Tag: ವಿಜ್ಞಾನ

  • ಕಾರವಾರದಲ್ಲಿ ಶೂನ್ಯ ನೆರಳಿನ ಕೌತುಕ- ಬಿಸಿಲಿನಲ್ಲಿ ನಿಂತರೂ ನೆರಳು ಮಾಯ

    ಕಾರವಾರದಲ್ಲಿ ಶೂನ್ಯ ನೆರಳಿನ ಕೌತುಕ- ಬಿಸಿಲಿನಲ್ಲಿ ನಿಂತರೂ ನೆರಳು ಮಾಯ

    ಕಾರವಾರ: ಯಾರು ನಮ್ಮನ್ನು ಹಿಂಬಾಲಿಸುತ್ತಾರೋ ಇಲ್ಲವೊ, ಆದರೆ ನೆರಳು ಮಾತ್ರ ನಮ್ಮನ್ನು ಹಿಂಬಾಲಿಸುತ್ತದೆ ಎನ್ನುತ್ತೇವೆ. ಹೀಗಿರುವಾಗ ಆ ನೆರಳೇ ಮಾಯವಾದರೆ ಹೇಗೆ ಎಂಬ ಪ್ರಶ್ನೆ ಹಲವು ಬಾರಿ ಕಾಡುತ್ತದೆ. ನಗರದಲ್ಲಿ ಅಂತಹ ಅದ್ಭುತವೊಂದು ನಡೆದಿದ್ದು, ಶೂನ್ಯ ನೆರಳಿನ ವಿಜ್ಞಾನದ ಕೌತುಕ ಕಂಡುಬಂತು.

    ನಗರದ ಕೋಡಿಬಾಗದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಕಂಬವೊಂದನ್ನು ಬಿಸಿಲಿನಲ್ಲಿ ಇಟ್ಟು ಇದನ್ನು ಪತ್ತೆ ಹಚ್ಚಲಾಯಿತು. ಇಲ್ಲಿ ಅವುಗಳ ನೆರಳು ಅಕ್ಕಪಕ್ಕ ಎಲ್ಲೂ ಬೀಳಲಿಲ್ಲ. ಸಾಮಾನ್ಯವಾಗಿ ಶೂನ್ಯ ನೆರಳಿನ ದಿನದಂದು ನೆರಳು ಅಕ್ಕಪಕ್ಕದಲ್ಲಿ ಎಲ್ಲೂ ಕಾಣಿಸದು.

    ಕರ್ಕಾಟಕ ವೃತ್ತದ ಮತ್ತು ಮಕರ ಸಂಕ್ರಾಂತಿ ವೃತ್ತದ ನಡುವೆ ಇರುವ ಪ್ರದೇಶಗಳಲ್ಲಿ ವರ್ಷದಲ್ಲಿ ಎರಡು ಬಾರಿ ಶೂನ್ಯ ನೆರಳಿನ ದಿನ ಕಾಣಬಹುದಾಗಿದೆ. ಸೂರ್ಯನು ಉತ್ತರಾಯಣದಿಂದ ದಕ್ಷಿಣಾಯನಕ್ಕೆ ಹಾಗೂ ದಕ್ಷಿಣಾಯದಿಂದ ಉತ್ತರಾಯಣಕ್ಕೆ ಹಾದು ಹೋಗುವ ವೇಳೆ ಮಾತ್ರ ಈ ಅಪರೂಪದ ವಿದ್ಯಮಾನ ನಡೆಯುತ್ತದೆ. ಇಂದು ಸೂರ್ಯ ನಡು ನೆತ್ತಿಯ ಮೇಲಿದ್ದರಿಂದ (ಮಧ್ಯಾಹ್ನ 12.31ರಿಂದ 12.33ರ ನಡುವೆ) ಯಾವುದೇ ವಸ್ತುವಿನ ನೆರಳು ಅಕ್ಕ ಪಕ್ಕ ಬೀಳಲಿಲ್ಲ.

    ಶೂನ್ಯ ನೆರಳಿನ ಸಮಯ ಪ್ರದೇಶದಿಂದ ಪ್ರದೇಶಕ್ಕೆ ಕೆಲ ನಿಮಿಷಗಳ ವ್ಯತ್ಯಾಸವನ್ನು ಹೊಂದಿದೆ. ಈ ಬಾರಿ ಕಾರವಾರ, ಯಲ್ಲಾಪುರ, ಹಾವೇರಿ ಹಾಗೂ ಆಂಧ್ರ ಪ್ರದೇಶದ ಕೆಲ ಭಾಗಗಳಲ್ಲಿ ಮಾತ್ರ ಈ ವಿಜ್ಞಾನದ ಕೌತುಕ ಕಂಡುಬಂದಿದೆ.

    ಪ್ರತಿ ವರ್ಷ ಈ ವಿಶೇಷ ಕೌತುಕವನ್ನು ವಿದ್ಯಾರ್ಥಿಗಳು ಕೂಡ ವೀಕ್ಷಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾದಿಂದಾಗಿ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ವೀಕ್ಷಿಸಲು ಸೂಚಿಸಲಾಗಿದೆ. ನಾವು ಇಲ್ಲಿ ಕಲೆ ಹಾಕಿದ ಮಾಹಿತಿಯನ್ನು ಬೆಂಗಳೂರಿನ ಜವಹರಲಾಲ್ ನೆಹರು ಕೇಂದ್ರಕ್ಕೆ ಕಳುಹಿಸುವುದಾಗಿ ಕಾರವಾರ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯೂರೇಟರ್ ಸಂಜೀವ್ ದೇಶಪಾಂಡೆ ತಿಳಿಸಿದರು.

    ವರ್ಷದಲ್ಲಿ ಎರಡು ಬಾರಿ ಈ ಶೂನ್ಯ ನೆರಳಿನ ದಿನ ಬರುತ್ತದೆ. ಇಂತಹ ಪ್ರಕೃತಿ ವಿಸ್ಮಯ ಎಲ್ಲ ಭಾಗದಲ್ಲೂ ಕಾಣಸಿಗುವುದಿಲ್ಲ. ಅಂತದರಲ್ಲಿ ಕಾರವಾರದಲ್ಲಿ ಇಂದು ಕಂಡಿದ್ದು ವಿಜ್ಞಾನಿಗಳಿಗೆ ಸೂರ್ಯ ಹಾಗೂ ಭೂಮಿಯ ಮತ್ತಷ್ಟು ಅಧ್ಯಯನಕ್ಕೆ ಸಹಕಾರಿಯಾಯಿತು.

  • ಬಾಹ್ಯಾಕಾಶಕ್ಕೆ ಮೋದಿ ಭಾವಚಿತ್ರ, ಭಗವದ್ಗೀತೆ – ಇಸ್ರೋದ ಉಪಗ್ರಹ ಉಡಾವಣೆ ಯಶಸ್ವಿ

    ಬಾಹ್ಯಾಕಾಶಕ್ಕೆ ಮೋದಿ ಭಾವಚಿತ್ರ, ಭಗವದ್ಗೀತೆ – ಇಸ್ರೋದ ಉಪಗ್ರಹ ಉಡಾವಣೆ ಯಶಸ್ವಿ

    ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ವರ್ಷದ ಮೊದಲ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿ ಕಕ್ಷೆಗೆ ಸೇರಿಸಿದೆ.

    ತನ್ನ ಪಿಎಸ್‌ಎಲ್‌ವಿ 51 ರಾಕೆಟ್‌ ಮೂಲಕ ಬ್ರೆಜಿಲ್‌ ನ ಅಮೆಜೋನಿಯಾ -1 ಉಪಗ್ರಹದೊಂದಿಗೆ ಇತರ 18 ಉಪಗ್ರಹಗಳನ್ನು ಶ್ರೀಹರಿಕೋಟದಲ್ಲಿರುವ ಡಾ. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 10:30ಕ್ಕೆ ಉಡಾವಣೆ ಮಾಡಲಾಯಿತು.

    ಒಟ್ಟು 20 ಉಪಗ್ರಹಗಳನ್ನು ಇಂದು ಉಡಾವಣೆ ಮಾಡಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದಾಗಿ 2 ಉಪಗ್ರಹಗಳ ಉಡಾವಣೆಯನ್ನು ಕಳೆದ ವಾರ ರದ್ದು ಮಾಡಲಾಗಿತ್ತು.

