Tag: ಲೋಕಸಭಾ ಚುನಾವಣೆ 2019

  • 2019; ಮೋದಿ ಅಲೆಯಲ್ಲಿ ಮತ್ತೆ ಅರಳಿದ ಕಮಲ

    2019; ಮೋದಿ ಅಲೆಯಲ್ಲಿ ಮತ್ತೆ ಅರಳಿದ ಕಮಲ

    – ಸಿಎಂ ಪುತ್ರನ ವಿರುದ್ಧ ಗೆದ್ದು ಬೀಗಿದ್ದ ಸುಮಲತಾ
    – ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡಗೆ ಸೋಲು

    – ಪಬ್ಲಿಕ್‌ ಟಿವಿ
    2019 ಮೋದಿ (Narendra Modi) ನೇತೃತ್ವದ ಸರ್ಕಾರಕ್ಕೆ ಅತ್ಯಂತ ಮಹತ್ವದ ವರ್ಷವಾಗಿತ್ತು. ದೇಶದಲ್ಲಿ ಮೋದಿ ಅಲೆ ಹೇಗಿತ್ತು ಎಂಬುದು 17ನೇ ಸಾರ್ವತ್ರಿಕ ಚುನಾವಣಾ ಫಲಿತಾಂಶದಿಂದ ತಿಳಿಯಿತು. ಚುನಾವಣೆಗೂ ಮೊದಲು ಮೋದಿ ನೇತೃತ್ವದ ಐದು ವರ್ಷಗಳ ಆಡಳಿತದ ಬಗ್ಗೆ ಹಲವಾರು ಟೀಕೆಗಳೂ ಕೇಳಿಬಂದಿದ್ದವು. ನೋಟು ರದ್ದತಿ, ತನಿಖಾ ಸಂಸ್ಥೆಗಳ ದುರ್ಬಳಕೆ, ಸರ್ವಾಧಿಕಾರ ಆಡಳಿತ ಆರೋಪಗಳು ಕೇಳಿಬಂದಿದ್ದವು. ಇದರ ನಡುವೆ ಸ್ವಚ್ಛಭಾರತ ಅಭಿಯಾನ, ಸಿಎಎ ಜಾರಿ ಭರವಸೆ, ಆಯುಷ್ಮಾನ್ ಭಾರತದಂತಹ ಕ್ರಮಗಳು ಬಿಜೆಪಿ ಕೈಹಿಡಿದವು. ಇದೆಲ್ಲದಕ್ಕಿಂತ ಮುಖ್ಯವಾಗಿ ಚುನಾವಣಾ ಹೊತ್ತಲ್ಲಿ ಆದ ಪುಲ್ವಾಮಾ ದಾಳಿ ದೇಶದ ರಾಜಕೀಯ ದಿಕ್ಕನ್ನೇ ಬದಲಿಸಿತು.

    ಸ್ವಚ್ಛಭಾರತ
    2014 ರಲ್ಲಿ ಮೋದಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದರು. ಅವರ ಪ್ರಮುಖ ಯೋಜನೆಗಳಲ್ಲಿ ಸ್ವಚ್ಛಭಾರತ ಕೂಡ ಒಂದು. ಈ ಕಾರ್ಯಕ್ರಮದಡಿ ಭಾರತವು ಶೌಚ ಮುಕ್ತ ದೇಶವಾಗಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿತು. ಆದರೂ ಶೌಚಾಲಯ ಹೊಂದಿರುವ ಮನೆಗಳ ಪ್ರಮಾಣ ಶೇ.100 ಇಲ್ಲ. ಆದರೂ ಯೋಜನೆಯಿಂದಾಗಿ ದೇಶದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಸಿಕ್ಕಿತು. ಇದನ್ನೂ ಓದಿ: 2014; ಪಾತಾಳಕ್ಕೆ ಕುಸಿದ ಕಾಂಗ್ರೆಸ್ – ದಿಲ್ಲಿ ಗದ್ದುಗೆಯೇರಿದ ನರೇಂದ್ರ ಮೋದಿ

    ನೋಟು ರದ್ದತಿ
    2016 ರ ನವೆಂಬರ್ 8 ರಂದು ಮಧ್ಯರಾತ್ರಿಯಿಂದಲೇ ಜಾರಿಯಾಗುವಂತೆ 500 ರೂ. ಮತ್ತು 1000 ರೂ. ಮುಖಬೆಲೆ ನೋಟುಗಳನ್ನು ರದ್ದು ಮಾಡಿ ಪ್ರಧಾನಿ ಮೋದಿ ಆದೇಶ ಹೊರಡಿಸಿದ್ದರು. ಹೆಚ್ಚು ಮುಖಬೆಲೆಯ ನೋಟುಗಳಿಂದ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ. ಜೊತೆಗೆ ಭಯೋತ್ಪಾದನೆ ನಿಗ್ರಹಕ್ಕೆ ಈ ಕ್ರಮ ಅಗತ್ಯ ಎಂದು ಕೇಂದ್ರ ಸರ್ಕಾರ ನೋಟು ರದ್ದತಿ ಕ್ರಮವನ್ನು ಸಮರ್ಥಿಸಿಕೊಂಡಿತ್ತು. ನೋಟು ರದ್ದತಿ ಕಾರಣದಿಂದಾಗಿ ಸುಮಾರು 100 ಜನ ತಮ್ಮ ಪ್ರಾಣ ಕಳೆದುಕೊಂಡರು. ಕೇಂದ್ರ ಕ್ರಮವನ್ನು ವಿಪಕ್ಷಗಳು ಟೀಕಿಸಿದ್ದವು. ಇದೊಂದು ಆರ್ಥಿಕ ನರಮೇಧ ಮತ್ತು ವ್ಯವಸ್ಥಿತ ಲೂಟಿ ಎಂದು ಕೇಂದ್ರ ಸರ್ಕಾರವನ್ನು ದೂರಿದ್ದವು.

    ಒಂದು ದೇಶ ಒಂದು ತೆರಿಗೆ
    2017 ರಲ್ಲಿ ಸರಕು ಮತ್ತು ಸೇವಾ ತೆರಿಗೆ-ಜಿಎಸ್‌ಟಿಯನ್ನು (GST) ಕೇಂದ್ರ ಸರ್ಕಾರ ಜಾರಿಗೆ ತಂದಿತು. ಒಂದು ದೇಶ ಒಂದು ತೆರಿಗೆ ಪರಿಕಲ್ಪನೆಯಲ್ಲಿ ಯೋಜನೆ ಜಾರಿಗೊಳಿಸಿತು. ಆದರೂ ಜಿಎಸ್‌ಟಿ ಜಾರಿಯಿಂದ ರಾಜ್ಯ ಸರ್ಕಾರಗಳು ನಷ್ಟ ಅನುಭವಿಸಿದವು. ಇದನ್ನು ಕೇಂದ್ರ ಸರ್ಕಾರವೇ ಭರಿಸುವುದಾಗಿ ಒಪ್ಪಿಕೊಂಡರೂ, ಪರಿಹಾರವನ್ನು ಪೂರ್ಣ ಪ್ರಮಾಣದಲ್ಲಿ ರಾಜ್ಯ ಸರ್ಕಾರಗಳಿಗೆ ನೀಡಿಲ್ಲ. ಇದನ್ನೂ ಓದಿ: 2009, 2014, 2019ರ ಲೋಕಸಭಾ ಚುನಾವಣೆಯಲ್ಲಿ ಏನಾಗಿತ್ತು? ಗೆದ್ದ ಕಲಿಗಳು ಯಾರು? – ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!

