Tag: ವಿಧಾನಸಭಾ ಕ್ಷೇತ್ರ

  • ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸೋದು ಪಕ್ಕಾ – ಕಾಂಗ್ರೆಸ್ ಶಾಸಕರ ವಿಶ್ವಾಸ

    ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸೋದು ಪಕ್ಕಾ – ಕಾಂಗ್ರೆಸ್ ಶಾಸಕರ ವಿಶ್ವಾಸ

    ಕೋಲಾರ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Assembly Election) ಸಮಯ ಹತ್ತಿರವಾಗುತ್ತಿದ್ದಂತೆ ರಾಜ್ಯದ ಆ ಒಬ್ಬ ಪ್ರಭಾವಿ ಮುಖಂಡ ಈ ಬಾರಿ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅನ್ನೋ ಕುತೂಹಲ ಮೂರು ಪಕ್ಷದವರನ್ನು ಕಾಡುತ್ತಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಸದ್ಯ ಉತ್ತರ ಸಿಕ್ಕಿದ್ದು, ಆ ನಾಯಕ ಸ್ಪರ್ಧಿಸುವ ಕ್ಷೇತ್ರ ಬಹುತೇಕ ಫೈನಲ್ ಆಗಿದೆ. ಯಾರು ಆ ನಾಯಕ, ಯಾವುದು ಆಕ್ಷೇತ್ರ?

    ರಾಜ್ಯದ ಪ್ರಭಾವಿ ನಾಯಕರಲ್ಲಿ ಮಾಜಿ ಸಿಎಂ (ChiefMinister) ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕೂಡಾ ಒಬ್ಬರು, ಇನ್ನೇನು ಮುಂದಿನ ವಿಧಾನಸಭೆ ಚುನಾವಣೆಗೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ? ಅನ್ನೋ ಹಲವು ಪ್ರಶ್ನೆಗಳು ರಾಜ್ಯದ ಪ್ರಮುಖ ಮೂರು ಪಕ್ಷಗಳ ನಾಯಕರನ್ನು ಹಾಗೂ ಕಾರ್ಯಕರ್ತರನ್ನು ಕಾಡುತ್ತಲೇ ಇತ್ತು. ಕಳೆದ ಬಾರಿ ಬಾದಾಮಿ ಕ್ಷೇತ್ರದಿಂದ ಪ್ರಯಾಸದ ಗೆಲುವು ಸಾಧಿಸಿದ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರ (chamundeshwari Constituency), ಹುಣಸೂರು, ಚಾಮರಾಜಪೇಟೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ಈ ನಡುವೆ ಕೋಲಾರ (Kolara) ವಿಧಾನಸಭಾ ಕ್ಷೇತ್ರದಿಂದ ಸಿದ್ದು ಸ್ಪರ್ಧೆ ಮಾಡೋದು ಖಚಿತ ಎಂದು ಸಿದ್ದು ಆಪ್ತ ವಲಯದಿಂದ ಕೇಳಿಬಂದಿದೆ. ಅದಕ್ಕೆ ಪೂರಕ ಎಂಬಂತೆ ಈಗಾಗಲೇ ಕೋಲಾರ ಜಿಲ್ಲೆಯ ಶಾಸಕರು ಸಿದ್ದರಾಮಯ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ವಿವಿಧ ಸಮುದಾಯಗಳ ಜನರು ಸಿದ್ದರಾಮಯ್ಯರನ್ನ ಭೇಟಿ ಮಾಡಿ ಕೋಲಾರದಿಂದ ಸ್ಪರ್ಧಿಸಲು ಆಹ್ವಾನ ನೀಡಿದ್ದಾರೆ. ಈ ನಡುವೆ ಸಿದ್ದರಾಮಯ್ಯ (Siddaramaiah) ಕೂಡಾ ಬಹುತೇಕ ಸಮ್ಮತಿ ಸೂಚಿಸಿದ್ದಾರೆ ಅನ್ನೋದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರ ಮಾತು.

    ಅಷ್ಟೇ ಅಲ್ಲದೆ ಕೋಲಾರ ಕ್ಷೇತ್ರ ಸಿದ್ದರಾಮಯ್ಯನವರ ಗೆಲುವಿಗೆ ಹೇಳಿ ಮಾಡಿಸಿದ ಕ್ಷೇತ್ರ. ಯಾಕಂದ್ರೆ ಹೆಚ್ಚಾಗಿ ಕುರುಬ ಸಮುದಾಯ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಮತಗಳಿರುವ ಕ್ಷೇತ್ರ. ಜೊತೆಗೆ ಸಿದ್ದು ಸಿಎಂ ಆಗಿದ್ದ ಅವಧಿಯಲ್ಲಿ ಕೆಸಿ ವ್ಯಾಲಿ ಯೋಜನೆಯನ್ನು ಕೊಡುಗೆಯಾಗಿ ನೀಡುವ ಮೂಲಕ ಕೋಲಾರ ಜನರ ಮನಸ್ಸು ಗೆದ್ದಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಅವರನ್ನು ವಿರೋಧಿಸುವ ಜನರೇ ಇಲ್ಲ ಅನ್ನೋದು ನಂಜೇಗೌಡರ ಮಾತು. ಅಲ್ಲದೇ ಈಗಾಗಲೇ ಸಿದ್ದರಾಮಯ್ಯ ಕೂಡಾ ಒಪ್ಪಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ ಎನ್ನಲಾಗುತ್ತಿದೆ.

    ಈ ಹಿಂದೆ ಸಿದ್ದರಾಮಯ್ಯನವರು ತಮ್ಮ ಬೆಂಬಲಿಗರೊಬ್ಬರ ಮನೆ ಗೃಹಪ್ರವೇಶ ಕಾರ್ಯಕ್ರಮಕ್ಕೆಂದು ಬಂದಾಗಲೂ ಕೂಡಾ ಕೋಲಾರದಿಂದ ಸ್ಪರ್ಧೆ ಮಾಡುವಂತೆ ಭೇಟಿ ಮಾಡಿ ಒತ್ತಾಯಿಸಲಾಗಿತ್ತು. ಆದರೆ ಸಿದ್ದರಾಮಯ್ಯ ಅವರು ನಾನಿನ್ನೂ ಯಾವುದೇ ತೀರ್ಮಾನ ಮಾಡಿಲ್ಲ ಎಂದಿದ್ದರು. ಈ ನಡುವೆ ಸಿಎಂ ಆಗಿದ್ದ ವೇಳೆಯಲ್ಲಿ ಕೋಲಾರ ಜಿಲ್ಲೆಗೆ ಕೊಟ್ಟ ಮೊದಲ ನೀರಾವರಿ ಯೋಜನೆ ಕೆ.ಸಿ.ವ್ಯಾಲಿ ಯೋಜನೆಯನ್ನು ಕೊಟ್ಟಿದ್ದು ಸಿದ್ದರಾಮಯ್ಯ. ಹಾಗಾಗಿ ಸಿದ್ದು ಅವರಿಗೂ ಕೋಲಾರಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧ ಇದೆ.

    ಸಿದ್ದರಾಮಯ್ಯ ಅವರಿಗೆ ಕೋಲಾರದ ಮೇಲೆ ವಿಶೇಷ ಕಾಳಜಿ ಇದೆ. ಅವರಿಂದ ಜಿಲ್ಲೆಯಲ್ಲಿ ನೀರಾವರಿ ಕ್ರಾಂತಿಯಾಗಿದೆ. ಇದರ ಜೊತೆಗೆ ಜಿಲ್ಲೆ ಅಭಿವೃದ್ಧಿ ದೃಷ್ಟಿಯಿಂದ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ದೇ ಆದಲ್ಲಿ ಅವರಿಗಿಂತ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಮಗೆ ಹೆಚ್ಚು ಅನುಕೂಲ ಅನ್ನೋದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತು. ಹಾಗಾಗಿ ರಮೇಶ್ ಕುಮಾರ್ ನೇತೃತ್ವದ ಶಾಸಕರ ತಂಡ ಅವರ ಮೇಲೆ ಒತ್ತಡ ಹಾಕುತ್ತಿದ್ದೇವೆ ಎನ್ನುತ್ತಿದ್ದಾರೆ.

    ಸದ್ಯ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಇನ್ನೊಂದು ಬಾರಿ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಅದಕ್ಕೆ ಪೂರಕ ಎಂಬಂತೆ ಸಿದ್ದರಾಮಯ್ಯ ವಿರೋಧಿಗಳ ಸಂಖ್ಯೆ ಕೂಡಾ ಹೆಚ್ಚಾಗಿದ್ದು, ಗೆಲುವು ಅಷ್ಟು ಸುಲಭದ ಮಾತಲ್ಲ. ಹಾಗಾಗಿ ಅಳೆದು ತೂಗಿ ಕೋಲಾರ ಸೇಫ್ ಅಂದುಕೊಂಡಿರುವ ಸಿದ್ದರಾಮಯ್ಯ ಅಂತಿಮವಾಗಿ ಘೋಷಣೆ ಮಾಡೋದೊಂದೇ ಬಾಕಿ ಇದೆ.

    Live Tv
    [brid partner=56869869 player=32851 video=960834 autoplay=true]

  • ಯಡಿಯೂರಪ್ಪಗೆ ಬಹಳ ವಯಸ್ಸೇನು ಆಗಿಲ್ಲ – ದೈಹಿಕ, ಮಾನಸಿಕವಾಗಿ ಸದೃಢರಾಗಿದ್ದಾರೆ: ಸುಧಾಕರ್

    ಯಡಿಯೂರಪ್ಪಗೆ ಬಹಳ ವಯಸ್ಸೇನು ಆಗಿಲ್ಲ – ದೈಹಿಕ, ಮಾನಸಿಕವಾಗಿ ಸದೃಢರಾಗಿದ್ದಾರೆ: ಸುಧಾಕರ್

    ಚಿಕ್ಕಬಳ್ಳಾಪುರ: ರಾಜಕೀಯದಿಂದ ಮಾಜಿ ಸಿಎಂ ಯಡಿಯೂರಪ್ಪ ನಿವೃತ್ತಿ ಆಗೋದು ಸಾಧ್ಯವಿಲ್ಲ. ಯಡಿಯೂರಪ್ಪ ಅವರಿಗೆ ಬಹಳ ವಯಸ್ಸೇನು ಆಗಿಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಹೊಸೂರು ಗ್ರಾಮದಲ್ಲಿ ಆರೋಗ್ಯ ಸಚಿವ ಸುಧಾಕರ್ ಹೇಳಿದರು.

    ಶಿಕಾರಿಪುರವನ್ನು ಯಡಿಯೂರಪ್ಪ ಅವರು ಮಗ ವಿಜಯೇಂದ್ರ ಅವರಿಗೆ ಬಿಟ್ಟು ಕೊಟ್ಟಿದ್ದಾರೆ. ಈ ಮೂಲಕ ಅವರು ರಾಜಕೀಯ ವಲಯದಿಂದ ನಿವೃತ್ತಿ ಹೊಂದಿದ್ರಾ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಅವರು, ಯಡಿಯೂರಪ್ಪ ಅವರಿಗೆ ಬಹಳ ವಯಸ್ಸೇನು ಆಗಿಲ್ಲ. ಅವರು ದೈಹಿಕವಾಗಿ ಮಾನಸಿಕವಾಗಿ ಈಗಲೂ ಸಾಕಷ್ಟು ಸದೃಢರಾಗಿದ್ದಾರೆ. ಅವರ ಮಾರ್ಗದರ್ಶನ ಕ್ರಿಯಾಶೀಲತೆ ಮುಂದುವರಿದರೆ ನಮಗೆ ಒಳ್ಳೆಯದು ಅಂತ ಇನ್ನೂ ಯಡಿಯೂರಪ್ಪ ಅವರು ಮೊನ್ನೆ ನಡೆದ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ:  ಯಡಿಯೂರಪ್ಪ ಡಿಕ್ಷನರಿಯಲ್ಲಿ ನಿವೃತ್ತಿ ಎನ್ನುವ ಪದವಿಲ್ಲ: ವಿಜಯೇಂದ್ರ 

    ಚುನಾವಣೆ ಹತ್ರ ಬರುತ್ತ ಇದೆ. ನಾವು ಜನರ ಬಳಿ ಹೋಗಬೇಕು. ದೊಡ್ಡ ಸಮಾವೇಶಗಳನ್ನ ಮಾಡಿ ಜನರಿಗೆ ನಮ್ಮ ಸರ್ಕಾರದ ಕೆಲಸಗಳನ್ನ ತಿಳಿಸಬೇಕು. ಹಿಂಗಂತ ಸಿಎಂ ಅವರಿಗೆ ಯಡಿಯೂರಪ್ಪ ಅವರೇ ಸಲಹೆ ನೀಡಿದ್ದಾರೆ. ಹಾಗಾಗಿ ಅವರು ರಾಜಕೀಯದಿಂದ ದೂರ ಉಳಿಯಲ್ಲ ಎಂದರು.

    ಬಿಜೆಪಿ ಸಾಧನ ಸಮಾವೇಶ ಯಶಸ್ವಿಗೊಳಿಸಲು ಸಚಿವ ಎಂಟಿಬಿ ನಾಗರಾಜ್ ಹಾಗೂ ಸುಧಾಕರ್ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಗೌರಿಬಿದನೂರು, ಅಲ್ಲೀಪುರ, ಹೊಸೂರು, ವಿದುರಾಶ್ವತ್ಥ, ಡಿ.ಪಾಳ್ಯದಲ್ಲಿ ಇಂದು ಸರಣಿ ಸಭೆಗಳನ್ನ ನಡೆಸಿದ್ದಾರೆ. ಇದನ್ನೂ ಓದಿ: ಬ್ಲ್ಯಾಕ್ ಏಲಿಯನ್‍ನಂತೆ ಬದಲಾದ ಇವನನ್ನು ನೋಡಿದವರು ಕೆಲಸವನ್ನೆ ಕೊಡುತ್ತಿಲ್ಲ – ಓದಿ ವಿಚಿತ್ರ ಕಥೆ 

    Live Tv
    [brid partner=56869869 player=32851 video=960834 autoplay=true]

  • ಜಮ್ಮು-ಕಾಶ್ಮೀರ ಕ್ಷೇತ್ರ ಪುನರ್‌ವಿಂಗಡಣೆ ವರದಿ ಸಲ್ಲಿಕೆ – ಯಾವ ಪ್ರದೇಶಕ್ಕೆ ಎಷ್ಟು ಸೀಟು?‌

    ಜಮ್ಮು-ಕಾಶ್ಮೀರ ಕ್ಷೇತ್ರ ಪುನರ್‌ವಿಂಗಡಣೆ ವರದಿ ಸಲ್ಲಿಕೆ – ಯಾವ ಪ್ರದೇಶಕ್ಕೆ ಎಷ್ಟು ಸೀಟು?‌

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರ ಪುನರ್‌ವಿಂಗಡಣೆ ಆಯೋಗವು ಗುರುವಾರ ಭಾರತದ ಚುನಾವಣಾ ಆಯೋಗಕ್ಕೆ ಅಂತಿಮ ಆದೇಶವನ್ನು ಸಲ್ಲಿಸಿದೆ.

    ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಆಯೋಗವು ಜಮ್ಮು ಮತ್ತು ಕಾಶ್ಮೀರದ ಕ್ಷೇತ್ರ ಪುನರ್‌ವಿಂಗಡಣೆ ಆದೇಶವನ್ನು ಅಂತಿಮಗೊಳಿಸಲು ಇಂದು ಸಭೆ ನಡೆಸಿತು. ಇದಕ್ಕೆ ಸಂಬಂಧಿಸಿದ ಗೆಜೆಟ್ ಅಧಿಸೂಚನೆ ಕೂಡ ಪ್ರಕಟವಾಗಿದ್ದು, ಕೇಂದ್ರ ಸರ್ಕಾರ ಪ್ರಕಟಿಸಿದ ದಿನಾಂಕದಿಂದ ಈ ಆದೇಶ ಜಾರಿಗೆ ಬರಲಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬ್ರಾಹ್ಮಣರನ್ನು ಸಿಎಂ ಆಗಿ ನೋಡಲು ಬಯಸುತ್ತೇನೆ: ರಾವ್‍ಸಾಹೇಬ್ ಪಾಟೀಲ್ ದಾನ್ವೆ

    ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿದ್ದ 90 ವಿಧಾನಸಭಾ ಕ್ಷೇತ್ರಗಳ ಪೈಕಿ 43 ಜಮ್ಮು ಪ್ರದೇಶದ ಭಾಗವಾಗಿ ಮತ್ತು 47 ಕಾಶ್ಮೀರ ಪ್ರದೇಶದ ಭಾಗವಾಗಲಿದೆ ಎಂದು ಅಂತಿಮ ಆದೇಶದಲ್ಲಿ ತಿಳಿಸಲಾಗಿದೆ. ಈವರೆಗೆ ಕಾಶ್ಮೀರದಲ್ಲಿ 46 ಕ್ಷೇತ್ರಗಳಿದ್ದವು. ಜಮ್ಮುವಿನಲ್ಲಿ 37 ಸ್ಥಾನಗಳಿದ್ದವು.

    ಮೊದಲ ಬಾರಿಗೆ ಒಂಬತ್ತು ಸ್ಥಾನಗಳನ್ನು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಮೀಸಲಿಡಲಾಗಿದೆ. ಜಮ್ಮು ಪ್ರದೇಶದಲ್ಲಿ 6 ಮತ್ತು ಕಾಶ್ಮೀರ ಕಣಿವೆಯಲ್ಲಿ 3. ಅಂತೆಯೇ 7 ಸ್ಥಾನಗಳನ್ನು ಪರಿಶಿಷ್ಟ ಜಾತಿಗೆ (ಎಸ್‌ಸಿ) ಮೀಸಲಿಡಲಾಗಿದೆ. ಈ ಹಿಂದಿನ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಕಲ್ಪಿಸಲು ಸಂವಿಧಾನದಲ್ಲಿ ಅವಕಾಶ ಇರಲಿಲ್ಲ. ಇದನ್ನೂ ಓದಿ: ಡ್ರೋನ್ ಮುಖಾಂತರ ಶಸ್ತ್ರಾಸ್ತ್ರಗಳನ್ನು ಪಡೆದ 4 ಖಲಿಸ್ತಾನಿ ಭಯೋತ್ಪಾದಕರ ಬಂಧನ

    ಎಲ್ಲಾ ಐದು ಸಂಸದೀಯ ಕ್ಷೇತ್ರಗಳು ಮೊದಲ ಬಾರಿಗೆ ಸಮಾನ ಸಂಖ್ಯೆಯ ವಿಧಾನಸಭಾ ಸ್ಥಾನಗಳನ್ನು ಹೊಂದಿವೆ. ಕ್ಷೇತ್ರ ಮರುವಿಂಗಡಣೆ ಉದ್ದೇಶಕ್ಕಾಗಿ ಜಮ್ಮು ಮತ್ತು ಕಾಶ್ಮೀರವನ್ನು ಒಂದೇ ಘಟಕವಾಗಿ ಪರಿಗಣಿಸಲಾಗಿದೆ. ಜಮ್ಮುವಿನ ರಜೌರಿ, ದೋಡಾ, ಉಧಂಪುರ್, ಕಿಶ್ತ್‌ವಾರ, ಕಥುವಾ ಮತ್ತು ಸಾಂಬಾ ಜಿಲ್ಲೆಗಳಲ್ಲಿ ಒಟ್ಟು 6 ವಿಧಾನಸಭಾ ಕ್ಷೇತ್ರಗಳನ್ನು ಹಾಗೂ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಒಂದು ಕ್ಷೇತ್ರವನ್ನು ಹೊಸದಾಗಿ ಸೃಷ್ಟಿಸಲಾಗಿದೆ.

  • ಸೋತು ಎರಡು ವರ್ಷದ ಬಳಿಕ ಕ್ಷೇತ್ರಕ್ಕೆ ಕಾಲಿಟ್ಟ ಸಂತೋಷ್ ಲಾಡ್

    ಸೋತು ಎರಡು ವರ್ಷದ ಬಳಿಕ ಕ್ಷೇತ್ರಕ್ಕೆ ಕಾಲಿಟ್ಟ ಸಂತೋಷ್ ಲಾಡ್

    ಹುಬ್ಬಳ್ಳಿ: ಕಲಘಟಗಿ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಆತ್ಮಾವಲೋಕನ ಮಾಡಿಕೊಳ್ಳಲು ನನಗೆ ಸ್ವಲ್ಪ ಸಮಯ ಬೇಕಿತ್ತು. ಹೀಗಾಗಿ ಎರಡು ವರ್ಷ ಬಂದಿರಲಿಲ್ಲ. ಆದರೆ ಈ ಕ್ಷೇತ್ರದ ಜನರನ್ನು ಯಾವತ್ತೂ ಮರೆತಿಲ್ಲ. ಮರೆಯೋದು ಇಲ್ಲ ಎಂದು ಮಾಜಿ ಸಚಿವ ಸಂತೋಷ ಲಾಡ್ ಹೇಳಿದರು.

    ತಾಲೂಕಿನ ಮಡಕಿಹೊನ್ನಿಹಳ್ಳಿಯ ತಮ್ಮ ಅಮೃತ ನಿವಾಸದಲ್ಲಿ ನಡೆದ ಕಾರ್ಯಕರ್ತ ಸಭೆ ಬಳಿಕ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸಿ ಈ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ನಾನು ಹಿಂದಿನ 10 ವರ್ಷಗಳ ಕಾಲ ತಾಲೂಕಿನಲ್ಲಿ ಬೇಡ್ತಿ ಹಳ್ಳದ ನೀರಾವರಿ ಯೋಜನೆ, ಡಿಪೋ ಕಾಮಗಾರಿ, ರೈತರಿಗೆ ಕೊಳವೆ ಬಾವಿ, ಹೊಸ ವಿದ್ಯುತ್ ತಂತಿ ಬದಲಾವಣೆ ಇನ್ನೂ ಹಲವಾರು ಜನಪರ ಯೋಜನೆ ಕೈಗೊಂಡಿದ್ದು, ನನಗೆ ತೃಪ್ತಿ ಇದೆ ಎಂದರು.

    ಸುಮಾರು 50 ಕೋಟಿ ರೂ. ಸ್ವಂತ ಹಣವನ್ನು ಕ್ಷೇತ್ರಕ್ಕೆ ಖರ್ಚು ಮಾಡಿದ್ದೇನೆ. ನಾನು ದುಡ್ಡು ಮಾಡಲು ರಾಜಕಾರಣಕ್ಕೆ ಬಂದಿಲ್ಲ, ಜನರ ಸೇವೆ ಮಾಡಲು ಬಂದವನು. ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ ರಾಜಕೀಯವಾಗಿ ಪುನರಜನ್ಮ ನೀಡಿದ ಕಲಘಟಗಿ ಕ್ಷೇತ್ರದ ಜನರ ಋಣವನ್ನ ಮರೆಯುವುದಿಲ್ಲ. ಕಲಘಟಗಿಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.

    ಕಾಂಗ್ರೆಸ್‍ನಲ್ಲಿ ನಾಗರಾಜ ಛಬ್ಬಿ ಬಣ ಹಾಗೂ ಲಾಡ್ ಎರಡು ಬಣಗಳಿವೆ ಎಂಬುದು ಸುಳ್ಳು. ಇರುವುದೊಂದೇ ಕಾಂಗ್ರೆಸ್. ನಾಗರಾಜ ಛಬ್ಬಿ ನನ್ನ ಆತ್ಮೀಯ ಸ್ನೇಹಿತ. ಆತನಿಗೂ ಶಾಸಕರಾಗುವ ಆಸೆ ಇದೆ, ಆತನಿಗೆ ಒಳ್ಳೆಯದಾಗಲಿ. ಪಕ್ಷದ ಸಂಘಟನೆಗೆ ಎಲ್ಲರೂ ಶ್ರಮಿಸುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ವಿನಯ್ ಕುಲಕರ್ಣಿ, ಶ್ರೀನಿವಾಸ್ ಮಾನೆ, ನಾಗರಾಜ ಛಬ್ಬಿ, ಇಸ್ಮಾಯಲ್ ತಮಟಗಾರ ಎಲ್ಲರೂ ಸೇರಿ ಕಾಂಗ್ರೆಸ್ ಪಕ್ಷ ಸಂಘಟನೆ ಮಾಡುತ್ತೇವೆ ಎಂದರು.

    ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ವರಿಷ್ಠರು ನಿರ್ಧರಿಸುತ್ತಾರೆ. ನನ್ನ ಕ್ಷೇತ್ರದಲ್ಲಿ ಪ್ರತಿಯೊಂದು ಗ್ರಾಮಕ್ಕೆ ತೆರಳಿ ಪಕ್ಷ ಕಟ್ಟಿ ಬೆಳಸುವುದು ಅಷ್ಟೇ ಈಗಿರುವ ಉದ್ದೇಶ. ನಾನು ಇನ್ನು ಮುಂದೆ ಜನರು ಹಾಗೂ ಕಾರ್ಯಕರ್ತರನ್ನು ಭೇಟಿ ಕೊಡುತ್ತಾ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡುತ್ತೇನೆ. ಈಗಿರುವ ಶಾಸಕ ಸಿಎಂ ನಿಂಬಣ್ಣವರ್ ಬೇಗ ಗುಣಮುಖರಾಗಲಿ ಎಂದು ಆಶಿಸಿದರು. ನಂತರ ಶಾಸಕರ ಸಿಎಂ ನಿಂಬಣ್ಣವರ ಭೇಟಿ ಮಾಡಿ ಅವರ ಆರೋಗ್ಯ ಕೂಡ ವಿಚಾರಿಸಿದರು.

  • ನನ್ನ ಕ್ಷೇತ್ರದ ಶೇ.52ರಷ್ಟು ಭಾಗದಲ್ಲಿ ಪಾಕಿಸ್ತಾನವಿದೆ: ಬಿಜೆಪಿ ಶಾಸಕ

    ನನ್ನ ಕ್ಷೇತ್ರದ ಶೇ.52ರಷ್ಟು ಭಾಗದಲ್ಲಿ ಪಾಕಿಸ್ತಾನವಿದೆ: ಬಿಜೆಪಿ ಶಾಸಕ

    -ಶೇ.48ರಷ್ಟು ಮತಗಳಿಂದ ನನ್ನ ಜಯ

    ಡೆಹರಾಡೂನ್: ನನ್ನ ವಿಧಾನಸಭಾ ಕ್ಷೇತ್ರದ ಶೇ.52ರಷ್ಟು ಭಾಗದಲ್ಲಿ ಪಾಕಿಸ್ತಾನವಿದೆ. ನಾನು ಕೇವಲ ಶೇ.48ರಷ್ಟು ಮತಗಳನ್ನು ಪಡೆದು ಶಾಸಕನಾಗಿದ್ದೇನೆ ಎಂದು ಬಿಜೆಪಿ ಶಾಸಕ ಸುರೇಶ್ ರಾಠೋಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಹರಿದ್ವಾರ ಜಿಲ್ಲೆಯ ಜ್ವಾಲಾಪುರ ಕ್ಷೇತ್ರದ ಶಾಸಕ ಸುರೇಶ್ ರಾಠೋಡ ಹೇಳಿಕೆ ಉತ್ತರಾಖಂಡನಲ್ಲಿ ಸಂಚಲನ ಮೂಡಿಸಿದೆ. ರಸ್ತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಶಾಸಕರು, ಈ ರಸ್ತೆ 67 ಕಿ.ಮೀ. ಉದ್ದವಿದೆ. ನನ್ನ ಕ್ಷೇತ್ರವು 67 ಕಿ.ಮೀ. ಇದೆ. ಈ ರಸ್ತೆಯ ಒಟ್ಟಾರೆ ಶೇ.52 ರಷ್ಟು ಭಾಗ ಪಾಕಿಸ್ತಾನ ಇದೆ. ಈ ಏರಿಯಾ ಸಂಪೂರ್ಣವಾಗಿ ಪಾಕಿಸ್ತಾನದಂತಿದೆ. ಉಳಿದ ಶೇ.48ರಷ್ಟು ಭಾಗದಲ್ಲಿಯ ಜನರ ಮತಗಳಿಂದ ಶಾಸಕನಾಗಿದ್ದೇನೆ ಎಂದು ಹೇಳುವ ಮೂಲಕ ಮುಸ್ಲಿಂರು ತಮಗೆ ಮತ ನೀಡಿಲ್ಲ ಎಂದರು.

    ಶಾಸಕರು ಒಂದು ಸಮುದಾಯ ಜನರನ್ನು ಉದ್ದೇಶಿಸಿ ಮಾತನಾಡುವಾಗ ಈ ಹೇಳಿಕೆ ನೀಡುವ ಮೂಲಕ ಕ್ಷೇತ್ರವನ್ನು ವಿಭಜಿಸುವ ಹುನ್ನಾರ ನಡೆಸಿದ್ದಾರೆ. ಶಾಸಕರು ತಮ್ಮ ಈ ಮಾತುಗಳಿಂದ ಒಂದು ಸಮುದಾಯದ ಜನರನ್ನು ಒಲೈಸುವ ರಾಜಕಾರಣಕ್ಕೆ ಮುಂದಾಗಿರೋದು ದುರಂತ. ವಿವಾದಾತ್ಮಕ ಹೇಳಿಕೆ ಮೂಲಕ ಶಾಂತಿ ಕದಡಲು ಶಾಸಕರು ಮುಂದಾಗುತ್ತಿದ್ದಾರೆ ಎಂದು ಸ್ಥಳೀಯ ವಿಪಕ್ಷ ಮುಖಂಡರು ಆರೋಪಿಸಿದ್ದಾರೆ.

    ಜ್ವಾಲಾಪುರ ಕ್ಷೇತ್ರ ಹೆಚ್ಚು ಮುಸ್ಲಿಂ ಮತದಾರರನ್ನು ಹೊಂದಿದೆ. 2012ರಿಂದ ಜ್ವಾಲಾಪುರದಿಂದ ಬಿಜೆಪಿ ಅಭ್ಯರ್ಥಿಗಳು ಗೆಲುವು ದಾಖಲಿಸುತ್ತಾ ಬಂದಿದ್ದಾರೆ. ಶಾಸಕರ ಹೇಳಿಕೆಗೆ ಉತ್ತರಾಖಂಡ ರಾಜ್ಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಆರಂಭಗೊಂಡಿದೆ. ಇದುವರೆಗೂ ಶಾಸಕ ಸುರೇಶ್ ಮಾತ್ರ ಯಾವುದೇ ಸ್ಪಷ್ಟನೆ ನೀಡದೇ ಮೌನವಾಗಿದ್ದಾರೆ.

  • 2014 ಚುನಾವಣೆಯಲ್ಲಿ ಅತೀ ಕಡಿಮೆ ಮತದಾನವಾದ ಐದು ಕ್ಷೇತ್ರಗಳು

    2014 ಚುನಾವಣೆಯಲ್ಲಿ ಅತೀ ಕಡಿಮೆ ಮತದಾನವಾದ ಐದು ಕ್ಷೇತ್ರಗಳು

    ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆ ರಾಜ್ಯದಲ್ಲಿ 2 ಹಂತದಲ್ಲಿ ನಡೆಯಲಿದೆ. ಮೇ 18 ಹಾಗೂ 23ರಂದು ಚುನಾವಣೆ ನಡೆಯಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಕಲಬುರಗಿ, ರಾಯಚೂರು ಹಾಗೂ ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ ಮತದಾನ ನಡೆದಿತ್ತು.

    ಬೆಂಗಳೂರು ಕೇಂದ್ರ
    8 ವಿಧಾನಸಭಾ ಕ್ಷೇತ್ರಗಳಿರುವ ಬೆಂಗಳೂರು ಸೆಂಟ್ರಲ್ ನಲ್ಲಿ 1,956 ಮತದಾನದ ಕೇಂದ್ರಗಳಿತ್ತು. ಇಲ್ಲಿ 19,31,456 ಮಂದಿ ಮತದಾರರಿದ್ದರು. ಇದು ಅತೀ ಕಡಿಮೆ ಮತದಾನವಾಗಿರುವ ಕ್ಷೇತ್ರದಲ್ಲಿ ಮೊದಲನೆಯದಾಗಿದ್ದು, ಇಲ್ಲಿ 28 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದರು. 26 ಮಂದಿ ಸ್ಪರ್ಧಿಸಿದ್ದರು. ಇದರಲ್ಲಿ 24 ಮಂದಿ ಠೇವಣಿ ಕಳೆದುಕೊಂಡಿದ್ದರು. ಈ ಕ್ಷೇತ್ರಗಳಲ್ಲಿ 10,74,602 ಮಂದಿ ಮತದಾನಗೈದಿದ್ದು, ಶೇ. 55.64ರಷ್ಟು ಮತದಾನವಾಗಿತ್ತು.

    ಬೆಂಗಳೂರು ದಕ್ಷಿಣ:
    ಬೆಂಗಳೂರು ದಕ್ಷಿಣದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಇದು ಅತ್ಯಂತ ಕಡಿಮೆ ಮತದಾನವಾಗಿರುವ ಎರಡನೇ ಕ್ಷೇತ್ರವಾಗಿದೆ. ಇಲ್ಲಿ 1,926 ಮತದಾನ ಕೇಂದ್ರಗಳಿತ್ತು. ಈ ಕ್ಷೇತ್ರಗಳಲ್ಲಿ 19,98,724 ಮತದಾರರಿದ್ದರು. ಇಲ್ಲಿ 28 ಮಂದಿ ನಾಮಪತ್ರ ಸಲ್ಲಿಸಿದ್ದು, 23 ಮಂದಿ ಸ್ಪರ್ಧಿಸಿದ್ದರು. ಅಲ್ಲದೆ 21 ಮಂದಿ ತಮ್ಮ ಠೇವಣಿ ಕಳೆದುಕೊಂಡಿದ್ದರು. ಚುನಾವಣೆಯಲ್ಲಿ ಒಟ್ಟು 11,14,359 ಮತದಾನ ಮಾಡಿದ್ದು, ಶೇ. 55.75 ರಷ್ಟು ಮತದಾನವಾಗಿತ್ತು.

    ಕಲಬುರಗಿ:
    ಕಲಬುರಗಿಯು ಅತೀ ಕಡಿಮೆ ಮತದಾನ ಮಾಡಿರುವ ಕ್ಷೇತ್ರಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಒಟ್ಟು 8 ವಿಧಾನಸಭಾ ಕ್ಷೇತ್ರಗಳಿರುವ ಕಲಬುರಗಿಯಲ್ಲಿ 1,946 ಮತದಾನ ಕೇಂದ್ರಗಳಿತ್ತು. ಇಲ್ಲಿ 17,21,990 ಮತದಾರರಿದ್ದರು. ಹಾಗೂ 17 ಮಂದಿ ನಾಮಪತ್ರ ಸಲ್ಲಿಸಿದ್ದರು. ಹಾಗೆಯೇ 8 ಮಂದಿ ಸ್ಪರ್ಧೆ ಮಾಡಿ 6 ಮಂದಿ ತಮ್ಮ ಠೇವಣಿ ಕಳೆದುಕೊಂಡಿದ್ದರು. ಈ ಕ್ಷೇತ್ರಗಳಲ್ಲಿ ಒಟ್ಟು 9,98,086 ಮತದಾನ ಮಾಡಿದ್ದು, ಶೇ. 57.96 ರಷ್ಟು ಮತದಾನವಾಗಿತ್ತು.

    ರಾಯಚೂರು:
    ನಾಲ್ಕನೇ ಸ್ಥಾನದಲ್ಲಿರುವ ರಾಯಚೂರು ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 1, 878 ಮತದಾನ ಕೇಂದ್ರಗಳಿತ್ತು. 16,61,606 ಮತದಾರರಿದ್ದರು. ಈ ಕ್ಷೇತ್ರಗಳಲ್ಲಿ 13 ಮಂದಿ ನಾಮಪತ್ರ ಸಲ್ಲಿಸಿದ್ದು, 11 ಮಂದಿ ಸ್ಪರ್ಧಿಸಿದ್ದರು. ಅದರಲ್ಲಿ 9 ಮಂದಿ ತಮ್ಮ ಠೇವಣಿ ಕಳೆದುಕೊಂಡಿದ್ದರು. ಕ್ಷೇತ್ರಗಳಲ್ಲಿ ಒಟ್ಟು 9,69,047 ಮಂದಿ ಮತದಾನ ಮಾಡಿದ್ದು, ಶೇ. 58.32 ರಷ್ಟು ಮತದಾನವಾಗಿತ್ತು.

    ಬಿಜಾಪುರ:
    ಅತೀ ಕಡಿಮೆ ಮತದಾನವಾಗಿರುವ ಕ್ಷೇತ್ರದಲ್ಲಿ 5ನೇ ಸ್ಥಾನದಲ್ಲಿರುವ ವಿಜಯಪುರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿಳಲ್ಲಿ 1,869 ಮತದಾನ ಕೇಂದ್ರಗಳಿತ್ತು. ಈ ಕ್ಷೇತ್ರಗಳಲ್ಲಿ 16,22,635 ಮತದಾರರಿದ್ದರು. ಇನ್ನು ಇಲ್ಲಿ 17 ಮಂದಿ ನಾಮಪತ್ರ ಸಲ್ಲಿಸಿದ್ದು, 14 ಮಂದಿ ಸ್ಪರ್ಧೆ ಮಾಡಿದ್ದರು. ಅದರಲ್ಲಿ 12 ಮಂದಿ ಠೇವಣಿ ಕಳೆದುಕೊಂಡಿದ್ದರು. ಇಲ್ಲಿ 9,66,797 ಮಂದಿ ಮತದಾನ ಮಾಡಿದ್ದು, ಶೇ.59.58 ರಷ್ಟು ಮತದಾನವಾಗಿತ್ತು. ಇದನ್ನೂ ಓದಿ: 2014ರ ಚುನಾವಣೆಯಲ್ಲಿ ಅತೀ ಹೆಚ್ಚು ಮತದಾನವಾಗಿರುವ ಕ್ಷೇತ್ರಗಳ ವಿವರ ಇಲ್ಲಿದೆ

     

  • ಲೋಕ ಚುನಾವಣೆಯಲ್ಲಿ ವಿಶೇಷ ಸಾಧನೆ ನಿರ್ಮಿಸಿತು ಸುಳ್ಯ ವಿಧಾನಸಭಾ ಕ್ಷೇತ್ರ!

    ಲೋಕ ಚುನಾವಣೆಯಲ್ಲಿ ವಿಶೇಷ ಸಾಧನೆ ನಿರ್ಮಿಸಿತು ಸುಳ್ಯ ವಿಧಾನಸಭಾ ಕ್ಷೇತ್ರ!

    – ಡಿವಿ, ಶೋಭಾ, ನಳಿನ್ ಮೂವರೂ ಒಂದೇ ಕ್ಷೇತ್ರದವರು
    – ಬೇರೆ ಬೇರೆ ಕ್ಷೇತ್ರದ ಸಂಸದರು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರ ಅಪರೂಪದ ಸಾಧನೆ ಮಾಡಿದೆ. ಒಂದೇ ಕ್ಷೇತ್ರದ ವ್ಯಾಪ್ತಿಗೆ ಬರುವ ಮೂವರು ವ್ಯಕ್ತಿಗಳು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಅಲ್ಲದೆ ಈ ಬಾರಿಯ ಲೋಕಸಭಾ ಚುನಾವಣೆಯ ಅಖಾಡದಲ್ಲಿಯೂ ಟಿಕೆಟ್ ಪಡೆದಿದ್ದು, ಮತ್ತೆ ಸಂಸದರಾಗುವ ನಿರೀಕ್ಷೆಯಲ್ಲಿದ್ದಾರೆ.

    ಹೌದು. ಸಚಿವ ಡಿ.ವಿ ಸದಾನಂದ ಗೌಡ, ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ನಳಿನ್ ಕುಮಾರ್ ಕಟೀಲ್ ಈ ಮೂವರು ಒಂದೇ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತಾರೆ. ವಿಶೇಷವೆಂದರೆ ಒಂದೇ ಕ್ಷೇತ್ರದವರಾದ ಇವರುಗಳು ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ಸಂಸದರಾಗಿ ಆಯ್ಕೆಯಾಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಬೇರೆ ಬೇರೆ ಕಡೆಯಿಂದ ಬಿಜೆಪಿಯಿಂದಲೇ ಅಖಾಡಕ್ಕೆ ಇಳಿದಿದ್ದಾರೆ.

    ಸದಾನಂದ ಗೌಡ:
    ಇವರು ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡದವರು. ಇವರು 1994 ರಿಂದ 2004 ರವರೆಗೆ ಎರಡು ಅವಧಿಗಳಲ್ಲಿ ಪುತ್ತೂರಿನಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ವೀರಪ್ಪ ಮೊಯ್ಲಿಯವರನ್ನು ಸೋಲಿಸಿ ಸಂಸದರಾದ್ರು. ಬಳಿಕ 2009ರಲ್ಲಿ ಕಾಂಗ್ರೆಸ್ಸಿನ ಜಯಪ್ರಕಾಶ್ ಹೆಗ್ಡೆಯವರನ್ನು ಸೋಲಿಸಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆಗೆ ಪ್ರವೇಶ ಮಾಡಿದ್ರು.

    ಕಳೆದ ಬಾರಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸಿ. ನಾರಾಯಣ ಸ್ವಾಮಿಯವರನ್ನು ಸೋಲಿಸಿ ಸಂಸದರಾಗಿ ಆಯ್ಕೆಗೊಂಡಿದ್ದರು. ಅಲ್ಲದೆ ಕೇಂದ್ರ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ಈ ಮಧ್ಯೆ 2011 ರಲ್ಲಿ ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಹೆಮ್ಮೆ ಇವರಿಗಿದೆ. ಇದೀಗ ಈ ಬಾರಿ ಲೋಕಸಭಾ ಚುನಾವಣೆಯಲ್ಲಿಯೂ ಡಿವಿಯವರು ಬೆಂಗಳೂರು ಉತ್ತರದಿಂದ ಅಖಾಡಕ್ಕಿಳಿದಿದ್ದಾರೆ.

    ಶೋಭಾ ಕರಂದ್ಲಾಜೆ:
    ಚಾರ್ವಾಕ ಗ್ರಾಮ ಕರಂದ್ಲಾಜೆಯ ಶೋಭಾ ಅವರು 2004ರಲ್ಲಿ ವಿಧಾನಪರಿಷತ್ ಸದಸ್ಯರಾಗುವ ಮೂಲಕ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ. ಮೊದಲು ಪುತ್ತೂರು ತಾಲೂಕಿಗೆ ಬರುತ್ತಿದ್ದ ಚಾರ್ವಾಕ ಗ್ರಾಮ ಇದೀಗ ಕಡಬ ತಾಲೂಕಿನ ಅಡಿಯಲ್ಲಿ ಬರುತ್ತದೆ. ಹೀಗಾಗಿ ಈ ಗ್ರಾಮ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ.

    ಶೋಭಾ ಅವರು 2008ರಲ್ಲಿ ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ತದನಂತರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯಪ್ರಕಾಶ್ ಹೆಗ್ಡೆಯವರನ್ನು ಸೋಲಿಸಿ ಸಂಸದರಾಗಿ ಆಯ್ಕೆಯಾದರು. ಇದೀಗ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಇದೇ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

    ನಳಿನ್ ಕುಮಾರ್ ಕಟೀಲ್:
    ಇವರು ಮೂಲತಃ ಪಾಲ್ತಾಡಿ ಗ್ರಾಮದ ಕುಂಜಾಡಿಯವರಾಗಿದ್ದು, ಮಂಗಳೂರಿನಲ್ಲಿ ನೆಲೆಸಿದ್ದಾರೆ. ಆದ್ರೆ ಇವರ ತಾಯಿ ಈಗಲೂ ಕುಂಜಾಡಿಯಲ್ಲೇ ಇದ್ದಾರೆ. ಹೀಗಾಗಿ ನಳಿನ್ ಇಲ್ಲಿಗೆ ಆಗಾಗ ಬರುತ್ತಿರುತ್ತಾರೆ.

    ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ಬೆಳೆದ ಇವರು 2009ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ಗೆಲುವು ತನ್ನದಾಗಿಸಿಕೊಂಡರು. 2014 ಚುನಾವಣೆಯಲ್ಲೂ ಜಯಗಳಿಸಿದ್ದರು. 2 ಬಾರಿಯೂ ಕಾಂಗ್ರೆಸ್‍ನ ಪ್ರಭಾವಿ ನಾಯಕ ಜನಾರ್ದನ ಪೂಜಾರಿಯವರನ್ನು ಸೋಲಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.

    ಒಟ್ಟಿನಲ್ಲಿ ಒಂದೇ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮೂವರು ಸಂಸದರಾಗುವ ಮೂಲಕ ಈ ಕ್ಷೇತ್ರ ಸಾಧನೆ ಮಾಡಿದೆ. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿಯೂ ಇದೇ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಈ ಮೂವರು ರಾಜ್ಯದ ವಿವಿಧ ಕಡೆಗಳಲ್ಲಿ ಸ್ಪರ್ಧಿಸುತ್ತಿರುವುದು ವಿಶೇಷವಾಗಿದೆ.

  • ಜಗ್ಗೇಶ್ ನಟನೆಯ ಚಿತ್ರ, ರಿಯಾಲಿಟಿ ಶೋಗಳಿಗೆ ಕಡಿವಾಣ ಹಾಕಿ-ಕಾಂಗ್ರೆಸ್ ಅಭ್ಯರ್ಥಿಯಿಂದ ದೂರು

    ಜಗ್ಗೇಶ್ ನಟನೆಯ ಚಿತ್ರ, ರಿಯಾಲಿಟಿ ಶೋಗಳಿಗೆ ಕಡಿವಾಣ ಹಾಕಿ-ಕಾಂಗ್ರೆಸ್ ಅಭ್ಯರ್ಥಿಯಿಂದ ದೂರು

    ಬೆಂಗಳೂರು: ನಗರದ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ನಟ ಜಗ್ಗೇಶ್ ಅವರು ನಟಿಸಿರುವ ರಿಯಾಲಿಟಿ ಶೋ, ಸಿನಿಮಾಗಳನ್ನು ಪ್ರಸಾರ ಮಾಡದಂತೆ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.

    ಯಶವಂತಪುರ ಕ್ಷೇತ್ರದಲ್ಲಿ ಜಗ್ಗೇಶ್ ಪ್ರತಿ ಸ್ಪರ್ಧಿಯಾಗಿರುವ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯಾಗಿರುವ ಎಸ್ ಟಿ ಸೋಮಶೇಖರ್ ಅವರು ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ತಮ್ಮ ದೂರಿನಲ್ಲಿ ಜಗ್ಗೇಶ್ ಅಭಿನಯ ಮಾಡಿರುವ ಚಿತ್ರಗಳು ಹಾಗೂ ಅವರ ರಿಯಾಲಿಟಿ ಶೋ ಗಳು ಮತದಾರರ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.

    ಜಗ್ಗೇಶ್ ಅವರು ನಡೆಸಿಕೊಡುವ ರಿಯಾಲಿಟಿ ಶೋ ಗಳು ದೂರದರ್ಶನ, ಖಾಸಗಿ ವಾಹನಿ, ಸ್ಥಳೀಯ ಕೇಬಲ್ ನೆಟ್‍ವರ್ಕ್ ಮತ್ತು ಇತರೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಇದು ಚುನಾವಣೆ ನೀತಿ ಸಂಹಿತೆ ವಿರುದ್ಧವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಇಂತಹ ಕಾರ್ಯಕ್ರಮಗಳು ಪ್ರಸಾರ ಆಗುವುದರಿಂದ ಮತದಾರರ ಮೇಲೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರಭಾವ ಬೀರುವ ಸಾಧ್ಯತೆ ಇದ್ದು, ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವರೆಗೂ ಜಗ್ಗೇಶ್ ಅವರ ಕಾರ್ಯಕ್ರಮಗಳು ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಬೇಕು ಎಂದು ಮನವಿ ಮಾಡಿದ್ದಾರೆ.

  • ಸಿಎಂ ತವರು ಜಿಲ್ಲೆಯ ಈ ಗ್ರಾಮದಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳಿದ್ರೂ ಜನರಿಗೆ ನೆಮ್ಮದಿಯಿಲ್ಲ

    ಸಿಎಂ ತವರು ಜಿಲ್ಲೆಯ ಈ ಗ್ರಾಮದಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳಿದ್ರೂ ಜನರಿಗೆ ನೆಮ್ಮದಿಯಿಲ್ಲ

    ಮೈಸೂರು: ಆ ಹಳ್ಳಿ ಹೇಳಿ ಕೇಳಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸೋ ಗ್ರಾಮ. ಗ್ರಾಮದಲ್ಲಿ ಒಳ್ಳೆ ರಸ್ತೆ ಉಂಟು, ಚರಂಡಿ, ಕುಡಿಯಲು ನೀರು, ಅಂಗನವಾಡಿ, ಶಾಲೆ ಎಲ್ಲಾ ಉಂಟು. ಆದರೂ ಆ ಊರಿನ ಜನರಿಗೆ ಕಳೆದ ಎಂಟತ್ತು ವರ್ಷದಿಂದ ನೆಮ್ಮದಿ ಇಲ್ಲ.

    ಸಿಎಂ ಸಿದ್ದರಾಮಯ್ಯನವರ ತವರು ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹಳ್ಳಿ ಸೋಮೇಶ್ವರಪುರ. ಇಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯವೂ ಇದೆ. ಆದ್ರೆ ಅಕ್ರಮ ಮದ್ಯ ಮಾರಾಟದಿಂದ ಊರಿನ ಜನರ ನೆಮ್ಮದಿಯೇ ಹಾಳಾಗಿ ಹೋಗಿದೆ.

    ಸೋಮೇಶ್ವರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಇದರಿಂದ ಬಡ ಕುಟುಂಬಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಲಿ ಮಾಡಿ 300 ರೂ. ಗಳಿಸಿದ್ರೆ ಅದ್ರಲ್ಲಿ 200 ರೂ. ಹಣವನ್ನು ಮದ್ಯಕ್ಕಾಗಿ ಬಳಕೆ ಮಾಡ್ತಿದ್ದಾರೆ. ಮಾತ್ರವಲ್ಲದೇ ಮನೆಗೆ ಹೋಗಿ ಹೆಂಡತಿ ಮಕ್ಕಳಿಗೆ ತೊಂದ್ರೆ ಕೊಡ್ತಿದ್ದಾರೆ. ಇದರಿಂದ ಇಲ್ಲಿನ ಜನ ಬಹಳ ಕಷ್ಟಪಡುತ್ತಿದ್ದಾರೆ. ಈ ಬಗ್ಗೆ ಅಬಕಾರಿ ಇಲಾಖೆಗೆ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ ಅಂತಾ ಗ್ರಾಮಸ್ಥ ಮಹೇಶ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ರು.

    ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲೂ ಮದ್ಯ ಮಾರಾಟವಿಲ್ಲ. ಹೀಗಾಗಿ ಮದ್ಯಪಾನಿಗಳು ಇಲ್ಲಿಗೆ ಬಂದು ಮದ್ಯ ಖರೀದಿಸುತ್ತಾರೆ. ಹೀಗೆ ಕೂಲಿ ಕಾರ್ಮಿಕರು ತಾವು ದುಡಿದ ದುಡ್ಡನ್ನೆಲ್ಲಾ ಮದ್ಯಕ್ಕೆ ಸುರಿಯುತ್ತಿದ್ದು, ಹಲವರ ಸಂಸಾರ ಬೀದಿಗೆ ಬೀಳುವಂತಾಗಿದೆ. ಅಲ್ಲದೆ ಯುವಕರೂ ದಾರಿ ತಪ್ಪುತ್ತಿದ್ದಾರೆ. ಮದ್ಯ ಮಾರಾಟದ ವಿರುದ್ಧ ಗ್ರಾಮಸ್ಥರು ಹೋರಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಅಂತಾ ಗ್ರಾಮದ ನಿವಾಸಿ ಗುರು ಮಲ್ಲೇಶ್ ಅಳಲು ತೋಡಿಕೊಂಡ್ರು.

    ಒಟ್ಟಾರೆ ಸಿಎಂ ತವರು ಕ್ಷೇತ್ರದ ಗ್ರಾಮವೊಂದರ ಕಥೆ ಹೀಗಾದ್ರೆ ಉಳಿದ ಪ್ರದೇಶಗಳ ಸ್ಥಿತಿಯೇನು ಅನ್ನೋದೇ ಜನಸಾಮಾನ್ಯರ ಮುಂದಿರುವ ಪ್ರಶ್ನೆಯಾಗಿದೆ. ಇನ್ನಾದ್ರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ತಾರಾ ಅಂತ ಕಾದು ನೋಡ್ಬೇಕು.