    ಭಾರತದ ಖಾಸಗಿ ಸಂಸ್ಥೆಗಳು ಅಭಿವೃದ್ಧಿಪಡಿಸಿದ ‘ಆನಂದ್’, ‘ಸತೀಶ್ ಧವನ್’ ಹಾಗೂ ‘ಯೂನಿಟಿಶಾಟ್’ ಉಪಗ್ರಹಗಳ ಜೊತೆ ಬ್ರೆಜಿಲ್ ದೇಶಕ್ಕೆ ಸೇರಿದ ಅಮೆಜೋನಿಯಾ-1 ಉಪಗ್ರಹವನ್ನು ಇಸ್ರೋ ರಾಕೆಟ್‌ ಕಕ್ಷೆಗೆ ಸೇರಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಭಾವ ಚಿತ್ರ, ಪವಿತ್ರ ಗ್ರಂಥ ಭಗವದ್ಗೀತೆಯ ಎಲೆಕ್ಟ್ರಾನಿಕ್‌ ಪ್ರತಿ ಹಾಗೂ 25 ಸಾವಿರ ನಾಗರಿಕರ ಹೆಸರು ಇರುವ ಉಪಗ್ರಹವನ್ನು ಇಂದು ಕಳುಹಿಸಲಾಯಿತು.

    ಬ್ರೆಜಿಲ್‌ ನ ಅಮೆಜೋನಿಯಾ -1 ಉಪಗ್ರಹ 637 ಕೆಜಿ ತೂಕವನ್ನು ಹೊಂದಿದ್ದು, ಇದು ಬ್ರೆಜಿಲ್‌ ವ್ಯಾಪ್ತಿಯಲ್ಲಿರುವ ಅಮೆಜಾನ್‌ ಪ್ರದೇಶದ ಅರಣ್ಯ ನಾಶದ ಬಗ್ಗೆ ಮಾಹಿತಿ ನೀಡಲಿದೆ.

    ಭಾರತೀಯ ಉಪಗ್ರಹಗಳಾದ ‘ಆನಂದ್’ ಅನ್ನು ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಸಂಸ್ಥೆ ‘ಪಿಕ್ಸೆಲ್’ ಅಭಿವೃದ್ದಿಪಡಿಸಿದೆ. ‘ಸತೀಶ್ ಧವನ್’ ಅನ್ನು ಚೆನ್ನೈ ಮೂಲದ ‘ಸ್ಪೇಸ್ ಕಿಡ್ಜ್‌ ಇಂಡಿಯಾ ಅನ್ನು ಜಿಟ್ ಶಾಟ್ (ಶ್ರೀಪೆರಂಬುದೂರ್), ಜಿಹೆಚ್ಆರ್ ಸಿ ಈ ಶಾಟ್ (ನಾಗ್ಪುರ), ಶ್ರೀ ಶಕ್ತಿ ಶಾಟ್ (ಕೊಯಮತ್ತೂರು) ಇಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

    ಸ್ಪೇಸ್‌ಕಿಡ್ಜ್ ಇಂಡಿಯಾ ಭಾರತದ ಪ್ರಸಿದ್ಧ ಬಾಹ್ಯಕಾಶ ವಿಜ್ಞಾನಿ ಸತೀಶ್ ಧವನ್ ಅವರ ಹೆಸರಿನಲ್ಲಿ ʼಸತೀಶ್ ಧವನ್ʼ ಉಪಗ್ರಹವನ್ನು ಅಭಿವೃದ್ಧಿ ಪಡಿಸಿದೆ. ತನ್ನ ಮೊದಲ ಉಪಗ್ರಹ ಇದಾಗಿರುವ ಕಾರಣ ಇದರಲ್ಲಿ ಪ್ರಧಾನಿ ಮೋದಿಯವರ ಭಾವ ಚಿತ್ರವನ್ನು ಉಪಗ್ರಹದಲ್ಲಿ ಕಳುಹಿಸುವುದಾಗಿ ಸಂಸ್ಥೆಯ ಸಿಇಓ ಡಾ.ಶ್ರೀಮತಿ ಕೇಸನ್  ಉಡಾವಣೆಗೂ ಮೊದಲು ತಿಳಿಸಿದ್ದರು.  ಉಪಗ್ರಹದ ಪ್ಯಾನೆಲ್‌ಗೆ ಮೋದಿಯವರ ಫೋಟೋ ಇರಲಿದೆ. ಜೊತೆಗೆ ‘ಆತ್ಮನಿರ್ಭರ್ ಮಿಷನ್’ ವಾಕ್ಯಗಳ ಜೊತೆಗೆ ಧರ್ಮಗ್ರಂಥ ಭಗವದ್ಗೀತೆಯ ಎಲೆಕ್ಟ್ರಾನಿಕ್‌ ಪ್ರತಿ, 25 ಸಾವಿರ ದಿಯ ಹೆಸರುಗಳನ್ನು ಕೊಂಡೊಯ್ಯಲಿದೆ ಎಂದು ಅವರು ವಿವರಿಸಿದ್ದಾರೆ.

    ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ಹೆಸರುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ನಾವು ಮನವಿ ಮಾಡಿದ್ದೆವು. ಒಂದು ವಾರದಲ್ಲಿ 25 ಸಾವಿರ ಹೆಸರುಗಳು ನೋಂದಣಿಯಾದವು. ಈ ಪೈಕಿ 1 ಸಾವಿರ ವಿದೇಶಿಯರು ನೊಂದಣಿ ಮಾಡಿದ್ದಾರೆ. ಚೆನ್ನೈನ ಒಂದು ಶಾಲೆಯ ತನ್ನ ಎಲ್ಲ ವಿದ್ಯಾರ್ಥಿಗಳ ಹೆಸರನ್ನು ಕಳುಹಿಸಿದೆ. ಈ ಹೆಸರುಗಳೊಂದಿಗೆ ನಾವು ಮೋದಿಯವರ ಫೋಟೋವನ್ನು ಕಳುಹಿಸುತ್ತಿದ್ದೇವೆ. ಕೆಲ ವಿದೇಶಿ ಪ್ರಯೋಗಗಳಲ್ಲಿ ಆಯಾ ದೇಶಗಳು ಬೈಬಲ್‌ನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದವು. ಹಾಗಾಗಿ ನಮ್ಮ ದೇಶದ ಪವಿತ್ರ ಗ್ರಂಥ ಭಗವದ್ಗೀತೆಯನ್ನು ನಭಕ್ಕೆ ಕಳುಹಿಸಲು ನಾವು ಮುಂದಾಗಿದ್ದೇವೆ ಎಂದು ಡಾ. ಶ್ರೀಮತಿ ಮಾಹಿತಿ ನೀಡಿದ್ದಾರೆ.

    ಪ್ಯಾನೆಲ್‌ ಕೆಳಗಡೆ ಇಸ್ರೋ ಅಧ್ಯಕ್ಷ ಶಿವನ್‌ ಮತ್ತು ವೈಜ್ಞಾನಿಕ ಕಾರ್ಯದರ್ಶಿ ಡಾ.ಆರ್.ಉಮಾಮಹೇಶ್ವರನ್ ಅವರ ಹೆಸರು ಇರಲಿದೆ. ಉಪಗ್ರಹದಲ್ಲಿರುವ ಎಲೆಕ್ಟ್ರಾನಿಕ್ಸ್ ಮತ್ತು ಸರ್ಕ್ಯೂಟ್‌ ಸೇರಿದಂತೆ ಸೇರಿದಂತೆ ಎಲ್ಲವನ್ನೂ ಭಾರತದಲ್ಲಿ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ತಿಳಿಸಿದರು.

  • ವಿಜ್ಞಾನಿಗಳು ಸ್ಟಾರ್‌ಗಳಾದಾಗ ವಿಜ್ಞಾನ ಬೆಳೆಯಲಿದೆ – ಕೊಳ್ಳೇಗಾಲ ಶರ್ಮಾ

    ವಿಜ್ಞಾನಿಗಳು ಸ್ಟಾರ್‌ಗಳಾದಾಗ ವಿಜ್ಞಾನ ಬೆಳೆಯಲಿದೆ – ಕೊಳ್ಳೇಗಾಲ ಶರ್ಮಾ

    ಬೆಂಗಳೂರು: ವಿಜ್ಞಾನಿಯೊಬ್ಬನ ಕೂದಲ ವಿನ್ಯಾಸವನ್ನು ಕಾಲೇಜು ಯುವಕರು ಅನುಸರಿಸಿದ ದಿನ ನಮ್ಮಲ್ಲಿ ವಿಜ್ಞಾನ, ತಂತ್ರಜ್ಞಾನ ಅಭಿವೃದ್ಧಿ ಕಾಣಲಿದೆ. ಸ್ಟಾರ್ ನಟರು ಇದ್ದಂತೆ, ವಿಜ್ಞಾನಿಗಳು ತಾರೆಯರಾಗಬೇಕಿದೆ ಎಂದು ಸಿಎಫ್‍ಟಿಆರ್‌ಐನ ನಿವೃತ್ತ ವಿಜ್ಞಾನಿ ಹಾಗೂ ಹಿರಿಯ ವಿಜ್ಞಾನ ಬರಹಗಾರ ಕೊಳ್ಳೇಗಾಲ ಶರ್ಮ ಅಭಿಪ್ರಾಯಪಟ್ಟಿದ್ದಾರೆ.

    ಪ್ರೆಸ್ ಇನ್ಫರ್ಮೇಷನ್ ಬ್ಯುರೋ ಮತ್ತು ಕರ್ನಾಟಕ ಪತ್ರಕರ್ತೆಯರ ಸಂಘಗಳು ಶುಕ್ರವಾರ ಜಂಟಿಯಾಗಿ ಆಯೋಜಿಸಿದ್ದ `ಭಾರತದಲ್ಲಿ ವಿಜ್ಞಾನದ ಬೆಳವಣಿಗೆ’ ಕುರಿತ ವೆಬಿನಾರ್‌ನಲ್ಲಿ `ಅಭಿವೃದ್ಧಿಶೀಲ ಭಾರತದಲ್ಲಿ ವಿಜ್ಞಾನ’ ವಿಷಯದ ಕುರಿತು ಅವರು ಮಾತನಾಡಿದರು. ಡಿಸೆಂಬರ್ 22ರಿಂದ ಆರಂಭವಾಗಲಿರುವ `ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಮಹೋತ್ಸವ -2020’ಕ್ಕೆ ಪೂರ್ವಭಾವಿಯಾಗಿ ಈ ವೆಬಿನಾರ್ ಆಯೋಜಿಸಲಾಗಿತ್ತು.

    `ಭಾರತವು ಸಾವಿರಾರು ವರ್ಷಗಳಿಂದ ಅಭಿವೃದ್ಧಿ ಪಥದಲ್ಲಿದ್ದರೂ ಯಂತ್ರಗಳನ್ನಾಧರಿಸಿದ ಕೈಗಾರಿಕಾ ಕ್ರಾಂತಿ ಸಮಯದಲ್ಲಿ ಹಿಂದಕ್ಕೆ ಉಳಿಯಿತು. ಇದಕ್ಕೆ ಇಲ್ಲಿನ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳು ಕಾರಣ ಇರಬಹುದು. ಆದರೆ, 1958ರಲ್ಲಿ ಸ್ವಾತಂತ್ರ್ಯ ಬಂದ ಹೊಸದರಲ್ಲೇ ದೇಶದ ಅಭಿವೃದ್ಧಿಗೆ ವಿಜ್ಞಾನದ ಬೆಳವಣಿಗೆ ಅನಿವಾರ್ಯ ಎಂದು ಮನಗಂಡು ವೈಜ್ಞಾನಿಕ ನೀತಿಯನ್ನು ಆಡಳಿತದಲ್ಲಿ ಅಳವಡಿಸಿಕೊಂಡಿತ್ತು. ವೈಜ್ಞಾನಿಕ ಸಂಶೋಧನೆ ಮತ್ತು ಕೈಗಾರಿಕೆಗಳ ಬೆಳವಣಿಗೆಯ ನಡುವಿನ ಸಂಬಂಧ ಅರಿತುಕೊಂಡು ಸ್ವಾತಂತ್ರ್ಯಪೂರ್ವದಲ್ಲಿ 1942ರಲ್ಲೇ `ಕೌನ್ಸಿಲ್ ಆಫ್ ಸೈಂಟಿಫಿಕ್ ಎಂಡ್ ಇಂಡಸ್ಟ್ರಿಯಲ್ ರಿಸರ್ಚ್’ ಸ್ಥಾಪಿಸಲಾಗಿತ್ತು. ಪರಮಾಣು ವಿಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ, ಕೈಗಾರಿಕೆ, ಕೃಷಿ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸಿದೆ. ಆದರೆ, ದೇಶದ ಇತರ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಬೇಕಾದ ಸಲಕರಣೆ, ತಂತ್ರಜ್ಞಾನಗಳನ್ನು ಆಮದು ಮಾಡಿಕೊಳ್ಳದಂತೆ ನಾವು ಸ್ವಾವಲಂಬನೆ ಸಾಧಿಸುವ ಅಗತ್ಯವಿದೆ’ ಎಂದು ಶರ್ಮ ಅವರು ಪ್ರತಿಪಾದಿಸಿದರು.

    `ಭಾರತದಲ್ಲಿ ಕಂಪ್ಯೂಟರ್ ವಿಜ್ಞಾನದ ಇತಿಹಾಸ’ ದ ಕುರಿತು ಮಾತನಾಡಿದ ಇಜ್ಞಾನ.ಕಾಮ್ ಸಂಪಾದಕ ಶ್ರೀನಿಧಿ ಟಿ.ಜಿ. ಅವರು, `1931ರಲ್ಲಿ ಕೋಲ್ಕತ್ತದಲ್ಲಿ `ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‍ಸ್ಟಿಟ್ಯೂಟ್’ ಸ್ಥಾಪಿಸಿದ ಪ್ರಶಾಂತ್ ಚಂದ್ರ ಮಹಾಲಾನೋಬಿಸ್ ಅವರು ವಿದೇಶಗಳಲ್ಲಿ ನಡೆಯುತ್ತಿದ್ದ ಸಂಶೋಧನೆಗಳನ್ನು ಗಮನಿಸಿ, ತಮ್ಮ ಸಂಸ್ಥೆಯ ಕೆಲಸಗಳಿಗಾಗಿ ಕಂಪ್ಯೂಟರ್ ಅಗತ್ಯ ಮನಗಂಡು 1953ರಲ್ಲೇ ಅನಲಾಗ್ ಕಂಪ್ಯೂಟರನ್ನು ತಮ್ಮ ಪ್ರಯೋಗಾಲಯದಲ್ಲೇ ರೂಪಿಸಿದರು. ಆನಂತರ ಭಾರತದ ಪರಮಾಣು ವಿಜ್ಞಾನದ ಪಿತಾಮಹ ಅನಿಸಿಕೊಂಡ ಡಾ. ಹೋಮಿ ಭಾಬಾ ಅವರು, ಮುಂಬೈನ ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಫಂಡಮಂಟಲ್ ರಿಸರ್ಚ್‍ನಲ್ಲಿ ಕಂಪ್ಯೂಟರ್ ಅಭಿವೃದ್ಧಿಗೆ ಒತ್ತು ನೀಡಿದರು. ಟಿಐಎಫ್‍ಆರ್‌ನ ಪ್ರೊ. ನರಸಿಂಹನ್ ನೇತೃತ್ವದ ತಂಡ ಸತತ ಸಂಶೋಧನೆ ನಡೆಸಿ, 1960ರಲ್ಲಿ ಎಲೆಕ್ಟ್ರಾನಿಕ್ ಡಿಜಿಟಲ್ ಕಂಪ್ಯೂಟರ್ ರೂಪಿಸಿತು. ಇದು ಭಾರತದಲ್ಲೇ ಸಿದ್ಧಗೊಂಡ ಮೊದಲ ಡಿಜಿಟಲ್ ಕಂಪ್ಯೂಟರ್’ ಎಂದು ಮಾಹಿತಿ ನೀಡಿದರು. 50, 60 ದಶಕದಲ್ಲೇ ನಮ್ಮ ವಿಜ್ಞಾನಿಗಳು ಮಾಡಿದ ಸಾಧನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ಕಂಪ್ಯೂಟರ್ ಕ್ಷೇತ್ರದಲ್ಲಿ ನಾವು ಕೇವಲ ಬಳಕೆದಾರರಾಗದೇ ಮತ್ತಷ್ಟು ಆವಿಷ್ಕಾರಗಳನ್ನು ಮಾಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

    `ಎಲ್ ಅಂಡ್ ಟಿ’ ಸಂಸ್ಥೆಯ ಡಿಜಿಟಲ್ ಸೇವೆಗಳ ಮುಖ್ಯಸ್ಥರಾದ ಶಶಿಧರ್ ಡೊಂಗ್ರೆ ಅವರು, ಜಗತ್ ಪ್ರಸಿದ್ಧ ವಿಜ್ಞಾನಿಗಳ ಬಗ್ಗೆ ನಾಟಕ ಪ್ರಸ್ತುತಪಡಿಸಿ ವಿಜ್ಞಾನವನ್ನು ಜನಪ್ರಿಯಗೊಳಿಸಬಹುದಾಗಿದೆ ಎಂದು ಹೇಳಿದರು. ಯುರೋಪ್‍ನಲ್ಲಿ ವಿಜ್ಞಾನ ನಾಟಕಗಳು ಬಹು ಪ್ರಸಿದ್ಧವಾಗಿದ್ದು, ಕೆಲ ನಾಟಕಗಳು ಕನ್ನಡಕ್ಕೂ ಅನುವಾದಗೊಂಡು ರಂಗಕ್ಕೆ ಬಂದಿವೆ ಮತ್ತು ಜನಪ್ರಿಯವೂ ಆಗಿವೆ ಎಂದು ಅವರು ತಿಳಿಸಿದರು.

