಅಂತ ಹಣ ಅವರಿಗೆ ನೀಡಬೇಕೆಂದು ಆರೋಪ ಮಾಡಿದ್ದರು.

  • ನಾನು, ಎಚ್‍ಡಿಡಿ ಬಡಿದಾಡಿದಷ್ಟು ನೀವು ಜಗಳ ಮಾಡಿಲ್ಲ: ಡಿಕೆಶಿ

    ನಾನು, ಎಚ್‍ಡಿಡಿ ಬಡಿದಾಡಿದಷ್ಟು ನೀವು ಜಗಳ ಮಾಡಿಲ್ಲ: ಡಿಕೆಶಿ

    – ವಿ.ಮುನಿಯಪ್ಪ ಬೆಂಬಲಿಗರ ಮನವೊಲಿಸಿದ ಸಚಿವರು
    – ರಾಹುಲ್ ಗಾಂಧಿ ಹೇಳಿದ್ದಕ್ಕೆ ವಿಧಿಯಿಲ್ಲದೆ ಒಂದಾಗಿದ್ದೇವೆ
    – ಆಗಿದ್ದನ್ನು ಮರೆತು ಕೆ.ಎಚ್.ಮುನಿಯಪ್ಪನವರನ್ನು ಗೆಲ್ಲಿಸೋಣ

    ಚಿಕ್ಕಬಳ್ಳಾಪುರ: ನಾನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅವರು ಜೊತೆಗೆ ಬಡಿದಾಡಿದಷ್ಟು ನೀವು ಜಗಳ ಮಾಡಿಲ್ಲ. ಈ ಹಿಂದೆ ಆಗಿದ್ದನ್ನು ಮರೆತು ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರನ್ನು ಗೆಲ್ಲಿಸೋಣ ಎಂದು ಬೃಹತ್ ನೀರಾವರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಶಾಸಕ ವಿ.ಮುನಿಯಪ್ಪ ಅವರ ಬೆಂಬಲಿಗರ ಮನವೊಲಿಸಿದ್ದಾರೆ.

    ಶಿಡ್ಲಘಟ್ಟ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಸಚಿವರು, ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರುವುದು ಸಹಜ. ನೀವು ಇಲ್ಲ ಅಂದ್ರೆ ವಿ.ಮುನಿಯಪ್ಪ, ನಾನು, ಕೆ.ಎಚ್.ಮುನಿಯಪ್ಪ ಯಾರು ಇಲ್ಲವಾಗುತ್ತೇವೆ. ನಾವೆಲ್ಲರೂ ಒಂದಾಗಿ ಹೋಗಬೇಕು. ಈ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಏನೆಲ್ಲ ನಡೆಯಿತು ಅಂತ ನಿಮಗೆ ಗೊತ್ತಿದೆ. ಅವರು ನಾವು ಬಡೆದಾಡಿಕೊಂಡು 35ರಿಂದ 40 ವರ್ಷ ದೂರ ಉಳಿದ್ವಿ. ಆದರೆ ಈಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹೇಳಿದ್ದಕ್ಕೆ ಕಾಂಗ್ರೆಸ್ ಮತ್ತು ದೇಶ ಉಳಿಸಲು ಜೆಡಿಎಸ್ ಜೊತೆಗೆ ಒಂದಾಗಿದ್ದೇವೆ ಎಂದು ಹೇಳಿದರು. ಇದನ್ನು ಓದಿ : ಕಾರ್ಯಕರ್ತರ ಕಿತ್ತಾಟದ ನಡುವೆಯೂ ಕೋಲಾರ ನಾಯಕರ ಮುನಿಸಿಗೆ ತೇಪೆ ಹಚ್ಚಿ ಡಿಕೆಶಿ ಸಂಧಾನ!

    ಈ ಹಿಂದೆ ಆಗಿದ್ದನ್ನು ಮರೆತು ಸಂಸದ, ಕೋಲಾರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರನ್ನು ಗೆಲ್ಲಿಸೋಣ. ಯಾವ ಚುನಾವಣೆ ಯಾವಾಗ ಬರುತ್ತದೆ ಅಂತ ಗೊತ್ತಿಲ್ಲ. ಸಚಿವ ಕೃಷ್ಣಭೈರೇಗೌಡ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಗೆಲ್ಲುತ್ತಾರೆ ಎನ್ನುವ ವಿಶ್ವಾಸವಿದೆ. ಹೀಗಾಗಿ ಶಿಡ್ಲಘಟ್ಟ ವಿ.ಮುನಿಯಪ್ಪ ಅವರನ್ನು ಮಂತ್ರಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಿರ್ಧಾರವನ್ನು ಉತ್ತರ ಕರ್ನಾಟಕ ಭಾಗದ ಎರಡೂ ಪಕ್ಷಗಳ ಕಾರ್ಯಕರ್ತರು ಸ್ವಾಗತಿಸಿದ್ದಾರೆ. ಆದರೆ ಮೈಸೂರು ಕರ್ನಾಟಕ ಭಾಗದಲ್ಲಿ ಭಿನ್ನಾಭಿಪ್ರಾಯ ಸಹಜವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಸಂಸದರು ಹಾಗೂ ಶಾಸಕರು ಅನುದಾನ ಕೊಡಬೇಕು. ಒಂದು ವೇಳೆ ಅನುದಾನ ನೀಡದಿದ್ದಾಗ ಈ ತರಹದ ಭಿನ್ನಾಭಿಪ್ರಾಯ ಬರುವುದು ಸಹಜ ಎಂದು ಪರೋಕ್ಷವಾಗಿ ಕೆ.ಎಸ್.ಮುನಿಯಪ್ಪ ಅವರಿಗೆ ಟಾಂಗ್ ಕೊಟ್ಟರು.

    ನಮ್ಮ ಕ್ಷೇತ್ರದಲ್ಲೂ ಅನುದಾನ ವಿಚಾರವಾಗಿ ಸಮಸ್ಯೆಯಾಗಿತ್ತು. ನಮ್ಮ ಕ್ಷೇತ್ರದಲ್ಲೂ ಓರ್ವ ಹೆಣ್ಣು ಮಗಳನ್ನು ಕರೆದುಕೊಂಡು ಬಂದು ಗೆಲ್ಲಿಸಿದ್ದೆ. ಆದರೆ ಅವರು ನನ್ನ ಬಿಟ್ಟು ಏನೋ ಮಾಡುವುದಕ್ಕೆ ಹೋದರು. ಅದಕ್ಕೆ ನಡಿಯವ್ವ ಅಂತ ಪ್ಯಾಕ್ ಮಾಡಿ ಕಳಿಸಿಕೊಟ್ಟೆ ಎಂದು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್ ಗೌಡ ವಿರುದ್ಧ ಗುಡುಗಿದರು.

    ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ರಾಜ್ಯದ 20ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಅನೇಕ ನಾಯಕರು ಮೈತ್ರಿಯಲ್ಲಿ ಬಿರುಕು ತರುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಏನೇ ಭಾಷಣ ಮಾಡಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

  • ಕಾರ್ಯಕರ್ತರ ಕಿತ್ತಾಟದ ನಡುವೆಯೂ ಕೋಲಾರ ನಾಯಕರ ಮುನಿಸಿಗೆ ತೇಪೆ ಹಚ್ಚಿ ಡಿಕೆಶಿ ಸಂಧಾನ!

    ಕಾರ್ಯಕರ್ತರ ಕಿತ್ತಾಟದ ನಡುವೆಯೂ ಕೋಲಾರ ನಾಯಕರ ಮುನಿಸಿಗೆ ತೇಪೆ ಹಚ್ಚಿ ಡಿಕೆಶಿ ಸಂಧಾನ!

    – ಕೋಲಾರ ಕಾಂಗ್ರೆಸ್ಸಿನಲ್ಲಿ ನಿಲ್ಲದ ಭಿನ್ನಮತ
    – ಸಂಸದರ ವಿರುದ್ಧ ಧಿಕ್ಕಾರ ಕೂಗಿದ ಕಾರ್ಯಕರ್ತರು
    – ಶಿಡ್ಲಘಟ್ಟ ಕಾಂಗ್ರೆಸ್ ಕಚೇರಿಯಲ್ಲಿ ಸಂಧಾನ

    ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಕೋಲಾರ ಲೋಕಸಭಾ ಕ್ಷೇತ್ರದ, ಕಾಂಗ್ರೆಸ್ ಪಕ್ಷದಲ್ಲಿ ಭುಗಿಲೆದ್ದ ಭಿನ್ನಮತ ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ.

    ಸಂಸದ ಕೆ.ಎಚ್ ಮುನಿಯಪ್ಪರ ಪಕ್ಷ ವಿರೋಧಿ ಚಟುವಟಿಕೆಗಳಿಂದ ಕೆಂಡಾಮಂಡಲರಾಗಿರುವ ಕಾಂಗ್ರೆಸ್ ನಾಯಕರು ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಮುಂದಾಗಿರೋದು ಮಗ್ಗಲು ಮುಳ್ಳಾಗಿದೆ. ವಿರೋಧ ಜಾಸ್ತಿಯಾಗುತ್ತಿರುವುದನ್ನು ಕಂಡ ಕೆ.ಎಚ್ ಮುನಿಯಪ್ಪ ಟ್ರಬಲ್ ಶೂಟರ್ ಡಿಕೆಶಿ ಮುಖಾಂತರ ತೇಪೆ ಹಾಕೋ ಕೆಲಸಕ್ಕೆ ಮುಂದಾಗಿ ಇಂದು ಸಂಧಾನ ಮಾಡಿದ್ದಾರೆ.

    ಕೋಲಾರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೆ.ಎಚ್ ಮುನಿಯಪ್ಪ ವಿರುದ್ಧ ಮುನಿಸಿಕೊಂಡಿದ್ದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ವಿ. ಮುನಿಯಪ್ಪ ನಡುವಿನ ಮುನಿಸು ದೂರ ಮಾಡಲು ಇಂದು ಡಿಕೆ ಶಿವಕುಮಾರ್ ಮುಂದಾಗಿದ್ದರು. ಶಿಡ್ಲಘಟ್ಟ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮುನಿಯಪ್ಪದ್ವಯರ ನಡುವೆ ಕಾರ್ಯಕರ್ತರ ಸಮ್ಮುಖದಲ್ಲೇ ಭಿನ್ನಮತ ಶಮನಕ್ಕೆ ಮುಂದಾಗಿದ್ರು. ಆದ್ರೆ ಆರಂಭದಲ್ಲೇ ಕೆ.ಎಚ್ ಮುನಿಯಪ್ಪ ವಿರುದ್ಧ ಧಿಕ್ಕಾರಗಳ ಘೋಷಣೆಗಳು ಮೊಳಗಿದವು.

    ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಹಾಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್ ಮುನಿಯಪ್ಪರ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ಬಾರಿ ಕೆ.ಎಚ್ ಮುನಿಯಪ್ಪರಿಗೆ ಬೆಂಬಲಿಸಬಾರದೆಂದು ಕಾರ್ಯಕರ್ತರು ಒತ್ತಾಯಿಸಿದಾಗ ಸಭೆಯಲ್ಲಿ ತಳ್ಳಾಟ ನೂಕಾಟ ನಡೆದು, ಸಚಿವ ಡಿ.ಕೆ.ಶಿವಕುಮಾರ್, ಸಂಸದ ಕೆ.ಎಚ್.ಮುನಿಯಪ್ಪ ಹಾಗೂ ವಿ.ಮುನಿಯಪ್ಪರ ಸಮ್ಮುಖದಲ್ಲೇ ಕೈ ಕೈ ಮೀಲಾಯಿಸುವ ಹಂತಕ್ಕೆ ತಲುಪಿತು. ಈ ಮಧ್ಯೆ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವಂತಾಯಿತು.

    ಸಂಸದರ ವಿರುದ್ಧ ಕಿಡಿ:
    ಸಭೆಯಲ್ಲಿ ಮಾತನಾಡಿದ ಶಾಸಕ ವಿ. ಮುನಿಯಪ್ಪ ಕೆ.ಎಚ್ ಮುನಿಯಪ್ಪನವರಿಗೆ 7 ಚುನಾವಣೆಗಳಲ್ಲೂ ನಾವು ದುಡಿದು ರಾಜಕೀಯ ಸ್ಥಾನ ಮಾನ ನೀಡಿದರೆ ನಮಗೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರು. ಕೆ.ಎಚ್ ಮುನಿಯಪ್ಪನವರೇ ನಿಮ್ಮಿಂದ ನಮಗೇನು ಆಗಬೇಕಿಲ್ಲ. ನಾನು ಸಂಕಷ್ಟದಲ್ಲಿದ್ದಾಗ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೆರವಾದರು. ಅನುಕೂಲ ಪಡೆದ ಪುಣ್ಯಾತ್ಮ ಕೆ.ಎಚ್ ಮುನಿಯಪ್ಪ ನಮ್ಮ ವಿರೋಧಿಗಳ ಜೊತೆ ಸೇರಿ ಸಂಭ್ರಮಿಸಿದರೆಂದು ಕೆಂಡಾಮಂಡಲರಾದರು. ಕೆ.ಎಚ್ ಮುನಿಯಪ್ಪ ಕುತಂತ್ರ ರಾಜಕಾರಣಿ ಎಂದು ಹಿರಿಯರು ಹೇಳಿದ್ದರು ಆದರೂ ನಾನು ನಂಬಲಿಲ್ಲ. ಮಗುವಿಗೆ ತಾಯಿ ಜನ್ಮ ನೀಡಬೇಕಾದರೆ ಎಷ್ಟು ನೋವು ತಿಂತಾರೋ ಅಷ್ಟೇ ನೋವನ್ನು ನಾನು ಈ ಪುಣ್ಯಾತ್ಮನಿಂದ ತಿಂದಿದ್ದೇನೆ ಎಂದು ನೊಂದು ತಮ್ಮ ಆಕ್ರೋಶವನ್ನು ಹಂಚಿಕೊಂಡರು. ಈ ವೇಳೆ ಕಾರ್ಯಕರ್ತರು ಕೂಡ ವಿ.ಮುನಿಯಪ್ಪರ ಮಾತಿಗೆ ಧ್ವನಿಯಾದರು.

    ರಾಜಕೀಯ ನಿವೃತ್ತಿ ಸವಾಲ್
    ಕೋಲಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎಚ್ ಮುನಿಯಪ್ಪ ಮಾತನಾಡಿ ವಿ. ಮುನಿಯಪ್ಪ ಶಾಸಕರಾಗೋ ಮೊದಲೇ ನಾನು ತಾಲೂಕು ಪಂಚಾಯತಿ ಸದಸ್ಯನಾಗಿದ್ದೆ. ಅವರ ಗೆಲುವಿಗೆ ನಾನು ಶ್ರಮಿಸಿದ್ದೇನೆ. ನಾನು ಮುನಿಯಪ್ಪರ ವಿರುದ್ಧ ಕೆಲಸ ಮಾಡಿಲ್ಲ. ಅವರಿಗೆ ಮತ ಹಾಕಬೇಡಿ ಅಂತ ನಾನೇಳಿರೋದು ಸಾಬೀತಾದರೆ ರಾಜಕೀಯ ನಿವೃತ್ತಿಯಾಗೋದಾಗಿ ಸವಾಲ್ ಹಾಕಿದರು. ಒಕ್ಕಲಿಗ ನಾಯಕರಲ್ಲಿ ವಿ.ಮುನಿಯಪ್ಪ ಕೂಡ ಹಿರಿಯರು ಅವರಿಗೆ ಸಚಿವ ಸ್ಥಾನ ನೀಡುವಂತೆ ನಾನು ಒತ್ತಾಯಿಸಿದ್ದೆ. ನಾನು ಅವರ ಋಣದಲ್ಲಿ ಇದ್ದೇನೆ. ಅವರಿಗೆ ದ್ರೋಹ ಮಾಡೋ ವ್ಯಕ್ತಿ ನಾನಲ್ಲ. ಸುಬ್ರಮಣಿ ಅಂತ ನಾಲ್ಕು ಜನ ಬೆಂಕಿ ಹಾಕೋವರಿಂದ ನಮ್ಮಿಬ್ಬರ ಮಧ್ಯೆ ವೈಮನಸ್ಸು ಮೂಡುವಂತಾಗಿದೆ ಎಂದಾಗ ವೇದಿಕೆಯಲ್ಲಿದ್ದ ಸುಬ್ರಮಣಿ ಕೆ.ಎಚ್ ಮುನಿಯಪ್ಪ ವಿರುದ್ಧ ಎದ್ದು ನಿಂತು ಕೆಂಡಾಮಂಡಲರಾದರು. ಆದರೂ ಕೆ.ಎಚ್ ಮುನಿಯಪ್ಪ ಎಲ್ಲರನ್ನೂ ಸಮಾಧಾನ ಪಡಿಸಿ ಓಲೈಕೆ ಮಾಡಿದ್ದು ವಿಶೇಷವಾಗಿತ್ತು.

    ಡಿಕೆಶಿ ಸಂಧಾನ ಸಫಲ:
    ಸಂಧಾನಕ್ಕೆ ಬಂದಿದ್ದ ಸಚಿವ ಡಿ.ಕೆ.ಶಿವಕುಮಾರ್ ನಾನು, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ವಿರುದ್ಧ ಹೋರಾಟ ಮಾಡಿಕೊಂಡು ಬಂದವನು. ವರಿಷ್ಠರ ನಿರ್ಧಾರದಿಂದ ಹೊಂದಾಣಿಕೆ ಮಾಡಿಕೊಂಡು ಹೋಗ್ತಿದ್ದೇನೆ. ಇಂತಹದರಲ್ಲಿ ಮುನಿಯಪ್ಪಧ್ವಯರ ಮಧ್ಯೆ ಇರೋ ಮುನಿಸು ಮರೆತು ಪಕ್ಷದ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕೆಂದು ಕರೆ ನೀಡಿದರು. ಅಲ್ಲದೇ ಚುನಾವಣೆ ಮುಗಿದ ಬಳಿಕ ನಾನು ಕೆ.ಎಚ್ ಮುನಿಯಪ್ಪ ಸೇರಿ ವಿ. ಮುನಿಯಪ್ಪರಿಗೆ ಮಂತ್ರಿ ಮಾಡೋ ಭರವಸೆ ನೀಡೋ ಮೂಲಕ ತೇಪೆ ಹಾಕುವ ಕೆಲಸ ಮಾಡಿದರು.

  • ನನ್ನ ಸಚಿವ ಸ್ಥಾನದ ಹಕ್ಕಿಗೆ ಅಡ್ಡಗಾಲು ಹಾಕಲು ಯಾರಿಂದಲೂ ಸಾಧ್ಯವಿಲ್ಲ: ಕಾಂಗ್ರೆಸ್ ಶಾಸಕ ವಿ.ಮುನಿಯಪ್ಪ

    ನನ್ನ ಸಚಿವ ಸ್ಥಾನದ ಹಕ್ಕಿಗೆ ಅಡ್ಡಗಾಲು ಹಾಕಲು ಯಾರಿಂದಲೂ ಸಾಧ್ಯವಿಲ್ಲ: ಕಾಂಗ್ರೆಸ್ ಶಾಸಕ ವಿ.ಮುನಿಯಪ್ಪ

    ಚಿಕ್ಕಬಳ್ಳಾಪುರ: ನಾನು ಸೀನಿಯರ್, ಸಚಿವ ಸ್ಥಾನ ನನ್ನ ಹಕ್ಕು. ಯಾರಿಂದಲೂ ನನ್ನ ಸಚಿವ ಸ್ಥಾನದ ಹಕ್ಕಿಗೆ ಅಡ್ಡಗಾಲು ಹಾಕಲು ಸಾಧ್ಯವಿಲ್ಲ ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿ ಮುನಿಯಪ್ಪ ಹೇಳಿದ್ದಾರೆ.

    ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿದ್ದು ಸಂಪುಟ ರಚನೆಯ ಬಳಿಕ ಹಲವು ಕಾಂಗ್ರೆಸ್ ಶಾಸಕರು ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಬಹಿರಂಗವಾಗಿ ಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದರು. ಚಿಕ್ಕಬಳ್ಳಾಪುರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಶಾಸಕ ಸ್ಥಾನದ ಅವಧಿ ಮುಗಿಯುವರೆಗೂ ಸಚಿವ ಸ್ಥಾನಕ್ಕಾಗಿ ನನ್ನ ಹೋರಾಟ ಮುಂದುವರೆಸುತ್ತೇನೆ. ಸಂಪುಟ ವಿಸ್ತರಣೆ ವೇಳೆಯಲ್ಲಿ ತಮಗೆ ಸಚಿವ ಸ್ಥಾನ ಸಿಗಲಿದೆ ಎಂಬ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ರು.

    ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಗೆಲುವು ಸಾಧಿಸಿರುವ ವಿ.ಮುನಿಯಪ್ಪ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಆದ್ರೆ ಕೊನೆ ಘಳಿಗೆಯಲ್ಲಿ ಸಚಿವ ಸ್ಥಾನ ತಪ್ಪಿತ್ತು. ವಿ.ಮುನಿಯಪ್ಪ ಒಟ್ಟು ಐದು ಬಾರಿ ಶಿಡ್ಲಘಟ್ಟ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಬಂದಿದ್ದಾರೆ.

  • ಚಿಕ್ಕಬಳ್ಳಾಪುರದ ಕೈ ಶಾಸಕನಿಗೆ ಸಚಿವ ಸ್ಥಾನ-ಜೆಡಿಎಸ್ ಶಾಸಕನಿಗೆ ಸಿಗಲಿಲ್ಲ ಮಂತ್ರಿಗಿರಿ..!

    ಚಿಕ್ಕಬಳ್ಳಾಪುರದ ಕೈ ಶಾಸಕನಿಗೆ ಸಚಿವ ಸ್ಥಾನ-ಜೆಡಿಎಸ್ ಶಾಸಕನಿಗೆ ಸಿಗಲಿಲ್ಲ ಮಂತ್ರಿಗಿರಿ..!

    ವಿಶೇಷ ವರದಿ
    ಚಿಕ್ಕಬಳ್ಳಾಪುರ: ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಜಿಲ್ಲಾ ಮಹಿಳಾಧ್ಯಕ್ಷೆ, ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸ್ಥಾನ, ಹೀಗೆ ಎಲ್ಲವನ್ನು ತನ್ನೊಡಲಿನಲ್ಲಿ ಇರಿಸಿಕೊಂಡುಡಿರುವ ಗೌರಿಬಿದನೂರು ಕಾಂಗ್ರೆಸ್ ಶಕ್ತಿಯಾಗಿರುಗ ಶಾಸಕ ಎನ್.ಎಚ್.ಶಿವಶಂಕರ್ ರೆಡ್ಡಿ ಅವರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಕ್ಕಿದೆ.

    ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಚಿವ ಸ್ಥಾನವೂ ಈ ಕ್ಷೇತ್ರಕ್ಕೆ ದಕ್ಕಿದೆ. ಜಿಲ್ಲೆಯಲ್ಲಿ ಸಂತಸ ಮೂಡಿಸಿದ್ದರೆ, ಎಲ್ಲ ಹುದ್ದೆಗಳು ಗೌರಿಬಿದನೂರು ಪಾಲಾಗುತ್ತಿದೆ ಎಂಬ ಅಸಮಾಧಾನದ ಮಾತುಗಳು ಜಿಲ್ಲೆಯ ಕೆಲವು ಕಾಂಗ್ರೆಸ್ ಮುಖಂಡರಿಂದ ಕೇಳಿಬರುತ್ತಿದೆ.

    ಶಿವಶಂಕರ್ ರೆಡ್ಡಿ ಯಾರು?
    ಗೌರಿಬಿದನೂರು ಸಮೀಪದ ಎಚ್.ನಾಗಸಂದ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಎನ್.ಎಸ್.ಹನುಮಂತರೆಡ್ಡಿ ಹಾಗೂ ಸುಭಾಷಿಣಮ್ಮ ಅವರ ದಂಪತಿಯ ಹಿರಿಯ ಪುತ್ರರಾಗಿ 1954ರಲ್ಲಿ ಎನ್.ಎಚ್.ಶಿವಶಂಕರ್ ರೆಡ್ಡಿ ಜನಿಸಿದರು. 1973ರಲ್ಲಿ ಬಿಎಸ್‍ಸಿ ಅಗ್ರಿ ವಿದ್ಯಾಭ್ಯಾಸ ಮುಗಿಸಿ, 1978ರಲ್ಲಿ ನಾಗಸಂದ್ರ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದರು. 1981ರಿಂದ 1986ರ ವರೆಗೆ ಚಿಕ್ಕಕುರುಗೊಡು ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 1985 ರಿಂದ 1990 ರ ವರೆಗೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ನಾಗಸಂದ್ರದಲ್ಲಿ ಸೇವೆ ಸಲ್ಲಿಸಿದ್ದರು. 1987ರಿಂದ 1992 ರವರಗೆ ದೊಡ್ಡಕುರುಗೊಡು ಮಂಡಲ ಪಂಚಾಯತಿ ಅಧ್ಯಕ್ಷರಾಗಿದ್ದರು. 1995 ರಲ್ಲಿ ತಾಲೂಕು ಪಂಚಾಯತಿ ಸದಸ್ಯರಾಗಿದ್ದ ಇವರು, 1997ರಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.

    1999 ರಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಧಾನಸಭೆ ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ತದನಂತರ ಸತತ 4 ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಫರ್ಧಿಸಿ, ಒಟ್ಟು 5 ಬಾರಿ ಶಾಸಕರಾಗುವ ಮೂಲಕ ಸೋಲಿಲ್ಲದ ಸರದಾರ ಎಂದೇ ಕರೆಸಿಕೊಂಡಿದ್ದಾರೆ. ಕಳೆದ ಬಾರಿಯ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು, ಆದರೆ ಸಚಿವ ಸ್ಥಾನದ ಬದಲು ವಿಧಾನಭೆಯ ಉಪಸಭಾಧ್ಯಕ್ಷ ಸ್ಥಾನ ದೊರೆತಿತ್ತು. ಈ ಬಾರಿಯ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಅವರಿಗೆ ದಕ್ಕಿದೆ.

    ಜಿಲ್ಲೆಯ ಸಚಿವ ಸ್ಥಾನದ ಇತಿಹಾಸ:
    ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಯ 5 ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಅಯ್ಕೆಯಾಗಿದ್ದರು. ಆದರೆ ಯಾರೊಬ್ಬರಿಗೂ ಸಚಿವ ಸ್ಥಾನ ದೊರೆತಿರಲಿಲ್ಲ. ಈ ಬಾರಿ ಸಮ್ಮಿಶ್ರ ಸರ್ಕಾರದ ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನ ಒಲಿದಿರುವುದು ವಿಶೇಷ. ಇನ್ನು ಸಚಿವ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸುತ್ತಿದ್ದ ಶಾಸಕ ಡಾ.ಕೆ.ಸುಧಾಕರ್ ಅವರಿಗೆ ನಿರಾಸೆ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ನಡೆಯಬಹುದಾದ ರಾಜಕೀಯ ಹೈಡ್ರಾಮಾ ನಡೆಯುವ ಸಾಧ್ಯತೆಯಿದೆ.

    ಗೌರಿಬಿದನೂರು ಕ್ಷೇತ್ರದ 2ನೇ ಸಚಿವರು:
    ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪುಟದಲ್ಲಿ ಜೈನ ಸಮುದಾಯದ ಆರ್.ಎನ್.ಲಕ್ಷ್ಮೀಪತಿ ಅವರು ಸಣ್ಣ ನೀರಾವರಿ ಇಲಾಖೆಯ ಸಚಿವರಾಗಿ ಕ್ಷೇತ್ರದಲ್ಲಿ ದಾಖಲೆ ಬರೆದಿದ್ದರು. ಅಂದಿನಿಂದ ಇಲ್ಲಿಯವರೆಗೂ ಗೌರಿಬಿದನೂರು ಕ್ಷೇತ್ರಕ್ಕೆ ಸಚಿವ ಸ್ಥಾನ ದಕ್ಕಿರಲಿಲ್ಲ. ಇದೀಗ ಶಾಸಕ ಶಿವಶಂಕರ್ ರೆಡ್ಡಿ ಅವರು ಸಚಿವರಾಗಿರುವುದು ಕ್ಷೇತ್ರದ ವಿಶೇಷಗಳಲ್ಲಿ ಒಂದು. ಈ ಮೊದಲು ವಿಧಾನಸಭೆಯ ಉಪಸಭಾಧ್ಯಕ್ಷರಾಗಿದ್ದ ಶಿವಶಂಕರ್ ರೆಡ್ಡಿ ಸಚಿವ ಸ್ಥಾನಕ್ಕೆ ಪಕ್ಷದ ವರಿಷ್ಠರ ಮೊರೆಹೋಗಿದ್ದರು.

    ಶಿವಶಂಕರ್ ರೆಡ್ಡಿಗೆ ವೀರಪ್ಪ ಮೊಯ್ಲಿ ಕೃಪಾಕಟಾಕ್ಷ:
    ಶಿವಶಂಕರ್ ರೆಡ್ಡಿ ಪರವಾಗಿ ಸಂಸದ ವೀರಪ್ಪ ಮೊಯ್ಲಿ ಅವರು ಬ್ಯಾಂಟಿಗ್ ಮಾಡಿ ಅವರಿಗೆ ಸಚಿವ ಸ್ಥಾನ ನೀಡುವಲ್ಲಿ ಸಫಲರಾಗಿದ್ದಾರೆ ಎಂಬ ಮಾತುಗಳು ಪಕ್ಷದ ಮುಖಂಡರಿಂದಲೇ ಕೇಳಿಬಂದಿದೆ. ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆ ನಿಗಯಾಗಿದೆ ಎಂಬ ವದಂತಿಗಳು ಸಾಕಷ್ಟು ಹರಿದಾಡಿದ್ದವು. ಹೀಗಾಗಿ ಹಿರಿಯ ಶಾಸಕರಿಗೆ ಸುಧಾಕರ್ ಅವರ ಮೇಲೆ ಮುನಿಸು ಶುರುವಾಗಿತ್ತು. ಆದರೆ, ಇದೀಗ ಲೆಕ್ಕಚಾರಗಳೆಲ್ಲವು ಉಲ್ಟಾ ಹೊಡೆದಿದ್ದು, ಗೌರಿಬಿದನೂರು ಸ್ಥಳೀಯ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಿರುವ ಮಾದರಿಯಲ್ಲಿಯೇ ಜಿಲ್ಲೆಯ ಉಸ್ತುವಾರಿ ಹೊಣೆ ಹೊರುವ ನಿರೀಕ್ಷೆ ದಟ್ಟವಾಗಿದೆ.

    14 ವರ್ಷಗಳ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾಗಿದ್ದ ಶಿಡ್ಲಘಟ್ಟ ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಈ ಬಾರಿಯು ಜಯಗಳಿಸಿದ್ದಾರೆ. ಇವರ ಗೆಲುವಿನ ಬೆನ್ನಲ್ಲೇ ಸಚಿವ ಸ್ಥಾನದ ಲಾಬಿಯೂ ಹೆಚ್ಚಾಗಿತ್ತು. ವಿ.ಮುನಿಯಪ್ಪ ಅವರು ತಮ್ಮ ಹಿರಿತನ, ಅನುಭವದ ಆಧಾರದ ಮೇಲೆ ಸಚಿವ ಸ್ಥಾನ ಎದುರು ನೋಡುತ್ತಿದ್ದರೆ, ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಸುಧಾಕರ್ ಹೆಸರು ನಮೂದಿಗೊಂಡಿದ್ದ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆಗಳು ಜಿಲ್ಲೆಯಲ್ಲಿ ಕಾವೇರಿತ್ತು. ಇದಲ್ಲದೇ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಹ ಸುಧಾಕರ್ ಭೇಟಿಯಾಗಿ ಚರ್ಚೆ ನಡೆಸಿದ್ದರು. ಇನ್ನು ಸಚಿವ ಸ್ಥಾನಕ್ಕಾಗಿ ಶಿವಶಂಕರ್ ರೆಡ್ಡಿ ಅವರ ಹಿಂಬಾಲಕರು ಇತ್ತೀಚೆಗೆ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ನೋಡಲು ದೆಹಲಿಗೆ ತೆರಳಿದ್ದರು. ರೆಸಾರ್ಟ್ ವಾಸ ಮುಗಿದ ಕೂಡಲೇ ಶಿವಶಂಕರ್ ರೆಡ್ಡಿ ಸಹ ದೆಹಲಿ ಬಾಗಿಲು ತಟ್ಟಿದ್ದರು. ರಾಹುಲ್ ಗಾಂಧಿ ಭೇಟಿಯಾಗಲು ಸಾಧ್ಯವಾಗದೇ ಸಂಸದ ವೀರಪ್ಲ ಮೊಯ್ಲಿ ಅವರಲ್ಲಿ ಬೇಡಿಕೆ ಇಟ್ಟಿದ್ದರು. ಅಂತು-ಇಂತು ಕೊನೆಗೆ ಶಿವಶಂಕರ್ ರೆಡ್ಡಿ ಅವರೇ ಸಚಿವರಾಗಿ ಆಯ್ಕೆಯಾಗಿರುವುದು ಕೆಲವರಿಗೆ ಹುಳಿ-ಸಿಹಿ ಅನುಭವ ನೀಡಿದೆ.

    ಜೆಡಿಎಸ್ ಶಾಸಕನಿಗಿಲ್ಲ ಸಚಿವ ಸ್ಥಾನ:
    ಮತ್ತೊಂದೆಡೆ ಜಿಲ್ಲೆಯ ಚಿಂತಾಮಣಿ ಕ್ಷೇತ್ರದ ಜೆಡಿಎಸ್ ಶಾಸಕ, ರೆಡ್ಡಿ ಸಮುದಾಯ, ಹಾಗೂ ಜಿಲ್ಲೆಯ ಜೆಡಿಎಸ್ ನ ಏಕೈಕ ಶಾಸಕರಾಗಿರೋ ಜೆ.ಕೆ.ಕೃಷ್ಣಾರೆಡ್ಡಿಗೂ ಸಚಿವ ಸ್ಥಾನ ಕೈ ತಪ್ಪಿದೆ. ಜಿಲ್ಲೆ, ಜಾತಿ, ಸಾಮಾಜಿಕ ನ್ಯಾಯದಡಿ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಜೆ.ಕೆ.ಕೃಷ್ಣಾರೆಡಿಗೂ ನಿರಾಸೆಯಾಗಿದೆ. ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ, ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ ಅಸಮಾಧಾನಗೊಂಡಿದ್ದಾರೆ.

    ಬಾಗೇಪಲ್ಲಿಗೂ ಇಲ್ಲ ಸ್ಥಾನ..!
    ಜಿಲ್ಲೆಯ 5 ಕ್ಷೇತ್ರಗಳ ಪೈಕಿ ಬಾಗೇಪಲ್ಲಿ ಹೊರತು ಪಡಿಸಿ ಉಳಿದೆಲ್ಲ ಕ್ಷೇತ್ರಗಳಿಗೂ ಕನಿಷ್ಟ ಒಂದು ಬಾರಿಯಾದರೂ, ಸಚಿವ ಸ್ಥಾನ ಲಭಿಸಿದೆ. ಆದರೆ, ಸ್ವಾತಂತ್ರ್ಯ ನಂತರದಿಂದ ಈ ವರೆಗೂ ಬಾಗೇಪಲ್ಲಿ ಕ್ಷೇತ್ರಕ್ಕೆ ಮಂತ್ರಿ ಸೌಭಾಗ್ಯವೇ ದಕ್ಕಿಲ್ಲ. ಗುಂಡಿಬಂಡೆ, ಬಾಗೇಪಲ್ಲಿ 2 ತಾಲೂಕುಗಳನ್ನು ಒಳಗೊಂಡಿರುವ ಈ ಕ್ಷೇತ್ರ ಅತ್ಯಂತ ಹಿಂದುಳಿದ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರೂ, ಕ್ಷೇತ್ರವನ್ನು ಬಲ ಪಡಿಸುವ ಕಾರ್ಯಕ್ಕೆ ಯಾರೊಬ್ಬರು ಮುಂದಾಗಿಲ್ಲ.

    ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಪೇಪರ್ ಮಿನುಯಪ್ಪ, ರೇಣುಕಾ ರಾಜೇಂದ್ರನ್ ಅವರುಗಳು ಮಂತ್ರಿಗಿರಿ ಪಡೆದುಕೊಂಡಿದ್ದರು. ಚಿಂತಾಮಣಿ ಕ್ಷೇತ್ರದಲ್ಲಿ ಗೃಹ ಖಾತೆಯಿಂದ ಹಿಡಿದು ಸಮಾಜ ಕಲ್ಯಾಣ ಇಲಾಖೆ ವರೆಗೂ ಸಚಿವರು ಆಯ್ಕೆಗೊಂಡಿದ್ದರು. ಗೃಹ ಸಚಿವರಾಗಿದ್ದ ಚೌಡರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಕೆ.ಎನ್.ಕೃಷ್ಣಾರೆಡ್ಡಿ ಅಧಿಕಾರ ಅನುಭವಿಸಿದ್ದರು.