Tag: ವಿದೇಶಿ ಪ್ರವಾಸ

  • ಮೋದಿ ವಿದೇಶ ಪ್ರವಾಸದ ಲೆಕ್ಕ

    ಮೋದಿ ವಿದೇಶ ಪ್ರವಾಸದ ಲೆಕ್ಕ

    ನವದೆಹಲಿ: ನರೇಂದ್ರಮೋದಿ ಅವರು ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಬಳಿಕ ಹಲವು ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದು, ತಮ್ಮ ಆಡಳಿತ ಅವಧಿಯ ಅಂತಿಮ ಪ್ರವಾಸವನ್ನು ಈ ತಿಂಗಳಿನಲ್ಲಿ ಕೈಗೊಳ್ಳುವ ನಿರೀಕ್ಷೆ ಇದೆ.

    ಕಳೆದ ಐದು ವರ್ಷಗಳಲ್ಲಿ ಮೋದಿ ಅವರು ಏರ್ ಇಂಡಿಯಾ ಸಂಸ್ಥೆಯ ಮೂಲಕ ವಿದೇಶಿ ಪ್ರವಾಸಗೊಂಡ ಪರಿಣಾಮ ಸಂಸ್ಥೆ ಒಟ್ಟು 443.4 ಕೋಟಿ ರೂ. ಮೊತ್ತದ ಬಿಲ್ ನೀಡಿದೆ. ಪ್ರಧಾನಿ ಮಂತ್ರಿಗಳ ಅಧಿಕೃತ ಕಚೇರಿ ಈ ಮಾಹಿತಿಯನ್ನು ನೀಡಿದೆ.

    ಮೋದಿ ಅವರಿಗೂ ಮುನ್ನ 2ನೇ ಅವಧಿಗೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು, 2009-14ರ ಅವಧಿಯಲ್ಲಿ 38 ವಿದೇಶಿ ಪ್ರವಾಸಗಳನ್ನು ಕೈಗೊಂಡಿದ್ದರು. ಆ ವೇಳೆ ಕೇಂದ್ರ ಸರ್ಕಾರ 493.22 ಕೋಟಿಗಳನ್ನು ಏರ್ ಇಂಡಿಯಾಗೆ ಪಾವತಿ ಮಾಡಿತ್ತು.

    ವಿದೇಶಿ ಪ್ರವಾಸದ ವಿಚಾರವಾಗಿ ಪ್ರಧಾನಿ ಮೋದಿ ಅವರು ವಿಪಕ್ಷಗಳಿಂದ ಭಾರೀ ಟೀಕೆಗೆ ಗುರಿಯಾಗಿದ್ದರು. ಆದರೆ ಮೋದಿ ಅವರು ಪ್ರಧಾನಿ ಆಗುವ ಮುನ್ನ 2ನೇ ಅವಧಿಗೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರಿಗಿಂತಲೂ 50 ಕೋಟಿ ರೂ. ವೆಚ್ಚ ಕಡಿಮೆ ಇದೆ. ಆದರೆ ಪಿಎಂಒ ನೀಡಿರುವ ಮಾಹಿತಿ ಅನ್ವಯ ಈ ಬಿಲ್ ನಲ್ಲಿ ಇನ್ನು 5 ಪ್ರವಾಸಗಳ ಖರ್ಚಿನ ಪ್ರಮಾಣವನ್ನು ಸೇರಿಸಬೇಕಿದೆ.

    ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುಎಇ ಸರ್ಕಾರ ಅತ್ಯುನ್ನತ ನಾಗರಿಕ ಪುರಸ್ಕಾರ ‘ಝೂಯೆದ್ ಮೆಡಲ್’ ಗೌರವನ್ನು ನೀಡಿ ಗೌರವಿಸಿತ್ತು. ಈ ಹಿನ್ನೆಲೆಯಲ್ಲಿ ಮೋದಿ ಅವರು ತಿಂಗಳ ಅಂತ್ಯದ ವೇಳೆಗೆ ಯುಎಇಗೆ ಭೇಟಿ ನೀಡಿರುವ ಸಾಧ್ಯತೆಗಳಿವೆ.

    ಪ್ರಧಾನಿ ಮೋದಿ ಅವರ ವಿದೇಶಿ ಪ್ರವಾಸಗಳ ಪರಿಣಾಮ ವಿಶ್ವಮಟ್ಟದಲ್ಲಿ ಭಾರತದ ಮೇಲಿನ ಗೌರವ ಹಾಗೂ ದೇಶದ ವರ್ಚಸ್ಸು ಹೆಚ್ಚಾಗಿದ್ದು, ನ್ಯೂಕ್ಲಿಯರ್ ಪವರ್, ಪ್ರಮುಖ ಆರ್ಥಿಖ ಒಪ್ಪಂದಗಳು ಹಾಗೂ ಪ್ರಪಂಚದ ಇತರೇ ದೇಶಗಳೊಂದಿಗೆ ಉತ್ತಮ ಸಂಪರ್ಕವನ್ನು ರೂಪಿಸಿದೆ. ಪ್ರಮುಖವಾಗಿ ಮೋದಿ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದರು ಕೂಡ ಅವರ ಪ್ರಯಾಣ ವೆಚ್ಚ ಕಡಿಮೆ ಆಗಲು ಕಾರಣವಿದ್ದು, ಒಮ್ಮೆ ಒಂದು ದೇಶಕ್ಕ ಪ್ರವಾಸ ಕೈಗೊಳ್ಳುವ ಬದಲು ಹೆಚ್ಚಿನ ದೇಶಗಳನ್ನು ಭೇಟಿ ನೀಡಿದ್ದೇ ಕಾರಣ ಎನ್ನಲಾಗಿದೆ.

    2015 ರಲ್ಲಿ ಮಾಧ್ಯಮವೊಂದರ ಸಂದರ್ಶನದ ವೇಳೆಯೂ ಈ ಬಗ್ಗೆ ಪ್ರಸ್ತಾಪ ಮಾಡಿದ್ದ ಮೋದಿ, ‘ಸಿಂಗಲ್ ಟಿಕೆಟ್, ಡಬಲ್ ಜರ್ನಿ’ ಎಂದು ತಿಳಿಸಿದ್ದರು. ಒಮ್ಮೆಗೆ ಮೋದಿ 6 ದೇಶಗಳನ್ನು ಭೇಟಿ ನೀಡಿದ್ದು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಈ ವೇಳೆ ಮೋದಿ ಅವರು ಉಜ್ಜೇಕಿಸ್ತಾನ್, ಖಜಕಿಸ್ತಾನ್, ರಷ್ಯಾ, ತಜಕಿಸ್ತಾನ್, ಕಿರ್ಗೀಸ್ ರಾಷ್ಟ್ರಗಳಿಗೆ ಭೇಟಿ ನೀಡಿದ್ದರು. ಅಲ್ಲದೇ ತಮ್ಮ ಕೆಲ ದೇಶಗಳಿಗ ಪ್ರವಾಸ ಕೈಗೊಳ್ಳುವ ವೇಳೆ ಬಿಸಿನೆಸ್ ಕ್ಲಸ್ ನಲ್ಲಿ ಪ್ರಯಾಣಿಸಿದ್ದರು. ನೇಪಾಳ, ಬಾಂಗ್ಲಾದೇಶ, ಇರಾನ್, ಸಿಂಗಾಪೂರ್ ಭೇಟಿಗೆ ವಿವಿಐಪಿ ಸೇವೆ ಬದಲು ಬೋಯಿಂಗ್ 727 ಬಿಸಿನಿಎಸ್ ಜೆಟ್ ವಿಮಾನದಲ್ಲಿ ಪ್ರಯಾಣಿಸಿದ್ದರು.

  • ಮೂಲ ಕಾಂಗ್ರೆಸ್ಸಿಗರು ಕೊಟ್ಟ ಶಾಕ್‍ಗೆ ಸಿದ್ದರಾಮಯ್ಯ ವಿದೇಶದಿಂದ ವಾಪಸ್!

    ಮೂಲ ಕಾಂಗ್ರೆಸ್ಸಿಗರು ಕೊಟ್ಟ ಶಾಕ್‍ಗೆ ಸಿದ್ದರಾಮಯ್ಯ ವಿದೇಶದಿಂದ ವಾಪಸ್!

    – ನಾಳೆಯಿಂದ ರಾಜ್ಯದಲ್ಲಿ ಮಾಜಿ ಸಿಎಂ ಅಸಲಿ ಆಟ ಶುರು

    ಬೆಂಗಳೂರು: ಮೂಲ ಕಾಂಗ್ರೆಸ್ಸಿಗರು ಕೊಟ್ಟ ಶಾಕ್‍ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಿದೇಶಿ ಪ್ರವಾಸ ಮೊಟಕುಗೊಳಿಸಿ ನಗರಕ್ಕೆ ಇಂದು ಮರಳುತ್ತಿದ್ದಾರೆ.

    ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಂತೆ ಎಸ್.ಆರ್. ಪಾಟೀಲ್ ಅವರಿಗೆ ಸಿದ್ದರಾಮಯ್ಯ ತಿಳಿಸಿದ್ದರು. ಅಷ್ಟೇ ಅಲ್ಲದೆ ಈ ಕುರಿತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೂ ಸೂಚನೆ ನೀಡಿ ವಿದೇಶಿ ಪ್ರವಾಸ ಹಾಗೂ ಆಪ್ತರ ಮದುವೆಗೆ ಮಲೇಷಿಯಾಕ್ಕೆ ತೆರಳಿದ್ದರು.

    ಮಾಜಿ ಸಿಎಂ ಗೈರಾಗಿರುವಾಗಲೇ ಮೂಲ ಕಾಂಗ್ರೆಸ್ಸಿಗರಾದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್ ಬಣದ ಸದಸ್ಯರು ಪ್ರತಾಪ್ ಚಂದ್ರಶೆಟ್ಟಿ ಅವರನ್ನು ಸಭಾಪತಿ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಇದರಿಂದ ಶಾಕ್‍ಗೆ ಒಳಗಾದ ಸಿದ್ದರಾಮಯ್ಯ ಅವರು ಆಪ್ತರ ಮದುವೆ ಮುಗಿಸಿ, ಪ್ರವಾಸ ಮೊಟಕುಗೊಳಿಸಿ ಬೆಂಗಳೂರಿಗೆ ವಿಮಾನ ಹತ್ತಿದ್ದಾರೆ.

    ಮಲೇಷಿಯಾದಲ್ಲಿ ಆಪ್ತರ ಮದುವೆ ಮುಗಿಸಿ ಬೇರೆ ಬೇರೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಡಿಸೆಂಬರ್ 16ರಂದು ವಾಪಸ್ ಬರಲು ಸಿದ್ದರಾಮಯ್ಯ ತೀರ್ಮಾನಿಸಿದ್ದರು. ಆದರೆ ರಾಜ್ಯ ರಾಜಕಾರಣದ ಶಾಕ್‍ಗೆ ಒಳಗಾಗಿ ವಿಮಾನ ಹತ್ತಿರುವ ಮಾಜಿ ಸಿಎಂ ಇಂದು ರಾತ್ರಿ 10.30ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬಳಿಕ ರಾಜಕೀಯ ಬೆಳವಣಿಗೆ ತಿಳಿದುಕೊಂಡು ನಾಳೆಯಿಂದ ಅಸಲಿ ಆಟ ಶುರು ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಇತ್ತ ಸಭಾಪತಿ ಸ್ಥಾನ ಕೈ ತಪ್ಪಿದ್ದಕ್ಕೆ ಬಸವರಾಜ್ ಹೊರಟ್ಟಿ ಅವರು ಕೂಡ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕುಮಾರಸ್ವಾಮಿ ಹೆಬ್ಬೆಟ್ಟು. ಕಾಂಗ್ರೆಸ್ ನಾಯಕರು ಹೇಳುವಲ್ಲಿ ಸಹಿ ಒತ್ತುತ್ತಾರೆ ಎಂದು ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv