Tag: ವಿಮಾನ ದುರಂತ

  • 1 ವರ್ಷದ ಬಳಿಕ ಕೇರಳ ವಿಮಾನ ದುರಂತಕ್ಕೆ ಕಾರಣ ಸಿಕ್ತು- ತನಿಖಾ ವರದಿಯಲ್ಲಿ ಏನಿದೆ?

    1 ವರ್ಷದ ಬಳಿಕ ಕೇರಳ ವಿಮಾನ ದುರಂತಕ್ಕೆ ಕಾರಣ ಸಿಕ್ತು- ತನಿಖಾ ವರದಿಯಲ್ಲಿ ಏನಿದೆ?

    ನವದೆಹಲಿ: ಪೈಲಟ್ ಮಾರ್ಗಸೂಚಿಯನ್ನು ಸರಿಯಾಗಿ ಪಾಲನೆ ಮಾಡದ ಕಾರಣ ಕೇರಳದ ಕೋಯಿಕ್ಕೋಡ್‍ನಲ್ಲಿ ವಿಮಾನ ದುರಂತ ಸಂಭವಿಸಿದೆ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ(ಎಎಐಬಿ) ಹೇಳಿದೆ.

    ನಾಗರಿಕ ವಿಮಾನಯಾನ ಸಚಿವಾಲಯದ ವಿಭಾಗವಾದ ಎಎಐಬಿ 257 ಪುಟಗಳ ವರದಿಯನ್ನು ಶನಿವಾರ ಸರ್ಕಾರಕ್ಕೆ ಸಲ್ಲಿಸಿದೆ. ವರದಿಯಲ್ಲಿ ವಿಮಾನವನ್ನು ಚಲಾಯಿಸುತ್ತಿದ್ದ ಪೈಲಟ್ ಲ್ಯಾಂಡಿಂಗ್ ವೇಳೆ ಪಾಲಿಸ ಬೇಕಾದ ಮಾರ್ಗಸೂಚಿಯನ್ನು ಸರಿಯಾಗಿ ಪಾಲನೆ ಮಾಡಲಿಲ್ಲ ಎಂದು ಹೇಳಿದೆ.

    ಟೇಬಲ್ ಟಾಪ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ಸಮಯದಲ್ಲಿ ಭಾರೀ ಮಳೆ ಬರುತ್ತಿತ್ತು. ಇದರಿಂದಾಗಿ ಪೈಲಟ್‍ಗೆ ರನ್‍ವೇ ಸರಿಯಾಗಿ ಗೋಚರಿಸಲಿಲ್ಲ. ಈ ವೇಳೆ ‘ಗೋ ಅರೌಂಡ್’ ಎಂಬ ಸಂದೇಶವನ್ನು ಏರ್ ಟ್ರಾಫಿಕ್ ಕಂಟ್ರೋಲ್(ಎಟಿಸಿ) ರೂಮಿಗೆ ಕಳುಹಿಸಿದ ಬಳಿಕವೂ ಪೈಲಟ್ ಟಚ್‍ಡೌನ್ ವಲಯವನ್ನು ದಾಟಿ ರನ್‍ವೇಯ ಅರ್ಧ ದೂರದಲ್ಲಿ ಲ್ಯಾಂಡ್ ಮಾಡಿದ್ದಾರೆ. ಇದರಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಿದೆ. ಇದನ್ನೂ ಓದಿ: ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಹೇಗೆ ಕೆಲಸ ಮಾಡುತ್ತೆ? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

    ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪೈಲಟ್‍ಗೆ ಅನಿಸಿದಾಗ ಗೋ ಅರೌಂಡ್ ಸಂದೇಶವನ್ನು ಕಳುಹಿಸುತ್ತಾರೆ. ಈ ಸಂದೇಶ ಬಂದ ಕೂಡಲೇ ವಿಮಾನ ಲ್ಯಾಂಡ್ ಮಾಡಲು ಪೈಲಟ್‍ಗೆ ಸಾಧ್ಯವಾಗುವುದಿಲ್ಲ ಎನ್ನುವುದು ಎಟಿಸಿಯಲ್ಲಿ ಕಾರ್ಯನಿರ್ವಹಣೆ ಮಾಡುವವರಿಗೆ ತಿಳಿಯುತ್ತದೆ. ಕೂಡಲೇ ಅವರು ಹತ್ತಿರದಲ್ಲೇ ಎಲ್ಲಿ ಲ್ಯಾಂಡಿಂಗ್ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ನೀಡುತ್ತಾರೆ.

    ವಿಮಾನದ ಗಾಜಿನ ವೈಪರ್ ದೋಷಪೂರಿತವಾಗಿತ್ತು. ಪ್ರತಿಕೂಲ ಹವಾಮಾನದಿಂದ ಲ್ಯಾಂಡಿಂಗ್ ಮಾಡುವುದು ಕಷ್ಟ ಎನ್ನುವುದು ಪೈಲಟ್‍ಗೆ ಗೊತ್ತಿತ್ತು. ಈ ವಿಚಾರಗಳು ಪೈಲಟ್‍ಗೆ ಮೊದಲೇ ಗೊತ್ತಿತ್ತು.  ಆದರೂ ಪೈಲಟ್ ಟಚ್‍ಡೌನ್ ವಲಯ(ವಿಮಾನದ ಚಕ್ರಗಳು ಮೊದಲು ರನ್‍ವೇಯನ್ನು ಸ್ಪರ್ಶಿಸುವ ಸ್ಥಳ) ದಾಟಿ ಅರ್ಧ ದೂರಲ್ಲಿ ಲ್ಯಾಂಡಿಂಗ್ ಮಾಡಿದ್ದಾರೆ. ಇದರಿಂದಾಗಿ ವಿಮಾನ ನಿಯಂತ್ರಣಕ್ಕೆ ಸಿಗದೇ ಟೇಬಲ್ ಟಾಪ್ ರನ್‍ವೇಯಿಂದ ಕೆಳಗೆ ಜಾರಿ ಬಿದ್ದಿದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದ್ರು

    ದುಬೈಯಿಂದ ವಂದೇ ಭಾರತ್ ಮಿಷನ್ ಅಡಿ 2020ರ ಆಗಸ್ಟ್ 7ರಂದು 184 ಪ್ರಯಾಣಿಕರನ್ನು ಹೊತ್ತುಕೊಂಡು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಕೋಯಿಕ್ಕೊಂಡಿಗೆ ಬಂದಿತ್ತು. ಈ ವೇಳೆ ರನ್‍ವೇ ಸರಿಯಾಗಿ ಕಾಣಿಸದ ಹಿನ್ನೆಲೆಯಲ್ಲಿ ವಿಮಾನ ಕೆಳಗೆ ಜಾರಿ ಬಿದ್ದ ಪರಿಣಾಮ ಇಬ್ಬರು ಪೈಲಟ್ ಸೇರಿದಂತೆ 21 ಮಂದಿ ಮೃತಪಟ್ಟಿದ್ದರು. ಇದನ್ನೂ ಓದಿ: ‘ಕೊರೊನಾ ಕುರಿತು ಹರಟೆ’- ಪಾಕ್ ವಿಮಾನ ದುರಂತಕ್ಕೆ ಪೈಲಟ್‍ಗಳ ನಿರ್ಲಕ್ಷ್ಯವೇ ಕಾರಣ

    ಏನಿದು ಟೇಬಲ್ ಟಾಪ್ ವಿಮಾನ ನಿಲ್ದಾಣ?
    ಸುತ್ತಲೂ ಆಳ ಕಣಿವೆಯಿಂದ ಕೂಡಿ, ಬೆಟ್ಟದ ತುದಿಯಲ್ಲಿ ರನ್ ವೇ ಇರುವ ನಿಲ್ದಾಣಗಳನ್ನು ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದು ಗುರುತಿಸಲಾಗಿದೆ. ಮಂಗಳೂರು ಹೊರತು ಪಡಿಸಿ ದೇಶದಲ್ಲಿ ಕೋಯಿಕ್ಕೋಡ್‍ ಮತ್ತು ಲೆಂಗ್‍ಪುಯಿನಲ್ಲಿ ಈ ರೀತಿಯ ವಿಮಾನ ನಿಲ್ದಾಣಗಳನ್ನು ಕಾಣಬಹುದು.

  • ಕೇರಳದ ವಿಮಾನ ಅಪಘಾತ – ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ 22 ಅಧಿಕಾರಿಗಳಿಗೆ ಕೊರೊನಾ

    ಕೇರಳದ ವಿಮಾನ ಅಪಘಾತ – ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ 22 ಅಧಿಕಾರಿಗಳಿಗೆ ಕೊರೊನಾ

    ತಿರುವನಂತಪುರಂ: ಕೇರಳ ವಿಮಾನ ದುರಂತದ ವೇಳೆ ರಕ್ಷಣಾ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದ 22 ಅಧಿಕಾರಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಮಲಪ್ಪುರಂ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

    ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ಕೊರೊನಾ ನಡುವೆಯೂ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಭಾರತಕ್ಕೆ ಕರೆತರುತ್ತಿತ್ತು. ಕೇಂದ್ರ ಸರ್ಕಾರದ ವಂದೇ ಭಾರತ್ ಮಿಷನ್ ಅಡಿಯಲ್ಲಿ ದುಬೈನಿಂದ 184 ಪ್ರಯಾಣಿಕರನ್ನು ಕೇರಳಗೆ ಬಂದಿದ್ದರು. ಆದರೆ ಪ್ರತಿಕೂಲ ಹವಾಮಾನದ ಸಮಸ್ಯೆಯಿಂದ ವಿಮಾನ 35 ಅಡಿ ಕಂದಕಕ್ಕೆ ಜಾರಿ ಬಿದ್ದಿತ್ತು. ಪರಿಣಾಮ ಇಬ್ಬರು ಪೈಲಟ್‍ಗಳು ಸೇರಿ 18 ಜನರು ಸಾವನ್ನಪ್ಪಿದ್ದರು.

    ಕಂದಕಕ್ಕೆ ಬಿದ್ದಿದ್ದ ವಿಮಾನದಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಸ್ಥಳೀಯರು ಮತ್ತು ಸ್ಥಳದಲ್ಲಿದ್ದ ಹಲವು ಅಧಿಕಾರಿಗಳು ಬಂದು ರಕ್ಷಣೆ ಮಾಡಿದ್ದರು. ಇದಾದ ನಂತರ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದ ಎಲ್ಲ ಅಧಿಕಾರಿಗಳನ್ನು ಕ್ವಾರಂಟೈನ್ ಮಾಡಲಾಗಿತ್ತು. ಈಗ ಇವರ ಪೈಕಿ 22 ಮಂದಿ ಅಧಿಕಾರಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ಈ ಎಲ್ಲ ಅಧಿಕಾರಿಗಳು 4 ಗಂಟೆಗಳ ಕಾಲ ರಕ್ಷಣಾ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

    ಅಗಸ್ಟ್ 7ರಂದು ಸಂಜೆ 7.45ರ ಸುಮಾರಿಗೆ ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೋಯಿಕ್ಕೋಡ್‍ನ ಕರಿಪುರದಲ್ಲಿ ಲ್ಯಾಂಡಿಗೆ ವೇಳೆ ರನ್ ವೇಯಲ್ಲಿ ಜಾರಿ ದುರಂತಕ್ಕೀಡಾಗಿತ್ತು. ಲ್ಯಾಂಡಿಂಗ್ ವೇಳೆ ಬೆಂಕಿ ಹೊತ್ತಿಕೊಂಡಿಲ್ಲ. ವಿಮಾನದಲ್ಲಿ 184 ಮಂದಿ ಪ್ರಯಾಣಿಕರಿದ್ದರು. 10 ಮಂದಿ ಮಕ್ಕಳು, ಇಬ್ಬರು ಪೈಲಟ್‍ಗಳು ಹಾಗೂ ಐವರು ಕ್ಯಾಬಿನ್ ಸಿಬ್ಬಂದಿ ಇದ್ದರು.

    ದುಬೈಯಿಂದ 184 ಪ್ರಯಾಣಿಕರನ್ನು ಕರೆತರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವನ್ನು ಪೈಲಟ್ ದೀಪಕ್ ವಸಂತ ಸಾಠೆ ಎರಡು ಬಾರಿ ವಿಮಾನ ನಿಲ್ದಾಣಕ್ಕೆ ಸುತ್ತು ಹೊಡೆಸಿದ್ದರು. ಆದರೆ ಪ್ರತಿಕೂಲ ಹವಾಮಾನದ ಸಮಸ್ಯೆಯ ಮಧ್ಯೆಯೂ ವಿಮಾನವನ್ನು ಟೇಬಲ್ ಟಾಪ್ ರನ್‍ವೇಯಲ್ಲಿ ಇಳಿಸಿದರೂ ಅದು 35 ಅಡಿ ಕಂದಕಕ್ಕೆ ಜಾರಿ ಬಿದ್ದು ಗೋಡೆಗೆ ಡಿಕ್ಕಿ ಹೊಡೆದು ಇಬ್ಭಾಗವಾಗಿತ್ತು. ಘಟನೆಯಲ್ಲಿ ಇಬ್ಬರು ಪೈಲಟ್ ಗಳು ಸೇರಿ 18 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಜೊತೆಗೆ 150ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು.

  • ಇಬ್ಭಾಗವಾಗಿದ್ದ ವಿಮಾನ, ಕಣ್ಣ ಮುಂದೆ ಬಂದಿದ್ದು ಮಂಗಳೂರು ದುರಂತದ ನೆನಪು!

    ಇಬ್ಭಾಗವಾಗಿದ್ದ ವಿಮಾನ, ಕಣ್ಣ ಮುಂದೆ ಬಂದಿದ್ದು ಮಂಗಳೂರು ದುರಂತದ ನೆನಪು!

    – ಏರ್ ಇಂಡಿಯಾ ಏರ್ಪೋರ್ಟ್ ಸಿಬ್ಬಂದಿಯ ಪ್ರತ್ಯಕ್ಷ ಕಥನ

    ಕ್ಯಾಲಿಕಟ್: ಕಳೆದ ಶುಕ್ರವಾರ ಕ್ಯಾಲಿಕಟ್ ಏರ್ಪೋರ್ಟ್‍ನಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ದುರಂತದ ಕ್ಷಣಗಳು ಹೇಗಿತ್ತು..? ಅಂದು ಏನೇನಾಯ್ತು ಅನ್ನೋದನ್ನು ಅಂದು ಏರ್ಪೋರ್ಟ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏರ್ ಇಂಡಿಯಾ ಸಿಬ್ಬಂದಿ ಸಿನಿ ಸನಲ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಘನಘೋರ ದೃಶ್ಯ ಕಂಡ ಎಂಥವರ ಕಣ್ಣಾಲಿಗಳೂ ತುಂಬಲೇ ಬೇಕು. ಕೊರೊನಾ ನಡುವೆಯೂ ಊರವರ ಸಾಹಸ ಹೇಗಿತ್ತು ಇತ್ಯಾದಿಗಳನ್ನು ಅವರು ವಿವರವಾಗಿ ಬರೆದಿದ್ದಾರೆ.

    ಸಿನಿ ಸನಿಲ್ ಫೇಸ್ ಬುಕ್ ಪೋಸ್ಟ್ ನ ಪೂರ್ಣರೂಪ..
    ಸಂಜೆ 7 ಗಂಟೆಗೆ ಹೊರಡಬೇಕಾದ ದೆಹಲಿ ವಿಮಾನದ ಬಿಎಂಎ (ಬ್ಯಾಗೇಜ್ ಮೇಕಪ್ ಏರಿಯಾ) ಕೆಲಸ ಮಾಡುವಾಗ ನಾನು ಹೊರಗಡೆಯೇ ನೋಡುತ್ತಿದ್ದೆ. ಕಾರಣ ಮಳೆ ಅಷ್ಟು ಬಿರುಸಾಗಿ ಸುರಿಯುತ್ತಿತ್ತು. ಜೊತೆಗೆ ವೇಗವಾಗಿ ಗಾಳಿಯೂ ಬೀಸುತ್ತಿತ್ತು. ಕೌಂಟರ್ ಕ್ಲೋಸ್ ಮಾಡಿ ಬ್ಯಾಗ್‍ಗಳನ್ನೆಲ್ಲಾ ಟ್ಯಾಲಿ ಮಾಡಿ ಪ್ರಿಂಟ್ ತೆಗೆಯುವ ವೇಳೆ ಫ್ಲೈ ದುಬೈ ಕೌಂಟರ್ ಓಪನ್ ಆಯಿತು. ಇದರ ಬಿಎಂಎ ಕೂಡ ನೋಡಲು ರಾಜೀವ್ ಸರ್ ನನ್ನಲ್ಲಿ ಹೇಳಿದರು. ಬ್ಯಾಟರಿ ಚಾರ್ಜ್ ಮುಗಿಯುತ್ತಿದ್ದ ಫೋನನ್ನು ಚಾರ್ಜ್ ಹಾಕಿ ನೋಡಿದಾಗ ಐಎಕ್ಸ್ 1344 ದುಬೈ ಫ್ಲೈಟ್ ನ ಕೆಲಸ ನಿರ್ವಹಿಸಲು ಪಿಪಿಇ ಕಿಟ್ ಧರಿಸಿ ಸುಮೇಶ್ ಹಾಗೂ ಬ್ಯಾಗೇಜ್ ಸೆಕ್ಷನ್ ಉಸ್ತುವಾರಿಯಲ್ಲಿದ್ದ ಪ್ರತಿಭಾ ರನ್ ವೇ ಕಡೆಗೇ ನೋಡುತ್ತಾ ಸಿದ್ಧವಾಗಿದ್ದರು. 20 ನಿಮಿಷಗಳ ಕಾಲ ವಿಮಾನ ಲ್ಯಾಂಡಿಂಗ್ ಸಾಧ್ಯವಾಗದೇ ಆಗಸದಲ್ಲೇ ಇತ್ತು. ನನ್ನ ಹಿಂದೆಯೇ ಪ್ರತಿಭಾ ಕೂಡ ಬಂದಳು. ನಾವು ರ್ಯಾಂಪ್ ನೋಡ್ತಾ ಮಾತಾಡ್ತಿದ್ದೆವು. ಆಗ ನಮಗೆ ಎಕ್ಸ್ ಪ್ರೆಸ್ ವಿಮಾನ ಬಂದಿಳಿಯೋದು ಕಾಣಿಸಿತು. ಆದರೆ ಆಗಲೇ ನಮಗೆ ಏನೋ ಸಮಸ್ಯೆಯಾಗಿದೆ ಎಂದೆನಿಸಲು ಶುರುವಾಗಿತ್ತು. ಕಾರಣ ಇಷ್ಟು ವರ್ಷದಲ್ಲಿ ನಾವು ಇಂತಹ ಒಂದು ಲ್ಯಾಂಡಿಂಗ್ ನೋಡಿರಲಿಲ್ಲ. ಇದನ್ನು ನಾವು ಮಾತಾಡ್ತಿದ್ದಂಗೆ ಪ್ರತಿಭಾ ಮುಂದಕ್ಕೆ ಹೋಗಿ ನೋಡಿದಳು. ಇದನ್ನೂ ಓದಿ: ಮಂಗಳೂರು ದುರಂತದ ಬಳಿಕ ಎಚ್ಚರಿಸಿದ್ದೆ, ಆದ್ರೆ ನಿರ್ಲಕ್ಷಿಸಿದ್ರು – ವಾಯು ಸುರಕ್ಷಾ ತಜ್ಞ

    ಆದರೆ ನನ್ನ ಮನಸಿಗ್ಯಾಕೋ ಭಯ ಶುರುವಾಗಿತ್ತು. ಅಷ್ಟರಲ್ಲಿ ಸುಮೇಶ್ ಪಿಪಿಇ ಕಿಟ್ ಜೊತೆ ಓಡೋಡಿ ಬಂದ. ಅವನು ಆ ವಿಮಾನದ ಉಸ್ತುವಾರಿ ನೋಡಬೇಕಿತ್ತು. ಅರುಣ್ ಸರ್ ಕೂಡ ಬಂದರು. ಜೊತೆಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಕೋಆರ್ಡಿನೇಟರ್, ಸಿಬ್ಬಂದಿ, ಲೋಡರ್ ಗಳು ಸೇರಿ ಸುಮಾರು 8-10 ಮಂದಿ ಬಂದರು. ಮತ್ತೆ ನಾವು ತಡ ಮಾಡಲಿಲ್ಲ, ತಕ್ಷಣ ಅಲ್ಲಿದ್ದ ಫೈರ್ ಫೋರ್ಸ್ ಆಫೀಸಿಗೆ ಹೋದ್ವಿ. ಏನೇ ಅವಘಡ ಆಗಿದ್ದರೂ ಮೊದಲು ಅವರಿಗೆ ಮಾಹಿತಿ ಸಿಗಬೇಕಿತ್ತು. ಈ ನಡುವೆಯೇ ರನ್ ವೇ ಮೂಲಕ ಫೈರ್ ಇಂಜಿನ್ ಹೋಗ್ತಿರೋದು ಕಾಣಿಸಿತು. ಅಗ್ನಿಶಾಮಕ ಸಿಬ್ಬಂದಿ ಎಟಿಸಿಯಿಂದ ಯಾವುದೇ ಮಾಹಿತಿ ಸಿಗುತ್ತಿಲ್ಲ ಎಂದು ಹೇಳ್ತಿದ್ದರು. ಆಗಲೂ ಮಳೆ ಜೋರಾಗಿ ಸುರಿಯುತ್ತಿತ್ತು. ಇದೇ ವೇಳೆ ಸಿಐಎಸ್‍ಎಫ್ ಸಿಬ್ಬಂದಿಯಿದ್ದ ಒಂದು ವಾಹನವೂ ವೇಗವಾಗಿ ಹೋಯಿತು. ಅದೇ ಸಮಯಕ್ಕೆ ಬಂದ ಫೈರ್ ಸ್ಟಾಫ್ ಒಬ್ಬ ಹೇಳಿದ ಮಾತು ಕೇಳಿ ಹೃದಯ ನಿಂತಂತೆ ಭಾಸವಾಯಿತು, ನಂತರ ಪ್ರತಿಭಾಳನ್ನು ಆಲಿಂಗಿಸಿ ಕಣ್ಣೀರು ಹಾಕೋದಕ್ಕೆ ಮಾತ್ರ ಸಾಧ್ಯವಾಯಿತು. ಕಾರಣ ಆತ ಹೇಳಿದ್ದು – ‘ವಿಮಾನ ಕೆಳಗೆ ಹೋಯಿತು’. ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಗ್‌ಗೆ ಪ್ರಯತ್ನಿಸಿದ್ರು

    ಈ ಮಾತು ಕೇಳುವವರೆಗೆ ವಿಮಾನ ರನ್ ವೇಯಿಂದ ಜಾರಿರುತ್ತೆ, ಸ್ಕಿಡ್ ಆಗಿರುತ್ತೆ ಎಂದಷ್ಟೇ ಅಂದುಕೊಂಡು ನಮ್ಮ ಮನಸ್ಸಿಗೆ ನಾವೇ ಸಮಾಧಾನ ಹೇಳಿದ್ವಿ. ಆದರೆ ಅವನು ಹೇಳಿದ ಈ ಮಾತು ನಮ್ಮೆಲ್ಲಾ ನಿರೀಕ್ಷೆಗಳನ್ನು ಕೊನೆಯಾಗಿಸಿತು. ಮನಸ್ಸಿಗೆ ಆಘಾತವಾಗಿತ್ತು. ಕಣ್ಣ ಮುಂದೆ ಮಂಗಳೂರು ವಿಮಾನ ದುರಂತದ ದೃಶ್ಯಗಳೆಲ್ಲಾ ಹಾದುಹೋದವು. ವಿಮಾನ ಕೆಳಗೆ ಹೋಗಿದ್ದರೆ ನೋಡೋದಕ್ಕೆ ಇನ್ನೇನೂ ಉಳಿದಿರಲ್ಲ ಎನ್ನುವುದು ಎಲ್ಲರಿಗೂ ಗೊತ್ತಿತ್ತು. ಕಾರಣ ಮಂಗಳೂರಿನಂತೆಯೇ ಇಲ್ಲಿರೋದು ಕೂಡ ಟೇಬಲ್ ಟಾಪ್ ಏರ್ಪೋರ್ಟ್. ಕೆಳಗೆ ಹೋಗಿದ್ದರೆ ವಿಮಾನ ಅಗ್ನಿಗಾಹತಿಯಾಗೋದು ಖಚಿತ. ಮಂಗಳೂರು ಘಟನೆ ಇದನ್ನೇ ಅಲ್ಲವೇ ನಮಗೆ ತೋರಿಸಿಕೊಟ್ಟಿದ್ದು.! ಇದನ್ನೂ ಓದಿ: ಮರಳಿ ಮನೆಗೆ – ಟೇಕಾಫ್‌ ಮೊದಲು ಕುಟುಂಬದೊಂದಿಗೆ ಫೇಸ್‌ಶೀಲ್ಡ್‌ ಹಾಕಿ ಸೆಲ್ಫಿ, ಪ್ರಯಾಣಿಕ ಸಾವು

    ಬೆಚ್ಚಿ ನಿಂತಿದ್ದ ನಮ್ಮ ಮುಂದೆ ವಿಮಾನ ನಿಲ್ದಾಣ ಪ್ರಾಧಿಕಾರದ ಎರಡು ವಾಹನಗಳು ಬಂದು ನಿಂತಿದ್ದವು. ಓಡಿ ಅದನ್ನು ಹತ್ತುವಾಗ ನಮ್ಮ ಮುಂದೆ ಕೊರೊನಾ, ಸಾಮಾಜಿಕ ಅಂತರ ಯಾವುದೂ ಇರಲಿಲ್ಲ. ನಮ್ಮೆಲ್ಲರನ್ನೂ ಹೊತ್ತೊಯ್ದ ವಿಮಾನ ಸುಮಾರು 2 ಕಿ.ಮೀ. ಸಂಚರಿಸಿ ಘಟನಾ ಸ್ಥಳದ ಬಳಿ ನಿಲ್ಲಿಸಿದಾಗ ಕಂಡ ದೃಶ್ಯ ನಮ್ಮ ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ. ಇಬ್ಭಾಗವಾಗಿ ಮಲಗಿತ್ತು ವಿಮಾನ. ವಿಮಾನದ ಮುಂಭಾಗ (ನೋಸ್) ಹಾಗೂ ಹಿಂಭಾಗ (ಟೇಲ್) ಬಿಟ್ಟು ಮಧ್ಯಭಾಗ ಇಲ್ಲ ಎಂದೇ ಹೇಳಬಹುದು. ಕೆಲವೇ ಕೆಲವು ಸಿಐಎಸ್‍ಎಫ್, ಫೈರ್ ಹಾಗೂ ಏರ್ಪೋರ್ಟ್ ಅಥಾರಿಟಿ ಸಿಬ್ಬಂದಿ ಬಿಟ್ಟರೆ ಅಲ್ಲಿ ಉಳಿದವರೆಲ್ಲಾ ಊರ ಜನ. ವಿಮಾನದಿಂದ ರಕ್ಷಣೆ ಮಾಡಿದವರನ್ನು ಸಿಕ್ಕ ಸಿಕ್ಕ ವಾಹನಗಳಿಗೆ ಹಾಕಿ ಕಳಿಸುತ್ತಿದ್ದರು. ಅದರಲ್ಲಿ ಆಟೋ ರಿಕ್ಷಾಗಳು ಕೂಡ ಇದ್ದವು. ಸುತ್ತಮುತ್ತ ವಿಮಾನದ ಇಂಧನದ ವಾಸನೆ ಹರಡಿತ್ತು. ಅಂಬುಲೆನ್ಸ್‍ಗಳು ಬರುತ್ತಿದ್ದವು. ಸ್ಟ್ರೆಚರ್ ಗಳು ಕಡಿಮೆ ಇದ್ದ ಕಾರಣ ವಿಮಾನದಿಂದ ರಕ್ಷಣೆ ಮಾಡಿದವರನ್ನು ಅಲ್ಲೇ ನೆಲದಲ್ಲಿ ಮಲಗಿಸಿದ್ದರು. ನಮ್ಮನ್ನು ನೋಡಿದ ರಕ್ಷಣಾ ತಂಡದಲ್ಲಿದ್ದ ಸ್ಥಳೀಯರೊಬ್ಬರು ನೆಲದಲ್ಲಿ ಮಲಗಿಸಿದ್ದ ಮಹಿಳೆಯನ್ನು ನೋಡಿಕೊಳ್ಳಿ ಎಂದು ಹೇಳಿದರು. ಅವರ ಬಳಿ ಹೋಗಿ ಧೈರ್ಯ ಹೇಳುವಾಗಲೂ ಆಕೆ ‘ನನ್ನ ಮಗಳು, ನನ್ನ ಗಂಡ’ ಎಂದು ಹೇಳುತ್ತಲೇ ಇದ್ದರು. ನನ್ನ ಮಗಳು ಆ ವಿಮಾನದಲ್ಲಿ ಸಿಲುಕಿದ್ದಾಳೆ ಎಂದು ಹೇಳಿದ್ದು ಅಲ್ಲೇ ಪಕ್ಕದಲ್ಲಿ ಮಲಗಿದ್ದ ಮತ್ತೊಬ್ಬಳು ಅಕ್ಕ. ಇವೆಲ್ಲಾ ನಾವು ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲದ ಕ್ಷಣಗಳು. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಇಬ್ಭಾಗವಾದ್ರೂ ಬದುಕುಳಿದ ಪುಟ್ಟ ಕಂದಮ್ಮ

    ಪೈಲಟನ್ನು ವಿಮಾನದಿಂದ ಹೊರತೆಗೆಯಬೇಕಾದರೆ ಕಾಕ್‍ಪಿಟ್ ಒಡೆಯಲೇ ಬೇಕಿತ್ತು. ನಮ್ಮ ಯೂನಿಫಾರ್ಮ್ ನೋಡಿದ ರಕ್ಷಣಾ ತಂಡದ ಸದಸ್ಯರು ಕಟ್ಟರ್ ಬೇಕು ಎಂದು ಕೇಳಿದರು. ತಕ್ಷಣ ಫೈರ್ ಸಿಬ್ಬಂದಿ ಬಳಿ ಓಡಿ ಹೋಗಿ ಇದನ್ನು ಹೇಳಿದೆ. ಈ ನಡುವೆ ವಿಮಾನ ಇಂಧನ ಲೀಕೇಜ್ ಇರೋದ್ರಿಂದ ಎಲ್ಲರೂ ಮೊಬೈಲ್ ಸ್ವಿಚ್ ಆಫ್ ಮಾಡಿ ಎಂದು ಅನೌನ್ಸ್ ಮಾಡಿದ್ರು. ಜೊತೆಗೆ ಭಾರೀ ಮಳೆ. ನಮ್ಮ ಜೊತೆ ಬಂದಿದ್ದ ಅರುಣ್ ಸರ್ ವಿಮಾನದ ಮೇಲೆ ಹತ್ತಿ, ಒಳಗೆ ಹೋಗಿ ಹಲವರನ್ನು ರಕ್ಷಣೆ ಮಾಡುತ್ತಿದ್ದರು. ಅಷ್ಟರಲ್ಲಾಗಲೇ ಕೇರಳ ಫೈರ್ ಫೋರ್ಸ್, ಪೊಲೀಸ್ರು, ಜಿಲ್ಲಾಧಿಕಾರಿ ಎಲ್ಲರೂ ಬಂದರು.

    ಏರ್ಪೋರ್ಟ್ ಸಿಬ್ಬಂದಿ ಎಲ್ಲರೂ ಇಲ್ಲಿಗೆ ತಲುಪುವ ಮುನ್ನವೇ ಕೊರೊನಾ ಎಂಬ ಮಹಾಮಾರಿಯನ್ನೂ ಮರೆತು ರಕ್ಷಣಾ ಕಾರ್ಯಕ್ಕೆ ಓಡೋಡಿ ಬಂದ ಕೊಂಡೋಟ್ಟಿ ಎಂಬ ಗ್ರಾಮದ ನಿವಾಸಿಗಳನ್ನು ಎಷ್ಟು ಅಭಿನಂದಿಸಿದರೂ ಸಾಲದು. ಇದು ವಿದೇಶದಿಂದ ಬಂದ ವಿಮಾನ. ಕೋವಿಡ್ ಪಾಸಿಟಿವ್ ಇದ್ದವರಿದ್ದರೆ ನಮಗೆ ಪಾಸಿಟಿವ್ ಬರಬಹುದು ಎಂದು ಗೊತ್ತಿದ್ದರೂ ಅಧೀರರಾಗದೇ ಮುಂದೆ ಬಂದ ಸ್ಥಳೀಯರು, ವಿಮಾನದ ಇಂಧನ ಲೀಕ್ ಆಗುತ್ತಿದೆ, ಒಂದು ಸಣ್ಣ ಸ್ಪಾರ್ಕ್ ಕೂಡ ದೊಡ್ಡ ಸ್ಫೋಟವನ್ನೇ ಮಾಡಬಹುದು ಎಂಬ ಅರಿವಿದ್ದರೂ, ರಕ್ಷಣಾ ಕಾರ್ಯದಿಂದ ಹಿಂದೆ ಸರಿಯದೇ ವಿಮಾನದಲ್ಲಿದ್ದ ಎಲ್ಲರನ್ನೂ ರಕ್ಷಣೆ ಮಾಡಿದ ಸಿಐಎಸ್‍ಎಫ್ ಹಾಗೂ ಸ್ಥಳೀಯ ನಿವಾಸಿಗಳು. ದೊಡ್ಡದೊಂದು ದುರಂತಕ್ಕೆ ಸಾಕ್ಷಿಯಾದ ಕಣ್ಣು ಹಾಗೂ ಮನಸ್ಸು ಸ್ತಬ್ಧವಾದ ಕ್ಷಣಗಳು. 2010 ಮೇ 22ರ ನಂತರ 10 ವರ್ಷದ ಬಳಿಕ ಆಗಸ್ಟ್ 7 ಕೂಡ ‘ಬ್ಲ್ಯಾಕ್ ಡೇ’ಗಳ ಪಟ್ಟಿಗೆ ಸೇರಿತು. ಮತ್ತೆ ನಾವು ನೆನಪಿಸಿಕೊಳ್ಳಲೂ ಬಯಸದ ಈ ದಿನ.  ಇದನ್ನೂ ಓದಿ: ಅಜ್ಜಿ ಮನೆ ನೋಡುವ ಮುನ್ನವೇ ಕಣ್ಣು ಮುಚ್ಚಿದ 1 ವರ್ಷದ ಕಂದಮ್ಮ

    ಮರಣ ಸಂಖ್ಯೆ ಇಷ್ಟು ಕಡಿಮೆಯಾಗಿದ್ದಕ್ಕೆ ಕಾರಣ ಕ್ಯಾಪ್ಟನ್ ಪರಿಣತಿ. ವಿಮಾನವು ಅಗ್ನಿಗಾಹುತಿಯಾಗದೇ ಸ್ವಯಂ ಜವರಾಯನಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡ ಕ್ಯಾಪ್ಟನ್ ದೀಪಕ್ ವಸಂತ್ ಸಾಥೆ ಸರ್, ಅಖಿಲೇಶ್ ಸರ್… ನಮ್ಮೆಲ್ಲರ ಮನಸ್ಸಿನಿಂದ ಮಾಸದೇ ನೀವು ನೆನಪಲ್ಲೇ ಉಳಿಯುತ್ತೀರಿ… ಪ್ರಣಾಮಗಳು.
    – ಸಿನಿ ಸನಿಲ್

  • ಅಜ್ಜಿ ಮನೆ ನೋಡುವ ಮುನ್ನವೇ ಕಣ್ಣು ಮುಚ್ಚಿದ 1 ವರ್ಷದ ಕಂದಮ್ಮ

    ಅಜ್ಜಿ ಮನೆ ನೋಡುವ ಮುನ್ನವೇ ಕಣ್ಣು ಮುಚ್ಚಿದ 1 ವರ್ಷದ ಕಂದಮ್ಮ

    – ಮೊಮ್ಮಗನಿಗಾಗಿ ಕಾದು ಕುಳಿತಿದ್ದ ಅಜ್ಜ-ಅಜ್ಜಿಗೆ ಶಾಕ್

    ತಿರುವನಂತಪುರಂ: ಕೇರಳದ ಕರಿಪುರ ವಿಮಾನ ನಿಲ್ದಾಣದಲ್ಲಿ ದುರಂತಕ್ಕೀಡಾದವರ ಒಂದೊಂದೇ ಮನಮಿಡಿಯುವ ಕಥೆಗಳು ಬೆಳಕಿಗೆ ಬರುತ್ತಿದೆ.

    ಹೌದು. 1 ವರ್ಷದ ಅಜಮ್ ಮೊಹಮ್ಮದ್ ತನ್ನ ಅಜ್ಜಿ ಮನೆಗೆ ಹೋಗುವ ಮುನ್ನವೇ ಕಣ್ಣುಮುಚ್ಚಿರುವ ಮನಕಲಕುವ ಘಟನೆಯೊಂದು ನಡೆದಿದೆ. ಕೋಯಿಕ್ಕೋಡ್ ವೆಲ್ಲಿಮಡುಕುನ್ನು ಮ್ದು ನಿಜಮ್ ಹಾಗೂ ಸಾಹಿರಾ ದಂಪತಿಗೆ ಒಂದು ವರ್ಷಗಳ ಹಿಂದೆ ಅಜಮ್ ಜನಿಸಿದ್ದಾನೆ.

    ಮಗುವಿಗೆ 1 ವರ್ಷವಾದ ಬಳಿಕ ಇದೀಗ ತಮ್ಮ ಮಗುವನ್ನು ತಾಯ್ನಾಡಿಗೆ ಪರಿಚಯಿಸಲು ತಾಯಿ ತನ್ನ ಮೂವರು ಮಕ್ಕಳೊಂದಿಗೆ ವಿಮಾನ ಹತ್ತಿದ್ದರು. ಆದರೆ ಅಜಮ್ ಮೊದಲ ಪ್ರಯಾಣವೇ ಅಂತಿಮ ಪ್ರಯಾಣವಾಗಿದ್ದು, ಇತ್ತ ಮೊಮ್ಮಗನನ್ನು ನೋಡಲು ಕಾತರದಿಂದ ಕಾಯುತ್ತಿದ್ದ ಅಜ್ಜ-ಅಜ್ಜಿಗೆ ದಿಗಿಲು ಬಡಿದಂತಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಇಬ್ಭಾಗವಾದ್ರೂ ಬದುಕುಳಿದ ಪುಟ್ಟ ಕಂದಮ್ಮ

    ಅಜಮ್ ತಾಯಿ 29 ವರ್ಷದ ಸಾಹಿರಾ ಬಾನು ಕೂಡ ದುರ್ಘಟನೆಗೆ ಬಲಿಯಾಗಿದ್ದಾರೆ. ಅಜಮ್ ಸಹೋದರರಾದ 8 ವರ್ಷದ ಇಹಾನ್ ಮೊಹಮ್ಮದ್ ಹಾಗೂ 4 ವರ್ಷದ ಮರಿಯಮ್ ಮೊಹಮ್ಮದ್ ಗಾಯಗೊಂಡಿದ್ದು, ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಪರಿಪುರದಲ್ಲಿ ವಿಮಾನ ಲ್ಯಾಂಡಿಂಗ್ ಆಗುತ್ತಿದ್ದ ಸಂದರ್ಭದಲ್ಲಿ ಪುಟ್ಟ ಕಂದಮ್ಮ ಅಜಮ್ ತನ್ನ ತಾಯಿಯ ತೊಡೆಯ ಮೇಲೆ ಕುಳಿತುಕೊಂಡಿದ್ದ ಎನ್ನಲಾಗಿದೆ.

    ನಿಜಮ್ ಹಾಗೂ ಅವರ ಕುಟುಂಬ ಕಳೆದ 10 ವರ್ಷಗಳಿಂದ ದುಬೈನಲ್ಲಿ ನೆಲೆಸಿದೆ. ನಿಜಮ್ ಅಲ್ಲೇ ಉಳಿದುಕೊಂಡಿದ್ದು, ಸಾಹಿರಾ ತಮ್ಮ ಮೂವರು ಮಕ್ಕಳೊಂದಿಗೆ ಶುಕ್ರವಾರ ದುಬೈನಿಂದ ತಾಯ್ನಾಡಿಗೆ ಬರಲು ವಿಮಾನ ಏರಿದ್ದಾರೆ. ಆದರೆ ತಾಯ್ನಾಡಿಗೆ ಕಾಲಿಡುವ ಮೊದಲೇ ದುರಂತಕ್ಕೀಡಾಗಿದ್ದಾರೆ. ಸಾಹಿರಾಗೆ ಹೆರಿಗೆ ಸಮಯದಲ್ಲಿ ಜೊತೆಗಿದಿದ್ದರಿಂದ ತಾಯಿ ಸಕೀನಾ ಮಾತ್ರ ಅಜಮ್ ನನ್ನು ನೋಡಿದ್ದರು. ಹೀಗಾಗಿ ಮಗನಿಗೆ 1 ವರ್ಷ ತುಂಬಿದ ಬಳಿಕ ಆತನನ್ನು ತಾಯ್ನಾಡು ಕಕ್ಕಡ್‍ಗೆ ಪರಿಚಯಿಸಲು ದಂಪತಿ ತುದಿಗಾಲಿನಲ್ಲಿದ್ದರು ಎಂದು ಸಾಹಿರಾ ಸಂಬಂಧಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಗ್‌ಗೆ ಪ್ರಯತ್ನಿಸಿದ್ರು

    ಕಳೆದ ರಾತ್ರಿ ಮಕ್ಕಳು ಎಲ್ಲಿದ್ದಾರೆ ಎಂದು ಹುಡುಕಾಡಿದೆವು. ಆದರೆ ಇಬ್ಬರು ಮಕ್ಕಳು ಪ್ರತ್ಯೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ನಿಟ್ಟುಸಿರು ಬಿಟ್ಟೆವು. ಇಬ್ಬರೂ ಕೂಡ ಅಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸಾಹಿರಾ ಸಂಬಂಧಿಕರು ತಿಳಿಸಿದ್ದಾರೆ. ಇದನ್ನೂ ಓದಿ: ಮರಳಿ ಮನೆಗೆ – ಟೇಕಾಫ್‌ ಮೊದಲು ಕುಟುಂಬದೊಂದಿಗೆ ಫೇಸ್‌ಶೀಲ್ಡ್‌ ಹಾಕಿ ಸೆಲ್ಫಿ, ಪ್ರಯಾಣಿಕ ಸಾವು
     

    ಶುಕ್ರವಾರ ರಾತ್ರಿ ವಿಮಾನ ದುರಂತ ಸಂಭವಿಸುತ್ತಿದ್ದಂತೆಯೇ ಗಂಭೀರ ಗಾಯಗೊಂಡಿದ್ದ ಸಾಹಿರಾರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಯಿಸಿತಾದರೂ ಚಿಕಿತ್ಸೆ ಫಲಕಾರಿಯಾಗೆ ಮೃತಪಟ್ಟಿದ್ದಾರೆ. ಇತ್ತ ಅಜಮ್ ಕೂಡ ಕೋಯಿಕ್ಕೋಡ್ ಮೆಡಿಕಲ್ ಕಾಲೇಜ್ ಅಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಸಹೋದರ ಮರಿಯಮ್ ನನ್ನು ಮೊದಲು ಬೇಬಿ ಮೆಮೊರಿಯಲ್ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈತ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಸಾಹಿರಾ ತಂದೆ ನಿವೃತ್ತ ಶಿಕ್ಷಕರಾಗಿದ್ದು, ಮೊಮ್ಮಗನ ಬರುವಿಕೆಗಾಗಿ ಕಾದು ಕುಳಿತಿದ್ದು, ಇದೀಗ ಮಗಳು, ಮೊಮ್ಮಗನನ್ನು ಕಳೆದುಕೊಂಡು ಕುಟುಂಬ ದುಃಖದ ಕಡಲಲ್ಲಿ ಮುಳುಗಿದೆ. ಇದನ್ನೂ ಓದಿ: ಮಂಗಳೂರು ದುರಂತದ ಬಳಿಕ ಎಚ್ಚರಿಸಿದ್ದೆ, ಆದ್ರೆ ನಿರ್ಲಕ್ಷಿಸಿದ್ರು – ವಾಯು ಸುರಕ್ಷಾ ತಜ್ಞ

  • ಮರಳಿ ಮನೆಗೆ – ಟೇಕಾಫ್‌ ಮೊದಲು ಕುಟುಂಬದೊಂದಿಗೆ ಫೇಸ್‌ಶೀಲ್ಡ್‌ ಹಾಕಿ ಸೆಲ್ಫಿ, ಪ್ರಯಾಣಿಕ ಸಾವು

    ಮರಳಿ ಮನೆಗೆ – ಟೇಕಾಫ್‌ ಮೊದಲು ಕುಟುಂಬದೊಂದಿಗೆ ಫೇಸ್‌ಶೀಲ್ಡ್‌ ಹಾಕಿ ಸೆಲ್ಫಿ, ಪ್ರಯಾಣಿಕ ಸಾವು

    ಕ್ಯಾಲಿಕಟ್‌: ಕೊರೊನಾ ವೈರಸ್‌ನಿಂದಾಗಿ ಸ್ವದೇಶ ಬರಲು ಹರಸಾಹಸ ಪಟ್ಟು ಕೊನೆಗೆ ವಂದೇಭಾರತ್‌ ಮಿಷನ್‌ ಅಡಿ ಟಿಕೆಟ್‌ ಪಡೆದು ಕುಟುಂಬದೊಂದಿಗೆ ಕೇರಳಕ್ಕೆ ಬರುತ್ತಿದ್ದ ವ್ಯಕ್ತಿಯೊಬ್ಬರು ವಿಮಾನ ದುರಂತಕ್ಕೆ ಬಲಿಯಾಗಿದ್ದಾರೆ.

    ಕ್ಯಾಲಿಕಟ್‌ ಮೂಲದ 35 ವರ್ಷದ ಶರಫು ಗಲ್ಫ್‌ನಲ್ಲಿ ಕೆಲಸ ಮಾಡುತ್ತಿದ್ದು ಪತ್ನಿ ಅಮೀನಾ, ಮಗಳು ಈಶಾ ಫಾತಿಮಾ ಜೊತೆ ದುಬೈನಿಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಹತ್ತಿದ್ದರು.

    ವಿಮಾನ ಟೇಕಾಫ್‌ ಆಗುವುದಕ್ಕೆ ಮೊದಲು ಫೇಸ್‌ಶೀಲ್ಡ್‌, ಪಿಪಿಇ ಕಿಟ್‌, ಮುಖಕ್ಕೆ ಮಾಸ್ಕ್‌ ಧರಿಸಿ ಪತ್ನಿ, ಪುತ್ರಿಯ ಜೊತೆ ಸೆಲ್ಫಿ ಕ್ಲಿಕ್‌ ಮಾಡಿ ‘ಮರಳಿ ಮನೆಗೆʼ ಎಂದು ಬರೆದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು.

    ವೈದ್ಯಕೀಯ ತುರ್ತು ಕಾರಣ ನೀಡಿ ಕೊನೆಗೆ ಶರಫು ಕುಟುಂಬಕ್ಕೆ ವಂದೇ ಭಾರತ್‌ ಮಿಶನ್‌ ಅಡಿ ಸ್ವದೇಶಕ್ಕೆ ಬರಲು ಟಿಕೆಟ್‌ ಸಿಕ್ಕಿತ್ತು. ಶರಫು ಪತ್ನಿ ಆರೋಗ್ಯ ಸ್ಥಿರವಾಗಿದ್ದು, ಪುತ್ರಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಶರಫ್‌ ಸ್ನೇಹಿತ ಶಫಿ ಎಂಬವರು ಈ ಪೋಸ್ಟ್‌ಗೆ ಕಮೆಂಟ್‌ ಮಾಡಿ, ಕೇರಳಕ್ಕೆ ಹೋಗುವ ಮೊದಲು ನನ್ನ ಹೋಟೆಲಿಗೆ ಬಂದಿದ್ದ. ಮನಸ್ಸು ಬಹಳ ಗೊಂದಲದಲ್ಲಿತ್ತು. ಮುಂದೆ ಏನೋ ಆಗಬಹುದು ಎಂಬುದರ ಕುರಿತು ಆತನಿಗೆ ನ್ಸೂಚನೆ ಸಿಕ್ಕಿರಬೇಕು ಎಂದು ನಾನು ಭಾವಿಸುತ್ತೇನೆ. ನನಗೆ ಆತ ಹಣವನ್ನು ನೀಡಿ, ಉದ್ಯೋಗವಿಲ್ಲದವರಿಗೆ ಆಹಾರವನ್ನು ನೀಡಲು ಇದನ್ನು ಬಳಸಬೇಕು ಎಂದು ಹೇಳಿದ್ದ. ಕೊರೊನಾ ಸಮಯದಲ್ಲಿ ಶರಫು ಅವರು ಬಡವರಿಗೆ ಹಣ ನೀಡುವ ಮೂಲಕ ಸಹಾಯ ಮಾಡಿದ್ದ ಎಂದು ಬರೆದುಕೊಂಡಿದ್ದಾರೆ.

  • ಮಂಗಳೂರು ದುರಂತದ ಬಳಿಕ ಎಚ್ಚರಿಸಿದ್ದೆ, ಆದ್ರೆ ನಿರ್ಲಕ್ಷಿಸಿದ್ರು – ವಾಯು ಸುರಕ್ಷಾ ತಜ್ಞ

    ಮಂಗಳೂರು ದುರಂತದ ಬಳಿಕ ಎಚ್ಚರಿಸಿದ್ದೆ, ಆದ್ರೆ ನಿರ್ಲಕ್ಷಿಸಿದ್ರು – ವಾಯು ಸುರಕ್ಷಾ ತಜ್ಞ

    – ರನ್‌ ವೇ ಬಫರ್‌ ಜೋನ್‌ ಕಡಿಮೆಯಿದೆ
    – ಇದು ಕೊಲೆಗೆ ಸಮನಾದ ಕ್ರಿಮಿನಲ್‌ ಕೃತ್ಯ

    ಚೆನ್ನೈ: ಮಂಗಳೂರು ವಿಮಾನ ದುರಂತದ ಬಳಿಕ ನಾನು ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲೂ ಅಪಾಯವಾಗಬಹುದು ಎಂದು ವರದಿಯಲ್ಲಿ ಎಚ್ಚರಿಕೆ ನೀಡಿದ್ದೆ. ಆದರೆ ನನ್ನ ಎಚ್ಚರಿಕೆಯನ್ನು ನಿರ್ಲಕ್ಷಿಸಲಾಯಿತು ಎಂದು ವಾಯು ಸುರಕ್ಷಾ ತಜ್ಞ, ಕ್ಯಾಪ್ಟನ್‌ ಮೋಹನ್‌ ರಂಗನಾಥನ್‌ ಹೇಳಿದ್ದಾರೆ.

    ಕಲ್ಲಿಕೋಟೆ ವಿಮಾನ ದುರಂತದ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಕಲ್ಲಿಕೋಟೆ ವಿಮಾನ ನಿಲ್ದಾಣ ಟೇಬಲ್‌ ಟಾಪ್‌ ಆಗಿದ್ದು, ರನ್‌ವೇಯ ಬಫರ್‌ ಜೋನ್‌ ಬಹಳ ಕಡಿಮೆಯಿದೆ. ನಿಯಮಗಳ ಪ್ರಕಾರ ರನ್‌ವೇ ಕೊನೆಯಲ್ಲಿ 240 ಮೀಟರ್ ಉದ್ದದ ಬಫರ್‌ ಜೋನ್‌ ಇರಬೇಕು. ಆದರೆ ಇಲ್ಲಿ ಕೇವಲ 90 ಮೀಟರ್‌ ಉದ್ದವಿದೆ. ಇನ್ನೊಂದು ಬದಿಯಲ್ಲಿ 100 ಮೀಟರ್‌ ಇರಬೇಕಿತ್ತು. ಆದರೆ ಇಲ್ಲಿ ಕೇವಲ 75 ಮೀಟರ್‌ ಇದೆ ಎಂದು ಹೇಳಿದರು.

    ವಿಮಾನ ನಿಲ್ದಾಣದಲ್ಲಿ ವಿಮಾನಗಳು ಲ್ಯಾಂಡ್‌ ಆಗುವಾಗ ಏನಾದರೂ ದೋಷ ಉಂಟಾದರೆ ಅಥವಾ ನಿಗದಿತ ಜಾಗದಲ್ಲಿ ಲ್ಯಾಂಡ್‌ ಆಗದೇ ಮುಂದಕ್ಕೆ ಹೋಗಿ ಲ್ಯಾಂಡ್‌ ಆದಾಗ ವಿಮಾನ ರನ್‌ವೇಗಿಂತಲೂ ಮುಂದಕ್ಕೆ ಸಾಗುತ್ತದೆ. ರನ್‌ವೇಗಿಂತಲೂ ವಿಮಾನ ಮುಂದಕ್ಕೆ ಹೋದಾಗ ಅಪಾಯ ಆಗದೇ ಇರಲು ಬಫರ್‌ ಜೋನ್‌ ನಿರ್ಮಿಸಲಾಗುತ್ತದೆ. ಈ ವಲಯವನ್ನು ರನ್‌ವೇ ರೀತಿಯಾಗಿ ನಿರ್ಮಿಸುತ್ತಾರೆ. ಆದರೆ ರನ್‌ವೇಯಲ್ಲಿ ಇರುವಂತೆ ಮಧ್ಯದಲ್ಲಿ ಯಾವುದೇ ಬಿಳಿಯಾದ ಪಟ್ಟಿಗಳು ಇರುವುದಿಲ್ಲ.

    ಮಳೆ ಬಂದಾಗ ಟೇಬಲ್‌ ಟಾಪ್‌ ವಿಮಾನ ನಿಲ್ದಾಣದಲ್ಲಿ ಇಳಿಸಲು ಸರಿಯಾದ ಮಾರ್ಗಸೂಚಿಗಳು ಇಲ್ಲ. ಈ ಕಾರಣಕ್ಕೆ ಈ ರೀತಿಯ ಘಟನೆಗಳು ಸಂಭವಿಸುತ್ತದೆ. ರನ್‌ವೇಯಲ್ಲಿ ಯಾವುದೇ ಸುರಕ್ಷತಾ ಜಾಗವಿಲ್ಲ. 9 ವರ್ಷದದ ಹಿಂದೆಯೇ ಈ ಬಗ್ಗೆ ವರದಿ ನೀಡಿ ಎಚ್ಚರಿಕೆ ನೀಡಿದ್ದೆ. ಆದರೆ ಅವರು ವಿಮಾನ ನಿಲ್ದಾಣಕ್ಕೆ ಯಾವುದೇ ಅಪಾಯವಿಲ್ಲ. ಸುರಕ್ಷಿತವಾಗಿದೆ ಎಂದು ಹೇಳಿದರು ಎಂದು ರಂಗನಾಥನ್‌ ತಿಳಿಸಿದರು.

    ಇಲ್ಲಿ ದುರಂತ ಸಂಭವಿಸಿ ಸಾವನ್ನಪ್ಪಿದ್ದರೆ ಇದು ಕೊಲೆಗೆ ಸಮನಾದ ಕ್ರಿಮಿನಲ್‌ ಕೃತ್ಯ. ಈ ವಿಮಾನ ನಿಲ್ದಾಣ ಎರಡು ಬದಿಗಳಲ್ಲಿ 200 ಅಡಿ ಆಳದ ಕಣಿವೆಯಿದೆ. ವಿಮಾನಯಾನ ಸಂಸ್ಥೆಗಳು ಇಲ್ಲಿ ಕುರುಡಾಗಿ ವರ್ತಿಸುತ್ತದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಈ ಬಗ್ಗೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

    ಎತ್ತರ ಪ್ರದೇಶದಲ್ಲಿ ಇರುವ ಕಾರಣ ಅಪಾಯವಾಗಬಹುದು ಎಂಬ ಕಾರಣಕ್ಕೆ ಕೆಲ ಅಂತರಾಷ್ಟ್ರೀಯ ವಿಮಾನಯಾನ ಕಂಪನಿಗಳು ಇಲ್ಲಿ ದೊಡ್ಡ ವಿಮಾನಗಳ ಲ್ಯಾಂಡಿಂಗ್‌ ನಿಲ್ಲಿಸಿದ್ದವು. ಬೋಯಿಂಗ್‌ 777, ಏರ್‌ಬಸ್‌ ಎ330ಗಳು ರನ್‌ವೇ ಕಡಿಮೆಯಿದೆ ಎಂಬ ಕಾರಣ ನೀಡಿ ಈ ವಿಮಾನಗಳ ಸೇವೆಯನ್ನು ಸ್ಥಗಿತಗೊಳಿಸಿದ್ದವು.

    ಕಲ್ಲಿಕೋಟೆ ರನ್‌ವೇ 2,860 ಮೀಟರ್‌ ಉದ್ದವಿದೆ. ದೇಶದಲ್ಲಿ ಅತಿ ಉದ್ದವಿರುವ ದೆಹಲಿ ವಿಮಾನ ನಿಲ್ದಾಣದ ರನ್‌ವೇ 4,430 ಮೀಟರ್‌ ಉದ್ದವಿದೆ. ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಗ್‌ಗೆ ಪ್ರಯತ್ನಿಸಿದ್ರು

  • ನಮ್ಮನ್ನು ಬದುಕಿಸಿ ಅವರು ಪ್ರಾಣ ತ್ಯಾಗ ಮಾಡಿದರು- ಪೈಲಟ್ ಶ್ಲಾಘಿಸಿದ ಪ್ರಯಾಣಿಕರು

    ನಮ್ಮನ್ನು ಬದುಕಿಸಿ ಅವರು ಪ್ರಾಣ ತ್ಯಾಗ ಮಾಡಿದರು- ಪೈಲಟ್ ಶ್ಲಾಘಿಸಿದ ಪ್ರಯಾಣಿಕರು

    ತಿರುವನಂತಪುರಂ: ಕೇರಳದ ಕೋಯಿಕ್ಕೋಡ್ ಕರಿಪುರ ವಿಮಾನ ನಿಲ್ದಾಣದಲ್ಲಿ ನಡೆದ ದುರಂತದಲ್ಲಿ ಬದುಕುಳಿದ ಪ್ರಯಾಣಿಕರು ಪೈಲಟ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

    ಶುಕ್ರವಾರ ರಾತ್ರಿ ನಡೆದ ಈ ದುರ್ಘಟನೆಯಲ್ಲಿ ಪೈಲಟ್ ಸಮಯ ಪ್ರಜ್ಞೆಯಿಂದ ನಮ್ಮ ಜೀವಗಳನ್ನು ಕಾಪಾಡಿದರು. ವಿಮಾನ ಅಪಘಾತಕ್ಕೀಡಾಗುತ್ತಿದ್ದಂತೆಯೇ ಆಗುವ ಅನಾಹುತ ತಪ್ಪಿಸಿ ನಮ್ಮನ್ನು ಉಳಿಸುವ ಮೂಲಕ ತಮ್ಮ ಪ್ರಾಣ ತ್ಯಾಗ ಮಾಡಿದರು ಎಂದು ಏರ್ ಇಂಡಿಯಾ ಪ್ರಯಾಣಿಕರು ಪೈಲಟ್ ಅನ್ನು ಶ್ಲಾಫಿಸಿದರು.

    ಧೈರ್ಯಶಾಲಿ ಪೈಲಟ್ ಹಾಗೂ ಸ್ಥಳೀಯ ನಿವಾಸಿಗಳು ನಡೆಯುತ್ತಿದ್ದ ಭಾರೀ ದುರಂತವನ್ನು ತಪ್ಪಿಸಿದ್ದಾರೆ. ವಿಮಾನ ಅಪಘಾತಕ್ಕೀಡಾದ ಕೂಡಲೇ ಜನರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ದುರಂತದಲ್ಲಿ ಬದುಕುಳಿದವರು ತಿಳಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಇಬ್ಭಾಗವಾದ್ರೂ ಬದುಕುಳಿದ ಪುಟ್ಟ ಕಂದಮ್ಮ

    ಭಾರೀ ಮಳೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಹವಾಮಾನ ಕೆಟ್ಟದಾಗಿದೆ ಎಂದು ಪೈಲಟ್ ವಿಮಾನವನ್ನು ಇಳಿಸುವ ಮೊದಲೇ ಎಚ್ಚರಿಕೆ ನೀಡಿದ್ದರು. ಅಲ್ಲದೆ ಎರಡು ಬಾರಿ ಸುರಕ್ಷಿತವಾಗಿ ವಿಮಾನವನ್ನು ಇಳಿಸಲು ಪ್ರಯತ್ನಿಸಿದರೂ ನಿಯಂತ್ರಣ ಕಳೆದುಕೊಂಡರು. ಪರಿಣಾಮ ರನ್ ವೇ ಯಿಂದ ಜಾರಿ 33 ಅಡಿ ಕಂದಕಕ್ಕೆ ಜಾರಿ ಎರಡು ಭಾಗವಾಯಿತು ಎಂದು ದುರಂತದಲ್ಲಿ ಸಣ್ಣಪುಟ್ಟ ಗಾಯಗೊಂಡವರು ತಿಳಿಸಿದರು.

    ಘಟನೆಯಲ್ಲಿ ಇಬ್ಬರು ಪೈಲಟ್ ಸೇರಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪ್ರಯಾಣಿಕರೆಲ್ಲರೂ ಕೊರೊನಾ ವೈರಸ್‍ನಿಂದಾಗಿ ದುಬೈನಲ್ಲಿ ಸಿಲುಕಿದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಹೊತ್ತು ಏರ್ ಇಂಡಿಯಾ ವಿಮಾನ ಕರಿಪುರ ವಿಮಾನ ನಿಲ್ದಾಣ ತಲುಪುತ್ತಿದ್ದಂತೆಯೇ ರನ್ ವೇಯಿಂದ ಜಾರಿ 33 ಅಡಿ ಕಂದಕಕ್ಕೆ ಬಿದ್ದು ಗೋಡೆಗೆ ಡಿಕ್ಕಿ ಹೊಡೆದು ಇಬ್ಭಾಗವಾಗಿದೆ.

    1981ರಲ್ಲಿ ವಾಯಪಡೆಗೆ ಸೇರಿದ್ದ ಪೈಲಟ್ ದೀಪಕ್ ವಸಂತ್ ಸಾಠೆ(59) 22 ವರ್ಷಗಳ ಕಾಲ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಬೆಂಗಳೂರಿನ ಎಚ್‍ಎಎಲ್‍ನಲ್ಲಿ ಇರುವ ಏರ್ ಏರ್ ಫೋರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ನೀಡುತ್ತಿದ್ದರು. ಸ್ಕ್ವಾಡ್ರನ್ ಲೀಡರ್ ಆಗಿ ನಿವೃತ್ತಿ ಪಡೆದ ಬಳಿಕ ನಾಗರಿಕ ವಿಮಾನ ಸೇವೆಗೆ ಸೇರ್ಪಡೆಯಾಗಿದ್ದರು. ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಗ್‌ಗೆ ಪ್ರಯತ್ನಿಸಿದ್ರು

    ಸುತ್ತಲೂ ಆಳ ಕಣಿವೆ ಇದ್ದು, ಬೆಟ್ಟದ ತುದಿಯಲ್ಲಿ ರನ್ ವೇ ಇರುವ ನಿಲ್ದಾಣಗಳನ್ನು ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದು ಗುರುತಿಸಲಾಗುತ್ತದೆ. 2010ರಲ್ಲಿ ಮಂಗಳೂರಿನಲ್ಲಿ ಕೂಡ ಇದೇ ರೀತಿ ವಿಮಾನ ದುರಂತ ಸಂಭವಿಸಿದ 158 ಮಂದಿ ಮೃತಪಟ್ಟಿದ್ದರು. ಈ ಮೂಲಕ ಇದೀಗ ಟೇಬಲ್ ಟಾಪ್ ವಿಮಾನ ನಿಲ್ದಾಣದಲ್ಲಿ ನಡೆದ ಎರಡನೇ ದುರಂತ ಇದಾಗಿದೆ.

  • ‘ಕೊರೊನಾ ಕುರಿತು ಹರಟೆ’- ಪಾಕ್ ವಿಮಾನ ದುರಂತಕ್ಕೆ ಪೈಲಟ್‍ಗಳ ನಿರ್ಲಕ್ಷ್ಯವೇ ಕಾರಣ

    ‘ಕೊರೊನಾ ಕುರಿತು ಹರಟೆ’- ಪಾಕ್ ವಿಮಾನ ದುರಂತಕ್ಕೆ ಪೈಲಟ್‍ಗಳ ನಿರ್ಲಕ್ಷ್ಯವೇ ಕಾರಣ

    ಇಸ್ಲಾಮಾಬಾದ್: ಪಾಕಿಸ್ತಾನ ಕರಾಚಿಯಲ್ಲಿ ಸಂಭವಿಸಿದ್ದ ಘೋರ ವಿಮಾನ ದುರಂತಕ್ಕೆ ಪೈಲಟ್‍ಗಳ ನಿರ್ಲಕ್ಷ್ಯವೇ ಕಾರಣ ಎಂದು ತನಿಖೆ ವೇಳೆ ಬಹಿರಂಗಗೊಂಡಿದೆ. 97 ಮಂದಿ ಈ ದುರಂತದಲ್ಲಿ ಸಾವನ್ನಪ್ಪಿದ್ದರು.

    ಲಾಹೋರ್ ನಿಂದ ಹೊರಟ್ಟಿದ್ದ ಏರ್‌ಬಸ್ ಎ320 ವಿಮಾನ ಕರಾಚಿಯಲ್ಲಿ ಲ್ಯಾಂಡಿಂಗ್ ವೇಳೆ ಪೈಲಟ್, ಏರ್ ಟ್ರಾಫಿಕ್ ಕಂಟ್ರೋಲರ್ ನಿರ್ಲಕ್ಷ್ಯದಿಂದ ಕೊರೊನಾ ವೈರಸ್ ಕುರಿತು ಮಾತನಾಡುತ್ತಿದ್ದರು ಎಂದು ಪಾಕ್ ವಿಮಾನಯಾನ ಸಚಿವ ಗುಲಾಮ್ ಸರ್ವಾರ್ ಖಾನ್, ಪಾರ್ಲಿಮೆಂಟ್‍ನಲ್ಲಿ ಜೂನ್ 24 ರಂದು ಮಾಹಿತಿ ನೀಡಿದ್ದಾರೆ.

    ಘಟನೆಯ ಕುರಿತು ತನಿಖೆ ಕೈಗೊಂಡಿದ್ದ ತಂಡ, ಪೈಲಟ್ ಹಾಗೂ ಏರ್ ಟ್ರಾಫಿಕ್ ಕಂಟ್ರೋಲರ್ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯ ವೇಳೆ ದೃಢಪಡಿಸಿದೆ. ಪೈಲಟ್, ಕೋ-ಪೈಲೆಟ್ ಇಬ್ಬರು ವಿಮಾನದ ಲ್ಯಾಂಡಿಂಗ್ ಮೇಲೆ ಗಮನ ನೀಡಿರಲಿಲ್ಲ. ಕೊರೊನಾ ಮಹಾಮಾರಿಯ ಕುರಿತ ಚರ್ಚೆಯ ಮುಳುಗಿದ್ದರು. ವಿಮಾನ ಹಾರಾಟ ನಡೆಸಲು 100 ರಷ್ಟು ಫಿಟ್ ಆಗಿತ್ತು. ಯಾವುದೇ ತಾಂತ್ರಿಕ ಸಮಸ್ಯೆ ಇರಲಿಲ್ಲ ಎಂದು ಸಚಿವರು ವಿವರಿಸಿದ್ದಾರೆ.

    ಪಾಕಿಸ್ತಾನದಲ್ಲಿ ಮೇ 22ರಂದು ನಡೆದ ಈ ದುರ್ಘಟನೆಯಲ್ಲಿ 97 ಮಂದಿ ಸಾವನ್ನಪ್ಪಿದ್ದರು. ಇಬ್ಬರು ಮಾತ್ರ ಜೀವಂತವಾಗಿ ಬದುಕುಳಿದಿದ್ದರು. ಘಟನೆಯ ಕುರಿತು ಪಾಕ್ ಸರ್ಕಾರ ಉನ್ನತ ತನಿಖೆಗೆ ಆದೇಶ ನೀಡಿತ್ತು. ಈ ತನಿಖೆಯಲ್ಲಿ ಪಾಕ್‍ನ ಉನ್ನತ ಅಧಿಕಾರಿಗಳ ಜೊತೆಗೆ ಫ್ರಾನ್ಸ್ ದೇಶದ ತಜ್ಞರು ಕೂಡ ಭಾಗಿಯಾಗಿದ್ದರು. ವಿಮಾನ ಪತನದ ಬಳಿಕ ಲಭಿಸಿದ ವಾಯ್ಸ್ ರೆಕಾರ್ಡ್, ಡೇಟಾ ಪರಿಶೀಲನೆ ನಡೆಸಿದ ಬಳಿಕ ಪ್ರಾಥಮಿಕ ವರದಿಯನ್ನು ಸಲ್ಲಿಸಲಾಗಿತ್ತು.

  • ಅಮೆರಿಕದ ’52 ಟಾರ್ಗೆಟ್’ ಸಂಖ್ಯೆಗೆ ‘290’ ಪ್ರಸ್ತಾಪಿಸಿ ತಿರುಗೇಟು ಕೊಟ್ಟ ಇರಾನ್

    ಅಮೆರಿಕದ ’52 ಟಾರ್ಗೆಟ್’ ಸಂಖ್ಯೆಗೆ ‘290’ ಪ್ರಸ್ತಾಪಿಸಿ ತಿರುಗೇಟು ಕೊಟ್ಟ ಇರಾನ್

    ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ಜೋರಾಗಿದೆ. ನಾವು ಸೈಬರ್ ವಾರ್ ಆರಂಭಿಸುತ್ತೇವೆ ಎಂದು ಟ್ರಂಪ್ ಘೋಷಿಸಿಕೊಂಡ ಬೆನ್ನಲ್ಲೇ ಈ ಹಿಂದಿನ ನಿಮ್ಮ ಎಡವಟ್ಟನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂಬರ್ಥದಲ್ಲಿ ಟ್ವೀಟ್ ಮಾಡಿ ಇರಾನ್ ತಿರುಗೇಟು ನೀಡಿದೆ.

    ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಮೆರಿಕದ ವ್ಯಕ್ತಿ ಅಥವಾ ಅಮೆರಿಕದ ಯಾವುದೇ ಆಸ್ತಿಯನ್ನು ಹಾನಿ ಮಾಡಿದರೆ ಇರಾನ್ ದುಬಾರಿ ಬೆಲೆ ತೆರಬೇಕಾಗುತ್ತದೆ. ಈಗಾಗಲೇ ನಾವು ದಾಳಿ ಮಾಡಲು 52 ವೆಬ್‍ಸೈಟ್ ಗಳನ್ನು ಟಾರ್ಗೆಟ್ ಮಾಡಿದ್ದೇವೆ ಎಂದು ಟ್ವೀಟ್ ಮಾಡಿ ಎಚ್ಚರಿಕೆ ನೀಡಿದ್ದರು.

    ಈ ಬೆದರಿಕೆಗೆ ಜಗ್ಗದ ಇರಾನ್ ಅಧ್ಯಕ್ಷ ಹಸನ್ ರೌಹಾನಿ, ಸಂಖ್ಯೆ 52ನ್ನು ಉಲ್ಲೇಖಿಸುವ ವ್ಯಕ್ತಿಗಳು ಸಂಖ್ಯೆ 290ನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇರಾನ್ ರಾಷ್ಟ್ರಕ್ಕೆ ಯಾವುದೇ ಕಾರಣಕ್ಕೂ ಬೆದರಿಕೆ ಹಾಕದಿರಿ ಎಂದು ಬರೆದು #IR655 ಬಳಸಿ ಟ್ವೀಟ್ ಮಾಡಿದ್ದಾರೆ.

    ಏನಿದು ಸಂಖ್ಯೆ 290?
    ಇರಾನ್ ಮತ್ತು ಅಮೆರಿಕ ಮಧ್ಯೆ ಗುದ್ದಾಟ ನಡೆಯುತ್ತಿರುವಾಗಲೇ 1988ರ ಜುಲೈ 3 ರಂದು ಟೆಹರಾನ್ ನಿಂದ ದುಬೈಗೆ ಇರಾನ್ ಏರ್ ಫೈಟ್ 655 ಪ್ರಯಾಣಿಸುತಿತ್ತು. ಈ ವಿಮಾನವನ್ನು ಅಮೆರಿಕ ತನ್ನ ಕ್ಷಿಪಣಿಯನ್ನು ಬಳಸಿ ನೆಲಕ್ಕೆ ಉರುಳಿಸಿತ್ತು. 66 ಮಕ್ಕಳು ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 290 ಮಂದಿ ಮೃತಪಟ್ಟಿದ್ದರು. ಎಂದಿನ ಮಾರ್ಗದಲ್ಲಿ ವಿಮಾನ ಸಂಚರಿಸುತ್ತಿದ್ದರೂ ಈ ಪ್ರಯಾಣಿಕ ವಿಮಾನದ ಮೇಲೆ ಅಮೆರಿಕ ದಾಳಿ ನಡೆಸಿದ್ದು ಯಾಕೆ ಎನ್ನುವ ಪ್ರಶ್ನೆ ಹುಟ್ಟು ಹಾಕಿತ್ತು. ನಂತರ ತನಿಖೆಯ ವೇಳೆ ಅಮೆರಿಕ ಈ ವಿಮಾನ ಬಾಂಬರ್ ವಿಮಾನ ಎಂದು ತಪ್ಪಾಗಿ ಅರ್ಥೈಸಿಕೊಂಡು ದಾಳಿ ನಡೆಸಿದ ವಿಚಾರ ಬೆಳಕಿಗೆ ಬಂದಿತ್ತು.

    ಇರಾನ್ ಈ ವಿಚಾರವನ್ನು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿತ್ತು. ಅಮೆರಿಕ ಈ ಘಟನೆಯ ಬಗ್ಗೆ ಯಾವುದೇ ಕ್ಷಮೆ ಕೇಳಲಿಲ್ಲ. ಆದರೆ ಅಧ್ಯಕ್ಷ ರೊನಾಲ್ಡ್ ರೇಗನ್ ವಿಷಾದ ವ್ಯಕ್ತಪಡಿಸಿದ್ದರು. ನಂತರ ಅಮೆರಿಕ 61.8 ದಶಲಕ್ಷ ಡಾಲರ್ ಹಣವನ್ನು ಪಾವತಿ ಮಾಡುತ್ತೇನೆ. ಅಷ್ಟೇ ಅಲ್ಲದೇ ಮೃತಪಟ್ಟ ವ್ಯಕ್ತಿಯ ಕುಟುಂಬದ ಸದಸ್ಯರಿಗೆ 213,103.45 ಡಾಲರ್ ನೀಡುತ್ತೇನೆ ಎಂದು ಹೇಳಿತ್ತು. ಈ ವಿಚಾರವನ್ನು ಇರಾನ್ ಅಧ್ಯಕ್ಷ ಹಸನ್ ರೌಹಾನಿ ಪ್ರಸ್ತಾಪಿಸಿ ವ್ಯಂಗ್ಯವಾಗಿ ಡೊನಾಲ್ಡ್ ಟ್ರಂಪ್‍ಗೆ ತಿರುಗೇಟು ನೀಡಿದ್ದಾರೆ.

    ಸುಲೇಮಾನಿ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಟೆಹರಾನ್ ಪ್ರತಿಜ್ಞೆ ಮಾಡಿದ್ದು ವಿಶ್ವದ ಬಲಿಷ್ಠ ರಾಷ್ಟ್ರಗಳೊಂದಿಗಿನ ತನ್ನ 2015ರ ಪರಮಾಣು ಒಪ್ಪಂದದಿಂದ ಹಿಂದೆ ಸರಿಯಲು ಮುಂದಾಗಿದೆ.

    ಮಾನಿ ಉತ್ತರಾಧಿಕಾರಿ ಇಸ್ಮಾಯಿಲ್ ಖಾನಿ, `ದೇವರು ಪ್ರತೀಕಾರ ತೀರಿಸಿಕೊಳ್ಳುವ ಭರವಸೆ ನೀಡಿದ್ದಾನೆ. ದೇವರ ಅಣತಿಯಂತೆ ಖಂಡಿತವಾಗಿಯೂ ಪ್ರತೀಕಾರ ತೆಗೆದುಕೊಳ್ಳಲಾಗುವುದು’ ಎಂದು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗಾಗಿ ಇರಾನ್ 575 ಕೋಟಿ ಬಹುಮಾನ ಘೋಷಿಸಿದೆ. ಇರಾನ್‍ನಲ್ಲಿ 8 ಕೋಟಿ ಜನರಿದ್ದು ಪ್ರತಿಯೊಬ್ಬರೂ ಒಂದೊಂದು ಡಾಲರ್ ನೀಡಿದರೂ ಅದು ಟ್ರಂಪ್ ತಲೆ ತೆಗೆದವರಿಗೆ ಸೇರುತ್ತದೆ ಎಂದು ಹೇಳಲಾಗಿದೆ. ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ಈ ಕುರಿತು ಪ್ರಸಾರ ಮಾಡಿದೆ.

  • ರನ್‍ವೇಯಿಂದ ಸ್ಕಿಡ್ ಆಗಿ ಸಮುದ್ರದ ದಂಡೆ ಬದಿಯಲ್ಲಿ ನಿಂತ ವಿಮಾನ!

    ರನ್‍ವೇಯಿಂದ ಸ್ಕಿಡ್ ಆಗಿ ಸಮುದ್ರದ ದಂಡೆ ಬದಿಯಲ್ಲಿ ನಿಂತ ವಿಮಾನ!

    ಇಸ್ತಾಂಬುಲ್: ವಿಮಾನವೊಂದು ರನ್ ವೇಯಲ್ಲಿ ಸ್ಕಿಡ್ ಆಗಿ ಕಪ್ಪು ಸಮುದ್ರ ದಂಡೆಯ ಬಳಿ ಬಿದ್ದಿರುವ ಘಟನೆ ಉತ್ತರ ಟರ್ಕಿಯ ಟ್ರಬ್‍ಜಾನ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ಪೆಗಾಸಸ್ ಕಂಪೆನಿಯ ಜೆಟ್ ವಿಮಾನ ಲ್ಯಾಂಡ್ ಆಗಿ ರನ್ ವೇಯಲ್ಲಿ ಮುಂದಕ್ಕೆ ಚಲಿಸುತ್ತಿದ್ದಾಗ ಸ್ಕಿಡ್ ಆಗಿದೆ. ಸ್ಕಿಡ್ ಆದ ವಿಮಾನ ತಿರುಗಿ ಕಪ್ಪು ಸಮುದ್ರದ ಬಳಿ ಚಲಿಸಿ ನಿಂತುಕೊಂಡಿದೆ.

    ಸಿಬ್ಬಂದಿ ಪ್ರಯಾಣಿಕರು ಸೇರಿ ಒಟ್ಟು 168 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಪ್ಪು ಸಮುದ್ರದ ಕಲ ಅಡಿ ದೂರದಲ್ಲಿ ವಿಮಾನ ನಿಂತುಕೊಂಡಿದೆ. ಒಂದು ವೇಳೆ ವಿಮಾನ ಸಮುದ್ರಕ್ಕೆ ಉರುಳಿ ಬಿದ್ದಿದ್ದಾರೆ ಭಾರೀ ಸಾವು ನೋವು ಸಂಭವಿಸುವ ಸಾಧ್ಯತೆ ಇತ್ತು.

    ಯಾವ ಕಾರಣಕ್ಕೆ ವಿಮಾನ ಸ್ಕಿಡ್ ಆಗಿದೆ ಎನ್ನುವುದಕ್ಕೆ ತನಿಖೆ ನಡೆಸಲಾಗುವುದು ಎಂದು ಪೆಗಾಸಸ್ ಮಾಧ್ಯಮಗಳಿಗೆ ತಿಳಿಸಿದೆ. ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ದುರಂತ

    https://youtu.be/5ghagEwvS1g