Tag: ವಿಜಯನಗರ ಸಾಮ್ರಾಜ್ಯ

  • ವಿಜಯನಗರ ಸಾಮ್ರಾಜ್ಯದಿಂದ ಮೈಸೂರಿಗೆ ದಸರಾ ಸಾಗಿಬಂದ ಹಾದಿ – ನಾಡಹಬ್ಬ ಸಂಸ್ಕೃತಿ ನಿಮಗೆಷ್ಟು ಗೊತ್ತು?

    ವಿಜಯನಗರ ಸಾಮ್ರಾಜ್ಯದಿಂದ ಮೈಸೂರಿಗೆ ದಸರಾ ಸಾಗಿಬಂದ ಹಾದಿ – ನಾಡಹಬ್ಬ ಸಂಸ್ಕೃತಿ ನಿಮಗೆಷ್ಟು ಗೊತ್ತು?

    ಮೈಸೂರು ದಸರಾ ಮತ್ತೆ ಬಂದಿದೆ. ಕೇಡಿನ ವಿರುದ್ಧ ಒಳಿತಿನ ಜಯವೆಂಬ ‘ವಿಜಯದಶಮಿ’ ಇದು. ದಸರಾ ಮಹೋತ್ಸವ ಕರುನಾಡಿನ ಸಾಂಸ್ಕೃತಿಕ ಪರಂಪರೆಗೆ ಹಿಡಿದ ಕೈಗನ್ನಡಿ. ಇತಿಹಾಸ, ಸಂಸ್ಕೃತಿ ಮತ್ತು ಸಂಪ್ರದಾಯದ ಸಮ್ಮಿಶ್ರಣದೊಂದಿಗೆ ಕರ್ನಾಟಕದ ಶ್ರೀಮಂತ ಪರಂಪರೆ ನಾಡಹಬ್ಬದಲ್ಲಿ ಅನಾವರಣಗೊಳ್ಳುತ್ತದೆ. ರಾಜವೈಭೋಗ ಮರುಕಳುಸುತ್ತದೆ. ನವರಾತ್ರಿ ನವದುರ್ಗೆಯರ ಪೂಜೆ, ನಾಡ ಅಧಿದೇವತೆ ಚಾಮುಂಡೇಶ್ವರಿಯನ್ನು ಭಕ್ತಿ-ಭಾವದಿಂದ ಸ್ಮರಿಸಲಾಗುತ್ತದೆ. ದಸರಾಗೂ ನಾಡಿನ ಜನತೆಗೂ ಭಾವನಾತ್ಮಕ ನಂಟಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಜನರು ಬರುತ್ತಾರೆ.

    ದಸರಾ ಹಬ್ಬಕ್ಕೂ ಹಿನ್ನೆಲೆ, ಪರಂಪರೆ ಇದೆ. ದಸರಾ ಹಬ್ಬ ಮೊದಲು ಆರಂಭವಾಗಿದ್ದು ವಿಜಯನಗರ ಸಾಮ್ರಾಜ್ಯದಿಂದ. ಅಲ್ಲಿಂದ ಶ್ರೀರಂಗಪಟ್ಟಣ ಹಾಗೂ ಮೈಸೂರಿಗೆ ಬಂದಿತು. ಕೃಷ್ಣದೇವರಾಯ ಶಕ್ತಿ, ಸಾಮರ್ಥ್ಯದ ಆಧಾರದ ಮೇಲೆ ವಿಜಯದಶಮಿ ವಿಶ್ವವಿಖ್ಯಾತಿಯಾಯಿತು. ವಿಜಯದಶಮಿ ದಿನ ಕೃಷ್ಣದೇವರಾಯ ಕುದುರೆ ಮೇಲೆ ಕುಳಿತು ಜನಸ್ತೋಮದ ನಡುವೆ ಸಾಗುತ್ತಿದ್ದರೆ, ಆತನ ಸಾಮ್ರಾಜ್ಯದ ಸುತ್ತಲ ಆಸ್ತಿಕ ರಾಜರು ತಮ್ಮ ಸೈನ್ಯವನ್ನು ಕರೆತಂದು ನಮಸ್ಕರಿಸುತ್ತಿದ್ದರು ಎಂದು ಆಗಿನ ಪರ್ಷಿಯನ್ ರಾಯಭಾರಿ ಅಬ್ದುಲ್ ರಝಾಕ್ ಬರೆದುಕೊಂಡಿದ್ದಾರೆ. 14 ರಿಂದ 17ನೇ ಶತಮಾನದ ಮಧ್ಯಭಾಗದವರೆಗೆ ಸುಮಾರು 300 ವರ್ಷಗಳ ಕಾಲ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯು ಇತ್ತು. ಈ ಸಾಮ್ರಾಜ್ಯದ ಪದ್ಧತಿಗಳು, ಸಾಂಸ್ಕೃತಿಕ ಆಚರಣೆಗಳ ಪರಂಪರೆಯನ್ನು ಮೈಸೂರು ಒಡೆಯರು ಮುಂದುವರಿಸಿದರು.

    ಮೈಸೂರು ಒಡೆಯರ್‌ಗೆ ಬಂದಿದ್ದು ಹೇಗೆ?

    ಒಡೆಯರ್‌ಗಳು ವಿಜಯನಗರ ಅರಸರ ಸಾಮಂತರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಪತನ ನಂತರ, ರಾಜ ಒಡೆಯರ್ 1610 ರಲ್ಲಿ ಶ್ರೀರಂಗಪಟ್ಟಣದಲ್ಲಿ ರಾಜಧಾನಿ ಮಾಡಿ ರಾಜತ್ವವನ್ನು ವಹಿಸಿಕೊಂಡರು. ಆ ಸಂದರ್ಭದಲ್ಲಿ ನವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಬೇಕು ಎಂದು ಘೋಷಿಸಿದರು. 1799 ರಲ್ಲಿ 4ನೇ ಆಂಗ್ಲೋ-ಮೈಸೂರು ಯುದ್ಧದ ನಂತರ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾಯಿಸಲಾಯಿತು. ಬಳಿಕ ಮುಮ್ಮಡಿ ಕೃಷ್ಣರಾಜ ಒಡೆಯರ್ ಈ ದಸರಾ ಹಬ್ಬ ಪರಂಪರೆಯನ್ನು ಮುಂದುವರಿಸಿದರು.

    1442-1443ರ ನಡುವೆ ವಿಜಯನಗರಕ್ಕೆ ಪರ್ಷಿಯಾದ ಅಬ್ದುಲ್ ರಝಾಕ್ ಮತ್ತು ಪೋರ್ಚುಗೀಸ್‌ನ ಡೊಮಿಂಗೊ ಫಯಾಸ್ (1520-22) ಭೇಟಿ ನೀಡಿದ್ದರು. ವಿಜಯನಗರದಲ್ಲಿ ನವರಾತ್ರಿ ಹಬ್ಬದ ವೈಭವವನ್ನು ತಮ್ಮ ಕೃತಿಗಳಲ್ಲಿ ಸೊಗಸಾಗಿ ವಿವರಿಸಿದ್ದಾರೆ. ರಾಜರು ನವರಾತ್ರಿ ಸಮಯದಲ್ಲಿ ಸಶಸ್ತ್ರ ಪಡೆಗಳ ಮೆರವಣಿಗೆ ವೀಕ್ಷಿಸುತ್ತಿದ್ದರು. ಈ ಆಚರಣೆ ಐತಿಹಾಸಿಕತೆಗೆ ಸಾಕ್ಷಿಯಾಗಿದೆ. ಕಾಲಾನಂತರ ಹಬ್ಬಗಳ ಆಚರಣೆ ಉದ್ದೇಶ ಬದಲಾಗಿದೆ. ಈಗ ನಾಡಹಬ್ಬ ಮೈಸೂರು ದಸರಾ ಪ್ರವಾಸೋದ್ಯಮ ಉತ್ತೇಜಿಸಲು ಒಂದು ಆಧಾರವಾಗಿದೆ.

    ಒಡೆಯರ ಸೇವೆ ಸ್ಮರಿಸುವ ಜನ!

    ನಾವೀಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಆದರೂ ಮೈಸೂರು ಸಾಮ್ರಾಜ್ಯದ ಒಡೆಯರ್ ತಮ್ಮ ಪ್ರಜೆಗಳಿಗೆ ನೀಡಿದ ಸೇವೆಯನ್ನು ಜನ ಈಗಲೂ ಸ್ಮರಿಸುತ್ತಾರೆ. ಮೈಸೂರು ಎಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅಂತಾ ಈಗಲೂ ಕೊಂಡಾಡುತ್ತಾರೆ. ಆದ್ದರಿಂದ ದಸರಾ ಸಂದರ್ಭದಲ್ಲಿ ರಾಜಪರಂಪರೆಯನ್ನು ಬಿಂಬಿಸುವ ಖಾಸಗಿ ದರ್ಬಾರ್ ಕೂಡ ನಡೆಯಲಿದೆ. ದಸರಾ ಆಚರಣೆಗಳಲ್ಲಿ ಆಡಳಿತ ವ್ಯವಸ್ಥೆಯ ಪ್ರತಿನಿಧಿಗಳೊಂದಿಗೆ ರಾಜರೂ ಪಾಲ್ಗೊಳ್ಳುತ್ತಾರೆ.

    ದಸರಾಗೆ ಧಾರ್ಮಿಕ ನಂಟು

    ಮೈಸೂರು ದಸರಾವನ್ನು ತಾತ್ವಿಕ ಮತ್ತು ಧಾರ್ಮಿಕ ತಳಹದಿಯಲ್ಲೂ ನೋಡಬಹುದು. ಚಾಮುಂಡೇಶ್ವರಿ ದೇವಿಯು ರಾಕ್ಷಸ ಮಹಿಷಾಸುರನನ್ನು ಕೊಲ್ಲುವುದು ಕೆಡುಕಿನ ವಿರುದ್ಧ ಒಳಿತಿನ ವಿಜಯವನ್ನು ಸಂಕೇತಿಸುತ್ತದೆ. ಹೀಗಾಗಿ ಒಂಬತ್ತು ದಿನ ನಡೆಯುವ ಉತ್ಸವದಲ್ಲಿ ನವದುರ್ಗೆಯರ ಪೂಜೆ ಇರುತ್ತದೆ. ವಿಜಯದಶಮಿಯಂದು ಆನೆ ಹೊತ್ತ ಅಂಬಾರಿ ಮೇಲೆ ನಾಡದೇವಿ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಗುತ್ತದೆ. ಮೈಸೂರಿನ ಈ ಉತ್ಸವವು ಶಾಸ್ತ್ರೀಯ ಮತ್ತು ಜನಪದ ಸಂಪ್ರದಾಯಗಳನ್ನು ಪ್ರದರ್ಶಿಸಲು ಒಂದು ವೇದಿಕೆಯಾಗಿದೆ.

    ಮೈಸೂರು ಝಗಮಗ

    ದಸರಾ ಸಂದರ್ಭದಲ್ಲಿ ಮೈಸೂರು ನಗರ ಝಗಮಗಿಸುತ್ತದೆ. ಆಕರ್ಷಣೀಯ ಕೇಂದ್ರ ಅರಮನೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಮತ್ತು ಪಾರಂಪರಿಕ ಕಟ್ಟಡಗಳು ರಾತ್ರಿ ಸಮಯದಲ್ಲಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತವೆ. ದೀಪಾಲಂಕಾರದಿಂದ ಕಂಗೊಳಿಸುವ ಸಾಂಸ್ಕೃತಿಕ ರಾಜಧಾನಿಯನ್ನು ನೋಡುವುದೇ ಚೆಂದ. ದಸರಾ ವೇಳೆ ರಾತ್ರಿ ಹೊತ್ತಿನಲ್ಲಿ ಮೈಸೂರನ್ನು ಸುತ್ತಿ ಪ್ರವಾಸಿಗರು ಪುಳಕಿತರಾಗುತ್ತಾರೆ. ಡಬಲ್ ಡೆಕ್ಕರ್, ಟಾಂಗಾ ಸವಾರಿ ಜನರಿಗೆ ವಿಶೇಷ ಅನುಭೂತಿ ನೀಡುತ್ತದೆ. ದೀಪಗಳಿಂದ ಅರಮನೆ ಕಂಗೊಳಿಸುವುದನ್ನು ನೋಡಲು ಎರಡು ಕಣ್ಣು ಸಾಲದು.

    ದಸರಾದಲ್ಲಿ ಏನಿರುತ್ತೆ?

    ಮೈಸೂರು ದಸರಾ ಎಂದರೆ, ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹೋತ್ಸವ. 9 ದಿನಗಳ ಕಾಲ ಧಾರ್ಮಿಕ ಆಚರಣೆಗಳು, ವಿವಿಧ ಕಾರ್ಯಕ್ರಮಗಳು ಜರುಗುತ್ತವೆ. ಅರಮನೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗುತ್ತವೆ. ರಾಜರ ಖಾಸಗಿ ದರ್ಬಾರ್ ಕೂಡ ನಡೆಯುತ್ತದೆ. ದಸರಾ ಆನೆಗಳು ಸಹ ಇದರಲ್ಲಿ ಪಾಲ್ಗೊಳ್ಳಲಿವೆ. ಯುವಜನರಿಗಾಗಿ ಯುವದಸರಾ, ಯುವಸಂಭ್ರಮದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪ್ರವಾಸಿಗರನ್ನು ಸೆಳೆಯಲು ಫಲಪುಷ್ಪ ಪ್ರದರ್ಶನ, ಆಹಾರ ಮೇಳಗಳು ನಡೆಯುತ್ತವೆ. ಮನೆ ಮನೆಯಲ್ಲೂ ಗೊಂಬೆಗಳನ್ನು ಕೂರಿಸಿ ಜನ ದಸರಾ ಆಚರಿಸುತ್ತಾರೆ. ಕಲಾಸಕ್ತರನ್ನು ಆಕರ್ಷಿಸಲು ಚಲಚಿತ್ರೋತ್ಸವ, ಅರಮನೆಯಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮಗಳು ಜರುಗುತ್ತವೆ.

    ಜಂಬೂಸವಾರಿ ಎಂಬ ಆಕರ್ಷಣೆ

    ವಿಶ್ವವಿಖ್ಯಾತ ದಸರಾ ಕೇಂದ್ರಬಿಂದು ಎಂದರೆ ಅದು ಜಂಬೂಸವಾರಿ. ದಸರಾ ಆನೆಗಳನ್ನು ಸಿಂಗರಿಸಿ, ಅಲಂಕರಿಸಿದ ಚಿನ್ನದಂಬಾರಿಯನ್ನು ಗಜಪಡೆಯ ಕ್ಯಾಪ್ಟನ್ ಮೇಲೆ ಹೊರಿಸಲಾಗುತ್ತದೆ. ಅಂಬಾರಿಯಲ್ಲಿ ಅಲಂಕಾರಭೂಷಿತಳಾಗಿ ದೇವಿ ಚಾಮುಂಡೇಶ್ವರಿ ವಿರಾಜಮಾನಳಾಗುತ್ತಾಳೆ. ಚಿನ್ನದಂಬಾರಿ ಹೊತ್ತ ಗಜಪಡೆ ಸಾಲಾಗಿ ಅರಮನೆಯಿಂದ ಬನ್ನಿಮಂಪಟದ ವರೆಗೆ ಸಾಗುವ ಮೆರವಣಿಗೆ ಸಾಗುತ್ತದೆ. ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪ್ರಾದೇಶಿಕ ಪರಂಪರೆಯನ್ನು ಬಿಂಬಿಸುವ ಸ್ತಬ್ದಚಿತ್ರಗಳು ಇರುತ್ತವೆ. ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಜನ ಹಿಂದಿನ ದಿನವೇ ಬಂದು ಮೆರವಣಿಗೆ ಮಾರ್ಗದುದ್ದಕ್ಕೂ ಕಾದು ಕುಳಿತಿರುತ್ತಾರೆ. ಬಿಸಿಲು, ಮಳೆಯನ್ನೂ ಲೆಕ್ಕಿಸದೇ ಮೆರವಣಿಗೆ ವೀಕ್ಷಿಸುತ್ತಾರೆ.

  • 2012ರಲ್ಲಿ ತಮಿಳುನಾಡಿನಲ್ಲಿ ಕಳುವಾಗಿದ್ದ 500 ವರ್ಷ ಹಳೆಯ ಹನುಮಾನ್ ವಿಗ್ರಹ ಭಾರತಕ್ಕೆ ವಾಪಸ್

    2012ರಲ್ಲಿ ತಮಿಳುನಾಡಿನಲ್ಲಿ ಕಳುವಾಗಿದ್ದ 500 ವರ್ಷ ಹಳೆಯ ಹನುಮಾನ್ ವಿಗ್ರಹ ಭಾರತಕ್ಕೆ ವಾಪಸ್

    ಚೆನ್ನೈ: ದಶಕದ ಹಿಂದೆ ತಮಿಳುನಾಡಿನ ಅರಿಯಾಲೂರಿನಿಂದ ಕದ್ದು ವಿದೇಶಕ್ಕೆ ಸಾಗಿಸಲಾಗಿದ್ದ ಹನುಮಂತನ ವಿಗ್ರಹವನ್ನು ಶೀಘ್ರದಲ್ಲೇ ಭಾರತಕ್ಕೆ ವಾಪಸ್ ತರಲಾಗುವುದು ಎಂದು ಕೇಂದ್ರ ಸಂಸ್ಕøತಿ ಸಚಿವ ಜಿ.ಕಿಶನ್ ರೆಡ್ಡಿ ಬುಧವಾರ ಹೇಳಿದ್ದಾರೆ.

    ವಿಜಯನಗರ ಸಾಮ್ರಾಜ್ಯ ಕಾಲದ 14-15ನೇ ಶತಮಾನದ ಹನುಮಂತನ ವಿಗ್ರಹವನ್ನು ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಖಾಸಗಿ ಖರೀದಿದಾರರೊಬ್ಬರ ಸ್ವಾಧೀನದಲ್ಲಿ ಇದ್ದಿದ್ದನ್ನು ಪತ್ತೆ ಹಚ್ಚಲಾಗಿದೆ.

    ಈ ಬಗ್ಗೆ ನಿನ್ನೆ ಕೇಂದ್ರ ಸಚಿವ ರೆಡ್ಡಿ ಅವರು ಮಾತನಾಡಿ, ತಮಿಳುನಾಡಿನ ದೇವಸ್ಥಾನದಿಂದ ಕಳುವಾಗಿದ್ದ 500 ವರ್ಷ ಹಳೇ ಆಂಜನೇಯನ ವಿಗ್ರಹವನ್ನು ಭಾರತಕ್ಕೆ ವಾಪಸ್ ತರಲಾಗುವುದು. ಈಗಾಗಲೇ ಯುಎಸ್ ಹೋಮ್ ಲ್ಯಾಂಡ್ ಸೆಕ್ಯೂರಿಟಿ, ಈ ವಿಗ್ರಹವನ್ನು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಹಸ್ತಾಂತರ ಮಾಡಿದೆ ಎಂದು ತಿಳಿಸಿದ್ದಾರೆ.

    ಅಂದಹಾಗೇ, ಈ ಆಂಜನೇಯನ ವಿಗ್ರಹವನ್ನು ಅರಿಯಲೂರಿನ ವೆಲ್ಲೂರು ಗ್ರಾಮದ ವರದರಾಜ ಪೆರುಮಾಳ್ ದೇಗುಲದಿಂದ ಶ್ರೀದೇವಿ ಮತ್ತು ಭೂದೇವಿ ವಿಗ್ರಹಗಳೊಂದಿಗೆ 2012ರ ಏಪ್ರಿಲ್ 9ರಂದು ಕಳುವು ಮಾಡಲಾಗಿತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಹರ್ಷನ ಹತ್ಯೆ- ಡೀಟೈಲ್ಸ್ ಎಲ್ಲ ಹೇಳೋಕೆ ಆಗಲ್ಲ: ಆರಗ ಜ್ಞಾನೇಂದ್ರ

