Tag: ವಿಪಿ ಸಿಂಗ್‌

  • ಪಂಡಿತರಿಗಿಂತ ಹೆಚ್ಚಾಗಿ ಮುಸ್ಲಿಮರು ಕಾಶ್ಮೀರದಲ್ಲಿ ಹತ್ಯೆಯಾಗಿದ್ದಾರೆ: ಕೇರಳ ಕಾಂಗ್ರೆಸ್‌

    ಪಂಡಿತರಿಗಿಂತ ಹೆಚ್ಚಾಗಿ ಮುಸ್ಲಿಮರು ಕಾಶ್ಮೀರದಲ್ಲಿ ಹತ್ಯೆಯಾಗಿದ್ದಾರೆ: ಕೇರಳ ಕಾಂಗ್ರೆಸ್‌

    ತಿರುವನಂತಪುರಂ: ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ ಫೈಲ್ಸ್‌ ಚಿತ್ರ ಈಗ ಬಾಕ್ಸ್‌ ಆಫೀಸ್‌ನಲ್ಲಿ ದೂಳು ಎಬ್ಬಿಸುತ್ತಿದ್ದಂತೆ ಕಾಶ್ಮೀರ ಪಂಡಿತರಿಗೆ ಸಂಬಂಧಿಸಿದಂತೆ ಕೇರಳ ಕಾಂಗ್ರೆಸ್‌ ಮಾಡಿರುವ ಟ್ವೀಟ್‌ ಈಗ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ.

    ಕೇರಳ ಕಾಂಗ್ರೆಸ್‌ ಆರೋಪ ಏನು?
    1990 ರಿಂದ 2007ರವರೆಗೆ 399 ಪಂಡಿತರನ್ನು ಉಗ್ರರು ಕೊಂದಿದ್ದಾರೆ. ಈ 17 ವರ್ಷಗಳಲ್ಲಿ ಉಗ್ರರಿಂದ ಹತ್ಯೆಯಾದ ಮುಸ್ಲಿಮರ ಸಂಖ್ಯೆ 15,000

    ಕಾಶ್ಮೀರಿ ಪಂಡಿತರ ವಲಸೆಗೆ ಕಾರಣವಾಗಿದ್ದು ಅಂದಿನ ಗೌರ್ನರ್ ಜಗ್‍ಮೋಹನ್. ಆರ್‌ಎಸ್‍ಎಸ್ ಮೂಲದ ಜಗ್‍ಮೋಹನ್ ಸೂಚನೆ ಮೇಲೆ ಪಂಡಿತರು ಕಾಶ್ಮೀರ ತ್ಯಜಿಸಿದ್ದರು.

    ಬಿಜೆಪಿ ಬೆಂಬಲಿತ ವಿಪಿ ಸಿಂಗ್ ನೇತೃತ್ವದ ಸರ್ಕಾರ ಇದ್ದಾಗ ಪಂಡಿತರ ವಲಸೆ ನಡೆದಿದ್ದು. 1989ರ ಡಿಸೆಂಬರ್‌ನಲ್ಲಿ ಬಿಜೆಪಿ ಬೆಂಬಲಿತ ವಿಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಕಾಶ್ಮೀರದಿಂದ ಪಂಡಿತರ ವಲಸೆ ಶುರುವಾಗಿದ್ದು 1990ರ ಜನವರಿಯಲ್ಲಿ ಆಗ ಪಂಡಿತರಿಗೆ ಭದ್ರತೆ ಒದಗಿಸಲು ಜಗ್‍ಮೋಹನ್‍ಗೆ ಬಿಜೆಪಿ ಸೂಚನೆ ನೀಡಿರಲಿಲ್ಲ. ಇದನ್ನೂ ಓದಿ: ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಣೆಗಾಗಿ ಸದನದಲ್ಲೇ ಆಹ್ವಾನಿಸಿದ ಸ್ಪೀಕರ್ ಕಾಗೇರಿ

    ಮಹಾ ವಲಸೆಗೆ ಸೂಚನೆ ನೀಡಿದಾಗ ಬಿಜೆಪಿ ಏನು ಮಾಡುತ್ತಿತ್ತು?. ಕೇಂದ್ರದಲ್ಲಿ 2 ಬಾರಿ, ಕಾಶ್ಮೀರದಲ್ಲಿ ಒಮ್ಮೆ ಅಧಿಕಾರಕ್ಕೇರಿದ್ದ ಬಿಜೆಪಿ ಏಕೆ ಸುಮ್ಮನಿತ್ತು? ಕಾಶ್ಮೀರಿ ಪಂಡಿತರನ್ನು ಕಾಶ್ಮೀರಕ್ಕೆ ಮತ್ತೆ ಏಕೆ ಕರೆತರಲಿಲ್ಲ? ಭದ್ರತೆ ಏಕೆ ಒದಗಿಸಲಿಲ್ಲ?

    ಬಿಜೆಪಿ ದೇಶದಲ್ಲಿ ಹಿಂದೂ-ಮುಸ್ಲಿಮರನ್ನು ವಿಭಜಿಸುವ ಕೆಲಸ ಮಾಡುತ್ತಿದೆ. ಕಾಶ್ಮೀರಿ ಪಂಡಿತರ ವಲಸೆ ವೇಳೆ ಬಿಜೆಪಿ ಮಾಡಿದ್ದು ಅಯೋಧ್ಯೆ ರಥಯಾತ್ರೆ. ಪಂಡಿತರ ವಿಚಾರದಲ್ಲಿ ಬಿಜೆಪಿ ವಿಷ-ಸುಳ್ಳು ಬಿತ್ತಲು ಪ್ರಯತ್ನಿಸುತ್ತಿದೆ. ಈ ಮೂಲಕ ಮುಂದಿನ ಚುನಾವಣೆ ಗೆಲ್ಲಲು ಬಿಜೆಪಿ ಷಡ್ಯಂತ್ರ್ಯ ನಡೆಸಿದೆ.

    ಟ್ವೀಟ್‌ ಡಿಲೀಟ್‌:
    1990 ರಿಂದ 2007ರವರೆಗೆ 399 ಪಂಡಿತರನ್ನು ಉಗ್ರರು ಕೊಂದಿದ್ದಾರೆ. ಈ 17 ವರ್ಷಗಳಲ್ಲಿ ಉಗ್ರರಿಂದ ಹತ್ಯೆಯಾದ ಮುಸ್ಲಿಮರ ಸಂಖ್ಯೆ 15,000 ಎಂಬ ಟ್ವೀಟ್‌ ಅನ್ನು ಕೇರಳ ಕಾಂಗ್ರೆಸ್‌ ಡಿಲೀಟ್‌ ಮಾಡಿದೆ. ಈಗ ಟ್ವೀಟ್‌ ಡಿಲೀಟ್‌ ಮಾಡಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿ ನೆಟ್ಟಿಗರು ಕೇರಳ ಕಾಂಗ್ರೆಸ್‌ನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.