Tag: ವಲಸೆ

  • ಗಡಿ ದಾಟಿ ಅಕ್ರಮವಾಗಿ ಅಮೆರಿಕ ಪ್ರವೇಶ – ಒಂದು ವರ್ಷದಲ್ಲಿ 96,917 ಮಂದಿ ಭಾರತೀಯರ ಬಂಧನ

    ಗಡಿ ದಾಟಿ ಅಕ್ರಮವಾಗಿ ಅಮೆರಿಕ ಪ್ರವೇಶ – ಒಂದು ವರ್ಷದಲ್ಲಿ 96,917 ಮಂದಿ ಭಾರತೀಯರ ಬಂಧನ

    ವಾಷಿಂಗ್ಟನ್‌: ಗಡಿ ದಾಟಿ ಅಕ್ರಮವಾಗಿ ಅಮೆರಿಕ (America) ಪ್ರವೇಶಿಸುತ್ತಿದ್ದ 96,917 ಮಂದಿ ಭಾರತೀಯರನ್ನು (Indians) ಒಂದು ವರ್ಷದ ಅವಧಿಯಲ್ಲಿ ಬಂಧಿಸಲಾಗಿದೆ ಎಂದು ಯುಎಸ್‌ ಕಸ್ಟಮ್ಸ್‌ & ಬಾರ್ಡರ್‌ ಪ್ರೊಟೆಕ್ಷನ್‌ ದತ್ತಾಂಶವು ತಿಳಿಸಿದೆ.

    2022 ರ ಅಕ್ಟೋಬರ್‌ನಿಂದ 2023 ರ ಸೆಪ್ಟೆಂಬರ್‌ ವರೆಗೆ 90 ಸಾವಿರಕ್ಕೂ ಹೆಚ್ಚು ಜನ ಗಡಿ ದಾಟಿ ಅಕ್ರಮವಾಗಿ ಅಮೆರಿಕವನ್ನು ಪ್ರವೇಶಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಕಾನೂನುಬಾಹಿರವಾಗಿ ಯುಎಸ್ ಗಡಿಯನ್ನು ದಾಟುವಾಗ ಭಾರತೀಯರು ಐದು ಪಟ್ಟು ಹೆಚ್ಚಳವಾಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಇದನ್ನೂ ಓದಿ: ಜರ್ಮನಿಯಲ್ಲಿ ಹಮಾಸ್‌ ಚಟುವಟಿಕೆಗೆ ಸಂಪೂರ್ಣ ನಿಷೇಧ

    2019-20ರಲ್ಲಿ 19,883 ಭಾರತೀಯರನ್ನು ಬಂಧಿಸಲಾಗಿತ್ತು. 2020-21ರಲ್ಲಿ 30,662 ಅರೆಸ್ಟ್‌ ಮಾಡಲಾಗಿದೆ. 2021-22ರಲ್ಲಿ ಈ ಸಂಖ್ಯೆ 63,927 ಆಗಿತ್ತು ಎಂದು ಅಂಕಿಅಂಶಗಳು ತಿಳಿಸಿವೆ.

    2022 ರ ಅಕ್ಟೋಬರ್‌ ಮತ್ತು ಸೆಪ್ಟೆಂಬರ್ ನಡುವೆ ಬಂಧಿಸಲಾದ 96,917 ಭಾರತೀಯರಲ್ಲಿ ಹೆಚ್ಚಾಗಿ ಪಂಜಾಬ್ ಮತ್ತು ಗುಜರಾತ್‌ ವಲಸೆ ಬಂದವರೇ ಆಗಿದ್ದಾರೆ. ಕೆನಡಾ ಗಡಿಯಲ್ಲಿ 30,010 ಮಂದಿ ಮತ್ತು 41,770 ಮಂದಿ ಮೆಕ್ಸಿಕೊದ ಗಡಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಭಾರತೀಯ ಮೂಲದ ವಿದ್ಯಾರ್ಥಿಗೆ ಚೂರಿ ಇರಿತ ಪ್ರಕರಣದಿಂದ ವಿಚಲಿತರಾಗಿದ್ದೇವೆ: ಯುಎಸ್

    2023 ರ ಆರ್ಥಿಕ ವರ್ಷದಲ್ಲಿ 84,000 ಭಾರತೀಯ ವಯಸ್ಕರು ಅಕ್ರಮವಾಗಿ ಯುಎಸ್ ಅನ್ನು ಪ್ರವೇಶಿಸಿದ್ದಾರೆ. ಬಂಧಿತರಲ್ಲಿ 730 ಅಪ್ರಾಪ್ತ ವಯಸ್ಕರು ಸೇರಿದ್ದಾರೆ. ಸೆನೆಟ್‌ನಲ್ಲಿ ಈ ಬಗ್ಗೆ ಮಾತನಾಡಿರುವ ಜೇಮ್ಸ್ ಲ್ಯಾಂಕ್‌ಫೋರ್ಡ್, ಮೆಕ್ಸಿಕೋದಲ್ಲಿನ ಕ್ರಿಮಿನಲ್ ಕಾರ್ಟೆಲ್‌ಗಳು ವಲಸಿಗರಿಗೆ ತರಬೇತಿ ನೀಡುತ್ತಿದ್ದಾರೆ. ದೇಶಕ್ಕೆ ಪ್ರವೇಶಿಸುವಾಗ ಏನು ಹೇಳಬೇಕು, ಎಲ್ಲಿಗೆ ಹೋಗಬೇಕು ಎಂಬ ಬಗ್ಗೆ ತಿಳಿಸಿಕೊಡುತ್ತಿದ್ದಾರೆ. ಅದಕ್ಕಾಗಿ ಹಣವನ್ನೂ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 6 ತಿಂಗಳಲ್ಲಿ ದೇಶ ತೊರೆದಿದ್ದಾರೆ 8 ಲಕ್ಷಕ್ಕೂ ಅಧಿಕ ಮಂದಿ – ಪಾಕಿಸ್ತಾನದಲ್ಲಿ ನಿಜಕ್ಕೂ ಏನಾಗ್ತಿದೆ?

    6 ತಿಂಗಳಲ್ಲಿ ದೇಶ ತೊರೆದಿದ್ದಾರೆ 8 ಲಕ್ಷಕ್ಕೂ ಅಧಿಕ ಮಂದಿ – ಪಾಕಿಸ್ತಾನದಲ್ಲಿ ನಿಜಕ್ಕೂ ಏನಾಗ್ತಿದೆ?

    ಪಾಕಿಸ್ತಾನದಲ್ಲಿ (Pakistan) ಇತ್ತೀಚೆಗೆ ದಾಖಲೆಯ ಸಂಖ್ಯೆಯಲ್ಲಿ ಜನರು ಪಲಾಯನಗೈಯುತ್ತಿದ್ದಾರೆ. ಕೇವಲ ಕಳೆದ 6 ತಿಂಗಳಲ್ಲಿ ಬರೋಬ್ಬರಿ 8 ಲಕ್ಷ ಜನ ದೇಶ ತೊರೆದಿದ್ದಾರೆ. ಅದರಲ್ಲೂ ಹೆಚ್ಚಾಗಿ ವೈದ್ಯರು, ಎಂಜಿನಿಯರ್‌ಗಳು, ಮಾಹಿತಿ ತಂತ್ರಜ್ಞಾನ ತಜ್ಞರು ಸೇರಿದಂತೆ ಬಹುತೇಕ ವಿದ್ಯಾವಂತರೇ ಇತರ ದೇಶಗಳಿಗೆ ಪರಾರಿಯಾಗುತ್ತಿದ್ದಾರೆ.

    ಕಳೆದ ಹಲವು ತಿಂಗಳುಗಳಿಂದ ಪಾಕಿಸ್ತಾನದ ಆರ್ಥಿಕತೆ ಭಾರೀ ಕುಸಿತ (Economic Crisis) ಕಂಡಿದೆ. ಹಣದುಬ್ಬರ, ನಿರುದ್ಯೋಗ, ಅನಿಶ್ಚಿತ ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳ ಬಗ್ಗೆ ಚಿಂತಿತರಾಗಿರೋ ಲಕ್ಷಾಂತರ ಜನರು ಉದ್ಯೋಗ ಹುಡುಕಲು ಇತರ ದೇಶಗಳಿಗೆ ತೆರಳುತ್ತಿದ್ದಾರೆ. ಆದರೂ ಅಂಕಿ ಅಂಶಗಳು ಒಂದು ಲೆಕ್ಕ ತೋರಿಸಿದರೆ ಅದರ ಅರ್ಧದಷ್ಟು ಜನರು ಅಕ್ರಮವಾಗಿಯೇ ಇತರ ದೇಶಗಳಿಗೆ ಪಲಾಯನಗೈಯುತ್ತಿದ್ದಾರೆ ಎಂದು ವರದಿಯಾಗಿದೆ.

