Tag: ವಿಶ್ವೇಶತೀರ್ಥ ಸ್ವಾಮೀಜಿ

  • ಉಡುಪಿ ಪೇಜಾವರ ಶ್ರೀಯನ್ನು ಭೇಟಿಯಾದ ರವಿಶಂಕರ್ ಗುರೂಜಿ

    ಉಡುಪಿ ಪೇಜಾವರ ಶ್ರೀಯನ್ನು ಭೇಟಿಯಾದ ರವಿಶಂಕರ್ ಗುರೂಜಿ

    ಉಡುಪಿ: ಬಾಬ್ರಿ ಮಸೀದಿ ಧ್ವಂಸವಾಗಿ 25 ವರ್ಷ ತುಂಬಿದ ದಿನದಂದೇ ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ರವಿಶಂಕರ್ ಗುರೂಜಿ ಪೇಜಾವರ ಸ್ವಾಮೀಜಿಯನ್ನು ಭೇಟಿಯಾಗಿದ್ದಾರೆ.

    ಆರ್‍ಎಸ್‍ಎಸ್ ಮತ್ತು ವಿಶ್ವಹಿಂದೂ ಪರಿಷದ್ ನ ರಾಮ ಮಂದಿರ ನಿರ್ಮಾಣ ಕುರಿತಾದ ಏಕಪಕ್ಷೀಯ ನಿರ್ಣಯದಿಂದ ರವಿಶಂಕರ್ ಗುರೂಜಿಗೆ ಮುಖಭಂಗವಾಗಿತ್ತು. ಧರ್ಮ ಸಂಸದ್ ಮುಗಿದ ನಂತರ ಬುಧವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ರವಿಶಂಕರ ಗುರೂಜಿ ಶ್ರೀಕೃಷ್ಣನ ದರ್ಶನ ಮಾಡಿ ಚಂದ್ರಶಾಲೆಯಲ್ಲಿ ಕುಳಿತಿದ್ದರು.

    ಬೆಳಗ್ಗೆಯ ಪೂಜೆಯಲ್ಲಿದ್ದ ಪೇಜಾವರ ಶ್ರೀಗಳು ರವಿಶಂಕರ್ ಗುರೂಜಿಯನ್ನು ಕಂಡು ಪೂಜೆ ಮುಗಿಸಿ ಬರುವುದಾಗಿ ಹೇಳಿ ಕೃಷ್ಣಪೂಜೆಯಲ್ಲಿ ತೊಡಗಿದರು. ನಂತರ ಮಠದ ಬಡಗು ಮಾಳಿಗೆಯಲ್ಲಿ ಸುಮಾರು ಅರ್ಧಗಂಟೆಗಳ ಕಾಲ ಪೇಜಾವರ ಶ್ರೀ ಮತ್ತು ರವಿಶಂಕರ್ ಗುರೂಜಿ ಗೌಪ್ಯ ಮಾತುಕತೆ ಮಾಡಿದರು. ಪೇಜಾವರ ಶ್ರೀಗಳು ಧರ್ಮ ಸಂಸದ್ ನಲ್ಲಿ ನಡೆದ ಗೋಷ್ಟಿಗಳ ಬಗ್ಗೆ ಪೇಜಾವರ ಮಾಹಿತಿ ನೀಡಿದ್ದಾರೆ. ರವಿಶಂಕರ್ ಗುರೂಜಿ ತನ್ನ ಮಧ್ಯಸ್ಥಿಕೆಯ ಬೆಳವಣಿಗೆ ಬಗ್ಗೆ ಮಾತುಕತೆ ಮಾಡಿದ್ದಾರೆ.

    ಗೌಪ್ಯ ಮಾತುಕತೆ ನಂತರ ಹೊರಬಂದ ಶ್ರೀರವಿಶಂಕರ್ ಗುರೂಜಿ, ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಪ್ರಾಯ ಇದೆ. ಸೌಹಾರ್ದ ಪ್ರಯತ್ನ ಮುಂದುವರೆಸುತ್ತೇನೆ. ನ್ಯಾಯಾಲಯದ ಹೊರಗೆ ರಾಮಜನ್ಮಭೂಮಿ ವಿವಾದ ಬಗೆಹರಿಸಲು ನಮ್ಮ ಪರ ಯತ್ನ ಮುಂದುವರೆಯುತ್ತದೆ. ನಾನು ಭೇಟಿಯಾದ ಎಲ್ಲರೂ ಮಂದಿರ ನಿರ್ಮಾಣದ ಪರವಾಗಿದ್ದಾರೆ. ಮುಸ್ಲಿಮರೂ ಸಹಮತ ವ್ಯಕ್ತಪಡಿಸಿದ್ದಾರೆ. ಆರ್‍ಎಸ್‍ಎಸ್ ತನ್ನದೇ ಅಭಿಪ್ರಾಯ ಹೊಂದಲು ಸ್ವತಂತ್ರ ಎಂದರು.

    ಪೇಜಾವರಶ್ರೀ ಮಾತನಾಡಿ, ಗೌಪ್ಯ ಮಾತುಕತೆಯ ವಿವರಣೆಗಳನ್ನು ಹೇಳಲ್ಲ. ಧರ್ಮಸಂಸದ್‍ನಲ್ಲಿ ಗುರೂಜಿಗೆ ವಿರೋಧವಿತ್ತು ಎಂದು ಹೇಳಲಾರೆ. ನ್ಯಾಯಾಲಯದ ಹೊರಗೆ ತೀರ್ಮಾನವಾಗಬೇಕು ಎಂಬುದು ನಮ್ಮ ಅಪೇಕ್ಷೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಅನ್ನೋದು ಎಲ್ಲರ ಅಭಿಪ್ರಾಯ ಎಂದರು.

    ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳ ಜೊತೆ ಸಂಧಾನಕ್ಕೆ ಯತ್ನಿಸದಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಧರ್ಮ ಸಂಸದ್ ಕಾರ್ಯಕ್ರಮಕ್ಕೆ ಶ್ರೀ ಶ್ರೀ ರವಿಶಂಕರ್ ಗುರೂಜಿ ಗೈರು ಹಾಜರಿ ಹಾಕಿದ್ದರು ಎಂದು ಹೇಳಲಾಗುತ್ತಿದೆ.

  • ಉಡುಪಿ: ಶ್ರೀಕೃಷ್ಣ ಮಠದಲ್ಲಿ ಯೇಸುದಾಸ್ ಗಾನಸುಧೆ

    ಉಡುಪಿ: ಶ್ರೀಕೃಷ್ಣ ಮಠದಲ್ಲಿ ಯೇಸುದಾಸ್ ಗಾನಸುಧೆ

    ಉಡುಪಿ: ಶ್ರೀಕೃಷ್ಣನ ಅಪ್ಪಟ ಅಭಿಮಾನಿ, ಪದ್ಮವಿಭೂಷಣ ಗಾಯಕ ಕೆ.ಜೆ. ಯೇಸುದಾಸ್ ಉಡುಪಿಯಲ್ಲಿ ತಮ್ಮ ಗಾಯನದ ಮೂಲಕ ಸಾವಿರಾರು ಸಂಗೀತಾಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಿರಂತರ ಗಾನಸುಧೆಯನ್ನು ಯೇಸುದಾಸ್ ಹರಿಸಿದರು.

    ಮೊದಲು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೇ ಹಾಡಿದ ಯೇಸುದಾಸ್, ನಂತರ ದೇವರ ಕೀರ್ತನೆಗಳನ್ನು ಹಾಡಿದರು. ತಮಗಿಷ್ಟದ ಆರಾಧ್ಯ ದೇವರು ಶ್ರೀಕೃಷ್ಣನ ನಾಮಗಳನ್ನು ಹಾಡಿದರು. ಇದಕ್ಕೂ ಮೊದಲು ಶ್ರೀಕೃಷ್ಣಮಠಕ್ಕೆ ಆಗಮಿಸಿದ ಅವರು ಕಡೆಗೋಲು ಕೃಷ್ಣನ ದರ್ಶನ ಮಾಡಿದರು. ಕುಟುಂಬ ಸಮೇತ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪರ್ಯಾಯ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

    ಪ್ರತೀ ವರ್ಷ ಯೇಸುದಾಸ್ ಅವರು ಹುಟ್ಟುಹಬ್ಬದ ಸಂದರ್ಭದಲ್ಲಿ ಕೃಷ್ಣಮಠಕ್ಕೆ ಭೇಟಿಕೊಡುವ ವಾಡಿಕೆ ಇಟ್ಟುಕೊಂಡಿದ್ದಾರೆ. ಸದ್ಯ ಪೇಜಾವರ ಪರ್ಯಾಯ ನಡೆಯುತ್ತಿದ್ದು, ಸ್ವಾಮೀಜಿಗಳ ಮೇಲಿನ ಗೌರವದಿಂದ ಉಡುಪಿಯಲ್ಲಿ ಕಾರ್ಯಕ್ರಮ ನೀಡಲು ಯೇಸುದಾಸ್ ಒಪ್ಪಿದ್ದರು. ಯೇಸುದಾಸ್ ಅವರ ಬಳಗ ಕರ್ನಾಟಕ ಸಂಗೀತ ಅಭಿಮಾನಿಗಳನ್ನು ಕೆಲಕಾಲ ಸಂಗೀತ ಲೋಕದಲ್ಲಿ ತೇಲಾಡಿಸಿತು.