ಮೈಸೂರು: ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ 10ನೇ ಪುಣ್ಯ ಸ್ಮರಣೆ ಅಂಗವಾಗಿ ಮೈಸೂರಿನ ಹೊರವಲಯದ ವಿಷ್ಣು ಸ್ಮಾರಕ ಸ್ಥಳದಲ್ಲಿ ಭಾರತಿ ವಿಷ್ಣುವರ್ಧನ್ ಪೂಜೆ ಸಲ್ಲಿಸಿದರು.
ಸ್ಮಾರಕ ಸ್ಥಳದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಭಾರತಿ ವಿಷ್ಣುವರ್ಧನ್ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರಕ್ತದಾನ, ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೂ ಚಾಲನೆ ನೀಡಿದರು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಭಾರತಿ ವಿಷ್ಣುವರ್ಧನ್, ಹತ್ತು ವರ್ಷಗಳ ನಂತರ ಒಳ್ಳೆಯದಾಗುತ್ತಿದೆ. ಇನ್ನೊಂದು ವಾರದಲ್ಲಿ ಸ್ಮಾರಕ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು.
ವಿಷ್ಣು ನಿಧನರಾಗಿ ಹತ್ತು ವರ್ಷಗಳಾಗಿವೆ. ಅಭಿಮಾನಿಗಳ ಪ್ರೀತಿ, ವಿಶ್ವಾಸ ಇನ್ನು ಕಡಿಮೆಯಾಗಿಲ್ಲ. ಅವರ ಘನತೆಗೆ ಯಾವುದೇ ಧಕ್ಕೆಯಾಗಿಲ್ಲ. ವಿಷ್ಣು ಇನ್ನೂ ನಮ್ಮೊಂದಿಗೆ ಇದ್ದಾರೆ. ಸ್ಮಾರಕ ವಿಷ್ಣು ಅವರ ಕನಸು. ಸ್ಮಾರಕ ಜಾಗದಲ್ಲಿ ಜನಪರ ಕೆಲಸಗಳಾಬೇಕು ಎಂಬುದು ಅವರ ಬಯಕೆಯಾಗಿತ್ತು. ಕಟ್ಟಡದ ರೂಪುರೇಷೆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದರು. ಸಿಎಂ ಯಡಿಯೂರಪ್ಪ ಅವರು ಸ್ಮಾರಕ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಹಾಯ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು: ಇಂದು ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 10ನೇ ವರ್ಷದ ಪುಣ್ಯಸ್ಮರಣೆ. ಹೀಗಾಗಿ ನಟ ಕಿಚ್ಚ ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಸ್ಮರಿಸಿದ್ದಾರೆ.
ಸುದೀಪ್ ಟ್ವೀಟ್ ಮಾಡುವ ಮೂಲಕ ಅಪ್ಪಾಜಿ ವಿಷ್ಣುವರ್ಧನ್ ಅವರನ್ನು ಸ್ಮರಣೆ ಮಾಡಿದ್ದಾರೆ. “ಅಪ್ಪಾಜಿ..ಇಂದು ನಿಮ್ಮ 10ನೇ ಪುಣ್ಯಸ್ಮರಣೆ. ಆದರೆ ಮರೆತವರಿಗೆ ಮಾತ್ರ ಸ್ಮರಣೆ. ನೀವು ನಮ್ಮೆದೆಯ ನಂದಾದೀಪ. ಈ 10 ವರ್ಷದಲ್ಲಿ ಒಂದೇ ಒಂದು ದಿನವೂ ಈ ನಾಡು, ಚಿತ್ರರಂಗ, ನಿಮ್ಮ ಅಭಿಮಾನಿಗಳು ಮತ್ತು ನಾನು ನಿಮ್ಮನ್ನು ಮರೆತೇ ಇಲ್ಲ. ನಿಮ್ಮ ಹೆಸರು ಅತ್ಯಂತ ಪ್ರಕಾಶಮಾನವಾಗಿ ಬೆಳಗುತ್ತಲೇ ಇದೆ. ಆ ಬೆಳಕು ಎಲ್ಲರಿಗೂ ದಾರಿದೀಪವಾಗಿದೆ” ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾರೆ.
ಜೊತೆಗೆ ವಿಷ್ಣುವರ್ಧನ್ ಅವರು ಫೋಟೋವನ್ನು ಶೇರ್ ಮಾಡಿದ್ದಾರೆ. ಸುದೀಪ್ ಟ್ವೀಟ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ವಿಷ್ಣುವರ್ಧನ್ ಅವರನ್ನು ಸ್ಮರಿಸುತ್ತಿದ್ದಾರೆ.
ಡಾ.ವಿಷ್ಣುವರ್ಧನ್ ಅವರು ಡಿಸೆಂಬರ್ 30, 2009ರಂದು ಇಹಲೋಕ ತ್ಯಜಿಸಿದ್ದರು. ಸುದೀಪ್ ಸದಾ ವಿಷ್ಣುವರ್ಧನ್ ಅವರನ್ನು ಅಪ್ಪಾಜಿ ಎಂದು ಕರೆಯುತ್ತಿದ್ದರು. ಅವರಿಬ್ಬರ ನಡುವೆ ಉತ್ತಮ ಬಾಂಧವ್ಯ ಕೂಡ ಇತ್ತು. ಸುದೀಪ್ ‘ಮಾತಾಡ್ ಮಾತಾಡ್ ಮಲ್ಲಿಗೆ’ ಸಿನಿಮಾದಲ್ಲಿ ಅಪ್ಪಾಜಿ ವಿಷ್ಣುವರ್ಧನ್ ಅವರ ಜೊತೆ ಅಭಿನಯಿಸಿದ್ದರು.
ಅಪ್ಪಾಜಿ.. ಇಂದು ನಿಮ್ಮ 10ನೇ ಪುಣ್ಯಸ್ಮರಣೆ! ಆದ್ರೆ ಮರೆತವರಿಗೆ ಮಾತ್ರ ಸ್ಮರಣೆ. ನೀವು ನಮ್ಮೆದೆಯ ನಂದಾದೀಪ. ಈ 10 ವರ್ಷದಲ್ಲಿ ಒಂದೇ ಒಂದು ದಿನವೂ ಈ ನಾಡು, ಚಿತ್ರರಂಗ, ನಿಮ್ಮ ಅಭಿಮಾನಿಗಳು ಮತ್ತು ನಾನು ನಿಮ್ಮನ್ನು ಮರೆತೇ ಇಲ್ಲ. ನಿಮ್ಮ ಹೆಸರು ಅತ್ಯಂತ ಪ್ರಕಾಶಮಾನವಾಗಿ ಬೆಳಗುತ್ತಲೇ ಇದೆ. ಆ ಬೆಳಕು ಎಲ್ಲರಿಗೂ ದಾರಿದೀಪವಾಗಿದೆ. pic.twitter.com/wTQqhH1hoo
ಚಿಕ್ಕಮಗಳೂರು: ಸಾಹಸಸಿಂಹ, ನಟ ವಿಷ್ಣುವರ್ಧನ್ ಅವರ ಮುಂದಿನ ಹುಟ್ಟುಹಬ್ಬಕ್ಕೆ ಅವರ ಕುಟುಂಬಸ್ಥರು ಹಾಗೂ ಪತ್ನಿ ಭಾರತಿ ವಿಷ್ಣುವರ್ಧನ್ಗೆ ಚಿಕ್ಕಮಗಳೂರಿನ ಜನ ಎಂದೂ ಮರೆಯದ ವಿಶೇಷವಾದ ಕಲ್ಲನ್ನು ಉಡುಗೊರೆಯಾಗಿ ನೀಡಲಿದ್ದಾರೆ.
ಸ್ವತಃ ವಿಷ್ಣುವರ್ಧನ್ ಅವರೇ ಹಿಡಿದು ಚಿತ್ರಕ್ಕಾಗಿ ಬಳಸಿದ್ದ ಕಲ್ಲು. 45 ವರ್ಷಗಳಿಂದ ಆ ಸಾಧಾರಣ ಕಲ್ಲನ್ನು ರಕ್ಷಣೆ ಮಾಡಿಕೊಂಡು ಬಂದಿರುವ ಮಲೆನಾಡಿಗರು, ಈಗ ಆ ಕಲ್ಲನ್ನು ಅವರ ಕುಟುಂಬಸ್ಥರಿಗೆ ನೀಡಲು ಮುಂದಾಗಿದ್ದಾರೆ. ನೋಡೋಕೆ ಇದೊಂದು ಕಲ್ಲಷ್ಟೆ. ಆದರೆ ಈ ಕಲ್ಲನ್ನು ಹಿಡಿದು ವಿಷ್ಣುವರ್ಧನ್ ನಟಿಸಿದ್ದ ನಟನೆ, ತೋರಿದ ಭಾವ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದೆ ಉಳಿದಿರೋದಂತು ಸತ್ಯ. ಅಂತಹ ಕಲ್ಲನ್ನು ಭಾರತಿ ವಿಷ್ಣುವರ್ಧನ್ ಉಡುಗೊರೆಯಾಗಿ ಪಡೆಯಲಿದ್ದಾರೆ. ಇದನ್ನು ಓದಿ:ಭೂತಯ್ಯನ ಮಗ ಅಯ್ಯು ನೆನಪು – ಇಂದಿಗೂ ಹಾಗೆಯೇ ಇದೆ ಮನೆ, ಹೋಟೆಲ್
ಆ ಕಲ್ಲು ಭಾರತೀಯ ಚಿತ್ರರಂಗದ ಎವರ್ ಗ್ರೀನ್ ಸಿನಿಮಾ, ‘ಭೂತಯ್ಯನಮಗ ಅಯ್ಯು’ ಚಿತ್ರದಲ್ಲಿ ವಿಷ್ಣುವರ್ಧನ್ ಕತ್ತಿಯನ್ನ ಮಸೆದ ಕಲ್ಲು. ಈ ಚಿತ್ರದ ಶೇಕಡ 60ರಷ್ಟು ಭಾಗ ಚಿತ್ರೀಕರಣಗೊಂಡಿದ್ದು ಚಿಕ್ಕಮಗಳೂರು ತಾಲೂಕಿನ ಕಳಸಾಪುರದಲ್ಲಿ. ಆ ಕಲ್ಲನ್ನು ಅದೇ ಊರಿನ ಜನ 45 ವರ್ಷಗಳಿಂದ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಹಳೇ ಮನೆಯಲ್ಲಿದ್ದ ಕಲ್ಲನ್ನು ಹೊಸ ಮನೆಗೂ ಕೊಂಡೊಯ್ದಿದ್ದಾರೆ. ಬೇರೆ-ಬೇರೆ ಸಿನಿಮಾದವರು ಶೂಟಿಂಗ್ಗೆ ಬಂದಾಗ ಕೇಳಿದಾಗಲು ಕೊಟ್ಟಿಲ್ಲ. ದುಡ್ ಕೊಡುತ್ತೇವೆ ಎಂದರು ಇಲ್ಲ ಅಂದಿದ್ದಾರೆ. ಈಗ ಆ ಕಲ್ಲನ್ನು ಊರಿನ ಯುವಕರು ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಅವರ ಮನೆಯವರಿಗೆ ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ. ವಿಷ್ಣುವರ್ಧನ್ ಅವರ ಮುಂದಿನ ಹುಟ್ಟುಹಬ್ಬದಂದು ಅವರ ಮನೆಗೆ ತೆರಳಿ ಭಾರತಿ ಅವರ ಕೈಗೆ ಅದನ್ನು ನೀಡಲು ಗ್ರಾಮದ ಯುವಕರು ನಿರ್ಧರಿಸಿದ್ದಾರೆ.
ಊರಿನ ಜನ ಅದರಲ್ಲಿ ವಿಷ್ಣುವರ್ಧರನ್ನು ಕಾಣುತ್ತಿದ್ದು, ಅವರ ಮಾತು-ಕಥೆ, ಜನರೊಂದಿಗೆ ಬೆರೆಯುತ್ತಿದ್ದ ಅವರ ಮುಕ್ತ ಮನಸ್ಸನು ಆ ಕಲ್ಲಿನಲ್ಲಿ ಕಾಣುತ್ತಿದ್ದಾರೆ. 45 ವರ್ಷದಿಂದ ಯಾರಿಗೂ ಕೊಟ್ಟಿಲ್ಲ. 45 ವರ್ಷಗಳಿಂದ ವಿಷ್ಣು ಅವರ ವ್ಯಕ್ತಿತ್ವವನ್ನು ಕಲ್ಲಿನಲ್ಲಿ ಕಾಣುತ್ತಿದ್ದಾರೆ. ಇದು ಬದುಕಿನ ಸಾರ್ಥಕತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಭಾರತಿ ವಿಷ್ಣುವರ್ಧನ್ ಅವರ ಜೀವಮಾನದಲ್ಲಿ ಸಾವಿರಾರು, ಲಕ್ಷಾಂತರ ಉಡುಗೊರೆಗಳನ್ನ ಪಡೆದಿರಬಹುದು. ಆದರೆ ಈ ಉಡುಗೊರೆಯಂತಹಾ ಸ್ಪೆಷಲ್ ಗಿಫ್ಟ್ ಅವರಿಗೆ ಎಂದೂ ಸಿಕ್ಕಿರೋದಿಲ್ಲ ಎಂಬ ಭಾವನೆ ಯುವಕರದ್ದು.
ಮೈಸೂರು: ಇಂದು ದಿವಂಗತ ಡಾ. ವಿಷ್ಣುವರ್ಧನ್ ಅವರ 69ನೇ ಹುಟ್ಟುಹಬ್ಬದ ಹಿನ್ನೆಲೆ ಅಭಿಮಾನಿಗಳು 69 ಸಸಿಗಳನ್ನು ನೆಟ್ಟು ನಮಿಸಿದ್ದಾರೆ.
ನೆಚ್ಚಿನ ನಟನ ಹುಟ್ಟುಹಬ್ಬದ ಹಿನ್ನೆಲೆ ಮೈಸೂರಿನ ಉದ್ಬೂರು ಬಳಿಯ ವಿಷ್ಣು ಸ್ಮಾರಕ ನಿಯೋಜಿತ ಸ್ಥಳದಲ್ಲಿ ಸಂಭ್ರಮ ಮನೆ ಮಾಡಿದೆ. ನಟಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್, ಮಗಳು ಕೀರ್ತಿ ಅವರು ವಿಷ್ಣುವರ್ಧನ್ ಅವರ ಸ್ಮಾರಕ ಸ್ಥಳಕ್ಕೆ ಪೂಜೆ ಸಲ್ಲಿಸಿದರು. ಇದನ್ನೂ ಓದಿ:ನಿಮ್ಮ ಮೇಲೆ ಪ್ರೀತಿ ಇದ್ದಷ್ಟೇ ಕೋಪವೂ ಇದೆ ಅಪ್ಪಾಜಿ- ಸುದೀಪ್
ಈ ಸಂಭ್ರಮದಲ್ಲಿ ನೂರಾರು ಅಭಿಮಾನಿಗಳು ಕೂಡ ಭಾಗಿಯಾಗಿದ್ದರು. ಈ ವೇಳೆ ಅಭಿಮಾನಿಗಳು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಮಾಡಿದರು. ಜೊತೆಗೆ ವಿಷ್ಣುದಾದ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಹಾಗೆಯೇ ಸಾಹಸ ಸಿಂಹನ ನೆನಪಿನಾರ್ಥ 69 ಸಸಿಗಳನ್ನು ನೆಟ್ಟ ಅಭಿಮಾನ ಮೆರೆದರು.
ಬೆಂಗಳೂರು: ಇಂದು ಚಂದನವನದ ವಿಷ್ಣುವರ್ಧನ್, ಉಪೇಂದ್ರ ಹಾಗೂ ನಟಿ ಶೃತಿ ಅವರ ಹುಟ್ಟುಹಬ್ಬವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಇತ್ತ ಕಿಚ್ಚ ಸುದೀಪ್ ಅವರು ಸಾಹಸ ಸಿಂಹ ವಿಷ್ಣುವರ್ಧನ್ ಅವರ ಬಗ್ಗೆ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ಸುದೀಪ್ ಅವರು ತಮ್ಮ ಟ್ವಿಟ್ಟರಿನಲ್ಲಿ ವಿಷ್ಣುವರ್ಧನ್ ಅವರ ಫೋಟೋವನ್ನು ಹಾಕಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಅಲ್ಲದೆ “ಹುಟ್ಟು ಹಬ್ಬದ ಶುಭಾಶಯ ಅಪ್ಪಾಜಿ. ನಿಮ್ಮ ಮೇಲೆ ಪ್ರೀತಿ ಎಷ್ಟು ಇದೆಯೋ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಕೋಪವೂ ಅಷ್ಟೇ ಇದೆ. ಅನಾಥರಾಗಿದ್ದೀವಿ. ಬಹಳ ಬೇಗ ಹೋಗಿಬಿಟ್ರಿ. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತೋ ನನಗೆ ಗೊತ್ತಿಲ್ಲ, ಆದರೆ ನಿಮ್ಮ ಅಗತ್ಯ ನಮಗಿತ್ತು. ನಿಮ್ಮನ್ನು ನೆನೆಯುವ, ಪ್ರೀತಿಸುವ, ಅಭಿಮಾನಿಯಲ್ಲೊಬ್ಬ ಕಿಚ್ಚ” ಎಂದು ಬರೆದುಕೊಂಡಿದ್ದಾರೆ.
ಹುಟ್ಟು ಹಬ್ಬದ ಶುಭಾಶಯ ಅಪ್ಪಾಜಿ. ನಿಮ್ಮ ಮೇಲೆ ಪ್ರೀತಿ ಯೆಷ್ಟುಇದ್ಯೆಯೋ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಕೋಪವು ಅಷ್ಟೇ ಇದೆ. ಅನಾಥರಾಗಿದ್ಧೀವಿ. ಬಹಳ ಬೇಗೆ ಹೋಗಿಬಿಟ್ಟಿರಿ. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತೋ ನನಗೆ ಗೊತ್ತಿಲ್ಲ, ಆದರೆ ನಿಮ್ಮ ಅಗತ್ಯ ನಮಗಿತ್ತು. ನಿಮ್ಮನ್ನು ನೆನೆಯುವ,ಪ್ರೀತಿಸುವ, ಅಭಿಮಾನಿಯಲೊಬ್ಬ. ಕಿಚ್ಚ 🙏 pic.twitter.com/QNETpDzLKO
ಕಿಚ್ಚ ಸುದೀಪ್ ಅಲ್ಲದೆ ನವರಸನಾಯಕ ಜಗ್ಗೇಶ್ ಅವರು, “ನೆನಪಿದೆ ಆ ದಿನ. ನನ್ನ ಹರಸಿದ ನಿಮ್ಮ ಮನ. ದೇಹ ತ್ಯಾಗ ನಶ್ವರ ಜಗದ ಸಹಜ ಕ್ರಿಯೆ. ಆದರೆ ಸವಿ ನೆನಪು ಬಿಟ್ಟು ಹೋಗುವುದು ಆತ್ಮೀಯ ಹೃದಯ ಮಾತ್ರ. ನಾ ಕಂಡ ಕೆಲ ಆತ್ಮೀಯ ಹೃದಯಗಳಲ್ಲಿ ನೀವೂ ಒಬ್ಬರು. ನಿಮ್ಮ ಕಾಲದಲ್ಲಿ ನಾನು ಇದ್ದೆ ಎಂಬ ಹೆಮ್ಮೆಯಿದೆ. ಹುಟ್ಟುಹಬ್ಬದ ಶುಭಾಶಯಗಳು ವಿಷ್ಣು ಸಾರ್” ಎಂದು ಟ್ವೀಟ್ ಮಾಡಿದ್ದಾರೆ.
ನೆನಪಿದೆ ಆ ದಿನ ನನ್ನಹರಸಿದ ನಿಮ್ಮ ಮನ!! ದೇಹತ್ಯಾಗ ನಶ್ವರ ಜಗದ ಸಹಜಕ್ರಿಯೆ! ಆದರೆ ಸವಿನೆನಪು ಬಿಟ್ಟು ಹೋಗುವುದು ಆತ್ಮೀಯ ಹೃದಯಮಾತ್ರ.. ನಾ ಕಂಡ ಕೆಲ ಆತ್ಮೀಯ ಹೃದಯಗಳಲ್ಲಿ ನೀವು ಒಬ್ಬರು.. ನಿಮ್ಮ ಕಾಲದಲ್ಲಿ ನಾನು ಇದ್ದೆ ಎಂಬ ಹೆಮ್ಮೆಯಿದೆ..ಹು.ಹ.ಶುಭಾಷಯಗಳು ವಿಷ್ಣು ಸಾರ್… pic.twitter.com/1ZHmyLvwKG
ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ತಮ್ಮ ಟ್ವಿಟ್ಟರಿನಲ್ಲಿ ವಿಷ್ಣುವರ್ಧನ್ ಅವರ ಜೊತೆಯಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, “ಸಾಹಸಸಿಂಹ ಡಾ. ವಿಷ್ಣುವರ್ಧನ್ ಜನ್ಮದಿನದ ಸವಿ ನೆನಪು, ದಾದಾ ನಿಮ್ಮ ನೆನಪು ಸದಾ ಹಸಿರು” ಎಂದು ಟ್ವೀಟ್ ಮಾಡಿದ್ದಾರೆ. ನಟ ರಮೇಶ್ ಅರವಿಂದ್ ಅವರು ಕೂಡ ಟ್ವಿಟ್ಟರಿನಲ್ಲಿ ವಿಷ್ಣುವರ್ಧನ್ ಅವರ ಜೊತೆಯಿರುವ ಫೋಟೋ ಹಾಕಿ ಅದಕ್ಕೆ, ನೂರೊಂದು ನೆನಪು ಎದೆಯಾಳದಿಂದ ಎಂದು ಬರೆದು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ಇಂದು ಅಭಿಮಾನಿಗಳ ಆರಾಧ್ಯ ದೈವ ಸಾಹಸಸಿಂಹ ವಿಷ್ಣುವರ್ಧನ್ ಅವರ 69ನೇ ಜಯಂತೋತ್ಸವ. ಹೀಗಾಗಿ ಅಭಿಮಾನಿಗಳು ವಿಷ್ಣುವರ್ಧನ್ ನಿವಾಸದಲ್ಲಿ ಮತ್ತು ಅಭಿಮಾನ್ ಸ್ಟುಡಿಯೋ 2 ಕಡೆ ಹುಟ್ಟುಹಬ್ಬವನ್ನ ಆಚರಿಸುತ್ತಿದ್ದಾರೆ.
ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಇಂದು ಮೂವರು ದಿಗ್ಗಜ ಕಲಾವಿದರ ಹುಟ್ಟುಹಬ್ಬದ ಸಂಭ್ರಮ. ಸಾಹಸಸಿಂಹ ವಿಷ್ಣುವರ್ಧನ್, ರಿಯಲ್ ಸ್ಟಾರ್ ಉಪೇಂದ್ರ, ನಟಿ ಶೃತಿ ಅವರ ಹುಟ್ಟುಹಬ್ಬದ ಆಚರಣೆಯನ್ನು ಅಭಿಮಾನಿಗಳು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ.
ಅಭಿಮಾನಿಗಳ ಆರಾಧ್ಯ ದೈವ ಸಾಹಸಸಿಂಹ ವಿಷ್ಣುವರ್ಧನ್ ಅವರ 69ನೇ ಜಯಂತೋತ್ಸವ. ಕಳೆದ ವರ್ಷದಂತೆ ಈ ವರ್ಷ ಕೂಡ ವಿಷ್ಣುದಾದ ಅವರ ಹುಟ್ಟುಹಬ್ಬವನ್ನ 2 ಕಡೆ ಆಚರಿಸಲಾಗುತ್ತಿದೆ. ವಿಷ್ಣುವರ್ಧನ್ ನಿವಾಸದಲ್ಲಿ ಭಾರತಿ ವಿಷ್ಣುವರ್ಧನ್ ಮತ್ತು ಕುಟುಂಬ ಸದಸ್ಯರು ಹುಟ್ಟುಹಬ್ಬ ಆಚರಿಸಿದರೆ, ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿ ದಾದಗೆ ನಮಿಸಲಿದ್ದಾರೆ.
https://www.instagram.com/p/B2hNtEmn6mL/
ಸ್ಯಾಂಡಲ್ವುಡ್ನ ರಿಯಲ್ ಸ್ಟಾರ್ ಉಪೇಂದ್ರ 52ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅಭಿಮಾನಿಗಳು ಹಾಗೂ ಸಿನಿಮಾ ತಾರೆಯರು ಉಪ್ಪಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಅಲ್ಲದೆ ಎಲ್ಲೆಡೆ ಉಪ್ಪಿ ಅಭಿಮಾನಿಗಳು ಸಡಗರ ಸಂಭ್ರಮದಿಂದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.
ಇತ್ತ ಚಂದದ ಗೊಂಬೆ ಶೃತಿ ಅವರು 44ನೇ ವಸಂತಕ್ಕೆ ಕಾಲಿಡ್ತಿದ್ದಾರೆ. ಅಭಿಮಾನಿಗಳು ಹಾಗೂ ಸಿನಿತಾರೆಯರು ನಟಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಶುಭಹಾರೈಸಿದ್ದಾರೆ. ವಿಷ್ಣುದಾದ ದೈಹಿಕವಾಗಿ ನಮ್ಮ ಜೊತೆ ಇಲ್ಲವಾದರೂ ಅಭಿಮಾನಿಗಳ ಮನದಲ್ಲಿ ಅವರು ಎಂದಿಗೂ ಅಮರ. ಬರ್ತ್ ಡೇ ಸಂಭ್ರಮದಲ್ಲಿರೋ ರಿಯಲ್ ಸ್ಟಾರ್ ಉಪ್ಪಿ, ನಟಿ ಶೃತಿ ಅವರು ಇನ್ನಷ್ಟು ಒಳ್ಳೆ ಕೆಲಸ ಮಾಡಿ ಉತ್ತಮ ಹೆಸರುಗಳಿಸಲಿ ಅನ್ನೋದು ಎಲ್ಲರ ಆಶಯವಾಗಿದೆ.
ಮೈಸೂರು: ಜಿಲ್ಲೆಯ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗಲಿರುವ ವಿಷ್ಣು ಸ್ಮಾರಕವನ್ನು ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ಅರ್ಪಣೆ ಮಾಡುತ್ತಿದ್ದೇವೆ. ವಿಷ್ಣುವರ್ಧನ್ ಕನಸು ಕೂಡ ಇದೆ ಆಗಿತ್ತು ಎಂದು ಹಿರಿಯ ನಟಿ, ಭಾರತಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ಮೈಸೂರಿನ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗಲಿರುವ ವಿಷ್ಣು ಸ್ಮಾರಕ ಪ್ರದೇಶವನ್ನು ಭಾರತಿ ವಿಷ್ಣುವರ್ಧನ್ ವೀಕ್ಷಿಸಿದರು. ಸುಮಾರು 5 ಎಕರೆ ವ್ಯಾಪ್ತಿಯ 11 ಕೋಟಿ ವೆಚ್ಚದಲ್ಲಿ ಈ ಸ್ಮಾರಕ ನಿರ್ಮಾಣವಾಗುತ್ತಿದೆ. ಕಳೆದ 10 ವರ್ಷದಿಂದ ಈ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಪುನಃ ಆರಂಭವಾಗಿರುವ ಕಾಮಗಾರಿಯನ್ನು ನೋಡಲು ಬಂದ ಭಾರತಿ ಅವರು ಸ್ಥಳೀಯರು ಹಾಗೂ ಅಧಿಕಾರಿಗಳ ಜೊತೆ ಸ್ಮಾರಕ ನಿರ್ಮಾಣದ ಕುರಿತು ಮಾಹಿತಿ ಪಡೆದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 11 ಕೋಟಿ ವೆಚ್ಚದಲ್ಲಿ ಸ್ಮಾರಕ ಹಾಗೂ ಮ್ಯೂಸಿಯಂ ನಿರ್ಮಾಣವಾಗುತ್ತಿದೆ. ಸರ್ಕಾರದಿಂದ ಈ ಹಣ ಹಂತ ಹಂತವಾಗಿ ಬಿಡುಗಡೆ ಆಗಲಿದೆ. ಮೊದಲು ನಾವು ಈ ಜಾಗದಲ್ಲಿದ್ದವರಿಗೆ ಮಾನವೀಯತೆಯಿಂದ ಹಣ ಕೊಡುತ್ತೇವೆ ಎಂದು ಹೇಳಲಾಗಿತ್ತು. ಆದರೆ ಸ್ಥಳೀಯರು ಇಂದು ಆಗೋದಿಲ್ಲ ಹೋರಾಟ ಮಾಡುತ್ತೀವಿ ಎಂದರು. ಆದರೆ ಈಗ ಇದು ಸರ್ಕಾರದ ಜಾಗವಾಗಿದೆ. ಹಾಗಾಗಿ ಈಗ ಅವರಿಗೆ ಮಾನವೀಯತೆಯಿಂದ ಹಣ ಕೊಡುವ ಅವಶ್ಯಕತೆ ಇಲ್ಲ. ನಾವು ಕೊಡೋದಿಲ್ಲ, ಸರ್ಕಾರವೂ ಕೊಡಲ್ಲ. ಈ ಸ್ಮಾರಕ ಅಭಿಮಾನಿಗಳು ಹಾಗೂ ವಿಷ್ಣು ಅವರಿಗೆ ಅರ್ಪಿಸುತ್ತೇವೆ. ವಿಷ್ಣುವರ್ಧನ್ ಅವರ ಕನಸು ಕೂಡ ಇದೆ ಆಗಿತ್ತು ಎಂದು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ಮಾತನಾಡಿ, ಮೈಸೂರಿನಲ್ಲಿ ಸ್ಮಾರಕ ಆಗ್ತಿರೋದು ತುಂಬಾನೇ ಖುಷಿಯಾಗಿದೆ. ಅಪ್ಪಾಜಿಯವರ ಕನಸು ಕೂಡ ಇದೇ ಆಗಿತ್ತು. ಇದು ಕೇವಲ ಸ್ಮಾರಕವಲ್ಲ, ಇದೊಂದು ರಾಜ್ಯದ ಮಾಡೆಲ್. ರಂಗ ತರಬೇತಿಯಿಂದ ಹಿಡಿದು ಸಿನಿಮಾಗೆ ಸಂಬಂಧಿಸಿದ ಎಲ್ಲ ರೀತಿಯ ಟ್ರೈನಿಂಗ್ ಇಲ್ಲಿ ಇರುತ್ತದೆ. ದಕ್ಷಿಣ ಭಾರತದಲ್ಲಿ ಇದೊಂದು ಉತ್ತಮವಾದ ಮ್ಯೂಸಿಯಂ ಆಗಬೇಕಿದೆ. 10 ವರ್ಷಗಳ ಕಾಲ ನಡೆದ ಹೋರಾಟದ ಫಲ ಇಂದು ದೊರಕಿದೆ. ಎರಡು ವರ್ಷದಲ್ಲಿ ಸ್ಮಾರಕ ಹಾಗೂ ಮ್ಯೂಸಿಯಂ ಮುಕ್ತಾಯವಾಗಲಿದೆ ಎಂದು ತಿಳಿಸಿದರು.
ಹೆಜ್ಜೆ ಹೆಜ್ಜೆಗೂ ಅಬ್ಬರಿಸುತ್ತಾ ಸಾಗಿ ಬಂದಿದ್ದ ಪಡ್ಡೆಹುಲಿಯೀಗ ಪ್ರೇಕ್ಷಕರನ್ನು ಮುಖಾಮುಖಿಯಾಗಿದೆ. ಈ ಚಿತ್ರ ನೆಲದ ಸೊಗಡಿನ ಯುವ ಸಮುದಾಯದ ಕಥೆಯೊಂದಿಗೆ, ಎಲ್ಲವನ್ನೂ ದಾಟಿಕೊಂಡು ಗುರಿಯತ್ತ ಮುನ್ನುಗ್ಗೋ ಛಲಕ್ಕೆ ಕಸುವು ತುಂಬುವಂತೆ ಮತ್ತು ಕೇವಲ ಯುವ ಸಮೂಹ ಮಾತ್ರವಲ್ಲದೇ ಒಂದಿಡೀ ಫ್ಯಾಮಿಲಿ ಒಟ್ಟಾಗಿ ನೋಡಿ ಎಂಜಾಯ್ ಮಾಡುವ ರೀತಿಯಲ್ಲಿ ಮೂಡಿ ಬಂದಿದೆ. ಉಳಿದೆಲ್ಲ ಭಾವಗಳ ಜೊತೆಗೆ ಕನ್ನಡತನ, ಸಂಗೀತ ಪ್ರೇಮವನ್ನೂ ಉಸಿರಾಗಿಸಿಕೊಂಡಿರೋ ಮಾಸ್ ಗೆಟಪ್ಪಿನ ಪಡ್ಡೆಹುಲಿ ಒಂದೇ ಸಲಕ್ಕೆ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆದುಕೊಂಡಿದೆ.
ಗುರುದೇಶಪಾಂಡೆ ನಿರ್ದೇಶನದ ಚಿತ್ರಗಳೆಂದರೇನೇ ನೆಲದ ಘಮಲಿನ ಕಥೆಯ ನಿರೀಕ್ಷೆಗಳೇಳುತ್ತವೆ. ಆದರೆ ಕಾಲೇಜು ಸ್ಟೋರಿ ಎಂಬಂತೆ ಬಿಂಬಿತವಾಗಿದ್ದ ಪಡ್ಡೆಹುಲಿಯೂ ಅಂಥಾದ್ದೇ ಸಾರ ಹೊಂದಿರುತ್ತದಾ ಎಂಬ ಬಗ್ಗೆ ಅನೇಕರಿಗೆ ಅನುಮಾನಗಳಿದ್ದವು. ಆದರೆ, ಪಡ್ಡೆಹುಲಿಯ ಕಥೆ ಕಾಲೇಜು ಕಾರಿಡಾರಿನಾಚೆಗೂ ಬಳಸಿ ಬಂದು, ಅಪ್ಪಟ ನೆಲದ ಸೊಗಡಿನ ಘಮಲನ್ನು ಪ್ರೇಕ್ಷಕರೆದೆಗೂ ಮೊಗೆದು ತಂದು ಸುರುವಿದೆ. ಅಂಥಾ ಪುಳಕ, ಥ್ರಿಲ್ಲಿಂಗ್, ಮೈನವಿರೇಳಿಸೋ ಸಾಹಸ, ಹನಿಗಣ್ಣಾಗುವಂಥಾ ತಿರುವುಗಳು, ಗಾಢ ಪ್ರೇಮ ಮತ್ತು ಸಂಗೀತಮಯ ಪಯಣ… ಇದಿಷ್ಟೂ ಭಾವಗಳೊಂದಿಗೆ ಪಡ್ಡೆಹುಲಿ ಅಪರೂಪದ ಚಿತ್ರ ನೋಡಿದ ಅನುಭವವೊಂದಕ್ಕೆ ಪ್ರೇಕ್ಷಕರನ್ನೆಲ್ಲ ವಾರಸುದಾರರನ್ನಾಗಿಸುತ್ತದೆ.
ಶಾಲಾ ಆವರಣದಲ್ಲಿ ಕನ್ನಡ ಪ್ರೇಮದ ಹಿಮ್ಮೇಳದೊಂದಿಗೇ ಪಡ್ಡೆಹುಲಿಯ ಕಥೆ ಅನಾವರಣಗೊಳ್ಳುತ್ತಾ ಸಾಗುತ್ತದೆ. ಕನ್ನಡಕ್ಕೆ ಅವಮಾನಿಸಿದರೆ ಶಾಲೆಯ ಮುಖ್ಯಸ್ಥರ ಕಪಾಳಕ್ಕೆ ಬಾರಿಸಲೂ ಹಿಂದೆ ಮುಂದೆ ನೋಡದ ತಂದೆಯಾಗಿ ಕ್ರೇಜಿóಸ್ಟಾರ್ ರವಿಚಂದ್ರನ್ ನಟಿಸಿದ್ದಾರೆ. ಕಥೆಯೆಂಬುದು ಕಾಲೇಜಿನೊಳಗೇ ನಡೆದರೂ ಕೂಡಾ ಅದರ ಭಾವಗಳು ಬದುಕಿನ ನಾನಾ ಮುಖಗಳಿಗೆ ಕನ್ನಡಿ ಹಿಡಿಯುತ್ತವೆ. ಕಾಲೇಜೊಂದರ ಭಾವಲೋಕವನ್ನು ಹಸಿ ಹಸಿಯಾಗಿ ಹಿಡಿದಿಡೋ ಚಿತ್ರಗಳು ಸಾಕಷ್ಟು ಬಂದಿರಬಹುದು. ಆದರೆ ಪಡ್ಡೆಹುಲಿಯಷ್ಟು ಪರಿಣಾಮಕಾರಿಯಾದ ಎನರ್ಜಿಟಿಕ್ ಕಥೆಗಳು ತುಂಬಾನೇ ವಿರಳ. ಅದನ್ನು ಪರಿಣಾಮಕಾರಿಯಾಗಿಸುವಲ್ಲಿ ನಿರ್ದೇಶಕ ಗುರು ದೇಶಪಾಂಡೆಯವರು ಹಾಕಿರುವ ಶ್ರಮ ನಿಜಕ್ಕೂ ಸಾರ್ಥಕವಾಗಿದೆ.
ಇಲ್ಲಿ ಕಷ್ಟದಿಂದಲೇ ಕಾಲೇಜು ಕಾರಿಡಾರಿಗೆ ಕಾಲಿಟ್ಟು ಆ ಬಳಿಕ ತಾನೇ ತಾನಾಗಿ ಆ ಲೋಕದ ನಾನಾ ಪಲ್ಲಟಗಳಿಗೆ ಪಕ್ಕಾಗುವ ಮಧ್ಯಮ ವರ್ಗದ ಹುಡುಗನ ಕಥೆಯಿದೆ. ಈ ಹಾದಿಯಲ್ಲೆದುರಾಗೋ ಎಲ್ಲ ಸವಾಲುಗಳನ್ನೂ ಎದುರಿಸುತ್ತಾ ತಾನಂದುಕೊಂಡಿದ್ದನ್ನು ಸಾಧಿಸಲು ಮುಂದಾಗುವ ಪಕ್ಕಾ ಮಾಸ್ ಪಾತ್ರಕ್ಕೆ ನಾಯಕ ಶ್ರೇಯಸ್ ಜೀವ ತುಂಬಿದ್ದಾರೆ. ಪ್ರತೀ ಫ್ರೇಮಿನಲ್ಲಿಯೂ ಪಳಗಿದ ನಟನಂಥಾ ಪ್ರೌಢ ನಟನೆಯನ್ನೂ ಅವರು ನೀಡಿದ್ದಾರೆ. ನಾಯಕಿ ನಿಶ್ವಿಕಾ ನಾಯ್ಡು ಕೂಡಾ ಅದಕ್ಕೆ ಭರ್ಜರಿಯಾಗಿಯೇ ಸಾಥ್ ಕೊಟ್ಟಿದ್ದಾರೆ. ರವಿಚಂದ್ರನ್, ಸುಧಾ ರಾಣಿ, ರಕ್ಷಿತ್ ಶೆಟ್ಟಿ ಸೇರಿದಂತೆ ಎಲ್ಲರೂ ಪಡ್ಡೆಹುಲಿಯ ಆವೇಗಕ್ಕೆ ಕಸುವು ತುಂಬಿದ್ದಾರೆ.
ಪಡ್ಡೆಹುಲಿಯ ಕಥೆ ತೆರೆದುಕೊಳ್ಳೋದೇ ಚಿತ್ರದುರ್ಗದ ನೆಲದಿಂದ. ಇಲ್ಲಿನ ಮಧ್ಯಮವರ್ಗದ ಕನ್ನಡ ಮೇಷ್ಟರ ಕುಟುಂಬದ ಕೂಸಾದ ನಾಯಕ ಸಂಪತ್ ರಾಜ್ ಪಾಲಿಗೆ ಸಂಗೀತವೆಂದರೆ ಬಾಲ್ಯದಿಂದಲೂ ಪ್ರಾಣ. ತಾನು ಜಗತ್ತೇ ಬೆರಗಾಗಿ ನೋಡುವಂಥಾ ಸಂಗೀತಗಾರನಾಗಬೇಕೆಂಬ ಕನಸು ಆತನ ಮನಸಲ್ಲಿ ಎಳವೆಯಿಂದಲೇ ಮೊಳಕೆಯೊಡೆದು ಬಿಟ್ಟಿರುತ್ತೆ. ಆದರೆ ಹೆತ್ತವರಿಗೆ ಮಗ ಚೆನ್ನಾಗಿ ಓದಿಕೊಂಡು ಒಳ್ಳೆ ಕೆಲಸ ಪಡೆಯಬೇಕೆಂಬ ಆಸೆ. ಅತ್ತ ಜೀವದಂತೆ ಪ್ರೀತಿಸೋ ಹೆತ್ತವರ ಆಸೆಯನ್ನೂ ಹೊಸಕುವಂತಿಲ್ಲ. ತನ್ನ ಕನಸನ್ನೂ ಕೈ ಬಿಡುವಂತಿಲ್ಲ. ಕಡೆಗೂ ಹೆತ್ತವರ ಆಸೆಯಂತೆಯೇ ದುರ್ಗದಿಂದ ಬೆಂಗಳೂರಿಗೆ ಬಂದು ಇಂಜಿನಿಯರಿಂಗ್ ಕಾಲೇಜಿಗೆ ಅಡಿಯಿರಿಸೋ ದುರ್ಗದ ಪಡ್ಡೆ ಹುಲಿಗೆ ನಾನಾ ಸವಾಲುಗಳೆದುರಾಗುತ್ತವೆ. ಅವಮಾನಗಳು ಎದೆಗಿರಿಯುತ್ತವೆ. ಇದೆಲ್ಲದರಾಚೆಗೆ ಪಡ್ಡೆಹುಲಿ ಸಂಗೀತಗಾರನಾಗೋ ಕನಸನ್ನು ನನಸು ಮಾಡಿಕೊಳ್ತಾನಾ ಎಂಬುದೇ ಅಸಲೀ ಕುತೂಹಲ. ಇದನ್ನಿಟ್ಟುಕೊಂಡು ಯಾರೇ ಚಿತ್ರಮಂದಿರಕ್ಕೆ ತೆರಳಿದರೂ ಪಡ್ಡೆ ಹುಲಿಯ ಕಡೆಯಿಂದ ಅಪೂರ್ವ ಅನುಭವವಾಗೋದು ಗ್ಯಾರೆಂಟಿ!
ದುರ್ಗದಿಂದ ಆರಂಭವಾಗಿ ಕಾಲೇಜು ಕಾರಿಡಾರಿನಲ್ಲಿ ಹರಿದಾಡೋ ಈ ಕಥೆ ಅಪರೂಪದ್ದು. ಫ್ಯಾಮಿಲಿ, ಪ್ರೀತಿ, ಸಾಹಸ, ಸೆಂಟಿಮೆಂಟ್ ಸೇರಿದಂತೆ ನಾನಾ ಭಾವ ಹೊಂದಿರೋ ಈ ಕಥೆಯಲ್ಲಿ ಆಪ್ತವಾಗೋದು ಪಡ್ಡೆಹುಲಿಯ ಗೆಲ್ಲುವ ಛಲ. ಈ ಚಿತ್ರವನ್ನು ಯಾರೇ ನೋಡಿದರೂ ಪಡ್ಡೆಹುಲಿಯಾಗಿ ಅಬ್ಬರಿಸಿರೋ ಶ್ರೇಯಸ್ ಪಾತ್ರ ಮನಸೊಳಗೆ ಪ್ರತಿಷ್ಠಾಪಿತವಾಗುತ್ತೆ. ಶ್ರೇಯಸ್ ಅವರಂತೂ ಇದು ಮೊದಲ ಚಿತ್ರವೆಂಬ ಸುಳಿವೇ ಬಿಟ್ಟುಕೊಡದಂತೆ ಅಬ್ಬರಿಸಿದ್ದಾರೆ. ಡ್ಯಾನ್ಸ್, ಫೈಟ್ ಸೇರಿದಂತೆ ಎಲ್ಲದರಲ್ಲಿಯೂ ಗಮನ ಸೆಳೆಯುತ್ತಾರೆ. ಥರ ಥರದ ಗೆಟಪ್ಪುಗಳಲ್ಲಿ ಅದಕ್ಕೆ ತಕ್ಕುದಾಗಿ ಅಭಿನಯಿಸೋ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ. ಈ ಮೂಲಕವೇ ಮಾಸ್ ಹೀರೋ ಆಗಿ ನೆಲೆಗೊಳ್ಳುವ ಸೂಚನೆಯನ್ನೂ ನೀಡಿದ್ದಾರೆ. ಇನ್ನುಳಿದಂತೆ ಈ ಚಿತ್ರದ ಅಖಂಡ ಹನ್ನೊಂದು ಹಾಡುಗಳು ಹೊರ ಬಂದಿದ್ದಕ್ಕೂ ಕಥೆಗೂ ನೇರಾ ನೇರ ಕನೆಕ್ಷನ್ನುಗಳಿವೆ. ಅದೇನೆಂಬುದೂ ಕೂಡಾ ಈ ಕಥೆಯ ಪ್ರಧಾನ ಸಾರ.
ಹೊಸಾ ನಾಯಕನ ಆಗಮನಕ್ಕೆ ಏನೇನು ಬೇಕೋ ಅಂಥಾ ಎಲ್ಲ ಅಂಶಗಳೊಂದಿಗೆ ಗುರುದೇಶಪಾಂಡೆ ಅವರು ಪಡ್ಡೆಹುಲಿಯನ್ನು ರೂಪಿಸಿದ್ದಾರೆ. ರವಿಚಂದ್ರನ್ ಸೇರಿದಂತೆ ಎಲ್ಲ ಪಾತ್ರಗಳಲ್ಲಿಯೂ ಹೊಸತನವಿದೆ. ನಿರ್ಮಾಪಕ ರಮೇಶ್ ರೆಡ್ಡಿಯವರ ಧಾರಾಳತನವೆಂಬುದು ಪಡ್ಡೆಹುಲಿಯನ್ನು ಪ್ರತೀ ಹಂತದಲ್ಲಿಯೂ ಲಕ ಲಕಿಸುವಂತೆ ಮಾಡಿದೆ. ಕೊಂಚ ಆಚೀಚೆ ಆಗಿದ್ದರೂ ಸಾಮಾನ್ಯ ಕಥೆಯಾಗಬಹುದಾಗಿದ್ದ ಪಡ್ಡೆಹುಲಿಯ ಚಮತ್ಕಾರವನ್ನು ವಿಶೇಷವಾಗಿಸಿರೋದು ನಿರ್ದೇಶಕರ ಜಾಣ್ಮೆ. ಒಟ್ಟಾರೆಯಾಗಿ ಕನ್ನಡಕ್ಕೆ ಮಾಸ್ ಹೀರೋ ಎಂಟ್ರಿಯಾಗಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಶ್ರೇಯಸ್ ಪಡ್ಡೆಹುಲಿಯಾಗಿ ಖಂಡಿತಾ ಇಷ್ಟವಾಗುತ್ತಾರೆ.
ಸಿನಿಮಾಗಳಲ್ಲಿ ಜನಮೆಚ್ಚಿದ ನಟರ ಪ್ರಭೆಯನ್ನು ಬಳಸಿಕೊಳ್ಳೋದು ಮಾಮೂಲು. ಆದರೆ ಅಂಥಾ ನಟರ ಅಸಲಿ ಅಭಿಮಾನಿಗಳೇ ಥ್ರಿಲ್ ಆಗುವಂತೆ ಚಿತ್ರವೊಂದನ್ನು ರೂಪಿಸೋದು ಸವಾಲಿನ ಸಂಗತಿ. ಈ ವಿಚಾರದಲ್ಲಿ ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಚಿತ್ರ ಗೆದ್ದಿದೆ. ಅದರಿಂದಾಗಿಯೇ ಇಡೀ ಕರ್ನಾಟಕದ ಉದ್ದಗಲಕ್ಕೂ ಹರಡಿಕೊಂಡಿರುವ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳೆಲ್ಲ ಪಡ್ಡೆಹುಲಿಯತ್ತ ಆಕರ್ಷಿತರಾಗಿದ್ದಾರೆ.
ಎಂ.ರಮೇಶ್ ರೆಡ್ಡಿಯವರು ತೇಜಸ್ವಿನಿ ಎಂಟರ್ ಪ್ರೈಸಸ್ ಬ್ಯಾನರ್ ಅಡಿ ನಿರ್ಮಾಣ ಮಾಡಿರೋ ಚಿತ್ರ ಪಡ್ಡೆಹುಲಿ. ಈ ಸಿನಿಮಾದೊಳಗಿನ ವಿಷ್ಣು ಅಭಿಮಾನ ಥರ ಥರದಲ್ಲಿ ಅನಾವರಣಗೊಳ್ಳುತ್ತಲೇ ಬಂದಿದೆ. ಈ ಅಭಿಮಾನದ ಹಿಂದೆ ರಿಯಲ್ ಆದ ಕಥಾನಕಗಳೂ ಇವೆ. ಯಾಕಂದ್ರೆ ಈ ಚಿತ್ರದಲ್ಲಿ ವಿಷ್ಣು ಅಭಿಮಾನಿಯಾಗಿ ನಟಿಸಿರೋ ಶ್ರೇಯಸ್ ನಿಜ ಜೀವನದಲ್ಲಿಯೂ ಸಾಹಸ ಸಿಂಹನ ಅಪ್ಪಟ ಅಭಿಮಾನಿ!
ಅಷ್ಟಕ್ಕೂ ಶ್ರೇಯಸ್ ಅವರ ತಂದೆ ನಿರ್ಮಾಪಕರಾದ ಕೆ.ಮಂಜು ಅವರೂ ವಿಷ್ಣು ಅಭಿಮಾನಿಯೇ. ಮಂಜು ಅವರು ವಿಷ್ಣುವರ್ಧನ್ ಅವರ ನಿಕಟ ಸಂಪರ್ಕ ಹೊಂದಿದ್ದವರು. ವಿಷ್ಣು ಮೇಲೆ ಅಪಾರವಾದ ಪ್ರೀತಿ ಹೊಂದಿರೋ ಮಂಜು ತಮ್ಮ ಮಗನ ಮೊದಲ ಚಿತ್ರದ ಮೂಲಕ ಅದನ್ನು ಹೊರಗೆಡವಿದ್ದಾರೆ. ವಿಷ್ಣು ಹುಟ್ಟುಹಬ್ಬದಂದು ಬಿಡುಗಡೆಯಾಗಿದ್ದ ರಾಪ್ ಸಾಂಗ್ ಸೇರಿದಂತೆ ಎಲ್ಲದರಲ್ಲಿಯೂ ಪಡ್ಡೆಹುಲಿ ವಿಷ್ಣು ಅಭಿಮಾನದಿಂದಲೇ ಮಿರುಗುತ್ತಿದೆ!
ಬೆಂಗಳೂರು: ಸ್ಯಾಂಡಲ್ವುಡ್ ಅಭಿಮಾನಿಗಳಿಗೆ ಕಡಗದ ಬಗ್ಗೆ ಸಾಮಾನ್ಯವಾಗಿ ಗೊತ್ತಿರುತ್ತೆ. ಯಾಕೆಂದರೆ ಸ್ಟಾರ್ ನಟರ ಕೈಯಲ್ಲಿ ಕಡಗ ನೋಡಿ, ಅವರನ್ನು ಅನುಸರಿಸುವ ಅಭಿಮಾನಿಗಳು ಸಹ ಕಡಗವನ್ನು ಧರಿಸುತ್ತಾರೆ. ಅದರಲ್ಲೂ ಸಾಹಸಸಿಂಹ ವಿಷ್ಣುವರ್ಧನ್ ಅವರು ಕೈಗೆ ಕಡಗ ಹಾಕುತ್ತಿದ್ದರಿಂದ ಅವರ ಅಭಿಮಾನಿಗಳು ಕೂಡ ಅದೇ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಆದರೆ ವಿಷ್ಣುದಾದ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಯಲ್ಲಿ ಇಂತಹ ಕಡಗ ಕಂಡುಬಂದಿತ್ತು. ಆದರಿಂದ ಡಿ ಬಾಸ್ ಧರಿಸುವ ಕಡಗದ ಬಗ್ಗೆ ಅನೇಕರಿಗೆ ಕೂತೂಹಲವಿತ್ತು.
ಬಾಸ್ ಧರಿಸುವ ಕಡಗದ ಬಗ್ಗೆ ತಿಳಿದುಕೊಳ್ಳಬೇಕೆಂಬ ಕಾತುರ ಅಭಿಮಾನಿಗಳಲ್ಲಿತ್ತು. ಅದು ಯಾರದ್ದು? ಯಾರು ಕೊಟ್ಟಿದ್ದು? ಎಂದು ತಿಳಿಯಬೇಕು ಅಂತ ಅಭಿಮಾನಿಗಳಲ್ಲಿ ಕೂತೂಹಲವಿತ್ತು. ಅದರಲ್ಲೂ ದರ್ಶನ್ ಧರಿಸುವ ಕಡಗ ವಿಷ್ಣುದಾದ ಅವರದ್ದೇ, ಅವರ ನಿಧನದ ಬಳಿಕ ದರ್ಶನ್ ಕೈಗೆ ಬಂದಿದೆ ಅಂತ ಅನೇಕರು ನಂಬಿದ್ದಾರೆ. ದರ್ಶನ್ ಪಾಲಿನ ರಿಯಲ್ ‘ಯಜಮಾನ’ ಇವರೊಬ್ಬರೇ ಅಂತ ಹೇಳುತ್ತಾರೆ. ಅಲ್ಲದೆ ಕಡಗವನ್ನು ದರ್ಶನ್ ಅವರಿಗೆ ರೆಬೆಲ್ ಸ್ಟಾರ್ ಅಂಬರೀಶ್ ಅವರು ಪ್ರೀತಿಯಿಂದ ಕೊಟ್ಟಿರಬಹುದು ಎಂದು ನಂಬಿದವರೂ ಇದ್ದಾರೆ. ಆದ್ರೆ, ದರ್ಶನ್ ಅವರ ಕಡಗದ ಬಗ್ಗೆ ಯಾವುದೇ ನಿಖರ ಮಾಹಿತಿ ಇರಲಿಲ್ಲ.
ಯಜಮಾನ ಚಿತ್ರದ ಸುದ್ದಿಗೋಷ್ಠಿಯಲ್ಲಿ ತಮ್ಮ ಕೈಯಲ್ಲಿರುವ ಕಡಗದ ಹಿಂದಿನ ಕಥೆಯನ್ನ ದರ್ಶನ್ ಬಿಚ್ಚಿಟ್ಟಿದ್ದಾರೆ. ಹೌದು, ಕಡಗದ ಕುರಿತು ಹಲವು ಉಹಾಪೋಹಗಳು ಸಿನಿರಂಗದಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ದರ್ಶನ್ ಕಡಗದ ರಹಸ್ಯ ಬಿಚ್ಚಿಟ್ಟಿದ್ದಾರೆ. ನಿನ್ನೆ ಮೊನ್ನೆಯಿಂದ ದರ್ಶನ್ ಕಡಗ ಹಾಕುತ್ತಿಲ್ಲ. ಸುಮಾರು 36 ವರ್ಷದಿಂದ ದರ್ಶನ್ಗೆ ಕೈಗೆ ಕಡಗ ಹಾಕುವ ಅಭ್ಯಾಸವಿದೆ. ತಾವು ಮೈಸೂರಿನಲ್ಲಿ ನೆಲೆಸಿದ್ದಾಗ, ಪುಟ್ಟ ಬಾಲಕನಿರುವಾಗಿನಿಂದಲೂ ಕೈಗೆ ಕಡಗ ಹಾಕುವುದು ದಾಸ ಅವರಿಗೆ ಅಚ್ಚುಮೆಚ್ಚು.
ಮೈಸೂರಿನಲ್ಲಿ ನಮ್ಮ ಕುಟುಂಬ ನೆಲೆಸಿದ್ದ ಮನೆಯ ಮೇಲಿಯೇ ಪಂಜಾಬಿ ಕುಟುಂಬದವರು ಇದ್ದರು. ಅವರಿಗೆ ಗಂಡು ಮಕ್ಕಳಿರಲಿಲ್ಲ. ಆದರಿಂದ ಒಮ್ಮೆ ಗೋಲ್ಡನ್ ಟೆಂಪಲ್ಗೆ ಹೋಗಿದ್ದ ವೇಳೆ ಸಣ್ಣದೊಂದು ಕಡಗ ತಂದು ನನಗೆ ಕೊಟ್ಟಿದ್ದರು. ಆಗಿನಿಂದಲೂ ನಾನು ಕಡಗ ಹಾಕುತ್ತಿದ್ದೇನೆ ಅಂತ ಡಿ ಬಾಸ್ ಕಡಗದ ಸೀಕ್ರೇಟ್ ರಿವಿಲ್ ಮಾಡಿದ್ದಾರೆ.
ವಿಷ್ಣುವರ್ಧನ್ ಅವರ ಥರ ದರ್ಶನ್ಗೂ ಕಡಗ ಅಂದರೇ ನಂಬಿಕೆ, ಪ್ರೀತಿ. ಆದರಿಂದ ಹಿಂದೊಮ್ಮೆ ಕಾರು ಅಪಘಾತವಾಗಿ ತಮ್ಮ ಕೈಗೆ ಬಲವಾದ ಪೆಟ್ಟುಬಿದ್ದಿದ್ದರೂ ಅವರು ಕೈಯಲ್ಲಿದ್ದ ಕಡಗವನ್ನು ತೆಗೆದಿರಲಿಲ್ಲ. ದರ್ಶನ್ ಅವರ ಕೈಯಲ್ಲಿರುವ ಕಡಗದ ಬಗ್ಗೆ ಹರಿದಾಡುತ್ತಿದ್ದ ಅನೇಕ ಊಹಾಪೊಹಗಳಿಗೆ ಸದ್ಯ ಅವರು ಉತ್ತರ ನೀಡಿ ಬ್ರೇಕ್ ಹಾಕಿದ್ದಾರೆ.