Tag: ವಾಸನೆ

  • ಕಫ, ಕೆಮ್ಮು ಆಯ್ತು ಈಗ ಕೊರೊನಾ ಸೋಂಕಿತರಿಗೆ ವಾಸನೆ, ರುಚಿ ಗ್ರಹಿಸುವ ಶಕ್ತಿ ಇರಲ್ಲ

    ಕಫ, ಕೆಮ್ಮು ಆಯ್ತು ಈಗ ಕೊರೊನಾ ಸೋಂಕಿತರಿಗೆ ವಾಸನೆ, ರುಚಿ ಗ್ರಹಿಸುವ ಶಕ್ತಿ ಇರಲ್ಲ

    ರೋಮ್: ವಿಶ್ವವನ್ನೇ ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಸೋಂಕು ತಗುಲಿದ ಕೆಲವರಿಗೆ ವಾಸನೆ ಗ್ರಹಿಸುವ ಹಾಗೂ ರುಚಿ ತಿಳಿಯುವ ಶಕ್ತಿ ಇರುವುದಿಲ್ಲ ಎನ್ನುವ ವಿಚಾರ ಸಂಶೋಧನೆಯಿಂದ ತಿಳಿದು ಬಂದಿದೆ.

    ಇಟಲಿಯಲ್ಲಿ ಸೋಂಕಿಗೆ ತುತ್ತಾದ ರೋಗಿಯೊಬ್ಬರು ಈ ಬಗ್ಗೆ ತಿಳಿಸಿದ್ದಾರೆ. ನಾನು 2-3 ವಾರದ ಹಿಂದೆ ಕೊರೊನಾ ಸೋಂಕಿನಿಂದ ಬಳಲುತ್ತಿದ್ದೆ. ಆದರೆ ಈಗ ನಾನು ಸಂಪೂರ್ಣ ಗುಣವಾಗಿದ್ದೇನೆ. ನನಗೆ ಸೋಂಕು ತಗುಲಿದ್ದಾಗ ಯಾವುದೇ ವಾಸನೆ ಹಾಗೂ ರುಚಿಯನ್ನು ಗ್ರಹಿಸುವ ಶಕ್ತಿ ನನಗಿರಲಿಲ್ಲ. ನಗರದಲ್ಲಿ ಕೊರೊನಾ ವೈರಸ್ ಹರಡುತ್ತಿದೆ ಎಂದು ತಿಳಿದಾಗ ನಾನು ಮನೆಯನ್ನು ಫಿನಾಯಿಲ್ ಹಾಕಿ ಸ್ವಚ್ಛಗೊಳಿಸಿದ್ದೆ. ಆಗ ನನಗೆ ಫಿನಾಯಿಲ್ ವಾಸನೆ ಗ್ರಹಿಸುವ ಸಾಧ್ಯವಾಗಿರಲಿಲ್ಲ. ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ ಬಳಸುವಾಗಲೂ ಅದರ ವಾಸನೆ ನನಗೆ ಬರುತ್ತಿರಲಿಲ್ಲ. ಯಾವುದೇ ಅಡುಗೆಯ ರುಚಿ ಕೂಡ ತಿಳಿಯುತ್ತಿರಲಿಲ್ಲ. ಬಳಿಕ ನಾನು ಪರೀಕ್ಷೆ ಮಾಡಿಸಿದಾಗ ಕೊರೊನಾ ತಗುಲಿರುವುದು ದೃಢಪಟ್ಟಿತ್ತು ಎಂದು ಸೋಂಕಿನಿಂದ ಗುಣಪಟ್ಟ ಮಹಿಳೆ ತಿಳಿಸಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ.

    ಇಟಲಿಯಲ್ಲಿ ಕೊರೊನಾ ಸೋಂಕು ಮೊದಲು ಕಾಣಿಸಿಕೊಂಡಾಗ ನಿರ್ಲಕ್ಷಿಸಲಾಯ್ತು. ಈ ಸೋಂಕಿನ ಲಕ್ಷಣಗಳೇನು? ರೋಗಿಗಳಿಗೆ ಸೋಂಕು ತಗುಲಿದಾಗ ಅವರ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು ಎಂದು ವೈಜ್ಞಾನಿಕವಾಗಿ ತಿಳಿದುಕೊಳ್ಳಲು ಹೆಚ್ಚು ಆಸಕ್ತಿ ತೋರಲಿಲ್ಲ. ಹೀಗಾಗಿ ಇಟಲಿಯಲ್ಲಿ ಕೊರೊನಾ ವ್ಯಾಪಾಕವಾಗಿ ಹರಡುತ್ತಿದೆ.

    ಇತ್ತ ಜರ್ಮನಿ ಮೂಲದ ವೈರಾಲಸ್ಟಿಲ್ ಹೆಂಡ್ರಿಕ್ ಸ್ಟ್ರೀಕ್ ಕೊರೊನಾ ಬಗ್ಗೆ ಸಂಶೋಧನೆ ಮಾಡುತ್ತಿದ್ದು, ಕೊರೊನಾ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ರೋಗ ಲಕ್ಷಣಗಳ ಬಗ್ಗೆ ಅಧ್ಯಯನ ಮಾಡಲು ಆರಂಭಿಸಿದರು. ಜರ್ಮನಿಯಲ್ಲಿ ಸೋಂಕು ಹರಡಿದಾಗ ಆಸ್ಪತ್ರೆಯಲ್ಲಿ ಪ್ರತ್ಯೇಕಿಸಲಾಗಿದ್ದ ಸೋಂಕಿತ ರೋಗಿಗಳು ರಕ್ತದ ಸ್ಯಾಂಪಲ್‍ಗಳನ್ನು ಪ್ರತಿ ದಿನ ಸಂಗ್ರಹಿಸಿ, ಸಂಶೋಧನಗೆ ಬಳಸಿಕೊಳ್ಳುವ ಅವಕಾಶ ಸ್ಟ್ರೀಕ್ ತಂಡಕ್ಕೆ ಸಿಕ್ಕಿತು.

    ಈ ಬಗ್ಗೆ ಸ್ಟ್ರೀಕ್ ಸಂದರ್ಶನವೊಂದರಲ್ಲಿ ತಿಳಿಸಿದ್ದು, ಹಾನ್ಸ್‌ಬರ್ಗ್ ನಲ್ಲಿ ಸೋಂಕು ತಗುಲಿದ್ದ ಪ್ರತಿಯೊಬ್ಬ ರೋಗಿಯ ಮನೆಗೆ ನಮ್ಮ ತಂಡವರು ಭೇಟಿ ಕೊಟ್ಟು ಮಾಹಿತಿ ಕಲೆಹಾಕಿದರು. ಸೋಂಕನಿಂದ ಬಳಲಿ ಗುಣಮುಖರಾದವರ ಬಳಿ ಕೂಡ ಸೋಂಕಿನ ರೋಗ ಲಕ್ಷಣಗಳೇನು? ಎನ್ನುವ ಬಗ್ಗೆ ಮಾಹಿತಿ ಪಡೆದುಕೊಂಡೆವು. ನಾವು ಮಾಹಿತಿ ಕಲೆಹಾಕಿದ ಶೇ. 75ರಷ್ಟು ಪ್ರಕರಣಗಳಲ್ಲಿ ರೋಗಿಗಳು ವಾಸನೆ ಗ್ರಹಿಸುವ ಹಾಗೂ ರುಚಿ ಗುರುತಿಸುವ ಶಕ್ತಿಯನ್ನು ಕಳೆದುಕೊಂಡಿದ್ದರು ಎಂಬುದು ತಿಳಿದು ಬಂದಿದೆ. ಆದರೆ ಈ ರೋಗ ಲಕ್ಷಣ ಯಾವಾಗ ಕಾಣಿಸಿಕೊಳ್ಳುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಸೋಂಕು ತಗುಲಿದ ಕೆಲ ಸಮಯದ ಬಳಿಕ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

    ಮಿಲನ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಗಳ ಪ್ರಾಧ್ಯಪಕ ಮಿಸ್ಸಿಮೊ ಗಲ್ಲಿ ಅವರು ಕೂಡ ಕೊರೊನಾ ರೋಗ ಲಕ್ಷಣಗಳ ಬಗ್ಗೆ ತಿಳಿಸಿದ್ದಾರೆ. ಕೊರೊನಾ ಸೋಂಕಿತ ಬಹುತೇಕ ರೋಗಿಗಳಲ್ಲಿ ವಾಸನೆಯನ್ನು ಹಾಗೂ ರುಚಿಯನ್ನು ಗುರುತಿಸುವ ಶಕ್ತಿ ಇರುವುದಿಲ್ಲ. ಸೋಂಕು ತಗುಲಿದ ಆರಂಭಿಕ ಹಂತದಲ್ಲಿ ಈ ಲಕ್ಷಣದ ಬಗ್ಗೆ ನಿಖರವಾಗಿ ತಿಳಿಯುವುದಿಲ್ಲ. ಇದೊಂದು ಕೊರೊನಾ ಸೊಂಕಿನ ಅಸಾಮಾನ್ಯ ಲಕ್ಷಣ ಎಂದು ತಿಳಿಸಿದ್ದಾರೆ.

    ಸದ್ಯ ಈ ಲಕ್ಷಣಗಳು ಕೊರೊನಾ ಸೋಂಕಿನ ಲಕ್ಷಣವೇ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಕೆಲ ವೈರಸ್‍ಗಳು ದೇಹಕ್ಕೆ ಸೇರಿದರೆ ಸೋಂಕಿತ ವ್ಯಕ್ತಿಯ ಮೂಗಿನಲ್ಲಿರುವ ಕೋಶಗಳು ಹಾಗೂ ಕೋಶ ಗ್ರಾಹಕಗಳನ್ನು ನಾಶಮಾಡುತ್ತದೆ. ಕೆಲ ವೈರಸ್‍ಗಳು ಸಂವೇದನಾ ನರಗಳ ಮೂಲಕ ಮೆದುಳನ್ನು ಪ್ರವೇಶಿಸಿ ಹಾನಿ ಮಾಡುತ್ತದೆ. ಇನ್ನೂ ಕೆಲ ವೈರಸ್‍ಗಳು ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ. ಇರಾನ್‍ನಲ್ಲಿ ವರದಿಯಾದ ಒಂದು ಕೊರೊನಾ ಸೋಂಕಿತ ಪ್ರಕರಣದಲ್ಲಿ ರೋಗಿ ವಾಸನೆ ಗೃಹಿಸುವ ಶಕ್ತಿ ಜೊತೆಗೆ ದೃಷ್ಟಿ ಕಳೆದುಕೊಂಡಿದ್ದಾರೆ ಎಂಬುದು ವರದಿಯಾಗಿದೆ.

  • ನನ್ನ ಗಂಡ ಗಬ್ಬು ವಾಸನೆ ಬರ್ತಾನೆ- ಡಿವೋರ್ಸ್ ಕೊಡಿಸಿ ಎಂದ ಪತ್ನಿ

    ನನ್ನ ಗಂಡ ಗಬ್ಬು ವಾಸನೆ ಬರ್ತಾನೆ- ಡಿವೋರ್ಸ್ ಕೊಡಿಸಿ ಎಂದ ಪತ್ನಿ

    ಪಾಟ್ನಾ: ನನ್ನ ಗಂಡ ಗಬ್ಬು ವಾಸನೆ ಬರುತ್ತಾನೆ. ಹೀಗಾಗಿ ನನಗೆ ಆತನಿಂದ ವಿಚ್ಛೇದನ ಕೊಡಿಸಿ ಎಂದು ಪತ್ನಿಯೊಬ್ಬಳು ರಾಜ್ಯ ಮಹಿಳಾ ಆಯೋಗದ ಮೊರೆ ಹೋಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ಮಹಿಳೆಯನ್ನು ಸೋನಿ ದೇವಿ(20) ಎಂದು ಗುರುತಿಸಲಾಗಿದ್ದು, ಈಕೆ ವೈಶಾಲಿ ಜಿಲ್ಲೆಯ ನಯಗೌನ ಗ್ರಾಮದ ದೆಸ್ರಿ ಬ್ಲಾಕ್ ನಿವಾಸಿಯಾಗಿದ್ದಾರೆ. ಸದ್ಯ ಈಕೆ ತನ್ನ ಪತಿ ಮನೀಶ್(23) ನಿಂದ ವಿಚ್ಚೇದನಕ್ಕಾಗಿ ಕಾಯುತ್ತಿದ್ದಾರೆ. ನನ್ನ ಪತಿ ವಿಪರೀತ ವಾಸನೆ ಬರುತ್ತಾನೆ. ನನಗೆ ಅವನೊಂದಿಗೆ ಜೀವನ ನಡೆಸಲು ಕಷ್ಟವಾಗುತ್ತಿದೆ. ಹೀಗಾಗಿ ದಯವಿಟ್ಟು ಆತನಿಂದ ನನಗೆ ಡಿವೋರ್ಸ್ ಕೊಡಿಸಿ. ಈ ಮೂಲಕ ನನಗೆ ಆತನಿಂದ ಮುಕ್ತಿ ನೀಡಿ ಎಂದು ಬೇಡಿಕೊಂಡಿದ್ದಾಳೆ.

    ವಾಸನೆ ಬರುತ್ತಿರೋದು ಯಾಕೆ?
    ಮನೀಶ್ ಪ್ರತಿ ದಿನ ಸ್ನಾನ ಹಾಗೂ ಶೇವ್ ಮಾಡಲ್ಲ. ಇಷ್ಟು ಮಾತ್ರವಲ್ಲದೆ ಆತ ದಿನನಿತ್ಯ ಹಲ್ಲು ಉಜ್ಜಲ್ಲ. ಹೀಗೆ ದಿನನಿತ್ಯದ ಸಣ್ಣ-ಸಣ್ಣ ಕೆಲಸವನ್ನೂ ಮಾಡಲ್ಲ. ಹೀಗಾಗಿ ಆತ ಗಬ್ಬುನಾತ ಬೀರುತ್ತಿರುತ್ತಾನೆ ಎಂದು ಸೋನಿ ತನ್ನ ಮನೀಶ್ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

    ಸೋನಿ ದೇವಿ ಗುರುವಾರ ಮಹಿಳಾ ಆಯೋಗದಲ್ಲಿ ತನ್ನ ಪತಿ ಶುಚಿತ್ವ ಕಾಪಾಡುತ್ತಿಲ್ಲ. ಹೀಗಾಗಿ ನನಗೆ ವಿಚ್ಛೇದನ ಕೊಡಿಸಿ ಆತನಿಂದ ಮುಕ್ತಿ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಆಯೋಗದ ಸದಸ್ಯೆ ಪ್ರತಿಮಾ ಸಿನ್ಹಾ, ಕೇವಲ ಡಿವೋರ್ಸಿಗಾಗಿ ಇಂತಹ ಸಾಮಾನ್ಯ ಕಾರಣಗಳನ್ನು ನೀಡಬೇಡ ಎಂದು ಬುದ್ಧಿ ಹೇಳಿ ಕಳುಹಿಸಿದ್ದಾರೆ. ಅಲ್ಲದೆ ಇತ್ತ ಪತಿಗೆ ಶುಚಿತ್ವ ಕಾಪಾಡಿಕೊಳ್ಳುವಂತೆ ಎಚ್ಚರಿಕೆ ನೀಡಲಾಗಿದೆ ಎಂಬುದಾಗಿ ವರದಿಯಾಗಿದೆ.

    ಸೋನಿ ಮಹಿಳಾ ಆಯೋಗಕ್ಕೆ ನೀಡಿದ ದೂರಿನಲ್ಲಿ, ಪ್ಲಂಬರ್ ಆಗಿರುವ ನನ್ನ ಪತಿ ಕೆಲವೊಮ್ಮೆ 10 ದಿನವಾದರೂ ಸ್ನಾನ ಮಾಡಲ್ಲ. ಅಲ್ಲದೆ ಆತ ದಿನ ನಿತ್ಯ ಹಲ್ಲು ಉಜ್ಜಲ್ಲ. ನಮಗೆ ಮಕ್ಕಳಾಗಿಲ್ಲ. ನಮ್ಮಿಬ್ಬರ ಸಂಬಂಧ ಚೆನ್ನಾಗಿಲ್ಲ. ಜೀವನಕ್ಕೆ ಅರ್ಥವಿಲ್ಲ. ಜೀವನ ನಿಷ್ಪ್ರೋಜಕ ಎಂದು ಬರೆದಿದ್ದಾರೆ. ಅಲ್ಲದೆ ವಿಚ್ಚೇದನದ ಜೊತೆಗೆ ಮದುವೆ ಸಮಯದಲ್ಲಿ ನನಗೆ ನನ್ನ ತವರು ಮನೆಯಿಂದ ನೀಡಿದ್ದ ಚಿನ್ನ ಹಾಗೂ ಇತರ ಬೆಲೆಬಾಳುವ ಸ್ತುಗಳನ್ನು ಕೂಡ ಹಿಂದಿರುಗಿಸುವಂತೆ ಕೋರಿಕೊಂಡಿದ್ದಾರೆ.

    ಇತ್ತ ಆಯೋಗದ ಸದಸ್ಯೆ ಪ್ರತಿಮಾ, ದಂಪತಿಯನ್ನು ಒಂದು ಮಾಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ತಪ್ಪನ್ನು ತಿದ್ದಿಕೊಳ್ಳಲು ಸೋನಿ ಪತಿಗೆ 2 ತಿಂಗಳ ಕಾಲಾವಕಾಶ ನೀಡಿದ್ದಾರೆ. ಒಂದು ವೇಳೆ ಆತ ಈ 2 ತಿಂಗಳಲ್ಲಿ ಸರಿ ಹೋಗದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಸೋನಿ ಪತಿ ಮನೀಶ್ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ ಪತ್ನಿಯ ಮನಸ್ಸನ್ನು ಮತ್ತೆ ಗೆಲ್ಲುವಲ್ಲಿ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾನೆ.

     

  • ಹಗ್ ಮಾಡಲು ನಿರಾಕರಿಸಿದ ಗೆಳೆಯನಿಗೆ ಚಾಕು ಇರಿದ

    ಹಗ್ ಮಾಡಲು ನಿರಾಕರಿಸಿದ ಗೆಳೆಯನಿಗೆ ಚಾಕು ಇರಿದ

    ಬೆಂಗಳೂರು: ಹಗ್ ಮಾಡಲು ನಿರಾಕರಿಸಿದ ಗೆಳೆಯನಿಗೆ ಚಾಕು ಇರಿದ ಅಮಾನವೀಯ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಈ ಘಟನೆ ಕಳೆದ ಭಾನುವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶೋಯೆಬ್ ಪಾಷಾ ಹಾಗೂ ನಬಿ ನಗರದ ಮಾವಳ್ಳಿ ಪ್ರದೇಶದ ಎಲ್‍ಬಿಎಫ್ ರಸ್ತೆಯಲ್ಲಿ ಕಿತ್ತಾಡಿಕೊಂಡಿದ್ದಾರೆ.

    ಮಾತುಕತೆ ನಡೆಸಿದ ಬಳಿಕ ನಬಿ, ಶೋಯಬ್ ನನ್ನು ಹಗ್ ಮಾಡಲು ಮುಂದಾಗಿದ್ದಾನೆ. ಈ ವೇಳೆ ಶೋಯಬ್ ನಬಿಯನ್ನು ದೂರ ತಳ್ಳಿದ್ದಾನೆ. ಅಲ್ಲದೆ ನಿನ್ನ ಕೆಟ್ಟದಾಗಿ ಉಸಿರಾಡುತ್ತೀಯಾ ಎಂದು ತಿಳಿಸಿದ್ದಾನೆ. ಈ ವಿಚಾರ ಸಂಬಂಧ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

    ಶೋಯಬ್ ಮಾತಿನಿಂದ ಕೆಂಡಾಮಂಡಲನಾದ ನಬಿ ಚಾಕು ತೆಗೆದುಕೊಂಡು ಬಂದು ಶೋಯಬ್ ಹೊಟ್ಟೆಗೆ ಇರಿದಿದ್ದಾನೆ. ಇಷ್ಟು ಮಾತ್ರವಲ್ಲದೆ, ರಕ್ತದ ಮಡುವಿನಲ್ಲಿ ಬಿದ್ದ ಶೋಯಬ್, ತನ್ನ ಸಹೋದರ ಶಾಹೀದ್ ಗೆ ಕರೆ ಮಾಡಿ ಸಹಾಯ ಮಾಡುವಂತೆ ಹೇಳಿದ್ದಾನೆ. ಹೀಗಾಗಿ ಸ್ಥಳಕ್ಕೆ ಬಂದ ಶಾಹೀದ್ ಮೇಲೂ ಚಾಕುವಿನಿಂದ ಇರಿದ ನಬಿ, ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

    ಆಟೋಮೊಬೈಲ್ ಬಿಡಿ ಭಾಗಗಳ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಬಿಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ಘಟನೆಯಿಂದಾಗಿ ಗಾಯಗೊಂಡಿರುವ ಶೋಯಬ್ ಹಾಗೂ ಆತನ ಸಹೋದರ ಶಾಹೀದ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಅಪಾಯದಿಂದ ಪಾರಾಗಿದ್ದಾರೆ.

    ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರು ನಬಿ ವಿರುದ್ಧ ಐಪಿಸಿ ಸೆಕ್ಷನ್ 307(ಕೊಲೆ ಯತ್ನ) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ನೊರೆ ಆಯ್ತು, ಈಗ ಬೆಂಗಳೂರಲ್ಲಿ ವಾಸನೆ ಸಮಸ್ಯೆ!

    ನೊರೆ ಆಯ್ತು, ಈಗ ಬೆಂಗಳೂರಲ್ಲಿ ವಾಸನೆ ಸಮಸ್ಯೆ!

    ಬೆಂಗಳೂರು: ನೊರೆಯಿಂದ ಸುದ್ದಿಯಾಗಿರುವ ಸಿಲಿಕಾನ್ ಸಿಟಿ ಈಗ ವಾಸನೆಯಿಂದಲೂ ಸುದ್ದಿಯಾಗುತ್ತಿದೆ. ಕೆಂಗೇರಿ ನೈಸ್ ರಸ್ತೆ ಬಳಿ ಇರುವ ಚರಂಡಿ ನೀರಿಗೆ ರಾಸಾಯನಿಕವನ್ನು ಮಿಶ್ರಣ ಮಾಡಿದ ಪರಿಣಾಮ 3 ಕಿ.ಮೀ ವ್ಯಾಪ್ತಿ ಜನತೆ ಈಗ ಕೆಟ್ಟ ವಾಸನೆಯಿಂದ ಕಂಗಲಾಗಿದ್ದಾರೆ.

    10 ದಿನದ ಹಿಂದೆಯೇ ವಾಸನೆ ಆರಂಭಗೊಂಡಿದ್ದರೂ ಅಷ್ಟೊಂದು ಪರಿಣಾಮ ಬೀರಿರಲಿಲ್ಲ. ಆದರೆ ಕಳೆದ ಎರಡು ದಿನಗಳಿಂದ ವಾಸನೆ ಜಾಸ್ತಿಯಾಗಿದ್ದು, ಸಂಜೆಯಾದರೆ ವಾಸನೆ ಮತ್ತಷ್ಟು ಜಾಸ್ತಿಯಾಗುತ್ತಿದೆ.

    ಆರಂಭದಲ್ಲಿ ಈ ವಾಸನೆಗೆ ಮೂಲ ಕಾರಣ ಏನು ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ಆದರೆ ವಾಸನೆ ಎಲ್ಲಿಂದ ಆರಂಭವಾಗಿದೆ ಎನ್ನುವುದರ ಮೂಲವನ್ನು ಹಿಡಿಯಲು ಹೋದಾಗ ಚರಂಡಿ ನೀರಿನಲ್ಲಿ ರಾಸಾಯನಿಕವನ್ನು ಮಿಶ್ರಣ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

    ನೈಸ್ ರಸ್ತೆಯ ಬಳಿ ಇರುವ ವಿಶ್ವೇಶ್ವರಯ್ಯ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ನಿವಾಸಿಗಳು ಈಗ ಆತಂಕಕ್ಕೆ ಒಳಗಾಗಿದ್ದಾರೆ. ಈ ವಾಸನೆಯಿಂದ ಬಾಣಂತಿ ಮತ್ತು ಮಕ್ಕಳ ಮೇಲೆ ಪರಿಣಾಮ ಭಾರೀ ಪರಿಣಾಮ ಬಿದ್ದಿದೆ. ಹೀಗಾಗಿ ಕೆಲ ತಾಯಂದಿರು ಈ ವಾಸನೆಯ ಕಾಟವನ್ನು ತಡೆಯಲಾರದೇ ಮಗುವಿನ ಜೊತೆ ತವರು ಮನೆಗೆ ಸೇರಿದ್ದಾರೆ. ಹಿರಿಯ ವ್ಯಕ್ತಿಗಳ ಆರೋಗ್ಯದ ಮೇಲೂ ಪರಿಣಾಮ ಬಿದ್ದಿದೆ.

    ನೊರೆ ಸಮಸ್ಯೆ ವಿಚಾರದಲ್ಲಿ ನ್ಯಾಯಾಲಯದಿಂದ ಪದೇ ಪದೇ ಚಾಟಿ ಏಟು ತಿನ್ನುತ್ತಿರುವ ಬಿಬಿಎಂಪಿ ಆರಂಭದಲ್ಲೇ ಈ ಕೆಟ್ಟ ಪ್ರವೃತ್ತಿಗೆ ಕಡಿವಾಣ ಹಾಕಬೇಕಿದೆ. ಕಡಿವಾಣ ಹಾಕದೇ ಇದ್ದಲ್ಲಿ ಮತ್ತಷ್ಟು ಕಡೆ ಕಿಡಿಗೇಡಿಗಳು ರಾಸಾಯನಿಕವನ್ನು ಚರಂಡಿ ನೀರಿಗೆ ಮಿಶ್ರಣ ಮಾಡುವ ಸಾಧ್ಯತೆಯಿದೆ.

    ಈ ವಿಚಾರದ ಬಗ್ಗೆ ಸ್ಥಳೀಯ ನಿವಾಸಿ ಅರವಿಂದ್ ಪಬ್ಲಿಕ್ ಟಿವಿಯ ಜೊತೆ ಮಾತನಾಡಿ, ಕೆಲ ದಿನಗಳ ಹಿಂದೆ ವಾಸನೆ ಬರಲು ಆರಂಭಗೊಂಡಿದ್ದರೂ ಯಾರು ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ 4-5 ದಿನಗಳಿಂದ ವಾಸನೆ ಜಾಸ್ತಿಯಾಗಿದೆ. ಆದರಲ್ಲೂ ಎರಡು ದಿನಗಳಿಂದ ವಿಪರೀತವಾಗಿದೆ. ರಾತ್ರಿ ವೇಳೆ ಚರಂಡಿ ನೀರಿಗೆ ಯಾರೋ ಯಾವುದೋ ರಾಸಾಯನಿಕವನ್ನು ಚೆಲ್ಲುತ್ತಿದ್ದಾರೆ. ಇದರಿಂದಾಗಿ ಈ ಸಮಸ್ಯೆ ಸೃಷ್ಟಿಯಾಗಿದೆ. ಈ ಸಮಸ್ಯೆಯ ಬಗ್ಗೆ ಯಶವಂತಪುರ ಶಾಸಕ ಸೋಮಶೇಖರ್ ಮತ್ತು ಬಿಬಿಎಂಪಿಯ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಸ್ಪತ್ರೆಯ ಹಾಸಿಗೆ ಮೇಲೆಯೇ ಕೊಳೆತು ವಾಸನೆ ಬಂದ ಅಜ್ಜಿಯ ಶವ- ಲಿಂಗಸಗೂರು ತಾಲೂಕಾಸ್ಪತ್ರೆಯಲ್ಲಿ ಘನಘೋರ ಘಟನೆ

    ಆಸ್ಪತ್ರೆಯ ಹಾಸಿಗೆ ಮೇಲೆಯೇ ಕೊಳೆತು ವಾಸನೆ ಬಂದ ಅಜ್ಜಿಯ ಶವ- ಲಿಂಗಸಗೂರು ತಾಲೂಕಾಸ್ಪತ್ರೆಯಲ್ಲಿ ಘನಘೋರ ಘಟನೆ

    ರಾಯಚೂರು: ಇಲ್ಲಿನ ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ಅಪರಿಚಿತ ಅಜ್ಜಿಯೊಬ್ಬರ ಶವ ಗಬ್ಬು ನಾರುತ್ತಿದ್ದರೂ ಶುಕ್ರವಾರದಿಂದ ಹಾಸಿಗೆ ಮೇಲೆಯೇ ಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

    75 ವರ್ಷದ ವೃದ್ಧೆ 15 ದಿನಗಳ ಹಿಂದೆ ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಶುಕ್ರವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಸಾವನಪ್ಪಿದ್ದಾರೆ. ಅಜ್ಜಿಯ ಸಾವನ್ನು ವೈದ್ಯರು ದೃಢಪಡಿಸಿದ್ದು, ಪೊಲೀಸರು ಪಂಚನಾಮೆಯನ್ನೂ ಮಾಡಿದ್ದಾರೆ.

     

    ಇಷ್ಟಾದರೂ ಶವವನ್ನು ವಾರ್ಡ್‍ನಿಂದ ಸಾಗಿಸದೆ ಹಾಗೇ ಬಿಟ್ಟಿದ್ದಾರೆ. ಇದರಿಂದ ಕೆಟ್ಟ ವಾಸನೆ ತಡೆಯಲಾಗದೆ ಉಳಿದ ರೋಗಿಗಳು ಕೊಠಡಿ ಹೊರಗೆ ಮಲಗಿದ್ದಾರೆ. ಕೆಲ ರೋಗಿಗಳಿಗೆ ಶವದ ವಾಸನೆಯಿಂದ ವಾಂತಿಯಾಗಿದೆ. ತಾಲೂಕಾಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಶವ ಆಸ್ಪತ್ರೆ ಹಾಸಿಗೆ ಮೇಲೆ ಕೊಳೆಯುತ್ತಿದೆ.

    ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆಸ್ಪತ್ರೆ ವೈದ್ಯರ ವಿರುದ್ಧ ರೋಗಿಗಳು ಕಿಡಿಕಾರುತ್ತಿದ್ದಾರೆ.

    https://www.youtube.com/watch?v=FNfJ7g11seg