    ಪುಲ್ವಾಮಾ ದಾಳಿ
    ಚುನಾವಣೆ ಇನ್ನೇನು ಹತ್ತಿರದಲ್ಲಿದೆ ಎನ್ನುವಾಗಲೇ ಜಮ್ಮುವಿನ ಪುಲ್ವಾಮಾದಲ್ಲಿ (Pulwama Attack) ಸಿಆರ್‌ಪಿಎಫ್ ಯೋಧರ ವಾಹನಗಳ ಮೇಲೆ ಉಗ್ರರ ದಾಳಿ ನಡೆಯಿತು. ಸಿಆರ್‌ಪಿಎಫ್‌ನ 40 ಯೋಧರು ದಾಳಿಯಲ್ಲಿ ಮೃತಪಟ್ಟರು. ಪುಲ್ವಾಮಾ ದಾಳಿ ಪ್ರತಿಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ತಾಣಗಳ ಮೇಲೆ ದಾಳಿ ನಡೆಸಿತು. ಬಾಲಾಕೋಟ್ ವೈಮಾನಿಕ ದಾಳಿ ಮತ್ತು ಸೇನಾ ಕಾರ್ಯಾಚರಣೆಗಳು ಹೆಚ್ಚು ಸದ್ದು ಮಾಡಿದವು. ನಂತರ ನಡೆದ ಚುನಾವಣೆಯಲ್ಲಿ ಮೋದಿ ಸರ್ಕಾರ ಅಭೂತಪೂರ್ವ ಜಯ ಸಾಧಿಸಿತು.

    39 ದಿನ ಚುನಾವಣೆ
    ಏ.11 ರಿಂದ ಮೇ 19 ರ ವರೆಗೆ ಚುನಾವಣೆ ನಡೆಯಿತು. ಒಟ್ಟು 543 ಕ್ಷೇತ್ರಗಳಿಗೆ 39 ದಿನ ಮತದಾನ ನಡೆಯಿತು.

    ಒಟ್ಟು ಮತದಾರರು: 91.2 ಕೋಟಿ
    ಮತ ಚಲಾಯಿಸಿದವರ ಸಂಖ್ಯೆ: 61,20,81,902
    ಮತ ಪ್ರಮಾಣ: 69.05%

    ರಾಜ್ಯಗಳು: 36

    ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
    ಬಿಜೆಪಿ – 303
    ಕಾಂಗ್ರೆಸ್ – 52
    ಡಿಎಂಕೆ – 23
    ಎಐಟಿಸಿ – 22
    ವೈಎಸ್‌ಆರ್‌ಸಿಪಿ – 22
    ಪಕ್ಷೇತರ – 4
    ಇತರೆ – 116

    ಮತ್ತೆ ಗೆದ್ದ ಮೋದಿ
    ಚುನಾವಣೆಯಲ್ಲಿ ಬಿಜೆಪಿ 37.36% ಮತಗಳನ್ನು ಪಡೆಯಿತು. ಇದು 1989 ರ ಸಾರ್ವತ್ರಿಕ ಚುನಾವಣೆಯ ನಂತರ ರಾಜಕೀಯ ಪಕ್ಷವೊಂದು ಪಡೆದ ಅತ್ಯಧಿಕ ಮತ ಪ್ರಮಾಣವಾಗಿದೆ. 303 ಸ್ಥಾನಗಳನ್ನು ಗೆದ್ದ ಬಿಜೆಪಿ ಕಳೆದ ಚುನಾವಣೆಗಿಂತ ಬಹುಮತವನ್ನು ಹೆಚ್ಚಿಸಿಕೊಂಡಿತು. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 353 ಸ್ಥಾನಗಳನ್ನು ಗೆದ್ದುಕೊಂಡಿತು. ಕಾಂಗ್ರೆಸ್ 52 ಸ್ಥಾನಗಳನ್ನು ಗೆದ್ದುಕೊಂಡಿತು. ವಿರೋಧ ಪಕ್ಷವಾಗಲು ಬೇಕಾದ ಸ್ಥಾನಗಳನ್ನು ಪಡೆಯುವಲ್ಲೂ ವಿಫಲವಾಯಿತು. ಇದರ ಜೊತೆಗೆ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ (ಯುಪಿಎ) 91 ಸ್ಥಾನಗಳನ್ನು ಗೆದ್ದಿತು.

    ಕರ್ನಾಟಕದಲ್ಲಿ ಏನಾಗಿತ್ತು?
    ಬಿಜೆಪಿ – 25
    ಕಾಂಗ್ರೆಸ್ – 1
    ಜೆಡಿಎಸ್ – 1
    ಪಕ್ಷೇತರ – 1

    ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಹೊಡೆತ
    ಚುನಾವಣೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿತ್ತು. ಲೋಕಸಭಾ ಚುನಾವಣೆಯಲ್ಲಿ (2019 Lok Sabha Elections) ಬಿಜೆಪಿ ವಿರುದ್ಧ ಮೈತ್ರಿ ಪಕ್ಷಗಳು ಸ್ಪರ್ಧೆ ಮಾಡಿದ್ದವು. ಆದರೆ ಮೋದಿ ಅಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹೀನಾಯ ಸ್ಥಿತಿ ತಲುಪಿದವು. ಬಿಜೆಪಿ 25 ಸ್ಥಾನಗಳನ್ನು ಗೆದ್ದರೆ, ಮೈತ್ರಿ ಪಕ್ಷಗಳು ತಲಾ 1 ಸ್ಥಾನಗಳನ್ನು ಮಾತ್ರ ಗೆದ್ದವು. ಇದನ್ನೂ ಓದಿ: 1999: ಮತ್ತೆ ಪ್ರಧಾನಿಯಾದ ‘ಅಜಾತಶತ್ರು’ – 5 ವರ್ಷ ಪೂರ್ಣ ಆಡಳಿತ ನಡೆಸಿದ ಮೊದಲ ಬಿಜೆಪಿ ನಾಯಕ

    ಗೆದ್ದು ಬೀಗಿದ ಮಂಡ್ಯ ಸೊಸೆ
    2019 ರ ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದ ಗಮನ ಸೆಳೆದ ಕ್ಷೇತ್ರ ಮಂಡ್ಯ. ನಟ ಅಂಬರೀಶ್‌ ನಿಧನದ ಬಳಿಕ ಆಪ್ತರ ಸಲಹೆಯಂತೆ ಅನಿರೀಕ್ಷಿತವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಚುನಾವಣಾ ಕಣಕ್ಕಿಳಿದರು. ರಾಜಕೀಯವಾಗಿ ಅನುಭವ ಇಲ್ಲದ ಸುಮಲತಾ ಅವರು ಗೆಲ್ಲುತ್ತಾರೆಯೇ ಎಂಬ ಪ್ರಶ್ನೆ ಮೂಡಿತ್ತು. ಇತ್ತ ಮೈತ್ರಿ ಅಭ್ಯರ್ಥಿಯಾಗಿ ಆಗಿನ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಸ್ಪರ್ಧೆ ಮಾಡಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡ್ಯದಲ್ಲಿ ತನ್ನ ಅಭ್ಯರ್ಥಿಯನ್ನು ಹಾಕಲಿಲ್ಲ. ಸುಮಲತಾ ಅವರಿಗೆ ಬೆಂಬಲ ಘೋಷಿಸಿತು. ಜಿದ್ದಾಜಿದ್ದಿನ ಕಣದಲ್ಲಿ ಸುಮಲತಾ ಗೆದ್ದು ಬೀಗಿದರು. ಈ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದ ಏಕೈಕ ಅಭ್ಯರ್ಥಿಯಾದರು.

    ಮಾಜಿ ಪ್ರಧಾನಿಗೆ ಸೋಲು
    ಹಲವು ವರ್ಷಗಳ ಬಳಿಕ ಕಾರ್ಯಕರ್ತರ ಒತ್ತಾಯದ ಮೇರೆಗೆ ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸೋಲಿನ ರುಚಿ ಕಂಡರು. ಅವರ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಗೆದ್ದು ಬೀಗಿದರು. ಮಾಜಿ ಪ್ರಧಾನಿ ಸ್ಪರ್ಧೆ ಕಾರಣಕ್ಕೆ ಈ ಕ್ಷೇತ್ರವೂ ಗಮನ ಸೆಳೆದಿತ್ತು.

  • ಸಕ್ಕರೆ ನಾಡಲ್ಲಿಂದು ‘ಸ್ವಾಭಿಮಾನಿ’ಗಳ ವಿಜಯೋತ್ಸವ-ಸುಮಲತಾಗೆ ಜೋಡೆತ್ತುಗಳ ಸಾಥ್

    ಸಕ್ಕರೆ ನಾಡಲ್ಲಿಂದು ‘ಸ್ವಾಭಿಮಾನಿ’ಗಳ ವಿಜಯೋತ್ಸವ-ಸುಮಲತಾಗೆ ಜೋಡೆತ್ತುಗಳ ಸಾಥ್

    ಮಂಡ್ಯ: ಸಕ್ಕರೆನಾಡು ಮಂಡ್ಯದ ಜನತೆ ಸುಮಲತಾ ಅಂಬರೀಶ್ ಅವರನ್ನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಅದರ ಫಲವಾಗಿ ಸುಮಲತಾ ಮತ್ತು ಬೆಂಬಲಿಗರು ಇಂದು ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವ ಆಚರಿಸುವ ಮೂಲಕ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಲಿದ್ದಾರೆ.

    ಸಕ್ಕರೆನಾಡು ಮಂಡ್ಯದ ಜನ ಸ್ವಾಭಿಮಾನಿಗಳು. ಅವರು ಮುಗ್ಧರೇ ಹೊರತು ಮೂರ್ಖರಲ್ಲ ಅಂತಾ ಹೇಳಿಕೊಂಡು ಸುಮಲತಾ ಚುನಾವಣೆಯಲ್ಲಿ ಮತ ಕೇಳಿದ್ದರು. ಹಾಗೆ ಮಂಡ್ಯ ಮತದಾರರು ಸೆರಗೊಡ್ಡಿ ಮತ ಕೇಳಿದ ಸೊಸೆ ಸುಮಲತಾರ ಕೈ ಬಿಡಲಿಲ್ಲ. ಬರೋಬ್ಬರಿ ಒಂದು ಕಾಲು ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿದರು. ಈಗ ಆ ಮತದಾರರಿಗೆ ಕೃತಜ್ಞತೆ ಸಲ್ಲಿಸೋ ಸಮಯ. ಹೀಗಾಗಿ ಇವತ್ತು ಸುಮಲತಾ ಮತ್ತು ಬೆಂಬಲಿಗರು ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವ ಆಚರಿಸುತ್ತಿದ್ದಾರೆ.

    ಇವತ್ತು ರೆಬೆಲ್ ಸ್ಟಾರ್ ಅಂಬಿ ಹುಟ್ಟಿದ ದಿನ. ಅಂಬಿ ಜಯಂತಿ ಹಾಗೂ ಸ್ವಾಭಿಮಾನಿ ವಿಜಯೋತ್ಸವ ಮಂಡ್ಯದಲ್ಲಿ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಇವತ್ತಿನ ವಿಜಯೋತ್ಸವದ ಮೇನ್ ಅಟ್ರ್ಯಾಕ್ಷನ್ ಜೋಡೆತ್ತು ದರ್ಶನ್ ಮತ್ತು ಯಶ್. ಸ್ವಾಭಿಮಾನಿ ಮಂತ್ರ ಜಪಿಸಿ ಸುಮಲತಾ ಗೆಲುವಿಗೆ ಸ್ಟಾರ್‍ಡಮ್ ಬಿಟ್ಟು ಹಗಲಿರುಳು ಪ್ರಚಾರ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಟ ದೊಡ್ಡಣ್ಣ, ಅಂಬಿ ಪುತ್ರ ಅಭಿಷೇಕ್ ಸೇರಿ ಹಲವರು ಸುಮಲತಾಗೆ ವಿಜಯ ಯಾತ್ರೆಯಲ್ಲಿ ಸಾಥ್ ನೀಡಲಿದ್ದಾರೆ. ಅದರಲ್ಲೂ ಡಿ ಬಾಸ್ ದಚ್ಚು ಸಂಜಯ್ ನಗರದಲ್ಲಿ ನೆಲಕ್ಕೆ ಮುತ್ತುಕೊಟ್ಟು ಭೂಮಿತಾಯಿಗೆ ನಮಿಸಲಿದ್ದಾರೆ.

    ಬೆಳಗ್ಗೆ ಬೆಂಗಳೂರಿನಲ್ಲಿ ಅಂಬಿ ಸಮಾಧಿಗೆ ನಮನ ಸಲ್ಲಿಸಿ ಮಂಡ್ಯಗೆ ಆಗಮಿಸಲಿರುವ ಸುಮಲತಾ, ಎಂದಿನಂತೆ ಮಂಡ್ಯದ ಗ್ರಾಮದೇವತೆ ಕಾಳಮ್ಮನ ಮೊರೆ ಹೋಗಲಿದ್ದಾರೆ. ಕಾಳಿಕಾಂಬ ದೇಗುಲದಿಂದ ವಿಜಯಯಾತ್ರೆ ಆರಂಭಗೊಳ್ಳಲಿದ್ದು, ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಅಂತ್ಯಗೊಳ್ಳಲಿದೆ. ಅಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಸುಮಲತಾ, ದರ್ಶನ್, ಯಶ್ ಮಾತನಾಡಲಿದ್ದಾರೆ. ಈ ವೇಳೆ ಬಿಜೆಪಿ ಸೇರುವ ವದಂತಿ ಬಗ್ಗೆ ಸುಮಲತಾ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ. ಜೆಡಿಎಸ್ ಸಚಿವರ ಅಸಹಕಾರ ಬಗ್ಗೆಯೂ ವೇದಿಕೆಯಲ್ಲಿ ಉತ್ತರ ಕೊಡುವ ಸಾಧ್ಯತೆ ಇದೆ. ಜೋಡೆತ್ತುಗಳು ಸಿನಿಮಾ ಶೈಲಿಯಲ್ಲೇ ದಳಪತಿಗಳಿಗೆ ತಿರುಗೇಟು ನೀಡುವ ಸಾಧ್ಯತೆ ಇದೆ.

    ಸಮಾವೇಶದಲ್ಲಿ ಅಂಬಿ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ. ಒಟ್ಟಾರೆ, ಸ್ವಾಭಿಮಾನಿ ವಿಜಯೋತ್ಸವ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

  • ವಿದೇಶ ಪ್ರವಾಸದಿಂದ ಬಂದ ಡಿಕೆಶಿಯಿಂದ ಮಾರ್ಮಿಕ ಮಾತು

    ವಿದೇಶ ಪ್ರವಾಸದಿಂದ ಬಂದ ಡಿಕೆಶಿಯಿಂದ ಮಾರ್ಮಿಕ ಮಾತು

    ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶಕ್ಕೂ ಮುನ್ನ ವಿದೇಶ ಪ್ರವಾಸ ಕೈಗೊಂಡಿದ್ದ ಕಾಂಗ್ರೆಸ್ ಸಚಿವ ಡಿ.ಕೆ.ಶಿವಕುಮಾರ್ ಇಂದು ಮರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಮುಂದೆ ಕೆಲ ಮಾರ್ಮಿಕ ಮಾತು ಹೇಳಿ ಹೊರಟಿದ್ದಾರೆ.

    ವಿದೇಶ ಪ್ರವಾಸ ಮುಗಿಸಿ ಕುಟುಂಬದೊಂದಿಗೆ ರಾತ್ರಿ 12 ಗಂಟೆಗೆ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಮಾಧ್ಯಮಗಳ ಪ್ರಶ್ನೆಗಳಿಗೆ ಮಾರ್ಮಿಕವಾಗಿ ಉತ್ತರಿಸಿದ ಸಚಿವರು, ನನಗೆಲ್ಲಾ ಗೊತ್ತಿದೆ. ಚುನಾವಣಾ ಫಲಿತಾಂಶದ ಅಪ್ಡೇಟ್ಸ್ ಎಲ್ಲಾ ಗೊತ್ತಾಗುತ್ತಿತ್ತು. ನಾನು ಮಾಹಾತ್ಮಗಾಂಧಿಯ ಅನುಯಾಯಿಯಾಗಿದ್ದು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದೇನೆ. ಬಾಯಿಗೆ ಬೀಗ ಹಾಕಿಕೊಂಡಿದ್ದೇನೆ. ಕಿವಿಗೆ ಹತ್ತಿ ಇಟ್ಟುಕೊಂಡಿದ್ದೇನೆ ಎಂದು ಹೇಳಿ ತೆರಳಿದರು.

    ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿಗೆ ಸ್ಪಷ್ಟಬಹುಮತ ಸಿಗಲಿದೆ ಚರ್ಚೆ ಇರೋವಾಗಲೇ ಮುಜುಗರದಿಂದ ತಪ್ಪಿಸಿಕೊಳ್ಳಲು ಸಚಿವರು ವಿದೇಶ ಪ್ರವಾಸ ಕೈಗೊಂಡಿದ್ದರು ಎಂಬ ಮಾತುಗಳು ರಾಜಕೀಯ ಅಂಗಳದಲ್ಲಿ ಕೇಳಿ ಬಂದಿದ್ದವು. ಚುನಾವಣೆಯ ಪ್ರಚಾರದಲ್ಲಿ ನಿರಂತರವಾಗಿ ಕೆಲಸ ಮಾಡಿದ್ದರಿಂದ ವಿಶ್ರಾಂತಿ ಹಾಗೂ ಕುಟುಂಬದ ಜೊತೆ ಕ್ವಾಲಿಟಿ ಟೈಮ್ ಕಳೆಯಲು ಸಚಿವರು ಪ್ರವಾಸ ಕೈಗೊಂಡಿದ್ದರು ಎಂದು ಮೂಲಗಳು ತಿಳಿಸಿದ್ದವು.

    ರಾಜ್ಯದ 28 ಕ್ಷೇತ್ರಗಳ ಪೈಕಿ ಬೆಂಗಳೂರು ಗ್ರಾಮಾಂತರದಲ್ಲಿ ಮಾತ್ರ ಕಾಂಗ್ರೆಸ್ ತನ್ನ ಖಾತೆಯನ್ನು ತೆರೆಯಲು ಸಾಧ್ಯವಾಗಿದೆ. ಸಚಿವರ ಸೋದರ ಡಿ.ಕೆ.ಸುರೇಶ್ ರಾಜ್ಯದ ಓರ್ವ ಕಾಂಗ್ರೆಸ್ ಸಂಸದರಾಗಿದ್ದಾರೆ.

  • ಎಂಜಿನಿಯರಿಂಗ್ ಪದವೀಧರೆ ಈಗ ದೇಶದ ಕಿರಿಯ ಮಹಿಳಾ ಸಂಸದೆ

    ಎಂಜಿನಿಯರಿಂಗ್ ಪದವೀಧರೆ ಈಗ ದೇಶದ ಕಿರಿಯ ಮಹಿಳಾ ಸಂಸದೆ

    ಭುವನೇಶ್ವರ: 17ನೇ ಲೋಕಸಭಾ ಚುನಾವಣೆ ಮುಗಿದು ದೇಶದ ಅತ್ಯಂತ ಕಿರಿಯ ಮಹಿಳಾ ಸಂಸದೆಯಾಗಿ ಒಡಿಶಾದ ಎಂಜಿನಿಯರಿಂಗ್ ಪದವೀಧರೆ ಚಂದ್ರನಿ ಮುರ್ಮು ಅವರು ಆಯ್ಕೆಯಾಗಿದ್ದಾರೆ.

    ಈಗ ತಾನೇ ಬಿಟೆಕ್ ಪದವಿ ಮುಗಿಸಿದ್ದ ಕೆಯೊಂಜ್ಹಾರ್ ಜಿಲ್ಲೆಯ ತಿಕಾರ್ಗುಮು ಗ್ರಾಮದ ಮುರ್ಮು ಅವರು ಕೆಲಸಕ್ಕೆ ಸೇರಲು ಸಿದ್ಧರಾಗಿದ್ದರು. ಆದರೆ ಅದೃಷ್ಟ ಎಂಬುದು ಇಂದು ತನ್ನ 25 ವರ್ಷ ವಯಸ್ಸಿಗೆ ದೇಶದ ಕಿರಿಯ ಮಹಿಳಾ ಸಂಸದೆಯನ್ನಾಗಿ ಮಾಡಿದೆ.

    ಓಡಿಶಾದ ಮುಖ್ಯಮಂತ್ರಿ ಮತ್ತು ಬಿಜು ಜನತಾ ದಳ (ಬಿಜೆಡಿ) ಮುಖ್ಯಸ್ಥ ನವೀನ್ ಪಟ್ನಾಯಕ್ ಅವರು ಒಡಿಶಾದ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಸ್ಥಾನಗಳನ್ನು ಮೀಸಲು ಇಟ್ಟಿದ್ದರು. ಇದರಂತೆ ಮುರ್ಮು ಅವರ ಕೆಯೊಂಜ್ಹಾರ್ ಕ್ಷೇತ್ರದ ಬಿಜೆಡಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಇವರು ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಬಿಜೆಪಿ ಅಭ್ಯರ್ಥಿ ಅನಂತ್ ನಾಯಕ್ ಅವರನ್ನು 67,822 ಮತಗಳಿಂದ ಸೋಲಿಸಿ ದೇಶದ ಕಿರಿಯ ಮಹಿಳಾ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.

    ಚಂದ್ರನಿ ಮುರ್ಮು ಅವರ ತಂದೆ ಸಂಜೀವ್ ಮುರ್ಮು ಅವರು ಸರ್ಕಾರಿ ಉದ್ಯೋಗಿಯಾಗಿದ್ದು ತಾಯಿ ಉರ್ಬಶಿ ಸೋರೆನ್ ಗೃಹಣಿ. ಈ ಗೆಲುವಿನ ಬಗ್ಗೆ ಮಾತನಾಡಿರುವ ಮುರ್ಮ ಅವರು,”ನಾನು ಎಂಜಿನಿಯರಿಂಗ್ ಮುಗಿದ ನಂತರ ಕೆಲಸವನ್ನು ಹುಡುಕುತ್ತಿದ್ದೆ. ನಾನು ರಾಜಕೀಯಕ್ಕೆ ಬರುತ್ತೇನೆ ಸಂಸತ್‍ನ ಸದಸ್ಯೆ ಆಗುತ್ತೇನೆ ಎಂದು ನಾನು ಯಾವತ್ತು ಅಂದುಕೊಂಡಿರಲಿಲ್ಲ. ನಾನು ಅನಿರೀಕ್ಷಿತವಾಗಿ ನಾಮಪತ್ರ ಸಲ್ಲಿಸಿದ್ದೆ ಆದರೆ ಗೆದ್ದಿದ್ದೇನೆ ನನಗೆ ತುಂಬ ಸಂತೋಷವಾಗಿದೆ” ಎಂದು ಹೇಳಿದ್ದಾರೆ.

    ನಾನು ಪ್ರಚಾರಕ್ಕೆ ಹೋದಾಗ ಕೆಲವರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು. ನನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು. ನನ್ನ ರಾಜಕೀಯ ಜೀವನವನ್ನು ಹಾಳು ಮಾಡಲು ಹಲವಾರು ಅಡಚಣೆಗಳನ್ನು ಮಾಡಿದರು. ಈ ಎಲ್ಲಾ ಅಡಚಣೆಗಳನ್ನು ಎದುರಿಸಿ ನಾನು ಇಂದು ಸಂಸದೆಯಾಗಿರುವುದು ನನಗೆ ಖುಷಿಯಾಗಿದೆ ಎಂದು ಹೇಳಿದರು.

    ಹಿಂದೆ 16ನೇ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದ ಹಿಸ್ಸಾರ್ ಕ್ಷೇತ್ರದ ಪ್ರಖ್ಯಾತ ರಾಜಕಾರಣಿ ಓಂ ಪ್ರಕಾಶ್ ಚೌಟಲಾ ಅವರ ಮೊಮ್ಮಗ ದುಷ್ಯಂತ್ ಚೌತಾಲ ಅವರು ಕಿರಿಯ ಸಂಸದರಾಗಿ ಆಯ್ಕೆಯಾಗಿದ್ದರು.

  • ಚುನಾವಣೆ ನಡೆದಿದ್ದು ಮೋದಿ-ರಾಹುಲ್ ನಡುವೆ-ದೆಹಲಿಯಲ್ಲಿ ನಮ್ಮದೇ ಸರ್ಕಾರ

    ಚುನಾವಣೆ ನಡೆದಿದ್ದು ಮೋದಿ-ರಾಹುಲ್ ನಡುವೆ-ದೆಹಲಿಯಲ್ಲಿ ನಮ್ಮದೇ ಸರ್ಕಾರ

    ನವದೆಹಲಿ: ಲೋಕಸಭಾ ಚುನಾವಣೆ ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡುವೆ ನಡೆದಿತ್ತು. ಆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಇರಲಿಲ್ಲ. ಕೇಂದ್ರದಲ್ಲಿ ಯಾವುದೇ ಸರ್ಕಾರವಿರಲಿ. ದೆಹಲಿಯಲ್ಲಿ ನಮ್ಮದೇ ಸರ್ಕಾರ ಇರಲಿದೆ ಎಂದು ಆಪ್ ಮುಖ್ಯಸ್ಥ, ಸಿಎಂ ಅರವಿಂದ್ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಆಪ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್, ಲೋಕಸಭಾ ಚುನಾವಣೆಯ ಫಲಿತಾಂಶ ನೋಡಿ ಯಾರು ನಿರಾಶರಾಗಬೇಕಿಲ್ಲ. ದೆಹಲಿಯ ಜನತೆ ನಮ್ಮ ಸರ್ಕಾರದ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. ಹಾಗಾಗಿ ಎಲ್ಲರೂ ನಿಮ್ಮ ಕಾಲರ್ ಮೇಲೆ ಮಾಡಿಕೊಳ್ಳಿ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

    ಚುನಾವಣೆ ಸಮಯದಲ್ಲಿ ಜನರು ಇದು ರಾಹುಲ್ ಗಾಂಧಿ ಮತ್ತು ಮೋದಿ ನಡುವಿನ ದೊಡ್ಡ ಚುನಾವಣೆ. ಹಾಗಾಗಿ ಮೋದಿ ಹೆಸರು ನೋಡಿ ಮತ ಹಾಕುತ್ತಿದ್ದೇವೆ. ವಿಧಾನಸಭಾ ಚುನಾವಣೆಯಲ್ಲಿ ಆಪ್ ಗೆ ನಮ್ಮ ಮತ ಎಂದು ಹೇಳುತ್ತಿದ್ದರು. ದೆಹಲಿಯ ಜನತೆ ನಿಮ್ಮನ್ನು ಹೊಗಳುತ್ತಿರುವ ಸಂದರ್ಭದಲ್ಲಿ ಆಪ್ ಕಾರ್ಯಕರ್ತರು ನಿರಾಶೆಗೆ ಒಳಗಾಗಬಾರದು. ದೊಡ್ಡ ಚುನಾವಣೆ ಮುಗಿದಿದ್ದು, ಸಣ್ಣ ಚುನಾವಣೆ ಬಂದಿದೆ. ಹೆಸರು ನೋಡಿ ಅಲ್ಲ, ಕೆಲಸ ನೋಡಿ ಮತ ಹಾಕಬೇಕೆಂದು ಜನತೆಯಲ್ಲಿ ಎಲ್ಲ ಕಾರ್ಯಕರ್ತರು ಮನವಿ ಮಾಡಿಕೊಳ್ಳಿ ಎಂದು ಸೂಚಿಸಿದರು.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ. ದೆಹಲಿಯ ಎಲ್ಲ ಬಿಜೆಪಿ ಅಭ್ಯರ್ಥಿಗಳು ಶೇ.50ಕ್ಕಿಂತ ಹೆಚ್ಚು ಮತಗಳನ್ನು ಪಡೆದುಕೊಂಡಿರುವುದು ಮತ್ತೊಂದು ವಿಶೇಷ. ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಪ್ ಶೂನ್ಯ ಫಲಿತಾಂಶ ದಾಖಲಿಸಿವೆ. ಕಾಂಗ್ರೆಸ್‍ನಿಂದ ಈಶಾನ್ಯ ದೆಹಲಿಯ ಕ್ಷೇತ್ರದಿಂದ ಕಣಕ್ಕಿಳಿದ್ದ ಮಾಜಿ ಸಿಎಂ ಶೀಲಾ ದೀಕ್ಷಿತ್ ಸಹ ಸೋಲು ಕಂಡಿದ್ದಾರೆ.

    https://www.youtube.com/watch?v=HHAaag6olJg

  • ನಾನು ಕಾಂಗ್ರೆಸ್ಸಿನಲ್ಲೇ ಇರಬೇಕೇ – ಕಾರ್ಯಕರ್ತರ ಬಳಿ ಕೌರವ ಪ್ರಶ್ನೆ

    ನಾನು ಕಾಂಗ್ರೆಸ್ಸಿನಲ್ಲೇ ಇರಬೇಕೇ – ಕಾರ್ಯಕರ್ತರ ಬಳಿ ಕೌರವ ಪ್ರಶ್ನೆ

    ಹಾವೇರಿ: ಮೈತ್ರಿ ಸರ್ಕಾರ ರಚನೆಯಾಗಿ ಒಂದು ವರ್ಷ ಕಳೆದಿದ್ದು ಸತತ ಮೂರು ಬಾರಿ ಎಂಎಲ್‍ಎ ಆಗಿ ಅಯ್ಕೆಯಾಗಿರುವ ಹಿರೇಕೆರೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್‍ಗೆ ಸಚಿವ ಸ್ಥಾನ ದೊರಕುತ್ತಿಲ್ಲ. ಇದರಿಂದ ಬೇಸರಗೊಂಡಿರುವ ಪಾಟೀಲ್ ಈಗ ಬಿಜೆಪಿ ಸೇರುತ್ತಾರಾ ಎಂಬ ಪ್ರಶ್ನೆ ಎಲ್ಲ ಕಡೆ ಚರ್ಚೆಯಾಗುತ್ತಿದೆ.

    ಈ ಹಿಂದೆ ಸಚಿವ ಸ್ಥಾನದ ಸಿಗದೇ ಇರುವ ಕಾರಣ ಬಿ.ಸಿ ಪಾಟೀಲ್ ಅವರು ಮೈತ್ರಿ ಸರ್ಕಾರದ ಮೇಲೆ ನೇರವಾಗಿಯೇ ಅಸಮಾಧಾನ ಹೊರಹಾಕಿದ್ದರು. ಈಗ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಬಳಿಕ ಮತ್ತೆ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವ ಅವರು ಈಗ ಕಾಂಗ್ರೆಸ್ ಪಕ್ಷದಲ್ಲಿ ಇರಬೇಕಾ? ಬೇಡವೇ ಎಂದು ಕ್ಷೇತ್ರದ ಕಾರ್ಯಕರ್ತರನ್ನು ಮತ್ತು ಕೆಲ ಶಾಸಕರನ್ನು ಕೇಳುತ್ತಿದ್ದಾರೆ ಎನ್ನಲಾಗಿದೆ.

    ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದಿಂದ ಮೊದಲ ಬಾರಿ ಜೆಡಿಎಸ್‍ನಿಂದ ಶಾಸಕರಾಗಿದ್ದ ಪಾಟೀಲ್, ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಹೀಗೆ ಮೂರು ಬಾರಿ ಎಂಎಲ್‍ಎ ಆಗಿ ಆಯ್ಕೆಯಾಗಿದ್ದರೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದರೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಬಿ.ಸಿ ಪಾಟೀಲ್, ಸಚಿವ ಸ್ಥಾನ ನೀಡದ ಮೈತ್ರಿ ಸರ್ಕಾರದ ಮೇಲೆ ಮೊದಲಿನಿಂದಲೂ ಅಸಮಾಧಾನಗೊಂಡಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ವೀರಶೈವ ಲಿಂಗಾಯತರಿಗೆ ಕಾಂಗ್ರೆಸ್ ಪಕ್ಷ ಭಾರೀ ಅನ್ಯಾಯ ಮಾಡಿದೆ. ವೀರಶೈವ ಲಿಂಗಾಯತರಿಗೆ ಏಕೆ ಮಂತ್ರಿ ಸ್ಥಾನವನ್ನು ನೀಡಿಲ್ಲ ಎಂದು ಬಹಿರಂಗವಾಗಿ ಹೇಳುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.

    ಮೂರು ದಿನಗಳ ಹಿಂದೆ ಲೋಕಸಭಾ ಚುನಾವಣೆಯ ಫಲಿತಾಂಶ ಬಂದಿದೆ. ರಾಜ್ಯ ಹಾಗೂ ದೇಶದಲ್ಲಿ ಮೋದಿ ಅಲೆಗೆ ಕಾಂಗ್ರೆಸ್ ಧೂಳೀಪಟವಾಗಿದೆ. ಈ ಹಿನ್ನೆಲೆಯಲ್ಲಿ ಆಪರೇಷನ್ ಕಮಲ ಮತ್ತು ಅತೃಪ್ತ ಶಾಸಕರು ಚುರುಕುಗೊಂಡಿದ್ದಾರೆ. ಮತ್ತೆ ರೆಸಾರ್ಟ್ ರಾಜಕಾರಣ ಪ್ರಾರಂಭವಾಗಿದೆ. ಈ ಸಮಯದಲ್ಲೇ ಬಿ.ಸಿ ಪಾಟೀಲ್ ಲೋಕಸಭಾ ಚುನಾವಣೆಯಲ್ಲಿ ವೀರಶೈವ ಲಿಂಗಾಯತರನ್ನು ಕಾಂಗ್ರೆಸ್ ಪಕ್ಷದವರು ಕಡೆಗಣಿಸಿದ್ದಾರೆ. ಆದರ ಪ್ರತಿಫಲ ಲೋಕಸಭಾ ಚುನಾವಣೆಯ ಫಲಿತಾಂಶ ಬಿಜೆಪಿ ಕಡೆಗೆ ಬಂದಿದೆ. ಹಾಗಾಗಿ ಕ್ಷೇತ್ರದ ಜನರ ತೀರ್ಮಾನವನ್ನು ಕೇಳುತ್ತಿದ್ದೇನೆ ಅವರು ಏನೂ ತೀರ್ಮಾನ ನೀಡುತ್ತಾರೆ ನೋಡೋಣ ಎಂದು ಹೇಳಿದ್ದರು. ಆದರೆ ಕೆಲವು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಹೋಗಿ ಎಂದು ಹೇಳಿದ್ದರೆ, ಇನ್ನೂ ಕೆಲವು ಕಾರ್ಯಕರ್ತರು ನಮ್ಮ ಸಿದ್ದಾಂತ ಬೇರೆ ಹಾಗಾಗಿ ಬಿಜೆಪಿ ಹೋಗುವುದು ಬೇಡ ಎಂದು ಸಲಹೆ ನೀಡಿದ್ದಾರಂತೆ.

    ಈ ಎಲ್ಲಾ ವಿದ್ಯಮಾನಗಳು ನೋಡಿದರೆ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೇ ಹೋದರೆ ಬಿ.ಸಿ ಪಾಟೀಲ್ ಬಿಜೆಪಿಗೆ ಹೋಗುತ್ತಾರೆ ಎನ್ನುವ ಗುಸುಗುಸು ಮಾತುಗಳು ಬಹಳ ಚರ್ಚೆ ಆಗುತ್ತಿವೆ. ಆದರೆ ಬಿಸಿ.ಪಾಟೀಲ್ ಮಾತ್ರ ಕಾದುನೋಡುವ ತಂತ್ರ ಅನುಸರಿಸಿ ಅಡ್ಡಗೋಡೆಯ ಮೇಲೆ ದೀಪ ಇಡುವ ಕೆಲಸ ಮಾಡುತ್ತಿದ್ದಾರೆ.

  • ಚುನಾವಣೆ ಸೋಲಿಗೆ ಶನಿದೋಷ ಕಾರಣ – 50 ಲಕ್ಷದ ನೀಲಮಣಿ ಹರಳು ಧರಿಸಿದ ಅಸ್ನೋಟಿಕರ್

    ಚುನಾವಣೆ ಸೋಲಿಗೆ ಶನಿದೋಷ ಕಾರಣ – 50 ಲಕ್ಷದ ನೀಲಮಣಿ ಹರಳು ಧರಿಸಿದ ಅಸ್ನೋಟಿಕರ್

    ಕಾರವಾರ: ನಾನು ಚುನಾವಣೆಯಲ್ಲಿ ಸೋಲಲು ಶನಿದೋಷ ಕಾರಣ. ಈ ದೋಷವನ್ನು ಪರಿಹಾರ ಮಾಡಿಕೊಳ್ಳಲು 50 ಲಕ್ಷ ರೂ. ಮೌಲ್ಯದ ನೀಲಮಣಿ ಹರಳನ್ನು ತರಿಸಿದ್ದೇನೆ ಎಂದು ಉತ್ತರ ಕನ್ನಡ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಹೇಳಿದ್ದಾರೆ.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಅಸ್ನೋಟಿಕರ್, ಬಿಜೆಪಿ ಅಭ್ಯರ್ಥಿ ಅನಂತ್‍ಕುಮಾರ್ ಹೆಗಡೆ ಅವರ ವಿರುದ್ಧ 4,79,649 ಲಕ್ಷ ಮತಗಳ ಅಂತರದಲ್ಲಿ ಸೋತಿದ್ದರು. ಈ ಸೋಲಿಗೆ ಶನಿದೋಷವೇ ಕಾರಣ ಇದರ ಪರಿಹಾರಕ್ಕೆ ಕಾಶ್ಮೀರದಿಂದ 50 ಲಕ್ಷ ಹಣ ನೀಡಿ ನೀಲಮಣಿ ಹರಳನ್ನು ತರಿಸಿದ್ದೇನೆ ಎಂದು ಹೇಳಿದ್ದಾರೆ.

    ಕಾಶ್ಮೀರದಿಂದ 50 ಲಕ್ಷ ಹಣ ಕೊಟ್ಟು ಅಪರೂಪದ ನೀಲಮಣಿ ಹರಳನ್ನು ತರಿಸಿ ಎಡಗೈನ ಮಧ್ಯ ಬೆರಳಿಗೆ ಹಾಕಿಕೊಂಡಿದ್ದೇನೆ. ಈ ಹರಳನ್ನು ವಾರದಲ್ಲಿ ಒಂದು ಬಾರಿ ದೇವರ ಬಳಿ ಇಟ್ಟು ಹಾಲಿನಲ್ಲಿ ಅಭಿಷೇಕ ಮಾಡಿ ಧರಿಸುತ್ತೇನೆ ಎಂದು ಅನಂದ್ ಅಸ್ನೋಟಿಕರ್ ಹೇಳಿದ್ದಾರೆ.

    ಕೈ ಬೆರಳಿನಲ್ಲಿ ಇರುವ ಎಲ್ಲಾ ಉಂಗುರವನ್ನು ತೆಗೆದು ಲಕ್ಷ ಲಕ್ಷ ಖರ್ಚು ಮಾಡಿ ತಂದ ವಿಶೇಷ ಹರಳಿನ ಉಂಗುರವನ್ನು ಮಾತ್ರ ಧರಿಸಿದ್ದು ಎಲ್ಲರನ್ನೂ ಹುಬ್ಬೇರುವಂತೆ ಮಾಡಿದೆ.

    ಚುನಾವಣೆ ಸೋತರೆ ರಾಜಕಾರಣಿಗಳು ದೇವರು, ಜ್ಯೋತಿಷ್ಯರ ಮೊರೆ ಹೋಗುವುದು ಸಾಮಾನ್ಯ. ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕ ಗಾಂಧಿ ಕೂಡ ಗುರುಗಳ ಮೊರೆ ಹೋಗಿದ್ದು ತಮ್ಮ ಯಶಸ್ಸಿಗಾಗಿ ರುದ್ರಾಕ್ಷಿ ಮಾಲೆಯನ್ನು ಧರಿಸಿದ್ದರು. ಇನ್ನು ರಾಜ್ಯದಲ್ಲೂ ಕೂಡ ರೇವಣ್ಣನವರಿಂದ ಹಿಡಿದು ಹಲವಾರು ರಾಜಕಾರಣಿಗಳು ತಮ್ಮ ಸಂಕಷ್ಟ, ದೋಷ ನಿವಾರಣೆಗೆ ಲಕ್ಷ ಲಕ್ಷ ಖರ್ಚು ಮಾಡಿ ಟೆಂಪಲ್ ರನ್ ಮಾಡಿದ್ದರು.

  • ಜೋಡೆತ್ತು, ಬಿಜೆಪಿ ಬಲದಿಂದ ಸುಮಲತಾ ಅಂಬರೀಶ್ ಗೆದ್ದಾಯ್ತು, ಮುಂದೇನು?

    ಜೋಡೆತ್ತು, ಬಿಜೆಪಿ ಬಲದಿಂದ ಸುಮಲತಾ ಅಂಬರೀಶ್ ಗೆದ್ದಾಯ್ತು, ಮುಂದೇನು?

    ಬೆಂಗಳೂರು: ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪ್ರಚಂಡ ಬಹುಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಮುಂದೆ ಸುಮಲತಾ ಅಂಬರೀಶ್ ಅವರ ಮುಂದಿನ ನಡೆ ಏನು ಎಂಬುದರ ಬಗ್ಗೆ ಜನರಲ್ಲಿ ಕುತೂಹಲ ಮೂಡಿಸಿದೆ. ಸದ್ಯಕ್ಕೆ ಬಿಜೆಪಿ ಸೇರ್ಪಡೆಯ ಬಗ್ಗೆ ಚಿಂತಿಸಿಲ್ಲ. ಮುಂದಿನ ದಿನಗಳಲ್ಲಿ ಮಂಡ್ಯ ಜನತೆಯೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.

    ಗೆಲುವಿನ ಬಳಿಕ ಸುಮಲತಾ ಅಂಬರೀಶ್ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡಿದ್ದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರನ್ನು ಇಂದು ಭೇಟಿಯಾಗಲಿದ್ದಾರೆ. ಕೇವಲ ಧನ್ಯವಾದ ತಿಳಿಸಲು ನಾಯಕರನ್ನು ಭೇಟಿಯಾಗುತ್ತಿದ್ದಾರೆ ಎಂದು ಸುಮಲತಾ ಆಪ್ತ ಮೂಲಗಳು ತಿಳಿಸಿವೆ.

    ಸುಮಲತಾರ ಭೇಟಿಯ ಉದ್ದೇಶವೇನು? ಮುಂದಿನ ದಿನಗಳಲ್ಲಿ ಬಿಜೆಪಿ ಸೇರ್ತಾರಾ ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ. ಒಂದು ವೇಳೆ ಪಕ್ಷ ಸೇರ್ಪಡೆಯಾಗದಿದ್ದರೂ ಬಾಹ್ಯ ಬೆಂಬಲ ನೀಡಿ ಸಚಿವ ಸ್ಥಾನ ಪಡೆಯುತ್ತಾರಾ ಎಂಬ ಚರ್ಚೆಗಳು ರಾಜಕೀಯ ಅಂಗಳದಲ್ಲಿ ಹುಟ್ಟಿಕೊಂಡಿವೆ.

  • ಪಕ್ಷದ ಪರ್ಫಾರಮೆನ್ಸ್ ಕಡಿಮೆ ಆಗಿದ್ದಕ್ಕೆ ರಾಹುಲ್ ಗಾಂಧಿ ಬೇಸರವಾಗಿದ್ದರೆ – ಜಿ. ಪರಮೇಶ್ವರ್

    ಪಕ್ಷದ ಪರ್ಫಾರಮೆನ್ಸ್ ಕಡಿಮೆ ಆಗಿದ್ದಕ್ಕೆ ರಾಹುಲ್ ಗಾಂಧಿ ಬೇಸರವಾಗಿದ್ದರೆ – ಜಿ. ಪರಮೇಶ್ವರ್

    ತುಮಕೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರ್ಫಾರಮೆನ್ಸ್ ಕಡಿಮೆ ಆಗಿದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸ್ವಾಭಾವಿಕವಾಗಿ ಬೇಸರವಾಗಿದೆ ಎಂದು ಉಪಮಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಸೀಟ್ ಕಡಿಮೆ ಆಗಿದೆ ಎಂದು ಸ್ವಾಭಾವಿಕವಾಗಿ ರಾಹುಲ್ ಗಾಂಧಿ ಅವರಿಗೆ ಬೇಸರ ಆಗಿರಬಹುದು. ಇವತ್ತು ವರ್ಕಿಂಗ್ ಕಮೀಟಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನಮಗೆ ಗೊತ್ತಿಲ್ಲ ಎಂದು ಹೇಳಿದರು.

    ಇದೇ ವೇಳೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಸೋಲಿನ ಹೊಣೆಯನ್ನು ಜೆಡಿಎಸ್ -ಕಾಂಗ್ರೆಸ್ ಎಲ್ಲ ನಾಯಕರು ಹೊರುತ್ತೇವೆ. ನಮ್ಮ ಮೈತ್ರಿ ಸರ್ಕಾರ ಸ್ಥಿರವಾಗಿದೆ. ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತಾರೆ. ಅವರ ಬಗ್ಗೆ ನನಗೆ ವಿಶ್ವಾಸವಿದೆ. ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಯಾರೋ ಕನಸು ಕಂಡಿರಬೇಕು. ಸಿಎಂ ಕುಮಾರಸ್ವಾಮಿ ರಾಜೀನಾಮೆ ಕೊಡದಂತೆ ನಾವೆಲ್ಲಾ ಮನವರಿಕೆ ಮಾಡಿದ್ದು, ಸರ್ಕಾರ ಸುಭದ್ರವಾಗಿದೆ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

    ತುಮಕೂರಿನಲ್ಲಿ ರಸ್ತೆಗಳಲ್ಲಿ ಅಂಟಿಸಲಾಗಿರುವ ‘ಪರಮೇಶ್ವರ್ ಹಠಾವೋ ಕಾಂಗ್ರೆಸ್ ಬಚಾವೋ’ ಎಂಬ ಪೋಸ್ಟ್ ಕುರಿತು ಪ್ರತಿಕ್ರಿಯೆ ನೀಡಲು ಡಿಸಿಎಂ ಹಿಂದೇಟು ಹಾಕಿದರು.