    ಪಾಕ್ ತೊರೆದಿರೋರು ಎಷ್ಟು ಜನ?
    ಪಾಕಿಸ್ತಾನ ಸ್ಟ್ಯಾಟಿಸ್ಟಿಕ್ಸ್ ಬ್ಯೂರೋ ಅಂಕಿಅಂಶದ ಪ್ರಕಾರ ಈ ವರ್ಷದ ಜೂನ್‍ವರೆಗೆ 8.32 ಲಕ್ಷ ಪಾಕಿಸ್ತಾನಿಯರು ತಮ್ಮ ದೇಶವನ್ನು ತೊರೆದಿದ್ದಾರೆ. ಅದರಲ್ಲಿ ಸುಮಾರು 4 ಲಕ್ಷ ಜನ ವಿದ್ಯಾವಂತರು ಹಾಗೂ ಉನ್ನತ ಹುದ್ದೆ ಹೊಂದಿದವರೇ ಆಗಿದ್ದಾರೆ. ಕಳೆದ ವರ್ಷ ಸುಮಾರು 7.65 ಲಕ್ಷ ಮಂದಿ ಪಾಕಿಸ್ತಾನ ತೊರೆದಿದ್ದರು. ಅವರಲ್ಲಿ ಸುಮಾರು ಒಂದು ಲಕ್ಷ ಜನ ನುರಿತ ವೃತ್ತಿಪರರೇ ಆಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ತಾನವು ದೊಡ್ಡ ಪ್ರಮಾಣದ ವಲಸೆಗೆ (Immigration) ಸಾಕ್ಷಿಯಾಗಿದ್ದರೂ, ವಿದ್ಯಾವಂತರು ಹಾಗೂ ವೃತ್ತಿಪರರರೇ ದೇಶ ತೊರೆಯುತ್ತಿರುವುದು ಕಾಳಜಿಯ ವಿಷಯವಾಗಿದೆ.

    2021ರಲ್ಲಿ 2.25 ಲಕ್ಷ ಪಾಕಿಸ್ತಾನಿಗಳು ವಿದೇಶ ತೆರಳಿದ್ದಾರೆ. ಇದು 2022ಕ್ಕೆ ಹೋಲಿಸಿದರೆ ವಲಸೆ ಹೋದವರ ಸಂಖ್ಯೆ 3 ಪಟ್ಟು ಹೆಚ್ಚಾಗುತ್ತದೆ. 2020ರಲ್ಲಿ 2.8 ಲಕ್ಷ ಜನ ದೇಶ ತೊರೆದಿದ್ದಾರೆ. ಗಮನಾರ್ಹ ವಿಚಾರ ಏನೆಂದರೆ 2020-21ರಲ್ಲಿ ಪ್ರಪಂಚ ಕೊರೊನಾದ ಸಂಕಷ್ಟ ಎದುರಿಸುತ್ತಿತ್ತು ಮಾತ್ರವಲ್ಲದೇ ಬಹುತೇಕ ದೇಶಗಳಲ್ಲಿ ಪ್ರಯಾಣದ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು.

    ಯಾವ ಪ್ರದೇಶದಲ್ಲಿ ಪಲಾಯನ ಹೆಚ್ಚು?
    ಇಡೀ ಪಾಕಿಸ್ತಾನದಲ್ಲಿ ಭಾರತದ ಜೊತೆ ಗಡಿಯಾಗಿರುವ ಪಂಜಾಬ್ ಪ್ರಾಂತ್ಯದಿಂದಲೇ ಅರ್ಧಕ್ಕಿಂತಲೂ ಹೆಚ್ಚು ಜನರು ದೇಶವನ್ನು ತೊರೆಯುತ್ತಿದ್ದಾರೆ ಎಂದು ಎಕ್ಸ್‌ಪ್ರೆಸ್‌ ಟ್ರಿಬ್ಯೂನ್ ವರದಿ ತಿಳಿಸಿದೆ. ಸುಮಾರು 27,000 ಜನ ಪಾಕ್ ಆಕ್ರಮಿತ ಕಾಶ್ಮೀರದಿಂದ (POK) ಬಂದವರು ಎನ್ನಲಾಗಿದೆ.

    ಯಾವ ದೇಶಗಳಿಗೆ ಪಲಾಯನ?
    2022ರ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್ ವರದಿಯ ಪ್ರಕಾರ, ಅಧಿಕೃತವಾಗಿ ಹೆಚ್ಚಿನ ಪಾಕಿಸ್ತಾನಿಗಳು ಪಶ್ಚಿಮ ಏಷ್ಯಾದ ದೇಶಗಳಿಗೆ, ಪ್ರಮುಖವಾಗಿ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ (UAE) ವಲಸೆ ಹೋಗಿದ್ದಾರೆ. ಯುರೋಪ್‍ನಲ್ಲಿ ಹೆಚ್ಚಿನ ಪಾಕಿಸ್ತಾನಿಗಳು ರೋಮೇನಿಯಾಗೆ ತೆರಳಲು ಹೆಚ್ಚು ಆದ್ಯತೆ ನೀಡಿದ್ದಾರೆ.

    ಇಷ್ಟಕ್ಕೂ ಸುಲಭದ ಸ್ಥಳಾಂತರ ಹೇಗೆ ಸಾಧ್ಯ?
    ಪಾಕಿಸ್ತಾನಿಗಳು ಅಧಿಕೃತವಾಗಿ ಇತರ ದೇಶಗಳಿಗೆ ಸುಲಭವಾಗಿ ಸ್ಥಳಾಂತರವಾಗಲು ಒಂದು ಮುಖ್ಯ ಅನುಕೂಲವೇ ಉಭಯ ಪೌರತ್ವ. ಇತರ ದೇಶಗಳಿಗೆ ವಲಸೆ ಹೋಗುವ ಪಾಕಿಸ್ತಾನಿಯರು ತಮ್ಮ ಪಾಕಿಸ್ತಾನಿ ಪಾಸ್‍ಪೋರ್ಟ್‍ಗಳನ್ನು ಉಳಿಸಿಕೊಂಡು ಅದನ್ನು ಪ್ರಯಾಣಕ್ಕೂ ಬಳಸಬಹುದು. ಈ ಒಂದು ಅನುಕೂಲದಿಂದಾಗಿ ಭ್ರಷ್ಟಾಚಾರ ಎಸಗಿದವರು ಸುಲಭವಾಗಿ ಇತರ ದೇಶಗಳಲ್ಲಿ ಹಣ ಕೂಡಿಟ್ಟು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಪಾಕ್ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಕ್ಯಾಬಿನೆಟ್‍ನಲ್ಲಿದ್ದ 7ಕ್ಕೂ ಹೆಚ್ಚು ಸಚಿವರು ದ್ವಿಪೌರತ್ವ ಅನುಕೂಲದಿಂದ ಬೇರೆ ದೇಶಗಳಲ್ಲಿ ಶಾಶ್ವತ ಮನೆಗಳನ್ನು ಹೊಂದಿದ್ದಾರೆ. ಇದನ್ನೂ ಓದಿ: ಐಫೆಲ್ ಟವರ್‌ನ ರೋಚಕ ಇತಿಹಾಸ

    ಸಾಲದ ಕೂಪದಲ್ಲಿ ಪಾಕ್:
    ಇದೀಗ ಭ್ರಷ್ಟಾಚಾರ, ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಹಾನಿಗೊಳಗಾಗಿರುವ ಪಾಕಿಸ್ತಾನ ಇತರ ಮೂಲಗಳಿಂದ ಎರವಲು ಪಡೆದ ಹಣದಿಂದ ಆರ್ಥಿಕತೆಯನ್ನು ಸರಿದೂಗಿಸಲು ಶ್ರಮವಹಿಸುತ್ತಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಜುಲೈ 12 ರಂದು ಪಾಕಿಸ್ತಾನಕ್ಕೆ 3 ಬಿಲಿಯನ್ ಡಾಲರ್ ಬೇಲ್‍ಔಟ್ ಪ್ಯಾಕೇಜ್ ಅನ್ನು ನೀಡಿದೆ. ಈ ಮೂಲಕ ಅದರ ಸಾಲ ಮರುಪಾವತಿಯಲ್ಲಿ ಸಹಾಯ ಮಾಡಿದೆ. ಈಗ ಬಾಹ್ಯ ಸಾಲಗಳನ್ನು ತೀರಿಸಲು ಪಾಕ್ ಸರ್ಕಾರವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಇದು ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗಗಳ ಮೇಲೆಯೂ ಪರಿಣಾಮ ಬೀರುತ್ತಿದೆ.

    ಪಾಕಿಸ್ತಾನ ತನ್ನ ಪ್ರಜೆಗಳನ್ನು ಇತರ ದೇಶಗಳಿಂದ ವಾಪಸ್ ಕರೆತರುವುದು ಅದರ ಆರ್ಥಿಕತೆಯ ಪ್ರಮುಖ ಗುರಿಯಾಗಿದೆ. ಆದರೆ ಇದರಿಂದ ದೇಶದ ವ್ಯಾಪಾರದ ಅಸಮತೋಲನವನ್ನು ಸುಧಾರಿಸಲು ಸಾಧ್ಯವಿಲ್ಲ. ಪಾಕಿಸ್ತಾನ ತನ್ನ ರಫ್ತಿಗಿಂತಲೂ ಆಮದನ್ನು ಹೆಚ್ಚು ಮಾಡುತ್ತಿದೆ. ಅದು ಭಾರತದ ಮೇಲೆ ಕಣ್ಣಿಟ್ಟುಕೊಂಡು ಮಿಲಿಟರಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ವ್ಯಯಿಸುತ್ತಿದೆ.

    ಭಯೋತ್ಪಾದನೆ:
    ಇಸ್ಲಾಮಿಕ್ ಮೂಲಭೂತವಾದದ ಕಡೆ ಹೆಚ್ಚು ಗಮನಕೊಡುತ್ತಿರೋ ಪಾಕಿಸ್ತಾನ ಹಿಂದಿನಿಂದಲೂ ಭಾರತದಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಆದರೆ ಇದೇ ಹೆಚ್ಚುತ್ತಿರುವ ಮೂಲಭೂತವಾದದ ಕಾರಣದಿಂದ ಅದರ ಪ್ರವಾಸೋದ್ಯಮ ಕ್ಷೇತ್ರವನ್ನು ಬಹುತೇಕ ಹದಗೆಡಿಸಿಕೊಂಡಿದೆ. ಹತ್ತಿಯನ್ನು ಉತ್ಪಾದಿಸೋ ದೇಶವಾಗಿದ್ದರೂ ಪಾಕಿಸ್ತಾನ ತನ್ನ ಜವಳಿ ಉದ್ಯಮವನ್ನು ಅಭಿವೃದ್ಧಿಪಡಿಸುವಲ್ಲಿ ವಿಫಲವಾಗಿದೆ. ಇದನ್ನೂ ಓದಿ: ಕ್ಯಾನ್ಸರ್‌ ಭಯ ಬೇಡ – ಕಿಮೋಥೆರಪಿ ಎಂದರೇನು? ಅದು ಹೇಗೆ ಕೆಲಸ ಮಾಡುತ್ತೆ?

    ಪಾಕಿಸ್ತಾನಿಯರಲ್ಲಿ ಹತಾಶೆ:
    ಇದೆಲ್ಲದರ ನಡುವೆ ಪಾಕಿಸ್ತಾನದ ರಾಜಕೀಯ ಅಸ್ಥಿರತೆ ದೇಶದಲ್ಲಿ ಉದ್ಯಮ ಹಾಗೂ ಕೈಗಾರಿಕೆಗಳನ್ನು ಬದುಕಲು ಬುಡುವುದಿಲ್ಲ, ಅಭಿವೃದ್ಧಿ ಇನ್ನು ದೂರದ ಮಾತು ಎಂದು ವಿದ್ಯಾವಂತರು ದೇಶದ ಕರಾಳ ಭವಿಷ್ಯವನ್ನು ಈಗಾಗಲೇ ಕಂಡಿದ್ದಾರೆ. ಈ ಹಿನ್ನೆಲೆ ಗುಂಪು ಗುಂಪಾಗಿ ಪಾಕಿಸ್ತಾನದಿಂದ ವಲಸೆ ಹೋಗುತ್ತಿದ್ದಾರೆ. ಪಾಕಿಸ್ತಾನವು ಈಗ ಪೂರ್ಣ ಪ್ರಮಾಣದಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈಗಾಗಲೇ ಜನರಲ್ಲಿ ಹತಾಶೆ ಮೂಡಿದ್ದು ಲಕ್ಷಾಂತರ ಜನರನ್ನು ದೇಶ ತೊರೆಯುವಂತೆ ಮಾಡುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿಯಲ್ಲಿ ಶಿಸ್ತು ಹೋಗಿದೆ – ಕಾಂಗ್ರೆಸ್‌ನಿಂದ ವಲಸೆ ಬಂದವರ ವಿರುದ್ಧ ಈಶ್ವರಪ್ಪ ವಾಗ್ದಾಳಿ

    ಬಿಜೆಪಿಯಲ್ಲಿ ಶಿಸ್ತು ಹೋಗಿದೆ – ಕಾಂಗ್ರೆಸ್‌ನಿಂದ ವಲಸೆ ಬಂದವರ ವಿರುದ್ಧ ಈಶ್ವರಪ್ಪ ವಾಗ್ದಾಳಿ

    ಹುಬ್ಬಳ್ಳಿ: ಬಿಜೆಪಿಯಲ್ಲಿ (BJP) ಶಿಸ್ತು ಹೋಗಿದೆ. ಕಾಂಗ್ರೆಸ್ (Congress) ಗಾಳಿ ನಮ್ಮ ಮೇಲೂ ಬಂದಿದೆ. ವಲಸಿಗರಿಂದ (Immigrants) ಬಿಜೆಪಿ ಹಾಳಾಗುತ್ತಿದೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಕಾಂಗ್ರೆಸ್‌ನಿಂದ ವಲಸೆ ಬಂದವರ ಮೇಲೆ ವಾಗ್ದಾಳಿ ನಡೆಸಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾತನಾಡಿದ ಈಶ್ವರಪ್ಪ, ಕಾಂಗ್ರೆಸ್ ನಾಯಕರನ್ನು ಕರೆದುಕೊಂಡು ಬಂದಿದ್ದಕ್ಕೆ ನಾವು ಈಗ ಅನುಭವಿಸುತ್ತಿದ್ದೇವೆ. ಕಾಂಗ್ರೆಸ್ ನಾಯಕರು ಬಂದ ಮೇಲೆ ಅಲ್ಪ ಸ್ವಲ್ಪ ಅಶಿಸ್ತು ಬಂದಿದ್ದು ನಿಜ. ಆಪರೇಷನ್ ಕಮಲವೇ ಬಿಜೆಪಿ ಸೋಲಿಗೆ ಮುಳುವಾಯ್ತು. ಮುಂದೆ ನಮ್ಮ ನಾಯಕರು ಬಾಲ ಕಟ್ ಮಾಡ್ತಾರೆ ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ. ಇದನ್ನೂ ಓದಿ: ಎಲ್ಲಾ ದಂಗೆ, ಕೊಲೆಗಳಿಗೆ ಬಿಜೆಪಿಯೇ ನೇರ ಹೊಣೆ – ಪ್ರಮೋದ್ ಮುತಾಲಿಕ್ ಕಿಡಿ

    ಹೊಂದಾಣಿಕೆ ರಾಜಕೀಯದ ಬಗ್ಗೆ ಮಾತನಾಡಿದ ಅವರು, ಬಹಿರಂಗವಾಗಿ ಅಡ್ಜಸ್ಟ್ಮೆಂಟ್ ರಾಜಕಾರಣದ ಬಗ್ಗೆ ಚರ್ಚೆ ಆಗುತ್ತಿರುವುದು ದುರ್ದೈವ. ಬಹಿರಂಗವಾಗಿ ಯಾರು ಕೂಡಾ ಈ ರೀತಿ ಮಾತನಾಡಬಾರದು. ಇದು 4 ಗೋಡೆಗಳ ಮಧ್ಯೆ ನಡೆಯಬೇಕಾದ ಚರ್ಚೆ ಎಂದು ಹೇಳಿದರು. ಇದನ್ನೂ ಓದಿ: ಇಂದು ಕೇರಳಕ್ಕೆ ತೆರಳಲಿದ್ದಾನೆ ಬೆಂಗಳೂರು ಬಾಂಬ್‌ ಸ್ಫೋಟದ ಆರೋಪಿ ಮದನಿ

  • ಸ್ಥಳಾಂತರವಾಗಲು ಬಯಸುವ ಕಾಶ್ಮೀರಿ ಪಂಡಿತರಿಗೆ ಮಹಾರಾಷ್ಟ್ರದ ಬಾಗಿಲು ಯಾವಾಗ್ಲೂ ತೆರೆದಿರುತ್ತದೆ: ಆದಿತ್ಯ ಠಾಕ್ರೆ

    ಸ್ಥಳಾಂತರವಾಗಲು ಬಯಸುವ ಕಾಶ್ಮೀರಿ ಪಂಡಿತರಿಗೆ ಮಹಾರಾಷ್ಟ್ರದ ಬಾಗಿಲು ಯಾವಾಗ್ಲೂ ತೆರೆದಿರುತ್ತದೆ: ಆದಿತ್ಯ ಠಾಕ್ರೆ

    ಮುಂಬೈ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರಗಳಿಂದ ಕಾಶ್ಮೀರಿ ಪಂಡಿತರು ಆ ಸ್ಥಳವನ್ನೇ ತೊರೆಯುವ ಸ್ಥಿತಿ ಎದುರಾಗಿದೆ. ಈ ಕುರಿತು ಮಾತನಾಡಿದ ಮಹಾರಾಷ್ಟ್ರದ ಸಚಿವ ಆದಿತ್ಯ ಠಾಕ್ರೆ, ಅಲ್ಲಿಂದ ಸ್ಥಳಾಂತರಗೊಳ್ಳಲು ಬಯಸುವ ಕಾಶ್ಮೀರಿ ಪಂಡಿತರಿಗೆ ಮಹಾರಾಷ್ಟ್ರದ ಬಾಗಿಲು ತೆರೆದಿದೆ ಎಂದು ಹೇಳಿದರು.

    ನಾವು ಕಾಶ್ಮೀರಿ ಪಂಡಿತರನ್ನು ಬೆಂಬಲಿಸುತ್ತೇವೆ. ಅಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದೆ. ಇಂತಹ ಸಮಯದಲ್ಲಿ ಮತ್ತೆ ಪರಿಸ್ಥಿತಿ ಮರುಕಳಿಸುತ್ತಿರುವುದು ವಿಷಾದನೀಯ. ಅವರ ಸುರಕ್ಷತೆಗಾಗಿ ಭಾರತ ಸರ್ಕಾರ ಬಲವಾದ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ನಿರೀಕ್ಷಿಸುತ್ತೇವೆ. ಅವರಿಗಾಗಿ ನಮ್ಮ ಬಾಗಿಲು ಸದಾ ತೆರೆದಿರುತ್ತದೆ ಎಂದು ಹೇಳಿದರು. ಇದನ್ನೂ ಓದಿ: 20 ಮಂದಿಯ ರಾಜೀನಾಮೆಯ ಬೆನ್ನಲ್ಲೇ ನೂತನ ಸಚಿವ ಸಂಪುಟ ರಚನೆ- 13 ಮಂದಿ ಪ್ರಮಾಣವಚನ

    ಇತ್ತೀಚೆಗೆ ಕಾಶ್ಮೀರಿ ಪಂಡಿತರು ಹಾಗೂ ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ಸರಣಿ ಹತ್ಯೆ ನಡೆಸುತ್ತಿದ್ದಾರೆ. ಶನಿವಾರ 177 ಕಾಶ್ಮೀರಿ ಪಂಡಿತ ಶಿಕ್ಷಕರನ್ನು ಶ್ರೀನಗರದಿಂದ ಇತರ ಪ್ರದೇಶಗಳಿಗೆ ವರ್ಗಾವಣೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಈದ್ಗಾ ಮೈದಾನ ವಿವಾದ- ಗ್ರೌಂಡ್‍ನಲ್ಲಿ ಹಿಂದೂ ಸಂಘಟನೆಯ ಮುಖಂಡರ ಹೈಡ್ರಾಮಾ

    ಗುರುವಾರ ಬ್ಯಾಂಕ್ ಮ್ಯಾನೇಜರ್ ಹಾಗೂ ಓರ್ವ ಇಟ್ಟಿಗೆ ಗೂಡು ಕಾರ್ಮಿಕನನ್ನು ಎರಡು ಪ್ರತ್ಯೇಕ ಘಟನೆಗಳಲ್ಲಿ ಹತ್ಯೆ ಮಾಡಲಾಗಿತ್ತು. ಮಂಗಳವಾರ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಶಾಲೆಯೊಂದರಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಶಿಕ್ಷಕಿ ಬಲಿಯಾಗಿದ್ದರು. ಮೇ 1 ರಿಂದ ಇಲ್ಲಿಯವರೆಗೆ ಕಾಶ್ಮೀರದಲ್ಲಿ ಉದ್ದೇಶಿತ ಹತ್ಯೆಗಳಿಂದ 9 ಜನ ಬಲಿಪಶುಗಳಾಗಿದ್ದಾರೆ.

  • ಅನ್‍ಲಾಕ್ ಬೆನ್ನಲ್ಲೇ ಮತ್ತೆ ಮಹಾನಗರಗಳತ್ತ ಯಾದಗಿರಿ ಜನರ ಮಹಾ ವಲಸೆ

    ಅನ್‍ಲಾಕ್ ಬೆನ್ನಲ್ಲೇ ಮತ್ತೆ ಮಹಾನಗರಗಳತ್ತ ಯಾದಗಿರಿ ಜನರ ಮಹಾ ವಲಸೆ

    ಯಾದಗಿರಿ: ಅನ್‍ಲಾಕ್ ಹಿನ್ನೆಲೆ ಮತ್ತೆ ಮಹಾನಗರಗಳತ್ತ ಜಿಲ್ಲೆಯ ಜನರ ಮಹಾ ವಲಸೆ ಆರಂಭವಾಗಿದೆ. ರೈಲಿನ ಮೂಲಕ ಬೆಂಗಳೂರು, ಮುಂಬೈ, ಪುಣೆ ಕಡೆ ಗ್ರಾಮೀಣ ಜನರ ಗುಳೆ ಹೋಗುತ್ತಿದ್ದಾರೆ.ವಿಪರ್ಯಾಸ ಎಂದರೆ ರಾಜ್ಯದಲ್ಲೇ ಅತೀ ಹೆಚ್ಚು ಜನ ಗುಳೆ ಹೋಗುವ ಕುಖ್ಯಾತಿಗೆ ಯಾದಗಿರಿ ಪಾತ್ರವಾಗಿದೆ.

    ಕೊರೊನಾ ಮಹಾಮಾರಿಯ ಹೊಡೆತಕ್ಕೆ ಸಿಲುಕಿ ರಾಜ್ಯದಲ್ಲಿ ಘೋಷಣೆಯಾದ ಲಾಕ್‍ಡೌನ್‍ನಿಂದಾಗಿ ಜಿಲ್ಲೆಯ ಜನರ ಬದುಕು ದುಸ್ಥರವಾಗಿದೆ. ಎರಡೆರಡು ಬಾರಿ ಲಾಕ್‍ಡೌನ್ ಆದ ಪರಿಣಾಮ ಕೃಷಿಗಾಗಿ ಊರಿನಲ್ಲಿ ಸಾಲ ಮಾಡಿ ಅದನ್ನು ತೀರಸಲಾಗದೆ, ಸಾಲಕ್ಕೆ ಅಂಜಿ ಕೆಲವರು ಊರು ಬೀಡುತ್ತಿದ್ದಾರೆ. ಇನ್ನೂ ಕೆಲವರು ಹೊಸ ಬದುಕನ್ನು ಕಟ್ಟಿಕೊಳ್ಳಲು ದೂರದ ಪಟ್ಟಣಗಳಿಗೆ ರೈಲಿನ ಮೂಲಕ ಗುಳೆ ಹೊರಟಿದ್ದಾರೆ. ಇದನ್ನೂ ಓದಿ: ಯಾದಗಿರಿ ಜಿಲ್ಲೆಯ ನದಿಪಾತ್ರದಲ್ಲಿ ಫುಲ್ ಅಲರ್ಟ್ – 9 ಗ್ರಾಮಗಳ ಸ್ಥಳಾಂತರಕ್ಕೆ ಸಿದ್ಧತೆ

    ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಕೆಲಸ ನೀಡುವ ನರೇಗಾ ಯೋಜನೆಯೂ ಸಹ ಹಳ್ಳ ಹಿಡಿದಿದೆ. ಅಧಿಕಾರಿಗಳು ಸಹ ಜನರಿಗೆ ಸಮರ್ಪಕವಾಗಿ ಕೂಲಿ ನೀಡುತ್ತಿಲ್ಲ. ಇನ್ನೂ ಕೆಲವು ಕಡೆ ದುಡಿದ ಕೆಲಸಕ್ಕೆ ಕೂಲಿ ಸರಿಯಾಗಿ ನೀಡುತ್ತಿಲ್ಲ. ಇದರಿಂದಾಗಿ ಬೇಸತ್ತು ಜನ ದೊಡ್ಡ ದೊಡ್ಡ ನಗರಗಳತ್ತ ಮುಖ ಮಾಡಿದ್ದಾರೆ.

  • ಜೀವನಕ್ಕಿಂತ ಜೀವ ಮುಖ್ಯ, ತಾಂತ್ರಿಕ ಸಮಿತಿ ಹೇಳಿದಂತೆ ಕೇಳಿ: ಸರ್ಕಾರಕ್ಕೆ ರಾಜ್ಯಪಾಲರ ಸೂಚನೆ

    ಜೀವನಕ್ಕಿಂತ ಜೀವ ಮುಖ್ಯ, ತಾಂತ್ರಿಕ ಸಮಿತಿ ಹೇಳಿದಂತೆ ಕೇಳಿ: ಸರ್ಕಾರಕ್ಕೆ ರಾಜ್ಯಪಾಲರ ಸೂಚನೆ

    ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲ ವಿ.ಆರ್.ವಾಲಾ ಹೇಳಿದ್ದಾರೆ.

    ಕೋವಿಡ್ ನಿಯಂತ್ರಣಕ್ಕೆ ಸರ್ವಪಕ್ಷಗಳ ಸದಸ್ಯರ ಜೊತೆ ನಡೆದ ವರ್ಚುವಲ್ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಸರ್ವಪಕ್ಷಗಳ ಸದಸ್ಯರ ಮಾತುಗಳನ್ನು ವಿವರವಾಗಿ ಆಲಿಸಿದರು. ಎಲ್ಲ ಸದಸ್ಯರ ಮಾತಿನ ಬಳಿಕ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿದರು.

    ಜನರು ವಲಸೆ ಹೋಗ್ತಾರೆ ಎಂದು ಯೋಚನೆ ಮಾಡಬೇಡಿ, ವಲಸೆ ಹೋದವರು ವಾಪಸ್ ಬಂದಿದ್ದಾರೆ. ಊಟ ಸಿಗಲ್ಲ ಅಂತಾ ಯೋಚನೆ ಮಾಡಬೇಡಿ. ಆರೋಗ್ಯ ಕರ್ನಾಟಕ ನಮಗೆ ಬೇಕು ಎಂದು ಹೇಳಿದ ರಾಜ್ಯಪಾಲರು, ಸಾರ್ವಜನಿಕರು ಚಿಂತೆ ಮಾಡಬೇಡಿ. ಜೀವನಕ್ಕಿಂತ ಜೀವ ಮುಖ್ಯವಾಗಿದೆ. ತಾಂತ್ರಿಕ ಸಮಿತಿ ನಿರ್ಣಯದಂತೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದರು.

    ರಾಜ್ಯ ಸರ್ಕಾರ ಸಾರ್ವಜನಿಕರ ರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಸಿಎಂ ಯಡಿಯೂರಪ್ಪ ತಾಂತ್ರಿಕ ಸಮಿತಿ ಜೊತೆ ಚರ್ಚೆ ಮಾಡಿ, ಆದಷ್ಟು ಶೀಘ್ರ ಕ್ರಮ ಕೈಗೊಳ್ಳಿ ಎಂದು ಸರ್ಕಾರಕ್ಕೆ ಸೂಚಿಸಿದರು.

  • ದೆಹಲಿ ಲಾಕ್‍ಡೌನ್ – ತವರಿನತ್ತ ಮುಖಮಾಡಿದ ವಲಸೆ ಕಾರ್ಮಿಕರು

    ದೆಹಲಿ ಲಾಕ್‍ಡೌನ್ – ತವರಿನತ್ತ ಮುಖಮಾಡಿದ ವಲಸೆ ಕಾರ್ಮಿಕರು

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ 6 ದಿನಗಳ ಲಾಕ್‍ಡೌನ್ ಜಾರಿಗೆ ಆದೇಶ ಬರುತ್ತಿದ್ದಂತೆ ವಲಸೆ ಕಾರ್ಮಿಕರು ತಮ್ಮ ಊರುಗಳತ್ತ ಮುಖಮಾಡಿದ್ದಾರೆ.

    ಕೊವೀಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರ ದೆಹಲಿ ಸಂಪೂರ್ಣವಾಗಿ ಲಾಕ್‍ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ಭಯದಿಂದ ತಮ್ಮ ಊರುಗಳತ್ತ ಪ್ರಯಾಣ ಮಾಡಿದ್ದಾರೆ. ನಿನ್ನೆ ರಾತ್ರಿ 10 ಗಂಟೆಗೆ ಪ್ರಾರಂಭವಾದ ಲಾಕ್‍ಡೌನ್ ಏಪ್ರಿಲ್ 26ರ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಇರಲಿದೆ. ಅಗತ್ಯ ಸೇವೆಗಳಿಗೆ ಮಾತ್ರ ಅನುವು ಮಾಡಿಕೊಡಲಾಗಿದೆ. ಆದರೆ ಜನರು ಭಯಗೊಂಡು ತಮ್ಮ ಊರುಗಳಿಗೆ ಪ್ರಯಾಣ ಮಾಡಿದ್ದಾರೆ.

    ಕೇವಲ 6 ದಿನಗಳವರೆಗೆ ಮಾತ್ರ ಈ ಲಾಕ್‍ಡೌನ್ ಇರಲಿದೆ. ಹೀಗಾಗಿ ಯಾರು ದೆಹಲಿ ಬಿಟ್ಟು ಹೊರಗೆ ಹೋಗಬೇಡಿ ಎಂದು ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಆದರೆ ಸಾವಿರಾರು ಕೂಲಿ ಕಾರ್ಮಿಕರು ಗಂಟುಮೂಟೆ ಕಟ್ಟಿಕೊಂಡು ತಮ್ಮ ಊರುಗಳತ್ತ ಪ್ರಯಾಣ ಬೆಳಸುತ್ತಿದ್ದಾರೆ. ಮಧ್ಯರಾತ್ರಿಯಲ್ಲಿ ಕೂಲಿ ಕಾರ್ಮಿಕರು, ಆಟೋ, ಟೆಂಪೋ, ಬಸ್ ಹಾಗೂ ಲಾರಿ ಹತ್ತು ಊರುಗಳಿಗೆ ಹೋಗಿ ಸೇರುತ್ತಿದ್ದಾರೆ.

    ಲಾಕ್‍ಡೌನ್ ವಿಸ್ತರಣೆಯಾಗುವ ಸಾಧ್ಯತೆ ಇರುವುದರಿಂದ ನಾವು ಮನೆಗೆ ಹೋಗಲು ಬಯಸಿದ್ದೇವೆ. ಲಾಕ್‍ಡೌನ್ ಖಂಡಿತವಾಗಿಯೂ ನಮ್ಮ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನಾವು ನಮ್ಮ ಮನೆಯಲ್ಲಿಯೇ ಇರುವುದು ಉತ್ತಮವಾಗಿದೆ ವಲಸೆ ಹೋಗುತ್ತಿರುವ ಕಾರ್ಮಿಕರೊಬ್ಬರು ಹೇಳಿದ್ದಾರೆ.

    ಖಾಸಗಿ ಬಸ್ಸುಗಳಲ್ಲಿ ಟಿಕೆಟ್‍ಗೆ ಹೆಚ್ಚಿನ ಶುಲ್ಕ ವಿಧಿಸುತ್ತಿದ್ದಾರೆ. ನಾವು ಪ್ರತಿನಿತ್ಯ ಕೊಟ್ಟು ಓಡಾಡುವುದಕ್ಕಿಂತ ಅಧಿಕ ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ. ಮನೆಗೆ ತಲುಪಲು ನಮಗೆ 200 ರೂ. ಬೇಕು, ಆದರೆ ಅವರು ಈಗ 3,000-4,000 ರೂ. ವಿಧಿಸುತ್ತಿದ್ದಾರೆ, ನಾವು ಮನೆಗೆ ಹೇಗೆ ಹೋಗುತ್ತೇವೆ. ಲಾಕ್‍ಡೌನ್ ಘೋಷಿಸುವ ಮೊದಲು ಸಿಎಂ ನಮಗೆ ಸ್ವಲ್ಪ ಸಮಯ ನೀಡಬೇಕಾಗಿತ್ತು ಎಂದು ವಲಸೆ ಕಾರ್ಮಿಕರೊಬ್ಬರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

  • ಬೆಂಗಳೂರಿನಿಂದ ಬಂದವರಿಗೆ ಹಳ್ಳಿಗೆ ನೋ ಎಂಟ್ರಿ: ಶಾಸಕರ ಊರೇ ಸ್ವಯಂ ಸೀಲ್‍ಡೌನ್

    ಬೆಂಗಳೂರಿನಿಂದ ಬಂದವರಿಗೆ ಹಳ್ಳಿಗೆ ನೋ ಎಂಟ್ರಿ: ಶಾಸಕರ ಊರೇ ಸ್ವಯಂ ಸೀಲ್‍ಡೌನ್

    ಚಾಮರಾಜನಗರ: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಳದಿಂದ ಜನ ಭಯಭೀತರಾಗಿದ್ದು, ಸ್ವಂತ ಊರುಗಳಿಗೆ ಗುಳೆ ಹೋಗುತ್ತಿದ್ದಾರೆ. ಆದರೆ ಬೆಂಗಳೂರು ಸೇರಿದಂತೆ ವಿವಿಧ ಊರುಗಳಿಂದ ಬರುವವರಿಗೆ ಚಾಮರಾಜನಗರ ಜಿಲ್ಲೆಯ ಹತ್ತಾರು ಹಳ್ಳಿಗಳಲ್ಲಿ ಪ್ರವೇಶ ನಿರ್ಬಂಧಿಸಿ ಗ್ರಾಮಸ್ಥರೇ ಸ್ವಯಂ ನಿರ್ಧಾರ ಕೈಗೊಂಡಿದ್ದಾರೆ.

    ಒಂದು ವೇಳೆ ಚಾಮರಾಜನಗರ ಜಿಲ್ಲೆಯ ತಮ್ಮ ಊರಿಗೆ ಬರಲೇ ಬೇಕೆಂದರೆ ಗ್ರಾಮಸ್ಥರಿಗೆ ಮೊದಲೇ ತಿಳಿಸಬೇಕು, ಕೊರೊನಾ ಪರೀಕ್ಷಾ ವರದಿ ತರಬೇಕು. ಅಂದರೆ ಮಾತ್ರ ಗ್ರಾಮದೊಳಗೆ ಬಿಟ್ಟುಕೊಳ್ಳುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಈ ನಿಯಮಗಳನ್ನು ಉಲ್ಲಂಘಿಸಿ ಗ್ರಾಮದೊಳಕ್ಕೆ ಬಂದವರಿಗೆ 5 ರಿಂದ 10 ಸಾವಿರ ರೂ. ದಂಡ ವಿಧಿಸಲಾಗುವುದು, ಅಲ್ಲದೆ ಅಂತಹವರ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಕ್ವಾರಂಟೈನ್‍ಗೆ ಕಳುಹಿಸಲು ತೀರ್ಮಾನಿಸಿದ್ದಾರೆ.

    ಚಾಮರಾಜನಗರ ತಾಲೂಕಿನ ಬಂಡಿಗೆರೆ, ಬ್ಯಾಡಮೂಡ್ಲು, ನಲ್ಲೂರು ಮೋಳೆ. ಕೊಳ್ಳೇಗಾಲ ತಾಲೂಕಿನ ಮುಳ್ಳೂರು, ಬಸ್ತೀಪುರ, ಕುಣಗಳ್ಳಿ, ಹಂಪಾಪುರ, ಹರಳೇ ದಾಸನಪುರ. ಹನೂರು ತಾಲೂಕಿನ ಲೊಕ್ಕನಹಳ್ಳಿ, ದೊಡ್ಡಿಂದುವಾಡಿ. ಯಳಂದೂರು ತಾಲೂಕಿನ ಉಪ್ಪಿನಮೋಳೆ, ವೈಕೆ ಮೋಳೆ, ಕೃಷ್ಣಾಪುರ ಶಿವಕಳ್ಳಿ, ಅವಲ್ ಕಂದಹಳ್ಳಿ ಹೀಗೆ ಹತ್ತಾರು ಗ್ರಾಮಗಳಲ್ಲಿ ನಿಯಮಗಳನ್ನು ರೂಪಿಸಲಾಗಿದೆ.

    ಕೊರೊನಾ ಎಲ್ಲಿ ತಮ್ಮ ಗ್ರಾಮಕ್ಕೆ ವಕ್ಕರಿಸಿಬಿಡುತ್ತೋ ಎಂಬ ಭಯದಿಂದ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ. ಕೆಲವೆಡೆ ಪ್ರವೇಶ ದ್ವಾರದಲ್ಲೇ ಹೊರಗಿನವರಿಗೆ ಪ್ರವೇಶ ಇಲ್ಲ ಎಂದು ನಾಮಫಲಕಗಳನ್ನು ಹಾಕಲಾಗಿದೆ. ಇನ್ನೂ ಕೆಲವೆಡೆ ಗ್ರಾಮಕ್ಕೆ ಪ್ರವೇಶ ಕಲ್ಪಿಸುವ ರಸ್ತೆಗೆ ಬೇಲಿ ಹಾಕಲಾಗಿದೆ. ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಸ್ವಗ್ರಾಮ ಉಪ್ಪಿನಮೋಳೆ ಗ್ರಾಮದಲ್ಲೂ ಇದೇ ನಿರ್ಧಾರ ಕೈಗೊಂಡಿರುವುದು ಗಮನಾರ್ಹವಾಗಿದೆ.

  • ಟೆಕ್ಕಿಗಳಿಗೆ ಬಿಗ್‌ ಶಾಕ್‌ ನೀಡಿದ ಟ್ರಂಪ್ – ಭಾರತದ ಕಂಪನಿಗಳ ಮೇಲೆ ಪರಿಣಾಮ ಏನು?

    ಟೆಕ್ಕಿಗಳಿಗೆ ಬಿಗ್‌ ಶಾಕ್‌ ನೀಡಿದ ಟ್ರಂಪ್ – ಭಾರತದ ಕಂಪನಿಗಳ ಮೇಲೆ ಪರಿಣಾಮ ಏನು?

    ‌- ವರ್ಷಾಂತ್ಯದವರೆಗೆ ಎಚ್‌1ಬಿ ವೀಸಾ ಸಿಗಲ್ಲ
    – ಅಮೆರಿಕದ ಹಿತ ಕಾಪಾಡಲು ನಿರ್ಧಾರ ಎಂದ ಟ್ರಂಪ್

    ವಾಷಿಂಗ್ಟನ್‌: ಭಾರತೀಯ ಟೆಕ್ಕಿಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶಾಕ್‌ ನೀಡಿದ್ದಾರೆ. ಈ ವರ್ಷಾಂತ್ಯದವರೆಗೆ ಅಮೆರಿಕದಲ್ಲಿ ಉದ್ಯೋಗಕ್ಕೆ ತೆರಳುವ ಮಂದಿಗೆ ವೀಸಾ ನೀಡದೇ ಇರಲು ಟ್ರಂಪ್‌ ತೀರ್ಮಾನ ಕೈಗೊಂಡಿದ್ದಾರೆ.

    ಎಚ್‌1ಬಿ, ಎಲ್‌ ಮತ್ತು ತಾತ್ಕಾಲಿಕ ಉದ್ಯೋಗಕ್ಕಾಗಿ ಅಮೆರಿಕಕ್ಕೆ ಬರುತ್ತಿದ್ದ ಉದ್ಯೋಗಿಗಳಿಗೆ ನೀಡಲಾಗುತ್ತಿದ್ದ ವೀಸಾವನ್ನು ಡಿಸೆಂಬರ್‌ ಅಂತ್ಯದವರೆಗೆ ನೀಡದೇ ಇರಲು ಅಮೆರಿಕ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

    ಕೋವಿಡ್‌ 19ನಿಂದಾಗಿ ದೇಶದಲ್ಲಿ ಸಾಕಷ್ಟು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ಜನರ ಉದ್ಯೋಗವನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಟ್ರಂಪ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಡಿಸೆಂಬರ್‌ 31ರವರೆಗೆ ವೀಸಾ ನಿರ್ಬಂಧಿಸುವ ನಿರ್ಧಾರಕ್ಕೆ ಟ್ರಂಪ್‌ ಸೋಮವಾರ ಸಹಿ ಹಾಕಿದ ಕಾರಣ ಇನ್ನು ಮುಂದೆ ಡಿಸೆಂಬರ್‌ ವರೆಗೆ ವಿದೇಶದ ಯಾವ ವ್ಯಕ್ತಿ ಅಮೆರಿಕದಲ್ಲಿ ತೆರಳಿ ಉದ್ಯೋಗ ಮಾಡಲು ಸಾಧ್ಯವಿಲ್ಲ.

    2020ರ ಫೆಬ್ರವರಿ ಮತ್ತು ಏಪ್ರಿಲ್‌ ನಲ್ಲಿ 2 ಕೋಟಿಗೂ ಹೆಚ್ಚು ಅಮೆರಿಕದ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯೋಗಪತಿಗಳು ಈ ಜಾಗವನ್ನು ಭರ್ತಿ ಮಾಡಲು ಎಚ್‌-1ಬಿ ಮತ್ತು ಎಲ್‌ ವೀಸಾ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಸಾಕಷ್ಟು ಸಂಖ್ಯೆಯ ಅಮೆರಿಕದ ಯುವ ಜನತೆ ಉದ್ಯೋಗವನ್ನು ಕಳೆದುಕೊಂಡಿದ್ದಾರ. ಈ ನಿಟ್ಟಿನಲ್ಲಿ ಅವರನ್ನೆಲ್ಲ ರಕ್ಷಿಸಲು ಉದ್ಯೋಗ ವೀಸಾವನ್ನು ನಿರ್ಬಂಧಿಸಲಾಗಿದೆ ಎಂದು ಟ್ರಂಪ್‌ ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಟ್ರಂಪ್ ವೀಸಾ ನೀತಿಯಿಂದ ಭಾರತಕ್ಕೆ ಮರಳಿದ್ದ ಟೆಕ್ಕಿ ಪತ್ನಿ ನೇಣಿಗೆ ಶರಣು

    ಟ್ರಂಪ್‌ ನಿರ್ಧಾರಕ್ಕೆ ಈಗಾಗಲೇ ಭಾರೀ ವಿರೋಧ ವ್ಯಕ್ತವಾಗಿದೆ. ಗೂಗಲ್‌ ಕಂಪನಿಯ ಸಿಇಒ ಸುಂದರ್‌ ಪಿಚೈ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಅಮೆರಿಕದ ಆರ್ಥಿಕತೆಯ ಯಶಸ್ಸಿಗೆ ವಲಸೆ ಬಹಳಷ್ಟು ನೆರವಾಗಿದೆ. ಟೆಕ್ನಾಲಜಿಯಲ್ಲಿ ಗೂಗಲ್‌ ಜಾಗತಿಕ ನಾಯಕನಾಗಲು ವಲಸೆ ಬಹಳಷ್ಟು ನೆರವಾಗಿದೆ. ಇಂದಿನ ಘೋಷಣೆಯಿಂದ ನಮಗೆ ನಿರಾಸೆಯಾಗಿದೆ. ನಾವು ವಲಸಿಗರ ಪರವಾಗಿ ಇರುತ್ತೇವೆ ಮತ್ತು ಎಲ್ಲರಿಗೂ ಕೆಲಸದ ಅವಕಾಶವನ್ನು ವಿಸ್ತರಿಸುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಏನಿದು ಎಚ್‌-1ಬಿ, ಎಚ್‌-2ಬಿ, ಎಲ್‌-1 ವೀಸಾ?
    ವಲಸಿಗರಿಗೆ ದೇಶದಲ್ಲಿ ಉದ್ಯೋಗ ನೀಡಲು ಅಮೆರಿಕ ಸರ್ಕಾರ ಮೂರು ರೀತಿಯ ವೀಸಾಗಳನ್ನು ನೀಡುತ್ತದೆ. 1952 ರಿಂದ ಅಮೆರಿಕ ಸರ್ಕಾರ ವಲಸಿಗರಿಗೆ ಉದ್ಯೋಗ ವೀಸಾವನ್ನು ನೀಡಿದೆ. ಹೆಚ್-1ಬಿ, ಹೆಚ್-2ಬಿ ಮತ್ತು ಎಲ್-1 ವೀಸಾ ಈ ಮೂರೂ ಕೂಡ ವರ್ಕ್ ವೀಸಾ ಮಾತ್ರ ಆಗಿದ್ದು ತಾತ್ಕಾಲಿಕವಾಗಿ ನೀಡಲಾಗುತ್ತದೆ. ಐಟಿ ಮತ್ತು ಇತರೇ ಕ್ಷೇತ್ರಗಳ ಉನ್ನತ ಮಟ್ಟ ಉದ್ಯೋಗಿಗಳಿಗೆ ಎಚ್‌1ಬಿ ವೀಸಾ ನೀಡುತ್ತದೆ. 7 ವರ್ಷದ ಅವಧಿಯವರೆಗೆ ಉದ್ಯೋಗ ಮಾಡಲು ಎಲ್‌1 ವೀಸಾ ನೀಡುತ್ತದೆ. ಆಹಾರ ಮತ್ತು ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಎಚ್‌2ಬಿ ವೀಸಾ ನೀಡುತ್ತದೆ.

    ಭಾರತೀಯರ ಮೇಲೆ ಪರಿಣಾಮ ಏನು?
    ಅಮೆರಿಕ ಸರ್ಕಾರ ಒಂದು ವರ್ಷಕ್ಕೆ ಗರಿಷ್ಟ 85 ಸಾವಿರ ಮಂದಿಗೆ ಮಾತ್ರ ಎಚ್‌-1ಬಿ ವೀಸಾ ನೀಡುತ್ತದೆ. ಭಾರತ ಐಟಿ ಕಂಪನಿಗಳು ಎಚ್‌-1ಬಿ ವೀಸಾದ ಅಡಿಯಲ್ಲಿ ಉದ್ಯೋಗಿಗಳನ್ನು ಅಮೆರಿಕಕ್ಕೆ ಕಳುಹಿಸುತ್ತದೆ. ವೀಸಾ ಅವಧಿ ವಿಸ್ತರಿಸದೇ ಇರುವ ಮತ್ತು ಜೂನ್‌ 23ಕ್ಕೆ ವೀಸಾ ಅವಧಿ ಅಂತ್ಯವಾಗುತ್ತದೋ ಅವರಿಗೆ ಮತ್ತೆ ವೀಸಾ ಸಿಗುವುದಿಲ್ಲ. 2020ರ ಏಪ್ರಿಲ್‌ 1 ರ ವೇಳೆ ಅಮೆರಿಕದ ಪೌರತ್ವ ಮತ್ತು ವಲಸೆ ವಿಭಾಗಕ್ಕೆ ಒಟ್ಟು 2.5 ಲಕ್ಷ ಮಂದಿ ಎಚ್‌-1ಬಿ ವೀಸಾಕ್ಕೆ ಅರ್ಜಿ ಹಾಕಿದ್ದು ಈ ಪೈಕಿ 1.84 ಲಕ್ಷ ಭಾರತೀಯರೇ ಆಗಿದ್ದಾರೆ.

    ಇಲ್ಲಿಯವರೆಗೆ ಲಾಟರಿ ಆಯ್ಕೆ ಮೂಲಕ ಅಮೆರಿಕದ ವೀಸಾ ಸಿಗುತ್ತಿತ್ತು. ಆದರೆ ಇನ್ನು ಮುಂದೆ ಕಂಪನಿಯಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ಹೆಚ್ಚು ಕೌಶಲ್ಯ ಇರುವ ಉದ್ಯೋಗಿಗಳಿಗೆ ಮಾತ್ರ ವೀಸಾ ನೀಡಲು ಅಮೆರಿಕ ಸರ್ಕಾರ ಮುಂದಾಗಿದೆ. ಭಾರತದ ಐಟಿ ಕಂಪನಿಗಳು ಕಡಿಮೆ ಸಂಬಳ ನೀಡುವ ಮೂಲಕ ಭಾರತೀಯ ಟೆಕ್ಕಿಗಳನ್ನು ಉದ್ಯೋಗಕ್ಕೆ ಕಳುಹಿಸುತಿತ್ತು. ಒಂದು ವೇಳೆ ಅಮೆರಿಕದವರಿಗೆ ಉದ್ಯೋಗ ನೀಡಿದರೆ ಹೆಚ್ಚು ಸಂಬಳ ನೀಡಬೇಕಿತ್ತು.

    ಕನಿಷ್ಠ ಸಂಬಳ ಈಗ ಎಷ್ಟಿರಬೇಕು?
    ಕನಿಷ್ಠ 1,30,000 ಡಾಲರ್(ಅಂದಾಜು 88.17 ಲಕ್ಷ ರೂ.) ಸಂಬಳ ಹೊಂದಿದ ಉದ್ಯೋಗಿಗಳಿಗೆ ಮಾತ್ರ ಎಚ್-1ಬಿ ವೀಸಾ ನೀಡಲು ಅಮೆರಿಕ ಸರ್ಕಾರ 2017ರಲ್ಲಿ ನಿರ್ಧಾರ ಕೈಗೊಂಡಿದೆ. ಎಚ್-1ಬಿ ವೀಸಾದ ಕಾನೂನು ತಿದ್ದುಪಡಿಯಾಗಿದ್ದು, ಎಚ್-1ಬಿ ವೀಸಾ ಪಡೆಯಲು ಉದ್ಯೋಗಿಗಳಿಗೆ ಕನಿಷ್ಠ 1.30 ಲಕ್ಷ ಡಾಲರ್ ಸಂಬಳ ನೀಡಬೇಕೆಂಬ ಅಂಶವಿದೆ.

    ಈ ಮೊದಲು ಎಚ್-1ಬಿ ವೀಸಾ ಹೊಂದಿದವರಿಗೆ ಕನಿಷ್ಠ ಸಂಬಳದ ಮಿತಿ 60 ಸಾವಿರ ಡಾಲರ್(40.69 ಲಕ್ಷ ರೂ.) ಇತ್ತು. 1989ರ ಜಾರಿಗೆ ಬಂದಿದ್ದ ಈ ವೀಸಾ ನಿಯಮದಲ್ಲಿ 2017ರವರೆಗೆ ಯಾವುದೇ ಬದಲಾವಣೆ ಆಗಿರಲಿಲ್ಲ. ಹೀಗಾಗಿ ಭಾರತೀಯ ಸಾಫ್ಟ್ ವೇರ್ ಕಂಪೆನಿಗಳು ಟೆಕ್ಕಿಗಳನ್ನು ಎಚ್-1ಬಿ ವೀಸಾದ ಅಡಿಯಲ್ಲಿ ಅಮೆರಿಕ ದೇಶಕ್ಕೆ ಕಳುಹಿಸಿಕೊಡುತಿತ್ತು. ಆದರೆ ಈಗ ಈ ವೀಸಾದ ಅಡಿ ಅಮೆರಿಕಕ್ಕೆ ತೆರಳುವ ಉದ್ಯೋಗಿಗಳ ಸಂಬಳದ ಮಿತಿ ಡಬಲ್ ಆಗಿದೆ.

  • ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ವ್ಯವಸ್ಥೆ- ಡಿಸಿಎಂ ಪರಮೇಶ್ವರ್

    ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರಿಗೆ ವ್ಯವಸ್ಥೆ- ಡಿಸಿಎಂ ಪರಮೇಶ್ವರ್

    ಮಂಗಳೂರು: ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಿ ಗಡಿಪಾರು ಮಾಡಲು ವ್ಯವಸ್ಥೆ ಮಾಡಲಾಗಿದೆ ಅಂತಾ ಉಪಮುಖ್ಯಮಂತ್ರಿ ಡಾ. ಪರಮೇಶ್ವರ್ ಹೇಳಿದ್ದಾರೆ.

    ನಗರದಲ್ಲಿ ಸದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಗ್ಲಾ ದೇಶಿಗರು ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವ ಮಾಹಿತಿಯಿದೆ. ಇದಲ್ಲದೆ, ಇತರೇ ದೇಶದ ನಿವಾಸಿಗಳೂ ರಾಜ್ಯದಲ್ಲಿ ನೆಲೆಸಿದ್ದರೆ ಅವರನ್ನು ಪತ್ತೆ ಮಾಡಿ ಸಂಬಂಧಿತ ದಾಖಲೆಗಳನ್ನು ಹೊಂದಿಲ್ಲದಿದ್ದರೆ ತಕ್ಷಣವೇ ಏರ್ ಟಿಕೆಟ್ ಮಾಡಿ ಆಯಾ ದೇಶಕ್ಕೆ ಕಳಿಸ್ತಿದ್ದೇವೆ. ಈ ಬಗ್ಗೆ ಅಲ್ಲಿನ ರಾಯಭಾರ ಕಚೇರಿಗಳಿಗೂ ತಿಳಿಸಲಾಗಿದೆ ಅಂತಾ ಹೇಳಿದ್ದಾರೆ. ಇದನ್ನೂ ಓದಿ: ಹಿಂದೂಗಳ ಕಡೆಗಣನೆಯೇ ಕಾಂಗ್ರೆಸ್ ಸೋಲಿಗೆ ಕಾರಣವೆಂದ ಜೆಡಿಎಸ್- ಸಚಿವ ಖಾದರ್ ತಿರುಗೇಟು

    ಇದೇ ವೇಳೆ, ಹಿಂದೂಗಳ ಕಡೆಗಣಿಸಿದ್ದರಿಂದ ಕಾಂಗ್ರೆಸ್ಸಿಗೆ ಸೋಲಾಗಿದೆ ಎಂಬ ಜೆಡಿಎಸ್ ಮುಖಂಡ ಬೋಜೇಗೌಡರ ಮಾತಿಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಅದು ಅವರ ಅಭಿಪ್ರಾಯ ಇದ್ದಿರಬಹುದು. ನಮ್ಮ ಪಕ್ಷದ ವತಿಯಿಂದ ಮಾಡಿರುವ ಅನಾಲಿಸಿಸ್ ಬೇರೆಯದ್ದೇ ಇದೆ. ಇನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳೋದಿಲ್ಲ. ಈ ಬಗ್ಗೆ ಈಗಾಗ್ಲೇ ಕೆಪಿಸಿಸಿ ಅಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ ಅಂದ್ರು.

    ಬೆಳಗಾವಿಯಿಂದ ಹೆದ್ದಾರಿ ಪ್ರಾಧಿಕಾರದ ಕೆಶಿಪ್ ಕಚೇರಿಗಳನ್ನು ಹಾಸನಕ್ಕೆ ಸ್ಥಳಾಂತರ ಮಾಡಿದ್ರ ಬಗ್ಗೆ ಕಾಂಗ್ರೆಸ್ ಸಚಿವರ ವಿರೋಧ ನಿಲುವಿಗೆ ಪರಮೇಶ್ವರ್ ಸಮಜಾಯಿಷಿ ನೀಡಿದ್ದಾರೆ. ಆಡಳಿತ ಕಾರಣದಿಂದ ಸ್ಥಳಾಂತರ ಮಾಡಿದ್ದಿರಬಹುದು, ಇದರಿಂದ ಉತ್ತರ ಕರ್ನಾಟಕಕ್ಕೆ ಯಾವುದೇ ಅನ್ಯಾಯ ಮಾಡಿದಂತಾಗಲ್ಲ ಅಂತಾ ಸಮರ್ಥನೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews