Tag: ವಿಳ್ಯದೆಲೆ

  • ಎಲೆಬಿಚ್ಚಾಲಿಯ ವಿಳ್ಯದೆಲೆಗೆ ಲಾಕ್‍ಡೌನ್ ಎಫೆಕ್ಟ್: ಮಾರುಕಟ್ಟೆಯಿಲ್ಲದೆ ನಷ್ಟದಲ್ಲಿ ಬೆಳೆಗಾರರು

    ಎಲೆಬಿಚ್ಚಾಲಿಯ ವಿಳ್ಯದೆಲೆಗೆ ಲಾಕ್‍ಡೌನ್ ಎಫೆಕ್ಟ್: ಮಾರುಕಟ್ಟೆಯಿಲ್ಲದೆ ನಷ್ಟದಲ್ಲಿ ಬೆಳೆಗಾರರು

    ರಾಯಚೂರು: ಕೊರೊನಾ ಲಾಕ್‍ಡೌನ್ ರೈತರನ್ನು ಸಂಕಷ್ಟಕ್ಕೀಡುಮಾಡಿದೆ. ರೈತರು ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಆಗುತ್ತಿಲ್ಲ. ಮತ್ತೊಂದೆಡೆ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗಿದೆ. ರಾಯಚೂರು ತಾಲೂಕಿನ ಎಲೆಬಿಚ್ಚಾಲಿಯಲ್ಲಿ ಸಂಪ್ರಾದಾಯಿಕ ಬೆಳೆಯಾಗಿ ವಿಳ್ಯದೆಲೆ ಬೆಳೆಯುತ್ತಿದ್ದ ರೈತರು ಮಾರುಕಟ್ಟೆಯಿಲ್ಲದೆ ನಷ್ಟದಲ್ಲಿದ್ದಾರೆ.

    ಜಿಲ್ಲೆಯ ತುಂಗಭದ್ರಾ ನದಿಯ ಪಕ್ಕದಲ್ಲಿರುವ ಎಲೆಬಿಚ್ಚಾಲಿ ಗ್ರಾಮ ಈ ಹಿಂದೆ ವಿಳ್ಯೆದೆಲೆಯನ್ನು ಬೆಳೆಯುವುದರಲ್ಲಿ ತುಂಬಾ ಪ್ರಸಿದ್ಧಿ ಹೊಂದಿತ್ತು. ಎಲೆ ಬೆಳೆಯುವ ಹಿನ್ನೆಲೆ ಈ ಗ್ರಾಮಕ್ಕೆ ಎಲೆಬಿಚ್ಚಾಲಿ ಎನ್ನುವ ಹೆಸರು ಬಂದಿದೆ. ಆದರೆ 1992ರಲ್ಲಿ ಬಂದ ಪ್ರವಾಹದಿಂದ ಮಣ್ಣಿನ ಗುಣಲಕ್ಷಣವೇ ಬದಲಾಗಿ ಬೆಳೆ ಬರುತ್ತಿರಲಿಲ್ಲ. ಕಳೆದ ನಾಲ್ಕು ವರ್ಷದಿಂದ ವಿಳ್ಯೆದೆಲೆಯನ್ನು ಇಲ್ಲಿಯ ರೈತರು ಪುನಃ ಬೆಳೆಯುತ್ತಿದ್ದಾರೆ. ಸುಮಾರು 20 ಎಕರೆಗೂ ಅಧಿಕ ಪ್ರದೇಶದಲ್ಲಿ ವಿಳ್ಯೆದೆಲೆಯನ್ನು ಬೆಳೆಯುತ್ತಿದ್ದಾರೆ. ಈಗ ಉತ್ತಮ ಇಳುವರಿ ಬರುತ್ತಿದ್ದರೂ ಕಳೆದ ಒಂದು ತಿಂಗಳನಿಂದ ಕೊರೊನಾ ಲಾಕ್‍ಡೌನ್ ಆಗಿ ವಿಳ್ಯೆದೆಲೆ ಮಾರಾಟ ಮಾಡಲು ಆಗುತ್ತಿಲ್ಲ.

    ಲಾಕ್‍ಡೌನ್ ಆರಂಭದಲ್ಲಿ ಕೂಲಿಗಳು ಬರುತ್ತಿರಲಿಲ್ಲ. ಈಗ ಕೂಲಿಗಳನ್ನು ಕೆಲಸಕ್ಕೆ ಬಂದರೂ ವಿಳ್ಯೆದೆಲೆಯನ್ನು ಮಾರುಕಟ್ಟೆಗೆ ಕಳುಹಿಸಲು ಆಗುತ್ತಿಲ್ಲ. ಬಹುತೇಕ ಕಡೆ ಚೆಕ್ ಪೋಸ್ಟ್‌ಗಳಲ್ಲಿ ಕಿರಿಕಿರಿಯಾಗುತ್ತಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

    ಸಾಮಾನ್ಯವಾಗಿ ವಿಳ್ಯೆದೆಲೆಯು ಅತ್ಯಧಿಕವಾಗಿ ಪಾನ್‍ಶಾಪ್‍ಗಳಲ್ಲಿ ಬಳಕೆಯಾಗುತ್ತಿತ್ತು. ಕೊರೊನಾ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಪಾನ್ ಶಾಪಗಳು ಬಂದ್ ಆಗಿವೆ. ರಾಯಚೂರು ಮಾರುಕಟ್ಟೆಗೆ ಕಳುಹಿಸುವ ವಿಳ್ಯೆದೆಲೆಯನ್ನು ಕಡಿಮೆ ದರದಲ್ಲಿ ಮಾರಾಟ ಮಾಡಬೇಕಾಗಿದೆ. ಈ ಹಿಂದೆ 2,000 ಎಲೆಗಳಿಗೆ 1,500 ರೂ.ವರೆಗೆ ದರವಿದ್ದದ್ದು ಈಗ 400 ರಿಂದ 500 ರೂಪಾಯಿಗೆ ಮಾರಾಟ ಮಾಡಬೇಕಾಗಿದೆ ಎಂದು ರೈತರು ಹೇಳಿದ್ದಾರೆ.

    ಇನ್ನೊಂದು ಕಡೆ ಬೇಸಿಗೆಯ ಕಾಲ ಮದುವೆ ಸೀಜನ್ ಆಗಿದ್ದು, ಮದುವೆಯ ಸಂದರ್ಭದಲ್ಲಿ ವಿಳ್ಯೆದೆಲೆಯನ್ನು ಸೇವಿಸುತ್ತಿದ್ದರು. ಈಗ ಮದುವೆ ಸೇರಿದಂತೆ ಯಾವುದೇ ಕಾರ್ಯಕ್ರಮಗಳು ಇಲ್ಲ. ಇದರಿಂದಾಗಿ ವಿಳ್ಯೆದೆಲೆ ಕೇಳುವವರೆ ಇಲ್ಲದಂತಾಗಿದೆ.

    ಪ್ರತಿ ಎಕರೆಯಲ್ಲಿ ವಿಳ್ಯೆದೆಲೆಯನ್ನು ಬೆಳೆಯಲು ಕನಿಷ್ಠ 3ರಿಂದ 4 ಲಕ್ಷ ರೂಪಾಯಿ ಖರ್ಚು ಮಾಡುವ ರೈತರು ಈಗ ಖರ್ಚು ಸಹ ಬಾರದೆ ಸಾಲಗಾರರಾಗುತ್ತಿದ್ದಾರೆ. ಲಾಭವಾಗುವ ಸಮಯಕ್ಕೆ ಲಾಕ್‍ಡೌನ್ ಆಗಿ ರೈತ ಸಂಕಷ್ಟ ಹೆಚ್ಚಾಗುತ್ತಿವೆ. ನಷ್ಟ ಅನುಭವಿಸುತ್ತಿರುವ ರೈತ ನೆರವಿಗೆ ಸರ್ಕಾರ ಬರಬೇಕೆಂದು ಎಂದು ರೈತರು ಆಗ್ರಹಿಸಿದ್ದಾರೆ.

  • ಮಳೆಗೆ ಕೊಳೆಯುತ್ತಿದೆ ದೇಶ, ವಿದೇಶಕ್ಕೆ ರಫ್ತಾಗುತ್ತಿದ್ದ ಲಕ್ಷಾಂತರ ಮೌಲ್ಯದ ವೀಳ್ಯದೆಲೆ

    ಮಳೆಗೆ ಕೊಳೆಯುತ್ತಿದೆ ದೇಶ, ವಿದೇಶಕ್ಕೆ ರಫ್ತಾಗುತ್ತಿದ್ದ ಲಕ್ಷಾಂತರ ಮೌಲ್ಯದ ವೀಳ್ಯದೆಲೆ

    – ವರುಣನ ಆರ್ಭಟಕ್ಕೆ ವೀಳ್ಯದೆಲೆ ಬೆಳೆಗಾರರು ಕಂಗಾಲು

    ಹಾವೇರಿ: ಭೋಪಾಲ್, ದೆಹಲಿ ಸೇರಿದಂತೆ ವಿದೇಶಕ್ಕೂ ರಫ್ತಾಗುತ್ತಿದ್ದ ವೀಳ್ಯದೆಲೆ ಧಾರಾಕಾರ ಮಳೆಗೆ ಕೊಳೆಯುತ್ತಿದ್ದು, ಹಾವೇರಿ ಜಿಲ್ಲೆಯ ವೀಳ್ಯದೆಲೆ ಬೆಳೆಗಾರರು ಕಂಗಾಲಾಗಿದ್ದಾರೆ.

    ಜಿಲ್ಲೆಯ ಸವಣೂರು ತಾಲೂಕು ಮಾದಾಪುರ ಹಾಗೂ ಕಾರಡಗಿ ಗ್ರಾಮದಲ್ಲಿ ಬೆಳೆದ ಲಕ್ಷಾಂತರ ಮೌಲ್ಯದ ವಿಳ್ಯದೆಲೆ ಮಳೆಗೆ ಹಾನಿಯಾಗಿದೆ. ಮಾದಾಪುರ ಗ್ರಾಮದ ಕೆರೆ ಕೋಡಿ ಒಡೆದು ವೀಳ್ಯದೆಲೆ ಬೆಳೆದ ಜಮೀನಿಗೆ ಅಪಾರ ಪ್ರಮಾಣದ ನೀರು ನುಗ್ಗಿದ ಪರಿಣಾಮ ವೀಳ್ಯದೆಲೆ ತೋಟದಲ್ಲಿ ಎರಡರಿಂದ ಮೂರು ಅಡಿ ಎತ್ತರ ನೀರು ನಿಂತಿದೆ. ನೀರು ನಿಂತ ಕಾರಣಕ್ಕೆ ವೀಳ್ಯದೆಲೆ ಕೊಳೆತು ಹೋಗುತ್ತಿದೆ. ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶವಾಗುತ್ತಿರುವುದನ್ನು ಕಂಡು ಬೆಳೆಗಾರರು ಕಣ್ಣೀರಿಡುತ್ತಿದ್ದಾರೆ.

    ಪ್ರತಿನಿತ್ಯ ಭೋಪಾಲ್, ದೆಹಲಿ, ಕೋಲ್ಕತ್ತಾ, ಉತ್ತರ ಪ್ರದೇಶ, ಕರಾಚಿ ಸೇರಿದಂತೆ ವಿದೇಶಕ್ಕೂ ಇಲ್ಲಿಂದ ವೀಳ್ಯದೆಲೆ ರಫ್ತಾಗುತ್ತಿತ್ತು. ಆದರೆ ಮಳೆಯಿಂದಾಗಿ ಬೆಳೆಗಾರರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಸವಣೂರು ಹಾಗೂ ಶಿಗ್ಗಾಂವಿ ತಾಲೂಕಿನಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರೋ ವೀಳ್ಯದೆಲೆ ಸಂಪೂರ್ಣವಾಗಿ ಹಾಳಾಗುತ್ತಿದೆ.

    ಕಾರಡಗಿ, ಚಿಲ್ಲೂರಬಡ್ನಿ, ಮಾದಾಪುರ, ಸವಣೂರು ಸೇರಿದಂತೆ ವಿವಿಧ ಕಡೆಯ ವೀಳ್ಯದೆಲೆ ತೋಟ ನಿರಂತರ ಮಳೆಯಿಂದ ಹಾಳಾಗುತ್ತಿವೆ. ಲಕ್ಷಾಂತರ ರುಪಾಯಿ ಬೆಳೆ ಹಾಳಾಗಿದ್ದರಿಂದ ವೀಳ್ಯದೆಲೆ ಬೆಳೆಗಾರರು ಅಕ್ಷರಶಃ ಕಂಗಾಲಾಗಿದ್ದಾರೆ.