Tag: ಲಾವ್ ಅಗರ್ವಾಲ್

  • ನಮ್ಮಲ್ಲಿ ಅಗತ್ಯಕ್ಕಿಂತಲೂ 2.28 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳಿವೆ

    ನಮ್ಮಲ್ಲಿ ಅಗತ್ಯಕ್ಕಿಂತಲೂ 2.28 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳಿವೆ

    – ಕೊರೊನಾ ಸಮುದಾಯ ಪ್ರಸಾರ ಹಂತಕ್ಕೆ ಕಾಲಿಟ್ಟಿಲ್ಲ
    – 24 ಗಂಟೆಗಳಲ್ಲಿ 678 ಮಂದಿಗೆ ಸೋಂಕು, 33 ಜನ ಸಾವು

    ನವದೆಹಲಿ: ನಮಗೆ 1 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಅವಶ್ಯಕತೆಯಿದೆ. ಆದರೆ ನಮ್ಮಲ್ಲಿ ಈಗ 3.28 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳಿವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ತಿಳಿಸಿದ್ದಾರೆ.

    ದೆಹಲಿಯಲ್ಲಿ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುರುವಾರ ನಾವು 16,002 ಕೊರೊನಾ ಪರೀಕ್ಷೆಗಳನ್ನು ನಡೆಸಿದ್ದೇವೆ. ಕೇವಲ ಶೇ.0.2 ಪ್ರಕರಣಗಳು ಮಾತ್ರ ಪಾಸಿಟಿವ್ ಬಂದಿವೆ. ಸಂಗ್ರಹಿಸಿದ ಮಾದರಿಗಳ ಆಧಾರದ ಮೇಲೆ ಹೇಳುವುದಾದರೆ ಸೋಂಕಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿಲ್ಲ ಎನ್ನುವುದು ತಿಳಿಯುತ್ತಿದೆ ಎಂದು ತಿಳಿಸಿದ್ದಾರೆ.

    ಕಳೆದ 24 ಗಂಟೆಗಳಲ್ಲಿ 678 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 33 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6,412ಕ್ಕೆ ಏರಿದರೆ, ಮೃತರ ಸಂಖ್ಯೆ 199 ಆಗಿದೆ. ಈವರೆಗೂ 503 ಜನರು ಚೇತರಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

    ಕೋವಿಡ್-19 ವಿರುದ್ಧದ ಹೋರಾಟಕ್ಕೆ ಆರೋಗ್ಯ ಕಾರ್ಯಕರ್ತರು ಮುಂಚೂಣಿಯಲ್ಲಿದ್ದಾರೆ. ಅವರೊಂದಿಗೆ ಯಾವುದೇ ರೀತಿಯ ಅಸಭ್ಯ ವರ್ತನೆ ತೋರುವುದು ಸರಿಯಲ್ಲ. ಇಂತಹ ಘಟನೆಗಳು ಅವರ ಸ್ಥೈರ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ ಎಂದು ಎಚ್ಚರಿಕೆ ನೀಡಿದರು.

    ದೇಶದಲ್ಲಿ ಇನ್ನೂ ಕೊರೊನಾ ವೈರಸ್ ಮೂರನೇ ಹಂತ (ಸಮುದಾಯ ಪ್ರಸಾರ)ಕ್ಕೆ ಕಾಲಿಟ್ಟಿಲ್ಲ. ಹೀಗಾಗಿ ಭಯಪಡುವ ಅಗತ್ಯವಿಲ್ಲ. ಆದರೆ ಜಾಗರೂಕರಾಗಿರಿ ಮತ್ತು ಎಚ್ಚರಕೆಯಿಂದ. ಆರೋಗ್ಯ ಇಲಾಖೆ ಕೂಡ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಗಳುತ್ತಿದೆ ಎಂದು ಹೇಳಿದರು.

    ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿ ದಮ್ಮು ರವಿ ಮಾತನಾಡಿ, ನಾವು ಗುರುವಾರ 20,473 ವಿದೇಶಿ ಪ್ರಜೆಗಳನ್ನು ಸ್ಥಳಾಂತರಿಸಿದ್ದೇವೆ. ನಾವು ಅತ್ಯುತ್ತಮ ಸಹಕಾರವನ್ನು ಪಡೆಯುತ್ತಿದ್ದೇವೆ. ಇದೆಲ್ಲ ಕೇಂದ್ರ ಸರ್ಕಾರದ ಪ್ರಯತ್ನ ಎಂದು ತಿಳಿಸಿದರು.

    ಹೈಡ್ರಾಕ್ಸಿಕ್ಲೋರೋಕ್ವಿನ್ ಬಗ್ಗೆ ಸಾಕಷ್ಟು ವಿನಂತಿಗಳು ಈಗಾಗಲೇ ಬಂದಿವೆ. ಹಲವಾರು ದೇಶಗಳು ಈ ಔಷಧಿಗೆ ವಿನಂತಿಗಳನ್ನು ಮಾಡಿಕೊಂಡಿವೆ. ಆದರೆ ದೇಶೀಯ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಔಷಧಿಯನ್ನು ಸಂಗ್ರಹಿಸಿದ್ದೇವೆ. ಕೆಲವು ಹೆಚ್ಚುವರಿ ಔಷಧಿಗಳನ್ನು ರಫ್ತು ಉದ್ದೇಶಗಳಿಗಾಗಿ ಬಿಡುಗಡೆ ಮಾಡಲು ಮಂತ್ರಿ ಮಂಡಳಿ ತೀರ್ಮಾನಿಸಿದೆ. ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

    ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ ಮಾತನಾಡಿ, ಕೋವಿಡ್-19 ವಿರುದ್ಧ ಹೋರಾಡಲು ಏಪ್ರಿಲ್ ತಿಂಗಳಲ್ಲಿ ನಡೆಯಬೇಕಿದ್ದ ಉತ್ಸವಗಳನ್ನು ಕೈಬಿಡಬೇಕು. ಜೊತೆಗೆ ಲಾಕ್‍ಡೌನ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸುವ ಬಗ್ಗೆ ಖಚಿತಪಡಿಸಿಕೊಳ್ಳಲು ಎಂಎಚ್‍ಎ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ ಎಂದು ಹೇಳಿದರು.

    ಗಡಿ ಭದ್ರತಾ ಅಧಿಕಾರಿಗಳೊಂದಿಗೆ ಇಂಡೋ-ಪಾಕ್ ಮತ್ತು ಇಂಡೋ-ಬಾಂಗ್ಲಾದೇಶ ಗಡಿಯಲ್ಲಿ ಭದ್ರತೆ ಕುರಿತು ಗೃಹ ಸಚಿವರು ಪರಿಶೀಲನಾ ಸಭೆ ನಡೆಸಿದ್ದಾರೆ. ಫೆನ್ಸಿಂಗ್ ಇಲ್ಲದ ಪ್ರದೇಶಗಳಲ್ಲಿ ಸುರಕ್ಷತೆಯನ್ನು ಬಿಗಿಗೊಳಿಸಲು ಮತ್ತು ಗಡಿಯಾಚೆ ಯಾರು ಸುಳಿದಾಟದಂತೆ ನೋಡಿಕೊಳ್ಳಲು ಆದೇಶಿಸಿದ್ದಾರೆ ಎಂದು ಪುಣ್ಯ ಸಲೀಲಾ ಶ್ರೀವಾಸ್ತವ ಮಾಹಿತಿ ನೀಡಿದರು.

  • ನಿನ್ನೆಗಿಂತ ಅರ್ಧದಷ್ಟು ಕಡಿಮೆ – 24 ಗಂಟೆಗಳಲ್ಲಿ 354 ಜನರಿಗೆ ಕೊರೊನಾ

    ನಿನ್ನೆಗಿಂತ ಅರ್ಧದಷ್ಟು ಕಡಿಮೆ – 24 ಗಂಟೆಗಳಲ್ಲಿ 354 ಜನರಿಗೆ ಕೊರೊನಾ

    ನವದೆಹಲಿ: ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 354 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ನಿನ್ನೆಗಿಂತ ಇಂದು ಸೋಂಕಿತರ ಪ್ರಮಾಣ ಅರ್ಧದಷ್ಟು ಕಡಿಮೆಯಾಗಿದೆ.

    ಈ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್, ಕಳೆದ 24 ಗಂಟೆಗಳಲ್ಲಿ 354 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 8 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 117ಕ್ಕೆ ಏರಿಕೆ ಕಂಡಿದೆ. ಈವರೆಗೆ ದೇಶದಲ್ಲಿ 4,421 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 326 ಜನರು ಚೇತರಿಸಿಕೊಂಡು ಡಿಸ್ಚಾರ್ಚ್ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಸೋಮವಾರ ರಾತ್ರಿಯ ಮಾಹಿತಿ ಪ್ರಕಾರ ಭಾರತದಲ್ಲಿ 24 ಗಂಟೆಗಳಲ್ಲಿ 30 ಮಂದಿ ಸೋಂಕಿತರು ಮೃತಪಟ್ಟಿದ್ದರೆ, 693 ಜನರಿಗೆ ಕೊರೊನಾ ಸೋಂಕು ತಗುಲಿತ್ತು. ಹೀಗಾಗಿ ಸಾವು ಹಾಗೂ ಸೋಂಕಿತರ ಸಂಖ್ಯೆಯಲ್ಲಿ ಇಂದಿನ ವರದಿಯಲ್ಲಿ ಇಳಿಮುಖವಾಗಿದೆ.

    ಕ್ಲಸ್ಟರ್ ನಿರ್ವಹಣೆಗೆ ಅನುಕೂಲವಾಗುವ ರೀತಿ ಸರ್ಕಾರವು ಒಂದು ತಂತ್ರವನ್ನು ಅನುಸರಿಸುತ್ತಿದೆ. ಈ ಕಾರ್ಯತಂತ್ರವು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತಿದೆ. ವಿಶೇಷವಾಗಿ ಆಗ್ರಾ, ಗೌತಮ್ ಬುದ್ಧ ನಗರ, ಪತ್ತನಂತಿಟ್ಟ, ಭಿಲ್ವಾರ ಮತ್ತು ಪೂರ್ವ ದೆಹಲಿಯಲ್ಲಿ ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಿದರು.

    ಐಸಿಎಂಆರ್ ನ ಇತ್ತೀಚಿನ ಅಧ್ಯಯದ ಪ್ರಕಾರ, ಓರ್ವ ಕೊರೊನಾ ಸೋಂಕಿತ ರೋಗಿಯು ಲಾಕ್‍ಡೌನ್ ಆದೇಶಗಳನ್ನು ಅನುಸರಿಸದಿದ್ದರೆ ಅಥವಾ ಸಾಮಾಜಿಕ ದೂರ ಕಾಯ್ದುಕೊಳ್ಳದಿದ್ದರೆ 30 ದಿನಗಳಲ್ಲಿ 406 ಜನರಿಗೆ ಸೋಂಕು ತಗುಲಿಸಬಹುದು. ನಮ್ಮ ದೇಶದಲ್ಲಿ ವೈದ್ಯಕೀಯ ಅವಶ್ಯಕತೆಯ ಆಧಾರದ ಮೇಲೆ ನಾವು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಲಾವ್ ಅಗರ್‍ವಾಲ್ ಹೇಳಿದರು.

    ಭಾರತೀಯ ರೈಲ್ವೆಯ 2,500 ಬೋಗಿಗಳಲ್ಲಿ 40,000 ಪ್ರತ್ಯೇಕ ಹಾಸಿಗೆಗಳನ್ನು ಸಿದ್ಧಪಡಿಸಿದೆ. ರೈಲ್ವೆ ಇಲಾಖೆ ಪ್ರತಿದಿನ 375 ಪ್ರತ್ಯೇಕ ಹಾಸಿಗೆಗಳನ್ನು ತಯಾರಿಸುತ್ತಿದೆ ಮತ್ತು ಇದು ದೇಶಾದ್ಯಂತ 133 ಸ್ಥಳಗಳಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.

    ಗೃಹ ಸಚಿವಾಲಯದ ಕಾರ್ಯದರ್ಶಿ ಪಿ.ಎಸ್. ಶ್ರೀವಾಸ್ತವ್ ಮಾತನಾಡಿ, ಅಗತ್ಯ ಸರಕುಗಳು ಮತ್ತು ಸೇವೆಗಳ ಸ್ಥಿತಿ ಉತ್ತಮವಾಗಿದೆ. ಗೃಹ ಸಚಿವರು ಅಗತ್ಯ ಸರಕುಗಳ ಸ್ಥಿತಿಗತಿ ಮತ್ತು ಲಾಕ್‍ಡೌನ್ ಕ್ರಮಗಳ ಬಗ್ಗೆ ವಿವರವಾದ ಪರಿಶೀಲನೆ ನಡೆಸಿದ್ದಾರೆ. ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಹೋರ್ಡಿಂಗ್ ಮತ್ತು ಕಪ್ಪು ಮಾರುಕಟ್ಟೆ ನಡೆಯದಂತೆ ನೋಡಿಕೊಳ್ಳಲು ಅವರು ನಿರ್ದೇಶನಗಳನ್ನು ನೀಡಿದ್ದಾರೆ ಎಂದು ಹೇಳಿದರು.

    ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಾಯಕ ನಿರ್ದೇಶಕ ಆರ್ ಗಂಗಖೇಡ್ಕರ್ ಮಾತನಾಡಿ, ಈವರೆಗೆ 1,07,006 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ. ಪ್ರಸ್ತುತ 136 ಸರ್ಕಾರಿ ಲ್ಯಾಬ್‍ಗಳು ಕಾರ್ಯನಿರ್ವಹಿಸುತ್ತಿದ್ದು, 59 ಖಾಸಗಿ ಲ್ಯಾಬ್‍ಗಳಿಗೆ ಅನುಮತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.