Tag: ಲಾಕಪ್ ಡೆತ್

  • ಪೊಲೀಸರ ವಶದಲ್ಲಿದ್ದ ವ್ಯಕ್ತಿ ಲಾಕಪ್ ಡೆತ್

    ಪೊಲೀಸರ ವಶದಲ್ಲಿದ್ದ ವ್ಯಕ್ತಿ ಲಾಕಪ್ ಡೆತ್

    ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕು ಹೊಳೆಹೊನ್ನೂರು ಠಾಣೆ ಪೊಲೀಸರ ವಶದಲ್ಲಿದ್ದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ.

    ಭದ್ರಾವತಿ ತಾಲೂಕು ಆಗರದಹಳ್ಳಿ ಕ್ಯಾಂಪಿನ ಬಾಲೇಶ್ ಪೊಲೀಸರ ವಶದಲ್ಲಿ ಮೃತಪಟ್ಟ ವ್ಯಕ್ತಿ. ಪೊಲೀಸರು ಸಿಕ್ಕಾಪಟ್ಟೆ ಹೊಡೆದಿದ್ದಾರೆ. ಇದರಿಂದಾಗಿಯೇ ಬಾಲೇಶ್ ಮೃತಪಟ್ಟಿದ್ದಾನೆ ಎಂದು ಅವರ ಸಂಬಂಧಿಗಳು ದೂರಿದ್ದಾರೆ. ಆದರೆ ಈ ವಿಷಯಕ್ಕೆ ಪ್ರತಿಕ್ರಿಯೆ ನೀಡಲು ಜಿಲ್ಲಾರಕ್ಷಣಾಧಿಕಾರಿ ಡಾ.ಅಶ್ವಿನಿ ನಿರಾಕರಿಸಿದ್ದಾರೆ.

    ಗುರುವಾರ ಮಧ್ಯಾಹ್ನ ಹೊಳೆಹೊನ್ನೂರು ಠಾಣೆ ಪೊಲೀಸರು ಶಿವಮೊಗ್ಗ ಎಸ್‍ಪಿ ಕಚೇರಿಗೆ ಬಾಲೇಶ್‍ನನ್ನು ಕರೆತಂದಿದ್ದರು. ರಾತ್ರಿ ಸುಮಾರು 9.30ಕ್ಕೆ ಮನೆಯವರಿಗೆ ಕರೆ ಮಾಡಿ ಮೆಗ್ಗಾನ್ ಆಸ್ಪತ್ರೆಗೆ ಬರಲು ಹೇಳಿದ್ದಾರೆ. ಮೆಗ್ಗಾನ್ ಆಸ್ಪತ್ರೆಗೆ ಬಂದಾಗ ಬಾಲೇಶ್ ಮೃತಪಟ್ಟಿರುವುದನ್ನು ನೋಡಿ ಕುಟುಂಬಸ್ಥರಿಗೆ ಶಾಕ್ ಆಗಿದೆ. ಬಾಲೇಶ್ ಸಾವಿಗೆ ಪೊಲೀಸರೇ ಕಾರಣ ಅಂತ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜೂಜಾಡುತ್ತಾರೆ ಎಂದು ಬಾಲೇಶ್ ಅವರನ್ನು ಹೊಳೆಹೊನ್ನೂರು ಪೊಲೀಸರು ಕರೆದೊಯ್ದಿದ್ದರು. ಮೊದಲು ಹೊಳೆಹೊನ್ನೂರು ಠಾಣೆಗೆ ನಂತರ ಶಿವಮೊಗ್ಗ ಡಿಆರ್ ಗ್ರೌಂಡ್‍ಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಡಾ. ಅಶ್ವಿನಿ ಅವರ ಸಮ್ಮುಖದಲ್ಲೇ ಬಾಲೇಶ್ ಸೇರಿದಂತೆ ಇನ್ನಿತರರಿಗೆ ಲಾಠಿ ಏಟು ನೀಡಲಾಗಿದೆ. ಈ ವೇಳೆ ಬಾಲೇಶ್ ಕುಸಿದು ಬಿದ್ದಿದ್ದನು ಎಂದು ಬಾಲೇಶ್ ಆಪ್ತರು ಮಾಹಿತಿ ನೀಡಿದ್ದಾರೆ.

    ಪೊಲೀಸರು ಮೃತ ದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಆದರೆ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ ಪೊಲೀಸರು ಅಲ್ಲಿ ಯಾವುದೇ ಸಹಿ ಮಾಡದೆ ಹೋಗಿದ್ದಾರೆ. ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಪ್ರಕರಣವನ್ನು ತಿರುಚಲು ಯತ್ನಿಸಿದ್ದಾರೆ. ಬಾಲೇಶ್ ಕುಟುಂದವರು ಬರುತ್ತಿದ್ದಂತೆ ಆಸ್ಪತ್ರೆಯಿಂದ ಜಾಗ ಖಾಲಿ ಮಾಡಿದ್ದಾರೆ. ಇಡೀ ಪ್ರಕರಣದಲ್ಲಿ ಪೊಲೀಸರ ನಡೆ ಸಂಶಯಾಸ್ಪದವಾಗಿದೆ. ನ್ಯಾಯಾಂಗ ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ ಎಂದು ಮೃತನ ಸಂಬಂಧಿ ಅನಿಲ್ ಆರೋಪಿಸಿದ್ದಾರೆ.

  • ಪೊಲೀಸ್ ಬೈಕ್ ಸುಟ್ಟ ಅನ್ನೋ ಒಂದೇ ಕಾರಣಕ್ಕೆ ಕೊಂದೇ ಬಿಟ್ರು…!

    ಪೊಲೀಸ್ ಬೈಕ್ ಸುಟ್ಟ ಅನ್ನೋ ಒಂದೇ ಕಾರಣಕ್ಕೆ ಕೊಂದೇ ಬಿಟ್ರು…!

    ಬೆಂಗಳೂರು: ಪೊಲೀಸ್ ಬೈಕ್ ಸುಟ್ಟ ಎಂಬ ಕಾರಣಕ್ಕೆ ಪೊಲೀಸರು ಲಾಕಪ್ ಡೆತ್ ನಡೆಸಿದ್ದ ಪ್ರಕರಣದ ಸತ್ಯಾಂಶ ಮೂರು ವರ್ಷಗಳ ಬಳಿಕ ಬಯಲಾಗಿದೆ. ನಗರದ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂರು ವರ್ಷಗಳ ಹಿಂದೆ ಲಾಕಪ್ ಡೆತ್ ನಡೆದಿತ್ತು.

    ಪೊಲೀಸರು ಆರೋಪಿ ರೈತ ದೇವರಾಜು ಸಹಜವಾಗಿ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದರು. ಆದ್ರೆ ಪ್ರಕರಣವನ್ನು ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ದೋಷಾರೋಪ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ರೈತ ದೇವರಾಜುನನ್ನು ವಿಚಾರಣೆ ನೆಪದಲ್ಲಿ ಕರೆದುಕೊಂಡು ಹೋಗಿ ಹೊಡೆದು ಕೊಲೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಕರಣ ಸಿಐಡಿಗೆ ವರ್ಗಾಯಿಸಲಾಗಿತ್ತು.

    ಅರೆಸ್ಟ್ ವಾರೆಂಟ್ ಜಾರಿಯಾದ ಹಿನ್ನೆಲೆಯಲ್ಲಿ ಪೊಲೀಸರು ದೇವರಾಜನನ್ನು ಬಂಧಿಸಲು ಹೋಗಿದ್ದರು. ಈ ವೇಳೆ ಕೋಪಗೊಂಡ ದೇವರಾಜು ಪೊಲೀಸರ ಬೈಕಿಗೆ ಬೆಂಕಿ ಹಚ್ಚಿದ್ದನು. ದೇವರಾಜು ಮೇಲೆ ಕೋಪಗೊಂಡ ಆತನನ್ನು ಠಾಣೆಗೆ ಕರೆದುಕೊಂಡು ಹೋಗಿ ಸಬ್ ಇನ್ಸ್ ಪೆಕ್ಟರ್ ಲೋಕೇಶ್, ಪಿಸಿಗಳಾದ ಸತೀಶ್, ಆನಂದ್ ಸೇರಿದಂತೆ 9 ಜನ ಹಲ್ಲೆ ಮಾಡಿದ್ದರು. ಮೈಸೂರಿನ ಕೆ ಆರ್ ಆಸ್ಪತ್ರೆಗೆ ದೇವರಾಜುನನ್ನು ಕರೆದ್ಯೊಯ್ಯುವ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದನು.

    ಇಷ್ಟೆಲ್ಲ ಆದ್ರೂ ಸಬ್ ಇನ್ಸ್ ಪೆಕ್ಟರ್ ಲೋಕೇಶ್ ನಕಲಿ ವೈದ್ಯ ಪ್ರಮಾಣ ಪತ್ರವನ್ನು ತಯಾರಿಸಿದ್ದನು. ಸಹಜ ಸಾವು ಎಂಬ ವೈದ್ಯಕೀಯ ಪ್ರಮಾಣ ನೋಡಿದ್ದ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಸದ್ಯ ಇದೀಗ ಎಲ್ಲ ಸತ್ಯಾಂಶ ಬಯಲಾಗಿದ್ದು, 9 ಜನ ಪೊಲೀಸ್ರ ಮೇಲೆ ಬಂಧನದ ತೂಗುಗತ್ತಿ ತೂಗುತ್ತಿದೆ. ಇನ್ನೆರಡು ದಿನಗಳಲ್ಲಿ ಸಿಐಡಿ ದೋಷಾರೋಪ ಪಟ್ಟಿ ಸಲ್ಲಿಸಿ ಬಂಧಿಸೋ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಂಡ್ಯ ಠಾಣೆಯಲ್ಲೇ ಆರೋಪಿ ನೇಣಿಗೆ ಶರಣು- ಲಾಕಪ್ ಡೆತ್ ಶಂಕೆ!

    ಮಂಡ್ಯ ಠಾಣೆಯಲ್ಲೇ ಆರೋಪಿ ನೇಣಿಗೆ ಶರಣು- ಲಾಕಪ್ ಡೆತ್ ಶಂಕೆ!

    ಮಂಡ್ಯ: ಬೈಕ್ ಕಳ್ಳತನ ಆರೋಪದ ಮೇಲೆ ಜಿಲ್ಲೆಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಬಂಧಿತನಾಗಿದ್ದ ಆರೋಪಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಮೃತನ ಕುಟುಂಬದವರು ಲಾಕಪ್ ಡೆತ್ ಎಂದು ಆರೋಪಿಸಿದ್ದಾರೆ.

    ಮೂರ್ತಿ (40) ಪೊಲೀಸ್ ಠಾಣೆಯಲ್ಲೆ ಮೃತಪಟ್ಟ ಆರೋಪಿ. ಇವನು ಮೂಲತಃ ಜಿಲ್ಲೆಯ ಮದ್ದೂರು ತಾಲೂಕಿನ ಬೆಳ್ತೂರು ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ಸೋಮವಾರ ಬೈಕ್ ಕಳ್ಳತನ ಆರೋಪದ ಮೇಲೆ ಜಿಲ್ಲೆಯ ಪಶ್ಚಿಮ ಠಾಣೆಯ ಪೊಲೀಸರು ಬಂಧಿಸಿ ಕರೆದುಕೊಂಡು ಹೋಗಿದ್ದರು. ಆದರೆ ಇಂದು ಬೆಳಗ್ಗೆ ಠಾಣೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮೂರ್ತಿಯ ಮೃತದೇಹ ಪತ್ತೆಯಾಗಿದೆ.

    ಘಟನೆ ಸಂಬಂಧ ಪಶ್ಚಿಮ ಠಾಣೆಯ ಪೊಲೀಸರು ಮಾತನಾಡಿ, ಬೈಕ್ ಕಳ್ಳತನ ಆರೋಪದಡಿ ಸೋಮವಾರ ಮೂರ್ತಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಇಂದು ಬೆಳಗ್ಗೆ ಆರೋಪಿ ಮೂರ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

    ಮೂರ್ತಿ ಮೇಲೆ ಪೊಲೀಸರು ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ ಹಿನ್ನಲೆಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟರ್ ಜ್ಯೋತಿರವರು ಪೊಲೀಸ್ ಠಾಣೆಗೆ ಬಂದು ಪರಿಶೀಲನೆ ನಡೆಸಿದರು. ಪರಿಶೀಲನೆ ಬಳಿಕ ಮೃತದೇಹವನ್ನು ಜಿಲ್ಲೆಯ ಮಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡಯ್ಯಲಾಯಿತು.

    ಲಾಕಪ್ ಡೆತ್ ಎಂದು ತಿಳಿಯುತ್ತಿದ್ದಂತೆ ಶವಾಗಾರದ ಬಳಿ ಜಮಾಯಿಸಿದ ಕುಟುಂಬಸ್ಥರು ಹಾಗೂ ನೂರಾರು ಮಂದಿ ದಲಿತ ಸಂಘಟನೆಗಳ ಮುಖಂಡರು ಮಂಡ್ಯ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೃತ ಕುಟುಂಬಕ್ಕೆ ಪರಿಹಾರ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

    ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಮಂಡ್ಯ ಎಸ್ಪಿ ರಾಧಿಕಾರವರು, ಪಶ್ಚಿಮ ಪೊಲೀಸ್ ಠಾಣೆಯ ಇಬ್ಬರು ಪೇದೆಗಳನ್ನು ಅಮಾನತುಗೊಳಿಸಿದ್ದಾರೆ. ಅಲ್ಲದೇ ಘಟನೆ ಸಂಬಂಧ ಸೂಕ್ತ ತನಿಖೆ ನಡೆಸಲಾಗುವುದು, ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರ ನೀಡುವ ಕುರಿತು ಹೇಳಿಕೆ ನೀಡಿದ್ದಾರೆ.

    https://www.youtube.com/watch?v=wChQSTtpjt4

  • ಆಕ್ರೋಶದ ಬೆಂಕಿಗೆ ಲಕ್ಷ್ಮೇಶ್ವರ ಠಾಣೆ ಧಗಧಗ – 25 ದುಷ್ಕರ್ಮಿಗಳ ಬಂಧನ

    ಗದಗ: ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಲಾಕಪ್ ಡೆತ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಠಾಣೆಗೆ ಬೆಂಕಿಹಚ್ಚಿ ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ 25 ಮಂದಿ ದುಷ್ಕರ್ಮಿಗಳನ್ನ ಗದಗ ಜಿಲ್ಲೆ ಪೊಲೀಸರು ಬಂಧಿಸಿದ್ದಾರೆ.

    ಈ ಗಲಾಟೆಯಲ್ಲಿ ಅಕ್ರಮ ಮರಳು ದಂಧೆಕೊರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ 25 ಜನ ದುಷ್ಕರ್ಮಿಗಳನ್ನು ವಿಚಾರಣೆಗಾಗಿ ಕರೆತರಲಾಗಿದ್ದು, ವೀಡಿಯೋ ದೃಶ್ಯಗಳನ್ನ ನೋಡಿ ಇನ್ನುಳಿದ ಆರೋಪಿಗಳ ಬಂಧಿಸುವ ಕಾರ್ಯ ಇಂದು ನಡೆಯಲಿದೆ. ಈ ಮಧ್ಯೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಮಧ್ಯಾಹ್ನದವರೆಗೆ ನಿಷೇಧಾಜ್ಞೆ ಮುಂದುವರೆದಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಪೊಲೀಸ್ ಬಿಗಿ ಬಂದುಬಸ್ತ್ ಕಲ್ಪಿಸಲಾಗಿದೆ. ಎಸ್‍ಪಿ, ಡಿಎಸ್‍ಪಿ, ಸಿಪಿಐ, ಪಿಎಸ್‍ಐ, ಕೆ.ಎಸ್.ಆರ್.ಪಿ ಹಾಗೂ ಡಿಆರ್ ತುಕಡಿಗಳನ್ನ ನಿಯೋಜನೆ ಮಾಡಲಾಗಿದೆ.

    ಪಟ್ಟಣ್ಣದಲ್ಲಿ ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳು ಎಂದಿನಂತೆ ಪ್ರಾರಂಭವಾಗಿವೆ. ಸ್ಥಳಕ್ಕೆ ಎಡಿಜಿಪಿ ರಾಘವೇಂದ್ರ ಔರಾಧಕರ್ ಭೇಟಿ ನೀಡಿ ಪರಿಶೀಲನೆ ಮಾಡುವ ಸಾಧ್ಯತೆಗಳಿವೆ.

    ಏನಿದು ಪ್ರಕರಣ?: ಅಕ್ರಮ ಮರಳುದಂಧೆ ಆರೋಪದ ಮೇಲೆ ಶಿವಾನಂದ ಗಾಣಿಗೇರ ಪೊಲೀಸರ ವಶದಲ್ಲಿದ್ದರು. ತೀವ್ರ ವಿಚಾರಣೆಯಲ್ಲಿದ್ದ ಶಿವಾನಂದ ಠಾಣೆಯಲ್ಲೇ ಮೃತಪಟ್ಟಿದ್ದು, ಇದರಿಂದ ಆಕ್ರೋಶಗೊಂಡ ಶಿವಾನಂದ ಸಂಬಧಿಕರು ಪೊಲಿಸರು ಲಾಕಪ್ ಡೆತ್ ಮಾಡಿರುವುದಾಗಿ ಆರೋಪಿಸಿ ಭಾನುವಾರದಂದು ಠಾಣೆಗೆ ಬೆಂಕಿ ಹಚ್ಚಿದ್ದರು.

  • ವಿಚಾರಣಾಧೀನ ಕೈದಿ ಅನುಮಾನಾಸ್ಪದ ಸಾವು: ಪೊಲೀಸ್ ಠಾಣೆಗೆ ಬೆಂಕಿ, ವಾಹನ ಭಸ್ಮ!

    ಗದಗ: ಶಿರಹಟ್ಟಿ ತಾಲೂಕಿನ ಬಟ್ಟೂರು ಗ್ರಾಮದ ಶಿವಾನಂದ ಗಾಣಗೇರ ಪೊಲೀಸ್ ಠಾಣೆಯಲ್ಲಿಯೇ ವಿಚಾರಣಾಧೀನ ಕೈದಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ, ಠಾಣೆಗೆ ಬೆಂಕಿಯಿಟ್ಟು ಸಂಬಂಧಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಏನಿದು ಪ್ರಕರಣ?: ಅಕ್ರಮ ಮರಳುದಂಧೆ ಆರೋಪದ ಮೇಲೆ ಶಿವಾನಂದ ಗಾಣಿಗೇರ ಪೊಲೀಸರ ವಶದಲ್ಲಿದ್ದರು. ತೀವ್ರ ವಿಚಾರಣೆಯಲ್ಲಿದ್ದ ಶಿವಾನಂದ ಠಾಣೆಯಲ್ಲೇ ಮೃತಪಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಶಿವಾನಂದ ಸಂಬಧಿಕರು, ಪೊಲಿಸರು ಲಾಕಪ್ ಡೆತ್ ಮಾಡಿರುವುದಾಗಿ ಆರೋಪ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ಠಾಣೆಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಠಾಣೆಯೊಳಗೆ ಎಸ್‍ಐ ಶಿವಾನಂದ್ ಹಾಗೂ ಸಿಬ್ಬಂದಿಯಿದ್ದು, ತಮ್ಮ ಪ್ರಾಣ ರಕ್ಷಿಸಿಕೊಳ್ಳುವ ಸಲುವಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಮೃತನ ಸಂಬಂಧಿಕರು ಏಕಾಏಕಿ ಠಾನೆಯ ಒಳನುಗಿ, ಅಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಇನ್ನು ಪೊಲಿಸ್ ಜೀಪ್‍ಗೂ ಬೆಂಕಿ ಹಚ್ಚಿದ್ದು, ಸಂಪೂರ್ಣವಾಗಿ ಭಸ್ಮವಾಗಿದೆ.

    ಸದ್ಯ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸುತ್ತಿದ್ದು, ಕಿಡಿಗೇಡಿಗಳು ಕೂಡ ಅಲ್ಲಿಂದ ಪರಾರಿಯಾಗಿದ್ದಾರೆ. ಹಾಗೆಯೇ ಅಗ್ನಿಶಾಮಕ ದಳದವರು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.

    https://www.youtube.com/watch?v=eWXUA96hMlw&feature=youtu.be