    2014ರಲ್ಲಿ ಕ್ರಿಸ್ಟಿ ಹರಾಜು ಕಂಪನಿ ಈ ವಿಗ್ರಹವನ್ನು ಹರಾಜಿಗೆ ಇಟ್ಟಿತ್ತು. 37,500 ಡಾಲರ್ ಕೊಟ್ಟು ಖಾಸಗಿ ವ್ಯಕ್ತಿಯೊಬ್ಬರು ಖರೀದಿ ಮಾಡಿದ್ದರು. ಆದರೆ ಇತ್ತ ಭಾರತದಲ್ಲಿ ಕಳ್ಳತನವಾದ ವಿಗ್ರಹಗಳ ಬಗ್ಗೆ ತನಿಖೆಯೂ ನಡೆಯುತ್ತಿತ್ತು.

    ತಮಿಳುನಾಡಿನ ಪೊಲೀಸರ ತಂಡ ಈ ಪ್ರಕರಣದ ವಿಚಾರವಾಗಿ ಯುಎಸ್ ಹೋಮ್ ಲ್ಯಾಂಡ್ ಸೆಕ್ಯೂರಿಟಿಯನ್ನು ಸಂಪರ್ಕಿಸಿತ್ತು ಅಂತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಆಸ್ಟ್ರೇಲಿಯಾದಲ್ಲಿ ಹರಾಜು ಕಂಪನಿಯವರಿಗಾಗಲಿ, ಅದನ್ನು ಖರೀದಿಸಿದ ವ್ಯಕ್ತಿಗಾಗಲಿ ಇದು ಕದ್ದ ವಿಗ್ರಹ ಎಂಬ ಬಗ್ಗೆ ಮಾಹಿತಿ ಇರಲಿಲ್ಲ ಎಂದು ಹೇಳಲಾಗಿದೆ. ಇದನ್ನೂ ಓದಿ: ಅಗ್ನಿ ಅವಘಡ – ಕಟ್ಟಡದಿಂದ ಹಾರಿ ಜೀವ ಉಳಿಸಿಕೊಂಡ ತಾಯಿ, ಮಗಳು

    ಇತ್ತೀಚಿನ ವರ್ಷಗಳಲ್ಲಿ ಹೀಗೆ ಹಲವು ವಿಗ್ರಹಗಳನ್ನು ಭಾರತಕ್ಕೆ ವಾಪಸ್ ತರಲಾಗಿದೆ. ಹಿಂದೆಲ್ಲ ಕಳುವಾಗಿ ವಿದೇಶಕ್ಕೆ ಸಾಗಿಸಲಾಗಿದ್ದ ದೇವರ ಮೂರ್ತಿಗಳು ಒಂದೊಂದೇ ದೇಶಕ್ಕೆ ವಾಪಸ್ ಬರುತ್ತಿವೆ.

    ಎರಡು ದಶಕಗಳ ಹಿಂದೆ ಬಿಹಾರದ ಕುಂಡಲ್‍ಪುರ ದೇವಸ್ಥಾನದಿಂದ ಕಳುವಾದ ಅವಲೋಕಿತೇಶ್ವರ ಪದ್ಮಪಾಣಿ (ಬುದ್ಧ) ವಿಗ್ರಹ ಇಟಲಿಯಲ್ಲಿ ಪತ್ತೆಯಾಗಿದೆ. ಮಿಲನ್‍ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಅದನ್ನು ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ಭಾರತಕ್ಕೆ ಬರಲಿದೆ. ಈ ವಿಗ್ರಹ 8-12ನೇ ಶತಮಾನದ್ದು, 2000ನೇ ಇಸವಿಯಲ್ಲಿ ಕಳುವಾಗಿತ್ತು. ವಾರಾಣಸಿಯ ದೇವಸ್ಥಾನವೊಂದರಿಂದ 100 ವರ್ಷಗಳ ಹಿಂದೆ ಕಳುವಾಗಿದ್ದ, 18ನೇ ಶತಮಾನದ ದೇವಿ ಅನ್ನಪೂರ್ಣಾ ವಿಗ್ರಹವನ್ನು 2021ರ ಅಕ್ಟೋಬರ್‍ನಲ್ಲಿ ಕೆನಡಾದ ಒಟ್ಟಾವಾದಿಂದ ವಾಪಸ್ ತರಲಾಗಿತ್ತು.

  • ಗಣರಾಜ್ಯೋತ್ಸವ- ಕರ್ನಾಟಕದಿಂದ ವಿಜಯನಗರ ಕಲಾ ಶ್ರೀಮಂತಿಕೆಯ ಸ್ತಬ್ಧಚಿತ್ರ ಪ್ರದರ್ಶನ

    ಗಣರಾಜ್ಯೋತ್ಸವ- ಕರ್ನಾಟಕದಿಂದ ವಿಜಯನಗರ ಕಲಾ ಶ್ರೀಮಂತಿಕೆಯ ಸ್ತಬ್ಧಚಿತ್ರ ಪ್ರದರ್ಶನ

    ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ರಾಜ್ಯದಿಂದ ಹಂಪಿಯ ವಿಜಯನಗರ ಕಲಾ ಶ್ರೀಮಂತಿಕೆಯನ್ನು ಬಿಂಬಿಸುವ ಸ್ತಬ್ಧಚಿತ್ರವನ್ನು ಪ್ರದರ್ಶನ ಮಾಡಲಾಗುತ್ತಿದೆ.

    ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಈ ಬಾರಿ ಕರ್ನಾಟಕದಿಂದ ವಿಜಯನಗರದ ಕಲಾ ಶ್ರೀಮಂತಿಕೆ ಬಿಂಬಿಸುವ ಸ್ತಬ್ಧಚಿತ್ರದ ಪ್ರದರ್ಶನ ನಡೆಯಲಿದೆ. ವಿಜಯನಗರ ಪರಿಕಲ್ಪನೆಯ ಸ್ತಬ್ಧಚಿತ್ರದಲ್ಲಿ ಅಂಜನಾದ್ರಿ ಬೆಟ್ಟ, ಶ್ರೀಕೃಷ್ಣದೇವರಾಯ ಪಟ್ಟಾಭಿಷೇಕ, ಹಜಾರರಾಮ ದೇವಸ್ಥಾನ, ಉಗ್ರ ನರಸಿಂಹನ ಸ್ತಬ್ಧ ಚಿತ್ರಗಳು ಕಣ್ಮನ ಸೆಳೆಯಲಿವೆ.

    ಗಣರಾಜ್ಯೋತ್ಸವಕ್ಕೆ ಈಗಾಗಲೇ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಯೋದ್ಯೆಯ ರಾಮ ಮಂದಿರ ಹಾಗೂ ದೀಪೋತ್ಸವವನ್ನು ಸಹ ಸ್ತಬ್ಧಚಿತ್ರಗಳಲ್ಲಿ ಬಿಂಬಿಸಲಾಗುತ್ತಿದೆ. ಒಟ್ಟು 17 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ತಂಡಗಳು ಗಣರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿವೆ. ರಾಜ್ಯದಿಂದ ವಿಜಯನಗರ ಸಾಮ್ರಾಜ್ಯದ ಕಲಾ ಶ್ರೀಮಂತಿಕೆಯನ್ನು ತೋರಿಸಲಾಗುತ್ತಿದೆ.

  • ಹಂಪಿ ಶಿಲ್ಪಕಲೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ತಿಳಿಸಿ: ನಟ ದರ್ಶನ್

    ಹಂಪಿ ಶಿಲ್ಪಕಲೆಯನ್ನು ಉಳಿಸಿ, ಮುಂದಿನ ಪೀಳಿಗೆಗೆ ತಿಳಿಸಿ: ನಟ ದರ್ಶನ್

    ಬಳ್ಳಾರಿ: ಐತಿಹಾಸಿಕ ಹಂಪಿ ಶಿಲ್ಪಕಲೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ತಿಳಿಸಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

    ಹಂಪಿ ಉತ್ಸವದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ನಟ ದರ್ಶನ್, ಇನ್ನೂ ನೂರು ಶತಮಾನ ಹೋದರೂ ಹಂಪಿಯಂತಹ ಅಪೂರ್ವ ಶಿಲ್ಪಕಲೆಗಳನ್ನು ನಾವು ಕಟ್ಟುವುದಕ್ಕಾಗುವುದಿಲ್ಲ. ಆದ ಕಾರಣ ಈಗಿರುವ ಹಂಪಿಯ ಶಿಲ್ಪಕಲೆಗಳನ್ನು ಉಳಿಸಿಕೊಂಡು ಹೋಗಬೇಕು ಮತ್ತು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

    ಇಲ್ಲಿನ ಪ್ರತಿ ಶಿಲ್ಪಕಲೆಯನ್ನು ನೋಡಿದರೇ ವಿಜಯನಗರ ಸಾಮ್ರಾಜ್ಯದವರು ಅದರಲ್ಲೂ ವಿಶೇಷವಾಗಿ ಶ್ರೀಕೃಷ್ಣದೇವರಾಯ ಅವರು ಮಾಡಿರುವ ಸಾಧನೆಗಳು ಮತ್ತು ಪರಾಕ್ರಮಗಳು ತಿಳಿಯುತ್ತವೆ. ಅದನ್ನು ಉಳಿಸಿಕೊಂಡು ಹೋಗುವುದರ ಜೊತೆಗೆ ಕನ್ನಡ ಸಿನಿಮಾಗಳನ್ನು ಹೆಚ್ಚೆಚ್ಚು ನೋಡಿ ಎಂದು ಮನವಿ ಮಾಡಿದರು. ಉತ್ಸವದಲ್ಲಿ ದರ್ಶನ್‍ರನ್ನು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು.

    ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಹಾಗೂ ಶಾಸಕ ಮುನಿರತ್ನ ಅವರು ಮಾತನಾಡಿ, ಶ್ರೀಕೃಷ್ಣದೇವರಾಯ ಸಿನಿಮಾನವನ್ನು ನಿರ್ಮಾಣ ಮಾಡಿಯೇ ಸಿದ್ದ. ವಜ್ರ-ವೈಡೂರ್ಯಗಳನ್ನು ಬಳ್ಳದಲ್ಲಿ ಅಳೆಯುತ್ತಿದ್ದ ಧರ್ಮದ ನಾಡು ಇದು. ಇಲ್ಲಿ ಅನೇಕ ಕುರುಹಗಳಿದ್ದು, ಎಲ್ಲ ಭಾಷೆಗಳಿಗೂ ಆಗುವಂತ ಶ್ರೀಕೃಷ್ಣದೇವರಾಯ ಚಿತ್ರ ನಿರ್ಮಾಣ ಮಾಡಲಾಗುವುದು ಮತ್ತು ಅದರಲ್ಲಿ ದರ್ಶನ್ ಅವರ ಪಾತ್ರ ಇದ್ದೇ ಇರುತ್ತದೆ ಎಂದರು.

    ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಸಚಿವರಾದ ತುಕಾರಾಂ, ಪಿ.ಟಿ.ಪರಮೇಶ್ವರ ನಾಯಕ್, ಸಂಸದ ಉಗ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಗೋಪಾಲಸ್ವಾಮಿ, ಶಾಸಕರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಸೋಮಶೇಖರ್ ರೆಡ್ಡಿ, ಜಿಪಂ ಉಪಾಧ್ಯಕ್ಷೆ ದೀನಾ ಮಂಜುನಾಥ, ಹಂಪಿ ಗ್ರಾಪಂ ಅಧ್ಯಕ್ಷೆ, ಕಮಲಾಪುರ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮಳಲಿ, ಜಿಪಂ ಸಿಇಒ ನಿತೀಶ್, ಎಸ್ಪಿ ಅರುಣ ರಂಗರಾಜನ್,ಹಂಪಿ ವಿಶ್ವ ಪರಂಪರೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ದಿವ್ಯಪ್ರಭು ಮತ್ತಿತರರು ಇದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv