Tag: ರೋಗ ನಿರೋಧಕ ಶಕ್ತಿ

  • ಓಮಿಕ್ರಾನ್ ಮತ್ತೊಂದು ಉಪತಳಿ ಪತ್ತೆ- ರೋಗನಿರೋಧಕ ಶಕ್ತಿ ಮೀರಿಸಿ ವೈರಸ್ ಹರಡುತ್ತಾ ಈ ತಳಿ – WHO ಹೇಳಿದ್ದೇನು?

    ಓಮಿಕ್ರಾನ್ ಮತ್ತೊಂದು ಉಪತಳಿ ಪತ್ತೆ- ರೋಗನಿರೋಧಕ ಶಕ್ತಿ ಮೀರಿಸಿ ವೈರಸ್ ಹರಡುತ್ತಾ ಈ ತಳಿ – WHO ಹೇಳಿದ್ದೇನು?

    ನವದೆಹಲಿ: ಭಾರತ ಸೇರಿದಂತೆ 10ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕೊರೊನಾ ಓಮಿಕ್ರಾನ್‌ನ ಮತ್ತೊಂದು ಉಪತಳಿ ಪತ್ತೆಯಾಗಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ನಿಗಾ ವಹಿಸಿದೆ ಎಂದು WHO ಪ್ರಧಾನ ನಿರ್ದೇಶಕ ಟೆಡ್ರೋಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.

    ಕಳೆದ 2 ವಾರಗಳಲ್ಲಿ ಜಾಗತಿಕ ಮಟ್ಟದಲ್ಲಿ ಕೋವಿಡ್-19 ಪ್ರಕರಣಗಳು ಶೇ.30 ರಷ್ಟು ಏರಿಕೆ ಕಂಡಿವೆ. ಯುರೋಪ್ ಹಾಗೂ ಅಮೆರಿಕದಂತಹ ದೇಶಗಳಲ್ಲಿ BA-4 ಹಾಗೂ BA-5 ತಳಿಗಳ ಸೋಂಕಿನ ಅಲೆಗಳಿದ್ದು, ಭಾರತ ಸೇರಿದಂತೆ 10ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಹೊಸ ತಳಿ BA-2.75 ಪತ್ತೆಯಾಗಿರುವುದಾಗಿ ಅವರಿಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: 20 ವರ್ಷ ಸಮಾಧಿಯಾಗಿದ್ದ ತಾಲಿಬಾನ್‌ ಸಂಸ್ಥಾಪಕನ ಕಾರು ಪತ್ತೆ – ಮ್ಯೂಸಿಯಂನಲ್ಲಿಡಲು ನಿರ್ಧಾರ

    ಹೊಸ ಉಪತಗಳಿಗಳಲ್ಲಿ ಕೆಲವು ಮಾರ್ಪಾಡುಗಳಾಗಿದ್ದು, ಅದೇನೆಂಬುದನ್ನು ಗಮನಿಸಬೇಕಿದೆ. ಈ ಉಪತಳಿಯು ಮಾನವನ ರೋಗನಿರೋಧಕ ಶಕ್ತಿಯನ್ನೂ ಮೀರಿ ಸೋಂಕು ಹರಡುತ್ತದೆಯೇ? ಎನ್ನುವ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಮಾಹಿತಿ ನೀಡಿದ್ದಾರೆ.

    ಕೋವಿಡ್-19 ಕ್ರಮಗಳನ್ನು ತಡೆಗಟ್ಟಲು ವಿಶ್ವ ಆರೋಗ್ಯಸಂಸ್ಥೆ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ಆರೋಗ್ಯ ಚಿಕಿತ್ಸೆ ಪಡೆದುಕೊಳ್ಳುವಲ್ಲಿ ವಿಳಂಭ ಮಾಡುವುದು ಹಾಗೂ ಬೂಸ್ಟರ್ ಡೋಸ್ ಪಡೆದುಕೊಳ್ಳುವಲ್ಲಿ ನಿರುತ್ಸಾಹ ತೋರುತ್ತಿರುವುದು ಪ್ರಕರಣ ಹೆಚ್ಚಲು ಕಾರಣವಾಗಿದೆ. ಬೂಸ್ಟರ್ ಸಾಧ್ಯವಾದಷ್ಟು ಬೇಗನೆ ಪಡೆದುಕೊಂಡರೆ ಮರಣ ಪ್ರಮಾಣವನ್ನು ತಡೆಗಟ್ಟಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಭಿವೃದ್ಧಿ ಮತ್ತು ಹಿಂದುತ್ವಕ್ಕಾಗಿ ಬಿಜೆಪಿ ನಮ್ಮನ್ನು ಬೆಂಬಲಿಸಿದೆ – ಏಕನಾಥ್‌ ಶಿಂಧೆ

    ದೇಶದಲ್ಲಿ ಕಳೆದ 24 ಗಂಟೆಯಲ್ಲಿ 18 ಸಾವಿರ ಪ್ರಕರಣಗಳನ್ನು ದಾಖಲಾಗಿದ್ದು, ಒಂದೇ ವಾರದಲ್ಲಿ 64,300 ಪ್ರಕರಣಗಳು ಪತ್ತೆಯಾಗಿವೆ. ಇಟಲಿಯಲ್ಲಿ ಜುಲೈ 5ರಂದು ಒಂದೇ ದಿನದಲ್ಲಿ 1.35 ಲಕ್ಷ ಪ್ರಕರಣಗಳು ಹಾಗೂ ಫ್ರಾನ್ಸ್ನಲ್ಲಿ ಕಳೆದ 24 ಗಂಟೆಯಲ್ಲಿ 2 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರುವುದಾಗಿ ಟೆಡ್ರೋಸ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳ ಆರೋಗ್ಯ ವೃದ್ಧಿಗೆ ಕ್ರಮ: ಡಾ.ಕೆ.ಸುಧಾಕರ್

    ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳ ಆರೋಗ್ಯ ವೃದ್ಧಿಗೆ ಕ್ರಮ: ಡಾ.ಕೆ.ಸುಧಾಕರ್

    ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳನ್ನು ಗುರುತಿಸಿದ್ದು, ಅವರ ಆರೋಗ್ಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

    ಜಿಲ್ಲೆಯಲ್ಲಿ ಕೋವಿಡ್ ಸ್ಥಿತಿಗತಿ ಪರಿಶೀಲನೆ ಸಂಬಂಧ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ತಾಂತ್ರಿಕ ಸಲಹಾ ಸಮಿತಿ ಸಲಹೆಯಂತೆ ಸಂಭವನೀಯ ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಸಿದ್ಧತೆ ನಡೆದಿದೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಕಡಿಮೆ ಇದ್ದು, ಈವರೆಗೆ 148 ಪ್ರಕರಣ ಕಂಡುಬಂದಿದೆ. ಹೆಚ್ಚಿನವರನ್ನು ಕೋವಿಡ್ ಕೇರ್ ಕೇಂದ್ರಕ್ಕೆ ಸೇರಿಸಬೇಕು, ಪರೀಕ್ಷೆ ಕಡಿಮೆ ಮಾಡುವುದು ಬೇಡ ಎಂದು ಸೂಚಿಸಲಾಗಿದೆ. ಹಲವು ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿದ್ದು, ಅವರಲ್ಲಿ ಶ್ವಾಸಕೋಶದ ತೊಂದರೆ, ರಕ್ತಹೀನತೆ, ಮೂತ್ರಪಿಂಡದ ಸಮಸ್ಯೆ, ಅಪೌಷ್ಠಿಕತೆ ಕಂಡುಬಂದಿದೆ. ಹೀಗೆ ಗುರುತಿಸಿದ ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

    ಇನ್ನು ಒಂದೇ ವಾರದಲ್ಲಿ ‘ಆರೋಗ್ಯ ನಂದನ’ ಕಾರ್ಯಕ್ರಮವನ್ನು ಮುಖ್ಯಮಂತ್ರಿಯವರು ಉದ್ಘಾಟಿಸಲಿದ್ದು, ರಾಜ್ಯದ ಒಂದೂವರೆ ಕೋಟಿ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಲಾಗುವುದು. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ವಿಶೇಷ ಆರೈಕೆ, ಚಿಕಿತ್ಸೆ ನೀಡಿ ಅವರನ್ನು ರಕ್ಷಿಸುವ ಕೆಲಸ ಮಾಡುತ್ತೇವೆ. ಜಿಲ್ಲೆಯಲ್ಲಿ 48% ರಷ್ಟು ಜನರಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಹೆಚ್ಚು ಲಸಿಕೆಯನ್ನು ಇಲ್ಲಿಗೆ ಪೂರೈಕೆ ಮಾಡಿ ವೇಗ ನೀಡಲಾಗುವುದು. ಡಿಸೆಂಬರ್ ಅಂತ್ಯದೊಳಗೆ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದರು. ಇದನ್ನೂ ಓದಿ: ದಶಪಥದ ರಸ್ತೆ ಇರೋದು ಮೈಸೂರಿಗಾಗಿ, ಇದಕ್ಕಾಗಿ ಹೆಚ್ಚು ಆಸಕ್ತಿವಹಿಸಿದ್ದೇನೆ: ಪ್ರತಾಪ್ ಸಿಂಹ

    ಈ ಜಿಲ್ಲೆಯಲ್ಲಿ ಹೊಸ ಜಿಲ್ಲಾಕೇಂದ್ರ ಇನ್ನೂ ಅಂತಿಮ ಆಗಿಲ್ಲ. ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಆದಷ್ಟು ಬೇಗ ನಿಗದಿಪಡಿಸಲಾಗುವುದು. ಹಾಗೆಯೇ ಜಿಲ್ಲಾಸ್ಪತ್ರೆಯನ್ನೂ ನಿರ್ಮಿಸಲಾಗುವುದು. ಒಂದು ಅಥವಾ ಎರಡು ತಾಯಿ ಮತ್ತು ಶಿಶು ಆಸ್ಪತ್ರೆಯನ್ನು ಇದೇ ವರ್ಷ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. 142 ಉಪಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗುವುದು. ಈಗಾಗಲೇ 29 ವೈದ್ಯರನ್ನು ಜಿಲ್ಲೆಗೆ ನೀಡಲಾಗಿದೆ. ಆದ್ದರಿಂದ ಯಾವುದೇ ವೈದ್ಯರ ಕೊರತೆ ಇಲ್ಲ. ಇನ್ನಷ್ಟು ಆರೋಗ್ಯ ಮೂಲಸೌಕರ್ಯಕ್ಕೆ ಭೂಮಿ ಮೀಸಲಿಟ್ಟಿದ್ದು, ಇಲ್ಲಿ ಅಭಿವೃದ್ಧಿ ಕಾರ್ಯದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು. ಇದನ್ನೂ ಓದಿ: ಲಸಿಕಾ ಆಂದೋಲನದಲ್ಲಿ ಕೈ ಜೋಡಿಸುವಂತೆ ಉದ್ದಿಮೆಗಳಿಗೆ ಸಚಿವ ಸುಧಾಕರ್ ಮನವಿ

    ಹಬ್ಬ, ಜಾತ್ರೆ, ಸಭೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರಬಾರದು. ಕೋವಿಡ್ ನ ಎರಡೂ ಲಸಿಕೆ ಪಡೆಯುವವರೆಗೆ ಎಚ್ಚರವಾಗಿರಬೇಕು. ಶಾಲೆ ಆರಂಭ ಸಂಬಂಧ ಮಾರ್ಗಸೂಚಿ ನೀಡಲಾಗಿದೆ. ಶಿಕ್ಷಣ ಇಲಾಖೆ ಇದನ್ನು ಆಯಾ ಜಿಲ್ಲಾಡಳಿತಕ್ಕೆ ನೀಡಿದೆ. ಮಕ್ಕಳ ಆರೋಗ್ಯ ಕಾಪಾಡುವುದರ ಜೊತೆಗೆ ಭವಿಷ್ಯ ರೂಪಿಸುವುದು ಕೂಡ ಮುಖ್ಯ. ಅದನ್ನು ಸಮರ್ಥವಾಗಿ ನಿಭಾಯಿಸಬೇಕಿದೆ. ಶಾಲಾ ಸಿಬ್ಬಂದಿಗೆ ಲಸಿಕೆಯನ್ನೂ ನೀಡಲಾಗಿದೆ. ಎಲ್ಲರ ಅಭಿಪ್ರಾಯ ಪಡೆದು ಈ ಕ್ರಮವನ್ನು ಸರ್ಕಾರ ಕೈಗೊಂಡಿದೆ ಎಂದರು. ಇದನ್ನೂ ಓದಿ: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ BMTCಯಿಂದ ಉಚಿತ ಸೇವೆ

  • ಕೊರೊನಾ ವಿರುದ್ಧ ಸಮರ- 8 ಉತ್ಪನ್ನ ಲೋಕಾರ್ಪಣೆ

    ಕೊರೊನಾ ವಿರುದ್ಧ ಸಮರ- 8 ಉತ್ಪನ್ನ ಲೋಕಾರ್ಪಣೆ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ವಿವಿಧ ಪ್ರಯತ್ನಗಳಿಗೆ ಸರ್ಕಾರ ಮುಂದಾಗುತ್ತಿದೆ. ಇದೀಗ ಹೊಸ ತಂತ್ರಜ್ಞಾನ, ಹೊಸ ಮಾದರಿಯ ಸಲಕರಣೆಗಳ ಮೊರೆ ಹೋಗುತ್ತಿದೆ. ಇಂದು ವಿವಿಧ ಉತ್ಪನ್ನಗಳನ್ನು ಉಪಮುಖ್ಯಮಂತ್ರಿ ಡಾ.ಸಿ.ಅಶ್ವಥ್ ನಾರಾಯಣ್ ಬಿಡುಗಡೆಗೊಳಿಸಿದ್ದಾರೆ.

    ಕರ್ನಾಟಕ ನಾವೀನ್ಯ ಮತ್ತು ತಂತ್ರಜ್ಞಾನ ಸೊಸೈಟಿ (ಕೆಐಟಿಎಸ್) ವ್ಯಾಪ್ತಿಯ ಬೆಂಗಳೂರು ಜೈವಿಕ ನಾವೀನ್ಯತೆ ಕೇಂದ್ರ (ಬಿಬಿಸಿ) ಅಭಿವೃದ್ಧಿಪಡಿಸಿರುವ ಉತ್ಪನ್ನಗಳನ್ನು ವಿಧಾನಸೌಧದಲ್ಲಿ ಡಾ.ಅಶ್ವಥ್ ನಾರಾಯಣ್ ಬಿಡುಗಡೆ ಮಾಡಿದ್ದಾರೆ. ಪದ್ಮ ವೈಟಲ್ಸ್, ಮಲ್ಲೀಸ್ ಕಾರ್ಡಿಟೀ, ಸಿಡಿ 4 ಷೀಲ್ಡ್, ಭೀಮ್ ರೋಟಿ, ಇಮ್ಯೂನ್ ಬೂಸ್ಟರ್- ಡೈಲಿ ಡ್ರಾಪ್ಸ್, ವೆಜ್ ಫಲ್ ಸ್ಯಾನಿಟೈಸರ್, ವಾಟರ್ ಸ್ಯಾನಿಟೈಸರ್, ಆ್ಯಂಟಿ- ಮೈಕ್ರೋಬಿಯಲ್ ಎಚ್‍ವಿಎಸಿ ಮಾಡ್ಯೂಲ್ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಇದೇ ವೇಳೆ ಐಐಬಿಎಂ-ಬಿಬಿಸಿ ಯಿಂದ ಎಂಒಯುಗೆ ಸಹಿ ಹಾಕಲಾಗಿದೆ.

    ಪದ್ಮ ವೈಟಲ್ಸ್: ಕಾರ್ಡಿಯಾಕ್ ಡಿಸೈನ್ ಲ್ಯಾಬ್ಸ್ ನ ಡಾ.ಮದನ್ ಗೋಪಾಲ್ ಈ ಕೇಂದ್ರೀಕೃತ ಆರೋಗ್ಯ ನಿಗಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ರೋಗಿಯ ಇಸಿಜಿ, ಉಸಿರಾಟ, ಎಸ್‍ಪಿಒ 2 ಮತ್ತು ದೇಹದ ಉಷ್ಣತೆ ಮೇಲೆ ನಿರಂತರವಾಗಿ ನಿಗಾ ಇರಿಸುವುದರ ಜೊತೆಗೆ ಅಂಕಿ-ಅಂಶಗಳನ್ನು ವಿಶ್ಲೇಷಿಸಿ ಟೆಲಿಮೆಟ್ರಿ ಮೂಲಕ ರವಾನಿಸುತ್ತದೆ. ಮುನ್ನೆಚ್ಚರಿಕೆ ವ್ಯವಸ್ಥೆಯನ್ನೂ ಇದು ಒಳಗೊಂಡಿದೆ. ರೋಗಿಗಳ ಶರೀರವನ್ನು ಮುಟ್ಟದೇ ನಿಗಾ ವಹಿಸಬಹುದಾಗಿದೆ. ಹೀಗಾಗಿ ಕೋವಿಡ್-19 ಸೋಂಕಿನ ಚಿಕಿತ್ಸೆ ಸಂದರ್ಭದಲ್ಲಿ ಉಪಯುಕ್ತವಾಗಲಿದೆ. ಇದನ್ನು ನಾರಾಯಣ ಹೃದಯಾಲಯದಲ್ಲಿ ದೃಢೀಕರಿಸಲಾಗಿದೆ.

    ಐಸಿಯು ಪೇಷೆಂಟ್ ಮಾನಿಟರ್ ಒದಗಿಸುವ ಬಹುತೇಕ ಅಂಶಗಳು ಇದರಲ್ಲಿವೆ. ಇದನ್ನು ಬಳಸಿ ಯಾವುದೇ ಸಾಮಾನ್ಯ ಹಾಸಿಗೆಯನ್ನು ಮಾನಿಟರ್ಡ್ ಬೆಡ್ ಆಗಿ ಬದಲಾಯಿಸಬಹುದು. ಬೆಲೆ ಕಡಿಮೆ ಇದ್ದು, ಹಗುರವಾಗಿರುವುದರಿಂದ ರೋಗಿಯ ಮೇಲಿಡುವ ನಿಗಾ ಸಾಮಥ್ರ್ಯ ಹೆಚ್ಚಾಗುತ್ತದೆ. ರೋಗಿಯ ಇಸಿಜಿ, ಉಸಿರಾಟ, ಎಸ್‍ಪಿಒ2 ಮತ್ತು ದೇಹದ ಉಷ್ಣತೆಯನ್ನು ದಾಖಲಿಸಲು ಬೇಕಾಗುವ ನರ್ಸ್ ಗಳ ಸಂಖ್ಯೆಯನ್ನು ತಗ್ಗಿಸುತ್ತದೆ.

    ಮಲ್ಲೀಸ್ ಕಾರ್ಡಿಟೀ: ರೋಗ ನಿರೋಧಕ ಶಕ್ತಿ ಉದ್ದೀಪಕವಾದ ಇದನ್ನು ಮಲ್ಲಿಪಾತ್ರ ನ್ಯೂಟ್ರಾಸ್ಯೂಟಿಕಲ್ಸ್ ನ ಡಾ.ಮೌಷ್ಮಿ ಮೊಂಡಲ್ ಅಭಿವೃದ್ಧಿಪಡಿಸಿದ್ದಾರೆ. ಔಷಧೀಯ ಗುಣವುಳ್ಳ ಅಣಬೆಯಾದ `ಕಾರ್ಡಿಸೆಪ್ಸ್’ ಬಳಸಿ ಇದನ್ನು ತಯಾರಿಸಲಾಗಿದೆ. ಪ್ರಯೋಗಾಲಯ ಪರಿಸ್ಥಿತಿಗಳಲ್ಲಿ ಬೆಳೆಯಲಾಗುವ ಈ ಅಣಬೆ ತಳಿಯು ವೈರಾಣು ನಿರೋಧಕ ಗುಣಸ್ವಭಾವ ಹೊಂದಿದೆ. ಕೋವಿಡ್-19 ಸನ್ನಿವೇಶದಲ್ಲಿ ವ್ಯಕ್ತಿಯ ರೋಗ ನಿರೋಧಕ ಮಟ್ಟವನ್ನು ಹೆಚ್ಚಿಸಲು ಸಹಾಯಕವಾಗಿದೆ. ಇದು ಪೇಟೆಂಟ್ ಹೊಂದಿದ್ದು, ಎಸ್‍ಎಸ್‍ಎಸ್‍ಎಐನಿಂದ ಅನುಮೋದನೆಗೊಂಡಿದೆ.

    ಈ ಕಾರ್ಡಿಯೋಸೆಪ್‍ಗಳ ಸಕ್ರಿಯ ಸಂಯೋಜನೆ ನೈಸರ್ಗಿಕವಾಗಿ ಬೆಳೆದ ಕಾರ್ಡಿಯೋಸೆಪ್ ಗಳಂತೆಯೇ ಇರುವುದು ಅಧ್ಯಯನಗಳಿಂದ ದೃಢಪಟ್ಟಿದೆ. ಇದು ದೇಹದಲ್ಲಿ ಸಕ್ಕರೆ ಹಾಗೂ ಕೊಲೆಸ್ಟ್ರಾಲ್ ಪ್ರಮಾಣವನ್ನು ಸಮತೋಲನದಲ್ಲಿ ಇರಿಸುತ್ತದೆ. ದೇಹದಲ್ಲಿನ ನಂಜುಕಾರಕಗಳನ್ನು ನಿವಾರಿಸಿ ದೇಹ ಕ್ಷಮತೆಯನ್ನು ಹೆಚ್ಚಿಸುತ್ತದೆ. ಇದನ್ನು 2-3 ಗ್ರಾಂ. ನಂತೆ 15 ದಿನಗಳ ಕಾಲ ಬಳಸಿದರೆ ಉತ್ತಮ ಫಲಿತಾಂಶ ಕಾಣಬಹುದು. ನೂತನ ವಿಧಾನ ಬಳಸಿ ಇದರ ಸಕ್ರಿಯ ಘಟಕಾಂಶವನ್ನು 20 ಮಿ.ಗ್ರಾಂ.ಗೆ ಸಂವರ್ಧಿಸಲಾಗಿದೆ. ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ಮಾಡಿದ ಪ್ರಯೋಗದಲ್ಲಿ ಇದು ಅತ್ಯುತ್ತಮ ಫಲಿತಾಂಶ ನೀಡಿದೆ. ಇದರ ಬೆಲೆ 30 ಗ್ರಾಂ. ಗೆ 2400 ರೂ. ಆಗಿದೆ.

    ಸಿಡಿ 4 ಷೀಲ್ಡ್: ಬಾಯಲ್ಲಿರಿಸಿಕೊಂಡು ಚೀಪಬಹುದಾದ ಈ ಮಾತ್ರೆಯನ್ನು ಸ್ಟೇಬಿಕಾನ್ ಕಂಪನಿಯ ಡಾ.ವಿಜಯ್ ಲಂಕಾ ಮತ್ತು ತಂಡದವರು ಅಭಿವೃದ್ಧಿಪಡಿಸಿದ್ದಾರೆ. ಇದು ಉರಿಯೂತ ಮತ್ತು ಸೋಂಕಿನ ವಿರುದ್ಧ ಹೋರಾಡುವ ಕ್ಯೂರ್ ಕ್ಯುಮಿನ್ ಮತ್ತು ವಿಟಮಿನ್ ಬಿ 12 ಅನ್ನು ಒಳಗೊಂಡಿದೆ. ದೇಹದೊಳಗೆ ವೈರಾಣು ಬೀರುವ ಪ್ರಭಾವಕ್ಕೆ ಅನುಗುಣವಾಗಿ ಸಿಡಿ4+, ಸಿಡಿ8+ ಮತ್ತು ಐಎಫ್‍ಎನ್ ಗಳನ್ನು ಸಕ್ರಿಯಗೊಳಿಸುವ ಮೂಲಕ ಅಂತರ್ಗತವಾಗಿರುವ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ. ರೋಗ ನಿರೋಧಕತೆಯನ್ನು ಮಾರ್ಪಾಡುಗೊಳಿಸುವ ಗುಣಸ್ವಭಾವಗಳನ್ನು ಹೊಂದಿರುವುದರ ಜೊತೆಗೆ ವೈರಾಣು ಸೋಂಕಿಗೆ ಪ್ರತಿಕ್ರಿಯೆಯಾಗಿ ಸೈಟೋಕೈನ್ ದಾಳಿಯನ್ನು ತಗ್ಗಿಸುತ್ತದೆ. ಇದು ಭಾರತೀಯ ಆಹಾರ ಸುರಕ್ಷತಾ ಮತ್ತು ಪ್ರಮಾಣೀಕರಣಗಳ ಪ್ರಾಧಿಕಾರ ಎಫ್‍ಎಸ್‍ಎಸ್‍ಐ ನಿಂದ ಅನುಮೋದನೆಗೊಂಡಿದೆ.

    ಭೀಮ್ ರೋಟಿ: ಚಪಾತಿ ರೂಪದಲ್ಲಿರುವ ಈ ರೋಗ ನಿರೋಧಕ ಉದ್ದೀಪಕವನ್ನು ಆಸ್ಪರ್ಟಿಕ ಕಂಪನಿಯ ಡಾ.ಶ್ರೀನಿವಾಸ್ ಅವರು ಅಭಿವೃದ್ಧಿಪಡಿಸಿದ್ದಾರೆ. ಆಯುಷ್ ಸಚಿವಾಲಯವು ಶಿಫಾರಸು ಮಾಡಿದ ಗಿಡಮೂಲಿಕೆಗಳ ಮಿಶ್ರಣಗಳನ್ನು ಒಳಗೊಂಡಿರುವುದು ಇದರ ವಿಶೇಷ. ಇದರ ಘಟಕಾಂಶಗಳನ್ನು ಸೂಪರ್ ಕ್ರಿಟಿಕಲ್ ಫ್ಲುಯಿಡ್ ಸಂಸ್ಕರಣಾ ತಾಂತ್ರಿಕತೆಯಿಂದ ಸಿದ್ಧಪಡಿಸಲಾಗಿದೆ. ಇದು, ವ್ಯಕ್ತಿಯ ದೇಹಕ್ಕೆ ಗಿಡಮೂಲಿಕೆ ಸಾರವು ಗರಿಷ್ಠ ಮಟ್ಟದಲ್ಲಿ ತಲುಪುವುದನ್ನು ಖಾತ್ರಿಗೊಳಿಸುತ್ತದೆ. ಈ ಚಪಾತಿಗಳು ಹೆಚ್ಚಿನ ಬಾಳಿಕೆ ಅವಧಿಯನ್ನು ಹೊಂದಿದ್ದು, ಸಂಗ್ರಹಿಸಿಡುವುದು ಕೂಡ ಸುಲಭವಾಗಿದೆ.

    ಪ್ರತಿ ಚಪಾತಿ 40 ಗ್ರಾಂ. ಇದ್ದು, 200 ಮೈಕ್ರೋಗ್ರಾಂ ಗಿಡಮೂಲಿಕೆ ಸಾರವನ್ನು ಒಳಗೊಂಡಿರುತ್ತದೆ. ಇದು `ರೆಡಿ ಟು ಈಟ್’ ಆಗಿದ್ದು, ತವಾ ಮೇಲೆ ಬಿಸಿ ಮಾಡಿಕೊಂಡು ತಿನ್ನಬಹುದು. ಕೊಠಡಿ ತಾಪಮಾನದಲ್ಲಿ 6 ತಿಂಗಳು ಬಾಳಿಕೆ ಅವಧಿ ಹೊಂದಿರುತ್ತದೆ. ಶುಂಠಿ, ಕರಿಮೆಣಸು, ಅರಿಶಿನ, ಲವಂಗ, ಕಪ್ಪು ಜೀರಿಗೆ, ಜೀರಿಗೆಗಳ ಮಿಶ್ರಣದಿಂದ ಹೊರತೆಗೆಯಲಾದ ಸಾರ ಇದರಲ್ಲಿರುತ್ತದೆ. ಇದಕ್ಕೆ ಯಾವುದೇ ಪ್ರಿಸರ್ವೇಟಿವ್ ಬಳಸುವುದಿಲ್ಲ. ಜೊತೆಗೆ ಬೇಯಿಸಿದ ನಂತರವೂ ಇದರ ಸಕ್ರಿಯ ಘಟಕಾಂಶಗಳು ಸತ್ವ ಕಳೆದುಕೊಳ್ಳುವುದಿಲ್ಲ ಎಂಬುದು ತಯಾರಕರ ವಿವರಣೆ. ಎಫ್‍ಎಸ್‍ಎಸ್‍ಐ ನಿಂದ ಅನುಮೋದನೆಗೊಂಡಿರುವ ಈ ಉತ್ಪನ್ನದ ಪೇಟೆಂಟ್ ಗಾಗಿ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ.

    ಇಮ್ಯೂನ್ ಬೂಸ್ಟರ್(ಡೈಲಿ ಡ್ರಾಪ್ಸ್): ರೋಗ ಪ್ರತಿರೋಧ ಶಕ್ತಿ ಉದ್ದೀಪಿಸುವ ಈ ಹನಿಯನ್ನು ಕೂಡ ಆಸ್ಪರ್ಟಿಕ ಕಂಪನಿಯ ಡಾ.ಶ್ರೀನಿವಾಸ್ ಅವರೇ ಅಭಿವೃದ್ಧಿಪಡಿಸಿದ್ದಾರೆ. ಇದು ಸಹ ಆಯುಷ್ ಸಚಿವಾಲಯ ಶಿಫಾರಸು ಮಾಡಿರುವ ಗಿಡಮೂಲಿಕೆ ಮಿಶ್ರಣಗಳನ್ನು ಒಳಗೊಂಡಿದೆ. ಇದರ ಘಟಕಾಂಶಗಳನ್ನು ಸೂಪರ್ ಕ್ರಿಟಿಕಲ್ ಫ್ಲುಯಿಡ್ ಸಂಸ್ಕರಣಾ ತಾಂತ್ರಿಕತೆಯಿಂದ ಸಿದ್ಧಪಡಿಸಲಾಗಿದೆ. ವ್ಯಕ್ತಿಯ ದೇಹಕ್ಕೆ ಗಿಡಮೂಲಿಕೆ ಸಾರವು ಗರಿಷ್ಠ ಮಟ್ಟದಲ್ಲಿ ತಲುಪುವುದನ್ನು ಖಾತ್ರಿಗೊಳಿಸುತ್ತದೆ. ಒಂದು ಲೋಟ ಬಿಸಿ ನೀರಿಗೆ ಇದರ ಒಂದೇ ಒಂದು ಹನಿಯನ್ನು ಸೇರಿಸುವ ಮೂಲಕ ಪರಿಣಾಮ ಪಡೆಯಬಹುದು.

    250 ಮಿ.ಲೀ. ಬಿಸಿ ನೀರು ಹಾಗೂ 100 ಮಿ.ಲೀ. ಹಾಲಿಗೆ ಸೇರಿಸಿಕೊಂಡು ಕುಡಿಯಬಹುದು. ಇದರ ಬಾಳಿಕೆ ಅವಧಿ 3 ವರ್ಷಗಳು. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಒಪ್ಪಿತವಾದ `ಗೋಲ್ಡನ್ ಮಿಲ್ಕ್’ ನ ಸುಧಾರಿತ ರೂಪ ಇದಾಗಿದೆ. ಅರಿಶಿನ, ಶುಂಠಿ, ಕಪ್ಪು ಜೀರಿಗೆ, ಜೀರಿಗೆ, ಲವಂಗ, ಕರಿ ಮೆಣಸಿನ ಸಕ್ರಿಯ ಘಟಕಾಂಶಗಳನ್ನು ಇದು ಒಳಗೊಂಡಿದೆ ಎಂಬುದು ಕಂಪನಿಯ ವಿವರಣೆ. ಇದೂ ಸಹ ಎಫ್‍ಎಸ್‍ಎಸ್‍ಐ ನಿಂದ ಅನುಮೋದನೆಗೊಂಡಿದೆ.

    ವೆಜ್ ಫಲ್ (ಹಣ್ಣು ಮತ್ತು ತರಕಾರಿ ಸ್ಯಾನಿಟೈಸರ್): ಕ್ರಿಮ್ಮಿ ಬಯೋಟೆಕ್ ನ ದೀಪಕ್ ಭಜಂತ್ರಿ ಇದನ್ನು ಅಭಿವೃದ್ಧಿಪಡಿಸಿದ್ದಾರೆ. ಮೈಕ್ರೋಬ್ ಗಳ (ಸೂಕ್ಷ್ಮಾಣುಜೀವಿಗಳ) ವಿರುದ್ಧ ಪರಿಣಾಮಕಾರಿಯಾದ ಮತ್ತು ಕೀಟನಾಶಕಗಳನ್ನು ಹೊರಸೆಳೆಯಬಲ್ಲ ಈ ಸ್ಯಾನಿಟೈಸರ್ ನ್ನು ಖಾದ್ಯ ಘಟಕಾಂಶಗಳನ್ನು ಬಳಸಿ ತಯಾರಿಸಲಾಗಿದೆ. ಇದು ಕ್ಲೋರಿನ್ ಹಾಗೂ ಆಲ್ಕೋಹಾಲ್ (ಮದ್ಯಸಾರ) ಮುಕ್ತ ಎಂಬುದು ಗಮನಾರ್ಹ ಅಂಶ.

    1 ಲೀಟರ್ ನೀರಿಗೆ 10 ಮಿ.ಲೀ. ದ್ರಾವಣ ಹಾಕಿ ಅದರಲ್ಲಿ 3 ನಿಮಿಷ ಕಾಲ ಹಣ್ಣು ಮತ್ತು ತರಕಾರಿಗಳನ್ನು ನೆನೆಸಬೇಕು. ನಂತರ, ಕೈಯಿಂದ ಹಣ್ಣು ಹಾಗೂ ತರಕಾರಿಗಳನ್ನು ಉಜ್ಜಿ ಹೊರತೆಗೆದು ಅವನ್ನು ಬಳಕೆ ಯೋಗ್ಯ ನೀರಿನಿಂದ ತೊಳೆಯಬೇಕು. ಇದು ಹಣ್ಣು ಹಾಗೂ ತರಕಾರಿಗಳನ್ನು ವೈರಾಣು ಮತ್ತು ಬ್ಯಾಕ್ಟೀರಿಯಾಗಳಿಂದ ಮುಕ್ತಗೊಳಿಸುತ್ತದೆ ಎನ್ನಲಾಗಿದೆ. ಇದರ ಬೆಲೆ 500 ಎಂ.ಎಲ್.ಗೆ 150 ರೂ. ಆಗಿದೆ.

    ವಾಟರ್ ಸ್ಯಾನಿಟೈಸರ್- ಕಿಚನ್ ಟ್ಯಾಪ್: ಯುವಿ ಪ್ಯೂರಿಫೈಯರ್ ನ ಕಿರುರೂಪವಾದ ಇದನ್ನು ಬಯೋಫೈ ಕಂಪನಿಯ ರವಿಕುಮಾರ್ ಅಭಿವೃದ್ಧಿಪಡಿಸಿದ್ದಾರೆ. ನೀರಿನ ನಲ್ಲಿಗೆ ಇದನ್ನು ಅಳವಡಿಸಬಹುದು. ಫೇಜಸ್ ನಂತಹ ವೈರಾಣು ಸೇರಿದಂತೆ ಶೇ.99ರಷ್ಟು ಮೈಕ್ರೋಬ್ ಗಳನ್ನು ಇದು ಯಶಸ್ವಿಯಾಗಿ ಕೊಲ್ಲಲಿದೆ.

    ಆ್ಯಂಟಿ- ಮೈಕ್ರೋಬಿಯಲ್ ಎಚ್‍ವಿಎಸಿ ಮಾಡ್ಯೂಲ್: ಎಚ್‍ವಿಎಸಿ ಸಿಸ್ಟಮ್ ಗೆ ಅಳವಡಿಸಬಹುದಾದ ಈ ಮಾಡ್ಯೂಲ್ (ಘಟಕ) ನ್ನು ಬಯೋಫೈ ನ ರವಿ ಕುಮಾರ್ ಅಭಿವೃದ್ಧಿಪಡಿಸಿದ್ದಾರೆ. ಒಳಬರುವ ಗಾಳಿಯನ್ನು ನಿರ್ಮಲಗೊಳಿಸುವ ಕೆಲಸವನ್ನು ಇದು ಮಾಡುತ್ತದೆ. ಪ್ರದೂಷಣೆಯಿಂದ ಕೂಡಿರುವ ಸಾಧ್ಯತೆಯಿರುವ ಹವಾನಿಯಂತ್ರಿತ ಗಾಳಿ ವ್ಯವಸ್ಥೆಯನ್ನು ಶುದ್ಧಗೊಳಿಸಲು ಇದು ಸಹಕಾರಿ. ಹೀಗಾಗಿ, ಕೋವಿಡ್-19 ಸನ್ನಿವೇಶದಲ್ಲಿ ಇದರಿಂದ ಹೆಚ್ಚಿನ ಉಪಯೋಗವಿದೆ. ಯುವಿ=ಟೈಟಾನಿಯಂ ಡೈಯಾಕ್ಸೈಡ್ ತಾಂತ್ರಿಕತೆ ಆಧರಿಸಿ ಇದನ್ನು ರೂಪಿಸಲಾಗಿದೆ. ಪೇಟೆಂಟ್ ಹೊಂದಿರುವ ಈ ಉತ್ಪನ್ನವು ದೃಢೀಕರಣಗೊಂಡಿದೆ.

  • ಆಯುಷ್ ಇಲಾಖೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲಹೆಗಳು

    ಆಯುಷ್ ಇಲಾಖೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲಹೆಗಳು

    ಬೆಂಗಳೂರು: ಕೊರೊನಾ ತಡೆಗಾಗಿ ಮುಂಜಾಗ್ರತ ಕ್ರಮಗಳ ಜೊತೆಯಲ್ಲಿ ಪೌಷ್ಠಿಕಾಂಶವುಳ್ಳ ಆಹಾರವನ್ನು ಬಳಸುವುದು ಉತ್ತಮ. ಸೋಂಕಿಕತರಿಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರವನ್ನೇ ನೀಡಲಾಗುತ್ತದೆ. ಮಕ್ಕಳು, ಗರ್ಭಿಣಿ ಮತ್ತು ಹಿರಿಯರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರೋದರಿಂದ ಉತ್ತಮ ಆಹಾರ ಸೇವನೆ ಮಾಡಬೇಕು. ಸೋಂಕಿತರು ಗುಣಮುಖರಾಗಿ ಬಂದ ಮೇಲೆಯೂ ವೈದ್ಯರ ಸಲಹೆಯ ಮೇರೆಗೆ ಆಹಾರ ಸೇವಿಸಬೇಕು.

    ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲಹೆಗಳು:
    * ಕುಡಿಯಲು ಯಾವಾಗ ಬಿಸಿನೀರು ಉಪಯೋಗಿಸುವುದು.
    * ಪ್ರತಿದಿನ ಯೋಗಾಸನ, ಪ್ರಾಣಾಯಾಮವನ್ನು ಕನಿಷ್ಠ 30 ನಿಮಿಷಗಳವರೆಗೆ ಮಾಡುವುದು.
    * ಅರಿಶಿನ, ಜೀರಿಗೆ, ಬೆಳ್ಳುಳ್ಳಿ ಮತ್ತು ಧನಿಯಾಗಳನ್ನು ಆಹಾರದಲ್ಲಿ ಬೆಳೆಸುವುದು.
    * ಗಿಡಮೂಲಿಕೆಯ ಟೀಗಳನ್ನು ಕುಡಿಯುವುದು (ವೈದ್ಯರ ಸಲಹೆಯ ಮೇರೆಗೆ)
    * ಪುದೀನ ಎಲೆಗಳನ್ನು ಬಿಸಿನೀರಿಗೆ ಹಾಕಿ ಹಬೆಯನ್ನು ತೆಗೆದುಕೊಳ್ಳುವುದು.
    * ಕೆಮ್ಮು ಅಥವಾ ಗಂಟಲಿನ ಕಿರಿಕಿರಿ ಇದ್ದರೆ ಸಕ್ಕರೆ ಅಥವಾ ಜೇನು ತುಪ್ಪವನ್ನು ಎರಡು ಮೂಗಿನ ಹೊಳ್ಳೆಗಳಿಗೆ ದಿನಕ್ಕೆರಡು ಬಾರಿ ಸವರಿಕೊಳ್ಳುವುದು.
    * 1 ಟೇಬಲ್ ಸ್ಪೂನ್ ಎಳ್ಳೆಣ್ಣೆ ಅಥವಾ ತೆಂಗಿನಕಾಯಿ ಎಣ್ಣೆಯನ್ನು 2-3 ನಿಮಿಷ ಬಾಯಲ್ಲಿಟ್ಟುಕೊಂಡು ತಿರುಗಾಡಿಸಿ ಉಗುಳಬೇಕು. ನಂತರ ಬಿಸಿನೀರಿನಿಂದ ಬಾಯಿ ಮುಕ್ಕಳಿಸಬೇಕು. ಇದನ್ನು ದಿನಕ್ಕೆರಡು ಬಾರಿ ಮಾಡಬೇಕು.

    ಒಣಕೆಮ್ಮು ಹಾಗೂ ಗಂಟಲು ಕೆರತವಿದ್ದರೆ:
    * ಪುದಿನ ಎಲೆ ಅಥವಾ ಓಮದ ಕಾಳುಗಳನ್ನು ಕುದಿಯುವ ನೀರಿಗೆ ಹಾಕಿ ಹಬೆ (ಆವಿ)ಯನ್ನು ದಿನಕ್ಕೊಂದು ಬಾರಿ ತೆಗೆದುಕೊಳ್ಳುವುದು.
    * ಲವಂಗದ ಪುಡಿಯನ್ನು ಕಲ್ಲುಸಕ್ಕರೆ ಅಥವಾ ಜೇನುತುಪ್ಪದೊಂದಿಗೆ ಸೇರಿಸಿ ದಿನಕ್ಕೆ 2-3 ಬಾರಿ ಸೇವಿಸುವುದು.
    (ಇವೆಲ್ಲ ಕೇವಲ ಸಾಮನ್ಯ ಜ್ವರ, ಕೆಮ್ಮು, ನೆಗಡಿಗೆ ಶಮನ ನೀಡುತ್ತವೆ. ಒಂದು ವೇಳೆ ಈ ಲಕ್ಷಣಗಳು ಮುಂದುವರಿದ್ರೆ ವೈದ್ಯರನ್ನು ಸಂಪರ್ಕಿಸಬೇಕು)

  • ರೋಗ ನಿರೋಧಕ ಶಕ್ತಿ ವರ್ಧನೆಗೆ ಆಯುರ್ವೇದ ಚಿಕಿತ್ಸೆ – ನಾಳೆ ಅಂತಿಮ ನಿರ್ಧಾರ ಸಾಧ್ಯತೆ

    ರೋಗ ನಿರೋಧಕ ಶಕ್ತಿ ವರ್ಧನೆಗೆ ಆಯುರ್ವೇದ ಚಿಕಿತ್ಸೆ – ನಾಳೆ ಅಂತಿಮ ನಿರ್ಧಾರ ಸಾಧ್ಯತೆ

    ಬೆಂಗಳೂರು: ಆಯುರ್ವೇದ ಚಿಕಿತ್ಸಾ ಕ್ರಮವನ್ನು ರೋಗ ನಿರೋಧಕ ಶಕ್ತಿ ವರ್ಧನೆಗೆ ಬಳಕೆ ಮಾಡುವ ಸಂಬಂಧ ರಾಜ್ಯ ಸರ್ಕಾರದ ಅಂತಿಮ ನಿರ್ಧಾರ ಸೋಮವಾರ ಪ್ರಕಟವಾಗಲಿದೆ.

    ಸಂಜೆ 4 ಗಂಟೆಗೆ ವಿಧಾನ ಸಭೆಯಲ್ಲಿ ಟಾಸ್ಕ್‌ ಫೋರ್ಸ್‌ ಸಭೆ ನಡೆಯಲಿದೆ. ಈ ವೇಳೆ ಕೊರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸಾ ಕ್ರಮವನ್ನು ರೋಗ ನಿರೋಧಕ ಶಕ್ತಿ ವರ್ಧನೆಗೆ ಬಳಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣಕ್ಕೆ ಮಾಡಿಕೊಂಡ ಸಿದ್ಧತಾ ಕ್ರಮ, ಲಾಕ್‌ಡೌನ್‌ ಸಾಧಕ ಬಾಧಕದ ಬಗ್ಗೆ ಚರ್ಚೆ ನಡೆಯಲಿದೆ.

    ಹೋಂ ಐಸೋಲೇಷನ್ ನಿಂದ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ದಾಖಲಿಸುವ ವಿಚಾರದಲ್ಲಿ ಈಗ ಗೊಂದಲ ಸೃಷ್ಟಿಯಾಗಿದೆ. ಈ ವಿಚಾರದ ಬಗ್ಗೆಯೂ ಸ್ಪಷ್ಟತೆ ಸಿಕ್ಕಿಲ್ಲ. ಈ ಎಲ್ಲ ವಿಚಾರದ ಬಗ್ಗೆ ಚರ್ಚೆ ನಡೆದು ಸರ್ಕಾರದ ನಿರ್ಧಾರ ಪ್ರಕಟವಾಗಲಿದೆ.

  • ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆರೋಗ್ಯಕರ ಕಷಾಯಗಳು

    ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆರೋಗ್ಯಕರ ಕಷಾಯಗಳು

    ರೋಗ್ಯವೇ ಭಾಗ್ಯ ಎನ್ನುವ ಹಿರಿಯರ ಮಾತು ಸುಳ್ಳಲ್ಲ. ಯಾಕೆಂದರೆ ಆರೋಗ್ಯವಾಗಿದ್ದರೆ ಮಾತ್ರ ಜೀವನದಲ್ಲಿ ಖುಷಿಯಾಗಿರಲು ಸಾಧ್ಯ. ಈಗಿನ ಜೀವನಶೈಲಿಯಲ್ಲಿ ಕೆಲಸದ ಒತ್ತಡದಲ್ಲಿ ನಮ್ಮ ಆರೋಗ್ಯದ ಕಡೆಗೆ ಸರಿಯಾಗಿ ಗಮನ ಕೊಡಲ್ಲ. ಸದಾ ಒಂದಲ್ಲ ಒಂದು ಕೆಲಸದಲ್ಲಿ ಬ್ಯುಸಿಯಾಗಿರುವ ಕಾರಣಕ್ಕೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಲು ಕೂಡ ಕೆಲವರಿಗೆ ಆಗೋದಿಲ್ಲ.

    ಹೀಗಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಮ್ಮಿಯಾಗಿ ಬಹುಬೇಗ ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಆದ್ದರಿಂದ ಆರೋಗ್ಯವಾಗಿರಲು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಕೊಳ್ಳಬೇಕು. ಪೌಷ್ಠಿಕ ಆಹಾರದ ಜೊತೆಗೆ ಆರೋಗ್ಯಕ್ಕೆ ಹಿತವಾದ ಕಷಾಯಗಳನ್ನು ದಿನನಿತ್ಯ ಕುಡಿದರೆ ಸುಲಭವಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.

    ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅನೇಕ ಔಷಧೀಯ ಸಸ್ಯಗಳು, ಬೇರುಗಳು, ಕಾಳುಗಳು ಇವೆ. ಅವುಗಳನ್ನು ನಮ್ಮ ಆಹಾರದಲ್ಲಿ ಸೇರಿಸಿದರೆ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಆದರೆ ಕೆಲವು ಕಷಾಯಗಳನ್ನು ಸೇವಿಸಿದರೆ ಅದು ದೇಹದ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕೆಮ್ಮು, ಶೀತ, ಜ್ವರ ಇಂಥ ರೋಗಗಳನ್ನು ತಡೆಗಟ್ಟುವುದರ ಜೊತೆಗೆ ಇತರ ರೋಗಾಣುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ದೇಹಕ್ಕೆ ನೀಡಿ ಆರೋಗ್ಯ ಕಾಪಾಡುತ್ತದೆ.

    ಆರೋಗ್ಯಕರ ಕಷಾಯಗಳು ಯಾವುದು?

    1. ಅರಿಶಿಣ ಮತ್ತು ಹಾಲು ಕಷಾಯ
    ಹಾಲಿಗೆ ಸ್ವಲ್ಪ ಅರಿಶಿಣ ಹಾಕಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅರಶಿಣ ಮಿಶ್ರಿತ ಹಾಲು ಕುಡಿದರೆ ಕೆಮ್ಮು, ಗಂಟಲು ಕೆರೆತ ಕಡಿಮೆ ಆಗುತ್ತದೆ. ಬೇಕಾದರೆ ರುಚಿಗೆ ಹಾಲಿಗೆ ಅರಿಶಿಣ ಜೊತೆಗೆ ಸ್ವಲ್ಪ ಶುಂಠಿ ಹಾಕಿ ಕುದಿಸಿ ಅದಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿ ಕುಡಿಯಬಹುದು.

    2. ಏಲಕ್ಕಿ, ಕಾಳು ಮೆಣಸು, ನಿಂಬೆ ರಸ ಕಷಾಯ
    ನಿಂಬೆ ರಸದಲ್ಲಿ ವಿಟಮಿನ್ ಸಿ ಅಂಶವಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಏಲಕ್ಕಿ, ಕಾಳು ಮೆಣಸು, ನಿಂಬೆ ರಸ ಕಷಾಯವನ್ನು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆದರೆ ಏಲಕ್ಕಿ, ಮತ್ತು ಕಾಳು ಮೆಣಸು ಮಿತವಾಗಿ ಬಳಸಬೇಕು. ಯಾಕೆಂದರೆ ತುಂಬಾ ಬಳಸಿದರೆ ಉಷ್ಣವಾಗುತ್ತದೆ. ನೀರಿಗೆ ಕಾಳುಮೆಣಸು(ಪುಡಿ ಮಾಡಿದ್ದು), ಏಲಕ್ಕಿ, ನಿಂಬೆರಸ ಹಾಕಿ ಕುದಿಸಿ ಕುಡಿಯುವುದರಿಂದ ಸಾಮಾನ್ಯ ಶೀತ ನಿವಾರಣೆಯಾಗುತ್ತದೆ.

    3. ತುಳಸಿ ಮತ್ತು ಕಾಳು ಮೆಣಸಿನ ಕಷಾಯ
    ತುಳಸಿ ದೇಹದ ಆರೋಗ್ಯವನ್ನು ಕಾಡುವುವಲ್ಲಿ ಪರಿಣಾಮಕಾರಿಯಗಿದ್ದು, ತುಳಿಸಿ ಎಲೆಗಳನ್ನು ನೀರಿಗೆ ಹಾಕಿ ಕುಡಿದರೆ ಒಳ್ಳೆಯದು. ಕೆಮ್ಮು ಇದ್ದರೆ ತುಳಸಿ, ಕಾಳು ಮೆಣಸು, ಶುಂಠಿ ಜಜ್ಜಿ ಎರಡು ಲೋಟ ನೀರಿಗೆ ಹಾಕಿ, ಅದು ಅರ್ಧ ಲೋಟದಷ್ಟು ಆಗುವ ತನಕ ಕುದಿಸಿ. ಬಳಿಕ ಅದನ್ನು ಸೋಸಿ ಕುಡಿದರೆ ಕೆಮ್ಮು ಕಡಿಮೆಯಾಗುತ್ತದೆ. 2 ಲೀಟರ್ ನೀರಿಗೆ 5-6 ತುಳಸಿ ಎಲೆ, 3-4 ಕಾಳು ಮೆಣಸು ಹಾಕಿ ಕುದಿಸಿ, ಈ ಕಷಾವನ್ನು ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

    4. ಅಶ್ವಗಂಧ ಕಷಾಯ ಮತ್ತು ಅಣಬೆ ಸೂಪ್
    ಅಶ್ವಗಂಧದಲ್ಲಿ ರೋಗ ನಿರೋಧಕ ಗುಣ ಅಡಕವಾಗಿದೆ. ಹೀಗಾಗಿ ಆಯುರ್ವೇದದಲ್ಲಿ ಅನೇಕ ಆರೋಗ್ಯ ಸಮಸ್ಯೆ ನಿವಾರಿಸಲು ಇದನ್ನು ಬಳಸುತ್ತಾರೆ. ಅಣಬೆ ಕೂಡ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದು, ಅಣಬೆ ಸೂಪ್ ಹಾಗೂ ಅಶ್ವಗಂಧ ಹಾಕಿ ಕಷಾಯ ಕುಡಿದರೆ ಒಳ್ಳೆದು. ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿ ಆರೋಗ್ಯ ಚೆನ್ನಾಗಿರುತ್ತದೆ.

    5. ಪುದೀನಾ ಮತ್ತು ರೋಸ್‍ಮೆರಿ ಕಷಾಯ
    ಪುದೀನಾದಲ್ಲಿ ಬ್ಯಾಕ್ಟಿರಿಯಾಗಳ ವಿರುದ್ಧ ಹೋರಾಡುವ ಅಂಶವಿದೆ. ಪುದೀನಾ ಮತ್ತು ರೋಸ್‍ಮೆರಿ ಎರಡನ್ನು ಮಿಶ್ರಣ ಮಾಡಿದ ಕಷಾಯ ಸೇವನೆಯಿಂದ ಹವಾಮಾನ ಬದಲಾವಣೆಯಿಂದ ಕಾಣಿಸುವ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರವಾಗಿಸಬಹುದು.

  • ನಾನು ನಾನ್‍ವೆಜ್, ಕೊರೊನಾಗೂ ಚಿಕನ್‍ಗೂ ಸಂಬಂಧವಿಲ್ಲ: ಸಿಟಿ ರವಿ

    ನಾನು ನಾನ್‍ವೆಜ್, ಕೊರೊನಾಗೂ ಚಿಕನ್‍ಗೂ ಸಂಬಂಧವಿಲ್ಲ: ಸಿಟಿ ರವಿ

    – ನಾನ್‍ವೆಜ್ ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

    ಚಿಕ್ಕಮಗಳೂರು: ನಗರದ ಹನುಮಂತಪ್ಪ ವೃತ್ತದ ಸಮೀಪವಿರುವ ಕತ್ರಿಮಾರಮ್ಮ ದೇವಸ್ಥಾನದ ಬಳಿಯ ಟೆಂಡರ್ ಚಿಕನ್ ಸೆಂಟರ್ ನಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಎರಡು ಕೆಜಿ ಚಿಕನ್ ಖರೀದಿಸಿದ್ದಾರೆ.

    ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕನ್‍ಗೂ ಕೊರೊನಾಗೂ ಯಾವುದೇ ಸಂಬಂಧವಿಲ್ಲ. ನಾನು ಬೇಸಿಕಲಿ ನಾನ್ ವೆಜ್. ಆದರೆ ಕಡಿಮೆ ತಿನ್ನುತ್ತೇನೆ. ನಾನ್ ವೆಜ್‍ನವರು ಚಿಕನ್, ಫಿಶ್ ಹಾಗೂ ಕೋಳಿ ಮೊಟ್ಟೆಯನ್ನು ತಿನ್ನಬಹುದು ಎಂದರು.

    ಇವುಗಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು ಎಂದು ಆಹಾರ ತಜ್ಞರೇ ಹೇಳಿದ್ದಾರೆ. ಹಾಗಾಗಿ ಯಾವುದೇ ಆತಂಕವಿಲ್ಲದೆ ಇವುಗಳನ್ನು ತಿಂದು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂದರು.

    ಮಾಂಸಾಹಾರಿಗಳು ಚಿಕನ್, ಫಿಶ್, ಕೋಳಿ ಮೊಟ್ಟೆ ತಿಂದರೆ, ಸಸ್ಯಾಹಾರಿಗಳು ಬಾಳೆಹಣ್ಣು, ತರಕಾರಿ ತಿನ್ನಬಹುದು ಎಂದಿದ್ದಾರೆ.

  • ತೆಂಗಿನಕಾಯಿ, ತೆಂಗಿನ ಎಣ್ಣೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

    ತೆಂಗಿನಕಾಯಿ, ತೆಂಗಿನ ಎಣ್ಣೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?

    ಚೀನಾದಲ್ಲಿ ಸೃಷ್ಟಿಯಾಗಿ ಇಂದು ವಿಶ್ವದೆಲ್ಲೆಡೆ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾಗೆ ವಿಜ್ಞಾನಿಗಳು ಔಷಧಿ ಕಂಡು ಹಿಡಿಯಲು ಪ್ರಯತ್ನ ನಡೆಸುತ್ತಿದ್ದು, ಯಶಸ್ವಿ ಆಗುತ್ತದೋ ಇಲ್ಲವೋ ಎನ್ನುವುದು ತಿಳಿದುಬರಬೇಕಿದೆ. ಈ ಮಧ್ಯೆ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ಈ ಕೊರೊನಾವನ್ನು ತಡೆಗಟ್ಟಬಹುದು ಎಂದು ವಿಜ್ಞಾನಿಗಳು ಈಗಾಗಲೇ ಹೇಳಿದ್ದಾರೆ.

    ರೋಗ ನಿರೋಧಕ ಶಕ್ತಿ ಹೆಚ್ಚಿರಬೇಕು ಎಂದಾಗ ಯಾವುದನ್ನು ಬಳಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚು ಸಿಗುತ್ತದೆ ಎನ್ನುವ ಒಂದು ಪ್ರಶ್ನೆ ಹುಟ್ಟುತ್ತದೆ. ಈ ಪ್ರಶ್ನೆಗೆ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಸುಲಭವಾಗಿ ಹೇಳಬಹುದು. ಆದರಲ್ಲೂ ತೆಂಗಿನಕಾಯಿ ಮತ್ತು ತೆಂಗಿನ ಎಣ್ಣೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು ಎನ್ನುವ ವಾದ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ವೈಜ್ಞಾನಿಕ ವಿಶ್ಲೇಷಣೆಯನ್ನು ನೀಡಲಾಗಿದ್ದು, ತೆಂಗಿನ ಕಾಯಿ ಮತ್ತು ತೆಂಗಿನ ಎಣ್ಣೆಯಿಂದ ಕೊರೊನಾ ತಡೆಗಟ್ಟಬಹುದು ಎಂದು ಹೇಳುತ್ತಿಲ್ಲ. ಆದರೆ ಇವುಗಳ ಬಳಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ರೋಗಗಳನ್ನು ತಡೆಯಬಹದು ಎನ್ನುವುದಷ್ಟೇ ಈ ಲೇಖನದ ಉದ್ದೇಶ.

    ವಿಶ್ವದೆಲ್ಲೆಡೆ ಕೊರೊನಾ ವೈರಸ್ ಮಾರಕ ಸೋಂಕು ಜ್ವರದ ಭೀತಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಈ ಮಾರಕ ಸೋಂಕು ರೋಗಕ್ಕೆ ಯಾವುದೇ ಮದ್ದಾಗಲಿ ಅಥವಾ ಲಸಿಕೆಗಳಾಗಲಿ ಲಭ್ಯವಿಲ್ಲ. ಈ ಮಾರಿ ಜ್ವರ ಹಬ್ಬದಂತೆ ಹಲವಾರು ಜಾಗರೂಕತೆ ನಿರ್ಬಂಧಗಳನ್ನು ಹೇರಲಾಗಿದೆ. ಈ ಮುಂಜಾಗೃತಾ ಕಾನೂನು ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಎಲ್ಲರಲ್ಲೂ ಈ ಸೋಂಕು ನಿರೋಧಕ ಶಕ್ತಿ ಪ್ರಕೃತಿ ಸಹಜವಾಗಿ ಇರುತ್ತದೆ. ಇದಕ್ಕೆ ಉದಾಹರಣೆ ಏನೆಂದರೆ ಕೊರೊನಾ ವೈರಸ್ ಸೋಂಕು ಬಂದವರಲ್ಲಿ ಶೇ.90ರಷ್ಟು ಜನ ಜ್ವರ ಲಕ್ಷಣವಿಲ್ಲದೆ ಓಡಾಡುತ್ತಿರುತ್ತಾರೆ. ಅಂದರೆ, ಹಲವಾರು ಕಾರಣಗಳಿಂದ ಶೇ.10ರಷ್ಟು ಜನರಲ್ಲಿ ರೋಗ ನಿರೋಧಕ ಶಕ್ತಿಯು ಕುಗ್ಗಿರುತ್ತದೆ.

    ನಾವು ಉಸಿರಾಡಿದಾಗ ಈ ವೈರಸ್ ಮೂಗಿನ ಮೂಲಕ ಶ್ವಾಸಕೋಶಕ್ಕೆ ಹೋಗಿ ಅಂಗಾಂಶವನ್ನು ಧ್ವಂಸಮಾಡಿ ಉಸಿರಾಡಂತೆ ಮಾಡುತ್ತದೆ. ನಾವು ಉಸಿರಾಡುವುದನ್ನು ನಿಲ್ಲಿಸುವುದು ಅಸಾಧ್ಯ. ಆದುದರಿಂದ ವೈರಸ್ ದೇಹದೊಳಗೆ ಹೋಗದಂತೆ ಅಥವಾ ಹೋದರೆ ಉಸಿರಾಡುವ ಅಂಗಗಳನ್ನು ಹೇಗೆ ರಕ್ಷಿಸುವುದು ಬಗೆ ಚಿಂತನೆ ಮಾಡಬೇಕಿದೆ. ಪ್ರಕೃತಿಯಲ್ಲಿ ಸೋಂಕು ನಿರೋಧಕ ಶಕ್ತಿಯನ್ನು ಮನುಷ್ಯನಲ್ಲಿ ಹೆಚ್ಚಿಸುವ ಗುಣ ವಿಶೇಷವಿರುವ ವಿವಿಧ ಗಿಡ ಮೂಲಿಕೆಗಳಲ್ಲಿ ಮತ್ತು ನಾವು ತಿನ್ನುವ ಆಹಾರ ಪದಾರ್ಥಗಳಲ್ಲಿ ಇವೆ.

    ತೆಂಗಿನ ಎಣ್ಣೆ ಕರಾವಳಿ ಪ್ರದೇಶಗಳಲ್ಲಿ ತೆಂಗಿನ ಕಾಯಿ, ಎಣ್ಣೆ ಮತ್ತು ಸಿಯಾಳ ದಿನನಿತ್ಯ ಉಪಯೋಗಿಸುವುದು ವಾಡಿಕೆಯಿತ್ತು. ತೆಂಗಿನ ಮರವನ್ನು ಭೂಲೋಕದ ಕಲ್ಪವೃಕ್ಷವೆಂದು ಕರೆಯಲಾಗುತ್ತದೆ. ಹಿಂದೂ ಧರ್ಮದ ಶುಭ ಸಮಾರಂಭಗಳಲ್ಲಿ, ಧಾರ್ಮಿಕ ಪೂಜೆ ಪುರಸ್ಕಾರಗಳಲ್ಲಿ ತೆಂಗಿನ ಕಾಯಿ ಮಹತ್ವವಾದ ಸ್ಥಾನ ಪಡೆದಿದೆ. ದೇವರ ನೈವೇದ್ಯಕ್ಕೆ ತೆಂಗಿನ ಕಾಯಿ ಇರಲೇಬೇಕು. ನಮ್ಮ ಪೂರ್ವಜರು ಆರೋಗ್ಯಕ್ಕೆ ಉತ್ತಮವಾದುದ್ದನ್ನು ದೇವರಿಗೆ ಸಮರ್ಪಣೆ ಮಾಡಿ ಮತ್ತೆ ತಾವು ಸೇವಿಸುತ್ತಿದ್ದರು. ಹಾಗೆಯಾದರೂ ಜನರು ಉತ್ತಮ ಕ್ರಮ, ಪದಾರ್ಥಗಳನ್ನು ಅಳವಡಿಸಿಕೊಳ್ಳಿ ಎನ್ನುವ ಉದ್ದೇಶ ಅವರದ್ದು ಇದ್ದಿರಬೇಕು.

    ಆಧುನಿಕ ಜೀವನ ಶೈಲಿ, ಪಾಶ್ಚಿಮಾತ್ಯ ಅನುಕರಣೆ ಮತ್ತು ಹಿಂದೆ ಕೆಲವು ಹಲವು ವೈಜ್ಞಾನಿಕವಾಗಿ ಸರಿಯಾದ ಸಂಶೋಧನೆ ನಡೆಸದಿರುವುದರಿಂದ ಪಾರಂಪರಿಕವಾಗಿ ನಡೆಸುತ್ತಿದ್ದ ಅನುಸರಣೆಯು ಮಾಯವಾಗುತ್ತಿದೆ. ಅದೃಷ್ಟವಶಾತ್ ಇತ್ತೀಚೆಗೆ ವಿಜ್ಞಾನಿಗಳ ಸಂಶೋಧನೆಯಿಂದಾಗಿ ಸತ್ಯಾಸತ್ಯತೆಗಳು ಬೆಳಕಿಗೆ ಬರುತಿದೆ. ತೆಂಗಿನ ಎಣ್ಣೆಯನ್ನು ಹಾಳಾಗದ ಹಾಗೆ ಬಹು ದಿನ ಇಡಲು ಕೃತಕವಾಗಿ (ಹೈಡ್ರೋಜಿನೇಷನ್) ಸಂಸ್ಕರಿಸುತ್ತಾರೆ. ಇದರಿಂದಾಗಿ ಎಣ್ಣೆಯ ಪ್ರಕೃತಿ ಸಹಜವಾದ ಗುಣಗಳು ನಾಶವಾಗುತ್ತದೆ. ಪ್ರಕೃತಿ ಸಹಜವಾದ ಗುಣಗಳು ನಾಶವಾಗಿ ಆರೋಗ್ಯಕ್ಕೆ ಕೆಡುಕು ಉಂಟುಮಾಡುತ್ತದೆ. ಈಗ ತೆಂಗಿನ ಎಣ್ಣೆಯನ್ನು ಹಳೆಯ ಕಾಲದಂತೆ, ಕೋಲ್ಡ್ ಪ್ರೆಸ್ ಮಾಡಿ ತೆಗೆಯುತ್ತಾರೆ. ಇದನ್ನು ವರ್ಜಿನ್ ತೆಂಗಿನ ಎಣ್ಣೆ ಎನ್ನುತ್ತಾರೆ. ಮೊದಲು ತೆಂಗಿನ ಎಣ್ಣೆ ಹೃದ್ರೋಗ ಹೆಚ್ಚಲು ಕಾರಣ ಎನ್ನುವ ವಿಜ್ಞಾನಿಗಳು, ವರ್ಜಿನ್ ತೆಂಗಿನ ಎಣ್ಣೆ ಹೃದ್ರೋಗ ಬರದಂತೆ ತಡೆಯಬಲ್ಲದು ಎಂಬದುನ್ನು ತೋರಿಸಿದ್ದಾರೆ. ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಆಸಿಡ್ (ಫ್ಯಾಟಿ ಆಸಿಡ್) ಎನ್ನುವ ಕೊಬ್ಬಿನಾಂಶ ಹಲವಾರು ವೈರಸನ್ನು ಜೀವಕೋಶದಲ್ಲಿ ಬೆಳೆಯುದನ್ನು ತಡೆಗಟ್ಟಬಲ್ಲದು ಎಂದು ಹಲವು ಮಂದಿ ತೋರಿಸಿಕೊಟ್ಟಿದ್ದಾರೆ.

    ಲಾರಿಕ್ ಆಸಿಡ್ ಪ್ರಚೋದನೆಯಿಂದ ಜೀವಕೋಶದಲ್ಲಿ 7-10 ಹೆಚ್ಚು ಪಟ್ಟು ಟ್ರೈ ಎಸೈಲ್ ಗ್ಲಿಸರೊಲ್ ಎಂಬ ರಾಸಾಯನಿಕ ಪದಾರ್ಥವನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ಜೀವಕೋಶಕ್ಕೆ ಏನೂ ತೊಂದರೆಯಾಗುವುದಿಲ್ಲ. ಜೀವಕೋಶದಲ್ಲಿ ಅಧಿಕ ಮಟ್ಟದ ಟ್ರೈ ಎಸೈಲ್ ಗ್ಲಿಸರೊಲ್‍ಇರುವುದರಿಂದ ವೈರಸ್ ಪ್ರ್ರೊಟಿನ್‍ಗಳು ಗಳು ಸಮರ್ಪಕ ರೀತಿಯಲ್ಲಿ ಜೋಡಣೆಯಾಗದೇ ನಿಷ್ಕ್ರಿಯವಾಗುತ್ತದೆ. ಅದು ಅಲ್ಲದೆ ವೈರಸ್ ತನ್ನದೇ ಆದ ಪ್ರೋಟಿನ್ ಸುರಿಸುವಂತೆ ಮಾಡುತ್ತದೆ. ಈ ಪ್ರೋಟಿನ್ಸ್ ವೈರಸನ್ನು ಜೀವಕೋಶದ ಹೊರ ಪದರದಲ್ಲಿ ನೆಲೆಯಾಗಲು ಬೇಕಾಗುತ್ತದೆ. ಆದರೆ ಈ ಕ್ರಿಯೆಯನ್ನು ಲಾರಿಕ್ ಆಸಿಡ್ ತಡೆಗಟ್ಟಿ ವೈರಸ್ ಜೀವಕೋಶದ ಒಳಗೆ ಹೋಗಿ ಹಾನಿ ಉಂಟು ಮಾಡುವುದನ್ನು ತಪ್ಪಿಸುತ್ತದೆ.

    ಲಾರಿಕ್ ಆಸಿಡ್ ತೆಗೆದ ಮೇಲೂ 4-7 ಗಂಟೆಗಳವರೆಗೂ ಮೇಲೆ ವಿವರಿಸಿದ ಪರಿಣಾಮ ಫಲಕಾರಿಯಾಗಿರುತ್ತದೆ. ತೇಗಿನ ಎಣ್ಣೆಯಲ್ಲಿ ಮಾತ್ರ ಲಾರಿಕ್ ಆಸಿಡ್ ಅಧಿಕ ಪ್ರಮಾಣದಲ್ಲಿ ಇದೆ. ತೆಂಗಿನ ಎಣ್ಣೆಯ ಕೊಬ್ಬಿನಾಂಶದಲ್ಲಿ ಶೇ.50 ರಷ್ಟು ಲಾರಿಕ್ ಆಸಿಡ್ ಇದೆ. ತೆಂಗಿನ ಎಣ್ಣೆಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಜೀವಕೋಶ ಮತ್ತು ಅಂಗಾಂಶಗಳ ಪುನರ್ ಜೀವನಕ್ಕೆ ಸಹಕಾರಿಯಾಗಿದೆ. ಉದುರಿತವನ್ನು ಕಡಿಮೆಮಾಡುತ್ತದೆ. ಎಣ್ಣೆಯ ಪದರವು ವೈರಸಿಗೆ ತಡೆ ಗೋಡೆಯಾಗಿರುತ್ತದೆ. ಜೀವಕೋಶ, ಅಂಗಾಂಶಗಳಿಗೆ ಎಣ್ಣೆ ಆಹಾರವಾಗಿ ತ್ವರಿತ ಶಕ್ತಿಯನ್ನು ಒದಗಿಸಿ ವೈರಸನ್ನು ಸಮರ್ಥವಾಗಿ ಎದುರಿಸಲು ಸಹಾಯವಾಗುತ್ತದೆ.

     

    ದೇಹಕ್ಕೆ ಬರುವ ಸೋಂಕನ್ನು ತಡೆಗಟ್ಟಲು ತೆಂಗಿನ ಎಣ್ಣೆ ಹೇಗೆ ಉಪಯೋಗಿಸಬೇಕೆಂದು ತಿಳಿಸುವೆ. ಬೆಳಿಗ್ಗೆ ಎದ್ದ ಮೇಲೆ ಮತ್ತು ಸಂಜೆ ಅಥವಾ ಮಲಗುವುದಕ್ಕೆ ಮೊದಲು ತೆಂಗಿನ ಎಣ್ಣೆಯನ್ನು ತಲೆ ಮೇಲೆ ಮಾಡಿ ಮೂಗಿನ ಎರಡೂ ಹೊಳ್ಳೆಯ ಒಳಗೆ ಹಾಕಿ. ಬಾಯಿಗೆ ಬಂದರೆ ಚಿಂತೆ ಮಾಡಬೇಡಿ. ತಲೆ ಮೇಲೆ ಮಾಡಿ ಹಾಗೆ ಐದು ನಿಮಿಷ ಕುಳಿತುಕೊಳ್ಳಿ. ಎರಡನೆಯದಾಗಿ, ಬರಿಯ ಹೊಟ್ಟೆಗೆ ಒಂದು ಚಮಚ ತೆಂಗಿನ ಎಣ್ಣೆಯನ್ನು ಬರೇ ಹೊಟ್ಟೆಯಲ್ಲಿ ತೆಗೆದುಕೊಳ್ಳಿ. ಅರ್ಧ ಗಂಟೆಯ ನಂತರ ಕುಡಿಯುವುದು, ತಿನ್ನುವುದು ಮಾಡಬಹುದು. ಕಣ್ಣಿಗೂ, ಕಿವಿಗೂ ಒಂದೆರಡು ತೊಟ್ಟು ಹಾಕಬಹುದು. ತೆಂಗಿನ ಕಾಯಿಯನ್ನು ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಉಪಯೋಗಿಸಿ.

    ಲೇಖಕರ ಬಗ್ಗೆ:
    ಮೂಲತ: ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯ ಡಾ ನಾಗಭೂಷಣ ಅವರು ಪ್ರಸ್ತುತ ಅಮೇರಿಕದ ಚಿಕಾಗೋದಲ್ಲಿ ನೆಲೆಸಿದ್ದಾರೆ. ಮುಂಬೈ ಟಾಟಾ ಕ್ಯಾನ್ಸರ್ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಸಂಶೋಧನೆ ನಡೆಸಿದವರು. ಅಲ್ಲಿಯೇ ಡಾಕ್ಟರೇಟ್ ಪದವಿಯನ್ನು ಗಳಿಸಿ ಅಮೆರಿಕಾದ ಶೇಷ್ಠ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ನಡೆಸಿದವರು. ಇವರು ಟಾಟಾ ಕ್ಯಾನ್ಸರ್ ಸಂಸ್ಥೆಯಲ್ಲಿ ಸಂಶೋಧನೆ ಮಾಡಿ ಪ್ರಪಂಚದಲ್ಲಿಯೇ ಪ್ರಪ್ರಥಮ ಬಾರಿಗೆ (1984) ಅರಶಿನವು ಕ್ಯಾನ್ಸರ್ ಅನ್ನು ತಡೆಗಟ್ಟಬಲ್ಲದೆಂದು ಕಂಡುಹಿಡಿದವರು. ಈ ಸಂಶೋಧನೆಗಾಗಿ ಇಂಡಿಯನ್ ಕೌನ್ಸಿಲ್ ಅಫ್ ಮೆಡಿಕಲ್ ರಿಸರ್ಚ್, ನವದೆಹಲಿಯಿಂದ ಚಿನ್ನದ ಪದಕ ಪಡೆದಿರುತ್ತಾರೆ. ಅಲ್ಲದೆ ದೇಶ ವಿದೇಶಗಳಲ್ಲಿ 20ಕ್ಕೂ ಹೆಚ್ಚು ಪಾರಿತೋಷಕಗಳನ್ನು ಪಡೆದಿದ್ದಾರೆ.

    ಈ ವಿಚಾರದ ಬಗ್ಗೆ ಪ್ರಶ್ನೆ, ಅನುಮಾನಗಳಿದ್ದರೆ digital@writemenmedia.com ಪ್ರಶ್ನೆ ಕೇಳಬಹುದು. ಲೇಖಕರು ಉತ್ತರಿಸುತ್ತಾರೆ.

    [ಮೇಲಿನ ಲೇಖನದಲ್ಲಿ ಪ್ರಕಟವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ]