Tag: ವಿಸರ್ಜನೆ

  • ಅರ್ಧಕ್ಕೆ ನಿಂತಿದೆ ವಿಸರ್ಜನೆಗೆಂದು ಹೊರಟ ಇತಿಹಾಸ ಪ್ರಸಿದ್ಧ ಗೂಳೂರು ಗಣಪ

    ಅರ್ಧಕ್ಕೆ ನಿಂತಿದೆ ವಿಸರ್ಜನೆಗೆಂದು ಹೊರಟ ಇತಿಹಾಸ ಪ್ರಸಿದ್ಧ ಗೂಳೂರು ಗಣಪ

    – 9 ದಿನಗಳಿಂದ ನಿಂತಲ್ಲೆ ಗಣಪನಿಗೆ ಪೂಜೆ
    – 500 ವರ್ಷದ ಇತಿಹಾಸದಲ್ಲೇ ಮೊದಲ ಬಾರಿ ಅರ್ಧಕ್ಕೆ ನಿಂತ ಮೆರವಣಿಗೆ

    ತುಮಕೂರು: ಇತಿಹಾಸ ಪ್ರಸಿದ್ಧ ಗೂಳೂರು ಗಣಪತಿಯ ವಿಸರ್ಜನಾ ಮೂರ್ತಿ ಅರ್ಧಕ್ಕೆ ನಿಲ್ಲುವ ಮೂಲಕ ಅಚ್ಚರಿ ಹಾಗೂ ಆತಂಕ ಸೃಷ್ಟಿಸಿದೆ. ಸುಮಾರು ಐನೂರು ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿ ವಿಸರ್ಜನೆಗೆಂದು ಹೊರಟ ಗಣೇಶ ಉತ್ಸವ ಮಳೆಯ ಕಾರಣಕ್ಕೆ ಅರ್ಧಕ್ಕೆ ಮೊಟಕುಗೊಂಡಿದೆ.

    ಕಳೆದ 9 ದಿನಗಳಿಂದ ಗಣೇಶ ಮೂರ್ತಿಗೆ ನಿಂತಲ್ಲೆ ಪೂಜೆ ಪುನಸ್ಕಾರ ನಡೆಯುತ್ತಿದೆ. ಗಣಪತಿ ಮೆರವಣಿಗೆ ಅರ್ಧಕ್ಕೆ ಮೊಟಕುಗೊಂಡಿದ್ದರಿಂದ ಭಕ್ತಾಧಿಗಳಲ್ಲಿ ಮುಂದೇನಾಗಲಿದೆಯೋ ಎಂಬ ಆತಂಕ ಕಾಡುತ್ತಿದೆ. ದೀಪಾವಳಿ ಹಬ್ಬದಿಂದ ಕಾರ್ತಿಕ ಮಾಸದ ಅಂತ್ಯದವರೆಗೂ ನೆರವೇರುವ ಐತಿಹಾಸಿಕ ಪ್ರಸಿದ್ಧ ತುಮಕೂರಿನ ಗೂಳೂರು ಗಣಪತಿ ದೇವರ ಮೆರವಣಿಗೆ ಅರ್ಧಕ್ಕೆ ಮೊಟಕುಗೊಂಡಿದೆ. ನವೆಂಬರ್ 30 ರಂದು ಮೆರವಣಿಗೆಗೆಂದು ಹೊರಟು ನಿಂತಾಗ ಮಳೆ ಬಂದ ಕಾರಣಕ್ಕೆ ಮೆರವಣಿಗೆ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ ವಿಸರ್ಜನೆಗೆಂದು ಮೆರವಣಿಗೆ ಹೊರಟ ಗೂಳೂರು ಗಣೇಶ ಮೂರ್ತಿ ಅರ್ಧದಲ್ಲೆ ನಿಂತಿದೆ. ಮೂಲ ಪೀಠದಿಂದ ಗಣೇಶ ಮೂರ್ತಿಯನ್ನು ಕೆಳಗಿಳಿಸಿ ಮುಖ್ಯದ್ವಾರಕ್ಕೆ ತರುತಿದ್ದಂತೆ ಮಳೆಯ ಕಾರಣಕ್ಕೆ ಮೆರವಣಿಗೆ ಸ್ಥಗಿತಗೊಂಡಿದೆ.

    ಸಂಪ್ರದಾಯದ ಪ್ರಕಾರ ಪೀಠದಿಂದ ಒಮ್ಮೆ ಮೂರ್ತಿಯನ್ನು ಎತ್ತಿದ ಮೇಲೆ ಪುನಃ ಪೀಠಕ್ಕೆ ತರುವುದಾಗಲಿ, ವಿಸರ್ಜನೆ ಮಾಡದೇ ಇರುವುದಾಗಲಿ ಮಾಡಬಾರದು ಎಂಬ ಸಂಪ್ರದಾಯ ಇದೆ. ಆದರೆ ನವೆಂಬರ್ 30ರಂದು ಗಣೆಶೋತ್ಸವ ಮೆರವಣಿಗೆ ಹೋಗುತ್ತಿದ್ದಂತೆ ಮಳೆ ಜೋರಾಗಿ ಬರತೊಡಗಿತು. ಹೀಗಾಗಿ ಮೆರವಣಿಗೆ ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಆದ್ದರಿಂದ ಮೂಲ ಪೀಠದಿಂದ ಹೊರತಂದಂತಹ ಗಣೇಶ ಮೂರ್ತಿಯನ್ನು ಅರ್ಧದಲ್ಲೆ ನಿಲ್ಲಿಸಿ ಪೂಜೆ ಮಾಡಲಾಗುತ್ತಿದೆ. ಕಳೆದ 9 ದಿನಗಳಿಂದ ದೇವಸ್ಥಾನದ ಮುಖ್ಯದ್ವಾರದ ಬಾಗಿಲಿನಲ್ಲಿ ಗಣೇಶನ ಮೂರ್ತಿ ಇರಿಸಿ ಪೂಜೆ ಸಲ್ಲಿಸಲಾಗುತ್ತಿದೆ.

    ಗೂಳೂರು ಗಣಪತಿಯ ಇತಿಹಾಸದಲ್ಲೇ ವಿಸರ್ಜನಾ ಮೆರವಣಿಗೆ ಅರ್ಧಕ್ಕೆ ನಿಂತಿಲ್ಲ. ಕೆಲವೊಮ್ಮೆ ಮಳೆಯ ಕಾರಣಕ್ಕೆ ಕೆಲ ಗಂಟೆಗಳ ಕಾಲ ಮೆರವಣಿಗೆ ಸ್ಥಗಿತಗೊಂಡಿದ್ದರೂ ಅಂದೇ ಗೂಳೂರು ಕೆರೆಯಲ್ಲಿ ವಿಸರ್ಜನೆ ಮಾಡಲಾಗುತಿತ್ತು. ಆದರೆ ಈ ಬಾರಿ ಮಾತ್ರ ಮೆರವಣಿಗೆ ಹೊರಟು 9 ದಿನ ಕಳೆದರೂ ಗಣಪನಿಗೆ ವಿಸರ್ಜನೆ ಭಾಗ್ಯ ಕೂಡಿ ಬಂದಿಲ್ಲ. ಹಲವು ಪವಾಡ ಹೊಂದಿರುವ ಗೂಳೂರು ಗಣಪತಿಯ ವಿಸರ್ಜನೆಗೆ ಇಷ್ಟೊಂದು ವಿಳಂಬವಾಗಿರುವುದಕ್ಕೆ ಭಕ್ತಾಧಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ದೇವರಾದನೆಯಲ್ಲಿ ಏನಾದರೂ ವ್ಯತ್ಯಾಸ ಆಗಿದೆಯಾ? ಮುಂದೆನಾಗಲಿದೆಯೋ? ಒಳ್ಳೆಯೋದೋ? ಕೆಟ್ಟದೋ ಎಂಬ ಆತಂಕ ಸ್ಥಳೀಯರಲ್ಲಿ ಹಾಗೂ ಭಕ್ತಾಧಿಗಳಲ್ಲಿ ಮನೆಮಾಡಿದೆ.

    ಹಿನ್ನೆಲೆ ಏನು?
    ಈ ಗಣಪತಿಗೆ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸ ಹಾಗೂ ಅದರದ್ದೆ ಆದ ವಿಶೇಷತೆ ಇದೆ. ಬಾದ್ರಪದ ಶುಕ್ಲಪಕ್ಷದ ಚತುರ್ಥಿಯಂದು ಸಾಮಾನ್ಯವಾಗಿ ಗಣಪತಿ ಹಬ್ಬ ಆಚರಿಸುತ್ತಾರೆ. ಆದರೆ ಗೂಳೂರಿನಲ್ಲಿ ಮಾತ್ರ ಗಣಪತಿ ಹಬ್ಬದಂದು ಗಣೇಶ ಮೂರ್ತಿ ತಯಾರಿಕೆ ಆರಂಭವಾಗಿ ದೀಪಾವಳಿ ದಿನದಂದು ಪ್ರತಿಷ್ಠಾಪನೆ ಆಗುತ್ತದೆ. ಅಲ್ಲಿಂದ ಒಂದು ತಿಂಗಳ ಕಾಲ ಪೂಜೆ ಪುನಸ್ಕಾರ ನಡೆದು ವಿಸರ್ಜನೆ ಮಾಡಲಾಗುತ್ತದೆ.

    ಭೃಗಮಹರ್ಷಿಗಳು ಕಾಶಿಯಾತ್ರೆ ಹೊರಟಾಗ ಗಣೇಶ ಚತುರ್ಥಿ ದಿನದಂದು ಗೂಳೂರಿಗೆ ಬಂದು ತಂಗಿದ್ದರಂತೆ. ಅಲ್ಲಿಯೇ ಮಣ್ಣಿನಿಂದ ಗಣೇಶ್ ಮೂರ್ತಿ ತಯಾರಿಸಿ ಪೂಜೆ ಮಾಡಿದ್ದರು ಎಂಬ ಪ್ರತೀತಿ ಇದೆ. ಆಗನಿಂದ ದೀಪಾವಳಿಗೆ ಪ್ರತಿಷ್ಠಾಪನೆ ಮಾಡಿ ಕಾರ್ತಿಕ ಮಾಸ ಕಳೆದ ಮೇಲೆ ಬೃಹತ್ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡುವ ಸಂಪ್ರದಾಯ ಬೆಳೆದುಕೊಂಡು ಬಂದಿದೆ. ಆದರೆ ಈ ಬಾರಿ ಗಣೇಶ ಮೆರವಣಿಗೆ ಅರ್ಧಕ್ಕೆ ನಿಂತಿದ್ದು ಭಕ್ತಾಧಿಗಳಲ್ಲಿ ಕಸಿವಿಸಿ ಉಂಟಾಗಿದೆ.

    ಸದ್ಯ ಡಿಸೆಂಬರ್ 14-15ರಂದು ವಿಸರ್ಜನಾ ಕಾರ್ಯಕ್ರಮ ನಿಗದಿ ಮಾಡಲಾಗಿದೆ. ಆದರೆ ಹವಾಮಾನ ಇಲಾಖೆ ಮಾಹಿತಿಯಂತೆ ಡಿಸೆಂಬರ್ 14-15 ರಂದು ಮಳೆ ಸಾಧ್ಯತೆ ಕಡಿಮೆ ಇದ್ದು, ಅಂದು ವಿಸರ್ಜನೆ ಮಾಡಲು ಸಮಿತಿ ತೀರ್ಮಾನಿಸಿದೆ.

  • 15 ದಿನದೊಳಗಡೆ ಡಿಕೆಶಿಗೆ ಬಿಡುಗಡೆ ಭಾಗ್ಯ- ಕೌಡೇಪೀರ್ ಲಾಲ್‍ಸಾಬ್ ದೇವರ ನುಡಿ

    15 ದಿನದೊಳಗಡೆ ಡಿಕೆಶಿಗೆ ಬಿಡುಗಡೆ ಭಾಗ್ಯ- ಕೌಡೇಪೀರ್ ಲಾಲ್‍ಸಾಬ್ ದೇವರ ನುಡಿ

    ಕೊಪ್ಪಳ: ಜಾರಿ ನಿರ್ದೇಶನಾಲಯ (ಇಡಿ) ತೆಕ್ಕೆಗೆ ಸಿಲುಕಿ ಜೈಲು ಪಾಲಾಗಿರುವ ಡಿಕೆಶಿ ಯಾವಾಗ ಬಿಡುಗಡೆ ಆಗುತ್ತಾರೆ ಅಥವಾ ಜೈಲಿನಲ್ಲಿಯೇ ಮುಂದುವರಿಯುತ್ತಾರಾ ಎನ್ನುವ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ. ಇದರ ಬೆನ್ನೆಲ್ಲೇ ಕೊಪ್ಪಳದ ಕೌಡೇಪೀರ್ ಲಾಲ್ ಸಾಬ್ ದೇವರ ವಿಸರ್ಜನೆ ವೇಳೆ ಕನಕಪುರ ಬಂಡೆಯ ಭವಿಷ್ಯ ನುಡಿದು ಡಿಕೆಶಿ ಅಭಿಮಾನಿಗಳಲ್ಲಿ ಕೊಂಚ ರಿಲ್ಯಾಕ್ಸ್ ತಂದಿದೆ.

    ಕೊಪ್ಪಳದ ಕನಕಗಿರಿಯಲ್ಲಿ ಕಳೆದ ಎರಡು ದಿನದ ಹಿಂದೆ ಮೊಹರಂ ನಂತರದ ಕೌಡೇಪೀರ್ ದೇವರ ವಿಸರ್ಜನೆ ನಡೆದಿತ್ತು. ಈ ವೇಳೆ ಕನಕಗಿರಿಯ ಕೆಲವರು ಡಿಕೆ ಶಿವಕುಮಾರ್ ಬಿಡುಗಡೆ ಬಗ್ಗೆ ದೇವರು ಹೊತ್ತವರನ್ನು ಕೇಳಿದ್ದಾರೆ. ಇದಕ್ಕೆ ಕೊಂಚ ಯೋಚನೆ ಮಾಡಿದ ಲಾಲ್ ಸಾಬ್ ದೇವರು ಪಂದ್ರಾ-ಬಿಸ್ ದಿನ್ ಆಯಾ ಎಂದು ಹೇಳಿದೆ.

    ದೇವರ ಹೇಳಿಕೆ ನೀಡುತ್ತಲೇ ದೇವರ ಸ್ಮರಣೆಯ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಕಳೆದ ವಾರವಷ್ಟೇ ಮಳೆಗಾಗಿ ಹಲಾಯಿ ದೇವರ ಮುಂದೆ ಧರಣಿ ಕುಳಿತು ಜಿಲ್ಲೆಯಲ್ಲಿ ಮಳೆಯಾಗುವುದರ ಬಗ್ಗೆ ಪ್ರಶ್ನೆ ಕೇಳಿದ್ದರು. ಅಂದು ಹಲಾಯಿ ದೇವರು ಹೇಳಿದಂತೆ ಒಂದೇ ವಾರದಲ್ಲಿ ಜಿಲ್ಲಾದ್ಯಂತ ಮಳೆ ಸುರಿದಿತ್ತು. ಹಲಾಯಿ ದೇವರ ಮೇಲೆ ಇಟ್ಟಿದ್ದ ನಂಬಿಕೆ ಯಶಸ್ವಿಯಾಗಿತ್ತು.

    ಇದೀಗ ಅದೇ ನಂಬಿಕೆ ಮೇಲೆ ಕೆಲ ಮಂದಿ ಕೌಡೇಪೀರ್ ಬಳಿ ಡಿಕೆಶಿ ಬಿಡುಗಡೆ ಕುರಿತು ಪ್ರಶ್ನೆ ಕೇಳಿದ್ದಾರೆ. ಡಿಕೆಶಿ ಬಿಡುಗಡೆ ಕುರಿತು ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ ಕೌಡೇಪೀರ್ ಭವಿಷ್ಯ ಏನಾಗುತ್ತೆ ಎಂದು ಕಾದು ನೋಡಬೇಕಿದೆ.

  • ಗಣೇಶ ಮೂರ್ತಿ ವಿಸರ್ಜನೆ ಸ್ಥಳದಲ್ಲಿ ವ್ಯಕ್ತಿ ಆತ್ಮಹತ್ಯೆ- ಸಿಸಿಟಿವಿ ಕ್ಯಾಮೆರಾದಲ್ಲಿ ಸತ್ಯ ಬಯಲು

    ಗಣೇಶ ಮೂರ್ತಿ ವಿಸರ್ಜನೆ ಸ್ಥಳದಲ್ಲಿ ವ್ಯಕ್ತಿ ಆತ್ಮಹತ್ಯೆ- ಸಿಸಿಟಿವಿ ಕ್ಯಾಮೆರಾದಲ್ಲಿ ಸತ್ಯ ಬಯಲು

    ರಾಯಚೂರು: ನಗರದ ಗಣೇಶ ಮೂರ್ತಿಗಳ ವಿಸರ್ಜನೆ ಮಾಡುವ ಸ್ಥಳದಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

    ಬಾಬು(32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಬಾಬು ನಗರದ ಖಾಸಬಾವಿಯಲ್ಲಿ ಗಂಗಾ ನಿವಾಸ ಪ್ರದೇಶದ ನಿವಾಸಿ ಆಗಿದ್ದು, ಈತ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಇಡೀ ನಗರವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.

    ಗಣೇಶ ವಿಸರ್ಜನೆ ವೇಳೆ ದುರಂತ ನಡೆದಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ರಾತ್ರಿ ವೇಳೆ ಬಾಬು ಖಾಸಬಾವಿಗೆ ಇಳಿದು ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ.

    ಸುಮಾರು ಮೂರು ಗಂಟೆ ಕಾಲ ಖಾಸಬಾವಿಯಲ್ಲಿ ಶವಕ್ಕಾಗಿ ಶೋಧ ಕಾರ್ಯಾಚರಣೆ ನಡೆಸಿ ಹೊರ ತೆಗೆದಿದ್ದಾರೆ. ಮಾನಸಿಕ ಅಸ್ವಸ್ಥನಾಗಿದ್ದ ಬಾಬು ಮನೆಯಿಂದ ನೇರವಾಗಿ ಖಾಸಬಾವಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

    ಈ ಬಗ್ಗೆ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪೂಜೆಗೂ ಮುನ್ನ ವಿಸರ್ಜನೆಗೊಂಡ ಗಣಪ

    ಪೂಜೆಗೂ ಮುನ್ನ ವಿಸರ್ಜನೆಗೊಂಡ ಗಣಪ

    ಬೆಳಗಾವಿ: ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಪೂಜೆಗೂ ಮುನ್ನ ಗಣಪತಿ ವಿಸರ್ಜನೆಗೊಂಡಿದ್ದು, ನೂರಾರು ಜನರ ಬದುಕು ಬೀದಿಗೆ ಬಿದ್ದಿದೆ.

    ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಗಣಪತಿ ಹಬ್ಬ ಬಂದರೆ ರಾಜ್ಯ ಹೊರ ರಾಜ್ಯದ ಜನರು ಇಲ್ಲಿಗೆ ಬಂದು ಗಣಪತಿ ಮೂರ್ತಿಗಳನ್ನು ಖರೀದಿ ಮಾಡಿಕೊಂಡು ಹೋಗುತ್ತಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಉಲ್ಟಾ ಆಗಿದೆ. ತಯಾರಾಗಿ ಮನೆ ಮನೆಗೆ ಹೋಗಿ ಪೂಜೆ ಸಲ್ಲಿಸಿಕೊಂಡು ವಿಸರ್ಜನೆಯಾಗುತ್ತಿದ್ದ ಗಣಪತಿ ಇದೆಲ್ಲದಕ್ಕೂ ಮುನ್ನವೇ ವಿಸರ್ಜನೆಯಾಗಿದ್ದಾನೆ.

    ಕಳೆದ 25 ದಿನಗಳ ಹಿಂದಷ್ಟೇ ಘಟಪ್ರಭಾ ನದಿಯಿಂದ ಒಂದೂವರೆ ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ್ದಕ್ಕೆ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಕೂಡ ನೀರು ನುಗ್ಗಿ 30ಕ್ಕೂ ಅಧಿಕ ಮನೆಗಳು ಧರೆಗುರುಳಿದರೆ, ಇದೆಲ್ಲದಕ್ಕಿಂತ ಹೆಚ್ಚಾಗಿ ಈ ಗ್ರಾಮದಲ್ಲಿ ಗಣಪತಿ ತಯಾರಿಸುತ್ತಿದ್ದ ಘಟಕಗಳು ಮುಳುಗಿ ದೇವರೇ ಕರಗಿದ ಸ್ಥಿತಿ ನಿರ್ಮಾಣವಾಗಿದೆ. ಕೊಣ್ಣೂರು ಗ್ರಾಮದಲ್ಲಿ ಸ್ವಾತಂತ್ರ್ಯ ಸಿಕ್ಕಾಗಿನಿಂದಲೂ ಗಣಪತಿಗಳನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ತಲೆತಲಾಂತರದಿಂದ ಅನೇಕ ಕುಟುಂಬಗಳು ಇದನ್ನೇ ವೃತ್ತಿ ಮಾಡಿಕೊಂಡಿದ್ದು ಗಣಪತಿ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. 1962ರಲ್ಲಿ ಎಲ್ಲ ಕುಂಬಾರರು ಸೇರಿಕೊಂಡು ಕಾಡಸಿದ್ದೇಶ್ವರ ಇಟ್ಟಂಗಿ ಮತ್ತು ಕುಂಬಾರಿಕೆ ಸಾಮಾನುಗಳು ಉತ್ಪಾದಕ ಸಹಕಾರಿ ಸಂಘ ಮಾಡಿಕೊಂಡು ಈ ಸಂಘದ ಮೂಲಕ ಗಣಪತಿಗಳನ್ನು ತಯಾರಿಸಿಕೊಂಡು ಬರುತ್ತಿದ್ದು ಜಲಪ್ರವಾಹಕ್ಕೆ ಈಗ ಎಲ್ಲವೂ ಹಾನಿಯಾಗಿ ಕಂಗಾಲಾಗಿದ್ದಾರೆ.

    ಪ್ರತಿ ವರ್ಷ ಇಲ್ಲಿ 6 ಲಕ್ಷ ಗಣಪತಿಗಳನ್ನು ತಯಾರು ಮಾಡುತ್ತಾರೆ. ಈ ವರ್ಷ ಜಲಪ್ರವಾಹಕ್ಕೆ ಸಿಲುಕಿ ಸುಮಾರು 5 ಲಕ್ಷ ಗಣಪತಿಗಳು ನೀರಿನಲ್ಲಿ ಕರಗಿ ಮಣ್ಣಾಗಿವೆ. ಉಳಿದ ಒಂದು ಲಕ್ಷ ಗಣಪತಿಗೆ ಕಲರಿಂಗ್ ಮಾಡಿಕೊಂಡು ಗ್ರಾಮದವರಿಗೆ ಹಾಗೂ ಅಕ್ಕಪಕ್ಕದವರಿಗೆ ಮಾರಾಟ ಮಾಡುತ್ತಿದ್ದಾರೆ. ಆದರೆ 5 ಲಕ್ಷ ಗಣಪತಿಗಳು ಹಾಳಾಗಿದ್ದಕ್ಕೆ ಸುಮಾರು 3 ಕೋಟಿಗೂ ಅಧಿಕ ಹಾನಿ ಇವರದ್ದಾಗಿದೆ. ನೀರು ಬಂದ ದಿನಾಂಕದಿಂದಲೇ ಇಲ್ಲಿ ಗಣಪತಿಗಳು ಮಾರಾಟವಾಗುತ್ತಿದ್ದವು. ಆದರೆ ದುರಾದೃಷ್ಟವಶಾತ್ ಆ ದಿನವೇ ಇಡೀ ಗ್ರಾಮಕ್ಕೆ ನೀರು ನುಗ್ಗಿ ಎಂಟು ದಿನಗಳ ಕಾಲ ನೀರು ನಿಂತಿದ್ದಕ್ಕೆ ಎಲ್ಲಾ ಗಣಪತಿಗಳು ನೀರಲ್ಲೇ ಕರಗಿ ಮಣ್ಣಾಗಿ ಬಿಟ್ಟಿವೆ. 50 ರೂ. ಸಣ್ಣ ಗಣಪತಿಯಿಂದ ಹಿಡಿದು 30 ಸಾವಿರ ರೂ.ವರೆಗೂ ಇಲ್ಲಿ ಗಣಪತಿಗಳನ್ನು ಸಿದ್ಧಪಡಿಸುತ್ತಾರೆ.

    ಇಲ್ಲಿ ಪಿಒಪಿ ಗಣಪತಿಗಳನ್ನು ನಿರ್ಮಾಣ ಮಾಡುವುದಿಲ್ಲ. ಎಲ್ಲವೂ ಮಣ್ಣಿನಿಂದಲೇ ಸಿದ್ಧಪಡಿಸುತ್ತಾರೆ. ಸರ್ಕಾರ ಪರಿಸರ ಸ್ನೇಹಿ ಗಣಪತಿ ಕಡ್ಡಾಯ ಮಾಡಿದ ಮೇಲೆ ಅತೀ ಹೆಚ್ಚು ಪರಿಸರ ಸ್ನೇಹಿ ಗಣಪತಿಗಳನ್ನು ನಿರ್ಮಾಣ ಮಾಡುವ ಏಕೈಕ ಗ್ರಾಮ ಇದಾಗಿದೆ. ಸರ್ಕಾರ ಕಡ್ಡಾಯ ಮಾಡಿದ ಮೇಲೆ ಈ ಗಣಪತಿಗಳಿಗೆ ಹೆಚ್ಚಿನ ಗಣಪತಿಗಳನ್ನ ಇದೇ ವರ್ಷ ಮಾಡಿದ್ದರು. ಆದರೆ ದುರಾದೃಷ್ಟವಶಾತ್ ಈ ಬಾರಿಯೇ ನೆರೆ ಬಂದು ಎಲ್ಲ ಗಣಪತಿಗಳು ಹಾಳಾಗಿದ್ದು, ಈ ಕುಂಬಾರರ ಬದುಕು ಬೀದಿಗೆ ಬಂದಿದೆ.

    ಇಷ್ಟೆಲ್ಲಾ ಸಂಕಷ್ಟದಲ್ಲಿ ಜನರಿದ್ದರೂ ಅನರ್ಹ ಹಾಗೂ ಈ ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕ ರಮೇಶ್ ಜಾರಕಿಹೊಳಿ ಮಾತ್ರ ಇತ್ತ ತಿರುಗಿಯೂ ನೋಡಿಲ್ಲ. ತಮಗೆ ಆಗಿರುವ ಹಾನಿ ಹಾಗೂ ಅದಕ್ಕೆ ಬೇಕಾದ ಪರಿಹಾರ ನೀಡಬೇಕೆಂದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಎಲ್ಲ ಕುಂಬಾರರು ಸೇರಿಕೊಂಡು ಮನವಿ ಕೂಡ ನೀಡಿದ್ದಾರೆ. ಇಷ್ಟಾದರೂ ಇಲ್ಲಿವರೆಗೂ ಜಿಲ್ಲಾಡಳಿತ ಇವರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ.

  • ಮಹಾತ್ಮ ಗಾಂಧಿಯವರ ಇಚ್ಛೆಯಂತೆ ಕಾಂಗ್ರೆಸ್ ವಿಸರ್ಜನೆಯಾಗಬೇಕು: ಯೋಗಿ ಆದಿತ್ಯನಾಥ್

    ಮಹಾತ್ಮ ಗಾಂಧಿಯವರ ಇಚ್ಛೆಯಂತೆ ಕಾಂಗ್ರೆಸ್ ವಿಸರ್ಜನೆಯಾಗಬೇಕು: ಯೋಗಿ ಆದಿತ್ಯನಾಥ್

    ಭೋಪಾಲ್: ರೈತರ ಪರವಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿಲ್ಲ ಹೀಗಾಗಿ ಮಹಾತ್ಮ ಗಾಂಧೀಜಿಯವರ ಇಚ್ಛೇಯಂತೆ ಅದನ್ನು ವಿಸರ್ಜನೆ ಮಾಡಬೇಕೆಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

    ಮಧ್ಯಪ್ರದೇಶದ ರಾಜಗರ್ ಜಿಲ್ಲೆಯಲ್ಲಿ ಭರ್ಜರಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಅವರು, ಕಾಂಗ್ರೆಸ್ಸಿನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ನಗರ ನಕ್ಸಲ್ ಗಳೊಂದಿಗೆ ನಂಟಿದೆ ಎಂಬ ಆರೋಪವನ್ನು ಅಸ್ತ್ರವನ್ನಾಗಿ ಬಳಸಿಕೊಂಡು ಪ್ರಚಾರ ನಡೆಸುತ್ತಿದ್ದಾರೆ.

    ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಪ್ರಮುಖ ಕಾಂಗ್ರೆಸ್ ಮುಖಂಡರ ಹೆಸರು ನಕ್ಸಲರ ಜೊತೆ ಕೇಳಿಬರುತ್ತಿದೆ. ಭಯೋತ್ಪಾದನೆ ಹಾಗೂ ನಕ್ಸಲ್ ಚಟುವಟಿಕೆ ದೇಶಕ್ಕೆ ಬಹುದೊಡ್ಡ ಸಮಸ್ಯೆಯಾಗಿದೆ. ಆದರೆ ಕಾಂಗ್ರೆಸ್ ಅಂತಹವರ ಮೇಲೆ ಅನುಕಂಪವನ್ನು ಹೊಂದಿರುವುದು ಖಂಡನೀಯ. ಕಾಂಗ್ರೆಸ್ ರೈತರ ಪರವಾಗಿ ಕೆಲಸ ಮಾಡುತ್ತಿಲ್ಲವೆಂದರೇ, ಗಾಂಧೀಜಿಯವರ ಬಯಕೆಯಂತೆ ಅದನ್ನು ವಿಸರ್ಜಿಸಬೇಕು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    15 ವರ್ಷದ ಹಿಂದೆಯೇ ಮಧ್ಯಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ಶುರುವಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಮಧ್ಯಪ್ರದೇಶ ಬಹುತೇಕ ರಸ್ತೆಗಳು ಗುಂಡಿಗಳಿಂದ ಕೂಡಿದ್ದವು. ನಿರುದ್ಯೋಗದ ಸಮಸ್ಯೆ ತಾಂಡವವಾಡುತ್ತಿತ್ತು. ಈಗ ರಾಜ್ಯ ಅಭಿವೃದ್ಧಿಯ ಕಡೆಗೆ ಸಾಗುತ್ತಿವೆ. ಮಧ್ಯಪ್ರದೇಶ ಹಾಗೂ ಇತರೆ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿಯನ್ನು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ದಿಗ್ವಿಜಯ್ ಸಿಂಗ್ ವಿರುದ್ಧದ ಆರೋಪವೇನು?
    ಭೀಮಾ ಕೊರೆಗಾಂವ್ ಘರ್ಷಣೆಯ ಕುರಿತು ತನಿಖೆ ನಡೆಸುತ್ತಿರುವಾಗ ಪುಣೆ ಪೊಲೀಸರಿಗೆ ಪತ್ರವೊಂದು ಸಿಕ್ಕಿತ್ತು. ಆ ಪತ್ರದಲ್ಲಿ ದಿಗ್ವಿಜಯ್ ಸಿಂಗ್ ಅವರ ಹೆಸರು ಉಲ್ಲೇಖವಾಗಿತ್ತು. ಅಲ್ಲದೇ ಅವರಿಗೆ ನಗರ ನಕ್ಸಲ ಜೊತೆ ನಂಟಿದೆ ಎಂದು ಆರೋಪಿಸಲಾಗಿತ್ತು. ಆದರೆ ಇದನ್ನು ತಿರಸ್ಕರಿಸಿದ್ದ ದಿಗ್ವಿಜಯ್ ಸಿಂಗ್, ತಾಕತ್ ಇದ್ದರೆ ನನ್ನನ್ನು ಬಂಧಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದರು.

    ಏನಿದು ಭೀಮಾ ಕೊರೆಗಾಂವ್ ಘರ್ಷಣೆ?
    1818 ಜನವರಿ 1ರಂದು ದಲಿತರು ಮತ್ತು ಮರಾಠರ ನಡುವೆ ನಡೆದ ಗಲಭೆಯೆ ಭೀಮಾ ಕೊರೆಗಾಂವ್ ಘರ್ಷಣೆ. ಭೀಮಾ ನದಿಯ ತೀರದಲ್ಲಿರುವ ಕೊರೆಗಾಂವ್ ಗ್ರಾಮದಲ್ಲಿ ಘರ್ಷಣೆ ನಡೆದಿದ್ದರಿಂದ ಭೀಮಾ ಕೊರೆಗಾಂವ್ ಎಂದು ಹೆಸರು ಬಂದಿತ್ತು. ಈ ಗಲಭೆಯ 200ನೇ ವರ್ಷಾಚರಣೆಯನ್ನು 2017ರ ಡಿಸೆಂಬರ್ ತಿಂಗಳಲ್ಲಿ ನಡೆಸಿದ್ದರು. ಈ ಸಂದರ್ಭದಲ್ಲಿ ಮರಾಠರ ವಿರುದ್ಧ ಯುದ್ಧ ಗೆದ್ದ ದಿನವನ್ನು `ವಿಜಯ್ ದಿನಸ್’ ಎಂಬ ಹೆಸರಿನಲ್ಲಿ ದಲಿತರು ಆಚರಿಸುತ್ತಿದ್ದರು. ಈ ವೇಳೆ ಏಕಾಏಕಿ ಘರ್ಷಣೆ ಉಂಟಾಗಿ ಓರ್ವ ದಲಿತ ವ್ಯಕ್ತಿ ಮೃತಪಟ್ಟಿದ್ದ. ಹೀಗಾಗಿ ಮತ್ತೊಮ್ಮೆ ಈ ಘರ್ಷಣೆ ಉಗ್ರ ರೂಪವನ್ನು ಪಡೆದು, ಸಾಕಷ್ಟು ಜನ ಗಾಯಾಳುಗಳಾಗಿದ್ದರು. ಜೊತೆಗೆ ಮಹಾರಾಷ್ಟ್ರವನ್ನು ಬಂದ್ ಸಹ ಮಾಡಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪಿಸಿದ 137 ಸಾರ್ವಜನಿಕ ಗಣೇಶ ವಿಗ್ರಹ ವಿಸರ್ಜನೆ

    ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪಿಸಿದ 137 ಸಾರ್ವಜನಿಕ ಗಣೇಶ ವಿಗ್ರಹ ವಿಸರ್ಜನೆ

    ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪಿಸಿದ 137 ಸಾರ್ವಜನಿಕ ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಲಾಯಿತು.

    ಗಣೇಶ ಪ್ರತಿಷ್ಠಾಪಿಸಿ 11ನೇ ದಿನವಾದ ಭಾನುವಾರ ಬೆಳಗ್ಗೆಯಿಂದಲೇ ಸಾರ್ವಜನಿಕ ಗಣೇಶ ವಿಗ್ರಹಗಳನ್ನು ನಗರದ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು. ಹುಬ್ಬಳ್ಳಿಯ 137 ಗಣಪತಿಗಳನ್ನು ನಗರದ ಇಂದಿರಾ ಗಾಜಿನ ಮನೆಯ ಆವರಣದಲ್ಲಿರುವ ಬಾವಿ ಹಾಗೂ ಹಳೇಹುಬ್ಬಳ್ಳಿ ಶ್ರೀನಗರದ ಕಪಿಲಾ ಭಾವಿಯಲ್ಲಿ ವಿಸರ್ಜನೆ ಮಾಡಲಾಯಿತು.

    ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೇ ಶಾಂತಿಯುತವಾಗಿ ಗಣೇಶನಿಗೆ ವಿದಾಯ ಹೇಳಲಾಯಿತು.

    ಮತ್ತೊಂದೆಡೆ ಬಮ್ಮಾಪುರ ಏಣಿಯಲ್ಲಿ ಒಂದೇ ವೇದಿಕೆಯಲ್ಲಿ ಗಣೇಶ ಮೂರ್ತಿ ಹಾಗೂ ಪಾಂಚಾ (ಮೊಹರಂ ಹಬ್ಬದಲ್ಲಿ ಪ್ರತಿಷ್ಠಾಪನೆ ಮಾಡುವ ಮುಸ್ಲಿಂ ದೇವರು) ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹಿಂದೂ-ಮುಸ್ಲಿಂರು ಏಕತೆಯನ್ನು ಸಾರಿದ್ದರು. ವಿಘ್ನೇಶ್ವರ ಉತ್ಸವ ಸಮಿತಿ ಹಾಗೂ ಸೈಯದ್ ಸಾದಾತ್ ಜಮಾತ ವತಿಯಿಂದ ಆಚರಣೆ ಮಾಡಿದ್ದಾರೆ. 36 ವರ್ಷಗಳ ಹಿಂದೆ ಗಣೇಶೋತ್ಸವ ಹಾಗೂ ಮೊಹರಂ ಹಬ್ಬ ಏಕಕಾಲದಲ್ಲಿ ಬಂದಾಗ, ಇದೇ ರೀತಿಯಲ್ಲಿ ಹಬ್ಬ ಆಚರಣೆ ಮಾಡಲಾಗಿತ್ತು. ಆದಾದ ನಂತರ ಈ ಬಾರಿ ಗಣೇಶೋತ್ಸವ ಹಾಗೂ ಮೊಹರಂ ಏಕ ಕಾಲದಲ್ಲಿ ಬಂದಿರೋದರಿಂದ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ ಎಂದು ವಿಘ್ನೇಶ್ವರ ಉತ್ಸವ ಸಮಿತಿಯವರು ಹೇಳಿದ್ದರು.

    ಅಂದಹಾಗೆ ಮುಂಜಾನೆ ಹಾಗೂ ಸಂಜೆ ಹಿಂದೂ ಹಾಗೂ ಮುಸ್ಲಿಂ ಸಂಪ್ರದಾಯಗಳ ಪ್ರಕಾರ ಪೂಜೆ ಪುರಸ್ಕಾರಗಳು ನಡೆಯಿತು. ಗಣೇಶನನ್ನು ನೋಡಲು ಬಂದವರು ಪಾಂಚಾ ದೇವರ ದರ್ಶನ ಪಡೆಯುತ್ತಾರೆ ಹಾಗೇ ಪಾಂಚಾ ದೇವರ ದರ್ಶನಕ್ಕೆ ಬಂದವರು ಗಣೇಶ ದರ್ಶನ ಪಡೆದರು. ಎರಡು ಹಬ್ಬಗಳು ಏಕಕಾಲದಲ್ಲಿ ಬಂದಿರುವುದು ಎರಡು ಸಮುದಾಯದ ಜನರ ಸಂಭ್ರಮ ಇಮ್ಮಡಿಗೊಳಿಸಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv