Tag: ವಿನೋದ್ ತಾವ್ಡೆ

  • ಕ್ಷಮೆ ಕೇಳಿ, ಇಲ್ಲವೇ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡುವೆ – ರಾಹುಲ್, ಖರ್ಗೆಗೆ ವಿನೋದ್ ತಾವ್ಡೆ ನೋಟಿಸ್

    ಕ್ಷಮೆ ಕೇಳಿ, ಇಲ್ಲವೇ 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡುವೆ – ರಾಹುಲ್, ಖರ್ಗೆಗೆ ವಿನೋದ್ ತಾವ್ಡೆ ನೋಟಿಸ್

    – ವೋಟಿಗಾಗಿ ನೋಟು ಕೇಸ್‌ನಲ್ಲಿ ಕೈ ನಾಯಕರಿಗೆ ಶಾಕ್‌

    ನವದೆಹಲಿ: ಮಹಾರಾಷ್ಟ್ರದಲ್ಲಿ ಮತದಾರರಿಗೆ 5 ಕೋಟಿ ರೂ. ಹಂಚಿದ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕ ವಿನೋದ್‌ ತಾವ್ಡೆ (Vinod Tawde) ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ಕೈ ನಾಯಕ ಸುಪ್ರಿಯಾ ಶ್ರೀನಾಥ್ ಮತ್ತು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಲೀಗಲ್‌ ನೋಟಿಸ್‌ ಕಳುಹಿಸಿದ್ದಾರೆ.

    ತಮ್ಮ ವಿರುದ್ಧ ಸುಳ್ಳು ಮತ್ತು ಆಧಾರ ರಹಿತ ಆರೋಪ ಮಾಡಿದ್ದಕ್ಕಾಗಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ರಾಹುಲ್‌ ಗಾಂಧಿ ಅವರು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ, 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಮೀನುಗಾರಿಕೆ ದೋಣಿಗೆ ಡಿಕ್ಕಿ ಹೊಡೆದ ಭಾರತೀಯ ನೌಕಾಪಡೆ ಜಲಾಂತರ್ಗಾಮಿ – ಇಬ್ಬರು ಮೀನುಗಾರರು ನಾಪತ್ತೆ

    ಮುಂಬೈನಿಂದ 60 ಕಿ.ಮೀ ದೂರದಲ್ಲಿರುವ ಪಾಲ್ಘರ್ ಜಿಲ್ಲೆಯ ವಿರಾರ್‌ನಲ್ಲಿರುವ ಹೋಟೆಲ್‌ನಲ್ಲಿ ವಿನೋದ್‌ ತಾವ್ಡೆ ಅವರು ಮತದಾರರನ್ನು ಓಲೈಸಲು 5 ಕೋಟಿ ರೂ. ಹಂಚಿದ್ದಾರೆ ಎಂದು ಪ್ರಾದೇಶಿಕ ಪಕ್ಷದ ಬಹುಜನ ವಿಕಾಸ್ ಅಘಾಡಿ (BVA) ನಾಯಕ ಹಿತೇಂದ್ರ ಠಾಕೂರ್ ಮಂಗಳವಾರ ಆರೋಪಿಸಿದ್ದರು. ಈ ಆರೋಪಗಳು ಸುಳ್ಳು ಮತ್ತು ಆಧಾರ ರಹಿತ ಎಂದಿರುವ ತಾವ್ಡೆ ಕ್ಷಮೆಯಾಚಿಸಲು ಆಗ್ರಹಿಸಿದ್ದಾರೆ. ಅಲ್ಲದೇ ಲೀಗಲ್‌ ನೋಟಿಸ್‌ನ ಪ್ರತಿಯನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ನಮ್ಮ ಕಕ್ಷಿದಾರನ ಪ್ರತಿಷ್ಠೆಗೆ ಹಾನಿ ಮಾಡುವ ಏಕೈಕ ಉದ್ದೇಶದಿಂದ ಹಣದ ಕಥೆ ಕಟ್ಟಿದ್ದೀರಿ. ಜನರ ದೃಷ್ಟಿಯಲ್ಲಿ ನನ್ನ ಕಕ್ಷಿದಾರರ ವ್ಯಕ್ತಿತ್ವ ಹಾಳುಮಾಡುವುದಕ್ಕಾಗಿ ನೀವೆಲ್ಲರೂ ಸುಳ್ಳು, ಆಧಾರ ರಹಿತ ಆರೋಪಗಳನ್ನು ವಿವಿಧ ಮಾಧ್ಯಮಗಳಲ್ಲಿ ಪ್ರಕಟಿಸಿದ್ದೀರಿ ಎಂದು ತಾವ್ಡೆ ಪರ ವಕೀಲರು ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಯಾರಾಗ್ತಾರೆ ಮಹಾರಾಷ್ಟ್ರ ಸಿಎಂ – ರಾತ್ರೋರಾತ್ರಿ ತಲೆ ಎತ್ತಿದೆ ಅಜಿತ್ ಪವಾರ್ ಪೋಸ್ಟರ್

    ನವೆಂಬರ್‌ 23ರಂದು ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಹೊರಬೀಳಲಿದೆ, ಇದಕ್ಕೆ ಮುನ್ನಾದಿನವೇ ತಾವ್ಡೆ ಅವರು ಕಾಂಗ್ರೆಸ್‌ ನಾಯಕರಿಗೆ ನೋಟಿಸ್‌ ಕಳುಹಿಸಿದ್ದಾರೆ. ಇದನ್ನೂ ಓದಿ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ಹೆಚ್ಚುವರಿ 10,000ಕ್ಕೂ ಹೆಚ್ಚು ಸೈನಿಕರ ನಿಯೋಜನೆ

  • ಬಿಜೆಪಿಯೊಂದಿಗೆ ವಿಲೀನಗೊಂಡ ಯುವ ತೆಲಂಗಾಣ ಪಕ್ಷ

    ಬಿಜೆಪಿಯೊಂದಿಗೆ ವಿಲೀನಗೊಂಡ ಯುವ ತೆಲಂಗಾಣ ಪಕ್ಷ

    ಹೈದರಾಬಾದ್: ರಾಜ್ಯದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‍ಎಸ್) ಪಕ್ಷದ ವಿರುದ್ಧ ಮತದಾರರ ನೆಲೆಯನ್ನು ಕ್ರೂಢೀಕರಿಸಲು ಯುವ ತೆಲಂಗಾಣ ಪಕ್ಷ (ವೈಟಿಪಿ) ಭಾರತೀಯ ಜನತಾ ಪಕ್ಷ (ಬಿಜೆಪಿ) ಯೊಂದಿಗೆ ವಿಲೀನಗೊಂಡಿದೆ.

    ವೈಟಿಪಿಯ ಸಂಸ್ಥಾಪಕ ಜೆ ಬಾಲಕೃಷ್ಣ ಮತ್ತು ನಾಯಕಿ ರಾಣಿ ರುದ್ರಮಾದೇವಿ ಅವರು ಬುಧವಾರ ಕಾನ್‍ಸ್ಟಿಟ್ಯೂಷನ್ ಕ್ಲಬ್‍ನಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ಸಂಜಯ್ ಕುಮಾರ್ ಅವರ ಸಮ್ಮುಖದಲ್ಲಿ ಬಿಜೆಪಿಯೊಂದಿಗೆ ಔಪಚಾರಿಕವಾಗಿ ವಿಲೀನಗೊಂಡರು. ಇದನ್ನೂ ಓದಿ: Karnataka Hijab Row: ಹೈಸ್ಕೂಲ್‌, ಕಾಲೇಜುಗಳಿಗೆ 3 ದಿನ ರಜೆ

    ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ ಮಾತನಾಡಿ, ಇಂದು ನಾವು ಯುವ ತೆಲಂಗಾಣ ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದೇವೆ. ತೆಲಂಗಾಣ ರಾಜ್ಯ ನಿರ್ಮಾಣದ ಆಂದೋಲನವನ್ನು ವೈಟಿಪಿ ವಿದ್ಯಾರ್ಥಿಗಳು ಪ್ರಾರಂಭಿಸಿದ್ದರು.

    ರಾಜ್ಯದ ಪ್ರತ್ಯೇಕತೆಗೆ ಅಂದು ಅನೇಕ ವಿದ್ಯಾರ್ಥಿಗಳು ತಮ್ಮ ಜೀವಗಳನ್ನು ಬಲಿಕೊಟ್ಟಿದ್ದಾರೆ. ಇಂದು ಈ ಎಲ್ಲಾ ಯುವಕರು ನಮ್ಮೊಂದಿಗೆ ಸೇರುತ್ತಿರುವಾಗ ನಾವು ಸಂತೋಷಪಡುತ್ತೇವೆ. ಈಗ ಟಿಆರ್‍ಎಸ್ ವಿರುದ್ಧ ಬಿಜೆಪಿಯ ಹೋರಾಟವು ಬಲವಾಗಿರುತ್ತದೆ ಅಂತ ನಾನು ಭಾವಿಸುತ್ತೇನೆ. ಶೀಘ್ರದಲ್ಲೇ ನಾವು ತೆಲಂಗಾಣದಲ್ಲಿ ಬಿಜೆಪಿ ಸರ್ಕಾರವನ್ನು ನೋಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರುದ್ರಮಾದೇವಿ ಅವರು, ದೇಶದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರವನ್ನು ಶ್ಲಾಘಿಸಿದ್ದಾರೆ. ಭಾರತದ ಸ್ವಾತಂತ್ರ್ಯದ ನಂತರ, ವಿಶೇಷವಾಗಿ ಕಳೆದ 7 ವರ್ಷಗಳಲ್ಲಿ, ಯಾವುದೇ ಸರ್ಕಾರವು ಮಹಿಳೆಯರಿಗೆ ಇಷ್ಟೊಂದು ಪ್ರಾಮುಖ್ಯತೆಯನ್ನು ನೀಡಿಲ್ಲ. ಕೇಂದ್ರವು ಇಲ್ಲಿಯವರೆಗೆ ಎಂಟು ಮಹಿಳಾ ರಾಜ್ಯಪಾಲರನ್ನು ನೇಮಿಸಿದೆ. ಮೇಲಾಗಿ ನಾಲ್ಕು ಮಹಿಳೆಯರು ಮುಖ್ಯಮಂತ್ರಿಗಳಾದರು ಮತ್ತು 11 ಮಹಿಳೆಯರು ಕೇಂದ್ರ ಸಚಿವರಾದರು ಎಂದರು.

    ಆದರೆ ನಮ್ಮ ತೆಲಂಗಾಣದಲ್ಲಿ ಮೊದಲ ವರ್ಷದಲ್ಲಿ ಯಾವುದೇ ಕೇಂದ್ರ ಸಚಿವಾಲಯದಲ್ಲಿ ಒಬ್ಬ ಮಹಿಳೆಯೂ ಮಂತ್ರಿಯಾಗಲಿಲ್ಲ. ಆದ್ದರಿಂದ ಮಹಿಳಾ ಕಲ್ಯಾಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ಎಲ್ಲಾ ಮಹಿಳೆಯರ ಪರವಾಗಿ ನಾನು ಧನ್ಯವಾದ ಹೇಳುತ್ತೇನೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ಶಿವಮೊಗ್ಗ ಕಾಲೇಜಿನಲ್ಲಿ ಕೇಸರಿ ಧ್ವಜ ಹಾರಾಟ, ಕಲ್ಲು ತೂರಾಟ – ನಿಷೇಧಾಜ್ಞೆ ಜಾರಿ

    ಭವಿಷ್ಯದಲ್ಲಿ ತೆಲಂಗಾಣದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರ ರಚನೆಯಾಗಲಿದೆ. ಭಾರತೀಯ ಜನತಾ ಪಕ್ಷವು 7 ವರ್ಷಗಳಲ್ಲಿ ಅತ್ಯಂತ ಕ್ರಿಯಾತ್ಮಕ ನಿರ್ಧಾರಗಳನ್ನು ತೆಗೆದುಕೊಂಡಿದೆ. ಅದು ಪೌರತ್ವ (ತಿದ್ದುಪಡಿ) ಕಾಯಿದೆಗೆ ಧ್ವನಿಯಾಗಿರಲಿ, ಜಮ್ಮು ಮತ್ತು ಕಾಶ್ಮೀರದ 370 ನೇ ವಿಧಿಯನ್ನು ರದ್ದುಗೊಳಿಸಿರುವುದಾಗಲಿ, ತ್ರಿವಳಿ ತಲಾಖ್, ಮದುವೆಯ ಕನಿಷ್ಠ ವಯಸ್ಸಿನ ಮಿತಿ, ರಾಮ ಮಂದಿರ ನಿರ್ಮಾಣ ಹೀಗೆ ಅನೇಕ ಕ್ರಿಯಾತ್ಮಕ ನಿರ್ಧಾರಗಳನ್ನು ಭಾರತೀಯ ಜನತಾ ಪಕ್ಷವು ಈ 7 ವರ್ಷಗಳಲ್ಲಿ ತೆಗೆದುಕೊಂಡಿದೆ. ಹೀಗಾಗಿ ನಮಗೆ ಭಾರತೀಯ ಜನತಾ ಪಕ್ಷದ ಮೇಲೆ ನಂಬಿಕೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.

    ವೈಟಿಪಿ ನಾಯಕ ಮಾತನಾಡಿ, ತೆಲಂಗಾಣದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ನಮ್ಮ ರಾಜ್ಯದ ಸಂಜಯ್ ಬಂಡಿ ಅವರ ನೇತೃತ್ವದಲ್ಲಿ ನಾವು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಂತೆ ಒಟ್ಟಾಗಿ ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಯುವ ತೆಲಂಗಾಣ ಪಕ್ಷದ ಅಧ್ಯಕ್ಷ ಜೆ ಬಾಲಕೃಷ್ಣನ್ ಮಾತನಾಡಿ, ನಾವು ತೆಲಂಗಾಣದ ಜನರನ್ನು ಟಿಆರ್‍ಎಸ್ ಆಡಳಿತದಿಂದ ಮುಕ್ತಗೊಳಿಸಲು ಬಯಸುತ್ತೇವೆ. ಟಿಆರ್‍ಎಸ್‍ನಿಂದಾಗಿ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ನಾವು ನಮ್ಮ ಯುವಕರೊಂದಿಗೆ ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ರಚಿಸಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದರು.

    ಮುಂದಿನ ತೆಲಂಗಾಣ ವಿಧಾನಸಭೆ ಚುನಾವಣೆ 2023ರಲ್ಲಿ ನಡೆಯಲಿರುವ ಕಾರಣ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.