    ಪ್ರೆಸ್ ಇನ್ಫರ್ಮೇಷನ್ ಬ್ಯುರೋ ಅಧಿಕಾರಿ ಜಯಂತಿ ಸ್ವಾಗತಿಸಿದರು. ಪತ್ರಕರ್ತೆಯರ ಸಂಘದ ಕಾರ್ಯದರ್ಶಿ ಮಾಲತಿ ಭಟ್ ವಂದಿಸಿದರು. ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್, ಹಿರಿಯ ಪತ್ರಕರ್ತೆಯರಾದ ಎಂ. ಪಿ. ಸುಶೀಲಾ, ಕೆ. ಎಚ್. ಸಾವಿತ್ರಿ, ಸಿ. ಜಿ. ಮಂಜುಳಾ, ಪತ್ರಕರ್ತ ಮತ್ತು ಬರಹಗಾರ ಜಿ. ಎನ್. ಮೋಹನ್, ಪತ್ರಕರ್ತೆಯರಾದ ಎಸ್. ನಯನಾ, ಚಿತ್ರಾ ಫಾಲ್ಗುಣಿ, ಶ್ರೀಜಾ ವಿ. ಎನ್. ಜಗದೀಶ್ವರಿ ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದರು.

  • ಹೊಸ ರೂಪದಲ್ಲಿ ಇಜ್ಞಾನ.ಕಾಂ

    ಹೊಸ ರೂಪದಲ್ಲಿ ಇಜ್ಞಾನ.ಕಾಂ

    –  ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮಾಹಿತಿ ನೀಡುವ ಜಾಲತಾಣ  ಅನಾವರಣ
    – ಇಜ್ಞಾನ ಟ್ರಸ್ಟ್ ನಿರ್ವಹಿಸುತ್ತಿರುವ ಲಾಭಾಪೇಕ್ಷೆಯಿಲ್ಲದ ಜಾಲತಾಣ ಈಗ ಇನ್ನಷ್ಟು ವೈವಿಧ್ಯಮಯ

    ಮೈಸೂರು: ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮಾಹಿತಿಯ ಪ್ರಕಟಣೆಗೆ ಹೆಸರುವಾಸಿಯಾಗಿರುವ  ejnana.com  ಜಾಲತಾಣದ ಹೊಸ ರೂಪ  ಲೋಕಾರ್ಪಣೆಯಾಗಿದೆ.

    ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದಲ್ಲಿ ನಡೆಯುತ್ತಿರುವ ವಿಜ್ಞಾನ ಸಂವಹನ ಸಮಾವೇಶದ ಉದ್ಘಾಟನಾ ಸಮಾರಂಭದ ನಂತರ ಇಜ್ಞಾನ ಜಾಲತಾಣದ ಹೊಸ ಆವೃತ್ತಿಯನ್ನು ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯದ ನಿರ್ದೇಶಕರಾದ ಡಾ. ಕೆ ಎಸ್ ಎಂ ಎಸ್ ರಾಘವರಾವ್, ಹಿರಿಯ ಪ್ರಧಾನ ವಿಜ್ಞಾನಿ ಎಎಸ್ ಕೆವಿಎಸ್ ಶರ್ಮ, ವಿಜ್ಞಾನ ಪ್ರಸಾರ್ ಪ್ರಮುಖ ವಿಜ್ಞಾನಿ ಡಾ. ಟಿ ವಿ ವೆಂಕಟೇಶ್ವರನ್   ಲೋಕಾರ್ಪಣೆಗೊಳಿಸಿದರು.

    2007ರಲ್ಲಿ ಪ್ರಾರಂಭವಾದ ಇಜ್ಞಾನ ಜಾಲತಾಣವು ವೈವಿಧ್ಯಮಯ ಮಾಹಿತಿಯ ನಿರಂತರ ಪ್ರಕಟಣೆಯಿಂದಾಗಿ ಕನ್ನಡದ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಸಂವಹನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವ ಉದ್ದೇಶದಿಂದ ಜಾಲತಾಣವನ್ನು ಇದೀಗ ಉನ್ನತೀಕರಿಸಲಾಗಿದ್ದು, ಹೊಸ ವಿನ್ಯಾಸದ ಜೊತೆಗೆ ಅನೇಕ ಹೊಸ ವಿಭಾಗಗಳನ್ನೂ ಪ್ರಾರಂಭಿಸಲಾಗಿದೆ. ಇದನ್ನೂ ಓದಿ: ಮೈಸೂರಿನಲ್ಲಿ ಸೆ.20, 21 ರಂದು ರಾಜ್ಯಮಟ್ಟದ ವಿಜ್ಞಾನ ಸಮ್ಮೇಳನ

    ಹೊಸ ಸ್ವರೂಪದ ಜಾಲತಾಣದಲ್ಲಿ ಬೆಂಗಳೂರು ಮೂಲದ ಕ್ವಿನ್‍ಟೈಪ್ ಟೆಕ್ನಾಲಜೀಸ್ ಸಂಸ್ಥೆ ರೂಪಿಸಿರುವ ಡಿಜಿಟಲ್ ಪಬ್ಲಿಶಿಂಗ್ ತಂತ್ರಜ್ಞಾನವನ್ನು ಬಳಸಲಾಗಿದ್ದು, ಅದು ಇಜ್ಞಾನದ ಮಾಹಿತಿ ನಿರ್ವಹಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲಿದೆ. ಈ ತಂತ್ರಜ್ಞಾನವನ್ನು ಇಜ್ಞಾನ ಜಾಲತಾಣಕ್ಕೆ ಯಾವುದೇ ಶುಲ್ಕವಿಲ್ಲದೆ ಒದಗಿಸುವ ಮೂಲಕ ಕ್ವಿನ್‍ಟೈಪ್ ಸಂಸ್ಥೆ ಕನ್ನಡದಲ್ಲಿ ವಿಜ್ಞಾನ ಸಂವಹನವನ್ನು ಬಲಪಡಿಸಲು ಮುಂದಾಗಿರುವುದು ಶ್ಲಾಘನೀಯವಾಗಿದೆ.

    ಇಜ್ಞಾನ ಜಾಲತಾಣದ ಕುರಿತು:
    ಬೆಂಗಳೂರಿನ ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆ ಇಜ್ಞಾನ ಜಾಲತಾಣವನ್ನು ನಿರ್ವಹಿಸುತ್ತಿದ್ದು, ವಿಜ್ಞಾನ-ತಂತ್ರಜ್ಞಾನದ ವಿಷಯಗಳನ್ನು ಜನರಿಗೆ ಸರಳವಾಗಿ ತಲುಪಿಸುವ ಪ್ರಯತ್ನಗಳಲ್ಲಿ ತೊಡಗಿಕೊಂಡಿದೆ. ತಂತ್ರಜ್ಞಾನ ಬರಹಗಾರ ಟಿ. ಜಿ. ಶ್ರೀನಿಧಿ ಈ ತಾಣದ ಸ್ಥಾಪಕ ಸಂಪಾದಕರಾಗಿದ್ದಾರೆ. 2017ರ ಇಂಡಿಯನ್ ಬ್ಲಾಗರ್ ಅವಾರ್ಡ್ಸ್‌ನಲ್ಲಿ ಇಜ್ಞಾನ ಜಾಲತಾಣಕ್ಕೆ ಅತ್ಯುತ್ತಮ ಕನ್ನಡ ಬ್ಲಾಗ್ ಎಂಬ ಗೌರವ ದೊರೆತಿದೆ.

  • ಮೈಸೂರಿನಲ್ಲಿ ಸೆ.20, 21 ರಂದು ರಾಜ್ಯಮಟ್ಟದ ವಿಜ್ಞಾನ ಸಮ್ಮೇಳನ

    ಮೈಸೂರಿನಲ್ಲಿ ಸೆ.20, 21 ರಂದು ರಾಜ್ಯಮಟ್ಟದ ವಿಜ್ಞಾನ ಸಮ್ಮೇಳನ

    ಬೆಂಗಳೂರು: ಮೈಸೂರು ಸಿಎಸ್‍ಐಆರ್-ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ, ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್ ನವದೆಹಲಿಯ ವಿಜ್ಞಾನ ಪ್ರಸಾರ್ ನೆರವಿನೊಂದಿಗೆ ಮೈಸೂರಿನಲ್ಲಿ ಇದೇ ಸೆಪ್ಟೆಂಬರ್ 20-21ರಂದು ಕನ್ನಡದಲ್ಲಿ ವಿಜ್ಞಾನ ಸಂವಹನ: ನಿನ್ನೆ, ಇಂದು ಮತ್ತು ನಾಳೆಯ ನಡೆಗಳು ಎನ್ನುವ ವಿಷಯದ ಬಗ್ಗೆ ರಾಜ್ಯ ಮಟ್ಟದ ಸಮಾವೇಶ ಆಯೋಜನೆಗೊಂಡಿದೆ.

    ವಿಜ್ಞಾನ ಸಂವಹನ ಕ್ಷೇತ್ರದಲ್ಲಿ ಆಸಕ್ತರಾಗಿರುವ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳು, ಮಾಧ್ಯಮಗಳು, ವ್ಯಕ್ತಿಗಳು ಹಾಗೂ ಪ್ರಕಾಶಕರಿಗೆ ಕನ್ನಡದಲ್ಲಿ ವಿಜ್ಞಾನ ಸಂವಹನ ಕುರಿತು ಚರ್ಚಿಸಲು ಇದು ವೇದಿಕೆಯನ್ನು ಒದಗಿಸಲಿದೆ.

    ಸಂವಹನಕಾರರ ವಿಚಾರಗಳು, ಸರ್ಕಾರಿ ಸಂಸ್ಥೆಗಳ ಕೊಡುಗೆ, ಮಾಧ್ಯಮಗಳ ಪಾತ್ರ, ಪತ್ರಿಕೆಗಳು ಹಾಗೂ ಪ್ರಕಾಶನ, ಸರ್ಕಾರೇತರ ಸಂಸ್ಥೆಗಳ ಕೊಡುಗೆ ಈ ವಿಚಾರದ ಬಗ್ಗೆ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ. ಸೆ.20ರಂದು ಬೆಳಗ್ಗೆ 9.30ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ದೆಹಲಿಯ ವಿಜ್ಞಾನ ಪ್ರಸಾರ್ ನಿರ್ದೇಶಕ ಡಾ. ನಕುಲ್ ಪರಾಶರ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿಜ್ಞಾನ ಸಂವಹನ ಚಳುವಳಿಯ ಬಗ್ಗೆ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರಿನ ಸಿಎಫ್‌ಟಿಆರ್‌ಐ ನಿರ್ದೇಶಕ ಡಾ.ಕೆಎಸ್‍ಎಂಎಸ್ ರಾಘವರಾವ್ ಭಾಗವಹಿಸಲಿದ್ದಾರೆ. ಡಾ. ಟಿವಿ. ವೆಂಕಟೇಶ್ವರನ್ ಅವರು ವಿಜ್ಞಾನ್ ಪ್ರಸಾರ್ ಬಗ್ಗೆ ಮಾತನಾಡಲಿದ್ದಾರೆ.

    ಮುಂಚಿತವಾಗಿ ಹೆಸರು ನೋಂದಾಯಿಸಿದವರಿಗೆ ಮಾತ್ರ ಈ ಸಮಾವೇಶದಲ್ಲಿ ಭಾಗವಹಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ  iandp.cftri@gmail.com  ಸಂಪರ್ಕಿಸಬಹುದು.

  • ಭಾರತ ಮುಂದೆ ಬರಬೇಕಾದರೆ ವಿಜ್ಞಾನದಲ್ಲಿ ಪ್ರಗತಿ ಕಾಣಬೇಕು: ಸಿಎನ್‍ಆರ್ ರಾವ್

    ಭಾರತ ಮುಂದೆ ಬರಬೇಕಾದರೆ ವಿಜ್ಞಾನದಲ್ಲಿ ಪ್ರಗತಿ ಕಾಣಬೇಕು: ಸಿಎನ್‍ಆರ್ ರಾವ್

    – ಚೀನಾ ವಿಜ್ಞಾನದಲ್ಲಿ ಮುಂದೆ ಬರುವುದನ್ನು ನೋಡಿದ್ರೆ ಭಯವಾಗುತ್ತೆ

    ಧಾರವಾಡ: ವಿಜ್ಞಾನದಲ್ಲಿ ಚೀನಾ ದೇಶ ಮುಂದೆ ಬಂದಿರುವುದನ್ನು ನೋಡಿದರೆ ತುಂಬಾ ಭಯ ಆಗುತ್ತದೆ. ಚೀನಾ ವಿಜ್ಞಾನದ ಮೂಲಕವೇ ಮುಂದೇ ಬರುತ್ತಿದೆ ಎಂದು ಹಿರಿಯ ವಿಜ್ಞಾನಿ ಭಾರತ ರತ್ನ ಡಾ. ಸಿಎನ್‍ಆರ್ ರಾವ್ ಹೇಳಿದ್ದಾರೆ.

    ಧಾರವಾಡದಲ್ಲಿ ನಡೆದ ಕರ್ನಾಟಕ ಪ್ರೌಢಶಾಲೆ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಅರ್ಥಶಾಸ್ತ್ರ, ಸೈನ್ಯ ಬೆಳೆಸುವುದಕ್ಕಿಂತ ವಿಜ್ಞಾನದಲ್ಲಿ ಮುಂದೆ ಬರಬೇಕು. ಚೀನಾಗೆ ವಿಜ್ಞಾನ ವಿಚಾರದಲ್ಲಿ ಹುಚ್ಚು ಬಂದು ಬಿಟ್ಟಿದೆ. ಎಲ್ಲಿ ಹೋದರೂ ಚೀನಾ ಇದೆ, ನಾನು ಜಗತ್ತಿನಲ್ಲಿ ಯಾವುದೇ ಕಾಲೇಜ್, ವಿಶ್ವವಿದ್ಯಾಲಯಕ್ಕೆ ಹೋದರೂ ಅಲ್ಲಿ ಚೀನಾ ಇದೆ ಎಂದು ಹೇಳಿದ ಅವರು, ಸಾವಿರಾರು ಜನ ವಿಜ್ಞಾನಿಗಳು ಅಲ್ಲಿಂದ ಬರುತ್ತಾರೆ ಎಂದರು.

    ಇದನ್ನು ನೋಡಿದಾಗ ಅಯ್ಯೋ ರಾಮ ಇವರು ಈ ತರಹ ಬೆಳೆಯುತ್ತಿದ್ದರೆ ನಮ್ಮ ದೇಶಕ್ಕೆ ಭವಿಷ್ಯ ಇದೆಯಾ ಅನಿಸುತ್ತೆ ಎಂದ ರಾವ್, ಅಮೇರಿಕಾ, ಜಪಾನ್, ಚೀನಾಗಳನ್ನು ಮೀರಿ ನಾವು ಇಂದು ಜಗತ್ತಿನಲ್ಲಿ ಒಳ್ಳೆ ವಿಜ್ಞಾನಿಯಾಗಬೇಕಿದೆ. ಇನ್ನು ಅವರನ್ನು ಮೀರಿಸಿ ಇಲ್ಲವೇ ಅವರಿಗೆ ಸಮಾನವಾಗಿ ಭಾರತದ ವಿಜ್ಞಾನಿ ಬೆಳೆಯಬೇಕಾದರೆ ಬಹಳ ಕಷ್ಟ ಇದೆ. ನಾವೆಲ್ಲ ರಾಜಕೀಯವಾಗಿ ಭಾಷಣ ಮಾಡಬಹುದು, ಆದರೆ ಭಾರತ ಮುಂದೆ ಬರಬೇಕಾದರೆ ವಿಜ್ಞಾನದಲ್ಲಿ ಮುಂದೆ ಬರಬೇಕಿದೆ ಎಂದು ಹೇಳಿದರು.

  • ಪ್ರತಿಯೊಬ್ಬ ಭಾರತೀಯರು ಇಂದು ಹೆಮ್ಮೆ ಪಡುವ ದಿನ – ಮೋದಿ

    ಪ್ರತಿಯೊಬ್ಬ ಭಾರತೀಯರು ಇಂದು ಹೆಮ್ಮೆ ಪಡುವ ದಿನ – ಮೋದಿ

    ನವೆದೆಹಲಿ: ಇಂದು ಭಾರತದ ಬಹು ನಿರೀಕ್ಷಿತ ಚಂದ್ರಯಾನ-2 ಯಶಸ್ವಿ ಉಡಾವಣೆಯಾಗಿದ್ದು, ಈ ವಿಚಾರಕ್ಕೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಇಂದು ಪ್ರತಿಯೊಬ್ಬ ಭಾರತೀಯರು ಹೆಮ್ಮೆ ಪಡುವ ದಿನ ಎಂದು ಟ್ವೀಟ್ ಮಾಡಿದ್ದಾರೆ.

    ಇಂದು ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್‍ಎಲ್‍ವಿ ಮಾರ್ಕ್-3 ರಾಕೆಟ್ ಮಧ್ಯಾಹ್ನ 2.41ಕ್ಕೆ ನಭಕ್ಕೆ ಚಿಮ್ಮಿದೆ. ಈ ಮೂಲಕ ಈ ಸಾಧನೆ ಮಾಡುತ್ತಿರುವ ಜಗತ್ತಿನ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

    ಇಸ್ರೋ ವಿಜ್ಞಾನಿಗಳ ಈ ಸಾಧನೆಯನ್ನು ಮೆಚ್ಚಿ ಮೋದಿ ಅವರು ಟ್ವೀಟ್ ಮಾಡಿದ್ದು, ಇದು ನಮ್ಮ ದೇಶದ ವಿಶೇಷ ಕ್ಷಣ. ಇದು ಇತಿಹಾಸ ವಾರ್ಷಿಕೋತ್ಸವಗಳಲ್ಲಿ ಕೆತ್ತಲ್ಪಡುತ್ತದೆ! ಚಂದ್ರಯಾನ-2 ರ ಉಡಾವಣೆಯು ನಮ್ಮ ವಿಜ್ಞಾನಿಗಳ ಪರಾಕ್ರಮ ಮತ್ತು ವಿಜ್ಞಾನದ ಹೊಸ ಆವಿಷ್ಕಾರವನ್ನು ವಿವರಿಸುತ್ತದೆ ಮತ್ತು 130 ಕೋಟಿ ಭಾರತೀಯರ ವಿಜ್ಞಾನದ ಹೊಸ ಗಡಿನಾಡುಗಳನ್ನು ಅಳೆಯಲು ಸಹಾಯವಾಗುತ್ತದೆ. ಪ್ರತಿಯೊಬ್ಬ ಭಾರತೀಯನೂ ಇಂದು ಅಪಾರ ಹೆಮ್ಮೆ ಪಡುತ್ತಾನೆ!”ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

    ಚಂದ್ರಯಾನ-2 ನಂತಹ ಪ್ರಯತ್ನಗಳು ನಮ್ಮ ಯುವ ಪೀಳಿಗೆಯನ್ನು ವಿಜ್ಞಾನದ ಕಡೆಗೆ ಮತ್ತಷ್ಟು ಪ್ರೋತ್ಸಾಹಿಸುತ್ತದೆ. ಇದು ಭಾರತದ ಉನ್ನತ ಗುಣಮಟ್ಟದ ಸಂಶೋಧನೆ ಮತ್ತು ಆವಿಷ್ಕಾರ. ಚಂದ್ರಯಾನದ ತಂಡಕ್ಕೆ ಧನ್ಯವಾದಗಳು, ಈ ಕಾರ್ಯಕ್ರಮ ಇನ್ನಷ್ಟು ಉತ್ತೇಜನ ಪಡೆಯಲಿ. ಚಂದ್ರಯಾನ-2 ಏಕೆ ವಿಶಿಷ್ಟ ಎಂದರೆ ಅದು ಚಂದ್ರನ ದಕ್ಷಿಣ ಧ್ರುವಕ್ಕೆ ಹೋಗುತ್ತದೆ. ಈ ಹಿಂದೆ ಯಾವ ದೇಶದ ಉಪಗ್ರಹವು ಕೂಡ ದಕ್ಷಿಣ ಧ್ರುವಕ್ಕೆ ಹೋಗಿಲ್ಲ ಎಂದು ಮೋದಿ ಹೇಳಿದ್ದಾರೆ.

    ಚಂದ್ರನ ದಕ್ಷಿಣ ಧ್ರುವ ಆಯ್ಕೆ ಏಕೆ..?
    ಚಂದ್ರನ ದಕ್ಷಿಣ ಧ್ರುವ ವಿಶಿಷ್ಟವಷ್ಟೇ ಅಲ್ಲದೆ ಕುತೂಹಲಕಾರಿ. ಈ ಭಾಗ ಕತ್ತಲಿನಿಂದ ಕೂಡಿದ್ದು ಉತ್ತರ ಭಾಗಕ್ಕೆ ಹೋಲಿಸಿದರೆ ಇಲ್ಲಿನ ಮೇಲ್ಮೈ ಪ್ರದೇಶದ ವ್ಯಾಪ್ತಿ ದೊಡ್ಡದು. ಶಾಶ್ವತವಾಗಿ ಕತ್ತಲಿನಿಂದ ಕೂಡಿರುವ ಈ ಪ್ರದೇಶದಲ್ಲಿ ನೀರಿನ ಅಸ್ತಿತ್ವ ಇರುವ ಸಾಧ್ಯತೆಯಿದೆ. ದಕ್ಷಿಣ ಧ್ರುವದಲ್ಲಿರುವ ಕುಳಿಗಳು ಬಹಳ ತಂಪಾಗಿವೆ. ಸೌರಮಂಡಲ ವ್ಯವಸ್ಥೆ ಸೃಷ್ಟಿಯ ಹಂತದ ದಾಖಲೆಗಳನ್ನೂ ಹೊಂದಿರುವ ಸಾಧ್ಯತೆ.

    ಚಂದ್ರನ ಆಯ್ಕೆ ಏಕೆ?
    ಚಂದ್ರ ನಮಗೆ ಅತಿ ಹತ್ತಿರದ ಆಕಾಶಕಾಯವಾಗಿದ್ದು ಸಂಶೋಧನೆ ಮತ್ತು ದಾಖಲೀಕರಣ ಸುಲಭ. ಬಾಹ್ಯಾಕಾಶ ತಂತ್ರಜ್ಞಾನ ಪರೀಕ್ಷೆಯ ಭರವಸೆಯ ಪ್ರಯೋಗಾಲಯ. ಹಲವು ಪ್ರಯೋಗಗಳಿಗೆ ಚಂದ್ರಯಾನ ವೇದಿಕೆಯಾಗಲಿದೆ.

    ಚಂದ್ರಯಾನ-2ಗೆ ಮಹಿಳಾ ವಿಜ್ಞಾನಿಗಳ ಮುಂದಾಳತ್ವ
    ಯೋಜನಾ ತಂಡದಲ್ಲಿ ಶೇ.30ರಷ್ಟು ಮಹಿಳೆಯರು ಕಾರ್ಯನಿರ್ವಹಿಸಿದ್ದು, ಇಬ್ಬರು ಮಹಿಳೆಯರು ನೇತೃತ್ವ ವಹಿಸಿಕೊಂಡಿದ್ದಾರೆ. ಯೋಜನಾ ನಿರ್ದೇಶಕಿ ಎಂ. ವನಿತಾ, ಅಭಿಯಾನ ನಿರ್ದೇಶಕಿ ರಿತು ಕರಿಧಾಲ್ ಅವರಿಗೆ ಇಸ್ರೋದಲ್ಲಿ 20 ವರ್ಷ ಸೇವೆಗಳ ಅನುಭವವಿದೆ. ಮಂಗಳಯಾನ ಸೇರಿ ಪ್ರಮುಖ ಯೋಜನೆಗಳಲ್ಲಿ ಇಬ್ಬರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಚಂದ್ರಯಾನ-2 ಗೆ 620 ಸರ್ಕಾರಿ, ಖಾಸಗಿ ಕಂಪನಿಗಳು, ಐಐಎಸ್ಸಿ, ಐಐಟಿ ಸೇರಿದಂತೆ ದೇಶದ ಪ್ರಮುಖ 15 ಶಿಕ್ಷಣಗಳ ಕೇಂದ್ರಗಳು ನಾನಾ ರೀತಿಯಲ್ಲಿ ಕೆಲಸ ಮಾಡಿವೆ.

  • ಪೈಲಟ್ ಪ್ರಾಜೆಕ್ಟ್ ಈಗಷ್ಟೇ ಮುಗಿದಿದೆ, ರಿಯಲ್ ಬಾಕಿಯಿದೆ: ಪ್ರಧಾನಿ ಮೋದಿ

    ಪೈಲಟ್ ಪ್ರಾಜೆಕ್ಟ್ ಈಗಷ್ಟೇ ಮುಗಿದಿದೆ, ರಿಯಲ್ ಬಾಕಿಯಿದೆ: ಪ್ರಧಾನಿ ಮೋದಿ

    ನವದೆಹಲಿ: ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರೋಕ್ಷವಾಗಿ ಪಾಕ್ ಕಸ್ಟಡಿಯಲ್ಲಿರುವ ಕಮಾಂಡರ್ ಅಭಿನಂದನ್ ಬಿಡುಗಡೆಯಾಗುತ್ತಿರುವ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.

    ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಯಾವುದೇ ಪ್ರಾಜೆಕ್ಟ್ ತಯಾರಿಸುವ ಮೊದಲು ಪೈಲಟ್ ಪ್ರಾಜೆಕ್ಟ್ ಮಾಡಲಾಗುತ್ತದೆ. ಆ ಪೈಲೆಟ್ ಪ್ರಾಜೆಕ್ಟ್ ಈಗಷ್ಟೇ ಮುಗಿದಿದೆ ಂದು ಹೇಳಿದರು.

    ಮೋದಿ ಈ ಮಾತನ್ನು ಹೇಳುತ್ತಿದ್ದಂತೆ ನೆರೆದಿದ್ದ ಸಭಿಕರು ಚಪ್ಪಾಳೆ ತಟ್ಟಿದರು. ನಂತರ ಮಾತು ಮುಂದುರಿಸಿದ ಮೋದಿ ಪೈಲಟ್ ಪ್ರಾಜೆಕ್ಟ್ ಈಗ ಪೂರ್ಣಗೊಂಡಿದ್ದು ರಿಯಲ್ ಬಾಕಿ ಇದೆ. ರಿಯಲ್ ಪ್ರಾಜೆಕ್ಟ್ ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು.

    ಮೋದಿ ಅವರು ವೇದಿಕೆ ಬರುತ್ತಿದಂತೆ ಚಪ್ಪಾಳೆ ತಟ್ಟುವ ಮೂಲಕ ಸ್ವಾಗತ ಕೋರಿದ ವಿಜ್ಞಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಮೋದಿ, ವಿಜ್ಞಾನ ದಿವಸ ಎಂದ ಕೂಡಲೇ ನಮಗೇ ರಾಮನ್ ಅವರ ಸಿದ್ಧಾಂತ ನೆನಪಾಗುತ್ತದೆ. ವಿಜ್ಞಾನಿಗಳು ದೇಶಕ್ಕೆ ನೀಡಿದ ಕೊಡುಗೆ ಅಪಾರ. ನಿಮ್ಮ ಪ್ರಯತ್ನ, ಕಾರ್ಯಗಳು ದೇಶಕ್ಕೆ ಲಾಭ ನೀಡಿದೆ ಎಂದರು.

    ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಎಂದ ಪ್ರಧಾನಿಗಳು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದರು. ವಿಜ್ಞಾನವನ್ನು ಸಮಾಜದೊಂದಿಗೆ ಜೋಡಣೆ ಮಾಡಿ ಜನರ ಅಗತ್ಯಗಳನ್ನು ಪೂರೈಕೆ ಮಾಡಬೇಕು. ವಿಶ್ವಮಟ್ಟದಲ್ಲಿ ನಮ್ಮ ವಿಜ್ಞಾನದ ಬಗ್ಗೆ ಉತ್ತಮ ಅಭಿಪ್ರಾಯ ಇದೆ. ನಮ್ಮ ಮೌಲ್ಯ ಮತ್ತಷ್ಟು ಹೆಚ್ಚಾಗಿದೆ. ಅಂತರಿಕ್ಷ ಮಾನವನನ್ನು ಕಳಹಿಸುವ ನಮ್ಮ ನಮ್ಮ ಗುರಿ ತಲುಪಬೇಕಿದೆ ಎಂದು ಕರೆ ನೀಡಿದರು.

    ದೇಶ ವಿಜ್ಞಾನವನ್ನು ಮತ್ತಷ್ಟು ಸಫಲವಾಗುವಂತೆ ಮಾಡಲು ದೇಶದ ಐಐಎಸ್‍ಸಿಗಳಿಗೆ ಸ್ವಯತ್ತಾತೆಯನ್ನು ನೀಡುವ ಚಿಂತನೆ ಇದೆ. ಈ ಮೂಲಕ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ದೇಶದ ಪ್ರತಿಯೊಬ್ಬ ಜೀವನದ ಬದಲಾವಣೆಗೆ ವಿಜ್ಞಾನ, ತಂತ್ರಜ್ಞಾನದ ಕೊಡುಗೆ ಬೇಕಾಗಿದೆ. ವಿವಿಧ ಯೋಚನೆಗಳ ಮೂಲಕ ಪ್ರತಿಯೊಬ್ಬ ಕೊಡುಗೆ ಭಿನ್ನವಾಗಿರುತ್ತದೆ. ಭವಿಷ್ಯವನ್ನು ಮತ್ತಷ್ಟು ಉಜ್ವಲಗೊಳಿಸುತ್ತಾ ನಮ್ಮ ಸಂಶೋಧನೆಗಳು ಸಾಗಬೇಕಿದೆ. ಕೃಷಿ, ಸ್ವಚ್ಛತೆ, ತಂತ್ರಜ್ಞಾನ, ಇಂಧನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮತ್ತಷ್ಟು ಸಂಶೋಧನೆಗಳು ಆಗಬೇಕಿದ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕನ್ನಡದ ಮೊದಲ ವಿಜ್ಞಾನ ಪತ್ರಿಕೆಗೆ ನೂರು ವರ್ಷ: ನ.11ರಂದು ‘ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ’ ಸಂವಾದ ಕಾರ್ಯಕ್ರಮ

    ಕನ್ನಡದ ಮೊದಲ ವಿಜ್ಞಾನ ಪತ್ರಿಕೆಗೆ ನೂರು ವರ್ಷ: ನ.11ರಂದು ‘ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ’ ಸಂವಾದ ಕಾರ್ಯಕ್ರಮ

    ಬೆಂಗಳೂರು: ಕನ್ನಡದ ಮೊದಲ ವಿಜ್ಞಾನ ಪತ್ರಿಕೆ ‘ವಿಜ್ಞಾನ’ ಪ್ರಕಟವಾಗಿ ಇದೀಗ ನೂರು ವರ್ಷ ಸಂದಿದ್ದು, ಈ ಸಂದರ್ಭದಲ್ಲಿ ಬೆಂಗಳೂರಿನ ಬಿ. ವಿ. ಜಗದೀಶ್ ವಿಜ್ಞಾನ ಕೇಂದ್ರವು ಇಜ್ಞಾನ ಟ್ರಸ್ಟ್ ಹಾಗೂ ಉದಯಭಾನು ಕಲಾಸಂಘದ ಸಹಯೋಗದೊಡನೆ ಸಂವಾದ ಕಾರ್ಯಕ್ರಮವೊಂದನ್ನು ಏರ್ಪಡಿಸಿದೆ.

    ಈ ಕಾರ್ಯಕ್ರಮ ಬರುವ ನವೆಂಬರ್ 11ರಂದು ಬೆಳಿಗ್ಗೆ 10 ಗಂಟೆಯಿಂದ ಜಯನಗರದ ನ್ಯಾಶನಲ್ ಕಾಲೇಜು ಆವರಣದಲ್ಲಿರುವ ಬಿ. ವಿ. ಜಗದೀಶ್ ವಿಜ್ಞಾನ ಕೇಂದ್ರದಲ್ಲಿ ನಡೆಯಲಿದೆ. ಕನ್ನಡದ ಮುದ್ರಣ ಮಾಧ್ಯಮ, ಟೀವಿ, ರೇಡಿಯೋ ಹಾಗೂ ಜಾಲತಾಣಗಳಲ್ಲಿ ವಿಜ್ಞಾನ ಸಂವಹನದ ಸ್ಥಿತಿ-ಗತಿಗಳನ್ನು ಕುರಿತು ಆಯಾ ಕ್ಷೇತ್ರದ ಪರಿಣತರೊಡನೆ ಈ ಸಂದರ್ಭದಲ್ಲಿ ಚರ್ಚೆಗೆ ಅವಕಾಶ ಇರಲಿದೆ.

    ದಿವಂಗತ ಬೆಳ್ಳಾವೆ ವೆಂಕಟನಾರಣಪ್ಪ ಹಾಗೂ ನಂಗಪುರಂ ವೆಂಕಟೇಶ ಅಯ್ಯಂಗಾರರು 1918ರಲ್ಲಿ ಪ್ರಾರಂಭಿಸಿದ್ದ ‘ವಿಜ್ಞಾನ’ ಪತ್ರಿಕೆ ಕನ್ನಡ ಪತ್ರಿಕೋದ್ಯಮದಲ್ಲೊಂದು ಮಹತ್ವದ ಮೈಲಿಗಲ್ಲು. ವಿಜ್ಞಾನ ಬರಹಗಳನ್ನು ಸಾಮಾನ್ಯ ಓದುಗರಿಗೂ ಪರಿಚಯಿಸಿದ ಈ ಅಪರೂಪದ ಪ್ರಯತ್ನದ ಕುರಿತು ಇದೇ ಸಂದರ್ಭದಲ್ಲಿ ಪ್ರೊ. ಎಚ್. ಆರ್. ರಾಮಕೃಷ್ಣರಾವ್ ಉಪನ್ಯಾಸ ನೀಡಲಿದ್ದಾರೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಮಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಘಟಿಕೋತ್ಸವ

    ರಾಮಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಘಟಿಕೋತ್ಸವ

    ಬೆಂಗಳೂರು: ರಾಮಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆವರಣದಲ್ಲಿ ಬಿಇ, ಬಿಆರ್ಕ್, ಎಂ.ಟೆಕ್, ಎಂ. ಆರ್ಕ್, ಎಂಬಿಎ, ಮತ್ತು ಎಂಸಿಎಯ ಘಟಿಕೋತ್ಸವ ಸಮಾರಂಭದಲ್ಲಿ ಚೆನ್ನೈನ ಅಣ್ಣಾ ವಿಶ್ವ ವಿದ್ಯಾಲಯದ ಉಪ ಕುಲಪತಿಗಳಾದ ಡಾ. ಎಂ.ಕೆ. ಸೂರಪ್ಪ ಪದವಿ ಪ್ರದಾನ ಮಾಡಿದರು.

    13 ಬಿಇ , 45 ವಿವಿಧ ಸ್ನಾತಕೋತ್ತರ ವಿಭಾಗದಲ್ಲಿ ಒಟ್ಟು 1,200 ವಿದ್ಯಾರ್ಥಿಗಳಿಗೆ ಪದವಿ ಪಡೆದರು. ಇದರಲ್ಲಿ ವಿವಿಧ ವಿಭಾಗದಲ್ಲಿ 29 ವಿದ್ಯಾರ್ಥಿಗಳಿಗೆ ಚಿನ್ನ, 16 ಬೆಳ್ಳಿ, 25 ಕಂಚಿನ ಪದಕ ಪಡೆದರು.

    ಸಮಾರಂಭದಲ್ಲಿ ಡಾ. ಎಂ.ಕೆ. ಸೂರಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆರೋಗ್ಯ, ಶಿಕ್ಷಣದಲ್ಲಿ ದೇಶ ಹಿಂದುಳಿದಿದ್ದು, ಇದರ ಕಡೆ ದೇಶ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕಾಗಿದೆ. ಅಮೆರಿಕ, ಚೀನಾ, ಜಪಾನ್ ರಾಷ್ಟ್ರಗಳು ತಂತ್ರಜ್ಞಾನದಲ್ಲಿ ಅಭಿವೃದ್ಧಿ ಹೊಂದಿವೆ. ಪಾಕಿಸ್ತಾನ, ಶ್ರೀಲಂಕಾಗಿಂತ ಭಾರತ ತಂತ್ರಜ್ಞಾನದಲ್ಲಿ ಮುಂದುವರಿದಿದ್ದು ಇನ್ನು ಹೆಚ್ಚು ಆವಿಷ್ಕಾರಕ್ಕೆ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

    ಕೇರಳ, ಕರ್ನಾಟಕ, ಚೆನ್ನೈನಲ್ಲಿ ಸಂಭವಿಸುತ್ತಿರುವ ಪ್ರಕೃತಿ ವಿಕೋಪದಿಂದ ಮನುಕುಲ ತತ್ತರಿಸಿ ಹೋಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆ ವಿಜ್ಞಾನ- ತಂತ್ರಜ್ಞಾನದ ಪರಿಹಾರ ಕಂಡುಕೊಳ್ಳಬೇಕಾಗಿದೆ. ಕಳೆದ 30 ವರ್ಷಗಳಿಂದೆ ಕಾಲರಾ, ಮಲೇರಿಯಾದಂತಹ ರೋಗಗಳಿಂದ ಮಾನವ ಬಳಲುತ್ತಿದ್ದ. ಇಂದು ನಿಫಾ, ಡೆಂಗ್ಯೂ ಸೇರಿದಂತೆ ವಿವಿಧ ಮಾರಕ ರೋಗಗಳಿಗೆ ಸಂಶೋಧನೆಯಿಂದ ಪರಿಹಾರ ಕಂಡುಕೊಳ್ಳಲಾಗಿದೆ. ಹೀಗಾಗಿ ಮುಂದುವರಿಯುತ್ತಿರುವ ಕಾಲಘಟ್ಟದಲ್ಲಿ ಇಂದಿನ ಯುವಕರು ಹೊಸ ಆವಿಷ್ಕಾರಗಳಿಗೆ ಹೆಚ್ಚು ಗಮನ ಹರಿಸಿ ದೇಶ ಅಭಿವೃದ್ಧಿಯತ್ತ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

    ರಾಮಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಲವು ತಂತ್ರಜ್ಞಾನದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದು, ಹೊಸ ಹೊಸ ಆವಿಷ್ಕಾರಗಳಿಗೆ ಇನ್ನಷ್ಟು ಪ್ರಾಮುಖ್ಯತೆ ನೀಡುತ್ತಿದೆ. ಅಲ್ಲದೆ, ದೇಶ ಅಭಿವೃದ್ಧಿಗೆ ವಿಜ್ಞಾನ-ತಂತ್ರಜ್ಞಾನ ಹಾಗೂ ಆರ್ಥಿಕಾಭಿವೃದ್ಧಿಗೆ ಆವಿಷ್ಕಾರ ಪ್ರಮುಖ ಅಸ್ತ್ರವಾಗಿದೆ ಎಂದು ಅಭಿಪ್ರಾಯಪಟ್ಟರು.

    ಈ ವೇಳೆ ಗೋಕುಲ ಅಣ್ಣಾ ಎಜುಕೇಷನ್ ಫೌಂಡೆಷನ್ ಅಧ್ಯಕ್ಷ ಡಾ. ಎಂ.ಆರ್ ಜಯರಾಮ್, ರಾಮಯ್ಯ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿರ್ದೇಶಕರಾದ ಎಂ.ಆರ್. ರಾಮಯ್ಯ, ಎಂ.ಆರ್. ಸೀತಾರಾಮ್, ಮುಖ್ಯ ಕಾರ್ಯನಿರ್ವಣಾಧಿಕಾರಿ ಬಿ.ಎಸ್.ರಾಮಪ್ರಸಾದ್, ಪ್ರಾಂಶುಪಾಲರಾದ ಡಾ. ಎನ್.ವಿ.ಆರ್. ನಾಯ್ಡು ಸೇರಿದಂತೆ ಇತರರು ಇದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv